Monday, February 19, 2018

"ನಮ್ಮ ಮನೆಯಂಗಳದಿ ಬೆಳೆದ ಸುಂದರ ಹೂವೊಂದು"

ಒಂದು ಹೂವು ಅರಳಿದೆ. ನೋಡಲು ಸುಂದರವಾಗಿದೆ. ಅದರ ಪರಿಮಳ ಎಲ್ಲೆಡೆ ಹರಡಿ ತೋಟದಲ್ಲಿ ಕಂಪನ್ನು ಬೀರಿದೆ. ಅದರ ಪಾಡಿಗೆ ಅದನ್ನು ಬಿಡಬೇಕು. ಹಾಗೇ ಬಿಡಬೇಕು. ಅದು ಅರಳಿ ಕಂಪ ಸೂಸಿ ದೇವರಮುಡಿ ಏರುವವರೆಗೂ ಬಿಡಬೇಕು. ಆದರೆ ನಾವೇನು ಮಾಡುತ್ತೀವಿ? ನೋಡಿದೊಡನೆ ಮುಟ್ಟುತ್ತೀವಿ, ಪಕಳೆ ಉದುರಿಸುತ್ತೀವಿ, ಅಲುಗಾಡಿಸುತ್ತೀವಿ, ಅಂದಗೆಡವುತ್ತೀವಿ. ಪ್ರಕೃತಿದತ್ತವಾಗಿ ಎಲ್ಲಿಗೋ ಸೇರಬೇಕಿದ್ದ ಹೂ ನಮ್ಮ ಅಸಹಜ ವರ್ತನೆಯಿಂದ ತನ್ನ ಸೌಂದರ್ಯವನ್ನು ಕಳೆದುಕೊಂಡು ನೆಲದ ಕಸ ಮಾಡುತ್ತೇವೆ.

ಹೂವೆಂದರೆ ಹೆಣ್ಣು, ಆಕೆಯ ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯ ಹೂವಿಗೆ ಕೊಡುವ ಕಾಟ ಎಂದು ಪರಿಭಾವಿಸಿ ಕೆಳಗಿನ ಅಂಕಿಅಂಶಗಳನ್ನು ಒಮ್ಮೆ ನೋಡಿ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (ಎನ್ ಸಿ ಆರ್ ಬಿ) ಪ್ರಕಾರ 2016ರಲ್ಲಿ18 ವರ್ಷದೊಳಗಿನ ಹೆಣ್ಣುಮಕ್ಕಳ ಮೇಲೆ 16863 ಅತ್ಯಾಚಾರಗಳು ನಡೆದಿದೆ. ಎಲ್ಲಾ ವಯೋಮಾನದ ಒಟ್ಟು 22205 ಅತ್ಯಾಚಾರ ರಿಪೋರ್ಟ್ ಆಗಿದೆ. ಇದು ಕೇವಲ ಗಣನೆಗೆ ಸಿಕ್ಕ, ದಾಖಲಾದ ಅಂಕಿ ಅಂಶಗಳು. ಬೆಳಕಿಗೆ ಬಾರದ್ದು ಅದೆಷ್ಟಿವೆಯೋ? ಇದರಲ್ಲಿ ಶೇಕಡ 94.6 ಪ್ರತಿಶತಃ ಅತ್ಯಾಚಾರಕ್ಕೊಳಗಾದವರು ಅತ್ಯಾಚಾರಿಯನ್ನು ಗುರುತು ಹಿಡಿದಿದ್ದಾರೆ. ಅತ್ಯಾಚಾರಿಗಳು ಬೇರ್ಯಾರೋ ಹೊರಗಿನವರಲ್ಲ. ಸ್ನೇಹಿತರು, ಸಂಬಂಧಿಗಳು, ಅಕ್ಕಪಕ್ಕದ ಮನೆಯವರು, ಪರಿಚಯಸ್ಥರೇ ಆಗಿರುತ್ತಾರೆ. ಇದೇ ಆತಂಕ ಪಡುವ ವಿಷಯವಾಗಿದೆ. ಹೀಗಿರುವಾಗ ಹೆಣ್ಣು ಮಕ್ಕಳು ಕೇವಲ ತಮ್ಮ ಅಸಹಾಯಕತೆ ಮತ್ತು ಅಸಾಮರ್ಥ್ಯ ಹೊರತು ಇನ್ನೇನು ಮಾಡುವಂತಿದೆ? ನಡೆದ ದುರಂತಕ್ಕೆ ಸಾಮಾಜಿಕ ನ್ಯಾಯ ಕೊಡುವರು ಯಾರು? ನಮ್ಮ ಮನೆಯಂಗಳದಲ್ಲಿ ಬೆಳೆದ ಸುಂದರ ಹೂವು ಹೀಗೆ ನಮ್ಮ ಪರಿಚಯಸ್ಥರೇ ಹೊಸಕಿ ಹಾಕಿದಾಗ ಏನು ಮಾಡಬೇಕು? ಆದ ಅನಾಹುತಕ್ಕೆ ಆ ಮನೆಯ ಸದಸ್ಯರು ಅನುಭವಿಸೋ ಸಾಮಾಜಿಕ ಮತ್ತು ಮಾನಸಿಕ ಹಿಂಸೆಗೆ ಪರಿಹಾರ ಸೂಚಿಸುವರು ಯಾರು? ಮತ್ತೆ ಈ ವಿಕೃತಿ ನಡೆಯದಂತೆ ತಡೆಗಟ್ಟುವುದು ಹೇಗೆ?

ಎತ್ತ ಸಾಗುತ್ತಿದೆ ಸಮಾಜ? ಸಮಾಜದಲ್ಲಿ ಇರುವ ವಿಕೃತ ಮನಸ್ಸನ್ನು ಇವತ್ತು ನೆನೆದರೆ ಮನಸ್ಸು ಭೀತಿಗೊಳಗಾಗುತ್ತದೆ. ಸಣ್ಣ ಸಣ್ಣ ಕಂದಮ್ಮಗಳನ್ನೂ ಬಿಡದೆ ತಮ್ಮ ತೃಷೆ ತೀರಿಸಿಕೊಳ್ಳುವ ಪರಿ ಕಂಡರೆ, ಅದೆಷ್ಟು ಕಲುಷಿತ ಮನಸ್ಸುಗಳ ಮಧ್ಯೆ ನಾವಿದ್ದೀವಿ ಎಂದು ಕಂಗಾಲಾಗುತ್ತದೆ. ಯಾರನ್ನು ನಂಬಬೇಕು? ಯಾರನ್ನು ನಂಬಬಾರದು? ಎಂದು ನಾವು ಪ್ರತಿಯೊಬ್ಬರನ್ನೂ ಅನುಮಾನದ ನೆಲೆಯಲ್ಲಿ ನೋಡುವಂತಾಗಿದೆ.

ಸಮಸ್ಯೆ ಗಂಭೀರವಾಗಿದೆ. ಮೇಲ್ಮಟ್ಟದಲ್ಲಿ ನಿರ್ಮೂಲನೆ ಮಾಡುವುದು ಸಮಸ್ಯೆಗೆ ಪರಿಹಾರವಲ್ಲ. ಬುಡ ಸಮೇತ ಕಿತ್ತು ಒಗೆಯದ ಹೊರತು ಯಾರು ಎಷ್ಟೇ ಹೋರಾಡಿದರು, ಪ್ರತಿಭಟನೆ, ಸತ್ಯಾಗ್ರಹ ನಡೆಸಿದರೂ ಉಪಯೋಗವಿಲ್ಲ. ಪ್ರತಿಭಟನೆಯ ಬಿಸಿ ಇರುವ ತನಕ ಸಮಸ್ಯೆ ಜೀವಂತವಿರುತ್ತದೆ. ಕಾಲಾನಂತರ ಮಾಯವಾಗುತ್ತದೆ. ಮತ್ತೊಂದು ಹೂವು ಬಾಡುವ ತನಕ, ಉಹುಂ, ಯಾರಿಗೂ ಸಮಸ್ಯೆಯ ನೆನಪು ಬೇಕೆಂದರೂ ಬರುವುದಿಲ್ಲ. ನೆನಪಾದಾಗ ಮತ್ತೆ ಹೋರಾಟ, ಪ್ರತಿಭಟನೆ ಎಟ್ಸೆಟ್ರಾ ಎಟ್ಸೆಟ್ರಾ..

ಹಾಗಾದರೆ ಸಮಸ್ಯೆಯನ್ನು ಬಗೆಹರಿಸುವ ದಾರಿ ಯಾವುದು? ಇದು ಒಬ್ಬರಿಂದಾದಲಿ, ಒಂದೆರೆಡು ಸಂಘಟನೆಗಳಿಂದಾಗಲಿ, ನಾಲ್ಕೈದು ದಿನದ ಪ್ರತಿಭಟನೆ ಹೋರಾಟದಿಂದಾಗಲಿ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲಾಗದು. ಸಮಸ್ಯೆಯ ಆಳಕ್ಕಿಳಿದು, ಮೂಲ ಹುಡುಕಿ, ಸಮಾಜದಲ್ಲಿ ಸದಾ ಆರದ ಜಾಗೃತಿಯನ್ನುಂಟು ಮಾಡಬೇಕಾಗುತ್ತದೆ. ಇದು ಬರೀ ಮಾತಾಯಿತು. ಹೇಳಲಿಕ್ಕೆ, ಹೇಳಿದ್ದು ಕೇಳಲಿಕ್ಕೆ, ಸಭೆಯಲ್ಲಿ ನಿಂತು ಭಾಷಣ ಮಾಡುವುದಕ್ಕೆ ಸರಿಯಾಯ್ತು. ಆದರೆ ನಿಜವಾಗ್ಯು ಸಮಸ್ಯೆ ನಿರ್ಮೂಲನೆ ಮಾಡುವುದು ಹೇಗೆ? ಆರದ, ಮರೆಯದ, ಸದಾ ನೆನೆಪಿನಲ್ಲಿ ಉಳಿಯುವ ಹಾಗೆ ಹಸಿ ಜಾಗೃತಿಯುಂಟು ಮಾಡುವುದು ಹೇಗೆ?
ಮೈಲಿಗೆ ಎನ್ನುವ ಕೆಲವು ವಿಷಯಗಳನ್ನು ಜನಮಾನಸದಲ್ಲಿ ಬಿತ್ತರಿಸುವ ಕೆಲಸ ಹಿಂದೆಂದಿಗಿಂತಲೂ ಹೆಚ್ಚಿಗೆ ಈಗಾಗಬೇಕಿದೆ. ಸಮಸ್ಯೆಗೆ ಪರಿಹಾರ ಮಾಡಿವಂತಿಕೆಯನ್ನು ಪ್ರಶ್ನೆ ಮಾಡುವುದಲ್ಲ. ಅದು ಇನ್ನೊಂದು ಸಮಸ್ಯೆಯನ್ನು ಬೆಳೆಸಿದಂತೆ. ಮತ್ತೇನು ಮಾಡಬೇಕು? ಮೈಲಿಗೆಯನ್ನು ನೋಡುವ ಬಗೆ ಬದಲಿಸಿಕೊಳ್ಳಬೇಕು. ಅದನ್ನು ಇನ್ನೊಂದು ಆಯಾಮದಲ್ಲಿ ನೋಡುವುದಕ್ಕೆ ಸಾಧ್ಯವಾ? ಪುನರ್ಪರಿಶೀಲಿಸಬೇಕು. ಅದರಲ್ಲಿ ಇರುವ ಸಾಧ್ಯತೆ ಭಾಧ್ಯತೆಗಳನ್ನು ವಿಂಗಡಿಸಿ ಹುಳುಕಿದ್ದರೆ ಬೇರ್ಪಡಿಸಿ ನೋಡುವ ದೃಷ್ಟಿಕೋನ ಮತ್ತು ಅದನ್ನು ಒಪ್ಪುವ ಮನಸ್ಸು ಬೇಕು. ಆ ಮಟ್ಟಿಗಿನ ಬುದ್ಧಿ ಮತ್ತು ಬದ್ಧತೆ ಸಮಾಜದಲ್ಲಿ ನೆಲೆಯೂರಬೇಕು.

ಇಲ್ಲಿ ಮೈಲಿಗೆಯೆಂದರೆ ಕೇವಲ ಲೈಂಗಿಕತೆ ಒಂದೇ ಅಲ್ಲ. ಬದಲಾದ ಕಾಲಮಾನಕ್ಕೆ ತಕ್ಕಂತೆ ನಮ್ಮ ಮನಸ್ಸು ಮತ್ತು ಚಿಂತನೆಗಳನ್ನು ಬದಲಿಸಿಕೊಂಡು ಅದರ ಪ್ರಕಾರ ನಡೆಯದಿರುವುದೂ ಒಂದು ರೀತಿ ಮೈಲಿಗೆಯೇ. ಬದಲಾವಣೆ ಎನ್ನುವುದು ಅಪ್ಡೇಟ್ ಆಗಿದ್ದೀಯೋ ಇಲ್ಲವೋ? ನಿನ್ನ ಆಲೋಚನೆ, ಪ್ರತಿಕ್ರಿಯೆ ಮತ್ತು ನಡತೆ ಅದಕ್ಕೆ ತಕ್ಕಂತೆ ಇದೆಯೋ ಇಲ್ಲವೋ ಎನ್ನುವುದರ ಮೇಲೆ ನಿಂತಿದೆ. ಬದಲಾದ ಸ್ವಾಸ್ಥ್ಯ ಮನಸ್ಸುಗಳು ಒಗ್ಗೂಡಿದರೆ ಅತ್ಯಾಚಾರ ಎನ್ನುವ ಪೆಡಂಭೂತವನ್ನು, ವಿಕೃತ ಕಾರ್ಯವೆಸಗುವ ಅನಾಚಾರಿಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಇಲ್ಲವಾದಲ್ಲಿ ತೋಟಕ್ಕೆ ಎಷ್ಟು ಬೇಲಿ ಕಟ್ಟಿದರೂ ನಮ್ಮ ಪುಟ್ಟ ಮತ್ತು ಸುಂದರ ತೋಟ ದಾಳಿಗೊಳಗಾದೀತು, ಹೂವು ಮುದುಡಿ ಕಸವಾದೀತು.
ಈ ಸಮಸ್ಯೆಯನ್ನು ಪರಿಹರಿಸಲು ಹಲವಾರು ಸಂಘ ಸಂಸ್ಥೆಗಳು ಅವಿರತ ಪ್ರಯತ್ನಿಸುತ್ತಿದ್ದರೂ ಪರಿಣಾಮ ಮಾತ್ರ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಈ ನಿಟ್ಟಿನಲ್ಲಿ ಕೆಲವೇ ಸಂಘ ಸಂಸ್ಥೆಗಳು ಪ್ರಯತ್ನ ಮೀರಿ ಕೆಲಸ ಮಾಡುತ್ತಿವೆಯಾದರೂ, ಬಹುಸಂಖ್ಯಾತ ಸಂಸ್ಥೆಗಳು ಕೇವಲ ಬಿಡುಗಡೆಯಾಗುವ ಅನುದಾನದ ಹಣದ ಕಡೆಗೇ ಹೆಚ್ಚು ಪ್ರಾಶಸ್ತ್ಯ ನೀಡಿವೆ.

ಅತ್ಯಾಚಾರ ಮತ್ತು ದೌರ್ಜನ್ಯದಂತಹ ಹೀನ ಕೃತ್ಯಗಳು ನಡೆಯುವ ಮುನ್ನವೇ ತಡೆಯುವ ಮಾರ್ಗಗಳಿಲ್ಲವೇ? ಇದೆ. ಮೊದಲನೆಯದಾಗಿ, ಈ ನಿಟ್ಟಿನಲ್ಲಿ ಸಮಾಜವನ್ನು ಎಜುಕೇಟ್ ಮಾಡುವುದು. ಶಾಲೆಗಳಲ್ಲಿ ಆರಂಭಿಕ ಹಂತದಿಂದಲೇ ಲೈಂಗಿಕ ಶಿಕ್ಷಣವನ್ನು ವಯೋಮಾನ ಆಧಾರಿತವಾಗಿ ಕಡ್ಡಾಯ ಮಾಡಬೇಕು. ಮುಚ್ಚು ಎಂದಷ್ಟು ಬಿಚ್ಚಿಕೊಳ್ಳುತ್ತದೆ. ಆ ಬಿಚ್ಚಿಕೊಳ್ಳುವ ಸತ್ಯಗಳು ಮನಸ್ಸನ್ನು ತನ್ನದೇ ಕಲ್ಪನಾ ಲೋಕದಲ್ಲಿ ಅತಿ ಅಸಹ್ಯವಾಗಿ ಬಹು ದೂರ ಎತ್ತೆತ್ತಲೋ ಕೊಂಡೊಯ್ಯುತ್ತದೆ. ಮನಸ್ಸುಗಳಲ್ಲಿ ಹದ ತಪ್ಪಿದ ವಿಷ ಚಿಂತನೆಗಳು ಚಿಗುರಿಡುತ್ತವೆ. ಆ ಮಲಿನ ಮನಸ್ಸುಗಳು ಆಗ ಸಮಾಜವನ್ನು ವಿಕೃತವಾಗಿಯೇ ನೋಡಲು ಆರಂಭಿಸುತ್ತವೆ. ಇದಾಗಬಾರದೆಂದರೆ ಲೈಂಗಿಕ ಶಿಕ್ಷಣ ಮಕ್ಕಳಿಗೆ ಕೊಡಬೇಕು. ಆ ಮುಕ್ತ ವಾತಾವರಣ ಸೃಷ್ಟಿಯಾಗಲಿಲ್ಲವೆಂದರೆ ಸಮಸ್ಯೆ ತನ್ನ ನಾಗಾಲೋಟ ಮುಂದುವರಿಸುತ್ತದೆ. ಸ್ವಾಸ್ಥ್ಯ ಮನಸ್ಸುಗಳು ಎಷ್ಟು ಕ್ರಿಯಾಶೀಲವಾಗಿ ಈ ಕೆಲಸ ಮಾಡುತ್ತವೆ ಎನ್ನುವುದು ಎಷ್ಟರ ಮಟ್ಟಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲೆವು ಎನ್ನುವುದನ್ನು ನಿರ್ಧರಿಸುತ್ತದೆ.

ಎರಡನೆಯದಾಗಿ, ಬೀದಿ ಬೀದಿಗಳಲ್ಲಿ, ಜನ ಸೇರುವ ಜಾಗದಲ್ಲಿ, ಸಭೆಯಲ್ಲಿ, ನಾಟಕ ಸಮಾರಂಭದಲ್ಲಿ, ಬಸ್ಸು ರೈಲ್ವೇ ನಿಲ್ದಾಣದಲ್ಲಿ, ಆಫೀಸುಗಳಲ್ಲಿ, ಸಿನಿಮಾ ಥಿಯೇಟರಿನಲ್ಲಿ, ತೇರು ಜಾತ್ರೆಗಳಲ್ಲಿ, ಎಷ್ಟು ಸಾಧ್ಯವೋ ಅಷ್ಟು ಅತ್ಯಾಚಾರದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು. ಹೆಣ್ಣು ಭೋಗದ ವಸ್ತುವಲ್ಲ, ತೃಷೆ ತೀರಿಸುವ ಆಟಿಕೆಯಲ್ಲ ಎನ್ನುವುದನ್ನು ನಾಟಕಗಳ ಮೂಲಕ, ಹಾಡು ಹಸೆಗಳ ಮೂಲಕ ಜನರ ಜೊತೆಯಲ್ಲಿ ಬೆರೆತು ಮುಕ್ತವಾಗಿ ಇದರ ಬಗ್ಗೆ ಮಾತನಾಡಿ ಸಮಸ್ಯೆಯನ್ನು ಅವರ ಮನದಲ್ಲಿ ನೆಡುವ ಮೂಲಕ ಅವರ ಮನಸನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಬೇಕು.
ಮೂರನೆಯದಾಗಿ, ಸಂತ್ರಸ್ಥೆಯರನ್ನು ಸಮಾಜದ ಮತ್ತು ನಮ್ಮದೇ ಮನೆಯ ಒಬ್ಬ ಸದಸ್ಯನಂತೆ ಕಾಣುವ ಅತೀ ದೊಡ್ಡ ಜರೂರತ್ತಿದೆ. ಅವರಿಗೆ ನಮ್ಮ ಕರುಣೆ ಬೇಕಾಗಿಲ್ಲ. ಬೇಕಾಗಿರುವುದು ಅವರಲ್ಲಿ ಧೈರ್ಯ ತುಂಬುವ, ಪರಾವಲಂಬಗಳಾಗಿ ಬದುಕುವ, ಸ್ವತಂತ್ರವಾಗಿ ಯೋಚಿಸುವ ಮತ್ತು ಪರ್ಯಾಯ ಬದುಕನ್ನು ತಮಗಿಷ್ಟ ಬಂದಂತೆ ಕಟ್ಟಿಕೊಳ್ಳುವ ಅವಕಾಶವನ್ನು ಎಲ್ಲರೂ ಸೇರಿ ಸೃಷ್ಟಿಸುವುದು ಬೇಕಾಗಿದೆ. ಕಳೆದುಕೊಂಡಿದ್ದರ ಬಗ್ಗೆ ಚಿಂತಿಸಿ, ಹಿಂಸಿಸಿ, ಅವಮಾನಪಡಿಸೋ ಬದಲು ಮುಂದೆ ಪಡೆದುಕೊಳ್ಳಬಹುದಾದ, ಸುಂದರವಾಗಿ ಅವರೂ ಬದುಕು ಕಟ್ಟಿಕೊಳ್ಳಬಹುದಾದ ಅಂಶ ಅವರಿಗೆ ಮನಗಾಣಿಸಬೇಕಿದೆ.

ನಾಲ್ಕನೆಯದಾಗಿ, ಹೆಣ್ಣು ಅಬಲೆಯಲ್ಲ. ಆಕೆಗೂ ಎಲ್ಲರಂತೆ ಬದುಕುವ, ನಮ್ಮ ತಾಯಿಯಾಗಿಯೋ, ಅಕ್ಕತಂಗಿಯಾಗಿಯೋ, ಹೆಂಡತಿಯಾಗಿಯೋ, ಮಗಳಾಗಿಯೋ, ಗೆಳತಿಯಾಗಿಯೋ ಬಾಳಿ ಬದುಕುವ ಅವಕಾಶವನ್ನು ಅವರಿಗೆ ನಾವು ಮುಕ್ತವಾಗಿ ಮಾಡಿಕೊಡಬೇಕು.

ಸರಕಾರ ಅತ್ಯಾಚಾರದಂತಹ ಮಾರಕ ಖಾಯಿಲೆಯನ್ನು ನಿರ್ಮೂಲನೆ ಮಾಡಲು ಹಲವು ಕಾಯಿದೆಯನ್ನು, ಹಲವು ಭಾಗ್ಯಗಳನ್ನು, ಇಪ್ಪತ್ನಾಲ್ಕು ಗಂಟೆ ಅಬಲೆಯರ ಕಾಲ್ ಸೆಂಟರುಗಳನ್ನು ತೆರೆದು ನಮ್ಮ ಸರಕಾರ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಿದೆ ಎಂದು ಬೀಗಿ ಚಪ್ಪಾಳೆ ಹೊಡೆದರೆ ಪ್ರಯೋಜನವಿಲ್ಲಷ್ಟೇ. ಇದೆಲ್ಲವನ್ನು ಮೀರಿದ ಸರ್ವಪ್ರಯತ್ನಗಳು ಸಾಮಾನ್ಯ ಜನರನ್ನು ಈ ನಿಟ್ಟಿನಲ್ಲಿ ಬದಲಾಯಿಸುವ, ಸಮಾಜದ ಸ್ವಾಸ್ಥ್ಯ ಉಳಿಸುವ ಕೆಲಸ ಸದಾ ಜಾರಿಯಲ್ಲಿರುವಂತೆ ನೋಡಿಕೊಳ್ಳಬೇಕು. ಅತ್ಯಾಚಾರದ ಆರೋಪ ಸಾಬೀತಾದರೆ ತ್ವರಿತವಾಗಿ ಅತ್ಯುಗ್ರ ಶಿಕ್ಷೆ ನೀಡುವ ಕಾನೂನು ಬರಬೇಕು. ಈ ತರಹದ ವಿಕೃತ ಕೃತ್ಯ ಮಾಡುವ ಮುನ್ನ ವಿಕೃತ ಅದನ್ನು ಕುರಿತು ಯೋಚಿಸಲೂ ಭಯಪಡುವಂತಹ ಕಾನೂನು ನಮ್ಮಲ್ಲಿರಬೇಕು. ಆಗಲೇ ನಮ್ಮ ಮನೆಯ ಹೆಣ್ಣು ಮಕ್ಕಳು ಮೊಗ್ಗಾಗಿ ಬೆಳೆದು, ಹೂವಾಗಿ ಅರಳಿ ನಮ್ಮೊಳಗಿರುವ ಧುರ್ಗಂಧವನ್ನು ಒರೆಸುತ್ತಾ, ಇನ್ನೊಂದು ಮನೆಯ ಬೆಳಕಾಗಿ ನಂದಾದೀಪವನ್ನು ಹಚ್ಚಬಲ್ಲಳು. ಹಾಗಾಗಲೆಂದು ನಾವೆಲ್ಲರೂ ಸೇರಿ, ಆಶಿಸುವುದಕ್ಕಿಂತಲೂ, ಪ್ರಯತ್ನವನ್ನು ಮಾಡೋಣವೇ?

ಕೊನೆಯ ಮಾತು. ಹೂವನ್ನು ಬಲಿಹಾಕುವ ಹೀನ ಕೃತ್ಯಕ್ಕೆ ಕೈ ಇಡುವ ಮುನ್ನ ನಮ್ಮ ನಮ್ಮ ಮನೆಗಳಲ್ಲಿರುವ ತಾಯಿಯನ್ನೋ, ಹೆಂಡತಿ, ಅಕ್ಕತಂಗಿಯರನ್ನೋ ನೆನೆಸಿಕೊಂಡರೆ ಸಾಕು. ನಾನೂ ಕೈ ಹಾಕಿದಂತೆ ಇತರರೂ ನಮ್ಮ ಅಂಗಳಕ್ಕೆ ದಾಳಿಯಿಡುವರು ಎನ್ನುವ ಯೋಚನೆ ಮನಸ್ಸಿಗೆ ಬಂದರೂ ಸಾಕು.. ಅತ್ಯಾಚಾರಕ್ಕೆ ಬಿಡುಗಡೆ ದೊರೆಯುತ್ತದೆ.

- ಎಂಕೆ.


No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...