ಕಂಬಾರರು ತಮ್ಮ ಗಂಭೀರ ಸಾಹಿತ್ಯ, ಜಾನಪದ ರಚನೆಗಳು, ಚಾರಿತ್ರಿಕ ನಾಟಕ ಮತ್ತು ಕಾವ್ಯಗಳ ನಡುವೆ ರಚಿಸಿರುವ ಪ್ರಸಂಗದಂತಿರುವ ಆದರೆ ಪ್ರಸಂಗದಲ್ಲೂ ವಿವಿಧ ಆಯಾಮಗಳಿರುವ ಸಣ್ಣ ಕಥೆಯೇನೆಂದರು ಸರಿಯೇ ಅಥವಾ ಕಿರುಗಾದಂಬರಿ ಎಂದರೂ ಸರಿಯೇ ಎನ್ನಬಹುದಾದ ರಚನೆಯೇ "ಜೀಕೆ ಮಾಸ್ತರರ ಪ್ರಣಯ ಪ್ರಸಂಗ".
ಜೀವನದಲ್ಲಿ ಬದಲಾವಣೆ ಎನ್ನುವುದು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಯಾವ ರೂಪದಲ್ಲಾದರೂ ಯಾರ ಮುಖಾಂತರದಲ್ಲಾದರೂ ಬಯಸಿದರೂ ಬಯಸದೇ ಇದ್ದರೂ ಇಷ್ಟವಿದ್ದರೂ ಇಲ್ಲದಿದ್ದರೂ ಒಪ್ಪಿಗೆಯಿದ್ದರು ಇಲ್ಲದಿದ್ದರೂ ಬಂದೇ ಬರುತ್ತದೆ ಮತ್ತು ನಾವದನ್ನು ನೋಡುವ ಬಗೆಯಿಂದ ಬಂದ ಬದಲಾವಣೆ ನಮಗೆ ಒಗ್ಗುವಂಥದ್ದೋ ಅಲ್ಲವೋ ಎಂಬುದನ್ನು ನಿರ್ದೇಶಿಸಬಹುದಾಗಿದೆ. ಬದಲಾವಣೆ ತರುವ ಆಯಾಮಗಳು ಆಯಾ ವ್ಯಕ್ತಿಯ ಅಭಿರುಚಿಗನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. ಒಬ್ಬನು ಅದನ್ನು ಸ್ವೀಕರಿಸುವ ಬಗೆಗೂ ಇನ್ನೊಬ್ಬನು ಅದನ್ನು ಕಾಣುವ ಬಗೆಗೂ ಅಜಗಜಾಂತರ ವ್ಯತ್ಯಾಸ ಕಾಣುವುದು ಆಯಾ ಮನುಶ್ಯನಲ್ಲಿ ಇರುವ ಮನೋಭೇಧ ಕಾರಣವೇ ಹೊರತು ಬದಲಾವಣೆಯದಲ್ಲ. ಅತಿವೃಷ್ಟಿಯಾಗಲಿ ಅನಾವೃಷ್ಟಿಯಾಗಲಿ ಒಂದೇ ಸಮ ಬರುತ್ತದೆ ಒಬ್ಬನಿಗೆ ಹೀಗೆ ಇನ್ನೊಬ್ಬನಿಗೆ ಹಾಗೆ ಎಂದಲ್ಲ. ಬಂದ ಬದಲಾವಣೆಯನ್ನು ಸ್ವಾಭಾವಿಕವಾಗಿ ಸ್ವೀಕರಿಸಿ ನಮ್ಮನ್ನು ಜ್ಞಾನದೆಡೆ ಮುನ್ನಡೆಯುವ ಹಾಗೆ ಸಾಣೆ ಹಿಡಿಯುತ್ತಿರಲೇ ಬೇಕು ; ಬದಲಾವಣೆ ನಮಗಿಷ್ಟವಿರಲಿ ಇಲ್ಲದಿರಲಿ. ಹಾಗೆ ಬದಲಾವಣೆಗೆ ಒಗ್ಗಿಕೊಂಡವನು ದಡ ಸೇರುತ್ತಾನೆ, ಒಗ್ಗಿಕೊಳ್ಳದವನು ಇದ್ದಲ್ಲೇ ಮಡುಗಟ್ಟಿ ಕೊಳೆಯುತ್ತಾನೆ.
ಹಾಗೆ ಬಂದ ಬದಲಾವಣೆಯನ್ನು ತನ್ನ ನಂಬಿಕೆಗೆ ಕಾರ್ಯವೈಖರಿಗೆ ತಾನು ಪ್ರತಿಪಾದಿಸುವ ಸಿದ್ದಾಂತಕ್ಕೆ ಬಲಿಕೊಡಲಾಗದೆ ಕೆಟ್ಟು ಕೊನೆಯಲ್ಲಾದರೂ ಪುಣ್ಯವೆಂಬಂತೆ ದಡ ಸೇರುವ ಮಾಸ್ತರನ ಪ್ರಸಂಗವೇ ಇದು.
ಜೀಕೆ ಮಾಸ್ತರರು ತಮ್ಮ ಕಟ್ಟುನಿಟ್ಟಿಗೆ ಶಿಸ್ತಿಗೆ ಹಿಂದಿನಿಂದ ಬಂದ ಆಚರಣೆಗೆ ಸಂಪ್ರದಾಯಕ್ಕೆ ಎಂದೂ ರಾಜಿ ಮಾಡಿಕೊಂಡವರಲ್ಲ. ಎಷ್ಟೆಂದರೆ ಅವರು ಸಣ್ಣ ಶಾಲೆಯನ್ನು ಕಾಲೇಜಾಗಿ ಪರಿವರ್ತಿಸುವ ಹಂತದ ಪ್ರಕ್ರಿಯೆಯಿಂದ ಹಿಡಿದು ಅದರ ಪ್ರಿನ್ಸಿಪಾಲರಾಗಿ ಆಡಳಿತ ನಡೆಸುವ ತನಕ, ಮನೆಯಲ್ಲಿ ತಪ್ಪದೇ ಪಾಲಿಸುವ ವ್ರತದ ಆಚರಣೆಗಾಗಿ ಅನಾರೋಗ್ಯಪೀಡಿತನಾದ ತಮ್ಮ ಒಬ್ಬೇ ಮಗನನ್ನು ಲಕ್ಷಿಸದೆ ಆತ ಮೃತಪಟ್ಟರೂ ತಿಳಿಯಲಾಗದ ತನಕ, ಶಾಲಾ ಮಾಸ್ತರರಾಗಿದ್ದಾಗಿನಿಂದಲೂ ಈಗ ಪ್ರಿನ್ಸಿಪಾಲರಾದರೂ ತಮ್ಮ ಉಡುಗೆಯನ್ನು ಬದಲಿಸದೇ ಒಂದೇ ರೀತಿ ಉಡುವ ತನಕ, ತಮ್ಮ ಹೆಂಡತಿಗೆ ಸ್ವಲ್ಪವಾದರೂ ಮಿತಿಮೀರದ ವಿನಾಯಿತಿ ಕೊಟ್ಟಿದ್ದಲ್ಲಿ ಆಕೆಯೂ ಎಲ್ಲ ಸಾಮಾನ್ಯ ಗೃಹಿಣಿಯಂತೆ ಜೀವನ ನಡೆಸಲು ಆಗದ್ದನ್ನು ತಮ್ಮ ಠಾಕುಠೀವಿಯಿಂದ ತಡೆಹಾಕುವ ತನಕ, ಕಾಲೇಜಿನಲ್ಲಿ ಹೊಸಪೀಳಿಗೆಯ ಯುವಕಯುವತಿಯರ ಸಾಮಾನ್ಯ ನಡೆನುಡಿಯನ್ನು ವೇಷಭೂಷಣವನ್ನು ಕಾಲಕೆಟ್ಟಿತು ಎಂದು ತಮ್ಮ ವಕ್ರದೃಷ್ಟಿಯಲ್ಲಿ ನೋಡುವ ತನಕ...ಹೀಗೆ ಹೇಳುತ್ತಾಹೋದರೆ ಅದೇ ಒಂದು ದೊಡ್ಡ ಪಟ್ಟಿಯಾದೀತು.
ಜೀಕೆ ಮಾಸ್ತರರಿಗೆ ಊರಲ್ಲಿ ಮರ್ಯಾದೆಗೇನೂ ಕಡಿಮೆಯಿರಲಿಲ್ಲ. ಅವರ ಸ್ವಭಾವವೇನೇ ಇರಲಿ. ಅವರು ಮಾಡಿದ ಕೆಲಸಗಳೇ ಅವರನ್ನು ಒಬ್ಬ ಗಣ್ಯವ್ಯಕ್ತಿಯನ್ನಾಗಿ ರೂಪಿಸಿತ್ತು. ಇಂತಿಪ್ಪ ನಮ್ಮ ಮಾಸ್ತರರ ಜೀವನದಲ್ಲಿ ತಾನು ಊಹಿಸಲಾಗದ ಬದಲಾವಣೆಯ ಗಾಳಿಯೊಂದು ರೋಜಾ ಎನ್ನುವ ವಿದ್ಯಾರ್ಥಿನಿಯ ಮೂಲಕ ಬೀಸತೊಡಗುತ್ತದೆ. ಮೊದಮೊದಲು ಅವರದನ್ನು ಒಪ್ಪುವುದಿಲ್ಲ. ಆದರೆ ಬರುಬರುತ್ತಾ ಅವರಲ್ಲಿ ಬದಲಾವಣೆಯಾಗಿ ರೋಜಾಳನ್ನು ಬಿಟ್ಟರೆ ಇನ್ನಿಲ್ಲವೆಂಬಂತಾಗುತ್ತಾರೆ. ಕಾಲೇಜಿನ ಯೂನಿಯನ್ ನಾಯಕ ಗಿರ್ರೆಪ್ಪ ಮತ್ತು ರೋಜಾ ಮಾಡುವ ಮೋಜಿನ ಸಂಗತಿ ಇದೆಂದು ಮಾಸ್ತರಿಗೆ ಆಗ್ಗೆ ತಿಳಿಯುವುದಿಲ್ಲ. ತಿಳಿದಾಗ ಅವರಲ್ಲಿನ ರೋಜಾ ಮೇಲಿನ ಪೊರೆ ಕಳಚಿ, ತಾವು ಮಾಡಿದ ತಪ್ಪಿನ ಅರಿವಾಗಿ ಜೀವನದ ಭವ್ಯ ಸಾರ್ಥಕತೆಯೆಡೆ ತಮ್ಮ ಗುರುತು ಕಾಣದಂತೆ ಅಸ್ತಿತ್ವವನ್ನೇ ಅಳಿಸಿಕೊಂಡು ಹೆಜ್ಜೆ ಹಾಕುತ್ತಾರೆ.
ಇದು ಕಾದಂಬರಿಯ ಒಟ್ಟೂ ವಿಷಯ. ಪ್ರಪಂಚದಲ್ಲಿ ಬದಲಾವಣೆಯೊಂದೇ ಶಾಶ್ವತ ಎನ್ನುವ ಸಂದೇಶವನ್ನು ಮಾರ್ಮಿಕವಾಗಿ ಸಾರುವ ಈ ಕೃತಿ, ಒಂದೇ ಗುಕ್ಕಿನಲ್ಲಿ ಓದಿಮುಗಿಸಬಹುದು.
ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್

No comments:
Post a Comment