Wednesday, December 26, 2012

ಹಲೋ ಗೆಳೆಯರೇ ನಮಸ್ಕಾರ.

ನನ್ನ ಕೆಲವೊಂದು ಅನಿಸಿಕೆಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನವೇ ಈ ಲೇಖನ. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಧನ್ಯ.

ಪುರಾತನ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಇವತ್ತಿಗೆ ಇರುವ ಸ್ಥಾನಮಾನ ಏನೆಂದು ಹುಡುಕುತ್ತಾ ಹೋದರೆ ಮನಸ್ಸಿಗೆ ಬೇಜಾರಾಗುವುದು ಖಂಡಿತ. ಐತಿಹಾಸಿಕ ಪಾರಂಪರೆವುಳ್ಳ ನಮ್ಮ ಈ ನಾಡು, ನುಡಿ, ಜನ, ಇಲ್ಲಿನ ಆಚಾರ, ವಿಚಾರ, ಸಂಪ್ರದಾಯ, ರೀತಿ ರಿವಾಜು...ಸುಮ್ಮನೇ ಬಂದಿಲ್ಲ, ತಂತಾನೆ ಆಗಿದ್ದಲ್ಲ, ಯಾರೂ ಬೇಕಂತ ಮಾಡಿಟ್ಟಿದ್ದಲ್ಲ, ಎಲ್ಲಿಂದಲೋ ನೋಡಿ ಕಲಿತದ್ದಲ್ಲ - ಅದಕ್ಕೆ ತನ್ನದೇ ಆದ ದಾರಿಯಿದೆ, ನೆಲೆಯಿದೆ, ಆಯಾಮವಿದೆ. ಯಾರೋ ಬೇಡವೆಂದು ಬಿಸಾಡಿ ಹೋದ ನುಡಿಯಲ್ಲ ನಮ್ಮದು - ಅದಕ್ಕೆ ತನ್ನದೇ ಆದ ಮಜಲಿದೆ, ತಿರುವಿದೆ, ಹಿನ್ನೆಲೆಯಿದೆ. ಹೀಗಿರುವಾಗ ನಮ್ಮತನವನ್ನು ಬಿಟ್ಟುಕೊಟ್ಟು    ಬೇರೆಯವರು ಉಳಿಸಿಹೋದ ಭಾಷೆಯನ್ನು ಮಹಾಪ್ರಸಾದವೆಂಬಂತೆ ತಿನ್ನುತ್ತಿರುವ ನಮಗೆ ಅದು ನಾಚಿಕೆಗೇಡಿನ ವಿಷಯ ಎಂದು ಅರಿವಾಗುವುದಾದರೂ ಯಾವಾಗ?.

ನೋಡಿ ಸುಮ್ಮನೆ ಹೇಳ್ತಾಹೋಗ್ತಿನಿ : ಮಗು ಹುಟ್ಟಿದ ಕೂಡಲೆ ಅನ್ನುವುದು ಅಮ್ಮಾ ಅಂತ. ಅದು ಬದಲಾಗಿದೆ, ಈಗ ಅದು ಮಮ್ಮೀ ಅನ್ನುತ್ತೆ. ಹಾಗನ್ನದಿದ್ದರೆ ಹೆತ್ತವರಿಗೆ ಪಾಪ ಏನೋ ಕಳೆದುಕೊಂಡಂತೆ. ಅಪ್ಪನ ಬದಲು ಡ್ಯಾಡಿ, ಚಿಕ್ಕಮ್ಮ ಚಿಕ್ಕಪ್ಪ /ದೊಡ್ಡಮ್ಮ / ದೊಡ್ಡಪ್ಪನ  ಬದಲು ಆಂಟೀ ಆಂಕಲ್, ಅಣ್ಣತಮ್ಮ ಅಕ್ಕತಂಗಿಗೆ ಬ್ರದರ್ ಸಿಸ್ಟರ್, ಇನ್ನು ದಿನಬಳಕೆ ಮಾತುಗಳಂತೂ ಆಹಾಹಾ! ಕೇಳಲು ಬರೀ ಎರಡು ಕಿವಿ ಸಾಲದುರೀ - ಬಾಡಿಗೆಗೆ ಬೇರೆಯವರ ಕಿವಿ ಸಿಗುವಹಾಗಿದ್ದರೆ ಕಡತಂದು ಕೇಳಬೇಕು - ಹಾಗಿರುತ್ತದೆ ಅವರ ದಿನ ಕನ್ನಡ ಬಳಕೆ. ಇದೆಲ್ಲವೂ ಸಾಲದಂತೆ ಮಾಧ್ಯಮಗಳ ಹಾವಳಿ ಬೇರೆ! ಎಲ್ಲಿ ಹೋದವು ರಾಮಾಯಣ ಮಹಾಭಾರತ ಕಥೆಗಳು? ಅದನ್ನು ನೋಡುವರು ಯಾರಿದ್ದಾರೆ? ಪ್ರತಿ ಮನೆಯ ಚಾನೆಲ್ನಲ್ಲೂ ಟಾಮ್ ಜೆರಿ ಬಂದು ಕುಳಿತಿದ್ದಾನೆ. ಮಿಕ್ಕಿ ಮೌಸ್ಗಳು ನೋಡದೇ ಇರುವ ಮಕ್ಕಳೆಲ್ಲಿದ್ದಾರೆ? ರಿಮೋಟ್ ಒತ್ತಿದರೆ ಸಾಕು ಕಾರ್ಟೂನ್ ನೆಟ್   ವರ್ಕ್, ಪೋಗೋ, ನಿಕ್..ಬರೀ ಇಂಥವೇ. ನಮ್ಮ ಮಕ್ಕಳಿಗೆ ಇದನ್ನೆಲ್ಲಾ ನೋಡುವುದರಿಂದ ಮನರಂಜನೆಯೇನೋ ಸಿಗುತ್ತದೆ ಆದರೆ ಬುದ್ಧಿ ಬೆಳವೆಣಿಗೆಯಾಗುತ್ತದೆಯೇ? ಮಾನಸಿಕವಾಗಿ ಸಮಚಿತ್ತದಿಂದಿರುವರೇ?

ಹೆತ್ತ ತಂದೆತಾಯಿಗಳು ಇದನ್ನು ಯೋಚಿಸುವುದೇ ಇಲ್ಲ.

ನಮ್ಮ ಮನೆಯ ಮಕ್ಕಳು ಏನಾಗಬೇಕೆಂದು ಯೋಚಿಸುತ್ತೆವೆಯೇ ಹೊರತು ಏನಾಗಿದ್ದಾರೆ ಎಂದು ಕುತೂಹಲಕ್ಕಾದರು ತಿಳಿಯುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ.

ನಮ್ಮ ಮನೆಯ ಮಕ್ಕಳನ್ನು ಪಕ್ಕದ ಮನೆಯ ಮಕ್ಕಳ ಜೊತೆ ಹೋಲಿಕೆಮಾಡಿ ನೀನೂ ಅವನಂತಾಗಬೇಕೆಂದು ಹೇಳುತ್ತೇವೆಯೆ ಹೊರತು ನೀನು ನೀನಾಗಿಯೇ ಬೆಳೆಯಬೇಕೆಂದು ಮಾತಿಗಾದರೂ ಹೇಳುವುದಿಲ್ಲ.

ಕ್ಲಾಸ್ನಲ್ಲಿ ಎಲ್ಲರ ಜೊತೆ ನೀನು ಇಂಗ್ಲಿಷಲ್ಲೇ ಮಾತಾಡಬೇಕೆಂದು ಫಾರ್ಮಾನು ಹೊರಡಿಸುತ್ತೇವೆಯೆ ಹೊರತು, ನಿನ್ನತನ ನೀನು ಬಿಡದೇ ಎಲ್ಲಿ ಬೇಕೋ ಅಲ್ಲಿ ಎಷ್ಟು ಬೇಕೋ ಅಷ್ಟು ಇಂಗ್ಲಿಷ್ ಮಾತಾಡಿ ಮಿಕ್ಕೆಲ್ಲಾ ಸಮಯದಲ್ಲಿ ಕನ್ನಡದಲ್ಲಿ ಮಾತಾಡು ಅಂತ ನಾವು ನಮ್ಮ ಮಕ್ಕಳಿಗೆ ಹೇಳುವುದೇ ಇಲ್ಲ.

ಸಮಸ್ಯೆಯ ಮೂಲ ಮಕ್ಕಳಲಿಲ್ಲ, ಅದು ಇರುವುದೇ ನಮ್ಮಲ್ಲಿ - ತಂದೆತಾಯಿಗಳಲ್ಲಿ. ಇನ್ನು ಪಾಪ ಆ ಮಕ್ಕಳಾದರೂ ಏನು ಮಾಡಿಯಾವು?

ಕನ್ನಡದ ಬಗ್ಗೆ ಮೊದಲು ನಮ್ಮಲ್ಲಿ ಪ್ರಜ್ಞೆ ಬರಬೇಕು, ಅರಿವು ಮೂಡಬೇಕು. ಇಷ್ಟಕ್ಕೂ ನಾವು ಹುಟ್ಟಿದಾಗ ಏನು ಮಾತಾಡುತ್ತಿದೆವು ಯೋಚಿಸಿನೋಡಿ? ನಮ್ಮ ಮಾತೃ ಭಾಷೆ ಕನ್ನಡವನ್ನೇ ತಾನೇ? ನಾವ್ಯಾಕೆ ಇಂಗ್ಲಿಷ್ ಹುಳುಗಳಾಗಲಿಲ್ಲ? ನಾವು ಮಾಡದ್ದು ನಮ್ಮ ಮಕ್ಕಳಿಗೆ ಮಾಡೆಂದು ಹೇಳುವ ಕಡ್ಡಾಯವಾದರೂ ಯಾಕೇ? ಭೌದ್ದಿಕ ಬೆಳವಣಿಗೆಗೆ ಇಂಗ್ಲಿಷ್  ಬೇಕೆಂದಾದರೆ ಕಲಿಯುವ ವಯಸ್ಸಿನಲ್ಲಿ ಮಕ್ಕಳು ಕಲಿತೇ ಕಲಿಯುತ್ತಾರೆ ಬಿಡಿ. ನಾವಾದರು ಅಲ್ಪ ಸ್ವಲ್ಪ ನಮಗೆ ಬುದ್ದಿ ಬಂದಮೇಲೆ ತಾನೇ ಕಲಿತದ್ದು?

ಮೊದಲು ನಮ್ಮ ಮನೆಗಳಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು - ಕನ್ನಡ ಮಾತಾಡುವ ಮೂಲಕ, ಕನ್ನಡದ ಪುಸ್ತಕ ಪತ್ರಿಕೆ ತಂದು ಓದುವುದರ ಮೂಲಕ, ಅಕ್ಕಪಕ್ಕದವರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಮೂಲಕ, ನಮ್ಮ ಮಕ್ಕಳಿಗೆ ಕನ್ನಡ ನಾಡುನುಡಿಯ ಬಗ್ಗೆ ಹೇಳುವ ಮೂಲಕ, ಪರಭಾಷೆ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಳ್ಳುವ ಮೂಲಕ, ಹಿತ್ತಲಗಿಡ ಮದ್ದಲ್ಲ ಎಂದು ತಾತ್ಸಾರ ತೋರದೆ ನಮ್ಮ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಿ ಕಟ್ಟುವ ನಿರಂತರ ಕಾಯಕ ಮಾಡುವ ಮೂಲಕ.

ಅದು ಆಗೇ ಆಗುತ್ತದೆ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗುತ್ತಾನೆ, ನಮ್ಮ ಕನ್ನಡ ಸೂರ್ಯಚಂದ್ರರಿರುವ ತನಕ ಅಜರಾಮರವಾಗಿರುತ್ತದೆಯೆಂದು ನಂಬುತ್ತ ನನ್ನ ಅನಿಸಿಕೆಯನ್ನು ಮುಗಿಸುತ್ತಿದ್ದೇನೆ.

ಜೈ ಕನ್ನಡಮಾತೆ ಭುವನೇಶ್ವರಿ.

ವಂದನೆಗಳೊಂದಿಗೆ,

ಗೆಳೆಯ,
ಮೋಹನ್ ಕುಮಾರ್ ಡಿ ಎನ್









No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...