ಸತ್ಯಕಾಮರ "ತಂತ್ರಯೋನಿ" - ಬರಹ ೩
ಸತ್ಯಕಾಮರ "ತಂತ್ರಯೋನಿ" ಕೇವಲ ತಂತ್ರ, ತಾಂತ್ರಿಕರ ಲೋಕದ ವಿಧಿವಿಧಾನವನ್ನು ಆಡ್ಯವಾಗಿ ತಿಳಿಸುವ ಕೃತಿಯಾದರೂ ಓದುವವರು ಗಮನಿಸಿದರೆ ಪ್ರತಿ ಪುಟದಲ್ಲೂ ಇಡೀ ಜೀವನ ದೃಷ್ಟಿಕೋನವನ್ನು ಬದಲಾಯಿಸುವ ಸಂಗತಿಗಳಿವೆ. ಒಬ್ಬ ವ್ಯಕ್ತಿಯ ಉಗಮಕ್ಕೆ ಕಾರಣವಾಗಬಲ್ಲ ಹಲವು ಸಾಲುಗಳಿವೆ. ಇದನ್ನು ನೀವು ವ್ಯಕ್ತಿತ್ವ ವಿಕಸನದ ಪಾಠಗಳೆನ್ನಿ, ಜ್ಞಾನದ ಇನ್ನೊಂದು ರೂಪವೆನ್ನಿ, ಅಂತರ್ದರ್ಶನವೀಯ್ವ ಬೆಳಕೆನ್ನಿ - ಎಲ್ಲವೂ ಆಗುತ್ತದೆ. ಒಮ್ಮೆ ಓದಲು ಶುರು ಮಾಡಿದರೆ ಸತ್ಯಕಾಮರು ಹೇಳಿರುವ ಪ್ರತಿಯೊಂದು ಮಾತುಗಳು ಜೀವನದ ಸತ್ಯಗಳನ್ನು ಬಹು ಸರಳವಾಗಿ ಹೇಳಿರುವುದು ಓದುಗರ ಅನುಭವಕ್ಕೆ ಬರುತ್ತದೆ. ನನಗೆ ಹಿಡಿಸಿದ ಕೆಲವು ಸಾಲುಗಳನ್ನಿಲ್ಲಿ ಪ್ರಸ್ತಾವಿಸಿದ್ದೇನೆ. ಒಮ್ಮೆ ಓದಿ ನೋಡಿ, ಯಾವ ಮಹಾನ್ ಗುರುವಿಗಿಂತಲೂ, ಭೋಧಕನಿಗಿಂತಲೂ, ತತ್ವಜ್ಞಾನಿಗಿಂತಲೂ ಸರಳವಾಗಿ ಜ್ಞಾನ ಮತ್ತು ಸತ್ಯದ ದರ್ಶನ ಮಾಡಿಸಿದ್ದಾರೆ ಸತ್ಯಕಾಮರು.
ನಮ್ಮ ಮೇಲೆ ಬಳಿದುಕೊಳ್ಳುವ ಕತ್ತಲೆಯನ್ನೇ ಬೆಳಕಿನ ಹಬ್ಬ ಎನ್ನುತ್ತೀವಿ. ಅಜ್ಞಾನದಿಂದ ಅಜ್ಞಾನವನ್ನು ಕಳೆದುಕೊಳ್ಳಲಾಗುವುದಿಲ್ಲ. ಜ್ಞಾನದೀಪ ಬೇಕು.
ತಮ್ಮ ಮನೆ ದೊಡ್ಡದೆನ್ನುವರು ಅದು ಹೊರ ಬಯಲಿಗಿಂತ ಚಿಕ್ಕದೆನ್ನುವುದನ್ನು ಮರೆತಿರುತ್ತಾನೆ.
ನಾವು ದೊಡ್ಡವರಾಗದೇ ನಮ್ಮದಾವುದೂ ದೊಡ್ಡದಾಗುವುದಿಲ್ಲ.
ಯಾವುದು ದೊಡ್ಡದು? ಯಾವುದು ತಾನು ಚಿಕ್ಕದು ಆಗಿದೆಯೋ, ಇತರು ಯಾವುದನ್ನು ಚಿಕ್ಕದು ಮಾಡಲಾರರೋ ಅದು ದೊಡ್ಡದು.
ಎಲ್ಲದರಲ್ಲಿ ನೀನು ಬೆರಿ. ನಿನ್ನಲ್ಲಿ ಎಲ್ಲವನ್ನು ಬೆರೆಸಿಕೊ.
ಜೀವವಿಲ್ಲದ್ದು ಬೆಳೆಯಲಾರದು. ಬೆಳೆಯುವುದೆಲ್ಲಾ ಜೀವದಿಂದ ಇರುವುದೇ. ಇಲ್ಲಿ ಇರುವುದೆಲ್ಲಾ ಬೆಳೆಯಲೆಂದೇ.
ಬೇರೆ ಎಂದು ಕಾಣುವುದರಲ್ಲಿ ಇರುವಿಕೆ ಒಂದೇ.
ದಾರಿ ಎಲ್ಲಿದೆ? ನಡೆದಾಟ ಇದ್ದಲ್ಲಿ ಅಲ್ಲವೇ? ಹಾದಿಗಿಂತ ಮೊದಲು ಹಾಯ್ದಾಟ; ಇದ್ದ ಕಾಲು ಕಿತ್ತು ಇನ್ನೆಲ್ಲಿಯೋ ಇಟ್ಟರೆ ಹಾದಿಯಾಗದು. ತಲುಪುವ ದಿಕ್ಕಿನತ್ತ ಕಾಲಿಡಬೇಕು. ಹೋಗುವುದು ಮೊದಲು ಗೊತ್ತಾಗಬೇಕು. ಗೊತ್ತಾಗದೆ ಹೋಗುವವ ಬರೀ ಕಾಲಿದ್ದವ. ತಲೆ ಇಲ್ಲದವನ ಕಾಲು 'ಕೆಳಗಿನ' ಕೆಲಸ ಮಾಡುತ್ತದೆ.
ಕೈಗೆತ್ತಿಕೊಂಡಿದ್ದನ್ನು, ಕಾಲಿಟ್ಟು ಸಾಗುವುದನ್ನು ದೊಡ್ಡದಾಗಿ ಕಾಣುತ್ತೇವೆ. ಹೊರಗೆ ಇರುವುದೆಲ್ಲಾ ಒಳಗಿದೆ. ತುಂಬ ದೊಡ್ಡವರಾದವರಿಗೆ ಒಳ ಹೊರಗು ಎಂಬ ಎರಡು ಇರುವುದಿಲ್ಲ.
ನಮ್ಮದು ನಮ್ಮೊಳಗಿದೆ. ಅದು ಎಂದೂ ಚಿಕ್ಕದಲ್ಲ. ತುಂಬ ದೊಡ್ಡದೇ ಸರಿ. ಅದನ್ನು ಚಿಕ್ಕದು ಮಾಡಿದ್ದು ಹೊರಗಿನದನ್ನು ಒಳಗಿರಿಸಿಕೊಂಡಿದ್ದಕ್ಕಲ್ಲ. ಅದು ಒಳಗಿರಲಿ ಎಂದು ಕಟ್ಟಿದ ಗೋಡೆಗಳು ಅದನ್ನು ಚಿಕ್ಕದು ಮಾಡಿವೆ.
ನಮ್ಮ ತಲೆಗೆ ಮೂಡಿದ ಕೋಡು ಇತರರನ್ನು ಇರಿಯಲು ಅಲ್ಲ. ಅರಿಯಲು. ಇರವಿಗೆ ಇಂಬು ಕಲ್ಪಿಸಲು. ಅರಿವನ್ನು ಆಹಾರ ಮಾಡಿಕೊಂಡು ತಾನು ಬೆಳೆಯಲು.
ಸಿದ್ಧತೆ ಇಲ್ಲದೆ ಏರಿದರೆ ಉಸಿರು ಸಾಲದು. ಮುಂದುವರಿದರೆ ಅದು ನಿಂತು ಬಿಡುತ್ತದೆ. ತಿಳುವಳಿಕೆ ಇಲ್ಲದ ಏರಿಕೆ ಮರಣಕ್ಕೆ ಕಾರಣ.
ನಡೆಯುವನಿಗೆ ತಡೆ ಒಂದು ನೋವು. ಮುನ್ನಡೆಯುವ ಬಯಕೆಯಿಂದ ಅದನ್ನು ತಡೆದುಕೊಳ್ಳುತ್ತಾನೆ. ನೋವಿನಿಂದ ಸೋರಿದ್ದನ್ನು ಮತ್ತೆ ತುಂಬಿಕೊಂಡು ಹುರಿಗೊಳ್ಳುತ್ತಾನೆ. ಮುಂದೆ ನಡೆಯುತ್ತಾನೆ. ನಿಲ್ಲುವುದಿಲ್ಲ. ಹಿಂದಂತೂ ಸರಿಯುವುದೇ ಇಲ್ಲ.
ಕಡಲ ಹನಿಗೆ ಕಡಲಿನ ಕಸುವಿದೆ. ಅದು ಕಡಲಿನಲ್ಲಿದೆ. ಹೊರಗಿದ್ದ ಒಂಟಿ ಹನಿಗೆ ಚಿಕ್ಕತನದ ಭಯವಿದೆ. ಭಯ ಬೆಳೆದರೆ ವಿನಾಶ. ವಿನಾಶ ನೀಗಬೇಕಾದರೆ ದೊಡ್ಡದರಲ್ಲಿ ಇರಬೇಕು. ಇಲ್ಲವೆ ದೊಡ್ಡದೇ ಆಗಿರಬೇಕು.
ಲೋಕದ ಅಶಕ್ತತೆಗೆ ತಾಯಿಯೇ ಚುಂಬಕ ಶಕ್ತಿ.
ನಮ್ಮನ್ನು ಹೆತ್ತವರ ಹಾಗೆ ಜಗತ್ತಿನ ತಂದೆತಾಯಿಗಳು ಎರಡು ವ್ಯಕ್ತಿಗಳಲ್ಲ. ತಂದೆ ಸ್ವತಂತ್ರವಾದ ಒಂದು ಪದಾರ್ಥವಲ್ಲ, ತಾಯಿಯೂ ಅಷ್ಟೇನೆ. ಒಬ್ಬರಿಲ್ಲದೆ ಇನ್ನೊಬ್ಬರಿಗೆ ಅರ್ಥವಿಲ್ಲ. ಪೂರ್ಣತೆಯಿಲ್ಲ. ಒಂದು ಪೂರ್ಣವಲ್ಲ. ಎರಡು ಅರ್ಥಗಳ ಕೂಡಿಕೆ. ಒಂದರಿಂದ ಏನೂ ಆಗುವುದಿಲ್ಲ. ಎರಡು ಸುಮ್ಮನಿರುವುದಿಲ್ಲ.
ನಮಗೆ ಕತ್ತಲಾದಾಗ ದೊಡ್ಡವರ ಮಾತು ಬೆಳಕಾಗುತ್ತದೆ. ಬೆಳಕು ತಂದ ಮಾತು ಕೊಳೆ ಕಳೆದುಕೊಂಡಿರುತ್ತದೆ.
ಮನಸ್ಸಿಗೆ ಬೆಳಕಿಗಿಂತ ಹೆಚ್ಚು ವೇಗವಿರುವುದನ್ನು ಮನಸ್ಸಿನ ಆಚೆ ಹೋದವರು ಹೇಳುತ್ತಾರೆ. ಅರಿತಿದ್ದಾರೆ.
ತಾಯಿ ತನ್ನನ್ನು ಹೊರಗೆ ನೋಡಬೇಕೆಂಬುದರ ಫಲವೇ ಮಗು. ಮಗುವನ್ನುಳಿದು ತಾಯಿ ಒಂದು ಚಣ ಇರಲಾರಳು. ಇದು ಒಂದು ಚಕ್ರನೇಮಿ ಕ್ರಮ.
ಅರಳಬೇಕು; ಮರುಳು ಸಾಕು. ಇದು ಬದುಕಿನ ತುಡಿತ. ದೊಡ್ಡದನ್ನು ಬದುಕು. ಸಣ್ಣದನ್ನು ಎತ್ತಿ ಕರೆದುಕೋ. ಚಿಕ್ಕದು ಯಾರಲ್ಲಿದ್ದರೂ ಅದನ್ನು ತೊಡೆ.
ಆಡಿದ್ದನ್ನು ನಾವು ಏಕೆ ಮಾಡುವುದಿಲ್ಲ? ಒಪ್ಪಿದ್ದನ್ನು ನಡೆಯುವುದಿಲ್ಲ? ಯಾಕೆ? ಕಾರಣ ಅತ್ಯಂತ ಸ್ಪಷ್ಟವಿದೆ. ನಮ್ಮಲ್ಲಿ ಅನೇಕ ನಿಟ್ಟುಗಳಿವೆ, ಮೈಗಳಿವೆ, ವಿಭಾಗಗಳಿವೆ. ಅವುಗಳಿಗೆ ಅದರದೇ ಆದ ಸ್ವತಂತ್ರ ವ್ಯವಸ್ಥೆ ಇದೆ. ಆದರೆ ಅದರ ಹೊಣೆ ನಮ್ಮ ಕೇಂದ್ರಕ್ಕಿಲ್ಲ.
ನಮ್ಮನ್ನು ನಮ್ಮಷ್ಟು ಯಾರೂ ತಿಳಿದಿಲ್ಲ. ತಿಳಿಯುವುದೂ ಇಲ್ಲ. ಈ ಮಾತು ಅರ್ಧೆ ಸತ್ಯ. ನಮ್ಮಲ್ಲಿ ನಾವು ತಿಳಿಯದೆ ಇದ್ದದ್ದೂ ಸಾಕಷ್ಟಿದೆ. ನಮ್ಮಲ್ಲಿಯದು ಹಲವು ಸಲ ತಪ್ಪು ತಿಳಿದಿದೆ.
ಮನಸ್ಸಿನ ಪ್ರತಿಯೊಂದು ಭಾಗವನ್ನು ತೊಡಗಿಸುವುದಕ್ಕೊಂದು ಅಳತೆ, ತೂಕ ಇದೆ. ಹೀಗೆ ಹೇಳಿದರೆ ಅಚ್ಚರಿಯಾಗುತ್ತದೆ. ನಮ್ಮನ್ನು ನಾವು ಒಮ್ಮೆಯೂ ತೂಗಿಲ್ಲ. ಅಳೆದಿಲ್ಲ.
ನಾವೆಷ್ಟು ದೊಡ್ಡವರು? ನಮ್ಮೊಳಗಿರುವುದು ಎಷ್ಟು ದೊಡ್ಡದಿದೆ? ತಂತ್ರ ಸ್ವಾತಂತ್ರವನ್ನು ಬಯಸುತ್ತದೆ. ನಿರ್ಭಯತೆಯನ್ನು ಪ್ರತಿಪಾದಿಸುತ್ತದೆ. ಸ್ವಾತಂತ್ರ ಇನ್ನೊಬ್ಬರದನ್ನು ಕಸಿಯುವುದಲ್ಲ. ನಿರ್ಭಯ ಇನ್ನೊಬ್ಬರನ್ನು ಹೆದರಿಸಲಿಕ್ಕಲ್ಲ.
ನೀರು ಮಧುರ ನಿಜ. ಎಲ್ಲ ಔಷಧಿಗಳು ಅದರಲ್ಲಿರೋದು ನಿಜ. ಆದರೆ ನೀರನ್ನು ನಾವು ಮಲಿನ ಮಾಡಿದ್ದೀವಿ. ನಮ್ಮ ಅಜ್ಞಾನ, ಆಲಸ್ಯ, ಆಸೆಬುರುಕತನ ಅದನ್ನು ಮಲಿನಗೊಳಿಸಿದೆ. ನಾವು ಅಮಲಿನದಿಂದಿದ್ದರೆ, ಶುದ್ಧ ಮಾಡಿದರೆ, ವ್ಯವಸ್ಥೆ ಕಾಯ್ದುಕೊಂಡರೆ ಎಲ್ಲವೂ ಶುದ್ಧವೇ.
ಅನರ್ಹತೆ ಒಂದು ಅಪರಾಧ. ಅನರ್ಹತೆಯನ್ನು ಮುಚ್ಚಿ, ಅದನ್ನು ಅರ್ಹತೆ ಎಂದು ಮುದ್ರೆಯೊತ್ತಿ ನಡೆಯುವುದು ಮಹಾಪರಾಧ. ಅಪರಾಧಿಯನ್ನು ಕ್ಷಮಿಸಬಹುದು. ಆದರೆ ನಿರಪರಾಧಿಗಳಿಗೆ ತೊಂದರೆಯಾಗಬಾರದು.
ಬರೆದವರೆಲ್ಲಾ ಎತ್ತರಕ್ಕೇರಿದವರು ಇರಲಿಕ್ಕಿಲ್ಲ. ಎಲ್ಲ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತಿಕೊಳ್ಳುವುದೂ ಕುಸಿಯುವ ಕೆಲಸವೇ. ಪುಸ್ತಕ ಬದುಕಿದವನ ಬೆಳಕು. ಮುಂದಿನವರಿಗೆ ಆಸರೆ. ಕತ್ತಲೆಯಿಂದ ತೊಳಲುವವನಿಗೆ ಅದು ಬೇಕು.
ಇಲ್ಲಿ ಒಳ್ಳೆಯದು ಬೀಡು ಬಿಟ್ಟಂತೆ ಕೆಟ್ಟದ್ದೂ ಬೀಡು ಬಿಟ್ಟಿದೆ. ಪ್ರಾಮಾಣಿಕತೆ ಇದೆ. ವಂಚನೆಯೂ ಇದೆ. ನನಗೆ ಇದು ತಿಳಿದಿದೆ ಎಂದು ಹೇಳುವನಿಗೆ ಅದು ತಿಳಿದಿರಲಿಕ್ಕಿಲ್ಲ. ಹೇಳದೇ ಇರುವನಿಗೆ ತಿಳಿದಿರಬಹುದು. ಎಂದಿನಿಂದಲೂ ಇದರ ಬಗ್ಗೆ ದೊಡ್ಡವರು ತಮ್ಮ ಅನುಭವವನ್ನು ಹೇಳಿಯೇ ಇದ್ದಾರೆ. ಇದು ನಿಜ. ಯಾವ ಕಾಲಕ್ಕೂ ಅಷ್ಟೇ. ಅದು ಕಾಲದ ವಶವಲ್ಲ. ಕಾಲವೇ ಅದರ ಅಧೀನ.
ನೀನು ಚೆನ್ನಾಗಿ ತಿಳಿದಿದ್ದೀ ಎಂದಾದರೆ ಕೊಂಚವೇ ತಿಳಿದಿರುವೆ. ಏಕೆಂದರೆ ತಿಳಿದುಕೊಳ್ಳಬೇಕಾಗಿರುವುದು ನೀನು ತಿಳಿದಿರುವುದಕಿಂತ ದೊಡ್ಡದಿದೆ.
ಹಕ್ಕು ಅಪೇಕ್ಷಣೀಯವಾದರೆ, ಹೊಣೆ ಅನಿವಾರ್ಯ. ಬರೀ ಹಕ್ಕುದಾರನೆಂದವ ದಿಕ್ಕುಗೆಡುತ್ತಾನೆ. ಹೊಣೆಯೊಂದನ್ನೇ ಅರಿತವ ಪ್ರಾಣಿಗೆ ಸಮ. ಅಂತರಂಗ ಬಹಿರಂಗ ಶುದ್ಧ ಇಲ್ಲದವನು ಎಂದೂ ಬೆಳಕನ್ನು ಪಡೆಯಲಾರ. ಬೆಳಕಿಲ್ಲದೆ ಒಳಗಿನ ಕತ್ತಲೆ ಹೋಗದು.
ಪ್ರಾಮಾಣಿಕತೆ ಎಲ್ಲರಿಗೂ ಬೇಕಾಗಿದ್ದರೂ ಅದನ್ನು ಹಾಸಿ ಹೊದ್ದ ಯಾರೂ ಸುಖಿಗಳಾಗಿಲ್ಲ. ಸುಖವು ದುಃಖದ ವಿರೋಧಿ ಎಂಬ ತಿಳುವಳಿಕೆಯೇ ಇದಕ್ಕೆ ಮೂಲ ಕಾರಣ.
ದುಃಖವನ್ನು ತರದ ಸುಖವನ್ನು ದುರ್ಬಲರು ಎಂದಿಗೂ ಪಡೆಯಲಾರರು.
ನಮಗೆ ಎಲ್ಲವೂ ಸಿಗಬೇಕು, ದಕ್ಕಬೇಕು ಎಂಬ ಗರ್ವದ ಕುದಿ ಇದೆ. ಹಾಗೆಯೇ ನಾವು ಧರ್ಮವನ್ನು ತೆಕ್ಕೆ ಹಿಡಿದು ಹಿಂದೆ ಎಳೆಯುತ್ತಿದ್ದೀವಿ. ಸಿಕ್ಕಿದಾಗ ಕೈ ಚಿಕ್ಕವು ಎಂಬ ತಿಳಿವು ಬರದು. ಧರ್ಮ ಸಿಕ್ಕುವುದಿಲ್ಲ ಎಂದು ಮಾತ್ರ ತಿಳಿಯುತ್ತೇವೆ. ತನ್ನ ಚಿಕ್ಕತನ ತಿಳಿಯದೆ ಯಾರೂ ದೊಡ್ಡವರಾಗುವುದಿಲ್ಲ.
ಇಲ್ಲಿ ವಿವೇಕ ಬೇಕು. ಬಳಸುವ ಭರದಲ್ಲಿ ಹಳಸಿದ್ದನ್ನು ತಿನ್ನುತ್ತೇವೆ. ಹಳಸಿದ್ದು ಉಪಯುಕ್ತ ನಿಜ. ಆದರೆ ಎಸೆಯಲಿಕ್ಕೆ ಹೊರತು ಬಳಸಲಿಕ್ಕಲ್ಲ. ಬದುಕಿನಲ್ಲಿ ಎಸೆಯುವುದೂ ಎತ್ತಿಕೊಳ್ಳುವ ಒಂದು ನಿಷೇಧಾತ್ಮಕ ಅಗತ್ಯವೇ.
ಬದುಕು ಬೆಳೆಯುತ್ತಿದ್ದರೆ ಮಾತ್ರ ಬಳಸುವ ವಸ್ತು ಧರ್ಮವಾಗಿರುತ್ತದೆ. ಇಲ್ಲದಿದ್ದರೆ ಕಸ.
ಮನುಷ್ಯ ತನ್ನ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಇನ್ನಾವ ವಸ್ತು ತಲೆ ಕೆಡಿಸಿಕೊಂಡಿದೆ? ಇದೆ ಎಂದರೆ ಮುಗಿಯಲಿಲ್ಲ. ತಿಳಿಯುವುದು ಇಲ್ಲ ಎಂದರೆ ತುಡಿತ ತೀರುವುದಿಲ್ಲ. ಇರುವುದರ ಸುತ್ತಲೂ ಇರುವಿಕೆಯೊಳಗೇ ಒಂದು ರಹಸ್ಯವಿದೆ. ಈ ಬದುಕಿನ ರಹಸ್ಯ ಉಸಿರಾಗಿದೆ. ಹಸಿವೂ ಆಗಿದೆ.
ಬದುಕು ಬರಿದಾಗಿಲ್ಲ. ಇದು ರಹಸ್ಯವಾಗಿ ಉಳಿದಿಲ್ಲ. ಏನು ತುಂಬಿದೆ ಎಂಬುದೇ ರಹಸ್ಯ. ತಿಳಿದಿದೆ ಎಂಬ ಅನುಭವದಲ್ಲಿ ತಿಳಿದಿಲ್ಲ ಎನ್ನುವುದೇ ರಹಸ್ಯ. ರಹಸ್ಯ ಬೆಳೆದಾಗ ಬದುಕು ತನ್ನಿಂದ ತಾನೇ ದೂರಾಗುತ್ತದೆ. ರಹಸ್ಯ ಹೆಚ್ಚಾದರೆ ಅದು ಆಸಕ್ತಿಯ ಕೇಂದ್ರವಾಗುತ್ತದೆ. ರಹಸ್ಯದ ಒಂದು ಬಿಂದು ಅಜ್ಞಾನವಾದರೆ ಇನ್ನೊಂದು ತಿಳುವಳಿಕೆ.
ಮನುಷ್ಯ ನಡೆಯಬೇಕು. ನಡೆಯುವುದಕ್ಕೆ ದಾರಿ ಅಗತ್ಯ. ದಾರಿಗಿಂತ ಕಾಲು ಅಗತ್ಯ. ದಾರಿ ಇಲ್ಲದಿದ್ದರೂ ನಡೆ ನಿಲ್ಲುವುದಿಲ್ಲ. ಎಲ್ಲ ನಡೆಗೂ ಗುರಿಯೇ ಅಂತ್ಯವಲ್ಲ. ನಡೆಯುವವರಿಗಾಗಿ ದಾರಿ ನಿರ್ಮಿಸುವುದೂ ಒಂದು ಬಗೆಯ ನಡೆಯೇ. ಗುರಿ ಮುಟ್ಟಿದವ ಏನು ಪಡೆಯುತ್ತಾನೋ ದಾರಿ ನಿರ್ಮಿಸಿದವನೂ ಅದನ್ನೇ ಹೊಂದುತ್ತಾನೆ. ರಹಸ್ಯ ಗುರಿಯೂ ಅಲ್ಲ, ದಾರಿಯೂ ಅಲ್ಲ. ಅದು ನಡೆ.
ಮನುಷ್ಯ ಬೆಳಕನ್ನು ಆಶ್ಚರ್ಯಕರವಾಗಿ ಕಾಣುತ್ತಾನೆ. ಇದರ ಕಾರಣ ಅವನ ಮನದ ಮೂಲೆಯಲ್ಲಿ ತುಂಬಿದ ಕತ್ತಲು.
ಬದುಕಿನಲ್ಲಿ ಜ್ಞಾನ ಕಾಲೂರಿ, ನೆಲೆಯೂರಿ ನಿಲ್ಲಬೇಕಾದರೆ ಪುಸ್ತಕದ ಇರುಬೆಯಿಂದ ತಲೆ ಹೊರಗೆ ತರಬೇಕು. ವಿಶ್ವದ ಯಾವ ಭಾಷೆಯಲ್ಲೂ ಬದುಕಿನಷ್ಟು ವಿಸ್ತಾರವಾದ ಪುಸ್ತಕ ಇನ್ನೂ ಅಚ್ಚಾಗಿಲ್ಲ.
ಉಪದೇಶವನ್ನು ತಲೆಯಲ್ಲಿ ಹೊತ್ತು ಕುಸಿಯದಿರಬೇಕು. ಮುಳ್ಳುದಾರಿಯಲ್ಲಿ ಅದನ್ನು ಪಾದರಕ್ಷೆ ಮಾಡಿಕೊಂಡು ಮುಂದುವರೆಯಬೇಕು.
ತಲೆಯಲ್ಲಿ ಹೊತ್ತ ಮಾತು ಕಾಲಿಗೆ ಬಂದು ಬದುಕಿನ ದಾರಿ ಸಮೆಯದಿದ್ದರೆ ಏನು ಪ್ರಯೋಜನ?
ಅಂಗವನ್ನು ಮರೆತಾಗ ಲಿಂಗ ಉಳಿಯುತ್ತದೆ.
ಕೊಡುವುದನ್ನು ಉಳಿಸಿಕೊಂಡವನು ಪಡೆಯುವುದೂ ಅಲ್ಪವೇ. ಎಲ್ಲವನ್ನು ಕೊಟ್ಟ ಬಳಿಕ ಪಡೆಯುವುದೇ ಉಳಿಯುವುದಿಲ್ಲ.
ಒಬ್ಬನನ್ನು, ಎಲ್ಲರನ್ನು ಪ್ರೀತಿಸಲು ನಿಮಗೆ ಬರದಿದ್ದರೆ ನಿಮ್ಮನ್ನಾದರೂ ಪ್ರೀತಿಸಿ. ಅದೂ ಬರದಿದ್ದರೆ ನಿಮಗೆ ಬದುಕುವ ಅರ್ಹತೆ ಇಲ್ಲ. ಯಾವ ದಾರಿಯಿಂದಾದರೂ ಯಾರನ್ನಾದರೂ ಪ್ರೀತಿಸಿ, ಸಾಧ್ಯವಿದ್ದರೆ ಎಲ್ಲರನ್ನೂ ಪ್ರೀತಿಸಿ. ತನಗೆ ತಿಳಿದ ಹಾಗೆ ಯಾರಿಗೆ ಇರಲು ಬರುವುದಿಲ್ಲವೋ ಇತರರಿಗೆ ತಿಳಿಯುವ ಹಾಗೆ ಅವನಿಗೆ ಇರಲೂ ಬರುವುದಿಲ್ಲ.
ವಿಚಾರವನ್ನು ಹೆರದೆ ಇರುವ ಒಪ್ಪಿಗೆ ನಂಬಿಕೆಯಾಗುವುದಿಲ್ಲ.
ಕಣ್ಣನ್ನೇ ತೆರೆಯದಿದ್ದವನಿಗೆ ಬೆಳಕಿದ್ದರೇನು, ಇರದಿದ್ದರೇನು? ತೆರೆದಾಗಲೇ ಹೊರಗಿನದು ಒಳಗೆ ಸೇರುತ್ತದೆ. ಹೊರಗೆ ಹೋಗಬೇಕಾದರೆ ಒಳಗಿನದೂ ಹೋಗುತ್ತದೆ. ನೀನು ಇನ್ನೊಂದರೊಳಗೆ ಪ್ರವೇಶ ಮಾಡದಿದ್ದರೆ ಇನ್ನೊಂದು ನಿನ್ನೊಳಗೆ ಸೇರುವುದಿಲ್ಲ. ಬದುಕು ರಿಕ್ತವಾಗಬಾರದು, ತುಂಬಿರಬೇಕು.
ಪುಸ್ತಕದಲ್ಲಿ ಬದುಕನ್ನು ತುರುಕುವವನು ಪಾಪ ಮಾಡುತ್ತಾನೆ. ತನ್ನ ಶಿಷ್ಯರನ್ನು ತನಗಿಂತ ದೊಡ್ಡವರನ್ನಾಗಿ ಮಾಡದೇ ಇರುವವನು ಗುರುವಾಗಲಾರ. ಸೃಷ್ಟಿಯಾದ ತಾನು ಸೃಷ್ಟಿಕರ್ತನೂ ಹೌದು.
ಶರಣರು ಪುಸ್ತಕ ನೀಡಲಿಲ್ಲ. ತಾವೇ ಪುಸ್ತಕಗಳಾದರು. ದಾಸರೂ ಆದರು. ಇವರಿಗೆ ಪುಸ್ತಕದ ಆಲಂಬನವಿಲ್ಲದ ನಿರಾಲಂಬತೆ ಇರಲಿಲ್ಲ. ನಾಲಗೆ ಹಾಗು ಹೃದಯಕ್ಕೆ ಭೌಗೋಲಿಕ ಅಂತರ ಇದ್ದದ್ದು ಸ್ಪಷ್ಟ.
ಕಣ್ಣು ಅಗಲಿಸಿರಿ. ಇಂದ್ರಿಯಗಳನ್ನು ವಿಸ್ತರಿಸಿರಿ. ಒಂದರಲ್ಲಿ ಎಲ್ಲವೂ ಇದೆ. ಎಲ್ಲದರಲ್ಲಿ ಒಂದೇ ಇದೆ. ಎಡ ಬಲ ನೋಡದಿರಿ. ಬಲದ ಬೇರು ಬದುಕಿನಲ್ಲಿ ಬಲವಾಗಿ ಇಳಿಯಲಿ. ಚಕಿತರಾಗಬೇಡಿ. ನೀವು ಬೆಳಕಾದರೆ ನಿಮ್ಮ ನೆರೆಗಿರುವರೂ ಬೆಳಗಿಯಾರು.
ತಿಳಿದರೆ ಸಾಕು. ಹೇಳುವ ತವಕ ಬೇಡ. ಹೇಳುವುದರಿಂದ ನಾಲಗೆ ಉದ್ದವಾಗುತ್ತದೆ. ಎದೆ ಸಂಕುಚಿತವಾಗುತ್ತದೆ. ಅರಿತವನ ನಾಲಗೆ ತುಟಿಯೊಳಗೆ ಇರುತ್ತದೆ. ಅರಿವು ಹರವಾದರೂ ಎದೆಯ ಗವಿಯೊಳಗೆ ಅವಿತಿರುತ್ತದೆ. ಜ್ಞಾನ ಉಂಡು ಸುಖಿಸುವ ಪದಾರ್ಥ. ಗಾಜಿನ ಪೆಟ್ಟಿಗೆಯ ಪ್ರದರ್ಶನ ಅದಕ್ಕೆ ಬೇಡ.
ದೊಡ್ಡದನ್ನು ನಾವು ಹುಡುಕಬೇಕು. ಅದೂ ನಮ್ಮನ್ನು ಅರಸಿ ಬರುತ್ತಿದೆ. ತಲೆ ಬಾಗಲು ಬರದವನಿಗೆ ಅದನ್ನು ಎತ್ತಲು ಬರುವುದಿಲ್ಲ.
ಸಾಮಾನ್ಯವಾಗಿ ಎಲ್ಲರ ಮನಸ್ಸೂ ತೂತು ಬಿದ್ದ ಪಾತ್ರೆಯೇ. ತುಂಬಿದ್ದು ಕಣ್ಣು ತೆಗೆಯುವುದರೊಳಗೆ ಸೋರಿ ಹೋಗುವುದೇ ಹೆಚ್ಚು.
ತನ್ನ ಮನಸ್ಸು ಗಟ್ಟಿಗೊಳ್ಳಬೇಕೆಂಬ ಬಯಕೆ ಮೊದಲು ನೆಲೆಯೂರಬೇಕು. ಮನಸ್ಸು ಗಟ್ಟಿಗೊಂಡರೆ ಮುಂದಿನ ದಾರಿ ಸುಗಮ. ಹೀಗೆ ಹೇಳಿದವರು ಸಾವಿರ ಜನ. ಆದರೆ ಇದನ್ನು ಸಾಧಿಸಿದವರು ಕೆಲವರು. ದೊಡ್ಡವರೆಂದು ಹಲವರು ಕಾಣುತ್ತಾರೆ. ಕೆಲವೇ ಜನ ಮಾತ್ರ ದೊಡ್ಡವರಿರುತ್ತಾರೆ. ದೊಡ್ಡವರು ಹುಟ್ಟುವುದಿಲ್ಲ. ಬೆಳೆಯುತ್ತಾರೆ. ಅವರು ಬೆಳೆಯಬೇಕಾದವರನ್ನು ಹುಡುಕುತ್ತಾರೆ.
ಹೃದಯದಲ್ಲಿ ದೇವನನ್ನು ನಂಬಿದ ಹಾಗೆಯೇ ಗುರುವನ್ನು ಪ್ರೀತಿಸಿದರೆ ಮಾತೆಅ ಜ್ಞಾನದ ಬೆಳಕು ಬೆಳಗುತ್ತದೆ.
ಚಿಕ್ಕ ಮನಸ್ಸು, ಕ್ಷುದ್ರ ಚೇತನ ಗುರುವನ್ನು ಶಂಕಿಸುತ್ತದೆ. ಅದರ ಪರಿಣಾಮ ಸಂಶಯಾತ್ಮಾ ವಿನಶ್ಯತಿ. ಈ ಲೋಕದಲ್ಲಿ ಎಲ್ಲಕ್ಕಿಂತ ದೊಡ್ಡದಿರುವ ವಸ್ತುವಿಗೆ ಗುರು ಎಂದು ಹೆಸರು.
ಗುರುವಿಲ್ಲದೆ ಅಜ್ಞಾನ ಕಳೆಯದು. ಜ್ಞಾನದ ಬಾಗಿಲು ತೆರೆಯದು. ಗುರುವಿನ ತಲೆ ಬೆಳ್ಳಗಾಗಬೇಕೆಂಬ ನಿಯಮವಿಲ್ಲ.
ಅವಸರ ಎನ್ನುವುದು ಅಜ್ಞಾನದ ಕೆಲಸ. ಜ್ಞಾನಕ್ಕೆ ವೇಗವೇ ನಡತೆ. ಗುರುವು ಜ್ಞಾನಿ ವೇಗವಂತ.
ಗುರುವಿನಿಂದ ಪಶ್ಚಾತ್ತಾಪವಿಲ್ಲ. ತಪ್ಪು ಮಾಡುವವ, ತಪ್ಪಿಗೆಳೆಯುವವ ಗುರುವೇ ಅಲ್ಲ. ಎತ್ತರವಾಗಿ ಬೆಳೆದುದೇ ಬೆಟ್ಟ.
ಬೆಳೆಯುವವ ತಲೆ ಎತ್ತಿ ಗುರುವಿನ ಕಾಲು ಮುಟ್ಟುತ್ತಾನೆ. ದೊಡ್ಡವರು ಎಲ್ಲರೊಡನೆ ಉಣ್ಣುತ್ತಾರೆ. ಹಸಿದವರನ್ನು ಮುಂದೆ ಕರೆದು ತಾನು ಉಂಡದ್ದನ್ನು ಹಂಚುತ್ತಾರೆ. ಅನ್ನ, ಅದು ಬೆಳೆಯುವವನಿಗೆ ಇದೆ. ಕೊಬ್ಬಿದವನಿಗಲ್ಲ. ಬೆಳೆಯುವವ ಅನ್ನ ಪಡೆಯಿತ್ತಾನೆ. ಕೊಬ್ಬುವವ ಅದನ್ನು ಕದಿಯಿತ್ತಾನೆ. ಅನ್ನ ಜ್ಞಾನವೂ ಹೌದು.
ಬೆಟ್ಟ ಏರುವವ ಅದು ತನ್ನದೆನ್ನಿಸಿ ಹಿಗ್ಗುತ್ತಾನೆ. ತನ್ನನ್ನು ಹತ್ತಿ ಬರುವವನನ್ನೂ ಬೆಟ್ಟ ಕರೆದು ಬರಿಸುತ್ತದೆ. ಮತ್ತೊಬ್ಬ ಹತ್ತಿ ಬಂದರೆ ಬೆಟ್ಟಕ್ಕೂ ಹಿಗ್ಗು.
ದಾರಿ ತಪ್ಪಿದವ, ತಪ್ಪಿಸುವವ ಗುರುವಲ್ಲ. ತಪ್ಪಿನಿಂದ, ಜಾಡ್ಯದಿಂದ ನಾವು ಮುಂದೆ ನಡೆಯದೆ ಇರಬಹುದು. ನಮ್ಮನ್ನು ನಡೆಸುವ ಹೊಣೆ ಮುಂದೆ ನಡೆದ ಗುರುವಿನದು. ಹಿಂದುಳಿದವರನ್ನು, ಅಶಕ್ತರನ್ನು, ಬಲಹೀನರನ್ನು ನಡೆಸುವಾತನೇ ನಿಜವಾದ ಗುರು.
ಮೃತ್ಯುವನ್ನು ದಾಟಿದ, ಅಶಕ್ತತೆಯನ್ನು ಅರಿಯದ ತನ್ನನ್ನು ಅರಸುಕೊಂಡು ಬಂದವನಿಗೆ ತನ್ನಲ್ಲಿರುವುದೆಲ್ಲವನ್ನು ಕೊಡುವವ, ಎಂದೂ ಚಿಕ್ಕವನಾಗಿರದವನೇ ಗುರುವಾಗಿರುತ್ತಾನೆ. ದೊಡ್ಡದು ಎಂಬ ಕಲ್ಪನೆ ನಮ್ಮಲ್ಲಿ ಎಷ್ಟಿರುತ್ತದೆಯೋ ಅಷ್ಟರ ಮಟ್ಟಿಗೆ ಗುರುದರ್ಶನ.
ಗುರುವು ನಮಗೆ ದೊರೆತಿರಲಿಕ್ಕಿಲ್ಲ. ಆದರೆ ನಮ್ಮನ್ನು ಗಮನಿಸುತ್ತಲೇ ಇರುತ್ತಾನೆ. ನಮ್ಮ ಅನರ್ಹತೆ ಅವನ ದೂರಕ್ಕೆ ದೊಡ್ಡ ಕಾರಣ. ತಲೆ ಇದ್ದವರು ಗುರುವಿನ ಬಗ್ಗೆ ಗುಡ್ಡದೆತ್ತರ ಬರೆದಿದ್ದಾರೆ. ಕಂಡದ್ದು ಕಣ್ಣೊಳಗೆ. ಉಂಡದ್ದು ಮೈಯೊಳಗೆ ಹರಿಯುವುದು.
ಒಂದು ವಸ್ತು ಯಾವಾಗ ದೊಡ್ಡದಾಗುತ್ತದೆ? ಇತರರೊಡನೆ ಬೆರೆತಾಗ. ತನ್ನಂತೆ ಇರುವ ಇತರರನ್ನು ಮಾಡುವ ಶಕ್ತಿ ಇದ್ದ ವಸ್ತುವನ್ನು ನಾವು ಈ ಲೋಕದಲ್ಲಿ ದೊಡ್ಡದು ಎನ್ನುತ್ತೇವೆ. ಗುರುವು ಇಂಥವನು.
ಸಿಕ್ಕವರನ್ನು ತಲೆಯ ಮೇಲೆ ಹೇರಿಕೊಳ್ಳಲು ತನ್ನ ತಲೆ ಚಿಕ್ಕದು ಎಂದು ತಿಳಿದಿರಬೇಕು. ದೊಡ್ಡವರ ಕಾಲಿಗೆ ತಲೆ ಹಚ್ಚುವ ಮೃದುತನ ತನಗಿರಬೇಕು. ನಂಬಿಕೆ ಬೇಕು. ತನ್ನ ನಂಬಿಕೆ ತನ್ನನ್ನು ತಿಳಿ ಮಾಡುತ್ತಿರುವುದನ್ನು ತಿಳಿಯಬೇಕು.
ಎಲ್ಲವೂ ಎಲ್ಲರಿಗೆ ಬೇಡ ಎನ್ನುವುದು ಎಷ್ಟು ಕ್ರೂರವೋ, ತಾನು ಎಲ್ಲರಿಗೆ ಅಲ್ಲ, ಎಲ್ಲರಿಗೆ ಇಲ್ಲ ಎನ್ನುವನಿಗೆ ಎಲ್ಲ ದೊರೆಯುವುದೂ ಅಷ್ಟೇ ಅನ್ಯಾಯ , ಅಧರ್ಮ.
ನೋಡಿದರೆ ಕಂಡಂತಲ್ಲ. ನಡೆದರೂ ದಾರಿ ಸಾಗುವುದಿಲ್ಲ. ಕಣ್ಣು ಮುಚ್ಚಿದರೂ ತೋರುತ್ತದೆ. ನಿಂತರೂ ಸನಿಹವಾಗುತ್ತದೆ.
ನಡೆಯುವನಿಗೆ ಬಲವಿದ್ದಷ್ಟು ದಾರಿ. ಬೆಳೆವವನಿಗೆ ನೆಲವೆಲ್ಲಾ ಹೊಲವಿದ್ದಂತೆ.
ನಿಮ್ಮನ್ನು ನೀವು ಅಳೆದುಕೊಳ್ಳುವಾಗ ಬಹಳಷ್ಟು ಕಳೆದುಕೊಳ್ಳಬೇಕು. ಹೆಚ್ಚು ಕೆಳೆದುಕೊಂಡಾಗಲೇ ಮತ್ತಷ್ಟು ಕೂಡುತ್ತದೆ.
ದೃಷ್ಟಿ ಇರುವಷ್ಟು ಸೃಷ್ಟಿ.
ತನಗಿಂತ ದೊಡ್ಡದಿದ್ದುದಕ್ಕೆ ತನ್ನನ್ನು ಒಪ್ಪಿಸುವುದೇ ಇನ್ನೂ ದೊಡ್ಡದಾಗುವ ಒಳ್ಳೆಯ ದಾರಿ.
ನಿಮ್ಮ ಮನಸ್ಸು ವ್ಯಗ್ರವಾಗಿದ್ದರೆ ಅದು ಏಕಾಗ್ರವಾಗುವುದಿಲ್ಲ. ಮನಸ್ಸಿನ ಮೇಲೆ ಅಪ್ರಿಯವಾಗುವ ಘಟನೆಗಳನ್ನು ಹೇರಿ ಅದನ್ನು ದಣಿಸಿದರೆ, ಅದು ಏಕಾಗ್ರವಾಗಲು ಸಾಧ್ಯವೇ ಇಲ್ಲ.
ಕುರುಡುತನ, ಅಜ್ಞಾನಗಳು ಮನಸ್ಸನ್ನು ಬೆಳೆಸುವುದಿಲ್ಲ. ಬೆಳೆಯಲಾರದೆ ಮನಸ್ಸಿಗೆ ಏಕಾಗ್ರತೆ ಬರುವುದಿಲ್ಲ. ಆದ್ದರಿಂದ ಏನೇ ಮಾಡಿ ಮನಸ್ಸನ್ನು ಬೆಳೆಸಿರಿ. ದೊಡ್ಡದು ಮಾಡಿ. ಮನಸ್ಸು ಬೆಳೆಯಬೇಕಾದರೆ ಇನ್ನೊಬ್ಬರನ್ನು ಇನ್ನೊಂದನ್ನು ಪ್ರೀತಿಸಿರಿ. ಸಾಯುವರನ್ನು ಪ್ರೀತಿಸಿ ನೀವು ನಿತ್ಯ ಸಾವು ತಂದುಕೊಳ್ಳುತ್ತಿರಿ. ನೀವು ಪ್ರೀತಿಸುವರು ಸಾಯುವುದಿಲ್ಲ ಎಂಬ ಖಚಿತತೆ ನಿಮಗಿಲ್ಲದಿದ್ದರೆ ನೀವು ಮಾಡುವ ಪ್ರೀತಿಯೇ ಮರಣಾಧೀನವಾಗುತ್ತದೆ.
ಬೇಡಿದರೆ ಬೇಡಿಕೆಯ ಅಭ್ಯಾಸವಾಗುತ್ತದೆ. ಮನಸ್ಸಿನ ಹಲವು ಬಾಗಿಲು ತೆರೆದಿಡಿ. ಬರುವುದನ್ನು ಗಮನಿಸಿ. ಹೋಗುವುದಕ್ಕೆ ಲೆಕ್ಕವಿರಲಿ. ಕುದಿ ಎಸರು ಬರಬೇಕು, ಪರಿಪಾಕಕ್ಕೆ ಸಿದ್ಧರಾದರೆ ಸಾಕು.
ನಮ್ಮ ಮುಂದಿರುವ ದೊಡ್ಡ ಸಮಸ್ಯೆಯೆಂದರೆ ಮನಸ್ಸಿಗೆ ಏಕಾಗ್ರತೆ ಇಲ್ಲ ಎನ್ನುವುದು. 'ಏಕಾಗ್ರತೆ' ನಿಮಗೆ ಬೇಕಾಗಿದ್ದೇ ಬೇರೆ, ಸಿವುವುದೇ ಬೇರೆ.
ಆಡಂಬರ ಎನ್ನುವುದು ಬರಿ ಸಾಮಾಜಿಕ ಪ್ರದರ್ಶನದ ಯೋಗ್ಯತೆಯ ಮಾತು ಹೊರತು ಇನ್ನೇನೂ ಹೆಚ್ಚಿನ ಮಹತ್ವ, ಸತ್ವಗಳನ್ನು ಹೊಂದಿಲ್ಲ. ಅನೇಕ ಸಲ ನೀವು ಬಹಿರಂಗವಾಗಿ ಅಸಭ್ಯವಾಗಿ ನಡೆದುಕೊಳ್ಳುವುದಕ್ಕಿಂತ ಹೆಚ್ಚು ಅಸಭ್ಯತೆಯನ್ನು ಅಂತರಂಗದಲ್ಲಿ ಏಕಾಂತದಲ್ಲಿಯೇ ತೋರಿಸುತ್ತೀರಿ.
ನಿಮಗೆ ಇಂದ್ರಿಯಗಳಿವೆ. ಅವುಗಳಿಗೆ ಅವುಗಳದೇ ಆದ ಪ್ರಧಾನ ಉಂಟು. ನೀವು ಅವುಗಳ ಮೇಲೆ ಒತ್ತಾಯದಿಂದ ಸವಾರಿ ಮಾಡಿದರೆ ಅವು ಕೊಸರಿಕೊಂಡು ತಮ್ಮದೇ ದಾರಿ ಹಿಡಿಯುತ್ತವೆ. ಯಾವುದನ್ನೂ ನೀವು ನಿಮ್ಮನ್ನು ಕೊಟ್ಟುಕೊಳ್ಳದೆ ಪಡೆದು ಕೊಳ್ಳಲಾರಿರಿ.
ಧ್ಯಾನ ಸುಗಮವಾಗಿ ನಡೆಯದೇ ಇರಲಿಕ್ಕೆ ದೊಡ್ಡ ಪ್ರತಿಬಂಧ ನಾವು ಧ್ಯಾನ ಮಾಡಲೆಂದೇ ಕೂಡುವುದಾಗಿದೆ. ಧ್ಯಾನವೆಂದರೆ ಏನಾದರೂ ಮಾಡುವುದಲ್ಲ. ಏನೂ ಮಾಡದೇ ಇರುವುದು. ಬಿಟ್ಟು ಬಿಡಲು ಅಭ್ಯಾಸ ಮಾಡಬೇಕು.
ಧ್ಯಾನ ಎಂದರೆ ಶಾಂತಿ ಎಂದಾದರೆ, ಅದರಲ್ಲಿ ಮಾಡಬೇಕಾದದ್ದು ಏನೂ ಇರುವುದಿಲ್ಲ. ಏನಾದರೂ ಇದ್ದರೆ ಮಾಡುವುದನ್ನು ಬಿಟ್ಟುಕೊಡುವುದಿದೆ.
ಮೂಲಭೂತವಾಗಿ ನೀವು ಮರೆತದ್ದು ಧ್ಯಾನದ ಅಗತ್ಯತೆಯನ್ನು. ಧ್ಯಾನ ಹೊರಗಿನಿಂದ ಹೇರಿದ್ದಾಗಿದೆ. ನಿಮ್ಮ ಸ್ವಂತದ ಅಗತ್ಯವಾಗಿಲ್ಲ. ಅದಾಗದ ಹೊರತು ಧ್ಯಾನ ಧ್ಯಾನವಲ್ಲ, ಅದು ನಿಮಗೆ ನೀವು ನೀಡುವ ಶಿಕ್ಷೆ. ತನ್ನನ್ನು ತಾನು ಬರಿದು ಮಾಡಿಕೊಳ್ಲಲು ಬಾರದವನಿಗೆ ಧ್ಯಾನ ಬರುವುದೇ ಇಲ್ಲ.
ಸಾಧಕ ಯಾವಾಗಲೂ ತೇಲಬಾರದು, ಸೆಳೆತಕ್ಕೆ ಸಿಕ್ಕಬೇಕು. ಧ್ಯಾನದಲ್ಲಿ ತೇಲುವಿಕೆ ಅಷ್ಟೇ ಇದ್ದರೆ ಅದು ಅಸುಖ. ಧ್ಯಾನ ಸೆಳೆತವಾಗಬೇಕು. ನಾನು ದೊಡ್ಡದರಿಂದ ಸೆಳೆಯುವೆನು. ಇಲ್ಲವೆ ದೊಡ್ಡದರ ಗಮನ ಸೆಳೆಯುವ ಅಲ್ಪತೆಯುಳ್ಳವನು. ಇದು ನಿಮ್ಮ ಅನುಭವದಲ್ಲಿ ಬಂದಿದೆಯೋ, ಧ್ಯಾನಕ್ಕಾಗಿ ನಿಮಗೆ ಅರ್ಹತೆ ಇದೆ ಎಂಬುದು ಅರಿಯಿರಿ.
ಹೀಗೆ ಹತ್ತುಹಲವು ಸಾಲುಗಳನ್ನು ತಮ್ಮ ಕೃತಿಯಲ್ಲಿ ಪ್ರಸ್ತಾವಿಸಿ ಓದುಗನನ್ನು ತಮ್ಮ ಕೃತಿಯ ಜೊತೆಗೆ ಮನೋವಿಕಸನವನ್ನೂ ಮಾಡಿರುವ ಸತ್ಯಕಾಮರು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ ಎಂದರೆ ಅತಿಶಯೋಕ್ತಿಯಾಗಲಾರದೇನೋ. ಇಲ್ಲಿ ಹಾಕಿರುವುದು ಕೇವಲ ಸ್ಯಾಂಪಲ್, ಇಡೀ ಪುಸ್ತಕವನ್ನೊಮ್ಮೆ ಓದಿ ನೋಡಿ. ಜೀವನವನ್ನು ನೋಡುವ ನಿಮ್ಮ ದೃಷ್ಟಿಕೋನವೇ ಬದಲಾದೀತು.
ಈ ಪುಸ್ತಕಕ್ಕೆ ಸಂಬಂಧಿಸಿದಂತೆ ನನ್ನ ಹಿಂದಿನ ಇನ್ನೆರೆಡು ಪೋಸ್ಟ್ಗಳ ಲಿಂಕ್ ಕೆಳಗೆ
👇 ಇದೆ. ಆಸಕ್ತರು ಓದಬಹುದು.
ಮುಗಿಯಿತು.
ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ