Thursday, September 7, 2017

೨೦೧೫ರ ದೀಪಾವಳಿ ಕಥಾಸ್ಪರ್ಧೆಗೆ ಬರೆದ ಮತ್ತೊಂದು ಕಥೆಯಿದು. ಬರೆದದ್ದು "ಕನ್ನಡಪ್ರಭ " ಪತ್ರಿಕೆಗೆ.  ಓದಿಕೊಳ್ಳಿ . ವಿಶೇಷವೆಂದರೆ ಬರೆದುಕಳುಹಿಸಿದವನು ಕಥೆಗೆ ಹೆಸರನ್ನೇ ಕೊಟ್ಟಿರಲಿಲ್ಲ!!!

ಈಗಾದರೂ ಹೆಸರಿನ ಅವಶ್ಯಕತೆ ನನಗೆ ಕಾಣುವುದಿಲ್ಲವಾದ್ದರಿಂದ ಹೆಸರನ್ನು ಪುನಃ ಇಡುವ ಗೊಡವೆಗೆ ಹೋಗಿಲ್ಲ. 

ಕನ್ನಡಪ್ರಭ ದೀಪಾವಳಿ ಕಥಾ ಸ್ಪರ್ಧೆ 2015

      
 "ಆ ನನ್ನ್ಮಗಾ ಕರೆದ ಅಂತ ನಾವಲ್ಲಿಗೆ ಹೋಗ್ಬಾರ್ದಿತ್ತು ಕಣೋ. ನೋಡಿದ್ಯಲ್ಲ ತಮಾಷೆಗೆ ಮಾಡಿದ ಜೋಕನ್ನ  ಸೀರಿಯಸ್ಸಾಗಿ ತಗೊಂಡು ಹೇಗೆಲ್ಲಾ ಅವಮಾನ ಮಾಡಿ ಕಳಿಸ್ದ ಅಂತ. ಅವ್ನೊಬ್ಬ  ಕಚ್ಡಾ ಕಿತ್ತೋದ್ ನನ್ಮಗ...."
    
ಹಾಗಂತ  ನನ್ನಲ್ಲೇ ನಾನು ಎಷ್ಟು ಬೈದುಕೊಂಡರು ನನಗೆ ಬಂದಿದ್ದ ಕೋಪ ಕಡಿಮೆಯಾಗುವ ಯಾವುದೇ ಮುನ್ಸೂಚನೆ ಕಾಣಲಿಲ್ಲ. ಜೊತೆಗೆ ನನ್ನ ಸ್ನೇಹಿತ ಪ್ರಾಣಿ ಇದ್ದ. ಅವನಿಗೇನು ಹೇಳಬೇಕೋ ತಿಳಿಯದೆ ನನ್ನ ಜೊತೆ ಹೆಜ್ಜೆಹಾಕುತ್ತಿದ್ದ. ನಾವು ನಮ್ಮ ಮನೆಗೆ ವಾಪಾಸ್ ಬರಲು ಬಸ್ಸ್ ಸ್ಟಾಂಡಿಗೆ ಬರುತ್ತಿದ್ದೆವು. ಇಬ್ಬರಲ್ಲು ಕೋಪ ಮನೆಮಾಡಿತ್ತು.
     
ಬಸ್ಸ್ ಸ್ಟಾಂಡ್ ಅದೆಲ್ಲಿ ಸತ್ತು ಬಿದ್ದಿದೆಯೋ ಗೊತ್ತಿಲ್ಲ. ಎಷ್ಟು ನಡೆದರೂ ಸಿಗುತ್ತಿಲ್ಲ. ಹೆಜ್ಜೆಮೇಲೆ ಹೆಜ್ಜೆ ಹಾಕಿ ನಮ್ಮ ಕಾಲುಗಳು ಊಳಿಡಲು ಶುರುವಾಯಿತು. ಜೊತೆಗೆ ಹಸಿವು ಬೇರೆ, ಹೊಟ್ಟೆಹೋಗಿ ಬೆನ್ನಿಗೆ ಕಚ್ಚಿಕೊಂಡಿತ್ತು. ಎತ್ತ ನೋಡಿದರು ಒಂದೇ ಒಂದು ಹೋಟೆಲಾಗಲಿ ಕೊನೆಗೆ ಟೀ ಅಂಗಡಿಯಾಗಲಿ ಕಾಣುತ್ತಿಲ್ಲ. ಇದ್ದ ಒಂದೆರೆಡು ಗೂಡಂಗಡಿಗಳು ಬಾಗಿಲು ಮುಚ್ಚಿವೆ.
      
ನಾವು ನಡೆದುಬರುತ್ತಿದ್ದ ಹಾದಿಯಲ್ಲಿ ವಿದ್ಯುತ್ ಕಂಬಗಳಾಗಲಿ, ಅದರಲ್ಲಿರಬೇಕಾಗಿದ್ದ ದೀಪವಾಗಲಿ ಇಲ್ಲದೆ ರಸ್ತೆ ಪೂರ ಕತ್ತಲು ಕವಿದು ಸಂಜೆಯಾಗಿದ್ದರಿಂದ ಜೀರ್ಜಿಂಬೆಗಳು ಗುಯಗುಯ್ಯ್ಗುಡುವ ಸದ್ದು. ಎಲ್ಲೋ ಮಿಂಚುಹುಳ ರೆಕ್ಕೆಬಡಿದು ನಮಗೆ ದಾರಿ ತಪ್ಪದಂತೆ ಬೆಳಕು ಹರಿಸಿ ನಾವು ದಾರಿ ಬಿಟ್ಟು ಅಡ್ಡದಾರಿ ಹಿಡಿದಿಲ್ಲ ಎಂದು ಸಾಬೀತುಪಡಿಸುತ್ತಿತ್ತು. ರೆಕ್ಕೆ ಹುಳಗಳು ಪಟ್ಪಟ್ ಎಂದು ರೆಕ್ಕೆ ಬಡಿಯುತ್ತ ಆಗಾಗ ನಮಗೆ ತೊಂದರೆ ಕೊಡುತ್ತಿದ್ದುದು ಬಿಟ್ಟರೆ ಅಲ್ಲಿದ್ದ ಅಗಣ್ಯ ಪ್ರಕೃತಿಯಿಂದಾಗಲಿ, ಪ್ರಾಣಿಪಕ್ಷಿಕ್ರಿಮಿಕೀಟಾದಿಯಿಂದಾಗಲಿ, ಎದೆಯಲ್ಲಿ ನಡುಕ ಹುಟ್ಟೀಸುವ ಕಾವಳದಿಂದಾಗಲಿ ನಮಗ್ಯಾವ ತೊಂದರೆಯೂ ಕಂಡುಬರಲಿಲ್ಲ ಎಂಬುದೇ ನಮಗಿದ್ದ ಏಕೈಕ ಸಮಾಧಾನ.
     
ರಸ್ತೆಯೇನೋ ಅಲ್ಲಲ್ಲಿ ಸಣ್ಣಸಣ್ಣ ಹಳ್ಳ ಗುಂಡಿಯಿಂದ ಕೂಡಿದ್ದರು ಚೆನ್ನಾಗಿಯೇ ಇತ್ತು. ರಸ್ತೆ ಬಿಟ್ಟು ಕೆಳಗಿಳಿಯುವ ಧೈರ್ಯ ನಾವು ಮಾಡಲಿಲ್ಲವಾದ್ದರಿಂದ, ಜೊತೆಗೆ ಅದೆಷ್ಟೋ ಕಿಲೋಮೀಟರ್ ನಡೆದಂತನಿಸಿ ನಮಗೆ ಹಸಿವಿನ ಜೊತೆಗೆ ನೀರಡಿಕೆಯು ಶುರುವಾಗಿ ಇನ್ನೇನು ನಡೆಯಲು ಸಾಧ್ಯವಿಲ್ಲ ಆದದ್ದಾಗಲಿ ಇಲ್ಲೇ ಕುಳಿತು ಬಿಡುವ ಎಂದು ಅಂದುಕೊಳ್ಳುವಷ್ಟರಲ್ಲಿ, ದೂರದಲ್ಲೆಲ್ಲೊ ಒಂದು ಸಣ್ಣ ದೊಂದಿ ಹೊತ್ತಿ ಉರಿಯುತ್ತಿರುವುದು ಕಾಣಿಸಿತು. ಬದುಕಿತು ಬಡಜೀವ ಎಂದುಕೊಂಡು ಅವಡುಗಚ್ಚಿ ಅಲ್ಲಿಗೆ ಹೆಜ್ಜೆ ಹಾಕತೊಡಗಿದೆವು.
     
ಅದೊಂದು ಸಣ್ಣಾತಿಸಣ್ಣ ಗುಡಿಸಲೆಂದು ತಿಳಿಯಲು ಮುಂದೆ ನೇತಾಕಿದ್ದ ಸಣ್ಣ ದೊಂದಿಯ ಬೆಳಕು ನಮಗೆ ಸಹಾಯ ಮಾಡಿತು. ಒಣಗಿದ ತೆಂಗಿನಗರಿ ಹೊದಿಸಿ ಎಂಟತ್ತು ಗಳುವನ್ನು ಅಡ್ಡ ಉದ್ದ ಕೂರಿಸಿ ಕಟ್ಟಿದ್ದ ಚಿಕ್ಕ ಗುಡಿಸಲದು. ಕಟ್ಟಿ ಸುಮಾರು ವರ್ಷಗಳಾಗಿದ್ದಿರಬಹುದು. ಅದೆಷ್ಟು ಬಿರುಬಿಸಿಲು ಗಾಳಿಮಳೆಗೆ ತಲೆಯೊಡ್ಡಿನಿಂತಿದೆಯೋ ಎಂದು ಆ ಗುಡಿಸಲು ನೋಡಿದ ತಕ್ಷಣ ನನ್ನ ಅನುಭವಕ್ಕೆ ಬಂತು.
     
ಕತ್ತಲಲ್ಲಿ ದೈವದಂತೆ ಕಂಡ ಆ ಗುಡಿಸಲ ಬಳಿಗೇನೊ ನಾವು ಬಂದಾಗಿತ್ತು. ಆದರೆ ನಮಗಿದ್ದ ಪ್ರಶ್ನೆ ಈ ಕಗ್ಗತ್ತಲ ಕಾಡಲ್ಲಿ ಅದೂ ರೋಡಿಂದ ಇಷ್ಟೊಂದು ಒಳಗೆ ಯಾರು ಕಟ್ಟಿದ್ದಾರೆ ಈ ಗುಡಿಸಲನ್ನ? ಬಹುಶಃ ಇದು ಮನುಷ್ಯಮಾತ್ರರು  ಕಟ್ಟಿರುವಹಾಗೆ ಕಾಣುತ್ತಿಲ್ಲ. ಹಾಗಾದರೆ ಉರಿಯುತ್ತಿರುವ ದೊಂದಿ ಹಚ್ಚಿಟ್ಟವರು ಯಾರು? ಅಸಲಿಗೆ ಒಳಗಡೆ ಯಾರಾದರು ಇದ್ದಾರ? ಈ ತರಹೇವಾರಿ ಅನುಮಾನ ನಮಗೆ ಬರತೊಡಗಿವು. ಆದದ್ದಾಗಲಿ ನೋಡೇಬಿಡೋಣ ಎಂದು ಇಬ್ಬರು ನಿರ್ಧರಿಸಿ ಗುಡಿಸಲಿಗೆ ಗರಿಯಿಂದ ನೇಯ್ದಿದ್ದ ತಳ್ಳುಬಾಗಿಲ ಮುಂದೆ ನಿಂತು "ಯಾರಾದರು ಇದ್ದೀರಾ?" ಎಂದು ಕೇಳಿದೆವು.
     
ನಮಗೆ ಮರುತ್ತರ ಬರಲಿಲ್ಲ. ಪ್ರಾಣಿ ಮತ್ತೊಂದು ಸಾರಿ ಕೂಗಲು ಬಾಯ್ದೆರೆದ. ಅಷ್ಟರಲ್ಲಿ ಒಳಗಿಂದ ಏನೊ ತಟಕ್ಕಂತ ಬಿದ್ದಂತೆ ಸದ್ದಾಯಿತು. ಸದ್ಯ ಮನುಷ್ಯರಲ್ಲದಿದ್ದರು ಯಾವುದಾದರು ಪ್ರಾಣಿಪಕ್ಷಿಯಾದರು ಇದ್ದೀತೆಂದು ನಮಗೆ ಮನವರಿಕೆಯಾಯ್ತು. ಪ್ರಾಣಿ ಕೂಗಲು ಮೂರನೆ ಬಾರಿ ಬಾಯ್ದೆರೆದು ಕೇಳಿದ " ಯಾರಾದ್ರು ಇದ್ದೀರೋ?" ಎರಡುಮೂರು ನಿಮಿಷ ಕಳೆದರು ನಮಗೆ ಮರುತ್ತರ ಸಿಗಲಿಲ್ಲ


ನಮ್ಮ ತಾಳ್ಮೆಗೂ ಒಂದು ಮಿತಿ ಬೇಡವೇ, ಅದೂ ಇಂತ ಹೊತ್ತಿನಲ್ಲಿ? ಅಲ್ಲಿವರೆಗು ಮರೆತಂತಿದ್ದ ಕೋಪ ಮತ್ತೆ ನೆನಪಾದಂತಾಗಿ ಪ್ರಾಣಿ ಮತ್ತೊಮ್ಮೆ ಬಾಯ್ತೆರೆಯಿತು. "ಏ ನನ್ನ್ ಮಕ್ಕುಳ್ರ ಎಷ್ಟೋ ಕೂಗೋದು? ಯಾರದ್ರು ಇದ್ದೀರೊ ಅಥ್ವಾ ಸತ್ತು ದೆವ್ವವಾಗಿ ನಮ್ಮನ್ನು ಕಾಡ್ಸೋಕೆ ಅಂತ ಇಲ್ಲಿ ದೊಂದಿ ಕಟ್ಟಿದ್ದೀರೋ ಬೊಗುಳ್ರೊ" ಎಂದು ಸಿಟ್ಟಿನಲ್ಲಿ ತಾಳ್ಮೆ ಕಳಕೊಂಡವನಂತೆ ಕೇಳಿದ. ನನಗೆ ಅವನು ಈ ಮಾತಿನಮಧ್ಯೆ ದೆವ್ವ ಪಿಚಾಚಿಯಂದಿದ್ದು ನನಗೆ ಸರಿಕಾಣಲಿಲ್ಲ. ಓದಿ ವಿದ್ಯಾವಂತರಾದ ನಾವೇ ಹೀಗೆ ಮೂಡನಂಬಿಕೆ ಬಗ್ಗೆ ಅಪ್ಪಿತಪ್ಪಿಯೂ ಅದರ ಇರುವಿಕೆ ಬಗ್ಗೆ ಮಾತಾಡಿದರೆ ಹೇಗೆ ಎಂಬುದೇ ನನ್ನ ಆಕ್ಷೇಪಣೆಗೆ ಕಾರಣ. ಹಾಗಂತ ನಾನವನಿಗೆ ಹೇಳಲಿಲ್ಲ.
     
ಯಾರ ಸುಳಿವು ನಮಗಲ್ಲಿ ಕಾಣದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಅಲ್ಲಿಂದ ಹೊರಡೋಣವೆಂದು ನಾವು ನಿಶ್ಚಯಿಸಿ ನಮ್ಮ ಅದೇ ಹಸಿವು ಬಾಯಾರಿಕೆ ಸಂಕಟ ನೆನಪಿಗೆ ಬಂದು ದುಃಖಿಸುತ್ತ ಕಾಲ್ತೆಗೆಯುವ ಹೊತ್ತಿಗೆ ನಮಗೆ ಒಳಗಿಂದ ಕ್ಷೀಣ ಧನಿಯೊಂದು " ಯಾರದು?" ಎಂದದ್ದು ಕೇಳಿಸಿತು. ಅಂತೂ ಒಳಗಡೆ ಯಾರೋ ಇದ್ದಾರೆ ಎಂದನಿಸಿ ನಮಗೆ ಖುಷಿಯಾಗಿ ತಳ್ಳು ಬಾಗಿಲು ಮುಂದಕ್ಕೆ ನೂಕಿ ಒಳಗಡೆ ತಲೆಯಾಡಿಸಿದ್ದಷ್ಟೇ, ಅದೆಲ್ಲಿತ್ತೋ ಆ ಪಾಟಿ ಹೊಗೆ! ಕ್ಷಣದಲ್ಲಿ ಕಣ್ಣೆಲ್ಲಾ ಹೊಗೆ ತುಂಬಿ ಕಣ್ಣು ಖಾರವಾಗಿ ಕಣ್ಣೀರು ದಳದಳ ಎಂದು ಒಸರಿಸತೊಡಗಿತು. ನಮಗೀಗ ಏನೆಂದರೆ ಏನು ಕಾಣುತ್ತಿಲ್ಲ. ಇದೆಲ್ಲಿಬಂದು ಸಿಕ್ಕಿ ಬಿದ್ದೆ ಮತ್ತು ನಮಗ್ಯಾರು ಮರುತ್ತರ ಕೊಟ್ಟಿದ್ದು ಎಂದು ಒಟ್ಟೊಟ್ಟಿಗೆ ಯೋಚಿಸಲು ನನಗೇ ಕ್ಷಣಕಾಲ ದಿಗಿಲು ಜೊತೆಗೆ ಕೈಕಾಲು ಕಂಪನವಾದಂತಾಯ್ತು. ಅಷ್ಟರಲ್ಲಿ ಪ್ರಾಣಿ ಮಾಡಿದ ಒಳ್ಳೇ ಕೆಲಸವೆಂದರೆ, ಸ್ವಲ್ಪವೇ ತೆರೆದಿದ್ದ ತಳ್ಳುಬಾಗಿಲನ್ನು ಎರಡು ಹೆಜ್ಜೆ ಹಿಂದೆ ಹೋಗಿ ಪೂರ್ತಿ ತೆರೆದುಬಿಟ್ಟ. ಒಂದೈದು ನಿಮಿಷ ಕಳೆದಂತೆ ಅಲ್ಲಿದ್ದ ಹೊಗೆ ಚೂರುಚೂರೆ ಮರೆಯಾಗಿ ಗುಡಿಸಿಲೊಣಗಣ ಚಿತ್ರ ನಮಗೆ ಅರೆಬರೆಯಾಗಿ ಕಾಣತೊಡಗಿತು.
     
ಅಲ್ಲಾರೋ ಇರಬೇಕಲ್ಲ ಮೂಲೇಲಿ ಎಂದು ಇಬ್ಬರಿಗು ಅನ್ನಿಸತೊಡಗಿತು. ನಮ್ಮ ಮುಖದ ಭಾವನೆಗಳು ಬದಲಾಗಿ ಒಬ್ಬರ ಮುಖ ಒಬ್ಬರು ನೋಡುತ್ತ ಇರುವಾಗ ನಮಗೆ ಅಲ್ಲಿನ ಚಿತ್ರಣ ಇನ್ನು ಸ್ಪಷ್ಟವಾದಂತೆ ಅಲ್ಲಿ ಯಾರೋ ನಮ್ಮಿಬ್ಬರನ್ನು ಹೊರತುಪಡಿಸಿ ಇನ್ನ್ಯಾರೋ ಇದ್ದಾರೆ ಎನ್ನುವ ನಮ್ಮ ಅನುಮಾನ ಬಲವಾಗುತ್ತ ಬಂದು ನೋಡಿದರೆ ಅಲ್ಲಿ ಒಂದು ಮೂಲೆಯಲ್ಲಿ ಒಂದು ಮುಪ್ಪಾನುಮುಪ್ಪ ಮುದುಕಿ ನಿಂತು ತದೇಕ ಚಿತ್ತದಿಂದ ಬಿಟ್ಟಕಣ್ಣು ಬಿಟ್ಟಂತೆ ನಮ್ಮನ್ನೇ ನೋಡುತ್ತಿದ್ದಾಳೆ! ಪ್ರಾಣಿ ಆಗಲೆ ಹೇಳಿದ್ದ ದೆವ್ವ ಪಿಚಾಚಿ ಮಾತು ನಿಜವೆನ್ನಿಸತೊಡಗಿ ನನ್ನ ಸೈದ್ದಾಂತಿಕ ನಿಲುವಿನಲ್ಲಿ ಬದಲಾವಣೆ ಬರತೊಡಗಿರುವಾಗ, ಅಲ್ಲಿ ಮೂಲೇಲಿ ನಿಂತಿದ್ದ ಆ ಶರೀರದಿಂದ ಮತ್ತೊಮ್ಮೆ ಕ್ಷೀಣ ಧನಿ ಗಂಟಲೊಡೆಯಿತು.  "ಯಾರದು?" ಮನುಷ್ಯ ಮಾತ್ರರಾದವರು ಮಾತ್ರ ಕೇಳಬಹುದಾಗಿದ್ದ ಪ್ರಶ್ನೆ ಅದಾಗಿತ್ತು.  ಆಗ ಪ್ರಾಣಿ ಹೇಳಿತು
     
"ನಾವು"
     
" ನಾವೆಂದರೆ"
     
"ನಾವೆಂದರೆ ನಾವೇ!"
     
"ಅದೇ ನೀವೆಂದರೆ ಯಾರು?"
    
"ದಾರಿ ತಪ್ಪಿಬಂದವರು"
     
" ಓ! ನೀವಾ? ಹಾಗಿದ್ದರೆ ಧೈರ್ಯವಾಗಿ ಒಳಗೆ ಬನ್ನಿ"
     
"ನಾವೀಗಾಗಲೆ ಒಳಗಡೆಯೇ ಇರೋದು"
     
" ಹೌದಾ! ನಂಗೆ ಅಷ್ಟಾಗಿ ಕಣ್ಣು ಕಾಣಲ್ಲ್ರಪ್ಪ, ಬನ್ನಿ ಒಳಗೆ ನಿಸ್ಸಂಕೋಚವಾಗಿ"
     
ನಿಸ್ಸಂಕೋಚವಾ? ನಮಗಾ? ಅದೂ ಸತ್ತುಬದುಕೆದ್ದು ಬಂದಂತಿರುವ ಈ ಅಜ್ಜಿಯ ಮುಂದೆ? ನೋಚಾನ್ಸ್! ನಮ್ಮ ಪ್ರತಿಷ್ಟೆ ನಮಗೆ ಹಾಗೆ ಹೇಳಿತು. ಈಗಾಗಲೆ ಹೊಗೆ ಗುಡಿಸಲಿಂದ ಹೆಚ್ಚೂಕಡಿಮೆ ಇಲ್ಲವಾದ್ದರಿಂದ ಮತ್ತು ಕಣ್ಣುರಿ ಕಡಿಮೆಯಾಗಿ ಕಣ್ಣುಗಳು ಅಲ್ಲಿ ಹಚ್ಚಿದ್ದ ಲಾಂದ್ರದ ಬೆಳಕಿಗೆ ಒಗ್ಗಿಕೊಳ್ಳಲು ಗುಡಿಸಲಿನ ಒಳ ಚಿತ್ರಣ ಅತಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿತು. ಅದೊಂದು ಚಚ್ಚೌಕಾರದ ಹತ್ತರಿಂದ ಹದಿನೈಡಿ ಇರಬಹುದಾದ ಗುಡಿಸಲು. ಅಲ್ಲಿ ಮೂಲೆಯಲ್ಲಿ ಸುತ್ತಿಟ್ಟಿರುವ ಚಾಪೆ ಮುದುಡಿ ಮಲಗಿತ್ತು. ಇನ್ನೊಂದು ಮೂಲೆಯಲ್ಲಿ , ಮೂರುಕಲ್ಲಿನ ಒಲೆಯಮೇಲೆ ಹಸೀ ಸೌದೆಯಿಂದ ಮಡಕೆಯಲ್ಲಿ ಅಜ್ಜಿ ಬೇಯಿಸುತ್ತಿದ್ದ ಅಂಬಲಿ ಥರದ್ದೇನೊ ಕೊತಕೊತ ಸದ್ದು ಮಾಡುತ್ತಿತ್ತು.  ಅದರ ಪಕ್ಕದಲ್ಲಿ ಒಂದೆರೆಡು ಬಣ್ಣಗೆಟ್ಟ ಡಬ್ಬಗಳು, ಒಂದು ಬೆಂಕಿಪಟ್ಣ, ಎಣಿಸಿಬಿಸಾಡಬಹುದಾದಷ್ಟು ಒಂದೆರೆಡು ತಟ್ಟೆ ಲೋಟ ಅಷ್ಟೇ! ಇನ್ನು ಆ ಗುಡಿಸಲಲ್ಲಿ ಏನೆಂದರೆ ಏನೂ ಇರಲಿಲ್ಲ ; ಕೊನೆಪಕ್ಷ ಉಸಿರಾಡಲು  ಒಂದೇಒಂದು ಕಿಟಕಿಯೂ ಕೂಡ. ನಮಗೆ ಗುಡಿಸಲು ಒಂಥರ ನಿಗೂಡತೆಯ ಕೇಂದಬಿಂದುವಾಗು ಭಾಸವಾಗತೊಡಗಿತು.
    
"ಅಸೀ ಸೌದೆ ಅಲ್ವಾ ಅದ್ಕೇ ನಿಮ್ಗೆ ಕಣ್ಣುರಿ ಅತ್ಗೊಂಡಿದ್ದು " ನಮ್ಮ ಕಣ್ಣುರಿಗೆ ಕಾರಣ ಹುಡುಕಿ ಹೇಳುವವಳಂತೆ ಹೇಳಿತು ಅಜ್ಜಿ. ಸರಿ ಬಿಡು ಅಜ್ಜಿ ನೀನು ಡಾಕ್ಟರಾಗಿರಬೇಕಾದವಳು ತಪ್ಪಿ ಇಲ್ಲಿದ್ದೀಯ ಅಂತ ಅಜ್ಜಿ ಮುದುಡಿ ಮಲಗಿದ್ದ ಚಾಪೆಯನ್ನು ಹಾಸಿ ಬಂದು ಕೂರೆನ್ನುವಂತೆ ಸಂಜ್ನೆ ಮಾಡಿದಕ್ಕೆ ನಾವು ಬಂದು ಕುಳಿತೆವು. ತಳ್ಳುಬಾಗಿಲು ತೆರೆದಿದ್ದರಿಂದ ಈಗ ಅಷ್ಟಾಗಿ ಹೊಗೆಯಾಡುತ್ತಿರಲಿಲ್ಲ.
     
ಇದಾದ ನಂತರ ಅಜ್ಜಿ ಎಷ್ಟೊತಾದರು ಮಾತಾಡಲಿಲ್ಲ. ನಾವು ಏನು ಕೇಳಿದರು ಉತ್ತರ ಕೊಡುತ್ತಿರಲಿಲ್ಲ , ಸುಮ್ಮನೆ ನಮ್ಮ ಕಡೆ ನೋಡಿ ಮತ್ತೆ ನೋಟ ಒಲೆ ಮೇಲೆ ಬೀಸುತ್ತಿದ್ದರು. ನಮಗೂ ಬೇಜಾರಾಗ ಹತ್ತಿತು. ಸದ್ಯ ಅಷ್ಟಾದರು ನೆಮ್ಮದಿಯಾಗಿ ಇರುವಂತೆ ಮಾಡಿದ್ದು, ನಾವು ಒಳಗಡೆ ಬಂದು ಕುಳಿತಾಗ ಅಜ್ಜಿ ನಮಗೆ ನೀರಿನ ಗಡಿಗೆ ತೋರಿಸಿ ಒಂದು ಸಿಲ್ವಾರ್ ಲೋಟವನ್ನ ತಾನಿದ್ದಲ್ಲಿಂದಲೇ ನಮ್ಮ ಬಳಿ ನೂಕಿದರು. ಅದು ಬಂದು ನಮ್ಮ ಬಳಿ ಬಿದ್ದದ್ದೇ ತಡ, ರೇಜಿಗೆ ಬಿದ್ದವರಂತೆ ನೀರನ್ನು ಗಟಗಟ ಕುಡಿದೆವು. ನಂತರ ನಮ್ಮ ಗಂಟಲಿಗೆ ಬ್ರೇಕ್ ಬಿದ್ದಂತಾಗಿ ಸುಮ್ಮನೆ ಕುಳಿತಿರಲು, ಆಗೊಮ್ಮೆ ಈಗೊಮ್ಮೆ ನಾವು ಬಾಯ್ದೆರೆದು ಅಜ್ಜಿಯನ್ನು ಮಾತಾಡಿಸ ಹೋದರೆ ಈ ಅಜ್ಜಿ ನಮ್ಮ ಕಡೆ ಗಮನವೇ ಕೊಡುತ್ತಿಲ್ಲ! ನಮಗೆ ಗುಡಿಸಲ ಜೊತೆಗೆ ಅಜ್ಜಿಯ ವರ್ತನೆ ಕಂಡು ನಿಗೂಡತೆ ಹೆಚ್ಚಾಗುತ್ತಾ ಹೋಯ್ತು.
     
" ಸರಿ ಮಕ್ಳೇ, ಊಟಕ್ಕ್ ಬನ್ನಿ " ಅಂತು ಅಜ್ಜಿ.
     
ನಾವು ಮರುಮಾತಾಡದೆ ಚಕ್ಕೆಂದೆದ್ದು ಕೈಕೂಡ ತೊಳೆಯದೆ ಅಜ್ಜಿಯ ಮಾತು ನೆರವೇರಿಸುವಂತೆ ಅಜ್ಜಿ ಕೊಟ್ಟ ಸಿಲ್ವಾರ್ ತಟ್ಟೆಯ ಮುಂದೆ ಕೂತಿದ್ದೆವು. ಅಜ್ಜಿ ಅದೇನು ಬಡಿಸಿದರೊ ನಾವೇನು ತಿಂದೆವೊ ಒಂದು ನಮಗಂತು ಗೊತ್ತಿಲ್ಲ. ಹಸಿದಿದ್ದ ಹೊಟ್ಟೆ ತುಂಬಿಸುವುದೊಂದೇ ನಮಗಾಗ ಗೊತ್ತಿತ್ತು. ಊಟವೆಲ್ಲ ಸಾಂಗೋಪಂಗವಾಗಿ ನಡೆದ ಮೇಲೆ ನಮಗೆ ಹೋಗಿದ್ದ ಜೀವ ಮತ್ತೆ ಬಂದಂತಾಗಿ ಕೆಲವೇ ನಿಮಿಷಗಳ ಹಿಂದಿದ್ದ ಕೋಪತಾಪವೆಲ್ಲ ಕರಗಿ ನೀರಾಗಿಹೋಗಿತ್ತು. ಮನಸು ಸಮಾಧಾನದ ಅಲೆಯಲ್ಲಿ ತೇಲಾಡುವಂತಾಗುತ್ತಿರಲು ಅಜ್ಜಿ ಕೂಡ ಎರಡು ತುತ್ತು ಊಟ ಮುಗಿಸಿ ನಮ್ಮ ಮುಂದೆ ಬಂದು ಒಂದು ಮೂಲೆಯಲ್ಲಿ ಕುಳಿತು,
     
"ದಾರಿತಪ್ಪಿ ಬಂದ ಮಕ್ಳೇ ಅದೇನು ಹೇಳಿ ನಿಮ್ಮ ಕಥ್ಯಾ! ನೀವ್ಯಾವಾಗಾದ್ರಿ ದಾರಿತಪ್ಪ್ದೋರು ಹಾಂ?" ಅಜ್ಜಿ ಮಾತಾಡೊ ಮೂಡಿಗೆ ಬಿದ್ದಂತೆ ಕಾಣಿಸಿತು. ಅಜ್ಜಿಗೂ ಕೂಡ ಮಾತಾಡಲು ಯಾರು ಇಲ್ಲವೆಂದು ಅನ್ನಿಸಿ ನಾವು ಮಾತಾಡಲು ಶುರುವಿಟ್ಟೆವು.
     
" ಅಜ್ಜೀ, ನಾವು ದಾರಿತಪ್ಪಿದ ಮಕ್ಕಳಲ್ಲ. ನಮಗೂ ಅಪ್ಪ ಅಮ್ಮ ಎಲ್ಲಾ ಇದ್ದಾರೆ. ನಾವು ಬಲ್ಲಾಳಪುರದಿಂದ ನಮ್ಮ ಮತ್ತೊಬ್ಬ ಸ್ನೇಹಿತನ ಆಹ್ವಾನದ ಮೇರೆಗೆ ಅವನ ಹಳ್ಳಿಯಲ್ಲಿ ನಡೆಯುತ್ತಿರೊ ಜಾತ್ರೆಗೆ ಬಂದಿದ್ದೆವು. ಎಲ್ಲಾ ಚೆನ್ನಾಗಿತ್ತು ಆದರೆ ಕೊನೆಗೆ ಏನೋ ಮನಸ್ತಾಪವಾಗಿ ಅಲ್ಲಿಂದ ಹೇಗಿದ್ದೆವೋ ಹಾಗೆ ವಾಪಾಸ್ ಊರಿಗ್ ಹೊರಟು ಬಂದೆವು. ಅಲ್ಲಿ ಜಾತ್ರೆಯಾದ್ದರಿಂದ ಯಾರೂ ಅಂಗಡಿಯಾಗಲಿ ಹೋಟೆಲ್ ಆಗಲಿ ತೆರೆದಿರಲಿಲ್ಲ.  ಬೆಳಗ್ಗೆ ತಿಂಡಿ ತಿಂದು ಮನೆಬಿಟ್ಟಿದ್ದಷ್ಟೆ, ಅದಾದಮೇಲೆ ನೀವೀಗ ಬಡಿಸಿದ್ದೇ.  ಊರಿಗೆ ಹೋಗೋಣವೆಂದರೆ ಹಾಳಾದ್ದು ಬಸ್ಸೂ ಇಲ್ಲ. ನಡೆದು ನಡೆದು ಕೊನೆಗೆ ನಾವಿಲ್ಲಿ ಬಂದು ಸೇರಿದೆವು" ಎಂದು ಒಂದೇ ಉಸಿರಿನಲ್ಲಿ ನಡೆದದ್ದೆಲ್ಲವನ್ನು ಹೇಳಿದೆವು.
     
" ಅದ್ಸರಿ ಯಾವ್ ಅಳ್ಳೀಗ್ ನೀವ್ ಬಂದಿದ್ದು?"
     
" ಇಲ್ಲೇ ಪಕ್ಕದಲ್ಲಿರೊ ರಾಯರಗುಟ್ಟೆಗೆ"
     
" ಲೋ ಮಕ್ಳಾ! ರಾಯರಗುಟ್ಟೆಗು ನೀವಿಗ ಇಲ್ಲಿ ಬಂದಿರೋದ್ಕು ಎಷ್ಟು ದೂರ ಐತೆ ಗೊತ್ತಾ?"
     
" ಎಷ್ಟು?"
     
" ಅನ್ನೆಲ್ಡು ಮೈಲು ಕಣ್ರಪ್ಪ"!
     
" ಏನು ಹನ್ನೆರೆಡು ಮೈಲೀನಾ??!!"
     
" ಊಂ ಕಣ್ರುಲಾ! ನಿಮ್ಮ್ ಮಾರೆ ನೋಡ್ಕ್ಯಂಡೇ ಅನ್ಕೊಂಡೇ ಇವ್ರ್ಯಾರೋ ಬೋದೂರ್ದಿಂದ ಬಂದವ್ರಂತ. ಅದ್ಕೇ ನೀವಾಗ್ಲೆ ಏನ್ ಕೇಳುದ್ರು ನಾನೇನು ಏಳ್ದಂಗ್ ಸುಮ್ಕಿರದು, ಪಾಪ ಮೊದ್ಲೇ ಸುಸ್ತಾಗಿರ್ತೀರ ನಾನ್ಯಾಕೆ ಮಾತ್ಗೆ ಮಾತು ಬೆಳ್ಸೀ ನಿಮ್ಗಿನ್ನೂ ಸುಸ್ತ್ ಮಾಡೊದೂಂತ ಸುಮ್ನಿದ್ದೆ ಕಣ್ರಪ್ಪೊ"
     
ಹಾಗಿದ್ದರೆ ನಾವು ಹನ್ನೆರೆಡು ಮೈಲಿ ನಡೆದುಬಂದಿದ್ದೀವಾ? ನಡೆದರೆಲ್ಲಿ ಸೊಂಟ ಬೀಳುವುದೊ ಎಂಬ ನಾವು ಇಷ್ಟು ದೂರ ನಡೆದುಬರಲು ಹೇಗೆ ಸಾಧ್ಯವಾಯಿತು? ಚಿಂತೆಗೆ ಬಿದ್ದೆವು.
     
ಅಜ್ಜಿ ಕಾಲಿನ ಬಳಿ ಸಣ್ಣದೊಂದು ಕರಿಸೀಮೆ ತನ್ನ ಪಾಲಿಗೆ ಸಂದ ಆ ಹೊತ್ತಿನ ಚುಟುಕು ಬುತ್ತಿಯನ್ನು ಹೆಗಲಮೇಲೊತ್ತುಕೊಂಡು ಸಾಗುತ್ತಿತ್ತು. ಇದನ್ನು ಅಜ್ಜಿ ಬಹಳ ಕೂತೂಹಲದಿಂದ ನೋಡುವುದು ನಮ್ಮ ಗಮನಕ್ಕೆ ಬಂದು, "ಅದೇನಜ್ಜಿ ಆ ಸೀಮೆಯನ್ನು ಹಾಗೆ ದಿಟ್ಟಿಸುತ್ತಿದ್ದೀರಲ್ಲ" ಎಂದು ನಾನು ಪ್ರಶ್ನಿಸಿದೆ.
     
ಅಜ್ಜಿ ನಕ್ಕು ಹೇಳಿತು. " ಮಕ್ಳಾ! ಬಹ್ಶ ತನ್ನ್ ಅಳ್ವುಉಳ್ವಿನ ಪ್ರಸ್ನೆ ಬಂದ್ರೆ ಮನ್ಶಾ ಒಬ್ನೇ ಯಾಕೆ, ಇಡೀ ಪ್ರಾಣಿಪಕ್ಷಿಕ್ರಿಮಿಕೀಟ ಸಂಕ್ಲ ಎಲ್ಲ್ವೂ ಓರಾಟ ನಡ್ಸಿಯಾರೂ ತನ್ನ್ ತನ್ನ್ ಪಾಲಿನ ಅನ್ನಾನ ಉಟ್ಟುಸ್ಕೊಂಡ್ ತಿಂತವೆ ತಿಳ್ಕಾ. ಜೀವಯೈವಿದ್ಯೆ ಐತಲ್ಲ? ಅದ್ರಾಗ್ ತನ್ನ್ ಎಜ್ಜೆಗುರ್ತು ಮೂಡ್ದಂಗ್ ತನ್ನ್ ಪಾಡ್ಗದು ತಾನಿರ್ತದೆ. ಸುರುಷ್ಟಿ ಕೊಟ್ಟ ಬಾಳ್ನ ತಾನು ಪೂರ್ಣ ಬಾಳೋದ್ರಿಂದ ಸಾರ್ಥಕಥೆ ಕಡೆ ನಡೀತಾ ಓಗ್ತದೆ. ಅಂಗಾದ್ರೆ, ಮನ್ಶನ್ ಸಾರ್ಥ್ಕತೆ ಎಂಗೇ? ತನ್ನ್ ಜೀವಮಾನ್ದ ಎಜ್ಜೆಗುರ್ತು ಮೂಡ್ಸೋದ್ರಿಂದ್ಲಾ? ಸಾಧ್ನೆ ಸನ್ಮಾನಗ್ಳ ಪಟ್ಟಿತೆಗ್ದು ಪ್ರಚಾರ ಪಡ್ಸಿ ಮುಂದಿನ್ ಪೀಳ್ಗೆಗೆ ಮಂದಟ್ಟು ಮಾಡೋದ್ರಿಂದ್ಲಾ? ಆಸ್ತಿಅಂತಸ್ತು ಜೀವ್ನ ನಡ್ಸೋದ್ರಿಂದ್ಲಾ? ಮಹ್ಲುಕ್ವಾಟೆಕೊತ್ಲಗ್ಳ ಒಡ್ಯರಾಗೋದ್ರಿಂದ್ಲಾ? ತನ್ನ್ ನಂತ್ರಾನೂ ಜನ್ರು ನೆನ್ಯಂಗೆ ಮೈಲ್ಗಲ್ಲೇನಾದ್ರು ನೆಡೋದ್ರಿಂದ್ಲಾ? ಅಡ್ಡ್ ಪಲ್ಲಕ್ಕಿ ಗ್ವುರುಗಳ್ ತರ ಸಿಸ್ಯರ್ನ ಇಟ್ಟ್ಕೊಂಡು ತನ್ನ ತಾನು ಅರ್ಥೈಸೋದ್ರಿಂದ್ಲಾ? ಏಳ್ರಪ್ಪ ಎಂಗೆ ಮನ್ಶನ್ ಸಾರ್ಥಕಥೆ ಆಗೋದು?"
  
ಸಮಯ ಸರಿದು ತೆಗೆದಿಟ್ಟ ತಳ್ಳುಬಾಗಿಲಿನಿಂದ ಬೀಸುತ್ತಿದ್ದ ತಣ್ಣನೆಯ ಗಾಳಿಕೂಡ ಯಾಕೋ ಅಜ್ಜಿ ಕೇಳಿದ ಪ್ರಶ್ನೆಗಳಿಂದ ಬಿಸಿಯಾದಂತೆ ನಮಗನಿಸಿತು. ಯಾವ ಪ್ರಶ್ನೆಗಳಿಗೂ ನಮ್ಮಲ್ಲಿ ಉತ್ತರವಿರಲಿಲ್ಲ ಅಥವಾ ಅಜ್ಜಿ ಎತ್ತಿದ ಆ ಪ್ರಶ್ನೆಗಳಿಗೆ ಉತ್ತರ ಕೊಡುವ ಹಾಗು ಹುಡುಕುವ ಸಾಮರ್ಥ್ಯವಿರಲಿಲ್ಲ. ಈ ಅಜ್ಜಿ ಯಾಕೊ ನಮ್ಮಂತೆ ಸಾಮಾನ್ಯ ಅಂತ ನಮಗನ್ನಿಸಲಿಲ್ಲ.
     
" ಮಕ್ಳಾ ಯಾಕ್ರೋ ಇಂಗ್ ತಿಂದಂಗ್ ಮಾಡ್ಕೊಂಡ್ರಲ್ಲೋ ಮಾರೇನಾ? ಈ ಮುದ್ಕಿ ಇಂಗೇ ಏನೇನೋ ವದುರ್ತದೆ. ಯಾಕಂದ್ರೆ ನಂಗೂ ಯಾರ್ ಕೂಡ ಮಾತಾಡಿಯಾದ್ರು ಸಮಾ ಅಭ್ಯಾಸ್ವಿಲ್ಲ ನೋಡು? ಅದ್ಕೆ!"
     
" ಅಜ್ಜೀ, ನಿಮಗೆ ಅಭ್ಯಾಸವಿಲ್ಲ ಅಂತ ಯಾರು ಹೇಳಿದ್ದು? ನೀವು ನಮಗೆ ಕೇಳಿದ ಪ್ರಶ್ನೆಗಳು ಇಡೀ ಮಾನವಕುಲಕ್ಕೇ ಕೇಳಿದಂತಿತ್ತು" ಅಜ್ಜಿಯ ಮುಖವನ್ನು ನೋಡುತ್ತ ನಾನಂದೆ.
    
"ಅದೇನ್ ಮಾನ್ವಸಂಕುಲಾನೊ ಏನೋ? ಒಬ್ಬ್ರಿಗೊಬ್ರು ಬಡಿದಾಡ್ಕೊಂತವೆ ಕಾಲೆಳಿತವೆ ಮಾಡ್ಬಾರ್ದನ್ನೆಲ್ಲಾ ಮಾಡಿ ಕೊನ್ಗೆ ಏನು ಆಗಿಲ್ಲಾಂತ ಸುಮ್ನಿರ್ತವೆ, ನಂಗಂತು ನೋಡಿನೋಡಿ ಸಾಕಾಗೋಗದ್ಯಪ್ಪ. ಅಸ್ಲು ತನ್ನ್ ಪಾಡ್ಗೆ ತಾನಿರೊದಕ್ಕ್ ಆಗಂಗೇ ಇಲ್ಲ ನೋಡು ಈ ಮನ್ಶಸಂಕ್ಲಕ್ಕೆ. ಎದ್ರುಗಡೆ ಪಿರುತಿ ಮಾತಾಡಿ ಬೆನ್ನ್ ತಿರುಗ್ಸಿದ್ರೆ ಚೂರಿ ಆಕ್ತಾರೆ. ದುರಾಸೆಗ್ ಬಿದ್ದು ಅಪ್ಪ ಅಮ್ಮ ಅಣ್ಣತಂಗಿ ಬಂಧುಬಳ್ಗ ಎಲ್ಲದ್ರಿಂದ ದೂರಾಗಿ ದುಡ್ದಿನ್ ಕುದ್ರೆ ಅತ್ತಿ ಅದ್ರ್ ಮೇಲ್ ಸವಾರಿ ಮಾಡಿ ಕೊನ್ಗೆ ಸಂಬಂಧಗ್ಳು ಅರ್ಥ್ವಾಗಿ ಬರೋಷ್ಟ್ರಲ್ಲಿ ಇಡೀ ಜೀವ್ನಾನೆ ಮಗ್ಚಾಕೊಂಡಿರ್ತದೆ. ಮನ್ಶ ಮನ್ಶಂಗ್ ಬೆಲ್ ಕೊಡೋದ್ ಕಲ್ಯೋದ್ ಯಾವಾಗ? ಮನ್ಶ ಮನ್ಶನ್ ಮನ್ಶಂತೆ ನೋಡೋಕ್ ಯಾಕಾಗಲ್ಲ? ತಾನು ತನ್ನ್ ಎಂಡ್ತಿಮಕ್ಕ್ಳಷ್ಟೇ ಅನ್ನೋದ್ನ ಬಿಟ್ಟು ಎಲ್ಲ್ರೂ ಒಂದೇಂತ ನೋಡಕ್ಕಾಗಲ್ವಾ? ಅಲ್ಲ್ರಪ್ಪಾ ಇಡೀ ಭೂಮಂಡ್ಲದೊಳ್ಗೆ ಯಾವ್ದೇ ಪ್ರಾಣಿಪಕ್ಷಿಕ್ರಿಮಿಕೀಟಗ್ಳು ಇದು ನಂದೇ ಅದು ನಿಂದೇ, ನಂಗಿಷ್ಟು ಬರ್ಬೇಕು ನಿಂಗಿಷ್ಟು ಅಂತೇನಾದ್ರು ಗೆರೆ ಗೀಚ್ಕೊಂಡ್ರೆ ಮನ್ಶಾ ಅನ್ನೋ ಪರ್ಲ್ಕೋಕದ್ ಪ್ರಾಣಿ ನಿಂತಾಲ್ಲೇ ಜೀವ ತೆಕ್ಕೋಬೇಕು ತಿಳ್ಕಳಿ. ಅವ್ಕೆಲ್ಲಾ ಇರ್ದಿರೊ ಗೆರೆಗೀಚು, ನಂದು ನಂದೇ ಅನ್ನೋ ತಾರತಮ್ಯ ನಮ್ಗ್ಯಾಕೆ ಏಳಿ? ತಾ ಬೇರೆ ನೀ ಬೇರೇಂತ ಅವೇನಾದ್ರು ಬ್ಯಾದಭಾವ ಮಾಡೋದ್ ಎಲ್ಲಾರ ಕೇಳೀರಾ? ಇಲ್ಲ್ವಲ್ಲ? ಮತ್ತೆ ನಮ್ಗ್ಯಾಕೆ ನೀ ದೊಡ್ಡ್ವ ನೀ ಚಿಕ್ಕ್ವ ಅಂತ ಬೇರಿಂಗ್ಡ? ಯಪ್ಪೋ ಸರ್ಯಾಗ್ ಕೇಳ್ಸ್ಕೊಳಿ, ಅವ್ಕೇನಾದ್ರು ಮಾತು ಬಂದು ಮಾತಾಡಂಗಿದ್ದಿದ್ರೆ ನಾವೆಲ್ಲ ಅದ್ರ್ ಅಡಿಯಾಳಾಗಿರ್ತಿದ್ವಿ. ಇವತ್ತ್ ಇಷ್ಟೆಲ್ಲಾ ಎಗ್ರಾಡೋ ನಾವು ಆಗ ಅವ್ಗುಳ್ ಮುಂದೆ ನೀಚನಿಕೃಷ್ಟವಾಗ್ ಬಾಳ್ ನಡ್ಸಬೇಕಾಕ್ತಿತ್ತು."
     
ಈ ಎಲ್ಲಾ ಮಾತುಗಳಿಂದ ನಮಗೆ ಗೊತ್ತಿಲ್ಲದ ಲೋಕಕ್ಕೆ ಹೋಗಿ ವಾಪಾಸ್ ಬಂದಂತಿತ್ತು ಅಜ್ಜಿ ಮೇಲ್ಗಾಣಿಸಿದಂತೆ ಉಸಿರು ಬಿಗಿಹಿಡಿಯದಂತೆ ಹೇಳಬೇಕಾಗಿದ್ದೆಲ್ಲ ಹೇಳಿ ಮಾತು ನಿಲ್ಲಿಸಿದಾಗ!  ನಮ್ಮಿಬ್ಬರಿಗು ಅಜ್ಜಿಯ ಮಾತುಗಳು ಎಷ್ಟು ಅರ್ಥವಾಯಿತೊ ಇಲ್ಲವೊ ಗೊತ್ತಿಲ್ಲ. ಆದರೆ ನನಗೆ ಮನದಲ್ಲಿ ಎಂದೂ ಕಾಣದ ಜೀವಕಳೆ ಒಸರುವಂತಾಗುತ್ತಿತ್ತು.
     
ಪ್ರಕೃತಿ ಮೈದಳೆದು ನಿಂತು ಸೃಷ್ಟಿ ನಿಯಮದೊಂದಿಗೆ ಕಲೆತಾಗ ನಡೆವ ಸಹಜ ಪ್ರಕ್ರಿಯೆಯೆಂಬಂತೆ ಅಜ್ಜಿ ಮಾತಾಡಿತ್ತು. ಅಜ್ಜಿ ಹೇಳಿದ್ದರಲ್ಲಿ ಲವಲೇಷಮಾತ್ರವೂ ಅಸತ್ಯವಾದುದಾಗಲಿ, ಅಸಂಬದ್ದವಾಗಲಿ ಇರಲಿಲ್ಲ. ಯಾವುದೋ ದೈವವಾಣಿ ನಮ್ಮೆದುರು ತಾನೆ ಮೈದಳೆದು ನಿಂತು ನಮಗಂಟಿದ್ದ ಅಗ್ನಾನದ ತೆರೆಯನ್ನು ಸರಿಸಲು ಸರಿ ರಾತ್ರಿಯಲ್ಲಿ, ಹೆಸರು ಗೊತ್ತಿಲ್ಲದ ಕಾಡಿನಲ್ಲಿ,  ಕಾಲದ ಪರಿವೆಯನರಿತ ಅಜ್ಜಿಯ ರೂಪಾಂತರವಾದಂತೆ ಅನಿಸುತಮೊಬೈಲ್ ಸಿ ನಿಜ, ಇಲ್ಲಿ ಮನುಷ್ಯನು ಮನುಷ್ಯನನ್ನು ನೋಡುವ ರೀತಿ ಬದಲಾಗಬೇಕಿದೆ, ಎಲ್ಲರೂ ನನ್ನವರೆಂದು ಭಾವಿಸುವ ಮನಸುಗಳ ಅವಶ್ಯಕತೆಯಿದೆ, ನಮ್ಮನಮ್ಮ ನಡುವಿನ ಅಂತರ ಕಡಿಮೆಗೊಳಿಸಿ ಭಾವೈಕ್ಯತೆಯ ನದಿ ಹರಿಯಬೇಕಿದೆ, ಸಾಮರಸ್ಯದ ಬದಲಾವಣೆ ಎಂದಿಗಿಂತ ಹೆಚ್ಚಿಗೆ ಬರಬೇಕಿದೆ, ಇಡೀ ಮಾನವಸಂಕುಲ ಪ್ರಾಣಿಪಕ್ಷೀಕ್ರಿಮಿಕೀಟಗಳ ಭಾಂದವ್ಯದ ಬೆಸುಗೆ ಬೆಸೆಯಬೇಕಿದೆ. ಹೌದು ಅಜ್ಜಿ ಹೇಳಿದ್ದು ಎಷ್ಟೊಂದು ನಿಜವಲ್ಲವೆ?
     
ಇದನ್ನೇ ಯೋಚಿಸುತ್ತ ಇದ್ದ ನನಗೆ ಸಮಯ ಸರಿದುದರ ಪರಿವೆಯಿರಲಿಲ್ಲ. ನಾವು ಎಲ್ಲಿದ್ದೆವೊ ಅಲ್ಲೇ ಮಲಗಿ ನಿದ್ದೆ ಹೋಗಿದ್ದೆವು. ಬೆಳಗಿನ ಜಾವ ಕಣ್ಣು ಬಿಟ್ಟು ನೋಡಿದಾಗ ಸೂರ್ಯನುದಯಿಸುತ್ತಿದ್ದ. ಪ್ರಖರ ಬೆಳಕು ಗುಡಿಸಲೆಲ್ಲಾ ಹರಡುತ್ತಿತ್ತು. ನೋಡಿದರೆ ಪ್ರಾಣಿ ಹೆಸರಿಗೆ ತಕ್ಕಂತೆ ವಿರಾಜಮಾನನಾಗಿ ಮಲಗಿದ್ದಾನೆ, ಅತ್ತಕಡೆ ಅಜ್ಜಿ ಬಸವನ ಹುಳು ತರ ಸುಳಿದಿರುಗಿ ಮುದುಡಿದ್ದಾರೆ. ಅಜ್ಜಿ ತನ್ನಲ್ಲಿದ್ದ ಹರುಕು ಹೊದಿಕೆಯನ್ನು ನಮ್ಮಿಬ್ಬರಿಗೂ ಹೊದಿಸಿ ತಾನು ಒಲೆಯ ಹತ್ತಿರ ಮಲಗಿದೆ. ಬಡತನದಲ್ಲೂ ಶ್ರೀಮಂತಿಕೆ ಮೆರೆದ ಅಜ್ಜಿಯ ನೋಡುತ್ತಿದ್ದೆ , ಅವರು ಸಾಕ್ಷಾತ್ ಮಾನವಕುಲದ ಶ್ರೇಷ್ಟರಂತೆ ಕಾಣುತ್ತಿದ್ದರು. ಬಡತನದಲ್ಲೇ ಅಲ್ಲವೆ ಬ್ರಾತೃತ್ವದ ಮೂಲವಿರುವುದು?
     
ಅಜ್ಜಿಗೆ ಏನು ಹೇಳಬೇಕೊ ತಿಳಿಯದೆ ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ಇದೆಲ್ಲಾ ಯಾಕೆ ಮಗಾ! ಅಂತು, ನಾನು ಮಾಡಿದ್ದು ನೋಡಿ ಪ್ರಾಣಿಯೂ ಹಾಗೇ ಮಾಡಿದ. ಜೀವಕಳೆ ತುಂಬಿದ ಜೀವಕ್ಕೆ ದುಡ್ಡುಕೊಟ್ಟು ಅವಮಾನಿಸಿದಂತೆನಿಸಿ ಮತ್ತೊಮ್ಮೆ ಅಜ್ಜಿ ನಮಸ್ಕರಿಸಿ ನಾವಿಬ್ಬರು ಅಲ್ಲಿಂದ ಹೊರಬಿದ್ದೆವು.
.........
     
ನನ್ನಲ್ಲಿನ ಜೀವಕಳೆ ನೋಡಿ ನನ್ನ ಗೆಳೆಯರು ಕಾರಣ ಕೇಳಿದಾಗ ನಾನು ಏನನ್ನೂ ಮುಚ್ಚಿಡದೆ ನಡೆದದ್ದನ್ನೆಲ್ಲ ಹೇಳಿದೆ. ಇದನ್ನು ಕೇಳಿದ ನನ್ನ ಗೆಳೆಯರು ನಮಗೂ ಅಜ್ಜಿಯ ದರ್ಶನಭಾಗ್ಯ ಕರುಣಿಸೆಂದರು. ನನಗೆ ವಿಪರೀತ ಕೆಲಸಗಳಿದ್ದುದರಿಂದ ಮುಂದಿನ ಭಾನುವಾರ ಹೋಗೋಣವೆಂದು ಅವರನ್ನೆಲ್ಲ ಒಪ್ಪಿಸಿದೆ.
      
ಅಂದುಕೊಂಡಂತೆ ಭಾನುವಾರ ಬಂತು. ಗೆಳೆಯರೆಲ್ಲ ಅತ್ಯೋತ್ಸಾಹದಿಂದ ಜೊತೆಗೂಡಿ ನಿಂತರು ಅಜ್ಜಿಯ ಕಾಣಹೊರಡಲು. ರಾಯರಗುಟ್ಟೆಗೆ ಹೊರಡುವ ಬಸ್ಸನ್ನೇರಿ ಅದು ಸಿಗುವ ಮೊದಲೇ ಹನ್ನೆರೆಡು ಮೈಲಿ ಹಿಂದಿನ ಸ್ಟಾಪಿನಲ್ಲಿ ನಿಲ್ಲಿಸುವಂತೆ ಕಂಡಕ್ಟರಿಗೆ ಹೇಳಿದ್ದೆವು. ಅದೂ ಇದು ಮಾತಾಡುತ್ತ, ಅಜ್ಜಿಯ ಅಸಮಾನ್ಯತೆಯ ಬಗ್ಗೆ ಚರ್ಚೆಗಳಾಗುತ್ತ ಬಂದಿರಲು ಕಂಡಕ್ಟರ್ ನಾವು ಹೇಳಿದಂತೆ ರಾಯರಗುಟ್ಟೆಯ ಹನ್ನೆರೆಡು ಮೈಲಿ ಹಿಂದೆಯಿಳಿಸಿ ದೂಳೆಬ್ಬಿಸಿಕೊಂಡು ಹೊರಟುಹೋದ.
     
ನನಗೆ ಅಂಗೈಯ್ಯ ಗೆರೆಯಂತೆ ಚೆನ್ನಾಗಿ ನೆನಪಿದೆ. ಯಾಕೆಂದರೆ ಅಜ್ಜಿಯ ಗುಡಿಸಲಿಂದ ಹೊರಬಿದ್ದ ನಾನು ಆಗ ಸುತ್ತಮುತ್ತಲಿದ್ದ ಪರಿಸರವನ್ನು ಚೆನ್ನಾಗಿ ನೋಡಿ ಮನದಟ್ಟು ಮಾಡಿಕೊಂಡಿದ್ದೆ, ಈಗ ನಾವು ಅದೇ ಪರಿಸರದಲ್ಲಿ, ಅದೇ ಅಜ್ಜಿಯ ಗುಡಿಸಲಿದ್ದ ಜಾಗದಲ್ಲಿ ನಿಂತಿದ್ದೀವಿ. ಆದರೆ ಅಜ್ಜಿಯಾಗಲೀ ಗುಡಿಸಲಾಗಲೀ ಕಾಣಿಸುತ್ತಿಲ್ಲ! ಅರೇ! ಇದೇನಾಶ್ಚರ್ಯ! ಎಷ್ಟು ಮತ್ತೊಮ್ಮೆ ಮಗದೊಮ್ಮೆ ಮನನ ಮಾಡಿಕೊಂಡರೂ ನನ್ನ ನೆನಪಿನಾಳದ ಅನುಭವ ನಾವೀಗ ನಿಂತಿರುವ ಜಾಗವನ್ನಲ್ಲದೆ ಬೇರೆ ಜಾಗವನ್ನು ತೋರಲೊಲ್ಲದು. ನನ್ನ ಗೆಳೆಯರು ನನ್ನನ್ನು ನೋಡಿ ಅಪಹಾಸ್ಯ ಮಾಡತೊಡಗಿದರು, ಯಾವುದೋ ಭಕ್ತಿಪ್ರಧಾನ ಸಿನೆಮಾ ನೋಡಿ ಹೀಗಾಡುತ್ತಿದ್ದೀನಂತೆ. ಸಾಕ್ಷಿ ಹೇಳಿಸೋಣವೆಂದರೆ ಪ್ರಾಣಿ ಇವತ್ತು ನಮ್ಮ ಜೊತೆ ಬಂದಿಲ್ಲ, ಮೊಬೈಲ್ ಸಿಗ್ನಲ್ ಸಿಗುವ ಜಾಗವೇ ಇದು? ನನ್ನ ಸ್ನೇಹಿತರು ನನ್ನನ್ನಾಗಲೇ ತಲೆಕೆಟ್ಟವನಂತೆ ನೋಡಲಾರಂಭಿಸಿ ಆ ಜಾಗದಿಂದ ರಸ್ತೆ ಕಡೆ ಮುಖಮಾಡಿ ನಡೆಯಲಾರಂಭಿಸಿದ್ದರು.
     
ಎಲ್ಲರೂ ಹೊರಟುಹೋದ ಮೇಲೆ ನಾನಿನ್ನು ಅಲ್ಲೇ ನಿಂತಿದ್ದೆ. ದೂರದಲ್ಲೆಲ್ಲೋ ಟ್ರಿಣ್ ಟ್ರಿಣ್ ಸೈಕಲ್ಲಿನ ಬೆಲ್ಲಾಗುವ ಸದ್ದಾಯಿತು. ಅಲ್ಲಿಗೆ ಹೋಗಿ ನೋಡಿದರೆ, ಪಕ್ಕದ ಬದುವಿನ ತಿರುವಲ್ಲೊಬ್ಬ ಸೈಕಲ್ಲ್ ಹೊಡೆಯುತ್ತ ಬರುತ್ತಿದ್ದ. ಅವನನ್ನು ಅಜ್ಜಿಯ ಬಗ್ಗೆ, ಆಕೆಯ ಗುಡಿಸಲ ಬಗ್ಗೆ ಕೇಳಿದ್ದಕ್ಕೆ ನನ್ನನ್ನು ಪೂರ ಮೇಲಿಂದ ಕೆಳಕ್ಕೆ ಒಮ್ಮೆ ನೋಡಿ, ಇಲ್ಲಿ ಸುತ್ತಮುತ್ತ ಹನ್ನೆರೆಡು ಮೈಲಿಯೊಳಗೆ ಯಾವುದೇ ಗುಡಿಸಲಾಗಲಿ, ಅಜ್ಜಿಯಾಗಲಿ ಅಸಲು ನರಪಿಳ್ಳೆಯಾಗಲೀ ವಾಸಮಾಡುತ್ತಿಲ್ಲವೆಂದ. ಅವನು ಹೇಳಿದ್ದನ್ನು ಮತ್ತೆ ಪ್ರಶ್ನಿಸಿ ಕೇಳುವಂತೆಯಿರಲಿಲ್ಲ. ಅವನಿಗೆ ನಮಸ್ಕರಿಸಿದೆ. ಅವನು ಹೊರಡಲು ಅನುವಾದ. ಹೋದಹಾಗೆ ಹೋದವನು ಸ್ವಲ್ಪ ಮುಂದೆ ಹೋಗಿ ಕೇಳಿದ, " ನೀವ್ಯಾರು?"
     
ಹೌದು ನಾನ್ಯಾರು? ನಾನೇಕೆ ಕಾಣದ ದಟ್ಟಡವಿಯಲ್ಲಿ ಹಲವು ಜನುಮಗಳಿಂದ ಪರಿಚಯಳಂತಿರುವ ಅಜ್ಜಿಯನ್ನು ಹುಡುಕುತ್ತಿದ್ದೀನಿ? ಅಸಲಿಗೆ ಪರಿಚಯವಿರುವುದೇ ಆದಲ್ಲಿ ನಾನೇಕೆ ಆಕೆಯನ್ನು ಹುಡುಕಬೇಕು, ಪರಿಚಯವಿದ್ದವರಿಗೆ ಪರಿಚಯಸ್ಥರು ಎಲ್ಲಿರುವರೆಂದು ತಿಳಿಯದೇ? ಹಾಗಾದರೆ ಅಜ್ಜಿ ಎಲ್ಲಿದ್ದಾರೆ? ಈಗಂತೂ ಆ ಜಾಗದಲ್ಲಿಲ್ಲ. ಹುಡುಕುವುದು ಎಲ್ಲಿ? ಮತ್ತೆ ಅದೇ ಜಾಗಕ್ಕೆ ಬಂದು ಅಲ್ಲಿನ ಆ ಕ್ಷಣದ ಗತಿಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಇಲ್ಲಿ ಅಜ್ಜಿಯಿದ್ದದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತೀರ್ಮಾನಿಸುವಷ್ಟರಲ್ಲಿ, ಜೋರಾಗಿ ಬೀಸಿ ಬಂದ ಗಾಳಿ ಆ ದಿನ ಅಜ್ಜಿ ಗುಡಿಸಲಲ್ಲಿ ನಾವಿದ್ದಾಗ ಬೀಸಿದ ಗಾಳಿಯಂತೆಯೇ ಬೀಸಿ ಅದು ನೆನಪಾಗಲು ಅಲ್ಲೇ ಗಾಳಿಯಲ್ಲಿದ್ದ ತರಗೆಲೆಗಳ ಮಧ್ಯೆ ನನ್ಮ ಅಂತಃಶಕ್ತಿಯನ್ನೇ ಅಲ್ಲೋಲ ಕಲ್ಲೋಲಗೊಳಿಸುವಂತೆ ಕಂಡಿದ್ದು ನಾವಂದು ಅಜ್ಜಿಯ ಮನೆ ಮುಂದೆ ಮೊದಲು ನೋಡಿ ಇದೊಂದು ಗುಡಿಸಲೆಂದು ಗುರುತಿಸಿ ಸಹಾಯ ಮಾಡಿದ್ದ ಅದೇ ದೊಂದಿ!
     
ನನಗಷ್ಟು ಸಾಕಿತ್ತು ಅಜ್ಜಿವ ಇರುವಿಕೆಯನ್ನು ಬಿಂಬಿಸಲು! ಇದಕ್ಕಿಂತ ಸಾಕ್ಷಿ ನನಗೆ ನನ್ನ ಇಡೀ ಜೀವಮಾನ ಹುಡುಕಿದರೂ ಸಿಗುತ್ತಿರಲಿಲ್ಲ. ಅಲ್ಲೇ ತರಗೆಲೆಗಳ ಮಧ್ಯೆ ಬಿದ್ದಿದ್ದ ಆ  ದೊಂದಿಯನ್ನು ಎತ್ತಿಕೊಂಡು ಅಪ್ಯಾಯಮಾನ ತುಂಬಿದ ಕಂಗಳಲ್ಲಿ  ನೋಡಿದೆ. ನನಗೆ ಹಿಂದೆ ನಡೆದದ್ದೆಲ್ಲವು ಈಗ ಕಣ್ಣ್ಮುಂದೆ ನಡೆದಂತಿತ್ತು. ಅದರ ಮಧುರ ಸ್ಮೃತಿಪಲ್ಲಟದಲ್ಲಿ ಮುಳುಗಿದ್ದ ನನ್ನನ್ನು ಹಿಂದಕ್ಕೆ ಎಳೆತಂದಿದ್ದು ನನ್ನ ಸ್ನೇಹಿತರ ಅಶರೀರ ವಾಣಿ, ಅವರು ನನ್ನನ್ನು ಕೂಗಿ ಕರೆಯುತ್ತಿದ್ದರು "ಬಾರೋ ಟೈಮಾಯ್ತು" ಅಂತ.
     
ಅರಿವಿನ ಗುರುವಾದ ಅಜ್ಜಿಗೆ ಮನದಲ್ಲೇ ನಮಸ್ಕರಿಸಿ ಅಲ್ಲಿಂದ ಹೊರಬಿದ್ದೆ. ರಸ್ತೆಯ ಹತ್ತತ್ತಿರ ಬರುತ್ತಿದ್ದವನು ಒಮ್ಮೆ ಹಿಂದೆ ತಿರುಗಿ ನೋಡಿದೆ, ಅಲ್ಲಿ ಅಜ್ಜಿ ನಿಂತು ನನ್ನತ್ತ ಕೈಬೀಸುವುದು ಕಾಣಿಸಿತು. ನಾನು ಮನೆ ದಾರಿ ಹಿಡಿದೆ.
   
                                                                   - ಮುಗಿಯಿತು -

ಮೋಹನ್ ಕುಮಾರ್ ಡಿ ಎನ್
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665
೨೦೧೫ರ ದೀಪಾವಳಿ ಕಥಾಸ್ಪರ್ಧೆಗೆ ಬರೆದ ಕಥೆಯಿದು. ಬರೆದದ್ದು "ವಿಜಯವಾಣಿ" ಪತ್ರಿಕೆಗೆ. ಬಹುಮಾನ ಬರುತ್ತದೆ ಎನ್ನುವ ನಂಬಿಕೆಯೇನೂ ನನ್ನಲ್ಲಿರಲಿಲ್ಲ. ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನು ಅಲ್ಲವೇ? ಬರೆದು ಕಳುಹಿಸಿದ್ದಾದ ಮೇಲೆ ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಸಾಧ್ಯವಾಗಿರಲಿಲ್ಲ, ಕಾರಣ, ಎಷ್ಟು ಹುಡುಕಿದರೂ ನನ್ನ ಮಿಂಚಂಚೆಯಲ್ಲಿದ್ದುದು ಸಿಗಲೇ ಇಲ್ಲ. ಕಳುಹಿಸಿದ ನಂತರ ಅದರ ಪ್ರತಿಯೊಂದನ್ನು ನನ್ನ ಬಳಿ ಇಟ್ಟುಕೊಂಡಿದ್ದಿದ್ದರೆ ಈಗಾಗಲೇ ಇಲ್ಲಿ ಹಾಕುತ್ತಿದ್ದೆ. ಈವತ್ತು ಏನನ್ನೋ ಹುಡುಕುತ್ತಿರುವಾಗ ಅಕಸ್ಮಾತ್ತಾಗಿ ಇದು ನನ್ನ ಕಣ್ಣಿಗೆ ಬಿತ್ತು . ನೋಡಿ ಕೆಳಗಡೆ ಕಥೆಯಿದೆ ಹಾಕಿರುವೆ, ಓದಿಕೊಳ್ಳಿ. 

ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ 2015

"ಕಪ್ಪುಮಚ್ಚೆ ಮತ್ತು ಪ್ರಾಣ"

ನನ್ನ ನಾಲಗೆಯಲ್ಲಿ ಕರಿಚುಕ್ಕಿಯಂತವು ಸುಮಾರಿದೆ. ಅದನ್ನು ನೋಡಿ ಅಂದು ಅಮ್ಮ ಹೇಳಿದ್ದಳು, " ಮಗಾ! ಇದು ಅಂತಿಂಥ ಚುಕ್ಕಿಗಳಲ್ವೋ, ಮಚ್ಚೆ! ನಾಗರಮಚ್ಚೆ! ಈ ಥರ ನಾಲಗೆ ಮೇಲೆ ಮಚ್ಚೆ ಬರೋದು ಅಪರೂಪದಲ್ಲಪರೂಪ. ನಿನಗೆ ಅದು ಬಂದಿದೆಯೆಂದರೆ, ಖಂಡಿತ ನಿನಗೆ ಒಳ್ಳೇದಾಗ್ತದೆ. ನೀನ್ಯಾವ ಮಾತಾಡಿದ್ರು ಇಂದಲ್ಲ ನಾಳೆ ನೆರವೇರ್ತದೆ , ನೆರವೇರಲೇಬೇಕು. ಇದು ನಿನ್ನ ಭವಿಷ್ಯ ಕಣೋ ಮಗಾ" ಅಂತ.

ಒಂದು ದಿನ ನಾನು ಮನೆಯ ಅಂಗಳದಲ್ಲಿ ಆಡುತ್ತಿರಬೇಕಾದರೆ ಎದುರು ಮನೆಯ ಸೋಮ ಬಂದು ನಮ್ಮಜೊತೆ ಸೇರಿಕೊಂಡ. ಅವನಿಗೆ ಮೊದಲಿಂದಲೂ ನಾನು, ನನ್ನದೆ ಮಾತು ಎಂಬ ಹಟವಿತ್ತು. ಇದಕ್ಕೂ ಮುನ್ನ ನಾವು ಗೆಳೆಯರೆಲ್ಲರು ಸೇರಿ ಅವನನ್ನು ನಮ್ಮ ಗುಂಪಿನಿಂದ ಹೊರಹಾಕಿದ್ವಿ. ನಾವು ಎಷ್ಟೇ ಸಾರಿ ಹೊರಹಾಕಿದ್ರು ಅವನು ಮತ್ತೆ ಮತ್ತೆ ಬಂದು ಅತ್ತಂತೆ ನಟಿಸಿ ನನ್ನ ಮನಗೆದ್ದುಬಿಡುತ್ತಿದ್ದ. ಆಗಿನ ಕಾಲಕ್ಕೆ ನಮ್ಮ ಗುಂಪಿಗೆ ನಾನೇ ರಾಜನಾದ್ದರಿಂದ ನನ್ನನ್ನು ಗೆದ್ದರೆ, ಮನವೊಲಿಸಿದರೆ ಮತ್ತೆ ಗುಂಪಿನಲ್ಲಿ ಸ್ಥಾನ ಪಡೆಯಬಹುಂದೆಂದು ಅವನ ಸುಲಭ ಲೆಕ್ಕಾಚಾರ. ನಾನೋ ಕಣ್ಣೀರಿಗೆ ಬೇಗನೆ ಕರಗುವ ಹೆಣ್ಣಪ್ಪಿ. ಅವನು ಬಂದು ನನ್ನತ್ತ ಕಣ್ಣೀರು ಸುರಿಸಿದರೆ ಸಾಕು ಸೋಮನನ್ನು ಗುಂಪಿಗೆ ಸೇರಿಸಿಕೊಳ್ಳುತ್ತಿದ್ದೆ. ಹೇಳಬೇಕೆಂದರೆ ಉಳಿದ ನಮ್ಮ ತಂಡದ ಸದಸ್ಯರಿಗೆ ಇದು ಹಿಡಿಸುತ್ತಿರಲಿಲ್ಲ. ಮೇಲಾಗಿ ಅವನನ್ನು ಕಂಡರೆ ಇತರರು ದುಷ್ಟ ದುರುಳ ಎಂದು ಭಾವಿಸಿದ್ದರು. ಅವನು ಮೇಲ್ನೋಟಕ್ಕೆ ಹಾಗೇ ಕಂಡರು ನಾನು ಮಾತ್ರ ಅವನನ್ನು ಹಾಗೆ ನೋಡಲು ಸಾಧ್ಯವೇ ಆಗಲಿಲ್ಲ. ಆದರೆ ಒಂದು ದಿನ ಆ ಪ್ರಸಂಗ ನನ್ನ ಮನಸ್ಸು ತನ್ನ ನಿರ್ಧಾರವನ್ನು ಬದಲಿಸಿ ಸೋಮ ಒಬ್ಬ ದುಷ್ಟದುರುಳ ಎನ್ನುವಂತೆ ಮಾಡಿದ ಘಟನೆಯೊಂದು ನಡೆಯಿತು. ಅವತ್ತು ಸೋಮ ನನ್ನನ್ನು ಆಟಕ್ಕೆ ಸೇರಿಸ್ಕೊಳ್ರೋ ಅಂತ ಬಂದ. ನಾನು ಸುಮ್ಮನೆ ತಂಡದ ಉಳಿದ ಗೆಳೆಯರ ಬಳಿ ನೋಡಿದೆ. ಅವರಿಗಿಷ್ಟವಿಲ್ಲದಿದ್ದರು ನನ್ನ ಮಾತಿಗೆ ಬೆಲೆಕೊಟ್ಟು ಸೇರಿಸಿಕೊಂಡರು.

ಅವತ್ತು ನಾವು ಆಡುತ್ತಿದ್ದುದು ಕಳ್ಳಪೋಲಿಸ್ ಆಟ. ಅದರಲ್ಲಿ ನಾನು ಸೇರಿ ನಾಲ್ಕು ಜನ ಕಳ್ಳರು ಮತ್ತು ನಮ್ಮನ್ನೆಲ್ಲ ಹಿಡಿಯುವ ಒಬ್ಬೇ ಒಬ್ಬ ಪೋಲಿಸ್ ಆಗಿ ಸೋಮನು ಎಂದು ನಿಶ್ಚಯವಾಯ್ತು. ಆಟ ಮುಂದುವರೆಯಿತು. ಕಳ್ಳರೆಲ್ಲ ಒಬ್ಬೊಬ್ಬರಾಗಿ ಸಿಗುತ್ತಾ ಬಂದಿದ್ದರು, ನಾನು ಮಾತ್ರ ಸಿಕ್ಕಿರಲಿಲ್ಲ. ಸರಿ ಅವನು ನನ್ನ ಬೆನ್ನಟ್ಟಿದ. ಅವನಿಗಿಂತಲು ಸಣ್ಣಗೆ ಚೂಟಿಯಾಗಿದ್ದ ನಾನು ನಮ್ಮ ಮನೆ ಮುಂದಿನ ಅಂಗಳವನ್ನೆಲ್ಲ ಅವನಿಗೆ ಸುತ್ತಿಸಿ ಗಿರಗಿಟ್ಲೆಯಾಡಿಸಿದ್ದೆ. ಅವನು ಸಾಕಾಗಿದ್ದ, ಜೊತೆಗೆ ನಾನೂ. ಅವನು ನನ್ನಿಂದ ದೂರ ನಿಂತುಕೊಂಡೇ ಏದುಸಿರೆಳೆದುಕೊಳ್ಳತೊಡಗಿದ. ಇದನ್ನು ಕಂಡ ನಾನು ಸೋಮ ವಿರಮಿಸಿಕೊಳ್ಳುತ್ತಿರಬೇಕು ಅಂತ ಅಂದುಕೊಂಡು ಪಕ್ಕದಲ್ಲಿದ್ದ ಬೇಲಿಯ ಮೇಲೆ ಒಂದ ಮಾಡಲು ಮುಂದಾದೆನು. ಅದವನಿಗೆ ಕಂತ್ರಿ ಬುದ್ದಿ ತೋರಿಸುವ ಸಮಯಯಾಗಿತ್ತು. ಮೆಲ್ಲಗೆ ಹೆಜ್ಜೆ ಸಪ್ಪಳವಾಗದಂತೆ ಓಡಿಬಂದು ನಾನು ಹತ್ತಿರಾಗುತ್ತಲೇ ತನ್ನ ಓಟ ಹೆಚ್ಚಿಸಿಕೊಂಡು ನನ್ನ ಮೇಲೆ ಬಿದ್ದ ನೋಡಿ! ನನಗೇನಾಗಿದೆಯೆಂದು ತಿಳಿವ ಮುನ್ನ ಹಾಕಿದ್ದ ಬೇಲಿ ಮೇಲೆ ಮುರಕೊಂಡು ಬಿದ್ದು ಪಕ್ಕದ ರಸ್ತೆಗೆ ಹಾರಿ ಬಿದ್ದಿದ್ದೆ. ನನ್ನ ಮೈಕೈಯಲ್ಲೆಲ್ಲ ರಕ್ತ, ತರಚು ಗಾಯವಾಗಿದ್ದು ತಕ್ಷಣ ನನ್ನ ಗಮನಕ್ಕೆ ಬರತೊಡಗಿತು. ಅದನ್ನು ಕಂಡ ನನ್ನ ಸ್ನೇಹಿತರು ಅಲ್ಲಿಂದ ನಮಗೂ ಇದೇ ಗತಿಯಾದರೇನೆಂದು ಕಾಲ್ಕಿತ್ತರು. ನಾನಿನ್ನು ಅಲ್ಲೆ ರಸ್ತೆ ಮೇಲೆ ಬಿದ್ದಿದ್ದೆ. ಬಹುಶಃ ಅಮ್ಮ ಒಳಗಿದ್ದುದರಿಂದ ಆಕೆಗಿದು ತಿಳಿಯಲಿಲ್ಲ ಅನ್ಸುತ್ತೆ. ನಾನಿದ್ದ ಸ್ಥಿತಿ ನೋಡಿ ಕನಿಕರಿಸಿ ಬಂದು ಸಹಾಯ ಮಾಡದೆ, ಮಾಡಿದ ತಪ್ಪಿಗೆ ಬೇಸರಿಸಿಕೊಳ್ಳದೆ ಅವನು ಶುರು ಮಾಡಿದ ನೋಡಿ ಆ ಕೇಕೆ! ಅದೆಲ್ಲಿತ್ತೋ ಆ ರಾಕ್ಷಸ ನಗುವಿನ ಕೇಕೆ! ನನ್ನತ್ತ ನೋಡಿ ಒಂದೇ ಸಮನೆ ನಗಲು ಶುರು ಮಾಡಿದ. ಆ ನಗು ಹೇಗಿತ್ತೆಂದರೆ ನನ್ನ ಇಡೀ ಇರುವಿಕೆಯನ್ನೇ ಪ್ರಶ್ನಿಸಿ ನೋಡಿ ನಗುವಂತಿತ್ತು. ಮನುಷ್ಯ ಪ್ರಗ್ನೆ ಕಳೆದುಕೊಳ್ಳುವುದು ಬಹುಶಃ ತನ್ನ ಅಸ್ತಿತ್ವಕ್ಕೆ ಮತ್ತು ಜೀವನ ನಡೆಸಲು ಬೇಕಾದ ಮರ್ಯಾದೆ ಕಳೆದುಕೊಂಡಾಗ ಮಾತ್ರ ಅಂತ ನನಗನ್ನಿಸುತ್ತೆ. ಸೋಮನ ಆ ನಗುವನ್ನು ನೋಡಿ ಅದೆಲ್ಲಿತ್ತೋ  ಅತಿ ಉಗ್ರಾತಿಯುಗ್ರ ಕೋಪ, "ನೀನು ಸುಟ್ಟು ಬೂದಿ ಆಗೋಗ!" ಅಂದೆ. ಹಾಗೇಕಂದೆ ಇವತ್ತು ನೆನೆದರೆ ನಿಜಕ್ಕು ಗೊತ್ತಿಲ್ಲ ಅಂತಲೇ ಹೇಳುತ್ತೀನಿ. ಸೋಮನಿಗೆ ಅದೇನು ಅನ್ನಿಸಲಿಲ್ಲವೋ ಏನೊ ಹಿಂದಿರುಗಿ ನೋಡದೆ ಅದೇ ಅಟ್ಟಹಾಸ ಕೇಕೆ ಹಾಕುತ್ತಾ ಅಲ್ಲಿಂದ ಹೊರಟುಹೋದ.

ಇದಾದ ಮಾರನೆ ದಿನ ಬೆಳಗ್ಗೆ ಮನೆಯ ಮುಂದೆ ಜನರು ಜೋರಾಗಿ ಎಂದಿನಂತಲ್ಲದೆ ಮಾತಾಡಿಕೊಂಡು ಹೋಗುತ್ತಿದ್ದುದು ಒಳಗೆ ನೆನ್ನೆಯಾದ ತರಚು ಗಾಯಗಳಿಗೆ ಅಮ್ಮ ಮಾಡಿದ ಇಲಾಜಿನಿಂದ ಮಲಗಿ ವಿರಮಿಸಿಕೊಳ್ಳುತ್ತಿದ್ದ ನನಗೆ ಕೇಳಿಸಿ ಅದೇನೆಂದು ನಿಧಾನವಾಗಿ ಎದ್ದು ಬಂದು ಅಮ್ಮನನ್ನು ಏನೆಂದು ಕೇಳಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಒಕ್ಕಲಿಗೆಂದು ಸೋಮನ ತಂದೆತಾಯಿ ಪಕ್ಕದೂರಿಗೆ ಹೋಗಿದ್ದರಿಂದ ಮನೆಯಲ್ಲಿ ಅಜ್ಜಿಯ ಜೊತೆ  ಇರುವುದು  ಊರವರಿಗೆಲ್ಲ ತಿಳಿದದ್ದೇ ಆಗಿತ್ತು. ನೆನ್ನೆ ನಮ್ಮನೆಯಿಂದ ಹೋದ ಸೋಮ ಅಜ್ಜಿ ಮಾಡಿಟ್ಟ ಅಂಬಲಿ ಕುಡಿದು ತನ್ನ ಪಾಡಿಗೆ ಹೋಗಿ  ಮನೆಯ ಒಳ ವರಾಂಡದಲ್ಲಿ ಮಲಗಿದ್ದನಂತೆ. ಒಂದುಹೊತ್ತಿನಲ್ಲಿ ಅಜ್ಜಿ ಕೂಗುತ್ತಿದ್ದ ಸದ್ದು ಕೇಳಿ ಕಣ್ಣ್ ಬಿಟ್ಟು ನೋಡಿದರೆ ಮನೆಯೆಲ್ಲಿದ್ದ ನಗನಾಣ್ಯ ದೋಚಿದ ನಂತರ  ಕಳ್ಳರು  ಮನೆಗೆಲ್ಲಾ  ಬೆಂಕಿಯಿಟ್ಟಿದ್ದಾರೆ! ಭಾರೀ ನಿದ್ರೆಯಲ್ಲಿದ್ದ ಸೋಮನಿಗೆ ಇದರ ಪರಿವೆಯೇ ಇಲ್ಲದೆ ಬೆಂಕಿ ಬಿದ್ದ ಎಷ್ಟೋ ಹೊತ್ತಾದ ಬಳಿಕ ನೋಡಿದ್ದಾನೆ, ತಪ್ಪಿಸಿಕೊಂಡು ಹೋಗಲೂ ಆಸ್ಪದವಿಲ್ಲದಂತೆ ಬೆಂಕಿ ಮನೆಯೆಲ್ಲಾ ಆವರಿಸಿದೆ! ಸೋಮ ಕೊನೆಗೂ ಅದರಿಂದ ಹೊರಬರಲಾರದೆ ಬೆಂಕಿಯಲ್ಲಿ ಸುಟ್ಟು ಬೂದಿಯಾದ - ನೆನ್ನೆ ನಾನು ಹೇಳಿದ ಮಾತಿನಂತೆ.

ಇದಲ್ಲದೆ ಇನ್ನೊಂದು ಘಟನೆ ನಡೆಯಿತು. ಊರಲ್ಲಿ ಕಳ್ಳಬಟ್ಟಿ ಕಾಯಿಸುತ್ತಿದ್ದ ಜಾನಿ ಅಬಕಾರಿ ದಳದವರು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲುಪಾಲಾಗಿ ಸುಮಾರು ಮೂರು ತಿಂಗಳಾದ ಮೇಲೆ ಬೇಲ್ ಮೇಲೆ ಹೊರಬಂದ. ಜಾನಿಗೆ ಬೇಲ್ ಕೊಟ್ಟು ಹೊರಕರೆತಂದವರು ಯಾರೋ ಆಗಿರದೆ ಸ್ವಂತ ನಮ್ಮ ಚಿಕ್ಕಪ್ಪನೇ ಆಗಿದ್ದರು. ನಮಗೆಲ್ಲ ಆಶ್ಚರ್ಯದ ಜೊತೆ ಅನುಮಾನವು ನನ್ನನ್ನು ಸೇರಿದಂತೆ ಅಪ್ಪನಿಗು ಕಾಣಿಸಲಾರಂಭಿಸಿತು. ಇದನ್ನೇ ಮುಂದಿಟ್ಟುಕೊಂಡು ಚಿಕ್ಕಪ್ಪನ ಜೊತೆ ಮಾತಿಗೆ ಮಾತುಂಟಾಗಿ ಅಪ್ಪ  ಆತನನ್ನು ಮನೆಯಿಂದ ಹೊರಗಟ್ಟಿದರು. ಇದರ ಹಿಂದಿರುವ ಕುಮ್ಮಕ್ಕು ಅಮ್ಮನದೆಂದು ಚಿಕ್ಕಪ್ಪನ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯ್ತು. ಇಲ್ಲದಿದ್ದರೆ ಹುಟ್ಟಿದಾಗಿಂದಲು ಒಂದೇಟು, ಬಿಡಿ, ಒಂದೇ ಒಂದು ಜೋರು ಮಾತಾಡದ ಅಣ್ಣ ಹೀಗೆ ಇದ್ದಕ್ಕಿದ್ದಂತೆ ಮನೆಯಿಂದ ದೂರಾಕಲು ಅತ್ತಿಗೆಯಲ್ಲದೆ ಬೇರ್ಯಾರು ಕಾರಣರಲ್ಲವೆಂದು ತಿಳಿದುಕೊಂಡು ಮನೆಯಿಂದ ಹೊರಹೋಗಬೇಕಾದರೆ ಹೊರಹೋಗೆಂದು ಹೇಳಿದ ಅಪ್ಪನನ್ನು ಬಿಟ್ಟು ಅಮ್ಮನನ್ನ್ಯಾಕೆ ಆತ ದುರುದುರುಗುಟ್ಟಿ ನೋಡುತ್ತಿದ್ದ ಹೇಳಿ? ಆತ ನೋಡಿದ ನೋಟವೇನೊ ಸರಿಯಿರಲಿಲ್ಲವೆಂದು ನನಗನ್ನಿಸಿತು. ಅದೇ ಚಿಂತೆಯಲ್ಲಿ ಆ ರಾತ್ರಿ ಮಲಗಿದೆ, ಆಗ ನನಗೊಂದು ಕನಸು ಬಿತ್ತು.

ಅಲ್ಲಿ ಯಾರೋ ಅಪ್ಪನನ್ನು ಗುಂಪುಗೂಡಿ ಸುತ್ತುವರೆದಿದ್ದರು. ಅಪ್ಪನ ಕಾಲಕೆಳಗೆ ಅಮ್ಮ ಬಿದ್ದು ಅಳುತ್ತಿದ್ದಳು. ಅಲ್ಲಿದ್ದ ಯಾರೋ ಒಬ್ಬ ಅಪ್ಪನ ಕೈಗೆ ಒಂದು ಮಚ್ಚು ಕೊಟ್ಟು ಕಡಿ ಎನ್ನುತ್ತಾನೆ. ಅಪ್ಪ ಹಿಂದುಮುಂದು ನೋಡದೆ ಅಮ್ಮನ ತಲೆಯನ್ನು ಕಡಿದೇಬಿಡುತ್ತಾರೆ, ಒಂದೇ ಏಟಿಗೆ! ಅತ್ತಲಿಂದ ಉರುಳಿಬಂದ ಅಮ್ಮನ ತಲೆ ಅಲ್ಲಿ ನಿಂತು ನೋಡುತ್ತಿದ್ದ ನನ್ನ ಕಾಲ ಬಳಿ ಬಂದು ಬೀಳುತ್ತಲೆ ಆಗ ಕೇಳಿಸುತ್ತದೆ ಒಂದು ವಿಕಟಾಟ್ಟಹಾಸದ ನಗು. ಅಲ್ಲಿ ಚಿಕ್ಕಪ್ಪ ನಿಂತು ನಗುತ್ತಿರುತ್ತಾನೆ. ಆ ನಗುವಿನ ಆರ್ಭಟ ತಡೆಯಲಾರದ ನಾನು ತಲೆಗೆ ರೇಜಿಗೆಯೇರಿ ಅಪ್ಪನ ಕೈಲಿದ್ದ ಮಚ್ಚು ತೆಗೆದುಕೊಂಡು ಅಲ್ಲಿದ್ದ ಎಲ್ಲರನ್ನು ತರಗೆಲೆಗಳಂತೆ ಕೊಚ್ಚಿಬಿಸಾಡುತ್ತೇನೆ, ಅಪ್ಪನನ್ನು ಮೊದಲುಗೊಂಡು. ಈಗ ನನ್ನ ಸುತ್ತ ಯಾರೆಂದರೆ ಯಾರೂ ಇಲ್ಲದ ಶೂನ್ಯ ನಿರ್ಭಾವುಕ ಸ್ಥಿತಿ. ಗಾಳಿಯೂ ಕೂಡ ಸುಳಿಯದ ಸ್ತಬ್ದತೆ. ಉಸಿರೂ ಕೂಡ ಬಿಗಿಹಿಡಿದು ಬರುತ್ತಿದೆಯೇನೊ ಎಂಬ ಭಾವ. ಆಗ ಅಲ್ಲಿದ್ದಕ್ಕಿದ್ದಂತೆ ಯಾರೋ ಎದ್ದು ಬರುವ ಸದ್ದಾಗುತ್ತಿದೆ. ನೋಡಿದರೆ ಅಪ್ಪ ಕಡಿದಿದ್ದ ಅಮ್ಮನ ತಲೆ ಮತ್ತೆ ಆಕೆಯ ಹೆಗಲಮೇಲೇರಿ ಮೊದಲಿನಂತಾಗಿ ಆಕೆ ನನ್ನೆಡೆ ನಡೆದು ಬರುತ್ತಿದ್ದಾಳೆ! ನನಗೆ ಎಲ್ಲಿಲ್ಲದ ಭಯವಾಗತೊಡಗಿತು. ಹತ್ತಿರ ಬಂದು ಆಕೆ " ಮಗಾ!" ಎಂದಳಷ್ಟೇ. ನಾನು ಜೋರಾಗಿ ಕಿರುಚುತ್ತ " ಅಮ್ಮಾ!" ಎಂದೆದ್ದೆ.  ಸುತ್ತಲು ಕವಿದಿರುವ ಕಾವಳದಲ್ಲಿ ಮೈಮರೆತು ನಿದ್ರೆ ಹೋಗುತ್ತಿರುವ ಅಪ್ಪ ಅಮ್ಮ ಅಸ್ಪಷ್ಟವಾಗಿ ಕಂಡರು. ಇದು ಕನಸೆಂದು ನನ್ನ ಅರಿವಿಗೆ ಬರಲು ಅದೆಷ್ಟೋ ಹೊತ್ತಾಯಿತು.

ಇದಾದ ಸುಮಾರು ದಿನಗಳ ನಂತರ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ನಾನು ನಮ್ಮ ಮನೆಯ ಮುಂದೆ ಯಾರೋ ಒಂದಷ್ಟು ಜನ ನಿಂತದ್ದು ಕಾಣಿಸಿತು. ಅದೇನೆಂದು ಬಂದು ನೋಡಿದ ನನಗೆ ಒಂದರೆ ಕ್ಷಣ ಕಾಲ ಸ್ತಂಭೀಭೂತವಾದಂತಾಗಿ ನನ್ನ ಕಣ್ಣುಗಳೆರಡನ್ನು ನಾನೇ ನಂಬದಾದೆ. ಕನಸಲ್ಲಿ ಅಂದು ಕಂಡ ಅದೇ ಮಚ್ಚನ್ನು ಅಮ್ಮ ಹಿಡಿದು ನಿಂತಿದ್ದಾಳೆ ತನ್ನ ಕಾಲ ಬಳಿ ಅಪ್ಪನ ತಲೆಯುರುಳಿಬಂದು ಬಿದ್ದಿದ್ದರು ಅದನ್ನು ಗಮನಿಸದೆ ಮೇಲಕ್ಕೆ ನೋಟ ಮಾಡಿ ತದೇಕಚಿತ್ತದಿಂದ ಶೂನ್ಯವನ್ನು ದಿಟ್ಟಿಸಿ ನೋಡುತ್ತ!! ಅಮ್ಮ ಮಚ್ಚಿನಿಂದ ಅಪ್ಪನ ತಲೆಯೊಡೆದುರುಳಿಸಿದ್ದಳು! ಅದೇ ಕನಸಲ್ಲಿ ಕಂಡಂತೆ ಈಗಲು ನಾನು ಕೂಗಿ ಹೇಳಿದ್ದಿಷ್ಟೇ "ಅಮ್ಮಾ!".
ತಲೆತಿರುಗಿ ಬಂದುಬಿದ್ದಿದ್ದ ನನ್ನನು ಉಪಚರಿಸಿ ಮೇಲೆಬ್ಬಿಸಲಾಗಿ ಕಂಡ ವೃತ್ತಾಂತವೆಂದರೆ ಇದನ್ನು ತಾನೆ ಮಾಡಿದ್ದೆಂದು ಅಮ್ಮನೇ ಒಪ್ಪಿಕೊಂಡ ನಂತರ ಪೋಲೀಸರು ಅಮ್ಮನ ಕೈಗೆ ಕೋಳ ತೊಡಿಸಿ ಎಳೆದೊಯ್ಯುತ್ತಿದ್ದರು.

----------------------------------------------------------------------------------------------------------------------------------------------------

ನನಗೆ ಎಚ್ಚರ ಬರುವಷ್ಟರಲ್ಲಿ ಅಪ್ಪನ ವಿಧಿವಿಧಾನಗಳೆಲ್ಲ ಮುಗಿದು ಎರಡು ದಿನವಾಗಿ ಚಿಕ್ಕಪ್ಪನ ಮನೆಯಲ್ಲಿದ್ದೆ. ನಡೆದದ್ದೆಲ್ಲವನ್ನು ಚಿಕ್ಕಪ್ಪ ಸಾಧ್ಯಂತವಾಗಿ ಹೇಳಿದರು. ಒಮ್ಮೆ ಹಾಗೇ ಅವರನ್ನು ನೋಡಿದೆ, ಯಾಕೋ ಕಣ್ಣಲ್ಲಿ ನೀರಾಡಿ ಭೋರ್ಗರೆದು ಜಲಪಾತದಂತಾಗಿ ಬರಲು ಸಿಕ್ಕ ಅವರ ಹೆಗಲಿಗೆ ತಲೆಯಿಟ್ಟೆ ; ನನ್ನ ಅಪ್ಪನ ಹೆಗಲ ಮೇಲೆಯೇ ತಲೆಯಿಟ್ಟಂತಾಯ್ತು. ಅಂದಿನಿಂದ ಚಿಕ್ಕಪ್ಪನೇ ನನ್ನ ತಂದೆತಾಯಿಗೂ ಮೀರಿದ ಸರ್ವಸ್ವವಾಗಿ ನೋಡಿಕೊಂಡು ಬೆಳೆಸಿ ಓದಿಸಿ ದೊಡ್ಡವನನ್ನಾಗಿ ಮಾಡಿದ್ದಾರೆ, ಜೊತೆಗೆ ಮದುವೆಯನ್ನು. ಕೊನೆವರೆಗೂ ಮದುವೆಯಾಗದೆ ಉಳಿದಿದ್ದ ಅವರು ನನ್ನ ಮಗಳನ್ನೆತ್ತಿ ಎರಡು ವರ್ಷ ಆಡಿಸಿ ಕೊನೆಯುಸಿರೆಳೆದರು. ಅವಳನ್ನು ನೋಡಿದರೆ ಚಿಕ್ಕಪ್ಪನೇ ಕಣ್ಣ್ಮುಂದೆ ಬಂದಂಗಾಗುತ್ತದೆ.
ಬೆಳೆದು ದೊಡ್ಡವನಾದ ನಂತರ ನನ್ನ ನಾಲಗೆ ಮೇಲಿರುವ ಕಪ್ಪುಮಚ್ಚೆ ಕುರಿತು ಬಹಳಷ್ಟು ಸಲ ಯೋಚಿಸಿದ್ದೇನೆ - ಇದೇ ನಿನ್ನ ಭವಿಷ್ಯ, ನೀನೇನು ಹೇಳಿದರು ನಡೆಯುತ್ತೆ , ನಿಜವಾಗುತ್ತೆ ಅಂತ ಅಮ್ಮ ಅದೆಂದೋ ಹೇಳಿದ್ದರ ಬಗ್ಗೆ. ನೆನೆಸಿಕೊಂಡರೆ ಹೌದು ನಿಜವಿರಲೂಬಹುದು ಅನಿಸುತ್ತದೆ, ಮರುಕ್ಷಣವೆ ಇದೆಲ್ಲಾ ನಡೆಯುವಂಥದ್ದಾ ಎಂದೆನಿಸಿ ಸುಮ್ಮನಾಗುತ್ತೇನೆ. ಆದರೆ ನನ್ನ ಜೀವನದಲ್ಲಿ ನಡೆದಿರೋ ಇಲ್ಲಿಯತನಕದ ಎಲ್ಲಾ ವಿದ್ಯಮಾನಗಳಿಗು, ನಾನಿರುವ ಸಂದರ್ಭಕ್ಕೂ ತಾಳೆಹಾಕಿ ನೋಡಿದರೆ, ಅಮ್ಮ ಅಂದು ಹೇಳಿದ್ದು ಬಹುಶಃ ನಿಜವಿರಲೂಬಹುದೆಂದೂ ಹಲವಾರು ಬಾರಿ ಅನ್ನಿಸುವುದುಂಟು. ಇಲ್ಲದಿದ್ದರೆ  ನಾನು " ಅಮ್ಮಾ!" ಎಂದು ಎರಡೆರಡು ಬಾರಿ  ಕೂಗಿದ ಭಾವವು  ಅಪ್ಪ ಅಮ್ಮನ ತಲೆಕಡಿದಾಗ ನನಗಾದ ನೋವಿನಂತೆ, ಅಮ್ಮನೂ ಅಪ್ಪನ ತಲೆಕಡಿದಾಗ ಆದ ನೋವಿಗು ಭಾವವೊಂದೆಯೆಂತೆನಿಸುವಂತೆ ನನಗನ್ನಿಸಿದ್ದು ಸುಳ್ಳಾಗಬೇಕಿತ್ತಲ್ಲವೆ? ಆದರೆ ಹಾಗಾಗಿಲ್ಲ. ಕನಸಲ್ಲಿ ಅಮ್ಮಾ ಎಂದು ಕೂಗಿದಾಗ ಆಕೆಯ ತಲೆಕಡೆದ ಅಪ್ಪ ಸಾಯಲಿ ಅಂತ, ಹಾಗೆ ನಿಜದಲ್ಲಿ ಅಪ್ಪನ ತಲೆಕಡಿದ ಅಮ್ಮ ಸತ್ತೇಹೋಗಲಿ ಅಂತ ಅಂದು ಅನ್ನಿಸಿದ್ದರಲ್ಲಿ ಲವಲೇಷಮಾತ್ರವೂ ಬೇಧವಿಲ್ಲ. ಹೀಗೆ ನನ್ನ ಜೀವನ ಪ್ರಯಾಣದಲ್ಲಿ ಬೇಕ್ಕಾದಷ್ಟು ಸಲ ನನಗೆ ಈ ತರ ಅನುಭವಗಳಾಗಿವೆ. ಅದರಲ್ಲಿ ಇದು ಮುಖ್ಯವಾದುದು.

ಆದರೆ ಒಂದೊಂದು ಸಲ ನನಗೆ ನಾನೇ ವಾದಕ್ಕೆ ಗೊಂದಲಕ್ಕೆ ಬಿದ್ದು , ನಾನು ಹೇಳಿದ್ದರಿಂದ ಸೋಮ ಸತ್ತನೊ ಅಥವ ಕಳ್ಳರಿಟ್ಟ ಬೆಂಕಿಗೆ ಸತ್ತನೊ? ಹೇಳದಿದ್ದರೆ ಅವನು ಸಾಯುತ್ತಿರಲಿಲ್ಲವೆ? ನನ್ನ ನಾಲಗೆಯಲ್ಲಿರುವ ಕಪ್ಪುಮಚ್ಚೆಯಿಂದ ಸತ್ತನೆ? ನಾನು ಹೇಳಿದ್ದೆಲ್ಲ ಭವಿಷ್ಯ ನಡೆಯುವುದರಿಂದ ಸತ್ತನೆ? ಹಾಗಾದರೆ ಅಮ್ಮ ಹೇಳಿದ್ದು ನಿಜವೇ? ನಾಲಗೆಯಲ್ಲಿ ಕಪ್ಪುಮಚ್ಚೆಯಿದ್ದರೆ ನುಡಿದದ್ದೆಲ್ಲಾ ನಿಜವಾಗುತ್ತಾ? ಅಥವ ಅವನಿಗಿದ್ದ ದುಷ್ಟದುರುಳತನದಿಂದ ಸತ್ತನೊ? ಹೀಗೆ ಮುಂದುವರಿಯುವ ವಾದ ಗೊಂದಲುಗಳು ಇನ್ನಷ್ಟು ವ್ಯಾಪಿಸಿ, ಅಕಸ್ಮಾತ್ ಅಪ್ಪನು ಅಮ್ಮನು ಒಬ್ಬರೊಬ್ಬರ ತಲೆಕಡಿಯದೆ ಇದ್ದಿದ್ದರೆ, ಆ ಜಾಗದಲ್ಲಿ ಪಾತ್ರಧಾರಿಗಳು ಬೇರೆಯವರಾಗಿ ಅವರು ಹೀಗೆ ಮಾಡಿದ್ದಿದ್ದರೆ ನನ್ನ ಅಪ್ಪ ಅಮ್ಮ ಇಬ್ಬರೂ ಇಂದು ನನ್ನ ಜೊತೆಯಲ್ಲಿರುತ್ತಿದ್ದರು. ಆದದ್ದು ಬೇರೆಯವರಿಗೆ ತಾನೆ,  ಅಪ್ಪಾ ಅಂತಲೋ ಅಮ್ಮಾ ಅಂತಲೋ ಕೂಗಿಕೊಂಡು ತಪ್ಪು ಮಾಡಿದವರ ಮೇಲೆ ನೀವು ಸತ್ತೇಹೋಗಬೇಕೂಂತ  ಅವರಿಗೆ ಶಪಿಸುತ್ತಿದ್ದೆನಾ? ನನಗು ಅವರಿಗು ಏನು ಸಂಬಂಧ? ಅವರ್ಯಾರೂ ನನ್ನವರಲ್ಲವಲ್ಲ?  ಹಾಗೆ ಬೇರೆಯವರಾಗಿದ್ದರು ಅಥವಾ ನನ್ನ ಅಪ್ಪ ಅಮ್ಮನೇ ಆಗಿದ್ದರೂ ಅವರು ಹಾಗೆ ಮಾಡಲು ಕಾರಣವೇನಿದ್ದವೊ? ಸಮಯ ಸಂದರ್ಭಗಳೇಗೆ ಆಡಿಸಿದ್ದವೊ? ಯಾರ ಕೈಗೊಂಬೆಗಳಾಗಿ ಯಾರ್ಯಾರು ಯಾರನಾಡಿಸುತ್ತಿದ್ದರೊ? ಅಂತಲೂ ಅನ್ನಿಸಿ,  ಮತ್ತೆ ಮನಸು ಗೊಂದಲದ ಗೂಡಾಗಿ, ಯಾರೂ ಯಾರನ್ನಾದರು ಏಕೆ ಕೊಲ್ಲಬೇಕು? ಯಾವ ತಪ್ಪಿಗಾಗಿ ಈ ಶಿಕ್ಷೆ? ಎಂಥದ್ದೇ ತಪ್ಪಾಗಿರಲಿ ಕೊಲ್ಲುವುದಾದರು ಯಾತಕೆ? ಕೊಲ್ಲುವುದರಿಂದ ಅವರಿಗಾದ ಅನ್ಯಾಯವಾಗಲಿ, ಅಥವ ಕೊಲೆಯಾದವ ಮಾಡಿದ ತಪ್ಪಿಗಾಗಲಿ ಇವರು ಕೊಂದು ನ್ಯಾಯ ಒದಗಿಸಿದಂತಾಗುತ್ತದೆಯೆ? ಹಾಗಾದರೆ ಸೋಮನ ಸಾವಿಗಾಗಲಿ, ಅಪ್ಪನ ಸಾವಿಗಾಗಲಿ ನಾನು ಕಾರಣವೇ? ನನ್ನ ಮಾತಿಂದಾದಂಥವೇ? ಕೊನೆಗೆ ಅಮ್ಮ ಜೈಲುಪಾಲಾಗಲೂ ನನ್ನ ಮಾತೇ ಆಕೆಗೆ ಮುಳುವಾಯಿತೆ? ಎಂದೆಲ್ಲಾ ಉತ್ತರವಿಲ್ಲದ ನೂರಾರು ಪ್ರಶ್ನೆಗಳು, ಅಲೌಕಿಕ ಆಲೋಚನೆಗಳು ಲೌಕಿಕ ವಸ್ತುಸ್ಥಿತಿಯಾಗಿ ಬಹಳಷ್ಟು ಕಂಡು ಎಂದರೆ, ಬರಿ ಮಾತಿನಲ್ಲಿ ಮುಗಿಸಿಹೇಳಲಾರಲಾಗದಷ್ಟು ಆಳವಾಗಿ ನನ್ನಲ್ಲಿ ಬೇರೂರಿ ಮನೆಮಾಡಿವೆ. ಯಾರು ಕ್ಷಮಿಸಲಾಗದ ತಪ್ಪು ಯಾರು ಯಾರಿಗೇ ಮಾಡಿದ್ದರು, ಒಬ್ಬರು ಇನ್ನೊಬ್ಬರನ್ನು ಕೊಂದು ಪ್ರಾಣ ತೆಗೆದರೆ ಮನುಷ್ಯತ್ವಕ್ಕೆ ಬೆಲೆಯೆಲ್ಲಿ? ಮಾನವತೆಯ ಮಾತೆಲ್ಲಿ? ಪ್ರಾಣಕ್ಕಿರುವ ಬೆಲೆ ಯಕಶ್ಚಿತ್ ಯಾರ ಕೋಪಕ್ಕೊ, ಸೇಡಿಗೊ, ಜಿದ್ದಿಗೊ, ಹಗೆತನಕ್ಕೊ, ಮೋಸಕ್ಕೊ ಬಲಿಯಾಗುವುದಿದ್ದರೆ ಈ ಪ್ರಾಣವೆಂಬ ಪ್ರಾಣವಾದರು ಏಕೆ ಬೇಕು?  ನನ್ನ ಪ್ರಶ್ನಾ ಸರಣಿ ತುಂಡಾಗದ ಸರಪಳಿಯಂತೆ , ಅದು ಮುಗಿಯುವುದೇ ಇಲ್ಲ.
ಕೊನೆಗೆ ನನಗೆ ಅನ್ನಿಸಿದ್ದಿದು : ಇಲ್ಲಿ ಯಾರನ್ನು ಯಾರೂ ನಿಯಂತ್ರಿಸುವುದಾಗಲಿ, ಮೋಸ ಕೊಲೆಯಂಥ ಪಾತಕಗಳನ್ನೆಸಗುವುದಾಗಲಿ, ಅಷ್ಟೇಕೆ, ಬೆಳೆದು ನಿಂತ ಹುಲುಗಡ್ಡಿಯನ್ನಾದರು ಅಲುಗಾಡಿಸುವುದಾಗಲಿ ಕನಿಷ್ಟ ಕೂಡ ಸಾದ್ಯವಿಲ್ಲ ! ಅದರಪಾಡಿಗದು ಸೃಷ್ಟಿನಿಯಮವೇನಿದೆಯೋ ಅದರಂತೆ ನಡೆಯುತ್ತದೆ. ವಿಶ್ವಮಾನವ ಕವಿವಾಣಿ ನೆನಪಾಗಿ ಹೇಳಿದ್ದು ನಿಜವೆನಿಸುತ್ತದೆ : " ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ..."


----------------------------------------------------------------------------------------------------------------------------------------------------

ಇಲ್ಲಿಗೆ ನನ್ನ ಜೀವನದ ಕೊನೆಯ ಯಾನಕ್ಕೆ ಬಂದು ನಿಂತಿದ್ದೇನೆ. ನನಗೀಗ ಸರಿಯಾಗಿ ಮಾತಾಡಲು ಆಗದುದಕ್ಕೆ ಕಾರಣ ನನ್ನ ಗಂಟಲು. ಗಂಟಲು ಕ್ಯಾನ್ಸರ್ ನನ್ನ ಪೂರ್ಣ ಧನಿಯನ್ನು ನುಂಗಿಹಾಕಿದೆ. ಪಾಪ! ಅದು ಬಂತು ಅಷ್ಟೇ, ತಪ್ಪು ಅದರದೇನು ಇಲ್ಲ .  ಪ್ರಶ್ನೆಗಳು, ಸಂದಿಗ್ದತೆಗಳು ಕೇವಲ ನನ್ನ ಮನದಲ್ಲಷ್ಟೇ ಇರದೆ, ನನ್ನ ಹೆಂಡತಿ ಮಕ್ಕಳು, ಬಂಧುಬಳಗ, ನೆಂಟರಿಷ್ಟರು, ಸ್ನೇಹಿತರು, ಸಹೋದ್ಯೋಗಿಗಳು, ಬೀದಿಬದಿ ವ್ಯಾಪಾರಿ, ಭಿಕ್ಷುಕ, ಮುದುಕ, ಕೊನೆಗೆ ಅಪರಿಚಿತರೂ ಸೇರಿದಂತೆ ಎಲ್ಲರಿಗೂ ಅಖಂಡ ಜೀವನ ಪರ್ಯಂತ  ಮೇಲ್ಗಾಣಿಸಿದ ಪ್ರಶ್ನೆಗಳಿಗೆ ಉತ್ತರ  ಕೇಳಿ..ಕೇಳಿ..ಕೇಳೀ...ನನ್ನ ಗಂಟಲು ನನಗೆ ಕೈಕೊಟ್ಟಿತೆಂದು ನನ್ನ ಅನಿಸಿಕೆ. ಆದರೆ ನನ್ನ ಹೆಂಡತಿ ಮಗ ಬೇರೇನೋ ಕಾರಣ ಹೇಳುತ್ತಿದ್ದಾರೆ. ನನಗಂಟಿದ ಈ ಖಾಯಿಲೆಯಲ್ಲೂ ಈ ಉತ್ತರವಿಲ್ಲದ ಪ್ರಶ್ನೆಗಳು ಸಂದಿಗ್ದತೆಗಳು ನನ್ನ ಜೊತೆಯಾಗಿ ಬರಲು ರೆಡಿಯಾದಂತಿದೆ. ಬರಲಿಬಿಡಿ ನನ್ನ ಸಾವಿನ ಜೊತೆ ಬೇಕಾದರು ಅದನ್ನು ಕರೆದೊಯ್ಯಲು ನಾನು ಸಿದ್ದನಿದ್ದೀನಿ.
        
                                                             
                                                                    - ಮುಗಿಯಿತು -

ಮೋಹನ್ ಕುಮಾರ್ ಡಿ ಎನ್
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665
" ನ ಭೂತೋ ನ ಭವಿಷ್ಯತ್ ನ ವರ್ತಮಾನಾ.."

ಈ ಕೃತಿಯ ಹಿಂದೆ ಸರಿಸುಮಾರು ಇಪ್ಪತ್ತು ವರ್ಷಗಳ ಪರಿಶ್ರಮವಿದೆ. ಕೃತಿಗೆ ಒಂದು ಆಯಾಮ ಕೊಡಬೇಕೆಂದರೆ ಹಲವಾರು ಬಗೆಯ ಓಡಾಟ, ಸಂಶೋಧನೆ, ನಿರಂತರ ಓದು, ವಿಷಯದ ಬಗ್ಗೆ ಸ್ಥೂಲ ಅಧ್ಯಯನ, ಕಥೆಯನ್ನು ನಡೆಸುವ ದಿಕ್ಕು, ಪಾತ್ರಗಳು ತಮ್ಮನ್ನು ತಾವು ತೆರೆದುಕೊಳ್ಳುತ್ತಾ ಓದುಗರನ್ನು ತನ್ನೊಳಗೆ ಎಳೆದು ತರುವ ಹಾಗೆ ಬರೆಯುವಿಕೆ... ಹೀಗೆ ಹಲವಾರು ಅಂಶಗಳು ಕೂಡಿದರೆ ಒಂದೆರೆಡು ಆಯಾಮ ನೀಡುವಂತಹ ಕೃತಿ ರಚನೆ ಬರಹಗಾರನಿಗೆ ಸಾಧ್ಯವಾಗುತ್ತದೆ.

ಆದರೆ ಒಂದೇ ಕೃತಿಯಲ್ಲಿ ಐತಿಹಾಸಿಕ, ಚಾರಿತ್ರಿಕ ಮತ್ತು ಸಾಮಾಜಿಕ ಆಯಾಮವನ್ನು ತರುವುದು ಅಷ್ಟು ಸುಲಭ ಸಾಧ್ಯವಲ್ಲ. ಘಟನೆಗಳನ್ನು ಪೋಣಿಸುವಾಗ ಬಹಳ ಎಚ್ಚರದಿಂದ ಬರೆಯಬೇಕು. ಅದರಲ್ಲಿ ಅನುಸಾರವಿರಬೇಕು, ಒಂದಕ್ಕೊಂದು ಹೊಂದುವಂತಿರಬೇಕು, ಎಲ್ಲೂ ಘಟನೆಗಳ ಅದಲು ಬದಲಾವಣೆ ಇರಕೂಡದು, ಓದುಗರನ್ನು ಸೂಜಿಗಲ್ಲಿನಂತೆ ಹಿಡಿದು ಎಲ್ಲೂ ಬೇಸರವಾಗದಂತೆ ಬರೆಯಬಲ್ಲ ಚಾಕಚಕ್ಯತೆ ಇರಬೇಕು. ಆ ಅನುಭಾವಕ್ಕೆ ನಮ್ಮನ್ನು ಈಡು ಮಾಡುವುದು ಬರಹಗಾರನ ಒಟ್ಟೂ ಪರಿಶ್ರಮ, ವಿಷಯ ಪಾಂಡಿತ್ಯ, ಹೇಳಹೊರಟಿರುವ ವಿಷಯದಲ್ಲಿ ತಾನು ಸಾಧಿಸಿರುವ ಪ್ರಬುದ್ದತೆಯ ಮೇಲೆ ಅವಲಂಬಿಸಿರುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬರಹಗಾರನ ಕಲ್ಪನಾಶಕ್ತಿ ಮತ್ತದರ ವಿಸ್ತೀರ್ಣತೆ ವಿಶಾಲವಾಗಿರಬೇಕು. ಬಹುಶಃ ಇದಕ್ಕೇ ಹೇಳುತ್ತಾರೆ, ಜ್ಞಾನಕ್ಕಿಂತ ಕಲ್ಪನೆ ದೊಡ್ಡದು ಎಂದು. ನೀವು ಈ ಕಾದಂಬರಿಯನ್ನು ಪೂರ್ಣವಾಗಿ ಓದುವ ಮೊದಲೇ ಈ ವಿಷಯ ನಿಮ್ಮ ಗಮನಕ್ಕೆ ಬರುತ್ತದೆ, ಓದುತ್ತಾ ಓದುತ್ತಾ ಹೋದಂತೆ ಮೊದಲಿಗಿಂತ ಹೆಚ್ಚು ಕಲ್ಪನಾಲೋಕದ ವಿಲಾಸದಲ್ಲಿ ನಿಮ್ಮನ್ನು ತೂರಿ ಓದುವ ಹೊಸ ತೆರನಾದ ಅನುಭವ ನಿಮ್ಮಲ್ಲಿ ತೆರೆದುಕೊಂಡು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

ಹೀಗೆ ತನ್ನದೆನ್ನುವ ಎಲ್ಲವನ್ನೂ ಅಮೃತಧಾರೆ ಎರಕಹೊಯ್ದು ಸವಿ ಉಣಬಡಿಸಿರುವ ಮಹಾನ್ ಕಾದಂಬರಿಯೇ ಕುಂ. ವೀ. ಅವರ ಮಹದ್ಗ್ರುತಿ "ಅರಮನೆ".


ಇದನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೆ, ಅರ್ಥಮಾಡಿಕೊಂಡು ಅರಗಿಸುಕೊಳ್ಳುವುದಕ್ಕೆ ನಿಶ್ಚಲ ಶಾಂತಿ ಮತ್ತು ಅಪಾರ ತಾಳ್ಮೆ ಬೇಕು. ಏಕೆಂದರೆ ಎಲ್ಲ ಕಥೆ ಕಾದಂಬರಿಯಂತೆ ಇದು ನಮ್ಮನ್ನು ಓದಿಸಿಕೊಂಡು ಹೋಗುವುದಿಲ್ಲ. ಆತುರಕ್ಕೆ ಬಿದ್ದು ಓದಿದರೆ ಅರ್ಥವೇ ಆಗುವುದಿಲ್ಲ. ಒಂದೇ ಪಟ್ಟಿಗೆ ಹಿಡಿತಕ್ಕೆ ಸಿಗುವುದಿಲ್ಲ. ಕಬ್ಬಿಣದ ಕಡಲೆ ಎನಿಸಿದರೂ ಓದುವವನ ಶಾಂತಿ ತಾಳ್ಮೆಗಳು ಈ ಕಾದಂಬರಿಯನ್ನು ಓದುವ ಪರೀಕ್ಷೆಗೊಳಪಟ್ಟು ಅದರಲ್ಲಿ ಗೆದ್ದರೆ (ಕಡೇ ಪಕ್ಷ ಆರಂಭಿಕ ಪುಟಗಳಷ್ಟಾದರೂ) ಇದು ನಿಮ್ಮನ್ನು ಮುಂದೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಆರಂಭಿಕ ಹದವನ್ನಷ್ಟೇ ನಾವು ಸಾಧಿಸಬೇಕಿರುವುದು.


ಏಕೆಂದರೆ ಇದು..

ಒಂದೆರೆಡು ಪಾತ್ರವಲ್ಲ, ಒಂದೆರೆಡು ವ್ಯಕ್ತಿಗಳ ಜೀವನವಲ್ಲ, ಒಂದೆರೆಡು ಘಟನೆಯಲ್ಲ, ಒಂದೆರೆಡು ಹಿನ್ನೆಲೆಯಲ್ಲ, ಒಂದೆರೆಡು ಕಥೆಯಲ್ಲ, ಒಂದೆರೆಡು ಉಪಕಥೆಯಲ್ಲ, ಒಂದೆರೆಡು ಸನ್ನಿವೇಶವಲ್ಲ, ಒಂದೆರೆಡು ಜಾಗವಲ್ಲ, ಒಂದೆರೆಡು ಕಾಲಘಟ್ಟವಲ್ಲ, ಒಂದೆರೆಡು ನಂಬಿಕೆಯಲ್ಲ, ಒಂದೆರೆಡು ಕುರುಡು ನಂಬಿಕೆಯಲ್ಲ, ಒಂದೆರೆಡು ಆಚಾರ ವಿಚಾರವಲ್ಲ, ಒಂದೆರೆಡು ರೀತಿ ರಿವಾಜುವಲ್ಲ, ಒಂದೆರೆಡು ನಡೆನುಡಿಯಲ್ಲ, ಒಂದೆರೆಡು ಕಿರುಪರಿಚಯವಲ್ಲ, ಒಂದೆರೆಡು ಧೀರ್ಘ ಪರಿಚಯವಲ್ಲ, ಒಂದೆರೆಡು ವಿಷಯಗಳ ಪರಾಮರ್ಶೆಯಲ್ಲ, ಒಂದೆರೆಡು ನೋಟಗಳ ವಿಮರ್ಶೆಯಲ್ಲ, ಒಂದೆರೆಡು ಅವಾಸ್ತವಿಕತೆಯ ಸಂಘರ್ಷವಲ್ಲ, ಒಂದೆರೆಡು ವಾಸ್ತವಿಕದ ವಿಡಂಬನೆಯಲ್ಲ, ಒಂದೆರೆಡು ರಾಜಮನೆತಗಳ ಅಧಿಕಾರಿಶಾಹಿತ್ವವಲ್ಲ, ಒಂದೆರೆಡು ಪಾಳೇಪಟ್ಟುಗಾರರ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಕರುಣಜನಕ ಕಥೆಯಲ್ಲ, ಒಂದೆರೆಡು ಸಾಂಮಂತ ಮಾಂಡಲೀಕರ ಆಡಳಿತವಲ್ಲ, ಒಂದೆರೆಡು ಹೆಂಗಸರ ದೌರ್ಜನ್ಯದ ಆಲಾಪನೆಯಲ್ಲ, ಒಂದೆರೆಡು ಗಂಡಸರ ಕೆಲಸಕ್ಕೆ ಬಾರದ ಬರುವ ಹೆಳವನಕಟ್ಟೆ ಪುರಾಣವಲ್ಲ, ಒಂದೆರೆಡು ತಂದೆತಾಯಿಗಳ ಅಣ್ಣತಮ್ಮಅಕ್ಕರ ಸವಿ ಬಾಂಧವ್ಯವಲ್ಲ, ಒಂದೆರೆಡು ಸಂಬಂಧಿ, ಸ್ನೇಹಿತರ ನಯವಂಚಕತೆಯಲ್ಲ, ಒಂದೆರೆಡು ಜೋಡಿ ಪ್ರೇಮಿಗಳ ಗುಪ್ತ ಗುಪ್ತ ಸರಸವಲ್ಲ, ಒಂದೆರೆಡು ಜೊತೆ ಗಂಡಹೆಂಡಿರ ಮನೋದೈಹಿಕ ವಿಕಸನೆಯಲ್ಲ, ಒಂದೆರೆಡು ಕೋಮುಗಳ ಗಲಭೆಯಲ್ಲ, ಒಂದೆರೆಡು ವಿದ್ಯೆಯುಳ್ಳವರ ಅಪರೂಪದ ವಿವರಣೆಯಲ್ಲ, ಒಂದೆರೆಡು ವಿಫಲ ದಂಡಯಾತ್ರೆಗಳ ವಿವರಗಳಲ್ಲ, ಒಂದೆರೆಡು ಸಾಮ್ರಾಜ್ಯ ವಿಸ್ತರಣೆಯ ಹಪಹಪಿತನವಲ್ಲ, ಒಂದೆರೆಡು ವಸಾಹತು ಶಾಹಿಗಳ ಆರಂಭವಲ್ಲ, ಒಂದೆರೆಡು ಸಂಸ್ಕೃತಿಗಳ ಪುನರ್ಮಿನಲವಲ್ಲ, ಒಂದೆರೆಡು ಅಸಾಂಸ್ಕೃತಿಕ ನೆಲೆಗಳ ವೈಭವೀಕರಣವಲ್ಲ, ಒಂದೆರೆಡು ಹೊಸ-ಹಳೆಯದರ ನಡುವಿನ ವೈರತ್ವವಲ್ಲ, ಒಂದೆರೆಡು ಅಂತರಂಗ ಬಹಿರಂಗಗಳ ನಯ ನಾಜೂಕಲ್ಲ, ಒಂದೆರೆಡು ಅರಮನೆಗಳ ವರ್ಣನೆಯಲ್ಲ, ಒಂದೆರೆಡು ಅರಮನೆಗಳ ಹೀನ ಸ್ಥಿತಿಗೆ ಕಾರಣ ಒಂದೆರಡಲ್ಲ, ಒಂದೆರೆಡು ಅಧಿಕಾರ ಉಂಡು ಮೆರೆದವರ ದೈನೇಸಿ ಸ್ಥಿತಿಯಲ್ಲ, ಒಂದೆರೆಡು ಅದೇ ಅಧಿಕಾರಕ್ಕಾಗಿ ಆಳುವವರ ಕಂಬನಿಯಲ್ಲ, ಒಂದೆರೆಡು ಸಿಂಹಾಸನಕ್ಕಾಗಿ ತಲೆಗಳುರುಳಿಸಿದ ಕಟುಕರ ನಿರ್ದಯತೆಯಲ್ಲ, ಒಂದೆರೆಡು ಸಂಸ್ಥಾನಗಳ ಅರಾಜಕತೆಯಲ್ಲ, ಒಂದೆರೆಡು ಗ್ರಾಮಗಳ ಜನರ ಅಭದ್ರ ಜೀವನದ ಕನಸುಗಳಲ್ಲ, ಒಂದೆರೆಡು ಕನಸು ಕಂಡವರ ಅವಿರತ ಕಾರ್ಯಸಿದ್ದಿ ಯಶೋಗಾಥೆಯಲ್ಲ, ಒಂದೆರೆಡು ಜನಾನುರಾಗಿ ಕೆಲಸ ಮಾಡಿದ ನಿಷ್ಠಾವಂತರ ನರಳುವಿಕೆಯಲ್ಲ, ಒಂದೆರೆಡು ಬಾರಿ ಗಳ ಇರಿಯುವ ಮಂದಿಯ ಕ್ರೂರತ್ವವಲ್ಲ, ಒಂದೆರೆಡು ತಣ್ಣನೆಯ ಕ್ರೌರ್ಯದ ಪರಮಾವಧಿಯಲ್ಲ, ಒಂದೆರೆಡು ಸೇಡುಗಳ ಬೆನ್ನತ್ತುವಿಕೆಯಲ್ಲ, ಒಂದೆರೆಡು ಔದಾರ್ಯದ ಉದಾಹರಣೆಯ ವಿವರಣೆಯಲ್ಲ, ಒಂದೆರೆಡು ಕಟುತ್ವದ ಕರುಳು ಹಿಂಡುವಿಕೆಯಲ್ಲ, ಒಂದೆರೆಡು ದೇಶಭಕ್ತಿಯ ಸೂಫಿ ಗಾಯನವಲ್ಲ,
ಒಂದೆರೆಡು ಜನಮನ್ನಣೆಯ ತಾರಕ ಸಂಗೀತವಲ್ಲ, ಒಂದೆರೆಡು ಅಧಿಕಾರಶಾಹಿಗಳ ಬಿಸಿರಕ್ತ ಕುಡಿಯುವಿಕೆಯ ವಿಕೃತವಲ್ಲ, ಒಂದೆರೆಡು ಅಧಿಕಾರಗಳ ನಿಷ್ಠ ಸೇವೆ ಉಂಡ ನಾಡ ಸುಕೃತವಲ್ಲ, ಒಂದೆರೆಡು ಅಧಿಕಾರತ್ವದ ಹಪಹಪಿ ಗರಿಷ್ಠ ಮಟ್ಟ ತಲುಪಿದರ ಸಂಕೇತವಲ್ಲ, ಒಂದೆರೆಡು ಕಿರಾತಕರ ಒಡಲೊಳಗಿನ ನಿರ್ಭಾಗ್ಯ ನಿಟ್ಟುಸಿರಲ್ಲ, ಒಂದೆರೆಡು ಯುದ್ಧದಾಹಿ ಪಡೆಯ ಅಗೋಚರ ಆಗುಂತುಕತನವಲ್ಲ, ಒಂದೆರೆಡು ರಕ್ತಪಿಪಾಸುಗಳ ಭಯಂಕರ ರಣೋತ್ಸಾಹವಲ್ಲ, ಒಂದೆರೆಡು ಶಾಂತಾವಧೂತರ ರಣರಹಿತ ಸಮಾಜ ನಿರ್ಮಾಣದ ಏಗುವಿಕೆಯಲ್ಲ, ಒಂದೆರೆಡು ಕಲುಷಿತ ಮನಸುಗಳ ಒಡೆದು ಆಳುವ ಹಾಳು ಮಾಡುವ ಕುತಂತ್ರವಲ್ಲ, ಒಂದೆರೆಡು ಅಮಾಯಕ ಜನರ ಮೇಲಾಗುವ ಆಕ್ರಮಣವಲ್ಲ, ಒಂದೆರೆಡು ಮುಗ್ದ ಮನಸ್ಸುಗಳ ಮೇಲಾಗುವ ಅತ್ಯಾಚಾರವಲ್ಲ, ಒಂದೆರೆಡು ಸವಿಗನಸುಗಳ ಕಗ್ಗೊಲೆಯಲ್ಲ, ಒಂದೆರೆಡು ಮನಸ್ಸುಗಳ ಪರಸ್ಪರ ವಿರೋಧಾಭಾಸವಲ್ಲ, ಒಂದೆರೆಡು ಕನಸ್ಸುಗಳ ಬೆಸೆಯುವಿಕೆಯಲ್ಲ, ಒಂದೆರೆಡು ಊರುಗಳ ನಿಟ್ಟುಸಿರಲ್ಲ, ಒಂದೆರೆಡು ಭಟ್ಟಂಗಿಗಳ ದೊಂಬರಾಟವಲ್ಲ, ಒಂದೆರೆಡು ಬುಡಕಟ್ಟುಗಳ ಕಳೆಗುಂದಿದ ಕಲಾಹೀನತೆಯಲ್ಲ, ಒಂದೆರೆಡು ಜಾನಪದ ಗೀಗೀಪದ ಡೋಲು ಕಂಸಾಳೆ ಕುಣಿತಗಾರರ ಜೀವನೋತ್ಸಾಹವಲ್ಲ, ಒಂದೆರೆಡು ತಲೆಮಾರಿನ ಕಾಗಕ್ಕ ಗುಬ್ಬಕ್ಕಗಳ ವ್ಯಸನತೆ ವ್ಯಾಕುಲತೆಯಲ್ಲ, ಒಂದೆರೆಡು ಯುವಜನಾಂಗದ ಸಾವಿರ ಕನಸ್ಸುಗಳ ಸುಂದರ ಹೂಮಾಲೆಯಲ್ಲ, ಒಂದೆರೆಡು ಸೌಂದರ್ಯೋಪಾಸನೆಯ ಹಲವು ನಮೂನೆಗಳಲ್ಲ, ಒಂದೆರೆಡು ಭಗ್ನ ಪ್ರೇಮಿಗಳ ಒಡೆದ ಹೃದಯದ ಆರ್ತನಾದವಲ್ಲ, ಒಂದೆರೆಡು ಪುರಾಣಗಳ ಬಂಡಾರವಲ್ಲ, ಒಂದೆರೆಡು ಕಲಾವಿದರ ಸಂಗಮವಲ್ಲ, ಒಂದೆರೆಡು ಶಾಸ್ತ್ರಾರಚನೆಗಳ ಸಮ್ಮಿಲನವಲ್ಲ, ಒಂದೆರೆಡು ಕೋಮುಗಳ ತಾರ್ಕಿಕ ಅಂತ್ಯವಲ್ಲ, ಒಂದೆರೆಡು ಕ್ರೌರ್ಯ ಹುಟ್ಟುವ ಸಾಯುವ ಸಾಯಿಸುವ ಅಮೂರ್ತ ಘಳಿಗೆಗಳಲ್ಲ, ಒಂದೆರೆಡು ಗುಂಪುಗಳ ಅಸಹಾಯಕತೆಯಲ್ಲ, ಒಂದೆರೆಡು ಮನೆತನಗಳ ಕಟ್ಟೆಪುರಾಣವಲ್ಲ, ಒಂದೆರೆಡು ಜಾತಿ ಮತಗಳ ಕಲಸೊಮೇಗರವಲ್ಲ, ಒಂದೆರೆಡು ಅಂತಸ್ತಿನ ಪ್ರತಿಷ್ಠತೆಯಲ್ಲ, ಒಂದೆರೆಡು ಸಾಮಾನ್ಯ ಸಂಗತಿಗಳಲ್ಲ, ಒಂದೆರೆಡು ಅಸಾಮಾನ್ಯ ಸಂಗತಿಗಳಲ್ಲ, ಒಂದೆರೆಡು ಹಿನ್ನೆಲೆಯಲ್ಲ, ಒಂದೆರೆಡು ಮುನ್ನೆಲೆಯಲ್ಲ, ಒಂದೆರೆಡು ವಿದ್ಯಾಮಾನಗಳಲ್ಲ, ಒಂದೆರೆಡು ಸವಿಸ್ತಾರವಲ್ಲ, ಒಂದೆರೆಡು ಸಂಕುಚಿತವಲ್ಲ, ಒಂದೆರೆಡು ಜನಜೀವನವಲ್ಲ, ಒಂದೆರೆಡು ಲೌಕಿಕವಲ್ಲ, ಒಂದೆರೆಡು ಅಲೌಕಿಕವಲ್ಲ, ಒಂದೆರೆಡು ನಿಟುಕದಿರುವ ಭೂತಮಾನವಲ್ಲ, ಒಂದೆರೆಡು ಕೈಗೂಡದಿರುವ ವರ್ತಮಾನದ ವರ್ತನೆಯಲ್ಲ, ಒಂದೆರೆಡು ಭವಿಷ್ಯತ್ ದೈವೀಕತೆಯಲ್ಲ.... ನ ಭೂತೋ ನ ಭವಿಷ್ಯತ್ ನ ವರ್ತಮಾನಾ..

"ಅರಮನೆ" ಈ ಮೇಲ್ಗಾಣಿಸಿದ ಎಲ್ಲದರ ಅನೂಹ್ಯ ಸಂಮ್ಮಿಶ್ರಣ. ಈ ಕಾದಂಬರಿಯ ಕಥಾವಸ್ತು ನಡೆಯುವುದು ಸ್ವಾತಂತ್ರ್ಯಪೂರ್ವದಲ್ಲಿ. ಸುಮಾರು 567 ಪುಟಗಳಷ್ಟಿರುವ ಬೃಹತ್ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕುಂ ವೀ ಅವರ ಹೊಸ ಭಾಷಾ ಪಾಂಡಿತ್ಯಕ್ಕೆ ಮನಸೋಲುವಿರಿ. ನಮ್ಮ ಹಿಂದಿನ ಜನಾಂಗದ ಸಮಗ್ರ ದರ್ಶನದ ಜೊತೆ, ಸ್ವಾತಂತ್ರ್ಯ ಪೂರ್ವೇತಿಹಾಸ, ವಸಾಹತುಶಾಹಿ, ಅಪರೂಪ ಮತ್ತು ಅನುಕರಿಸಲಾಧ್ಯವಾದ ಅವರ ಜೀವನ ಶೈಲಿ, ಮಾನವನ ಮೂಲಭೂತ ನಡಾವಳಿಗಳ ಸ್ಥೂಲ ಪರಿಚಯವಾಗುವುದರ ಜೊತೆ ಜ್ಞಾನಕ್ಕಿಂತ ಕಲ್ಪನೆ ದೊಡ್ಡದು ಎನ್ನುವುದರ ಸಾರ್ವಕಾಲಿಕ ಸತ್ಯದರ್ಶನವಾಗುತ್ತದೆ. ಇದರ ಕೂಲಂಕುಷ ಕಥೆ, ಕಥಾ ವಸ್ತು ಹೇಳುವುದು ಯಾರ ಕೈಯ್ಯಿಂದಲೂ ಸಾಧ್ಯವಿಲ್ಲ. ಮತ್ತೊಮ್ಮೆ ಕೂತರೂ ಸ್ವತಃ ಕುಂ ವೀ ಅವರಿಂದಲೂ! ಹಾಗಿದೆ ಕಾದಂಬರಿ. ಇದನ್ನು ಓದುವವರೆಗೂ ನಾನು ನಾನಾಗಿರಲಿಲ್ಲ ಅಂತಷ್ಟೇ ಹೇಳಬಯಸುತ್ತೇನೆ. ಅದರೊಳಗಿನ ನಶೆ ನನ್ನನ್ನು ಎಂದು ಬಿಡುತ್ತದೋ ಕಾಣೆ. ವಿವರಿಸಲಾಗದ ವಿಪ್ಲವದಲ್ಲಿ ನನ್ನ ಮನಸ್ಸು ಸಮಾಧಿಯಾಗಿದೆ.

ಕುಂ. ವಿ. ನನ್ನೊಳಗೆ ಆವರಿಸಿದ್ದಾಗಿದೆ.

ಎರಡು ಸಾಲು ಹೆಚ್ಚಿಗೆ ಬರೆದೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ



https://www.facebook.com/groups/nanobbapustakapremi/permalink/1519301061470679/

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...