Wednesday, October 4, 2017

"ಧಾತು" 


ಅನಾದಿಕಾಲದಿಂದ ಈಗಿನ ಮುಂದುವರೆದ ದಿನಗಳ ತನಕ ತನ್ನ ಮಡಿವಂತಿಕೆಯನ್ನು ಉಳಿಸಿಕೊಂಡು ಬಂದಿರುವ ಕೆಲವೇ ಕೆಲವು ಅಂಶಗಳಲ್ಲಿ ಈ ಲೈಂಗಿಕತೆಯೂ ಒಂದು. ಎಲ್ಲ ಕ್ಷೇತ್ರದಲ್ಲಿ ಬದಲಾವಣೆಯ ಪೂರವೇ ಹರಿದು ಬಂದು ಅದನ್ನು ಬದಲಾದ ಕಾಲಮಾನದೊಳಗೆ ಒಪ್ಪಿಕೊಂಡಿರುವಾಗ್ಯೂ, ತನ್ನ ಅಗೋಚರ ಕಬಂಧಬಾಹುವಿನ ಕಪಿಮುಷ್ಟಿಯಿಂದ ಹೊರಬರದೆ, ತನ್ನನ್ನು ತಾನು ನಿಯಂತ್ರಿಸಿಕೊಂಡು ಅಸಂಕುಚಿತ ಸಂಕೋಲೆಯಲ್ಲಿ ಹೆಣೆಯಲ್ಪಟ್ಟಿರುವ ನಮ್ಮನಿಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾದ ಲೈಂಗಿಕತೆಯೆಂದರೆ ಸಂಪ್ರದಾಯವಾದಿಗಳಲ್ಲದೇ ವಿದ್ಯಾವ...ಂತರೂ ಸೇರಿ ಮೂಗುಮುರಿಯುವುದೇ ಹೆಚ್ಚು. ಇಂತಹ ಸಂಕುಚಿತ ಮಡಿವಂತಿಕೆಯ ಲೈಂಗಿಕತೆ ಕುರಿತು ಕನ್ನಡದಲ್ಲಿ ಹಲವು ಬರವಣಿಗೆ ಮೂಡಿ ಬಂದಿವೆ. ಆ ಸಾಲಿನಲ್ಲಿ ನಿಲ್ಲುವ ಇನ್ನೊಂಡು ಕೃತಿಯೇ ನಾ. ಮೊಗಸಾಲೆಯವರು ಬರೆದಿರುವ "ಧಾತು".

ಇದರಲ್ಲಿ ದಾಂಪತ್ಯ ಹಲವು ಮಜಲುಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವುದರ ಜೊತೆಗೆ, ಲೈಂಗಿಕ ವಿಜ್ಞಾನವನ್ನೂ ಅತ್ಯಂತ ತಾರ್ಕಿಕ ನೆಲೆಯಲ್ಲಿ ನೋಡಲಾಗಿದೆ. ಗಂಡಹೆಂಡತಿಯ ನಡುವೆ ನಡೆಯುವ ಈ ನೈಸರ್ಗಿಕ ಕ್ರಿಯೆಯ ಆಳಅಂತರಾಳದ ಪರಿಚಯವಿಲ್ಲದ ವಿದ್ಯಾವಂತರೂ, ಸಮಾಜದಲ್ಲಿ ಉನ್ನತ ಮಟ್ಟದಲ್ಲಿರುವ ಗಣ್ಯರೂ ಮೊದಲುಗೊಂಡು ಓದಲುಬರೆಯಲು ಬಾರದ ನಿರಕ್ಷರರು ಹೇಗೆ ಒಂದು ಅತ್ಯಂತ ಮಧುರ ಭಾವನೆಯುಂಟಾಗಬಹುದಾದ ಇದನ್ನು ತನ್ನ ಅಜ್ಞಾನದಿಂದ ಹೊಸಕಿ ಒನ್ ಸೈಡ್ ದಬ್ಬಾಳಿಕೆ ನಡೆಸುತ್ತಿರುವರು ಎಂಬುದರ ಚಿತ್ರಣ ಇಲ್ಲಿದೆ. ದಾಂಪತ್ಯದ ಹೊರಗಿನ ಸಂಬಂಧವನ್ನು ಎಳೆಎಳೆಯಾಗಿ ಬಿಡಿಸಿಡುವ ಜೊತೆಗೆ ಅದು ಮಾನ್ಯವೋ ಅಮಾನ್ಯವೋ ಎನ್ನುವುದು ವ್ಯಕ್ತಿಗತವಾಗಿ ಅಲ್ಲದೆ ಸಾಮಾಜಿಕವಾಗಿ ಉಂಟುಮಾಡುವ ಪರಿಣಾಮವನ್ನು ಸರಳವಾದ ಪಾತ್ರಗಳಿಂದ ವಿವರವಾಗಿ ಹೇಳಲ್ಪಟ್ಟಿದೆ.

ಇಷ್ಟಕ್ಕೂ ಒಂದಾಗುವುದು ಎಂದರೇನು? ಅದು ದೈಹಿಕವಾಗಿ ದೇಹಗಳೆರಡರ ಕೂಡುವಿಕೆಯೋ ಅಥವಾ ಮಾನಸಿಕವಾಗಿ ಮನಸುಗಳ ಸಂಮ್ಮಿಶ್ರಣವೋ? ಇನ್ನೊಂದು ಅರ್ಥದಲ್ಲಿ ದೇಹಮನುಸಗಳೆರಡರ ಆವಿರ್ಭವಿಸುವಿಕೆಯೋ? ಮೇಲುನೋಟಕ್ಕೆ ಇದರಲ್ಲಿ ಅಂಥದ್ದೇನಿಲ್ಲ ಎಲ್ಲಾ ಒಂದೇ ಎನಿಸಿದರೂ ನಮ್ಮ ಭಾವಕೋಶಕ್ಕೆ ತಾಗಿಯೂ ತಾಗದಂತೆ, ಅರಿವಿಗೆ ಬಂದರೂ ಬಾರದಂತೆ, ಸುಪ್ತಿಗೆ ಎಟುಕಿದರೂ ಬುದ್ದಿಗೆ ತಿಳಿಯದಂತಹ ಸೂಕ್ಷ್ಮಸಂವೇದನೆಯುಳ್ಳ ತೆಳು ಅಂತರ ಒಂದಕ್ಕೊಂದಿದೆ. ಈ ಅಂತರವನ್ನು ನಮ್ಮಲ್ಲಿ ಅದೆಷ್ಟು ಜನ ಅರ್ಥಮಾಡಿಕೊಂಡಿದ್ಡಾರೆ? ಹೆಣ್ಣಿರುವುದು ಬರೀ ಭೋಗಿಸಲಿಕ್ಕೆ ಮಾತ್ರ, ತನಗೆ ಬೇಕಾದಾಗ ಸುಖ ನೀಡಲಿಕ್ಕೆ ಮಾತ್ರ ಎಂದು ತಿಳಿದವರ ನಡುವೆ ಪ್ರಕೃತಿನಿರ್ಮಿತ ಕ್ರಿಯೆಯನ್ನು ಹೆಣ್ಣಿನ ಬಹಿರಂಗದೊಡನೆಯಲ್ಲದೆ ಆಕೆಯ ಅಂತರಂಗಕ್ಕೂ ಒಪ್ಪುವ ಹಾಗೆ ನಡೆಯುವ ಮನಸ್ಸು ಯಾರಿಗಿದೆ? ತಾನು ಮಾತ್ರ ಉತ್ತುಂಗಕ್ಕೇರಿ ಹೆಣ್ಣನ್ನು ನಿರ್ಲಕ್ಷಿಸುವ, ಹೆಸರಿಗೆ ಗಂಡನಂತಿದ್ದರೂ ವಿಟಪುರುಷನಂತಾಡುವ ಗಂಡನಿಗೆ ತನ್ನ ಹೆಂಡತಿಗೂ ಆಕೆಯ ಅಂತರಂಗದ ಭಾವನೆಗಳಿಗೂ ಜೊತೆಗೆ ದೈಹಿಕ ಸ್ಥಿತಿಗತಿಯನ್ನರಿತು ಮುನ್ನಡೆಯುವ ವಿವೇಚನೆ ಇರಬೇಡವೇ? ಪಾತಿವ್ರತ್ಯ ಎನ್ನುವುದು ಕೇವಲ ಹೆಂಡತಿಯಾದವಳು ಮಾತ್ರ ಅನುಸರಿಸಬೇಕಾದುದೇ? ಗಂಡ ಇದರಿಂದ ಹೊರತೇ? ಎನ್ನುವುದನ್ನು ವಸ್ತುಸ್ಥಿತಿಯಲ್ಲಿ ಚರ್ಚಿಸಲಾಗಿದೆ.

ಕಥಾನಾಯಕ ತನ್ನ ಹೆಂಡತಿ ತೀರಿಕೊಂಡ ಬಳಿಕ ಎಲ್ಲರ ಸಲಹೆಯಂತೆ ಇನ್ನೊಂದು ಮದುವೆಯಾಗ ಬಯಸುತ್ತಾನೆ. ಆತನಿಗೆ ಬೇಕಿರುವುದು ದೈಹಿಕ ಸಾಂಗತ್ಯಕ್ಕಿಂತ ಮನೋಸಾಂಗತ್ಯ. ಮನಃಶಾಸ್ತ್ರಜ್ಞ ವೈದ್ಯನೂ ಆದ ಗೆಳೆಯನನ್ನೂ ಭೇಟಿಯಾಗಿ ಈ ಕುರಿತು ಚರ್ಚಿಸುತ್ತಾನೆ. ತನ್ನ ಮಗಸೊಸೆ ಮತ್ತು ಸಮಾಜ ಏನೆಂದುಕೊಳ್ಳುವುದೋ ಎನ್ನುವ ಭಯದಿಂದ ಸುಪ್ತವಾಗಿದ್ದ ತನ್ನೊಡಲ ಬಯಕೆಯನ್ನು ಜೀವಂತವಾಗಿರಿಸಿ, ವೈದ್ಯಮಿತ್ರ ಹೇಳಿದ ಸಣ್ಣಸಣ್ಣ, ಆದರೆ, ಕಣ್ಣುತೆರೆಸುವ ಜೀವನಪಾಠ ನಾಯಕನ ಕಣ್ಣು ತೆರೆಸಲು ಆತನಿಗೆ ಜ್ಞಾನೋದಯವಾಗಿ ತಾನು ತನ್ನ ಹೆಂಡತಿಯ ಜೊತೆ ಅದೆಷ್ಟೇ ಚೆನ್ನಾಗಿ ಸಂಸಾರ ನಡೆಸುತ್ತಿದ್ದರೂ ತಾನು ನಡೆಸಿದ ದಾಂಪತ್ಯದ ಏಕಪ್ರವೃತ್ತಿ ಧೋರಣೆಯನ್ನು ನೆನೆದು ಪಶ್ಚಾತ್ತಾಪ ಪಡುತ್ತಾನೆ. ಇದಕ್ಕೂ ಮುಂಚೆ ತಾನು ಖ್ಯಾತ ಸಾಹಿತಿಯಾಗಿದ್ದು ಇತ್ತೀಚೆಗೆ ಬರೆದ ಕಥೆಯೊಂದು ಪತ್ರಿಕೆಯ ಸಾಪ್ತಾಹಿಕದಲ್ಲಿ ಪ್ರಕಟವಾಗಲು ಅದನ್ನೋದಿದ ಮಹಿಳೆಯೊಬ್ಬಳು ನಾಯಕನ ಅಭಿಮಾನಿಯಾಗುತ್ತಾಳೆ. ಪರಿಚಯ ಮುಂದುವರೆದು ಆಪ್ತರಾಗುವ ಇಬ್ಬರೂ ಮಿಂಚಂಚೆ ಮುಕಾಂತರ ತಮ್ಮತಮ್ಮ ಅನಿಸಿಕೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಾರೆ. ಆಕೆ ತನ್ನ ಹಿಂದಿನ ಪೂರ್ವಾಪರವನ್ನು ನಾಯಕನಿಗೆ ತಿಳಿಸುತ್ತಾಳೆ. ಈ ತನಕ ಮದುವೆಯಾಗಿ ಗಂಡಸಿನ ಸಂಪರ್ಕಕ್ಕೆ ಬಂದಿರದ ಆಕೆಯೂ, ಜೀವನದಲ್ಲಿ ಎಲ್ಲವನ್ನೂ ಅನುಭವಿಸಿ ಇಳಿಗಾಲದ ಸಂಜೆಯಕಡೆ ಮುಖಮಾಡಿ ನಿಂತಿರುವ ನಾಯಕನೂ ತಮ್ಮ ತಮ್ಮ ನಡುವೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತೆ ಅವಿನಾಭವ ಸೆಳೆತವಾಗಲು ಒಂದಿನ ಇಬ್ಬರೂ ನಿಶ್ಚಯಿಸಿ ಒಂದೆಡೆ ಭೇಟಿಯಾಗುವುದೆಂದು ಮಾತಾಗುತ್ತದೆ. ಇಬ್ಬರೂ ಅಲ್ಲಿಗೆ ಬರುತ್ತಾರೆ, ಭೇಟಿಯಾಗುತ್ತಾರೆ. ಅದು ದೈಹಿಕವಾಗಿಯೋ ಇಲ್ಲ ಮಾನಸಿಕವಾಗಿಯೋ? ನಾಯಕನಿಗೆ ತನ್ನ ಬಯಕೆ ಈ ಮುಂಚೆ ಏನಿತ್ತು ಮತ್ತು ಈ ಭೇಟಿಯಲ್ಲಿ ಆಕೆಯನ್ನು ನೋಡಿದ ಮೇಲೆ ಏನಾಯ್ತು? ನಾಯಕಿ ತಾನು ನಾಯಕನ ಮನಸ್ಸನ್ನು ಅರಿತಳೇ? ಆತನನ್ನು ಪಡೆಯುವುದರಲ್ಲಿ ಸಫಲಳಾದಳೇ? ಆಕೆಯ ನಿಲುವೇನಿತ್ತು? ನಾಯಕನನ್ನು ಅದು ಬದಲಿಸಿತೇ? 

ನಾಯಕನ ವಯಸ್ಸು ಎಪ್ಪತ್ತೊಂದು, ನಾಯಕಿಯದು ಅರವತ್ತು. ಈ ಹಿನ್ನೆಲೆಯನ್ನಿಟ್ಟುಕೊಂಡು ಸಮಾಜದ ಹತ್ತುಹಲವು ಹುಳುಕುಗಳ ಕಟ್ಟಿಕೊಡುವುದರ ಜೊತೆ ದಾಂಪತ್ಯದ ಮಹತ್ವಪೂರ್ಣ ಮಾಹಿತಿಯನ್ನು ,ಹೆಣ್ಣಿನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ಮತ್ತದರ ಒಳಸುಳಿಯಿಂದ ಪಾರಾಗುವ ದಾರಿಯನ್ನು, ಅತ್ಯಂತ ಸಹಜವಾಗಿ ವಿವರಿಸಿದ್ದಾರೆ. ಇಲ್ಲಿ ಮೌಕಿಕ ಹಿನ್ನೆಲೆಯುಳ್ಳ ದಾಂಪತ್ಯ ಆದರ್ಶಗಳು ಹೇಗೆ ಹೆಣ್ಣಿಗೆ ಅನ್ವಯಿಸುವುದೋ ಹಾಗೇ ಗಂಡಿಗೂ ಅನ್ವಯಿಸುವುದೆನ್ನುವುದನ್ನು ಮನಗಾಣುವ ಹಾಗೆ ಸಂಧರ್ಭವನ್ನು, ಪಾತ್ರಗಳನ್ನು, ಕಥೆಯನ್ನು ನಿರೂಪಿಸಲಾಗಿದೆ. "ಧಾತು" ಎನ್ನುವುದು ಇಬ್ಬರಲ್ಲೂ ಇರಬೇಕಾದ ಸಮಾನತೆಯನ್ನು, ಸ್ಥಿರತೆಯನ್ನು, ದೇಹವೇ ಮನಾಸಾಗಿರುವುದನ್ನು, ಮನಸೇ ದೇಹವಾಗಿರುವುದನ್ನು, "ಅಹಂ ಬ್ರಹ್ಮಾಸ್ಮಿ" ಎನ್ನುವುದು ಇಬ್ಬರಲ್ಲಿನ ಸಹಭಾಗಿತ್ವವನ್ನು ಮೇಳೈಸುವ ಕೊಂಡಿಯಾಗಿದೆ ಎಂದು ಪರಿಭಾವಿಸಬೇಕು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್


No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...