Tuesday, August 29, 2017

"ತೆಂಕನಿಡಿಯೂರಿನ ಕುಳುವಾರಿಗಳು" 



ಒಂದೂರಿನ ಒಂದಿಷ್ಟು ಜನರ ಕುರಿತು..


ಅತ್ಯಂತ ಸಮಗ್ರ ದೃಷ್ಟಿ ಚಿತ್ತಕೋನ ಇರುವರು ಮಾತ್ರ ತನ್ನ ಸುತ್ತಮುತ್ತಲ ಪರಿಸರದ ಬಗ್ಗೆ ಆದ್ಯಂತವಾಗಿ ಬರೆಯಲು ಸಾಧ್ಯವಾದೀತು, ಇಲ್ಲದೆ ಹೋದರೆ ಓದುವವರಿಗದು ಅಪಥ್ಯವಾಗುವುದು ಮಾತ್ರವಲ್ಲದೇ ಲೇಖಕನ ದೃಷ್ಟಿಕೋನದ ಬಗ್ಗೆ ಅನುಮಾನ ಮತ್ತು ಅಪಸ್ವರ ಬರುವುದು ನಿಸ್ಸಂಶಯ. ಏನು ಮತ್ತು ಎಷ್ಟು ಅಂತ ನಮ್ಮ ಸುತ್ತಮುತ್ತಲ ಪರಿಸರ, ಅದರ ಚಿತ್ರಣ, ಜನರ ಜೀವನ, ಅವರ ದಿನಚರಿ ಬಗ್ಗೆ ಬರೆಯಲು ಸಾಧ್ಯ ಹೇಳಿ? ಇದು ನಾವು ತಿಳಿದಂತೆ ಅಷ್ಟು ಸುಲಭ ಸಾಧ್ಯವಲ್ಲ. ಈಗಾಗಲೇ ಈ ವಿಷಯ...ವನ್ನು ಕನ್ನಡದ ಹೆಚ್ಚು ಕಡಿಮೆ ಎಲ್ಲಾ ಸಾಹಿತಿಯೂ, ಲೇಖಕರು ಆದಷ್ಟು ತಮ್ಮ ಕೃತಿಗಳಲ್ಲಿ ಬರೆದದ್ದಾಗಿದೆ. ಒಂದು ಕಥೆಯೋ, ಕಾದಂಬರಿಯೋ, ನೀಳ್ಗವಿತೆಯೋ ಅಥವಾ ಹಲವು ಪ್ರಾಕಾರದ ಸಾಹಿತ್ಯ ರೂಪಕಗಳಲ್ಲಿ ಬರೆಯುವುದು ಕೇವಲ ತನ್ನ ಶಕ್ತಿಸಾಮರ್ಥ್ಯದಿಂದ ಮತ್ತು ದ್ಯೋತಕಶಕ್ತಿಯಾದ ತನ್ನ ಆಲೋಚನಾಲಹರಿಯಿಂದ ಮಾತ್ರ ಸಾಧ್ಯ. ಮತ್ತು ಈ ಪ್ರಾಕಾರಗಳಲ್ಲಿ ಲೇಖಕನ ಆಲೋಚನೆಗಳಿಗನುಗುಣವಾಗಿ ಕಥೆಯ ಹಂದರ ಮತ್ತು ಪಾತ್ರಗಳ ಏರಿಳಿತವಾಗುತ್ತದೆ. ಆದರೆ ತನ್ನ ಸುತ್ತಮುತ್ತಣ ಜೀವಂತ ವ್ಯಕ್ತಿಚಿತ್ರಣ, ಅಲ್ಲಿ ನಡೆಯುವ ನೈಜ್ಯ ಘಟನೆ ಕುರಿತು ಬರೆಯುವುದು ಎಂದರೆ ಎಂಥಹವರಿಗೂ ಹದಿನಾರಿಂಚಿನ ಗುಂಡಿಗೆ ಬೇಕಾಗುತ್ತದೆ! ಈ ರೀತಿ ಇದ್ದದ್ದನ್ನು ಇದ್ದ ಹಾಗೆ ಹೇಳಿ, ತನ್ನ ಅನುಭವಕ್ಕೆ ಬಂದ ವ್ಯಕ್ತಿಗಳನ್ನು, ಅವರ ವ್ಯಕ್ತಿತ್ವವನ್ನು ಅಕ್ಷರರೂಪಕ್ಕಿಳಿಸಿದ ಕೀರ್ತಿ ನಮಗೆ ತಿಳಿದಂತೆ ಕುವೆಂಪು, ಕಾರಂತ, ಲಂಕೇಶ್, ತೇಜಸ್ವಿಯಂತ ಕೆಲವೇ ಕೆಲವು ನಿಷ್ಠುರವಾದಿಗಳಿಗಿತ್ತಾದರೂ ಆ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಲೇಖಕರೆಂದರೆ ವ್ಯಾಸರಾವ್ ನಿಂಜೂರ್! 

ಯಾವುದೇ ಪೂರ್ವಾಗ್ರಹಪೀಡಿತನಾಗದೆ, ಮುಲಾಜಿಗೆ ಬೀಳದೆ ತಾನು ಹುಟ್ಟಿ ಬೆಳೆದ ಊರಾದ ತೆಂಕನಿಡಿಯೂರಿನ ಜನರ ಜೀವಂತ ಚಿತ್ರಣವನ್ನು ನಿರ್ಭಿಡೆಯಿಂದ ಚಿತ್ರಿಸಿಕೊಡುವುದಲ್ಲದೇ, ಹಲವು ವಿಶೇಷ ವ್ಯಕ್ತಿಗಳ ನೈಜ್ಯ ಪರಿಚಯ ಮತ್ತವರ ಸಂಪೂರ್ಣ ವ್ಯಕ್ತಿತ್ವವನ್ನು ಎಳೆಎಳೆಯಾಗಿ ತೆರೆದಿಡುತ್ತಾ ಹೋಗುತ್ತಾರೆ. ಓದುತ್ತಾಹೋದಂತೆ ಓದುಗನಿಗೆ ಎಲ್ಲೂ ಕೃತ್ರಿಮವಾಗಲೀ, ಸ್ವಜನಪಕ್ಷಪಾತವಾಗಲಿ, ಭಿಡೆಗೆ ಬಿದ್ದಂತೆ ಅನಿಸದೆ ಪಾತ್ರಗಳನ್ನು ಸಮತೋಲಿಸಿ ಸಂಭಾಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ವಾಸ್ತವ ಚಿತ್ರಣ ಕಟ್ಟಿಕೊಡುವ ಕಾದಂಬರಿಯೋ ಅಥವಾ ಕಾಲ್ಪನಿಕವೋ ಎಂದು ಓದುಗರು ಗೊಂದಲಕ್ಕೆ ಬಿದ್ದರೆ ಅದು ಓದುಗರ ಚ್ಯುತಿಯಾದೀತೆ ಹೊರತು ನಿಂಜೂರರ ಸಹಜ ಬರವಣಿಗೆಯ ಕುರಿತ ಆಕ್ಷೇಪವಾಗುವುದಿಲ್ಲ, ಅಷ್ಟು ಸೊಗಸಾಗಿ ನಿರೂಪಿಸಿದ್ದಾರೆ ಕಥಾನಕವನ್ನು. ನನಗೆ ತಿಳಿದಮಟ್ಟಿಗೆ, ಜೀವಂತ ವ್ಯಕ್ತಿ ಬಂದು ತನ್ನ ಪಾತ್ರವನ್ನು ನಿಮ್ಮ ಕಥೆಯಲ್ಲಿ ಕಟ್ಟಿಕೊಡುವಿರಾ? ಎಂದು ಒಬ್ಬ ಲೇಖಕನನ್ನು ಕೇಳಿ ಆತನಿಂದ ತನ್ನ ಬಗ್ಗೆ ಬರೆಸಿಕೊಂಡ ಏಕೈಕ ಕೃತಿ ಎಂದರೆ ಇದೇ ಇರಬೇಕು ಎನಿಸುತ್ತದೆ!

ಇಡೀ ಕಾದಂಬರಿಯ ಇನ್ನೊಂದು ಮಹತ್ವ ಅಂಶವೆಂದರೆ ಇದನ್ನು ತನ್ನ ಆಡು ಭಾಷೆಯಲ್ಲೇ ಬರೆದಿರುವುದು. ನಾವು ನೀವು ಅಷ್ಟಾಗಿ ಕೇಳಿರದ ಕರಾವಳಿ ಜನರ ಹಲವು ಹೊಸ ಪದಗಳು ಹದವಾಗಿ ಬೆಸೆದುಕೊಂಡು ಇಡೀ ಕಾದಂಬರಿಗೆ ಅವರ್ಣನೀಯ ಸೌಂದರ್ಯ ಕಲ್ಪಿಸಿಕೊಟ್ಟಿದೆ. ಓದುವಾಗ ಹೊಸಚೈತನ್ಯವಿತ್ತು, ಪದಗಳ ಪರಿಮಳ ಓದುಗನನ್ನು ಆವರಿಸದಿದ್ದರೆ ನೋಡಿ! ಮೂಲಭೂತವಾಗಿ ಬಯಲುಸೀಮೆಯ ಜನ ನಾವಾದ್ದರಿಂದ ಕರಾವಳಿಯ ಗ್ರಾಮ್ಯ ಸೊಗಡಿನ ಭಾಷೆ ನಮಗೆ ಸದಾ ಕೇಳಿ ಸಂಭ್ರಮಿಸುವಂತದ್ದೇ ಆಗಿರುತ್ತದೆ. ಎಲ್ಲಾ ಭಾಷೆಗೂ, ಅದರ ನುಡಿಗೂ (ಮಾತಾಡುವ ಅರ್ಥದಲ್ಲಿ) ಅದರದ್ದೇ ಆದ ಚಂದವಿರುತ್ತದೆ, ಲಯಬದ್ಧತೆಯಿರುತ್ತದೆ. ಆದರೆ ಮಲೆನಾಡು ಮತ್ತು ಕರಾವಳಿ ಜನರ ಭಾಷೆ ನಮಗೆ ಸದಾ ಕೌತುಕಾಸಕ್ತಿ ಬೆರೆತ ಬೆರಗು ಮೂಡಿಸುವುದು ಅತಿಶಯೋಕ್ತಿಯೇನಲ್ಲ. 

ಕಥೆಗೆ ಗಟ್ಟಿತನ ಬರುವುದು ತಾನು ಹುಟ್ಟಿಬೆಳೆದ ಊರಿನ ವಾಸ್ತವ ಚಿತ್ರಣಕ್ಕೆ ನಿಂಜೂರರು ದೂರದ ಮುಂಬೈನ ಚಿತ್ರಣವನ್ನು ತಂದಿರುವುದಲ್ಲದೆ ಅದರ ವಾಸ್ತವಿಕ ಚಿತ್ರಣ ಕಟ್ಟಿಕೊಟ್ಟಿರುವುದೇ ಆಗಿದೆ. ಒಂದು ಕಡೆ ತನ್ನೂರಿನ ಚಿತ್ರಣವನ್ನೀಯುತ್ತಾ ಸಾವಿರ ಕನಸ್ಸು ಕಟ್ಟಿಕೊಂಡು ಮುಂಬೈಗೆ ಹಾರುವ ಅಸಂಖ್ಯಾತ ಯುವಕರ ಜೀವನವನ್ನು ಅವರು ಅನುಭವಿಸುವ ಕಷ್ಟಕಾರ್ಪಣ್ಯವನ್ನು ತಲ್ಲಣ ತವಕ ತುಮುಲ ಅಭದ್ರತೆಯನ್ನು ಜೊತೆಜೊತೆಗೇ ಕಟ್ಟಿಕೊಡುವ ನಿಂಜೂರರ ನೈಪುಣ್ಯತೆಗೆ ಬೆಕ್ಕಸ ಬೆರಗಾಗಲೇ ಬೇಕು. ಕಥೆಯ ಓಘಕ್ಕೆ ಎರಡೂ ಚಿತ್ರಣವನ್ನು ಸಮಗ್ರವಾಗಿ ಸಮರ್ಪಕವಾಗಿ ನೇಯ್ದಿದ್ದಾರೆ. ಇದು ನಿಂಜೂರರು ಬಹುಕಾಲ ಮುಂಬೈನಲ್ಲಿ ಕೆಲಸ ಮಾಡಿದುದರ ಪರಿಣಾಮ. ಇತ್ತಕಡೆ ಕರುನಾಡಿಗೆ ಅತ್ತಕಡೆ ಮುಂಬೈ ಕನ್ನಡಿಗರಿಗೆ ಕೊಂಡಿಯಾಗಿ ಕೆಲಸ ಮಾಡಿದವರಲ್ಲಿ ಮತ್ತು ತನ್ನ ಬಹಳಷ್ಟು ಸಾಹಿತ್ಯಕೃಷಿಯಲ್ಲಿ ಮುಂಬೈ ಸಹ್ಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದವರಲ್ಲಿ ಇವರ ಪಾತ್ರ ದೊಡ್ಡದು. 

ಕುಳುವಾರಿಗಳನ್ನು ನಿಂಜೂರರು ನಿರ್ವಹಿಸಿರುವ ಬಗೆ ಅನನ್ಯವಾದುದು. ಹಾಂ! ಅಂದ ಹಾಗೆ ಕುಳುವಾರಿಗಳು ಎಂದರೆ ನಮ್ಮ ಕಡೆ "ಆಸಾಮಿಗಳು" ಎನ್ನುತ್ತೀವಲ್ಲ? ಆ ಅರ್ಥ ಬರುತ್ತದೆ. ಒಮ್ಮೆ ಓದಿ ನೋಡಿ.
ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1434572199964294&set=gm.1504056852995100&type=3&theater


"ಮಲೆನಾಡಿನ ರೋಚಕ ಕಥೆಗಳು"
"ಅರಮನೆ ಗುಡ್ಡದ ಕರಾಳ ರಾತ್ರಿಗಳು" 
"ಪಶ್ಚಿಮ ಘಟ್ಟದ ತಪ್ಪಲಿನಲ್ಲಿ"
"ಜೇನು ಕಲ್ಲಿನ ರಹಸ್ಯ ಕಣಿವೆ"


ಹತ್ತು ಹಲವಾರು ಪ್ರಶ್ನೆಗಳು, ಉತ್ತರ : ನಾಲ್ಕೇ ಪುಸ್ತಕ! 


1) ಮಲೆನಾಡು ಎಂದರೆ ಏನು? ಮತ್ತು ಅಲ್ಲಿನ ಜೀವನ ಹೇಗಿರುತ್ತದೆ? ಮಲೆನಾಡಿನ ಜೀವನವೆಂದರೆ ನಾವಂದುಕೊಂಡಷ್ಟು ಸುಲಭವಲ್ಲ. ಅಲ್ಲಿ ಪ್ರತಿಕ್ಷಣ, ಪ್ರತಿದಿನವೂ ಒಂದೊಂದು ತರಹ ಹೋರಾಟವೇ ಸರಿ. ಪ್ರತಿ ಬಾರಿಯೂ ವಿಭಿನ್ನವಾದ ಅನುಭವ ಕೊಡುವ ಮಲೆನಾಡಿಗರಿಗೆ ಅದು ದಿನ ನಿತ್ಯದ ಜಂಜಾಟ. ಅಲ್ಲಿ ಬೇರೆ ದಾರಿಯೇ ಇಲ್ಲ, ಬಂದದ್ದನ್ನು ಬಂದ ಹಾಗೆ ಸ್ವೀಕರಿಸಲೇಬೇಕು. ಅಲ್ಲಿನ ಜನ ವ್ಯವಸಾಯ ಮಾಡುವ ಪರಿ ಹೇಗೆ? ಪ್ರಕೃತಿಮಾತೆ ಮುನಿಸಿಕೊಂಡರೆ ಹಸುರಾಗಬೇಕ...ಿದ್ದ ಬಾಳು ಹೇಗೆ ಅಲ್ಲೋಲಕಲ್ಲೋಲವಾಗುತ್ತದೆ? ಕೃಷಿಯನ್ನು ನಂಬಿದ ರೈತರು ಕೊನೆಗೆ ಅದನ್ನು ಬಿಟ್ಟು ನಗರಗಳ ನಾಗಾಲೋಟದಲ್ಲಿ ಏಕೆ ಬಿದ್ದಿರುವರು, ಅದರಲ್ಲೂ ಮಲೆನಾಡಿಗರು? ಅಲ್ಲಿನ ಜನ ಮಳೆಗಾಲವನ್ನು ಸ್ವೀಕರಿಸುವ ರೀತಿ ಹೇಗಿರುತ್ತದೆ? ಅದಕ್ಕಾಗಿ ಅವರು ಮಾಡಿಕೊಳ್ಳುವ ಸಿದ್ಧತೆಗಳೇನು? ನಾವು ಮಳೆಯನ್ನು ನೋಡುವ ರೀತಿ ಮತ್ತು ಮಲೆನಾಡಿಗರು ಮಳೆಯನ್ನು ನೋಡುವ ಬಗೆ ಹೇಗೆ? ಇದೆಲ್ಲವನ್ನು ಮೀರಿ, ಮಾನವ ಸಂಬಂಧಗಳು ಇಲ್ಲಿರುವ ನಮಗಿಂತಲೂ ಅಲ್ಲಿ ವಿಭಿನ್ನವಾದುದೋ ಹೇಗೆ? ಅಥವಾ ನಮ್ಮೆಲ್ಲರಂತೆ ಅವರದೂ ಸಾಮಾನ್ಯವಾದ ಮಾನವ ಸಂಬಂಧಗಳೇನಾ? ಮಲೆನಾಡಿನ ಆ ವರ್ಣಿಸಲಸದಳ ಪ್ರಕೃತಿಯು ಹೇಗೆ ವರ್ಷಒಂಬತ್ತು ಕಾಲ ತನ್ನೊಳಗಡಗಿರುವ ಗುಟ್ಟನ್ನು ಬಿಟ್ಟುಕೊಡದೆ ಮಲೆನಾಡಿಗರನ್ನು ಆಡಿಸುವ ಪರಿ, ಇದರಿಂದ ಅಲ್ಲಿನವರು ಅನುಭವಿಸಬೇಕಾದ ಕಷ್ಟನಷ್ಟಗಳೇನು? ಸುಖಸಂತೋಷಗಳೇನು? ಪ್ರಕೃತಿಯ ಅವಿಭಾಜ್ಯ ಅಂಗವಾದ ಕಾಡು ಪ್ರಾಣಿಗಳು ಇವರಿಗೆ ವರವೋ ಶಾಪವೋ? ವರ್ಷದ ಹನ್ನೆರೆಡು ತಿಂಗಳು ಅಲ್ಲಿನ ಜನರ ದಿನಚರಿ ಹೇಗಿರುತ್ತದೆ? ಎನ್ನುವ ಇಂತಹ ಹತ್ತುಹಲವು ಪ್ರಶ್ನೆಗಳಿಗೆ ಉತ್ತರ ಸಿಗುವುದು "ಮಲೆನಾಡಿನ ರೋಚಕ ಕಥೆಗಳು" ಕೃತಿಯಲ್ಲಿ. 

2) ಮಳೆಗಾಲದಲ್ಲಿ ಮಲೆನಾಡ ಚಾರಣ ಹೇಗಿರುತ್ತದೆ? ನಾವು ಪ್ರಯಾಣಿಸು ವೇಳೆಯಲ್ಲಿ ವಾಹನದಿಂದ ಹಾಗೇ ಇಣುಕಿ ನೋಡುವಾಗ ನಮ್ಮ ಕಣ್ಣಿಗೆ ಬೀಳುವ ಕಾಡಿಗೂ ಅದರಾಚೆಯಿರುವ ಕಾಡಿಗೂ ಏನಾದರೂ ಸಂಭಂಧ ಅಥವಾ ಬದಲಾವಣೆಯಿದೆಯೇ? ಅಪರೂಪಕ್ಕೊಮ್ಮೆ ಪ್ರವಾಸಕ್ಕಾಗಿಯೋ, ಚಾರಣಕ್ಕಾಗಿಯೋ, ದಿನನಿತ್ಯದ ರಗಳೆಯಿಂದ, ಆಫೀಸಿನ ಕಿರಿಕಿರಿಯಿಂದ, ಟ್ರಾಫಿಕ್ಕಿನ ಘೋರ ಅನುಭವದಿಂದ ತಪ್ಪಿಸಿಕೊಂಡು, ಪ್ರಶಾಂತವಾದ, ಸದಾ ಹಸುರೆಲೆಯಿಂದ ತುಂಬಿ, ನೀರ್ಜರಿಯಿಂದ ಕಂಗೊಳಿಸುವ, ಬೆಟ್ಟಗುಡ್ಡಗಳಿಂದ ಕಣ್ಮನ ತಣಿಸುವ, ನಾವು ನೋಡಿರದ ಪ್ರಾಣಿಪಕ್ಷಿಗಳಿಂದ ಭಯಪಡಿಸುವ, ಹೆಜ್ಜೆಹೆಜ್ಜೆಗೂ ಕೌತುಕವನ್ನು ತನ್ನ ಮಡಿಲಲ್ಲಿ ಅಡಗಿಸಿಕೊಂಡಿರುವ ನಿತ್ಯನೂತನೆ ಮಲೆನಾಡಿಗೆ ಹೊರಡುವ ನಮಗೆ ಮಲೆನಾಡು ಪ್ರಕೃತಿ ನೀಡಿದ ಅನನ್ಯ ಕೊಡುಗೆಯೇ ಸರಿ. ಈ ಅಪರಿಮಿತ ಸೌಂದರ್ಯವನ್ನು ಸವಿಯಲು ಮಲೆನಾಡಿಗೆ ಹೋಗುವ ನಾವು ವಹಿಸಬೇಕಾದ ಎಚ್ಚರಿಕೆಗಳೇನು? ಕಾಡಲ್ಲಿ ದಾರಿತಪ್ಪಬಾರದು. ಅಕಸ್ಮಾತ್ ತಪ್ಪಿದರೆ ಅಲ್ಲಿಂದ ಹೊರಬರುವುದು ಹೇಗೆ? ಅಲ್ಲೇ ಸಿಗುವ ಆಹಾರವಾದರೂ ಏನು? ಎನ್ನುವ ಹಲವು ಕೌತುಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಹಲವು ಕಾಲ್ಪನಿಕ ಪಾತ್ರಗಳೊಂದಿಗೆ "ಅರಮನೆಗುಡ್ಡ" ಚಾರಣಕ್ಕೆ ಹೊರಡುವ ಹೊಸದಾಗಿ ಮದುವೆ ಆದ ಎರಡು ನವಜೋಡಿಗಳು ಕಾಡಲ್ಲಿ ದಾರಿತಪ್ಪಿ ಪಡುವ ಪಾಡುಗಳೇನು? ಅಲ್ಲಿ ಅವರು ಎದುರಿಸುವ ಸಂಕಷ್ಟ ಹೇಗಿರುತ್ತದೆ? ತಾನು ಎಣಿಸಿದ್ದಕ್ಕಿಂತ ಪ್ರಕೃತಿ ಹೇಗೆ ತನ್ನ ಇನ್ನೊಂದು ಕ್ರೂರಮುಖ ತೋರಿಸುತ್ತದೆ? ಅಲ್ಲಿಂದ ಅವರು ಜೀವಂತ ಬದುಕಿ ಹೊರಬರಲು ಸಾಧ್ಯವಾಯಿತೇ? ಅಥವಾ ಆ ನಾಲ್ಕರಲ್ಲಿ ಯಾರಾದರೂ ಸತ್ತರೇ? ಇನ್ನುಳಿದವರ ಕಥೆಯೇನು? ಮೊಬೈಲು ಕೈಕೊಟ್ಟಾಗ ಏನಾಗುತ್ತದೆ? ಸೀಳುನಾಯಿಗಳು ಆಕ್ರಮಣ ಮಾಡಿದಾಗ ಯಾರು ಸಾಯುತ್ತಾರೆ? ಹೀಗೆ ಕಥೆಯನ್ನು ಅತ್ಯಂತ ರೋಚಕತೆಯೊಂದಿಗೆ ಪ್ರತಿಕ್ಷಣದ ಕುತೂಹಲದೊಂದಿಗೆ ಓದಿಸಿಕೊಂಡು ಹೋಗುವ ಪುಸ್ತಕ  "ಅರಮನೆ ಗುಡ್ಡದ ಕರಾಳ ರಾತ್ರಿಗಳು" ಪುಸ್ತಕದಲ್ಲಿ ಉತ್ತರ ದೊರೆಯುತ್ತದೆ.

3) ಮಲೆನಾಡಿನ ದಟ್ಟ ಅರಣ್ಯ ಪ್ರದೇಶದ ಒಳಗೆ ಅಥವಾ ಪಶ್ಚಿಮಘಟ್ಟದ ನಟ್ಟನಡುವೆ ವಿದ್ಯುತ್ ಉತ್ಪತ್ತಿಗಾಗಿ ಅಣೆಕಟ್ಟು ಕಟ್ಟಿದರೆ, ಅಲ್ಲಿ ಸುತ್ತಮುತ್ತ ಹಲವಾರು ತಲೆಮಾರಿನಿಂದ ವಾಸ ಮಾಡುತ್ತಿರುವ ಜನರ ಗತಿಯೇನು? ಒಂದು ಅಣೆಕಟ್ಟಿನಿಂದ ಜನರ ದಿನನಿತ್ಯದ ಸಂಗತಿ ಮೊದಲುಗೊಂಡು ಇಡೀ ಅವರ ಜೀವನದ ಮೇಲೆ ಅದು ಹೇಗೆ ಪರಿಣಾಮ ಬೀರಬಹುದು? ಅಲ್ಲಿನ ಅವಿದ್ಯಾವಂತ ಯುವಸಮೂಹ ಹೇಗೆ ದಾರಿ ತಪ್ಪುತ್ತದೆ? ಅಣೆಕಟ್ಟು ಕಟ್ಟುವ ನೆಪದಲ್ಲಿ ಅಲ್ಲಿನ ಮುಗ್ದ ಜನರಿಗೆ ತಿಳಿಯದೆಯೇ ತಲೆತಲಾಂತರದಿಂದಲೂ ತಾಯಿಯಂತೆ ಕಾಯುತ್ತಾ ಬಂದಿರುವ ಅರಣ್ಯ ಸಂಪತ್ತನ್ನು ಹೇಗೆಲ್ಲಾ ಕೊಳ್ಳೆಹೊಡೆಯುತ್ತಾರೆ? ಹುಟ್ಟಿದಾಗಿನಿಂದ ಸ್ವಂತ ಅಣ್ಣತಮ್ಮಂದಿರಂತೆ ಬಾಳುವೆ ನಡೆಸುತ್ತಾ ಬಂದಿರುವ ಅಲ್ಲಿನ ಜನ ಒಂದು ಅಣೆಕಟ್ಟಿನಿಂದ ಹೇಗೆಲ್ಲಾ ತಮ್ಮತಮ್ಮಲ್ಲೇ ಬಡಿದಾಡಿಕೊಂಡು ಒಬ್ಬರಮೇಲೊಬ್ಬರು ಶತ್ರುತ್ವ ಸಾಧಿಸುತ್ತಾರೆ? ಹಳ್ಳಿಯ ಅಮಾಯಕ ಜನರನ್ನು ಮುಗ್ದರನ್ನಾಗಿಸಿ ಅವರಿಗೆ ಆಮಿಷತೋರಿಸಿ ಹೇಗೆ ಸರಕಾರ, ಅಣೆಕಟ್ಟು ಕಟ್ಟಲು ಬಂದ ಪರವೂರಿನ ಜನ ಅವರಿಗೆ ಮೋಸ ಜೊತೆಗೆ ತಾರತಮ್ಯ ಮಾಡುತ್ತಾರೆ? ಇದೆಲ್ಲದರ ಜೊತೆ ಪ್ರಕೃತಿಯ ಜೊತೆ ನಮ್ಮ ಸಂಬಂಧ ಹೇಗಿರಬೇಕು? ಪ್ರಕೃತಿಮಾತೆ ಮುನಿದರೆ ಏನಾಗುತ್ತದೆ? ಎನ್ನುವ ಹತ್ತು ಹಲವು ಪ್ರಶ್ನೆಗಳಿಗೆ ಕಾಲ್ಪನಿಕ ಕಥೆಯೊಂದರ ಹದವನ್ನಿಟ್ಟುಕೊಂಡು ಸೊಗಸಾಗಿ ಎಲ್ಲೂ ಬೋರಾಗದಂತೆ ವಾಸ್ತವದಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಮತ್ತು ದಟ್ಟ ಪಶ್ಚಿಮಘಟ್ಟದ ಮೇಲೆ ನಮಗಿರಬೇಕಾದ ಕಾಳಜಿಯ ಸುತ್ತ ಹೇಳುವ ಕಾದಂಬರಿಯೇ "ಪಶ್ಚಿಮ ಘಟ್ಟದ ತಪ್ಪಲಿನಲ್ಲಿ".

4) ಮಲೆನಾಡಿನ ಸಂಪದ್ಭರಿತ ಮತ್ತು ಅಪರಿಮಿತ ಸಂಪತ್ತನ್ನು ಹೊರಪ್ರಪಂಚದಲ್ಲಿರುವ ನಮಗೆ ತಿಳಿಯದಂತೆ ಹೇಗೆಲ್ಲಾ ದೋಚಬಹುದು? ಅಲ್ಲಿ ಪುಂಡರು ಹೇಗೆ ಅರಣ್ಯವನ್ನು ಕೊಳ್ಳೆಹೊಡೆಯುತ್ತಿದ್ದಾರೆ? ಅದರಿಂದ ಮನುಷ್ಯಕುಲದ ಮೇಲೆ ಆಗುತ್ತಿರುವ ಭೀಕರ ಪರಿಣಾಮಗಳೇನು? ರಕ್ಷಕರೇ ಭಕ್ಷಕರಾದಾಗ ಮುಂದಿರುವ ದಾರಿ ಯಾವುದು? ತಪ್ಪೇ ಮಾಡದ ಸಾಮಾನ್ಯರು ಪುಂಡರ ಸಂಚಿಗೆ ಸಿಲುಕಿದಾಗ ಹೊರಬರಲು ದಾರಿ ಯಾವುದು? ತಾನು ಮಾಡಿದ ತಪ್ಪು ಕೊನೆಗೆ ತನಗೇ ಹೇಗೆ ಉರುಳಾದೀತು? ಎನ್ನುವುದರ ಜೊತೆಗೆ ಅಂದಿನಿಂದ ಇಂದಿನ ತನಕ ತನ್ನ ಕಬಂಧಬಾಹು ಚಾಚಿ ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಿರುವ ಗಾಂಜಾ ಎನ್ನುವ ಮಾದಕ ವ್ಯಸನ ಹೇಗೆ ಇಡೀ ಸಮುದಾಯವನ್ನು, ದೇಶದ ಮುಂದಿನ ಭವಿಷ್ಯ ರೂಪಿಸುವ ಯುವಪೀಳಿಗೆಯನ್ನು ತಪ್ಪುದಾರಿಗೆಳೆಯುತ್ತಿದೆ? ಅದರಿಂದ ದೇಶದ ಮೇಲಾಗುತ್ತಿರುವ ಪರಿಣಾಮವೇನು? ಆ ದುಶ್ಚಟಕ್ಕೊಳಗಾದ ಆ ಮಕ್ಕಳ ಹೆತ್ತವರು ಪಡುವ ಯಾತನೆಗಳೇನು? ಅದರಿಂದ ಹರಡುತ್ತಿರುವ ಗುಣಪಡಿಸಲಾಗದ ಭೀಕರ ಮತ್ತೊಂದು ವ್ಯಾಧಿ ಏಡ್ಸ್ ಮಹಾಮಾರಿ ಹೇಗೆ ಹರಡುತ್ತಿದೆ? ಎನ್ನುವ ಸಾಮಾಜಿಕ ಕಳಕಳಿಯೊಂದಿಗೆ ಬಹು ಕುತೂಹಲಕಾರಿ ವಿಷಯವಾದ ಜೇನುಹುಳಗಳ ಬಗ್ಗೆ ಅಪರೂಪದ ವಿಷಯಗಳನ್ನು ತಿಳಿಸುತ್ತಾ, ಜೇನುಹುಳುಗಳ ಜೇನು ಸಂಗ್ರಹಣೆಯ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಬಂದಿರಲು ಅದಕ್ಕೆ ಕಾರಣ ಹುಡುಕುತ್ತಾ ಬರುವ ದೇಶದ ಪ್ರಖ್ಯಾತ ವಿಜ್ಞಾನಿ ಮತ್ತವನ ಸಂಗಡಿಗರು ಈ ವಿಷಯದ ಬಗ್ಗೆ ಮಲೆನಾಡಿನ ದಟ್ಟಾರಣ್ಯದಲ್ಲಿ ನೆಲೆಸಿರುವ ಅತ್ಯಂತ ಪ್ರಖ್ಯಾತಿ ಮತ್ತು ಕುಖ್ಯಾತಿ ಪಡೆದ "ಜೇನುಕಲ್ಲು ಗುಡ್ಡ"ದಲ್ಲಿ ಮಾಡಹೊರಡುವ ಸಂಶೋಧನೆ, ಜೇನುಹುಳುಗಳ ಬಗ್ಗೆ ವಿಜ್ಞಾನಿ ಹೇಳಿರುವ ಅತಿ ಕುತೂಹಲಕಾರಿ ಮಾಹಿತಿಗಳು, ಇದೆಲ್ಲದರ ಜೊತೆ ಅಷ್ಟು ಪರಿಚಯವಲ್ಲದ ಆದರೆ ಜನಸಾಮಾನ್ಯರಿಗೆ ತಿಳಿಯದ "ಟೈಗಾನ್" ಮತ್ತು "ಲೈಗಾನ್" ಎನ್ನುವ ತಳಿ ಪ್ರಾಣಿಯ ಬಗ್ಗೆ ಹೇಳಿರುವುದನ್ನು ಓದಿದಾಗ ಬೆಕ್ಕಸಬೆರಗಾಗುವುದು ಖಂಡಿತ. ಮೊಬೈಲ್ ತರಂಗಗಳಿಂದ ಅವುಗಳ ಸಂತತಿ ನಾಶ ಮತ್ತು ಜೇನಿನ ಸಂಗ್ರಹಣಾ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವ ವಿಜ್ಞಾನಿಯ ಗುಮಾನಿ, ಸಂಶೋಧನೆ ಮಾಡುತ್ತಿರುವಾಗ ಅಕಸ್ಮಾತ್ತಾಗಿ ಕಂಡ ಗಾಂಜಾ ಬೆಳೆ ಹೇಗೆ ಇಡೀ ಕಥೆಗೆ ತಿರುವು ತಂದು ವಿಜ್ಞಾನಿ ಅತ್ಯಂತ ರೋಚಕವಾಗಿ ಕೊಲೆಯಾಗಿ ಅದು ತನ್ನ ಶಿಷ್ಯೆಯೊಬ್ಬಳ ಮೇಲೆ ಬಂದು ಆಕೆ ಹೇಗೆ ಅದನ್ನು ಮೆಟ್ಟಿನಿಲ್ಲುತ್ತಾಳೋ ಅಥವಾ ಮಾಡದ ತಪ್ಪಿಗೆ ಶಿಕ್ಷೆಯಾಗುವುದೋ ಎನ್ನುವ ಕುತೂಹಲಕಾರಿ ವಿಷಯಗಳೊಂದಿಗೆ ಸಮಾಜಕ್ಕೆ ಬೇಕಾದ ಮಾರ್ಗದರ್ಶನ ಕೊಡುವ ಇನ್ನೊಂದು ಕೃತಿಯೇ "ಜೇನು ಕಲ್ಲಿನ ರಹಸ್ಯ ಕಣಿವೆ".

ಈ ಮೇಲಿನ ನಾಲ್ಕೂ ಕಾದಂಬರಿ ಬರೆದವರು ಗಿರಿಮನೆ ಶ್ಯಾಮರಾವ್. ಅವರು ಮಲೆನಾಡು ಸಕಲೇಶಪುರದಲ್ಲಿ ಹುಟ್ಟಿಬೆಳೆದು ಅಲ್ಲಿನ ರೀತಿರಿವಾಜುಗಳನ್ನು ಚೆನ್ನಾಗಿ ಅರಿತವರಾದ್ದರಿಂದ ಇಂತಹ ಅಮೂಲ್ಯ ಕೃತಿಯನ್ನು ಬರೆಯಲು ಸಾಧ್ಯವಾಗಿದೆ. ಮಲೆನಾಡಿನ ಬಗ್ಗೆ ಅಪರಿಮಿತ ಪ್ರೀತಿ ಮತ್ತು ಭಕ್ತಿಯಿದ್ದವರು ನಿಸ್ಸಂಶಯವಾಗಿ ಎಷ್ಟು ಬಾರಿ ಬೇಕಾದರೂ ಓದಬಹುದಾದ ಅಮೂಲ್ಯ ಸರಕುಗಳಿವು. ಈ ನಾಲ್ಕೂ ಕಾದಂಬರಿಗಳ ವಿಶೇಷತೆ ಎಂದರೆ ಎಲ್ಲೂ ಅನವಶ್ಯಕವಾಗಿ ಆತುರಕ್ಕೆ ಬಿದ್ದು ಹೇಳಬಾರದ್ದನ್ನು ಹೇಳಿಲ್ಲ,ಹೇಳುವುದನ್ನು ಅಚ್ಚುಕಟ್ಟಾಗಿ ಹೇಳುತ್ತಾ ಯಾವುದೇ ಉದ್ವೇಗವಿಲ್ಲದೆ ನಡೆಸುವ ಪಾತ್ರಗಳು ಮತ್ತು ಸನ್ನಿವೇಶಗಳು ಲೇಖಕರ ಚಾತುರ್ಯತೆಗೆ ಹಿಡಿದ ಕನ್ನಡಿ. ಇದನ್ನು ಓದುವಾಗ ಎಲ್ಲೋ ಒಂದು ಕಡೆ ಕಾಡು ಮತ್ತದರ ಬಗ್ಗೆ ಅನೂಹ್ಯವಾಗಿ ಬರೆದ ಇನ್ನೊಬ್ಬ ದೈತ್ಯ ತೇಜಸ್ವಿ ನೆನಪಾಗುತ್ತಾರಾದರೂ ಲೇಖಕರು ತನ್ನತನವನ್ನು ಬಿಟ್ಟುಕೊಡದೇ ಇರುವುದು ಎದ್ದು ಕಾಣುತ್ತದೆ.
ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1432449896843191&set=gm.1501897836544335&type=3&theater

 "ಯೇಗ್ದಾಗೆಲ್ಲಾ ಐತೆ"



ನೀವು ಏನನ್ನು ನಂಬುವಿರಿ? ಕಣ್ಣಿಗೆ ಕಾಣುವುದನ್ನು ನಂಬುವಿರೋ ಅಥವಾ ಕಾಣದ್ದನ್ನು ನಂಬುವಿರೋ? ಅಥವಾ ಇದ್ಯಾವುದೂ ಅಲ್ಲದೇ ಎರಡನ್ನೂ ನಂಬುವಿರೋ? ಭೌತಿಕವಾಗಿ ಕಾಣುವುದನ್ನು ಪ್ರತ್ಯಕ್ಷ ಪ್ರಮಾಣಿಸಿ ನೋಡಿ ನಂಬುವುದು ಒಂದಾದರೆ, ತಮ್ಮ ಪಾರಮಾರ್ಥಿಕ ಅನುಭವಗಳ ಮೂಲಕ ನಮಗಾದ ವಿಸ್ಮಯವನ್ನು ನಂಬುವುದು ಇನ್ನೊಂದು. ಇಲ್ಲಿ ಪ್ರಾತ್ಯಕ್ಷಿಕೆಗಿಂತ ನಮ್ಮ ನಿಲುಕಿಗೆ ಎಟುಕದ ಅವರ್ಣನೀಯ ಅನುಭೂತಿಯೊಂದು ಮುಖ್ಯವಾಗಿರುತ್ತದೆ.


ನಮ್ಮ ನಿಲುವಿಗೆ ನಿಟುಕದ ಸಂಗತಿಗಳ ಕುರಿತು ತಮಗಾದ ಅನುಭವಗಳನ್ನು ಕುರಿತು ವಿವರಿಸ...ುವ ಪುಸ್ತಕದ ಬಗ್ಗೆಯೇ ನಾನೀಗ ಹೇಳಹೊರಟಿರುವುದು. ಇಲ್ಲಿ ನಡೆದ ಯಾವುದೇ ಸಂಗತಿಗಳಿಗೆ ಪುರಾವೆಯಾಗಲೀ ಪ್ರತ್ಯಕ್ಷ ಪ್ರಮಾಣಿಸುವ ಸಾಕ್ಷಿಗಳಾಗಲಿ ದೊರೆಯುವುದಿಲ್ಲ. ಇಲ್ಲಿ ಏನಿದ್ದರೂ ವ್ಯಕ್ತಿಗತ ಅನುಭವಗಳು ಮತ್ತು ನಂಬಿಕೆ ಮಾತ್ರವೇ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನ ನಂಬಿಕೆಯಿರುವರು ಹೌದೆಂದು ನಂಬಬಹುದು ಇಲ್ಲವೇ ಸಾಕ್ಷಿಬೇಕೆನ್ನುವರು ಇದೆಲ್ಲ ಕಟ್ಟುಕಥೆ ಎಂದು ನಂಬದೇ ಇರಬಹುದು. ಎಲ್ಲವೂ ಅವರವರ ತರ್ಕಕ್ಕೆ ಬಿಟ್ಟ ವಿಚಾರ. 

ವಿಜ್ಞಾನ ಎಷ್ಟೇ ಮುಂದುವರಿದರೂ, ತಂತ್ರಜ್ಞಾನ ಎಷ್ಟೇ ಮೇಲ್ಮಟ್ಟಕ್ಕೆ ಪ್ರಗತಿಯಾಗಿದ್ದರೂ ನಮ್ಮ ನಿಲುಕಿಗೆ ಎಟುಕದ ಹಲವು ಸಂಗತಿಗಳಿರುವುದು ಸತ್ಯ ತಾನೇ? ಆ ಎಟುಕದ ಹಲವು ಸಂಗತಿಗಳೇ ಈ ಅತೀತ ಅಥವಾ ಪ್ರಾತ್ಯಕ್ಷಿಕೆ ಒದಗಿಸಲಾಗದ ಸಂಗತಿಗಳೇಕಾಗಿರಬಾರದು? ಹೀಗೊಂದು ಸಾಲನ್ನು ಪುಸ್ತಕದ ಆರಂಭದಲ್ಲೇ ಹೇಳಿದ್ದಾರೆ. 

ಇದು ಶಾಸ್ತ್ರಿಗಳಿಗೆ, ಆ ಪರಿಸರದಲ್ಲಿದ್ದವರಿಗೆ ಮತ್ತು ಅವರ ಸಮಕಾಲೀನರುಗಳಿಗೆ ಆದ ಅನುಭವಗಳ ಕುರಿತಾದದ್ದು. ಮತ್ತು ಅದೆಲ್ಲ ಪವಾಡ ಮಾಡಿದ್ದು ಆ ಸ್ವಾಮಿಗಳು. ಈಗಿನ ಮುಂದುವರಿದ ಕಾಲಮಾನಕ್ಕೆ ಒಗ್ಗಿಕೊಳ್ಳಲಾರದ, ಅರಗಿಸಿಕೊಳ್ಳಲಾಗದ ಹಲವು ಮಹತ್ವ ಘಟಿಸಿದ ಸಂಗತಿಗಳಿವೆ ಇದರಲ್ಲಿ. ಸ್ವಾಮಿಗಳು ಯಾರು, ಎಲ್ಲಿಯವರು, ಎಲ್ಲಿಂದ ಬಂದರು, ವಯಸ್ಸೆಷ್ಟು, ಹಿನ್ನೆಲೆ ಏನು..ಇವೆಲ್ಲಾ ಇಲ್ಲಿ ನಗಣ್ಯ. ಅವರ ಪ್ರತೀ ನಡೆಯಲ್ಲಿ, ನುಡಿಯಲ್ಲಿ, ಸುಮ್ಮನೇ ಹಾಗೇ ಮಾಡಿದ ಪ್ರತಿಯೊಂದು ಕೆಲಸದಲ್ಲಿ ಪಾರಮಾರ್ಥಿಕ ಸತ್ಯದರ್ಶನ ಇದ್ದವೆಂಬುದಷ್ಟೇ ಸತ್ಯ. 

ಅದಕ್ಕೇ ಮೊದಲೇ ಕೇಳಿದ್ದು ನೀವು ಏನನ್ನು ನಂಬುವಿರಿ ಎಂದು. ಪ್ರತಿಯೊಂದನ್ನು ವೈಜ್ಞಾನಿಕವಾಗಿ ನೋಡುವ ದೃಷ್ಟಿಯುಳ್ಳವರಾಗಿದ್ದರೆ, ಕ್ಷಮಿಸಿ, ಇದು ನಿಮಗೆ ಅಷ್ಟಾಗಿ ಸಂಬಂಧಪಡದು. ಧಾರ್ಮಿಕ ಭಾವನೆಯುಳ್ಳವರಾಗಿದ್ದು ಅಂತಃದರ್ಶನದಲ್ಲೂ ಸತ್ಯವಿದೆ ಎಂದು ನಂಬುವಿರಾದರೆ, ಯೆಸ್, ಈ ಪುಸ್ತಕ ನಿಮ್ಮನ್ನು ಬಿಟ್ಟೂಬಿಡದೆ ಓದಿಸಿಕೊಂಡು ಹೋಗುತ್ತದೆ. ಹಾಗಾದರೆ ಆ ಪುಸ್ತಕದ ಹೆಸರೇನೆಂದು ಕೇಳಿದಿರಾ? ನಮ್ಮನ್ನು ವರ್ಣಿಸಲಾಗದ ಅನುಭವಗಳ ಲೋಕಕ್ಕೆ ಕರೆದೊಯ್ದು ಹಲವು ಚಕಿತಗೊಳಿಸುವ ವಿಸ್ಮಯಗಳ ಮೂಲಕ ತಮ್ಮ ಪ್ರಭಾವವನ್ನು ಬೀರಿ ಇದ್ದೂ ಇಲ್ಲದಂತೆ ಮಾಡಿದರೂ ಮಾಡದಂತೆ ಕಂಡರೂ ಕಾಣದಂತೆ ಸಿಕ್ಕರೂ ಸಿಗದಂತೆ ಜೋಗಿ ಜಂಗಮನಾದ ವ್ಯಕ್ತಿ ಎಂದರೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ತಮ್ಮ ಆಧ್ಯಾತ್ಮ ಗುರುಗಳು ಮುಕುಂದೂರು ಸ್ವಾಮಿಗಳ ಕುರಿತು ಬರೆದಿರುವ "ಯೇಗ್ದಾಗೆಲ್ಲಾ ಐತೆ" . ಇವತ್ತು ಮುಗಿಸಿದೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1421089497979231&set=gm.1491035537630565&type=3&theater





"ನಮ್ಮ ಊರಿನ ರಸಿಕರು"


ಒಂದು ಹಳ್ಳಿ. ಅದರಲ್ಲಿ ನಡೆಯುವ ದಿನನಿತ್ಯದ ಸಾಮಾನ್ಯ ಘಟನೆಗಳು. ಅದನ್ನು ಕೇಳಿದಾಗ, "ಹೌದಲ್ಲಾ? ಇದು ನಮ್ಮಲ್ಲೂ ಹೀಗೆ ನಡೆದಿತ್ತು" ಎನ್ನಿಸುವುದುಂಟು. ಘಟನೆಗಳು ಸಾವಿರಾರು ಇರಬಹುದು, ಆದರೆ ಅದನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾದೀತೆ ಹೊರತು ಅದರ ಮೂಲ ಭಾವವಲ್ಲ. ಆ ಮೂಲ ಭಾವ ಕೆಡಿಸಿಕೊಳ್ಳದೆ ತನ್ನ ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಪ್ರಭಂಧ ಸಂಕಲನವೆಂದರೆ ಶ್ರೀಯುತ ಗೊರೂರು ರಾಮಸ್ವಾಮಿ ಆಯ್ಯಂಗಾರರ "ನಮ್ಮ ಊರಿನ ರಸಿಕರು".


ಇದನ್ನು ನೀವು ಪ್ರಬಂಧವೆನ್ನುವಿರೋ, ಲಲಿತಕಲಾ ಸಾಹಿ...ತ್ಯವೆನ್ನುವಿರೋ, ಕಥೆಯೆನ್ನುವಿರೋ, ಕಾದಂಬರಿಯೆನ್ನುವಿರೋ ಅಥವಾ ಅದೆಲ್ಲದರ ಸವಿಸಮ್ಮಿಶ್ರಣ ಎನ್ನುವಿರೋ ಅದು ನಿಮ್ಮ ಭಾವಸ್ವಾಮ್ಯಕ್ಕೆ ಬಿಟ್ಟ ವಿಚಾರ. ಓದಿದ ನಂತರ ಇದನ್ನು ಯಾವ ಮೂಲಕ್ಕೆ ಸೇರಿಸಬಹುದು ಎಂದು ಯೋಚಿಸುವುದು ನಿರರ್ಥಕ ಎನಿಸಿದೆ ನನಗೆ. ಯಾಕೆಂದರೆ ಈ ಮೊದಲೇ ಹೇಳಿದಂತೆ ಎಲ್ಲಾ ಭಾವವನ್ನು ಆಮೂಲಾಗ್ರವಾಗಿ ತನ್ನಲ್ಲಿ ಉಳಿಸಿಕೊಂಡು ಬಂದ ಯಾವುದೇ ಕೃತಿಯಾದರೂ ಓದುಗನಿಗೆ ಆ ಕ್ಷಣದ ಆತನ ಭಾವನೆಗೆ ಎಟುಕುವ ಮಾದರಿಯಾಗಿರುವಾಗ, ಆತನ ಆ ಸಂಧರ್ಭಕ್ಕೆ ತಕ್ಕಂತೆ ಅದು ಅವನೆದುರು ನರ್ತಿಸುವಾಗ ಯಾವ ಗುಂಪಿಗೆ ಹೇಗೆ ತಾನೇ ವಿಂಗಡಿಸಲು ಸಾಧ್ಯ ಹೇಳಿ? ಇದು ನನ್ನ ಅಭಿಮತ.

ನಾನು ಪದವಿಯಲ್ಲಿದ್ದಾಗ ರಸಿಕರು ನಮಗೆ ಪಠ್ಯವಾಗಿತ್ತು. ಆಗಿನ ಬುದ್ಧಿಮತ್ತೆಗೆ ತಕ್ಕಂತೆ ಅರ್ಥವೂ ಆಗಿತ್ತು. ಇಡೀ ಪುಸ್ತಕವನ್ನು ನಾನು ಒಂದು ವರ್ಷದಲ್ಲಿ ಓದಿ ಅರ್ಥಮಾಡಿಕೊಂಡಿದ್ದಕ್ಕಿಂತ, ಈಗ ಎರಡು ದಿನದಲ್ಲಿ ಓದಿ ಅನುಭವಿಸಿದ ಅನನ್ಯತೆ ಹೆಚ್ಚು. ಮಾತಿಗೆ ನಿಲುಕದ ಭಾವನೆ ಜೊತೆಗೆ ಹಿಂದಿನ ದಿನಗಳ ಆಹ್ಲಾದಕರ ನೆನಪುಗಳನ್ನೂ ಒಟ್ಟೊಟ್ಟಿಗೆ ತಂದ ರಸಿಕರ ಕರ್ತೃ ರಾಮಸ್ವಾಮಿಯವರಿಗೆ ಆಭಾರಿ.. ಆಭಾರಿ.. ಆಭಾರಿ.. 

ಅಂದಹಾಗೆ ರಸಿಕರನ್ನು ಒದದವರು ಖಂಡಿತ ಓದಿ. ಯಾರಿಗೆ ಗೊತ್ತು ಯಾವ ಸುನೀತಭಾವ ನಿಮ್ಮೆದೆಗೆ ಬಂದು ತಾಕುವುದೋ ಬಲ್ಲವರ್ಯಾರು? ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 

https://www.facebook.com/photo.php?fbid=1417953534959494&set=gm.1488138787920240&type=3&theater

"ನಾಕು ತಂತಿ"


ಉಫ್! ಒಂದು ದೀರ್ಘ ನಿಟ್ಟುಸಿರು. ಎದೆಯಹತ್ತಿ ತಕಧೀಮ್ ಕುಣಿಯುತ್ತಿದ್ದ ಭಾರಕ್ಕೀಗ ನಿರ್ಭಾರವಾದ ಸ್ಥಿತಿ. ಬಹು ದಿನಗಳ ಬಯಕೆಯ ಹೆಮ್ಮರ ಚಿಗುರೊಡೆದು ಬೆಳೆದು ಫಲಪುಷ್ಪ ಧರಿಸಿನಿಂತಾಗ ಉಂಟಾಗುವ ಸಂತೃಪ್ತಿ. ಕಾದು ಕಾದು ಸುಸ್ತಾಗಿ ಬಳಲಿ ಬೆಂಡಾದ ಮರುಭೂಮಿಯ ಹೂವೊಂದು ಒಯಾಸೀಸಿನ ಒರತೆ ಆಸರೆ ಸಿಕ್ಕಿ ನಿಲ್ಲುವಂತಾಯ್ತು.


ನನ್ನೊಳಗೆ ಒಡಮೂಡಿದ ಆ ಕಾತರತೆಗೆ ದಾಕ್ಷಿಣ್ಯವಿಲ್ಲದೆಯೇ ಫಲದೊರೆತಿದೆ. ಆದರೆ ಆ ಫಲ ಎಂತಹುದು ಎಂದು ಮುಂದೆ ಹೇಳಿರುವೆ. ಹೃದಯ ವಿಹ್ವಲತೆಯಿಂದ ನರಳಾಡಿ ಕೊನೆಗೆ ಬಿಡುಗಡೆಗೊಂದು ...ನಭೋಮಂಡಲದತ್ತ ಚಿಮ್ಮುವ ಹುಚ್ಚುಕುದುರೆಯಾಗಿದೆ. ಅದನ್ನು ಕಟ್ಟಿಹಾಕುವ ದುಃಸ್ಸಾಹಸಕ್ಕೆ ನಾನೆಂದೂ ಯತ್ನಿಸುವುದಿಲ್ಲ. 

ಹಾಂ! ಅಂದಹಾಗೆ ನನ್ನೊಳಗಡಗಿದ್ದ ಬಹು ದಿನದ ಬಯಕೆಯನ್ನೇನೋ ನಾ ಪೂರೈಸಿಕೊಂಡಿದ್ದಾಯಿತು. ಆದರೆ ಅದರಿಂದ ಸಾಕ್ಷಾತ್ಕಾರವಾಯಿತೇ? ಜೀವನದ ಅನುಭವವನ್ನು ಧಾರೆಯೆರೆದು ಬರೆದ ಕವಿಮನಸ್ಸಿನ ಅಂತರಾಳವನ್ನು ಅರ್ಥೈಸುವುದರಲ್ಲಿ ನಾನು ಸಫಲನಾದೆನೇ? ದೇಶದ ಅತ್ತ್ಯುನ್ನತ ಪ್ರಶಸ್ತಿಗೆ ಪಾತ್ರವಾದ ನುಡಿಮುತ್ತುಗಳಿಗೆ ನನ್ನನ್ನು ನಾನು ಯಾವುದೇ ಅಂಜಿಕೆಯಿಲ್ಲದೆ ತೆರೆದುಕೊಳ್ಳಲು ಸಾಧ್ಯವಾಯಿತೇ? ತಾಯಿ ಮುಂದೆ ನಿಂತ ನಗ್ನ ಮಗುವಿನಂತೆ ಅದರೆದುರು ನಾನು ನಿಲ್ಲಲಾಯಿತೇ? ಉತ್ತರ ನನಗೆ ಬಹು ಸ್ಪಷ್ಟವಿದೆ. 

ನನ್ನಂತಹ ಅರೆಪಾಮರನು ಹಿಮಾಲಯವನ್ನು ಹತ್ತುವ ಕನಸ್ಸನ್ನು ಕಾಣುವುದು ಬಹಳ ಸುಲಭ. ಆ ದುಃಸ್ಸಾಹಸ ಮಾಡಲು ಹೊರಡಲೂಬಹುದು. ಆದರೆ ಅದರಲ್ಲಿ ನಾಲ್ಕಿಂಚಿನ ಸಣ್ಣ ಏರಿಯನ್ನೂ ಹತ್ತಲು ಸಾಧ್ಯವಾಗಲಿಲ್ಲ. ಅಂಬಿಕಾತನಾಯ ದತ್ತನ ಮೇರು ಕೃತಿ ಹಿಮಾಲಯದಾಚೆಗೂ ಮೀರಿ ಬೆಳೆದು ನಿಂತಿರುವ ಶಿಖರವನ್ನು ಹತ್ತುವುದಿರಲಿ ಹತ್ತಿರಹೋಗಲೂ ಸಾಧ್ಯವಾಗಲಿಲ್ಲ. 

ನನಗಿರುವ ಜ್ಞಾನವನ್ನು ಬಳಸಿ ಆದಷ್ಟೂ ಅರ್ಥೈಸಲು ಯತ್ನಿಸಿ ಸೋತಿದ್ದೀನಿ, ಅಂದರೆ, ಕೃತಿಯ ಘನತೆಗೆ ಚ್ಯುತಿ ಬಂದಂತಾಗುವುದಿಲ್ಲವೆಂದೇ ಭಾವಿಸಬೇಕು. ಎಲ್ಲೋ ಒಂದೆರೆಡು ಸಾಲುಗಳು ಕೆಲವೊಂದು ಅರ್ಥಗಳನ್ನು ನೀಡಿತಾದರೂ, ಕವಿಯ ಅಂತಃಸತ್ವವನ್ನು ಸಂಪೂರ್ಣ ಗ್ರಹಿಸುವಲ್ಲಿ ಎಡವಿರುವೆ. ಅದಕ್ಕೆ ಕಾರಣ ನನ್ನ ಜ್ಞಾನದ ವಿಸ್ತೀರ್ಣತೆಯ ಕೊರತೆಯೇ ಹೊರತು ಬೇರೇನಲ್ಲ. 

ಇಲ್ಲಿಗೆ ನನ್ನ ಬಹುದಿನದ ಆಸೆಯ ಈಡೇರುವಿಕೆ ಮತ್ತದರ ಫಲವೇನೆಂದು ನೀವು ತಿಳಿದಾಯ್ತಲ್ಲವೇ? 

ಈ ಭಾವವೆಲ್ಲವೂ ನನಗೆ ಮೂಡಿದ್ದು ವರಕವಿ ಬೆಂದ್ರೆ ಅಜ್ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವನ ಸಂಕಲನ "ನಾಕು ತಂತಿ" ಓದಿಮುಗಿಸಿದಾಗ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 

https://www.facebook.com/photo.php?fbid=1419005828187598&set=gm.1489102764490509&type=3&theater
ಶ್ರೀಕೃಷ್ಣ ಆಲನಹಳ್ಳಿಯವರ "ಕಾಡು"

ಹೋದ ವಾರ ಶ್ರೀಕೃಷ್ಣ ಆಲನಹಳ್ಳಿಯವರ "ಕಾಡು" ಪುಸ್ತಕವನ್ನೋದಿದೆ. ಕಾದಂಬರಿಯ ವಿಸ್ತೀರ್ಣ ಚಿಕ್ಕದಾದರೂ, ಅದರಲ್ಲಿರುವ ಪಾತ್ರಗಳ ಆಳಗಲ, ಪ್ರತಿ ಪಾತ್ರಕ್ಕೂ ಇರುವ ಧೀರ್ಘ ಸಂಕೀರ್ಣತೆ, ಪ್ರತಿ ಮನೆಯಲ್ಲಿ ಕಾಣುವ ಮನಸುಗಳ ಅಂತರ, ನಡುವೆಯೇ ಇದ್ದೂ ಇಲ್ಲದಿರುವಿಕೆ, ಪಾತಿವ್ರತ್ಯದ ಹೇರಿಕೆ, ಒಳಗೆ ನಾಲ್ಕು ಗೋಡೆಗಳ ಮಧ್ಯೆಯೇ ನಲುಗುವ ಮುಗ್ದ ಮನಸ್ಸಿನ ಜಾನಕಿಯ ವೇದನೆ, ನೋವು, ಆಕೆಯ ದುಗುಡ-ದುಮ್ಮಾನ, ತನಗೆ ಮಕ್ಕಳಾಗದಿರುವಿಕೆ, ಸಹೋದರಿಯ ಮಗನನ್ನೇ ತಾನು ಹೆತ್ತ ಕೂಸಿಗಿಂತ ಹೆಚ್ಚಾಗಿ ಸಾಕುವ ಆಕೆಯ ಕಾಳಜಿ, ಅವನ ಮೇಲಿರುವ ಪ್ರೀತಿ, ಮಮತೆ, ವಿಶ್ವಾಸ, ಆದರಣೆ, ಗಂಡ ಚಂದ್ರೇಗೌಡನ ಚಾಪಲ್ಯತೆ, ಆತನ ನ್ಯಾಯ ...ಪಂಚಾಯ್ತಿಯ ತಿಕ್ಕಲಾಟಗಳು, ಊರ ರಾಜಕೀಯ ಮತ್ತದರ ಒಳಪಿತೂರಿ, ಬಾಲಕ ಕಿಟ್ಟುವಿನ ವಯೋ ಸಜಹ ಕುತೂಹಲ, ಸುತ್ತಮುತ್ತಲ ಪರಿಸರದಲ್ಲಿನ ಆಗುಹೋಗುವಿನ ಸೂಕ್ಷ್ಮಗ್ರಹಿಕೆ, ಕಾಡಿನ ಬಗ್ಗೆ ಇರುವ ವಿವರಣೆ..... ಹೀಗೆ ಕಾದಂಬರಿಯ ಆವರಣ ಬಹಳ ಸೊಗಸಾಗಿ ತೆರೆದುಕೊಳ್ಳುತ್ತಾ ಇದೊಂದು ಉತ್ತಮ ಕೃತಿಯಾಗಿ ನಿಲ್ಲುತ್ತದೆ. ಒಂದು ಓಘದಲ್ಲಿ ನಡೆಯುತ್ತಿರುವ ಕಾದಂಬರಿಯು ಅಂತಿಮ ಹಂತಕ್ಕೆ ಬರುತ್ತಿದ್ದಂತೆ ತನ್ನ ಮಗ್ಗಲು ಬದಲಿಸಿ ಇಡೀ ಕಥೆಗೆ ಯಾರೂ ಉಹಿಸಲಾಗದ ತಿರುವು ತಂದಿರುವುದು ಆಲನಹಳ್ಳಿಯವರ ಅದ್ಬುತ ತಂತ್ರಗಾರಿಕೆಯಲ್ಲೊಂದು. ಹೊಸದಾಗಿ ಓದಲು ಆರಂಭಿಸಿದವರು ಇದನ್ನು ಓದಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಬರಲಡ್ಡಿಯಿಲ್ಲ ಎನ್ನುವುದು ನನ್ನ ಭಾವನೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 
"ನನ್ನೊಡಲು ಮಾತಿಗಿಳಿದಾಗ.." 

ನನ್ನನ್ನು ಮಂದಿ  ಬಾ! ಬಾ! ಎಂದು ಕರೆಯುತ್ತಾರೆ. ನಾನು ಹೋಗುತ್ತಿನಿ. ಕೆಲವೊಮ್ಮೆ ಹೋಗದೆಯೂ ಇರಬಹುದು. ನಾನು ಹೋಗುವುದು ಬಿಡುವುದು ನನ್ನ ಕೈಲಿಲ್ಲ, ಕರೆಸಿಕೊಳ್ಳುವರ ಮನಸ್ಸಿನಲ್ಲಿದೆ. ಅವರು ಮಾಡುವ ಪ್ರತಿ ಕೆಲಸದಲ್ಲಿದೆ. ಅವರ ಆಲೋಚನಾ ಧಾಟಿಯಲ್ಲಿದೆ. ಅವರ ಮನಸ್ಸಿನ ಮಾತಿಗು ನಡೆಯುವ ದಾರಿಗು ವ್ಯತ್ಯಾಸ ಇಲ್ಲದಿದ್ದರೆ ನಾನು ಸರಾಗ ಸರಾಗ. ಎಲ್ಲಿ ತನ್ನದನ್ನು ತಾನು ನೋಡಿಕೊಳ್ಳುವ, ತನ್ನವರನ್ನು ಮಾತ್ರ ಸಂರಕ್ಷಿಸಿಕೊಳ್ಳುವ ಸಮೂಹವಿರುತ್ತದೋ ನಾನಲ್ಲಿಗೆ ಮನೆಮಗನಂತೆ ಹೋಗುವುದಿಲ್ಲ, ಬದಲಿಗೆ ಅಪರೂಪದ ಅಥಿತಿಯಾಗುವೆ.

ನನ್ನನ್ನು ಓಲೈಸಲು ನನ್ನ ಕುರಿತು ಜಪತಪ ಪೂಜೆಪುನಸ್ಕಾರ ಹೋಮಹವನಹವಿಸ್ಸು ಮಾಡಿರೆಂದು ನಾನು ಎಲ್ಲೂ ಯಾರಲ್ಲೂ ಹೇಳಿಲ್ಲ. ತನ್ನ ಕೆಡುಕಿನಿಂದ ತಾನು ಮಾಡಿದ ತಪ್ಪನ್ನು ಮುಚ್ಚಲಿಕ್ಕೆ ಮಂದಿ ಈ ಅನ್ಯಮಾರ್ಗ ತುಳಿಯುತ್ತಾರೆ. ಗೊಡ್ಡು ಸಂಪ್ರದಾಯಗಳ ಬೆನ್ನೇರಿ ಮೌಢ್ಯತೆಯ ಪರಮಾವಧಿ ತಲುಪುತ್ತಾರೆ. ತನ್ನೊಳಗಿನ ತಪ್ಪನ್ನು ತಾನು ಮುಚ್ಚಿಡಲಾಗದೆ ಏನೆಲ್ಲಾ ಮಾಡುತ್ತಾರೆ ಈ ಜನ!?
ನನಗಾಗಿ ಪ್ರಾರ್ಥಿಸುವುದೇನು? ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವುದೇನು? ಹವಿಸ್ಸು ಕೊಡುವುದೇನು?.. ಇನ್ನೂ ಹೀಗೆ ಹತ್ತು ಹಲವು ರೀತಿ ನನ್ನನ್ನು ಒಲಿಸಿಕೊಳ್ಳಲು ನೋಡುತ್ತಾರೆ ಈ ಮಂದಿ.

ಆದರೆ ನಿಮಗೊಂದು ಮಾತು ಹೇಳಬೇಕು. ಹಿಂದಿನ ಕಾಲದ ತಿಳಿವಳಿಕೆಯಿದ್ದ ಮಂದಿ ನನಗಾಗಿ ಹೀಗೆಲ್ಲಾ ಕೆಲಸಕ್ಕೆ ಬಾರದ ಪೂಜೆ ಹೋಮಹವನ ಮಣ್ಣುಮಸಿ ಇತ್ಯಾದಿ ಇತ್ಯಾದಿ ಮಾಡುತ್ತಲೇ  ಇರಲಿಲ್ಲ. ಅವರದೇನಿದ್ದರೂ ಅವರವರ ಕೆಲಸದಲ್ಲಿ, ಸುತ್ತಮುತ್ತಲ ಕಾಯಕ ಕೈಂಕರ್ಯಗಳಲ್ಲಿ ತೊಡಗಿರುತ್ತಿದ್ದರು. ಮಾಡುವ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತಲಿದ್ದರು. ಯಾವುದಕ್ಕೂ ಅಸೂಯೆ ದ್ವೇಷ ಮತ್ಸರವಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಸುತ್ತಮುತ್ತಲಿನ ಪರಿಸರ, ಪ್ರಾಣಿ, ಪಕ್ಷಿ, ಕುಂಟೆ, ನದಿ, ಜಲಪಾತಗಳ ಬಗ್ಗೆ ತಮ್ಮದೇ ಆದ ರೀತಿರಿವಾಜುಗಳನ್ನಿಟ್ಟುಕೊಂಡು ತಮ್ಮದೇ ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಬದುಕಿ ಬಾಳುತ್ತಿದ್ದರು. ಮಂದಿ ಹೀಗೆ ತಮ್ಮಪಾಡಿಗೆ ತಾವಾಯಿತು, ತಮ್ಮ ಮೂಲೋಕವಾಯಿತು ಎಂದು ಬಾಳುವೆ ಮಾಡುತ್ತಿರಲು ಹಠ ಮಾಡಿದರೆ ಸರಿಹೋಗುವುದಿಲ್ಲವೆಂದು ನಾನು ಸರಿಯಾದ ಸಮಯಕ್ಕೆ ಅಂದರೆ ಮಂದಿ ನನ್ನನ್ನು ಬರುವನು ಎಂದು ಎಣಿಸುವ ಕಾಲಕ್ಕೆ ತಕ್ಕಂತೆ ಹೋಗಿ ಅವರಿಗೆ ಸಾಕಾಗುವಷ್ಟೋ ಸಾಲದಿರುವಷ್ಟೋ ನನ್ನ ಕೈಲಾದ ಸೇವೆ ಮಾಡಿ ಬರುತ್ತಿದ್ದೆ. ನನ್ನ ಸೇವೆಯನ್ನು ಬಳಸಿಕೊಂಡ ಮಂದಿ ನನ್ನಿಂದ ಕೃತಾರ್ಥರಾಗುತ್ತಿದ್ದರು, ಅವರಿಗೆ ನನ್ನ ಕೈಲಾದ ಮಟ್ಟಿಗಿನ ಸೇವೆ ನೀಡಿದ್ದಕ್ಕೆ ನನಗೂ ಧನ್ಯತಾಭಾವವಿರುತ್ತಿತ್ತು.

ಒಂದೊಂದು ಸಲ ಏನಾಗುತ್ತಿತ್ತೆಂದರೆ, ಜನರ ಆಗಿನ ಪರಿಸ್ಥಿತಿ,  ಮನೋಭಾವನೆ, ಅವರು ನನ್ನ ಮೇಲೆ ತೋರಿಸುತ್ತಿದ್ದ ಆದರ ತಾತ್ಸಾರ, ಆದರೀಯಣೆ ನಿರಾಕರಣೆ, ಎದುರು ನೋಡುವಿಕೆ  ನೋಡದಿಲ್ಲದಿರುವಿಕೆ, ಕಾತರ ಬೇಸರ ಇತ್ಯಾದಿ ವಿಷಯಗಳಿಗನುಗುಣವಾಗಿ ನಾನು ನನ್ನ ಸೇವೆ ನೀಡುತಲಿದ್ದೆ. ಹೇಗೆಂದರೆ, ಮಂದಿ ನನ್ನನ್ನು ಚೆನ್ನಾಗಿ ಭಾವಿಸುವ ಮನಸ್ಸು ಹೊಂದಿ ತಮ್ಮ ಸುತ್ತಮುತ್ತಲಿನ ಪರಿಸರದ ಜೊತೆ ಅನ್ಯೋನ್ಯತೆ ಬೆಳೆಸಿಕೊಂಡಿದ್ದರೆ ನಾನು ಹೋದಾಗ ಎಲ್ಲರೂ ಮೆಚ್ಚಿವಂತಹ ಸೇವೆ ಕೊಡುತ್ತಿದ್ದೆ, ಇಲ್ಲದಿದ್ದರೆ ವ್ಯತಿರಿಕ್ತವಾದ ಸೇವೆ ನನ್ನಿಂದ ಬರುತ್ತಿತ್ತು. ಏನೇ ಆದರೂ ಮಂದಿ ಮೆಚ್ಚುವ ಸೇವೆ ಸದಾ ಮಾಡಬೇಕೆಂಬುದೇ ನನ್ನ ಪರಮೋಧ್ಯೇಯವಾಗಿತ್ತು, ಮತ್ತು ಈಗಲೂ ಅದು ಹಾಗೇ ಇದೆ.

ಮಂದಿಗೆ ಒಳ್ಳೆಯದನ್ನು ಮಾಡಿ ಹೆಸರು ಸಂಪಾದಿಸುವ ಉಮೇದು ಯಾರಿಗೆ ಇರಲ್ಲ ನೀವೇ ಹೇಳಿ? ಅದು ಎಲ್ಲರಲ್ಲೂ ವಯಸ್ಸಿನ ತಾರತಮ್ಯವಿಲ್ಲದೆ, ಜಾತಿಮತಗಳ ಭೇಧವಿಲ್ಲದೆ, ಬಡವ ಬಲ್ಲಿದನೆಂಬ ವಿಂಗಡಣೆಯಿಲ್ಲದೆ ಎಲ್ಲರನ್ನೂ ಆವರಿಸಿಕೊಳ್ಳುವ ಕಾಯಿಲೆ ತಾನೇ? ಅಲ್ಲವಾ ಮತ್ತೆ? ಈ ಕಾಯಿಲೆ ಹೇಗೆಂದರೆ, ನಿನ್ನ ಪಾತ್ರ ಇಂಥದೇ ಮಗಾ ಎಂದು ಹೇಳಿ ಯಾರದೋ ಗರ್ಭವನ್ನು  ಸೀಳಿಕೊಂಡು ಹೊರಬರುವಂತೆ ಮಾಡುವ ಆ ಭಗವಾನು ದೇವಾನುದೇವತೆಗಳನ್ನೂ ಬಿಟ್ಟಿಲ್ಲ ಎಂದರೆ ನೀವು ನಂಬಲೇಬೇಕು. ಅಷ್ಟಿಲ್ಲದಿದ್ದರೆ ದೇವರು ಅಷ್ಟೊಂದು ಅವತಾರಗಳನ್ನು ಎತ್ತುತ್ತಿದ್ದರಾ? ತನ್ನ ಪವಾಡ ತೋರಿಸಿ ದುಷ್ಟ ಸಂಹಾರ ಮಾಡುತ್ತಿದ್ದರಾ? ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಎಂಬ ಬಿರುದನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದ್ದರಾ? ಆ ದೇವರೂ ಕೂಡ ತನ್ನ ಇರುವಿಕೆಯನ್ನು ತೋರ್ಪಡಿಸಲು, ಅವತಾರಗಳನ್ನೆತ್ತಿದ್ದು ಅವತಾರವಲ್ಲದೇ, ಈ ಗುರಿತಿಸಿಕೊಳ್ಳಬೇಕು ಎನ್ನುವ ಕಾಯಿಲೆಯಲ್ಲದೇ ಮತ್ತಿನ್ನೇನು? ನೀವೇನಂತೀರಿ?

ಅದನ್ನು ನೀವು ಚಟವೆನ್ನಿ, ಕಾಯಿಲೆಯೆನ್ನಿ. ಅದು ನನ್ನನ್ನೂ ಬಿಟ್ಟಿಲ್ಲ ಮತ್ತೆ! ನನಗೂ ಮಂದಿಗೆ ನಾಲ್ಕಾಸು ಒಳ್ಳೆಯದನ್ನು ಮಾಡಿ ಶಬ್ಬಾಸ್ಗಿರಿ ಗಿಟ್ಟಿಸಿಕೊಳ್ಳಬೇಕೆನ್ನುವುದು ಮೊದಲಿನಿಂದಲೂ ಇದೆ. ಅದಕ್ಕಾಗಿ ನಾನು ಪಟ್ಟ ಪಾಡಿಗಳು ಒಂದಾ ಎರಡಾ? ನಾನು ನೀಡುವ ಸೇವೆಯಿಂದ ಒಳ್ಳೆಯದಾಗುತ್ತದೆ ಎಂದು ಮಂದಿಗೆ ಯಾವಾಗ ತಿಳಿಯಿತೋ, ಅಂದಿನಿಂದ ಇಂದಿನ ತನಕ ಅವರು ಕರೆದಲ್ಲಿಗೆ ನಾನು ಹೋಗಬೇಕು, ಕರೆವ ಸಮಯಕ್ಕೆ ಸರಿಯಾಗಿ ಹೋಗಬೇಕು, ಅವರು ಎಷ್ಟು ಬಯಸುತ್ತಾರೋ ಅಷ್ಟು ಸೇವೆ ನೀಡಬೇಕು. ಸ್ವಲ್ಪ ಜಾಸ್ತಿಯಾದರೂ ಕಷ್ಟ, ತುಸುವೇ ಹೆಚ್ಚಾದರೂ ಕಷ್ಟ. ಯಾಕಾದರೂ ಇವನು ಬಂದು ಹೀಗೆ ಮಾಡಿದ ಎಂದು ನನ್ನನ್ನೇ ಮೂದಲಿಸುತ್ತಾರೆ. ನನ್ನ ಕಷ್ಟ ಯಾರಿಗೆ ಹೇಳಿಕೊಳ್ಳಲಿ? ನನ್ನ ಮನಸನ್ನು ಅರ್ಥ ಮಾಡಿಕೊಂಡವರು ಯಾರಿದ್ದಾರೆ? ಒಳ್ಳೆಯದನ್ನು ಮಾಡಿದವನಿಗೆ  ಈ ಮಂದಿ ಗುಡಿಗೋಪುರಗಳನ್ನು ಕಟ್ಟುತ್ತಾರೆ, ಹಾಲುತುಪ್ಪಗಳಿಂದ ಅಭಿಷೇಕ ಮಾಡುತ್ತಾರೆ, ಮೂರ್ತಿ ನಿಲ್ಲಿಸುತ್ತಾರೆ, ಸುತ್ತಲೂ ನೆರೆದು ಭಜನೆ ಮಾಡುತ್ತಾರೆ, ಏರಿದವನ್ನು ಮತ್ತಷ್ಟು ಅಟ್ಟಕ್ಕೆ ಏರಿಸುತ್ತಾರೆ, ಸುತ್ತಲೂ ವಂದಿಮಾಗದಿರ ಗುಂಪು ಹುಟ್ಟಿಕೊಳ್ಳುತ್ತದೆ. ಈ ಮಂದಿಗೆ ಒಳ್ಳೆಯದನ್ನು ಮಾಡಿದವ ಸಾಕ್ಷಾತ್ತ್ ದೇವರೇ ಆಗಿಬಿಡುತ್ತಾನೆ. ಒಳ್ಳೆಯದನ್ನು ಮಾಡಿ ಒಳ್ಳೆಯವನು ಎನಿಸಿಕೊಳ್ಳುವುದು ತಪ್ಪಲ್ಲ ಬಿಡಿ. ಆದರೆ ಅವರು ಒಳ್ಳೆಯತನಕ್ಕೆ ವ್ಯಯಿಸುವ ದ್ರವ್ಯ ಮಾತ್ರ ಒಳ್ಳೆಯ ಮೂಲದ್ದಾಗಿದ್ದರೆ ಸಾಕು. ಆದರೆ ಈ ರೀತಿ ಒಳ್ಳೆಯ ಮಾರ್ಗದಲ್ಲಿ ದುಡಿದು, ಯಾರಿಗೂ ಅನ್ಯಾಯವಾಗದಂತೆ ಗಳಿಸಿದ ಸಂಪತ್ತನ್ನು ಹೆಸರು ಮಾಡಲಿಕ್ಕೆ ಎಷ್ಟು ಮಂದಿ ಬಳಸುತ್ತಾರೆ ಹೇಳಿ ನೋಡುವ? ಕೇವಲ ಬೆರಳೆಣಿಕೆ ಮಂದಿ ಮಾತ್ರ ಸಿಕ್ಕಾರು. ಎಲ್ಲಾದರೂ ಹುಡುಕಿ ನೋಡಿ, ನಾನು ನನ್ನನ್ನು ಅಟ್ಟಕ್ಕೇಸಿರಿ ಎಂದು ಮಂದಿಯನ್ನು ಕೇಳಿದ್ದುಂಟಾ ಎಂದು? ಒಂದೇ ಒಂದು ಸಾಕ್ಷ್ಯ ತೋರಿಸಿ ನನ್ನನ್ನು ಹೊತ್ತುಕೊಂಡು ಅಡ್ಡಪಲ್ಲಕ್ಕಿಯಲ್ಲಿ ಅಡ್ಡಾಡಿಸಿ ಎಂದು ಹೇಳಿದ್ದು? ನನ್ನ ಪುತ್ಥಳಿ ನಿರ್ಮಿಸಿ ಪೂಜೆ ಹೋಮಹವನ ಮಾಡಿ ಎಂದು ಕೇಳಿದ್ದು? ಉಹುಂ! ನಾನು ಇದ್ಯಾವುದನ್ನೂ ಕೇಳಿಲ್ಲ, ಕೇಳುವುದೂ ಇಲ್ಲ. ಏನೋ ನನ್ನಿಂದಾದ ಸೇವೆ ಮಾಡಿ ಗುರುತಿಸಿಕೊಳ್ಳುವ ಚಿಕ್ಕ ಹಪಹಪಿ ನನ್ನಲ್ಲಿದೆ ಎಂಬುದು ಬಿಟ್ಟರೆ ನನಗ್ಯಾವ ಮಹತ್ತರ ಆಸೆಯೂ ಇಲ್ಲ. ಮಂದಿಯ ನಿಷ್ಕಲ್ಮಶ ಸೇವೆ ಮಾಡಿ ಈಗಿರುವ ಮತ್ತು ಮುಂದಿನ ಜನಾಂಗವನ್ನೂ ಸೇರಿಸಿ ಅವರನ್ನು ಸದಾ ಕಾಲ ತಣ್ಣಗೆ ಕಾಯುವ ಹಂಬಲ ನನ್ನದು.

ಆದರೆ ಬಿಡುತ್ತಾರೆ ಅಂದುಕೊಂಡಿರಾ ಈ ಮಂದಿ ನನ್ನ ಪಾಲಿನ ಕೆಲಸ ನನ್ನ ಪಾಡಿಗೆ ನಾನು ಮಾಡಲು? ಉಹುಂ ಬಿಡುವುದಿಲ್ಲ! ನನ್ನ ಪಾಲಿನ ಕೆಲಸವನ್ನು ಮಾಡಲು ನನಗೆ ಅವರಾಗಿಯೇ ಅಡ್ಡಿ ಆತಂಕ ತರುತ್ತಾರೆ. ಸಂಪದ್ಭರಿತ ಅರಣ್ಯ ಮಟ್ಟಸವಾಗಿ ಕಡಿದು ಮೊದಲು ಅಲ್ಲಿರುವ ಅರಣ್ಯ ವಾಸಿಗಳಾದ ಪ್ರಾಣಿ ಪಕ್ಷಿ ಕ್ರಿಮಿ ಕೀಟ ಹುಳು ಹುಪ್ಪಟೆಯನ್ನು ನಾಶ ಮಾಡುವುದರ ಜೊತೆಗೆ ಅಮೂಲ್ಯವಾದ ಸಂಪತ್ತಿನ ಕೊಳ್ಳೆ ಹೊಡೆಯುತ್ತಾರೆ. ಉಳ್ಳವರ  ಪಾಲಿನ ಮತ್ತಷ್ಟು ಆಸೆ ಆಕಾಂಕ್ಷೆ ಪೂರೈಸುತ್ತಾರೆ ಅಷ್ಟೇ. ಪಾಪ! ಇರಲು ನೆತ್ತಿ ಮೇಲೆ ಸೂರಿಲ್ಲದ, ಒಂದೊತ್ತು ತಿನ್ನಲು ಅನ್ನವಿಲ್ಲದ  ಜನ ಇವರಿಗೆ ಕಾಣಿಸುವುದೇ ಇಲ್ಲ. ತಾಯಿ ಪ್ರಕೃತಿಯೇ ನಾಶವಾದರೆ ನನ್ನ ಪಾಲಿಗೆ ಅದು ಮರಣಶಾಸನವೇ ಸರಿ. ಪ್ರಕೃತಿಯನ್ನು ವಿನಾಶದಂಚಿಗೆ ತಳ್ಳುವ ಮೂಲಕ ಮಂದಿ ತಮ್ಮ ಮೇಲೆ ತಾವೇ ಕಲ್ಲುಚಪ್ಪಡಿ ಎಳೆದುಕೊಳ್ಳುತ್ತಾರೆ. ಮುಂದುವರಿದು, ಉಳಿದ ನದಿ ಕೆರೆ ಕುಂಟೆಗಳ ಜಾಗವನ್ನು ಒತ್ತುವರಿ ಮಾಡಿ ಕತ್ತೆತ್ತಿ ನೋಡಿದರೂ ಕಾಣದಷ್ಟೆತ್ತರದ ಮುಗಿಲು ಮಹಲುಗಳನ್ನು ನಿರ್ಮಿಸುತ್ತಾರೆ. ಮತ್ತೂ ಮುಂದುವರಿದು ಉಳಿದ ಸಂಪನ್ಮೂಲಗಳಾದ ಬೆಟ್ಟ ಬಂಡೆಯನ್ನು ಐಷಾರಾಮಿ ಕಾರುಗಳಲ್ಲಿ ಓಡಾಡುವ ದೊರೆಗಳಿಗೆ ತೊಂದರೆಯಾಗದಿರಲೆಂದು ರಸ್ತೆ ನಿರ್ಮಿಸುವುದಕ್ಕಾಗಿಯೋ, ತಮ್ಮ ತಮ್ಮ ಮನೆಗಳ ಒಪ್ಪ ಒರಣ ಮಾಡಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶನಕ್ಕಿಡುವ ಸಲುವಾಗಿ ತಾವು ಕಟ್ಟುವ ಹೊಸ ಮನೆಗೆ ನೆಲ ಹಾಸಲೆಂದೋ ಬಲಿ ಹಾಕುತ್ತಾ ಇನ್ನುಳಿದ್ಯಾವುದಿದೆ ಹಾಳು ಮಾಡಲು ಎಂದು ಹೊಸ ಪಂಥ ಯೋಚಿಸುತ್ತಾರೆ. ಎಲ್ಲೆಲ್ಲಿ ನೋಡಿದರೂ ಉಕ್ಕಿ ಹರಿದು ಚಿಮ್ಮುತ್ತಿದ್ದ ನೀರಿನ ಸೆಲೆಗೇ ಕಂದರ ಕೊರೆದು ಅದರ ನೆಲೆಯನ್ನೇ ಆರಿಹೋಗುವಂತೆ ಮಾಡುತ್ತಾರೆ. ಕೇವಲ ಹತ್ತಾರು ಅಡಿಗೆ ಸಿಗುತ್ತಿದ್ದ ಅಂತರ್ಜಲ ಈಗ ಸಾವಿರಾರು ಅಡಿ ಕೊರೆದರೂ ಸಿಗುತ್ತಿಲ್ಲವೆಂದರೆ ಈ ಮಂದಿಯ ಹಕೀಕತ್ತು ಎಂಥದ್ದಿರಬಹುದು ನೀವೇ ಯೋಚಿಸಿ.

ಇಷ್ಟಕ್ಕೇ ಸುಮ್ಮನಿದ್ದರಾ ಮಂದಿ? ಉಹುಂ! ನಾನು ಇರುವ ಜಾಗದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕಾದವರು, ಶ್ರೀಕೃಷ್ಣ ಕಟ್ಟಿಸಿದ ಗೋಮಾಳದಲ್ಲಿರಬೇಕಾದ ಜಾನುವಾರುಗಳನ್ನು ತಂದು ಅದು ತೃಪ್ತಿಪಟ್ಟು ಇವರಿಗೆ ನಾಲ್ಕು ಮಣ ಹೆಚ್ಚಿಗೆ ಹಾಲು ಕೊಡುವ ತನಕ, ಒಂದೇ ದಿನದಲ್ಲಿ ಗದ್ದೆಯ ಕೆಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸುವ ಶಕ್ತಿ ಬರುವ ತನಕ ಅದಕ್ಕೆ ಸ್ನಾನ ಮಾಡಿಸಿ ನಾನಿರುವ ಜಾಗವನ್ನು ಕೊಳಕು ಮಾಡುತ್ತಾರೆ. ತಮ್ಮ ಕೊಳಕು ಬಟ್ಟೆಯನ್ನಲ್ಲದೆ, ಶೌಕವನ್ನೂ ನನ್ನಲ್ಲಿ ವಿಲೀನಗೊಳಿಸಿ ಕಲ್ಮಶ ಮತ್ತಷ್ಟು ಹೆಚ್ಚುವಂತೆ ಮಾಡುತ್ತಾರೆ. ತಮ್ಮ ಮನೆ ಪೂಜೆಹೋಮಗಳಲ್ಲಾದ, ದೇವರ ಪೂಜೆಯ ನಂತರ ಬಳಸಿ ಬಿಸಾಡುವ ಹೂ ಕಸ ಕಡ್ಡಿಯನ್ನು, ಬಾಳೆಲೆಯನ್ನು ತಂದು ನನ್ನ ಜಾಗದಲ್ಲಿ ಹಾಕಿ ಅದರಲ್ಲಿರುವ ಜಲಾಚರಗಳಿಗೆ ತೊಂದರೆ ತಂದೊಡ್ಡುತ್ತಾ, ಕಾರ್ಕಾನೆಗಳ ವಿಷಯುಕ್ತ ಮಾಲಿನವನ್ನು ನನ್ನೊಳಗೆ ಹರಿದುಬಿಡುತ್ತಾರೆ. ಇನ್ನು ನಾನೆಲ್ಲಿ ಉಳಿಯಬೇಕು? ನನಗೆ ಉಳಿಗಾಲವೆಲ್ಲಿ? ಈ ಮಂದಿ ಮಾಡುವ ಅನಾಚಾರಗಳೆಲ್ಲವನ್ನೂ  ಸಹಿಸಿಕೊಂಡು ನನಗೂ ಸಾಕಾಗಿ ಹೋಗಿದೆ. ಆದರೂ ಅವರ ಮೇಲಿರುವ ಸೇವೆ ಮಾಡುವ ಮನೋವೃತ್ತಿ ನನ್ನಲ್ಲಿ ಒಂಚೂರೂ ಕಡಿಮೆಯಾಗಿಲ್ಲವೆಂದರೆ ನೀವು ನಂಬಲೇಬೇಕು!

ಬರುಬರುತ್ತಾ ಪರಿಸ್ಥಿತಿ ಹೇಗಾಗಿದೆ ಎಂದರೆ ನಾನುಳಿದುಕೊಳ್ಳುವ ಜಾಗ ಕೆರೆಕುಂಟೆ ಬರಿದಾಗಿದ್ದರೆ ಅದನ್ನೂ ಬಿಡದ ಈ ಮಂದಿ, ಅದನ್ನು ಅಕ್ರಮವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಭೂಪರಿವರ್ತನೆ ಮಾಡಲು ಮುಂದಾಗಿರುವುದು! ನಾನು ಬಂದಾಗ ಉಳಿಯಲು ಜಾಗವೇ ಇರದಿದ್ದರೆ ನಾನು ಇಲ್ಲಿಗೆ ಬಂದು ಮಂದಿಗೆ ಅನಂತ ಸೇವೆ ಮಾಡುವುದಾರೂ ಹೇಗೆ? ಹೋಗಲಿ ನಾನು ಬರುವುದಾದರೂ ಸಾಧ್ಯವಾದೀತೆ? ಚಿಂತೆ ಮಾಡಬೇಕಾದ ಮಂದಿ ನಿದ್ದೆಯಲ್ಲಿ ತೂಕಡಿಸುತ್ತಾ ಒಬ್ಬರ ಕಾಲನೊಬ್ಬರು ಎಳೆಯುತ್ತಾ ಕಾಲಹರಣ ಮಾಡುತಲಿದ್ದಾರೆ. ಯಾವುದು ಸ್ವಾಮಿ ಅಭಿವೃದ್ಧಿ? ತಾನಾಗೇ ಹುಟ್ಟಿ ಬೆಳೆದು ಹಲವು ದಶಕಗಳಿಂದ ತಂಪಾದ ಗಾಳಿ ನೆರಳು ನೀಡುವ ಮರಗಳನ್ನು ಕಡಿಯುವುದಾ? ಕಣ್ಣಿಗೆ ಕಾಣದಂತೆ ಒಳಗೊಳಗೇ ಅರಣ್ಯ ಕಡಿದು ನಾಶ ಮಾಡುವುದಾ? ಅದರಲ್ಲಿರುವ ಅಗಣಿತ ಸಂಪತ್ತನ್ನು ತನ್ನ ಉಳಿವಿಗೋಸ್ಕರ ಬಲಿ ಕೊಡುವುದಾ? ವನ್ಯ ಮೃಗಗಳನ್ನು ಪ್ರಾಣಿಪಕ್ಷಿಗಳನ್ನು ತನ್ನ ಬೇಟೆಯ ತೆವಲು ತೀರಿಸಿಕೊಳ್ಳಲು, ನಾಲಗೆಯ ಚಪಾಲವಾರಿಸಿಕೊಳ್ಳಲು ಕೊಲ್ಲುವುದಾ? ಹಿರಿಯರು ಮಾಡಿಟ್ಟ ಬಂಗಾರ ಬೆಳೆವ ಭೂತಾಯಿಯನ್ನು ಅನ್ಯರಿಗೆ ಮೂರು ಕಾಸಿಗೆ ಮಾರಿ ಪಟ್ಟಣ ಸೇರುವುದಾ? ನದಿಮೂಲವನ್ನು, ನದಿ ಪಾತ್ರವನ್ನು ಸವರುತ್ತಾ ತಾನು ತನ್ನ ಹೆಂಡಿರು ಮಕ್ಕಳಿರಲು ಬೆಚ್ಚಗಿನ ಮನೆ ಕಟ್ಟಿಸುವುದಾ? ಅನೈರ್ಮಲ್ಯೀಕಾರಣವಾಗುವ ವಿಷಯುಕ್ತ ರಾಸಾಯನಿಕವನ್ನು ಜಲದೊಡಲಿಗೆ ಹರಿದು ಬಿಡುವುದಾ? ಯಾವುದು ಸ್ವಾಮಿ ಅಭಿವೃದ್ಧಿ ಹಾಂ? ಒಂದು ತಿಳಿದುಕೊಳ್ಳಿ, ತಾನು ಯಾವುದನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲವೋ ಅದನ್ನು ನಾಶ ಮಾಡಲು ಆತನಿಗೆ ಯಾವುದೇ ಹಕ್ಕಿಲ್ಲ!

ಹೋಗಲಿ ಬಿಡಿ. ಈಗ ಅವರ ಬಗ್ಗೆ, ಮಂದಿ ಮಾಡುವ ಅನಾಚಾರದ ಬಗ್ಗೆ ಎಷ್ಟು ಹೇಳಿದರೂ ತಾವು ಮಾಡುವ ಕೆಲಸವನ್ನೇ ಮಾಡುತ್ತಿರುತ್ತಾರೆ.

ಆದರೆ ನಾನೀಗ ಹೇಳಹೊರಟಿರುವುದು ಈ ಮೇಲ್ಕಾಣಿಸಿದ ಯಾವ ವಿಷಯವನ್ನೂ ಅಲ್ಲ. ನನ್ನ ಮನದಾಳದ ಮಾತುಗಳು, ನನ್ನ ಅಂತರಾಳದಲ್ಲಿ ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳು ಮತ್ತು ಅದಕ್ಕೆ ಯಾರಿಂದಲಾದರೂ ಉತ್ತರ ಸಿಗಬಹುದೇನೋ ಎನ್ನುವ ಕಾತರವಷ್ಟೇ.

ಮೊದಲೇ ಹೇಳಿದೆನ್ನೆಲ್ಲಾ ನಾನು ಮಂದಿಗೆ ಮಾಡುವ ಸೇವೆ ಅವರವರ ಭಾವಧರ್ಮಕ್ಕನುಗುಣವಾಗಿರುತ್ತದೆ ಎಂದು? ನೋಡಿ ಏನಾಗುತ್ತದೆ ಎಂದರೆ, ಈ ಮಂದಿ ನನ್ನನ್ನು ಸುಖಾಸುಮ್ಮನೆ ಮೂದಲಿಸುತ್ತಾರೆ. ವಿನಾಕಾರಣ ದ್ವೇಷಿಸುತ್ತಾರೆ. ನಾನು ಕಾರಣನಲ್ಲದ ಅವರ ಪರಿಸ್ಥಿಗೆ ನನ್ನನ್ನು ಹೊಣೆಗಾರನನ್ನಾಗಿ ಮಾಡುತ್ತಾರೆ. ಎಲ್ಲ ಘೋರವನ್ನೂ ನಾನೇ ಮಾಡಿದೆ, ನನ್ನಿಂದಲೇ ಆಯಿತು ಎಂದು ತಿಳಿಯುತ್ತಾರೆ. ಎಲ್ಲ ಅವರ ಕಷ್ಟಕ್ಕೂ ನನ್ನನ್ನು ಭಾದ್ಯೆತೆದಾರನನ್ನಾಗಿಸುತ್ತಾರೆ. ನನ್ನ ಸೇವೆಯಿಂದ ಕೆಲವೊಮ್ಮೆ ಸಂತೃಪ್ತಿಪಡುವ ಅದೇ ಜನ, ನನ್ನನ್ನು ಅಪರಾಧೀ ಕಟಕಟೆಯಲ್ಲಿ ನಿಲ್ಲಿಸುತ್ತಾರೆ. ನೀನು ಮಾಡಿರುವುದು ಸರಿಯಾ? ಎಂದು ನನ್ನನ್ನೇ ನ್ಯಾಯ ಕೇಳುತ್ತಾರೆ. ಅಲ್ಲಾ ಸ್ವಾಮಿ ನನಗೂ ಒಂದು ಮನಸ್ಸಿದೆ, ಅದರಲ್ಲಿ ಮಂದಿಗೆ ಒಳ್ಳೆಯದು ಮಾಡುವ ಆಲೋಚನೆಯಿದೆ, ನನ್ನ ಮಸ್ತಕಕ್ಕೂ ಭಾವನೆಗಳಿವೆ, ಒಳ್ಳೆಯದ್ಯಾವುದೂ ಕೆಟ್ಟದ್ಯಾವುದೂ ಎಂದು ನಿರ್ಧರಿಸುವ ಗುಣವಿದೆ ಎಂದಾಗಲೀ ಮಂದಿ ನನ್ನ ಕುರಿತು  ಏಕೆ ಆಲೋಚಿಸುವುದಿಲ್ಲ? ಏನೋ ಕೆಲವೇ ಕೆಲವು ಮಂದಿ ಯೋಚಿಸಿದರಾಯಿತೇ? ಎಲ್ಲರೂ ಇದರ ಬಗ್ಗೆ ಗಂಭೀರವಾಗಿ ಅವಲೋಕಿಸಿ ನಿರ್ಧಾರ ಕೈಗೊಳ್ಳಬಾರದೇಕೆ? ಯಾರೋ ಕೆಲವೇ  ಕೆಲವು ಮಂದಿಗಿರುವ ಭವಿಷ್ಯದ ಚಿಂತೆ, ಮುಂದಿನ ಪೀಳಿಗೆಗಾಗಿ ಮಿಕ್ಕುಳಿದ ಕಾಲ ಕಸದಂತಷ್ಟೇ ಇರುವ ಪರಿಸರ, ನದಿ, ಕಾಡು, ಗುಡ್ಡ, ಮೇಡು, ಪ್ರಾಣಿಪಕ್ಷಿ, ಹುಳುಹುಪ್ಪಟೆಗಳನ್ನು ಸಂರಕ್ಷಿಸಿ ಕಾಪಾಡಿ ಪೊರೆಯುವ ಮುಂದಾಲೋಚನೆಯೇಕಿಲ್ಲ? ಮೇಲೆ ಹೇಳಿದ ಹಾಗೆ ಮಂದಿ ಮಾಡಬಾರದ ಅನಾಚಾರಗಳನ್ನೆಲ್ಲಾ ಮಾಡಿದಾಗ ಆಗಾಗ್ಗೆ ನಾನು ಅವರ ಮೇಲೆ ಸ್ವಲ್ಪ ಮುನಿಯುವುದುಂಟು. ಹಾಗೆ ನಾನು ಮುನಿದು ನನ್ನ ಸೇವೆಯನ್ನು ವ್ಯತಿರಿಕ್ತವಾಗಿ ಕೊಡುವುದೂ ಉಂಟು. ಹಾಗಾದಾಗ, ಕೆರೆಕುಂಟೆ ನದಿ ಶರಧಿಯಲ್ಲಿ ಪ್ರವಾಹ ಉಂಟಾಗುತ್ತದೆ. ಜಲ ಪ್ರಳಯ ಜನ್ಮ ತಾಳುತ್ತದೆ. ನದಿ ಝರಿಗಳು ಭೋರ್ಗರೆದು ಧುಮ್ಮಿಕ್ಕುತ್ತವೆ. ಸಾಗರದಲೆಗಳು ತೀರಕೆ ಬಡಿದಪ್ಪಳಿಸುತ್ತವೆ. ಎಂದೂ ಶಾಂತವಾಗಿದ್ದ ಇವುಗಳನ್ನು ನೋಡಿದ್ದ ಮಂದಿ ಈ ಪರಿ ಮತಿಗೆಟ್ಟಂತಾಡುವ ಜಲಮೂಲಗಳನ್ನು ನೋಡಿ ನನ್ನನ್ನು ದೂಷಿಸತೊಡಗುತ್ತಾರೆ. ಇದರಲ್ಲಿ ನನ್ನ ತಪ್ಪೇನು? ಮಂದಿ ಮಾಡಿದ ಅನಾಚಾರ ಅಕ್ರಮಗಳನ್ನೆಲ್ಲಾ ಸಹಿಸಿಕೊಂಡು ಅವರವರು ಮಾಡಿದ ಕೆಲಸಕ್ಕೆ ತಕ್ಕಂತೆ ನನ್ನ ಸೇವೆ ಮಾಡುತ್ತಿರುವೆನೆಲ್ಲಾ ಅದು ತಪ್ಪೇನು? ಪ್ರಕೃತಿ ವಿಕೋಪಗಳಾದಾಗ ಮಂದಿ ದಿಕ್ಕಾಪಾಲಾಗುತ್ತಾರೆ. ಅದನ್ನು ನೋಡುವ ನನಗೆ ಎಷ್ಟು ಸಂಕಟವಾಗುತ್ತದೆ ಎಂದು ಯಾರಾದರೂ ಯೋಚಿಸಿದ್ದೀರೇನು? ಆಗುವ ನೋವು, ಆಸ್ತಿಪಾಸ್ತಿ ಮನೆಮಠ ನಾಶದ ಬಗ್ಗೆ ಮಂದಿ  ಯೋಚಿಸುವರೇ ವಿನಃ, ಇದು ಏಕಾಯಿತು? ಇದರಲ್ಲಿ ನನ್ನ ಪಾತ್ರವೇನು?  ಎಂದು ಮಾತ್ರ ಯೋಚಿಸುವುದಿಲ್ಲ. ಇದಕ್ಕೆ ಕಾರಣವೇನೆಂದು ಹುಡುಕುವ ಗೋಜಿಗೇ ಹೋಗುವುದಿಲ್ಲ. ಪುನಃ ಹೀಗೆ ಮತ್ತೆ ಆಗದಂತೆ ಮಾಡಬೇಕಾಗಿರುವುದೇನು? ಎಂದು ಚಿಂತಿಸುವುದೇ ಇಲ್ಲ. ಆಗುವ ಎಲ್ಲಾ ಅನಾಹುತಗಳಿಗೆ ನನ್ನನ್ನು ಕಾರಣೀಭೂತನನ್ನಾಗಿಸಿ ತಾವು ಮಾತ್ರ ಮುಗುಮ್ಮಾಗಿ ಉಳಿದುಬಿಡುತ್ತಾರೆ. ಮಂದಿಗೆ ತಾವು ಯಾವ ಕೆಲಸ ಮಾಡಬೇಕು? ಯಾವುದು ಮಾಡಬಾರದು? ಎನ್ನುವ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ತಿಳುವಳಿಕೆಯಿದೆ. ತಿಳಿದೂ ತಿಳಿದೂ ಹೀಗೆ ಮಾಡಬಾರದ್ದನ್ನೆಲ್ಲಾ ಮಾಡಿ ಕೊನೆಗೆ ನನ್ನ ವಿರುದ್ಧವೇ ತಿರುಗಿಬೀಳುತ್ತಾರಲ್ಲ ನನಗೆಷ್ಟು  ಮರ್ಮಾಘಾತವಾಗಿರಬೇಡ? ನನ್ನಲ್ಲೂ ಇರುವ ಹೃದಯ ಅದೆಷ್ಟು ನೊಂದಿರಬೇಡ? ಸಹಿಸಿ ಸಹಿಸಿ ಕೊನೆಗೆ ಈ ಅನಾಚಾರ ಅಕ್ರಮವನ್ನು ತಡೆಯಲಾಗದೆ ಮಂದಿಗೆ ಸ್ವಲ್ಪ ಚುರುಕು ಮುಟ್ಟಿಸಲು ಹೋದರೆ ನನಗೇ ಈ ಪರಿ ಪರಿಭ್ರಮಣೆಗೊಳಪಡಿಸುವ ಇವರ ಕುತಂತ್ರಕ್ಕೆ ನಾನೇನನ್ನಬೇಕು ನೀವೇ ಹೇಳಿ?

ಬಿಡಿ ನನ್ನ ಕಥೆಯನ್ನು ಹಂಚಿಕೊಳ್ಳಲು, ನನ್ನ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು, ಯಾರಿಗೂ ಪುರುಸೊತ್ತಿಲ್ಲ. ಮಂದಿ ತಾವು ಸಮಯದ ಹಿಂದೆ ಬಿದ್ದಿದ್ದಾರೆ. ಕಾಲನ ಕುದುರೆಯ ಸ್ಪರ್ಧೆಗೆ ಇಳಿದು ದುಡ್ಡು ಮಾಡುವುದೊಂದನ್ನೇ ತಮ್ಮ ಧ್ಯೇಯವನ್ನಾಗಿ ಪರಿಗಣಿಸಿ, ತಾವು ಚಿಕ್ಕಚಿಕ್ಕ ಸಂತೋಷಗಳನ್ನನುಭವಿಸದೇ, ಜೊತೆಯಲ್ಲಿರುವರಿಗೂ ಅದರ ಸವಿಯನ್ನುಣಬಡಿಸದೆ ಓಡುತ್ತಲೇ ಇದ್ದಾರೆ. ಅವರು ಓಡಲಿ ಬಿಡಿ. ಅವರಿಗೆ ನಾನು ಮತ್ತು  ನನ್ನ ಅಸ್ತಿತ್ವದ ಬಗ್ಗೆ ಪರಿವೆಯೇ ಇಲ್ಲ. ಇನ್ನು ಮಿಕ್ಕುಳಿದವರಲ್ಲಿ ನನ್ನ ಬಗ್ಗೆ ಚಿಂತಿಸಿ ಯೋಚಿಸುವವರಿಗೆ ಅಂದುಕೊಂಡಿದ್ದನ್ನು ಕಾರ್ಯಗತಕ್ಕೆ ತರಲು ಈ ಅನಾಗರೀಕ ಆರಾಜಕತೆಯಿಂದ ಕೂಡಿದ ಈ ಸಮಾಜ ಬಿಡುವುದಿಲ್ಲ. ಯಾವುದೋ ದೇವರದಯೆ, ನೀವಾದರೂ ಸಿಕ್ಕಿದಿರೆಲ್ಲಾ ನನ್ನ ಮಾತುಗಳನ್ನು, ನಾನು ಒಳಗೊಳಗೇ ಮನುಷ್ಯ ಭೂಮಿ ಮೇಲೆ ಜನುಮ ತಾಳಿದಾಗಿನಿಂದಲೂ ಅನುಭವಿಸಿಕೊಂಡು ಬರುತ್ತಿರುವ ವೇದನೆಯನ್ನು ಕೇಳಲು? ನನಗೆ ಅಷ್ಟು ಸಾಕು.

ಹಾಂ! ನಾನ್ಯಾರೆಂದು ನಿಮಗೆ ಹೇಳಲೇ ಇಲ್ಲವಲ್ಲವೇ? ನನ್ನನ್ನು "ಮಳೆ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
೧೮ ೦೮ ೨೦೧೭

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...