Monday, November 27, 2017

"ಟ್ರೈನ್ ಟು ಪಾಕಿಸ್ತಾನ್"

ನಮಗೆ ಕೇವಲ ಪಠ್ಯ ಪುಸ್ತಕದಲ್ಲಿ, ಟೀವಿ ಕಾರ್ಯಕ್ರಮದಲ್ಲಿ ಅಥವಾ ಯೂ ಟ್ಯೂಬಿನ ಡಾಕ್ಯುಮೆಂಟರಿಯಲ್ಲಿ ದೇಶ ವಿಭಜನೆ ಬಗ್ಗೆ ನೋಡಿ ಗೊತ್ತಿದೆಯಷ್ಟೇ. ಒಂದು ಸಲ ಈ ಕಾದಂಬರಿಯನ್ನು ಓದಿ ನೋಡಿ! ವಿಭಜನೆ ಎನ್ನುವ ಬೃಹತ್ತ್ ಕದನವು ಅದೆಷ್ಟು ಭೀಕರವಾಗಿತ್ತು, ಅದೆಷ್ಟು ಅಮಾಯಕರ ಜೀವ ಬಲಿ ಪಡೆದಿತ್ತು, ಹೆಂಗಸರ ಮಕ್ಕಳ ಮಾರಣಹೋಮ ನಡೆದಿತ್ತು ಎನ್ನುವುದು ಅರಿವಿಗೆ ಬರುತ್ತದೆ. ಎರಡೂ ಕಡೆ ಪ್ರಾಣ ಮಾನ ಆಸ್ತಿ ಹರಣವಾಗಿತ್ತು. ಆದರೆ ದೆಹಲಿಯ ಏಸಿ ರೂಮಿನಲ್ಲಿ ಕುಳಿತು ಕಾನೂನು ರೂಪಿಸುವ ಜನರಿಗೆ ಗಡಿಯಲ್ಲಿ ಕೋಮುದಳ್ಳುರಿಯ ತಾಪಕ್ಕೆ ಸಿಲುಕಿ ಎದುರಿನ ಅನ್ಯ ಕೋಮಿನವವನ್ನು ಸದೆ ಬಡಿಯಲು ಹೊರಟವನ ಮನಸ್ಥಿತಿ ತಿಳಿದೀತೇ? ಹೆಂಗಸರನ್ನು ಯಾವನೋ ಒಬ್ಬ ತಮ್ಮ ಕಣ್ಣೆದುರೇ ಹೊಸಕಿ ತಿನ್ನುವಾಗ ಪೌರುಷ ಎಂಥಹವನನ್ನೂ ಕೆಣಕದೆ ಸುಮ್ಮನೆ ಬಿಟ್ಟೀತೇ? ಮಕ್ಕಳ ಎದೆಗೆ ಬಕ್ಕೆ ಬರುವಂತೆ ಚೂರಿಯಿಟ್ಟು ಪ್ರಾಣಹರಣ ಮಾಡುವುದನ್ನು ಸುಮ್ಮನೇ ಸಹಿಸಿ ನೋಡಲಾದೀತೇ? ಕೊಲ್ಲಲು ಬಂದವನ ಮುಂದೆ ಭಾಯಿ ಭಾಯಿ ಎನ್ನುವ ಮಂತ್ರ ಕೆಲಸ ಮಾಡುವುದೇ? ಇದ್ಯಾವುದೂ ದೆಹಲಿಯ ದೊರೆಗಳಿಗಾಗಲಿ, ಲಾಹೋರದ ಮೌಲ್ವಿಗಳಿಗಾಗಲಿ ತಿಳಿಯುವುದಿಲ್ಲ. ನಮ್ಮ ಮಂದಿ ಸತ್ತಿದ್ದಾರೆ, ಅನ್ಯ ಕೋಮಿನ ಹತ್ತು ಪಟ್ಟು ಮಂದಿಯನ್ನು ಕೊಲ್ಲಬೇಕು ಎನ್ನುವುದೇ ಅವರಿಗೆ ಮುಖ್ಯವಾಗಿ ಕಾಣಿಸುತ್ತದೆ. ಕೊಲ್ಲಲು ಬಂದವನಿಗೆ ಯಾವ ವೇದಾಂತಗಳು ಸಿದ್ಧಾಂತಗಳು ವೇದ್ಯವಾಗುವುದಿಲ್ಲ. ಅವನಿಗೆ ಬೇಕಿರುವುದು ಎದುರಿರುವನ ಪ್ರಾಣ ಅಷ್ಟೇ, ಅದು ಯಾರಾದಾಗಿದ್ದರೂ ಪರವಾಗಿಲ್ಲ.

ಹೀಗಿದ್ದ ಜನರ ಮನಃಪರಿವರ್ತನೆ ಮಾಡುವ ದಿಟ್ಟ ಕ್ರಮಗಳನ್ನು ಅಂದಿನ ಉಭಯ ಸರಕಾರಗಳು ಏಕೆ ತೆಗೆದುಕೊಳ್ಳಲಿಲ್ಲ ಎನ್ನುವ ರಾಜಕೀಯ ಚಾಣಾಕ್ಷ್ಯ ಸಂಬಂಧಿ ಸೂಕ್ಷ್ಮ ವಿಚಾರವನ್ನು ಕಾದಂಬರಿಯಲ್ಲಿ ಸೂಕ್ಷ್ಮವಾಗಿ ಹೆಣೆಯಲಾಗಿದೆ. ರಾಜಕೀಯ ನೀತಿ ರೂಪಿಸಲು ಬೇಕಾಗಿದ್ದ ಕುಶಲತೆಗೆ, ಅಂದಿನ ನಾಯಕರು ಪರಿಸ್ಥಿತಿಯನ್ನ ಸಮರ್ಥವಾಗಿ ನಿರ್ವಹಿಸದ ವೈಫಲ್ಯತೆಗೆ, ದೇಶ ವಿಭಜನೆ ಎನ್ನುವುದೊಂದು ಬೃಹತ್ತ್ ನಾಟಕವೇ ಸಾಕ್ಷಿ.

ಅದೊಂದು ಸುಂದರ ಹಳ್ಳಿ. ಭಾಗಶಃ ಗಡಿಗೆ ಹೊಂದಿಕೊಂಡಂತೆ ಇತ್ತು, ಹೆಸರು ಮನೋ ಮಜ್ರಾ ಎಂದು. ದೇಶ ಒಡೆದು ಇಬ್ಬಾಗವಾದಾಗ ಇಲ್ಲಿನ ಜನರು ನೆಮ್ಮದಿಯಿಂದಲೇ ಇದ್ದರು, ಮುಖ್ಯವಾಗಿ ಸಿಖ್ಖ್ ಮತ್ತು ಮುಸ್ಲಿಂ ಜನಾಂಗ. ಪಂಜಾಬ್ ಪ್ರಾಂತ್ಯವಾದ್ದರಿಂದ ಹಿಂದುಗಳು ಇದ್ದರೂ, ಹಿಂದುಗಳಿಗಿಂತ ಸಿಖ್ಖರು ಜನಸಂಖ್ಯೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಾಗಲಿ, ಸ್ವಾತಂತ್ರ್ಯಕ್ಕೋಸ್ಕರ ತನ್ನ ಜೀವನವನ್ನು ಮುಡಿಪಿಟ್ಟ ಗಾಂಧಿಯಾಗಲಿ, ಪ್ರಧಾನಿ ನೆಹರು ಬಗ್ಗೆಯಾಗಲಿ ಇಲ್ಲಿನ ಮಂದಿಗೆ ಹೆಚ್ವು ತಿಳಿದಿಲ್ಲ. ಎಲ್ಲಿಂದಲೋ ತೇಲಿ ಬಂದ ಸುದ್ದಿಯನ್ನು ನಂಬಿ ಬದುಕುವ, ತಾವು ಕೇಳಿದ್ದನ್ನೇ ಒಪ್ಪಿಕೊಳ್ಳುವ ಜನ ಇಲ್ಲಿನವರು.

ದೇಶದಲ್ಲಿ ಕೋಮುದಳ್ಳುರಿ ತನ್ನ ರುದ್ರ ಪ್ರತಾಪವನ್ನು ತೋರುತ್ತಾ ಸಹಸ್ರಾರು ಜನರನ್ನು ಬಲಿ ತೆಗೆದುಕೊಳ್ಳುವಾಗಲೂ ಈ ಹಳ್ಳಿ ಬಾಹ್ಯ ಪ್ರಪಂಚದ ಕ್ಷೋಭೆಗೆ ಒಳಗಾಗಿರುವುದಿಲ್ಲ. ಅತ್ತ ಕಡೆ ಪಾಕಿಸ್ತಾನದಿಂದ ಹಿಂದುಗಳ ಮಾರಣ ಹೋಮ ನಡೆಸಿ ಹೆಣಗಳನ್ನು ಅತ್ಯಂತ ಕರಣಾಜನಕವಾಗಿ, ಊಹಿಸಲೂ ಆಗದ ದಾರುಣ ಸ್ಥಿತಿಯಲ್ಲಿ ರೈಲಿನಲ್ಲಿ ಹೇರಿ ಕಳುಹಿಸಿದಾಗಲೂ ಇಲ್ಲಿ ಧರ್ಮ ಭೇಧ ತೆಲೆದೋರುವುದಿಲ್ಲ. ಇಲ್ಲಿನವರ ಸೌಹಾರ್ದತೆ ಹೇಗಿರುತ್ತದೆಂದರೆ ಬೆಳಗಾಗುವುದನ್ನು ತಿಳಿಯಬೇಕೆಂದರೆ ಗುರುದ್ವಾರದ ಸಂತ ಮೀತ್ ಸಿಂಗ್ ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಯ ಮೌಲ್ವಿ ಅಲ್ಲಾ ಭಕ್ಷ್ ಕಾಯುತ್ತಾನೆ ಮತ್ತು ಅಲ್ಲಾ ಭಕ್ಷ್ ಪ್ರಾರ್ಥನೆ ಸಲ್ಲಿಸಿ ಊರನ್ನು ಎಬ್ಬಿಸಲೆಂದು ಗುರು ಮೀತ್ ಕಾಯುತ್ತಾನೆ. ಆ ಮಟ್ಟಿಗಿನ ಭಾಂಧವ್ಯ ಎರಡೂ ಕಡೆ ಇರುತ್ತದೆ.

ದಿನ ನಿತ್ಯದ ಬದುಕಲ್ಲಿ ಒಬ್ಬರಿಗೊಬ್ಬರು ಸಹಕಾರವೀಯುತ್ತಾ ಅನ್ಯೋನ್ಯತೆಯೊಂದಿಗೆ ಸಹಬಾಳ್ವೆಯನ್ನು ನಡೆಸುತ್ತಾ ಬಂದಿರುವ ಈ ಮಂದಿಗೆ, ಹೊರ ಪ್ರಪಂಚದ ಮಾಹಿತಿಯೇನಾದರೂ ಸಿಗಬೇಕಿದ್ದಲ್ಲಿ ಅವರ ಬದುಕಿನ ಮತ್ತೊಂದು ಅವಿಭಾಜ್ಯ ಅಂಗವಾಗಿದ್ದ ರೈಲ್ವೇ ನಿಲ್ದಾಣದ ಮೂಲಕವೇ ಸಿಗಬೇಕಿತ್ತು. ಯಾಕೆಂದರೆ ದೆಹಲಿಯಿಂದ ಲಾಹೋರಿಗೆ, ಅಲ್ಲಿಂದ ಇಲ್ಲಿಗೆ ಬರಬೇಕಾದರೆ ಇವರ ಹಳ್ಳಿಯನ್ನು ಬಳಸಿಯೇ ರೈಲು ಬರಬೇಕಿತ್ತು.

ಹೀಗಿರುವಾಗ ಹುಕುಂ ಚಂದ್ ಎನ್ನುವ ಕಲೆಕ್ಟರನ ಪ್ರವೇಶವಾಗುತ್ತದೆ. ಆತ ಹಳ್ಳಿಯಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಸುರಕ್ಷಿತವಾಗಿ ಯಾವುದೇ ಅವಗಡಗಳಾಗದಂತೆ ತಲುಪಿಸಲು ಆಜ್ಞೆ ಹೊರಡಿಸಿ ಪಾಕಿಸ್ತಾನಿ ಸೈನಿಕ ನೆಲೆಗೆ ವಿಷಯ ರವಾನಿಸುತ್ತಾನೆ. ಅವರು ಬಂದು ಇಲ್ಲಿನ ಮುಸ್ಲಿಮರನ್ನು ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕರೆದುಕೊಂಡು ಹೋಗುತ್ತಾರೆ. ಹೋಗುವಾಗ ಉಭಯರಿಗೂ ಬಹು ವೇದನೆಯಾಗುತ್ತದೆ.

ಈ ಮಧ್ಯೆ ಪಾಕಿಸ್ತಾನದಿಂದ ಬಂದ ಸಿಖ್ಖ್ ನಿರಾಶ್ರಿತರು ಸೌಹಾರ್ದತೆಯಿಂದಿದ್ದ ಹಳ್ಳಿಯ ಜನರನ್ನು ಪ್ರಚೋದಿಸಿ, ಪಾಕಿಸ್ತಾನಕ್ಕೆ ಹೊರಟಿರುವ ಮುಸ್ಲಿಂ ಮಂದಿಯನ್ನು (ಆ ಗುಂಪಿನಲ್ಲಿ ತಮ್ಮದೇ ಹಳ್ಳಿಯ ಜನರೂ ಇರುತ್ತಾರೆ) ಹತ್ಯೆಗೈಯ್ಯಲು ಪ್ರೇರೇಪಿಸುತ್ತಾರೆ. ಕೋಮುದಳ್ಳುರಿಗೆ ಸಿಲುಕಿ ತಲೆತಲಾಂತರದಿಂದ ಒಟ್ಟಿಗೇ ಬಾಳಿ ಬದುಕಿ ಭ್ರಾತೃತ್ವಕ್ಕೆ ಹೆಸರಾಗಿದ್ದ ಹಳ್ಳಿಯ ಜನರು, ತಮ್ಮದೇ ಅನ್ಯ ಕೋಮಿನ ಮುಸ್ಲಿಮರನ್ನು ಪಾಕಿಸ್ತಾನದಲ್ಲಿ ಹಿಂದುಗಳ ಹತ್ಯೆಗಿಂತಲೂ ಭರ್ಭರವಾಗಿ ಹತ್ಯೆಗೈಯ್ಯುಲು ನಿರ್ಧರಿಸುತ್ತಾರೆ.

ತಾವು ಹುಟ್ಟಿ ಬೆಳೆದಂದಿನಿಂದ ನೋಡಿಕೊಂಡು ಬೆಳೆದು ಬದುಕಿರುವ, ತಮ್ಮ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿರುವ ಅದೇ ರೈಲು ನಿಲ್ದಾಣದಲ್ಲಿ ರೈಲನ್ನು ಪಾಕಿಸ್ತಾನಕ್ಕೆ ಹೋಗದಂತೆ ತಡೆದು ಮುಸ್ಲಿಮರನ್ನು ಕೊಲ್ಲುವ ಯೋಜನೆ ಸಿದ್ಧವಾಗುತ್ತದೆ ಮತ್ತು ಆ ಸಮಯವೂ ಬರುತ್ತದೆ. ಕಾರ್ಯಸೂಚಿಯಂತೆ ಎಲ್ಲರೂ ಶಸ್ತ್ರಾಸ್ತ್ರದೊಂದಿಗೆ ಸಜ್ಜಾಗಿರುತ್ತಾರೆ. ತಾವಂದುಕೊಂಡಂತೆ ರೈಲನ್ನು ತಡೆದು ಮುಸ್ಲಿಮರನ್ನು ಹತ್ಯೆಗೈದರೇ? ಪಾಕಿಸ್ತಾನಕ್ಕೆ ಹೆಣದ ರಾಶಿ ತುಂಬಿದ ರೈಲನ್ನು ಕಳುಹಿಸಿದರೇ? ತಮ್ಮೊಳಗೆ ಹೊತ್ತಿ ಉರಿಯುತ್ತಿದ್ದ ದ್ವೇಷ ಪ್ರತೀಕಾರದ ಜ್ವಾಲೆ ತಣ್ಣಗಾಯಿತೇ?
ಒಮ್ಮೆ ಕಾದಂಬರಿಯನ್ನು ಓದಿ ನೋಡಿ. ಊಹಿಸಿರದ ತಿರುವೊಂದು ಅಚಾನಕ್ಕಾಗಿ ಬರುತ್ತದೆ ಮತ್ತು ಓದುವನು ಕೊನೆಗೆ ಭಾರವಾದ ನಿಟ್ಟುಸಿರು ಬಿಡುವಂತಾಗುತ್ತದೆ.

ಇದಲ್ಲದೇ ಸ್ವಾತಂತ್ರ್ಯ ದೊರಕಿದ ಆರಂಭಿಕ ದಿನಗಳ ಬಗ್ಗೆ, ಬ್ರಿಟೀಷರಿಂದ ತೆರವಾದ ಸರಕಾರಿ ಉದ್ಯೋಗದಲ್ಲಿ ಭಾರತೀಯರು ನಡೆಸಿದ ಅನಾಚಾರ ದಬ್ಬಾಳಿಕೆ ದೌರ್ಜನ್ಯ ಲಂಚತನ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ವಿಸ್ತೃತವಾಗಿ ಹೇಳಲಾಗಿದೆ. ಜೊತೆಗೆ ಜಗ್ಗತ್ ಸಿಂಗ್ ಎನ್ನುವ ಸಿಖ್ಖ್ ಗೂಂಡಾ ಮತ್ತು ನೂರ್ ಎನ್ನುವ ಮುಸ್ಲಿಂ ಯುವತಿಯ ಪ್ರೇಮ್ ಕಹಾನಿಯೂ ಇದೆ. ಕಾಮದ ಬಗ್ಗೆ ಯಥೇಚ್ಛವಾದ ಸನ್ನಿವೇಶಗಳಿದ್ದರೂ ಎಲ್ಲೂ ಅಸಹ್ಯವಾಗದಂತೆ ಬರೆದಿರುವುದು ಕಾದಂಬರಿಯು ಎಲ್ಲರನ್ನೂ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ.

ಇಂತಹ ಮಹಾನ್ ಕಾದಂಬರಿಯನ್ನು ಬರೆದವರು ಯಾರೆಂದು ಹೇಳುವ ಅವಶ್ಯಕತೆಯಿಲ್ಲ. ಅವರು ನಮ್ಮ ದೇಶ ಕಂಡ ಅಪ್ರತಿಮ ಪತ್ರಕರ್ತ, ಲೇಖಕ ಸರ್ದಾರ್ ಖುಷವಂತ್ ಸಿಂಗ್. ಇದು ಅವರ ಮೊದಲ ಕಾದಂಬರಿಯೂ ಹೌದು. ಇದನ್ನು ಕನ್ನಡಕ್ಕೇ ಮೂಲದಷ್ಟೇ ಸುಂದರವಾಗಿ ಅನುವಾದ ಮಾಡಿದವರು ಡಾ. ಎಂ. ಬಿ. ರಾಮಮೂರ್ತಿ ಅವರು. ಇಬ್ಬರಿಗೂ ಅನಂತಾನಂತ ವಂದನೆಗಳು.

ಇದು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಕಾದಂಬರಿ, ನಾವು ಭಾರತೀಯರು ಗ್ರೇಟ್ ಅನ್ನುವ ಕಾರಣಕ್ಕಾಗಿ ಅಲ್ಲ. ನಮ್ಮನ್ನು ನಾವು ಜಾಗೃತಗೊಳಿಸಿಕೊಳ್ಳುವುದಕ್ಕಾಗಿ, ಕಂಡು ಕೇಳರಿಯದ ಅನುಭೂತಿ ಹೊಂದದ ದೇಶ ಕಂಡ ಮಹಾನ್ ದುರಂತ ಈಗಿರುವ ನಮ್ಮ ನಮ್ಮಲ್ಲಿ ಮತ್ತೆ ಮರುಕಳಿಸದೆ ಇರುವುದಕ್ಕಾಗಿ, ಇತಿಹಾಸದ ಮರೆತ ಪುಟಗಳಲ್ಲಿ ವಿನಾಕಾರಣ ಬಲಿಯಾದ ಮುಗ್ದ ಅಮಾಯಕ ಜೀವಗಳ ಸವಿ ನೆನಪಿಗಾಗಿ..

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ


https://www.facebook.com/groups/nanobbapustakapremi/permalink/1590313027702815/
"ತಾಯಿ"

ಕಾದಂಬರಿಯ ಕೆಲವು ಸಾಲುಗಳು ಹೀಗಿವೆ:

"ಬಡತನ, ಹಸಿವು ಮತ್ತು ರೋಗ - ಇದೇ ಈಗ ತಮ್ಮ ಕೆಲಸಕ್ಕೆ ನಮ್ಮ ಜನರಿಗೆ ಸಿಗೋ ಪ್ರತಿಫಲ. ಪ್ರತಿಯೊಂದು ನಮಗೆ ಇದಿರಾಗಿದೆ. ಜೀವಮಾನವೆಲ್ಲವೂ ನಾವು ಪ್ರತಿನಿತ್ಯವೂ ನಮ್ಮ ಶಕ್ತಿಯ ಕೊನೇ ಗುಲಗಂಜಿ ತೂಕವನ್ನೂ ಉಪಯೋಗಿಸಿ ದುಡಿಯುತ್ತೀವಿ. ಯಾವಾಗಲೂ ಹೊಲಸಾಗಿರುತ್ತೀವಿ. ಯಾವಾಗಲೂ ಮೋಸ ಹೋಗುತ್ತೀವಿ. ಬೇರೆಯವರು ಸಂಕೋಲೆಯಲ್ಲಿ ಕಟ್ಟಿದ ನಾಯಿಯ ಹಾಗೆ ನಮ್ಮನ್ನು ಅಜ್ಞಾನದಲ್ಲಿ ಇರಿಸಿ, ತಾವು ನಮ್ಮ ದುಡಿಮೆಯಿಂದ ಎಲ್ಲ ಸುಖವನ್ನು ಸೌಖರ್ಯವನ್ನು ಪಡೆಯುತ್ತಾರೆ. ನಮಗೆ ಏನೂ ಗೊತ್ತಿರುವುದಿಲ್ಲ. ನಾವು ದಿಗಿಲು ಬೀಳ್ತೀವಿ. ಪ್ರತಿಯೊಂದಕ್ಕೂ ಹೆದರುತ್ತೀವಿ! ನಮ್ಮ ಬದುಕು, ಬೆಳಕೇ ಹರಿಯದಂಥ ಉದ್ಧನೆಯ ಕತ್ತಲಿನ ರಾತ್ರಿಯ ಹಾಗೆ".
ಇದು ಇಡೀ ಕಾದಂಬರಿಯ ಒಟ್ಟೂ ಆಶಯ. ಇದರ ಹೊರತಾಗಿ ಕಾರ್ಮಿಕ ಸಮೂಹದಲ್ಲಿನ ದಾರಿದ್ರ್ಯ, ಬಡತನ, ಅಜ್ಞಾನ, ಅಮಾಯಕತೆ, ಉಳ್ಳವರ ಪುರೋಹಿತಶಾಹಿತ್ವ ಮತ್ತವರ ಗುಲಾಮಗಿರಿ, ಬಡವರ ಮೇಲಿನ ದಬ್ಬಾಳಿಕೆ, ಕಾರ್ಮಿಕರಿಗಾಗುವ ಮೋಸ ವಂಚನೆ, ನ್ಯಾಯವನ್ನು ಸದೆಬಡಿಯುವಿಕೆ.. ಹೀಗೆ ಅನೇಕ ಸಂಗತಿಗಳ ನಡುವೆ ನಡೆಯುವ ತಿಕ್ಕಾಟ ಘರ್ಷಣೆಗಳ ಕಲಸುಮೇಲೋಗರ.

ಇಲ್ಲಿ ಒಂದು ಕಾರ್ಖಾನೆಯಿರುತ್ತದೆ. ಅಲ್ಲಿ ಕೆಲಸ ಮಾಡುವವರು ತಮ್ಮದೆನ್ನುವ ಎಲ್ಲವನ್ನೂ, ಕೊನೆಗೆ ತಾವಾಡುವ ಉಸಿರನ್ನೂ, ಮರೆತು ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಸ್ವತಂತ್ರ ವಿಚಾರವಾಗಲಿ, ಧೋರಣೆ ಅಭಿಪ್ರಾಯವಾಗಲಿ ಇರುವುದಿಲ್ಲ. ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಗಗನ ಕುಸುಮವಾಗಿರುತ್ತದೆ. ಹೊಲಸು ಕೇರಿಗಳೊಳಗೆ ದಟ್ಟ ಬಡತನದಲ್ಲಿ ಸಿಕ್ಕಿದ್ದಷ್ಟನ್ನೇ ತಿಂದುಕುಡಿಯುತ್ತಾ, ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾ, ಕಣ್ಣಿಗೆ ಮತ್ತು ಮನಸ್ಸಿಗೆ ಕಾಪು ಕಟ್ಟಿಕೊಂಡು ಜೀವಿಸುವುದಷ್ಟೇ ಅವರ ಜೀವನ. ಅವರಿಗೆ ಇದಕ್ಕಿಂತ ಹೆಚ್ಚಿಗೇನು ಗೊತ್ತಿಲ್ಲ ಅಥವಾ ತಿಳಿದುಕೊಳ್ಳಲು ಮೇಲ್ವರ್ಗ ಇವರಿಗೆ ಅನುವು ಮಾಡಿಕೊಟ್ಟಿರುವುದಿಲ್ಲ.

ಬದಲಾವಣೆ ಜಗದ ನಿಯಮ ತಾನೇ? ಹೀಗಿರಲು ದೇಶದೊಳಗೆ ಕಂಡೂ ಕಾಣದ ಹಾಗೆ ಮಂದಿಗೆ ಒಳಗೊಳಗೇ ಕುದಿ ಏಳುತ್ತದೆ. ತಮ್ಮ ಮೇಲಾಗುತ್ತಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಹೋರಾಟ ಮಾಡಲು ಉತ್ಸುಕರಾಗುತ್ತಾರೆ. ಸಂಘಟಿತರಾಗಿ, ಶೋಷಣೆಗೆ ಶೋಷಣೆಗೊಳಗಾದವರೆಲ್ಲರ ಪರವಾಗಿ ತಾವು ಮೇಲ್ವರ್ಗದ ವಿರುದ್ಧ ತೊಡೆ ತಟ್ಟಿ ನಿಲ್ಲುಲು ಮುಂದಾಗುತ್ತಾರೆ.

ಆ ಗುಂಪಿನ ನಾಯಕತ್ವ ವಹಿಸುವುದು ಕಥಾ ನಾಯಕಿ "ತಾಯಿ"ಯ ಮಗನಾದ ಪಾವೆಲ್ ಮತ್ತು ಆತನ ಸ್ನೇಹಿತ ಆಂದ್ರೇಯ್. ಮೊದಮೊದಲು ತನ್ನ ಮನೆಯಲ್ಲಿ ಹಲವು ಕ್ರಾಂತಿಕಾರಿಗಳೊಂದಿಗೆ ಗುಪ್ತವಾಗಿ ಸಭೆ ನಡೆಯುತ್ತಿದ್ದಾಗ ಅವರಾಡುತ್ತಿದ್ದ ಮಾತುಗಳಿಂದ ಏನನ್ನೂ ತಿಳಿಯದೆ ಮರೆಯಲ್ಲಿರುತ್ತಿದ್ದ ತಾಯಿ, ತನ್ನ ಗಂಡನೊಂದಿಗೆ ಇಪ್ಪತ್ತು ವರ್ಷಗಳ ಕಾಲ ಸತತವಾಗಿ ದೌರ್ಜನ್ಯ ದಬ್ಬಾಳಿಕೆಗೆ ಒಳಗಾಗಿ ತನ್ನ ಹಳೆಯ ನೆನಪು, ಬಾಲ್ಯ, ಯೌವ್ವನವನ್ನೇ ಮರೆತಿದ್ದ ತಾಯಿ, ಅಕ್ಷರ ಓದಲು ಬರೆಯಲು ಬಾರದ ಅವಿದ್ಯಾವಂತ ತಾಯಿ, ಬರುಬರುತ್ತಾ ನಿಧಾನವಾಗಿಯಾದರೂ ಒಂದೊಂದನ್ನೇ ಅರ್ಥೈಸಿಕೊಳ್ಳುತ್ತಾಳೆ. ಈ ಸಭೆ ಏನು? ಏತಕ್ಕಾಗಿ ನಡೆಯುತ್ತಿದೆ? ಇವರೆಲ್ಲಾ ರಹಸ್ಯವಾಗಿ ಏಕೆ ನನ್ನ ಮನೆಯಲ್ಲಿ ಸೇರುತ್ತಿದ್ದಾರೆ? ಇದರ ಉದ್ದೇಶವೇನು ಎಂಬುದು ಆಕೆಗೆ ಅರ್ಥವಾಗತೊಡಗುತ್ತದೆ.

ಮೇ ದಿನದಂದು ಎಲ್ಲಾ ಶೋಷಿತರ ಪರವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಪಾವೆಲ್ಲ್, ಆಂದ್ರೇಯ್ ಮತ್ತಿತರರು ಮಾಡಿ ಪೋಲೀಸರ ಕೆಂಗಣ್ಣಿಗೆ ಗುರಿಯಾಗಿ ಜೈಲು ಪಾಲಾಗುತ್ತಾರೆ. ತಾಯಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗುತ್ತದೆ. ಮುಂದೇನು ಎನ್ನುವ ಚಿಂತೆಯೊಂದಿಗೆ ತನ್ನನ್ನು ತಾನು ಮಗ ಮಾಡಿ ಬಿಟ್ಟಿದ್ದ ಸಕ್ರಿಯ ಕ್ರಾಂತಿ ಹೋರಾಟದಲ್ಲಿ ತೊಡಗಿಕೊಳ್ಳುತ್ತಾಳೆ, ನಿಷಿದ್ಧ ಸಾಹಿತ್ಯವನ್ನು ಸ್ಥಾವರದಿಂದ ಸ್ಥಾವರಕ್ಕೆ ತಲುಪಿಸುತ್ತಾ ಜನರಲ್ಲಿ ಜಾಗೃತಿಯನ್ನು ಉಂಟು ಮಾಡುವ ಕೆಲಸ ಮಾಡುತ್ತಾಳೆ. ತನ್ನ ಮಗ ಮತ್ತವನ ಸ್ನೇಹಿತರ ಆಶಯವನ್ನು ತನ್ನ ಹೆಗಲ ಮೇಲೆ ಹೊತ್ತು ಊರಿಂದೂರಿಗೆ, ಮನೆಯಿಂದ ಇನ್ನೊಂದು ಮನೆಗೆ, ಜನರಿಂದ ಹತ್ತು ಹಲವು ಜನರ ಬಳಿಗೆ ಒಯ್ದು ಕ್ರಾಂತಿಯ ಕಿಚ್ಚು ಆರದಂತೆ ನೋಡಿಕೊಳ್ಳುತ್ತಾಳೆ. ಬರುಬರುತ್ತಾ ತಾಯಿ ಕೂಡ ಯಾವ ಸಕ್ರಿಯ ಕ್ರಾಂತಿಕಾರಿಗೂ ಕಮ್ಮಿ ಇಲ್ಲದಂತೆ ಬೆಳೆದು ನಿಲ್ಲುವಂತಾಗುತ್ತಾಳೆ. ತನ್ನ ಮಗ ಪಾವೆಲ್ಲ್ ನ ಸ್ಥಾನವನ್ನು ತಾಯಿ ತುಂಬುತ್ತಾಳೆ. ಜನರು, ರೈತರು ಮತ್ತು ದುಡಿಯುವ ವರ್ಗದ ಕಾರ್ಮಿಕರ ಪಾಲಿನ ಇನ್ನೊಬ್ಬ ಪಾವೆಲ್ ಆಗುತ್ತಾಳೆ. ಈ ಕಾರ್ಯದಲ್ಲಿ ತಾಯಿಗೆ ಹತ್ತು ಹಲವು ಹೊಸ ಹೊಸ ಜನರ ಪರಿಚಯವಾಗುತ್ತ‌ದೆ.

ಇತ್ತ ಬಂಧಿತನಾದ ಮಗನ ವಿಚಾರಣೆ ನಡೆದು ಆತನನ್ನು ಸೈಬೀರಿಯಾಕ್ಕೆ ಗಡೀಪಾರು ಮಾಡಲಾಗುತ್ತದೆ. ತೀರ್ಪು ಹೊರಬೀಳುವ ಮುನ್ನ ಕೋರ್ಟಿನ ಕಟಕಟೆಯಲ್ಲಿ ತನ್ನ ಮಗ ಹೇಳಿಕೆ ನೀಡುತ್ತಾನೆ. ಆ ಹೇಳಿಕೆ ಹೇಗಿರುತ್ತದೆಂದರೆ ಸತ್ತು ಮಲಗಿದಂತಿರುವ ಸಮಾಜದ ಎಲ್ಲಾ ಬಡವರ ನೊಂದವರ ಶೋಷಿತರನ್ನು ಬಡಿದೆಬ್ಬಿಸುವಂತಿರುತ್ತದೆ. ಐತಿಹಾಸಿಕವಾದ ಆತನ ಹೇಳಿಕೆಯನ್ನು ಅಚ್ಚು ಹಾಕಿಸಿ ಜನರಿಗೆ ತಲುಪಿಸುವ ಕಾರ್ಯವನ್ನು ತಾಯಿ ಕೈಗೊಳ್ಳುತ್ತಾಳೆ. ಮತ್ತು ಈ ಕೆಲಸದಲ್ಲಿ ಗೂಡಾಚಾರರು ಮತ್ತು ಪೋಲೀಸರ ಕೈಗೆ ಸಿಕ್ಕಿ ಬೀಳುತ್ತಾಳೆ. ಇವರು ತಾಯಿಯ ಮೇಲೆ ದರ್ಪ ತೋರಿಸಿದಾಗ್ಯೂ ತಾಯಿ ಹೆದರದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾಳೆ. ಆದರೆ ಕಣ್ಣಿಲ್ಲದ ಕುರುಡು ಸಮಾಜದಲ್ಲಿ ನ್ಯಾಯದ ಮಾತಿಗೆಲ್ಲಿ ಬೆಲೆ? ತಾಯಿಯನ್ನು ಹೊಡೆದು ಸರಳುಗಳ ಹಿಂದೆ ಹಾಕುತ್ತಾರೆ. ಆದರೆ ಆಕೆಯೊಳಗಿದ್ದ ಸ್ವಾತಂತ್ರ್ಯದ ಬಯಕೆಗಳು, ಜಗತ್ತಿನ ಎಲ್ಲಾ ದುಡಿಯುವ ಕಾರ್ಮಿಕ ವರ್ಗ ಇಂದಲ್ಲ ನಾಳೆ ಒಗ್ಗೂಡಿಯೇ ತೀರುತ್ತದೆ ಎನ್ನುವ ಆಕೆಯ ಕನಸು, ನಮ್ಮ ಪಾಲಿನ ಸೂರ್ಯನು ಉದಯಿಸಲೇ ಬೇಕು ಎಂದು ಬಯಸುವ ಆಕೆಯ ನಂಬಿಕೆ ಆಕೆಯಲ್ಲಿ ಜಾಗೃತವಾಗೇ ಇರುತ್ತವೆ ಮತ್ತು ಅದನ್ನು ಬಂಧಿಸಲು ಸಾಧ್ಯವಿಲ್ಲ ಎನ್ನುವ ಆಶಯದೊಂದಿಗೆ ಕಾದಂಬರಿ ಮುಗಿಯುತ್ತದೆ.

ಇದು ನಾವು ನೀವು ಅಂದುಕೊಂಡಂತೆ ನಮ್ಮ ಸುತ್ತಮುತ್ತ ನಾವು ಕಾಣುವ ಸಾಮಾನ್ಯ ತಾಯಿಯೊಬ್ಬಳ ಕಥೆಯಲ್ಲ. ಅದೆಲ್ಲವನ್ನು ಮೀರಿ ನಿಲ್ಲುವ, ಮಾನವತೆಯ ಮೂರ್ತರೂಪವೆತ್ತ, ಅಜ್ಞಾನಿ ಅವಿದ್ಯಾವಂತೆ ತಾಯಿಯೊಬ್ಬಳು ಎಲ್ಲಾ ಅಸಾಧ್ಯತೆಯನ್ನೂ ಮೀರಿ ಬೆಳೆದು ನಿಲ್ಲುವ ಅಸಾಮಾನ್ಯ ಕಥೆ, ಕ್ರಾಂತಿಕಾರಿಣಿಯಾಗಿ ತನ್ನನ್ನು ತಾನು ಮೇಳೈಸಿಕೊಳ್ಳುವ ಕಥೆ, ಜಗತ್ತಿನ ಎಲ್ಲ ಹಿಂದುಳಿದ ವರ್ಗದ ಪ್ರತಿಧ್ವನಿಯಾಗಿ ಮಾರ್ಪಾಡಾಗುವ ಕಥೆ, ಉಳ್ಳವರ ಅರಸೊತ್ತಿಗೆಯನ್ನು ಧಿಕ್ಕರಿಸಿ ಮೆಟ್ಟಿ ನಿಲ್ಲುವ ಕಥೆ, ಕ್ರಾಂತಿಯ ಹಣತೆಯನ್ನು ಎದೆಯಲ್ಲಿ ಉರಿಯುಟ್ಟುಕೊಂಡು ನೊಂದವರ ಬಡವರ ದೀನದಲಿತರ ಹಕ್ಕುಗಳಿಗಾಗಿ ಹೋರಾಡುವ ಕಥೆ, ಆಳುವ ಮೇಲ್ವರ್ಗದವರು ಸಾಮಾನ್ಯ ಜನತೆಗೆ ಮಾಡುತ್ತಿರುವ ಅನ್ಯಾಯ ಅಕ್ರಮ ದಬ್ಬಾಳಿಕೆಯ ಬಗ್ಗೆ ಕಣ್ಣಿಕೆ ಕಾಣುವಂತೆ ಕಟ್ಟಿಕೊಡಬಲ್ಲ ತಾಯಿಯ ಕಥೆ..

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ, ಮುಖ್ಯವಾಗಿ ತಾಯಿಯದೂ ಸೇರಿದಂತೆ ಬಹಳ ಲೌಕಿಕವಾದ ಧಾಟಿಯಲ್ಲಿ ಚಿತ್ರಿಸಲಾಗಿದೆ. ಭಾವನೆಗಳಿಗಿಲ್ಲಿ ಅವಕಾಶ ಕಡಿಮೆ. ಸುತ್ತಮುತ್ತಲ ಸನ್ನಿವೇಶ ಮತ್ತು ಪರಿಸರದ ಬಗೆಗಿರುವಷ್ಟು ವಿವರಣಿ ಪಾತ್ರಗಳಲ್ಲಿಲ್ಲ.

1906 ರಲ್ಲಿ ಮಾಕ್ಸಿಂ ಗೋರ್ಕಿ ಬರೆದಿದ್ದ ಈ ಕಾದಂಬರಿ ಈತನಕವೂ ಜಗತ್ತಿನ ಬೆಸ್ಟ್ ಸೆಲ್ಲರ್ ಗಳಲ್ಲಿ ಒಂದು. ಪ್ರಪಂಚದ ಅನೇಕಾನೇಕ ಭಾಷೆಯಲ್ಲಿ ಅನುವಾದಗೊಂಡಿದೆ, ನಾಟಕವಾಗಿದೆ, ಸಿನಿಮಾ ಆಗಿದೆ. ಕನ್ನಡಕ್ಕೆ ನಿರಂಜನ ಅವರು ಭಾಷಾಂತರ ಮಾಡಿದ್ದಾರೆ.

ಹಾಂ! ಇದು ಕಾಲ್ಪನಿಕೆ ಕಥೆಯಲ್ಲ. ಮಾಕ್ಸಿಂ ಗೋರ್ಕಿ ಜೀವನದಲ್ಲಿ ನಡೆದ ನೋಡಿದ ಜೀವಂತ ಪಾತ್ರಗಳನ್ನು ಇಟ್ಟುಕೊಂಡು, ಆಗಿನ (ಈಗಿನದೂ ಆಗಿದೆ) ಓರೆಕೋರೆಗಳನ್ನು ತಮ್ಮದೇ ಆದ ಲಯದಲ್ಲಿ ತಿದ್ದುವ ಪ್ರಯತ್ನದ ಕಥೆ. ಓದಲೇಬೇಕಾದ ಕೃತಿಯಿದು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ


https://www.facebook.com/groups/nanobbapustakapremi/permalink/1588119367922181/

Wednesday, November 8, 2017


"ಚದುರಂಗರ ಸಮಗ್ರ ಕಥೆಗಳು.."


ಹೆಸರೇ ಹೇಳುವಂತೆ ಇದು ಚದುರಂಗರ ಸಮಗ್ರ ಕಥೆಗಳ ಬೃಹತ್ತ್ ಸಂಕಲನ. ಸುಮಾರು ಆರುನೂರು ಪುಟಗಳಷ್ಟಿದೆ. 1948 ರಿಂದ ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ ಚದುರಂಗರು ತಾವು ಕಾಲವಾಗುವ ಹಿಂದಿನ ವರ್ಷದ ತನಕವೂ ಬಹಳ ಅತ್ಯುತ್ತಮವಾದುದ್ದನ್ನೇ ಬರೆದರು. ಈ ಸಂಕಲನದಲ್ಲಿ ಅವರು ಬರೆದಿರುವ ಅರವತ್ತು ಸಣ್ಣ ಕಥೆಗಳಿವೆ. ಪ್ರತಿಯೊಂದು ಕಥೆಯೂ ಒಂದೊಂದು ಕಾಲಘಟ್ಟದಲ್ಲಿ ಬರೆದಿದ್ದರೂ, ಎಲ್ಲಾ ಕಥೆಗಳ ಆಶಯ ಮಾತ್ರ ಒಂದೇ ಆಗಿದೆ - ಮಾನವತೆ. ಅವರ ಕಥೆಗಳಲ್ಲಿನ ಬಹುತೇಕ ಪಾತ್ರಗಳು ಹುಟ್ಟಿ... ಬಂದಿರುವುದು ಜನಸಾಮಾನ್ಯರ ದಿನಚರಿಯಿಂದಲೇ. ಒಂದು ರಸ್ತೆಯನ್ನು ಕಥೆಯ ಮುಖ್ಯ ಪಾತ್ರಧಾರಿಯನ್ನಾಗಿಸಿ, ಅದಕ್ಕೂ ಭಾವವನ್ನು ತುಂಬಿ ಕಥೆ ಹೆಣೆದಿರುವ ಪರಿ ನಿಜಕ್ಕೂ ಬೆರಗು ಮೂಡಿಸುವಂಥದ್ದೇ. ಈ ರೀತಿ ಬೆರಗುಗಳು ಪುಸ್ತಕದುದ್ದಕ್ಕೂ ಕಾಣಸಿಗುತ್ತವೆ.


ಕೆಲವು ಕಥೆಗಳು ನಿಜಕ್ಕೂ ರೋಚಕವಾಗಿದ್ದರೆ, ಇನ್ನು ಕೆಲವು ಓದಿದ ನಂತರ ಚಿಂತನೆ ಹಚ್ಚುವಂಥವು. ಸಮಾಜದ ಅಂಕುಡೊಂಕಿನ ಬಗ್ಗೆ ಅತಿ ಹೆಚ್ಚು ಗಮನ ಹರಿಸಿರುವ ಚದುರಂಗರು, ಅಲ್ಲಿರುವ ಹುಳುಕನ್ನು ಹೆಚ್ಚು ಕೇಂದ್ರೀಕರಿಸಿ ವಿಜೃಂಭಿಸದೆ ಅದನ್ನು ಮಾನವತೆ ಪ್ರೀತಿ ಕರುಣೆ ಸ್ನೇಹ ಆಧಾರದ ನೆಲೆಯಲ್ಲಿ ಎತ್ತಿ ಹಿಡಿದು ಕಥೆಗೆ ತಾರ್ಕಿಕ ಅಂತ್ಯ ನೀಡುತ್ತಾರೆ. ಮತ್ತೆ ಕೆಲವು ಕಥೆಗಳ ಅಂತ್ಯವನ್ನು ಓದುಗರಿಗೇ ಬಿಡುತ್ತಾರೆ. ಇದು ಹೀಗೂ ಬದಲಾಗಬಹುದೇ? ಅಥವಾ ಈ ನೆಲೆಗಟ್ಟಿನಲ್ಲಿಯೂ ನೋಡಬಹುದೇ? ಎನ್ನುವ ಹಲವು ಕ್ರಮ ಚಿಂತನೆ ಮಾಡುವ ಕಥೆಗಳಿವೆ. ಇದು ಅವರ ಹೆಚ್ಚುಗಾರಿಕೆಯೂ ಹೌದು, ಕಥೆ ಹೇಳುವ ತಂತ್ರಗಾರಿಕೆಯೂ ಹೌದು. 


ಚದುರಂಗರು ಸಣ್ಣಕಥೆಯನ್ನು ಬರೆಯಲು ಆರಂಭಿಸಿದ್ದು ಸ್ವಾತಂತ್ರ್ಯ ಬಂದ ಹೊಸದರಲ್ಲಿ. ಈಗಿನ ನಮಗೆ ಆ ಕಾಲದ ಜನಜೀವನ, ಸಂಪ್ರದಾಯ, ಆಚರಣೆ, ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯಕ್ಕೂ ಸ್ವೇಚ್ಚಾಚಾರಕ್ಕೂ ಇರುವ ಅಂತರ.. ಮುಂತಾದ ಹಲವು ವಿಷಯಗಳ ಬಗ್ಗೆ ಸ್ಥೂಲ ಪರಿಚಯ ಮಾಡಿಕೊಡಬಲ್ಲ ಅಧ್ಯಯನ ಶೀಲ ಮತ್ತು ಸಂಗ್ರಹಯೋಗ್ಯ ಕೃತಿ ಎಂದರೆ ತಪ್ಪಾಗಲಾರದು. 


ಕಥೆಗಳ ಭಾಷೆ ಮತ್ತದರ ಪ್ರಯೋಗ ಸರಳವಾಗಿ ನಾವೂ ನೀವು ಮಾತಾಡುವ ಮೈಸೂರು ಶೈಲಿಯಲ್ಲಿದೆ. ಕೆಲವು ಕಡೆ ಗ್ರಾಮ್ಯವಾಗಿದ್ದರು ಸಲೀಸಾಗಿ ಓದಬಹುದು. ಎಲ್ಲೂ ಗೊಂದಲವಾಗದೆ ಸಹಜವಾದ ನಿರೂಪಣಾ ಶೈಲಿ ಈ ಕೃತಿಯ ಹೆಗ್ಗಳಿಕೆ. 


ಇಲ್ಲಿ ಅರವತ್ತು ಸಣ್ಣ ಕಥೆಗಳಿರುವುದರಿಂದ ಯಾವುದರ ಬಗ್ಗೆಯೂ ವಿವರವಾಗಿ ಬರೆಯಲು ಆಗುವುದಿಲ್ಲ. ಈ ಕೃತಿಯ ಗಾತ್ರ ಮತ್ತು ವಿಸ್ತರಣೆ ದೊಡ್ಡದು ಎಂದು ಮಾತ್ರ ಹೇಳಲಾಗುವುದಿಲ್ಲ ಬದಲಿಗೆ ಒಳಗಿರುವ ಹೂರಣವೂ ಬಹು ವೈವಿಧ್ಯವೂ ಸಮಗ್ರವೂ ಅತ್ಯಂತ ವಿಭಿನ್ನವೂ ಆಗಿದೆ ಎನ್ನಬಹುದಷ್ಟೇ. 

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್





"ಮಹಾಕ್ಷತ್ರಿಯ.."


ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವಂತೆ ದೇವರು ವರವನ್ನು ಕೊಟ್ಟು ವರಪಡೆದವವನ್ನು ಉದ್ದರಿಸುವ ಸಂಗತಿ ನಮಗೆಲ್ಲರಿಗೂ ತಿಳಿದುದೇ. ಆದರೆ ಮನುಷ್ಯನಾದವನು ದೇವರಿಗೇ ವರವನ್ನು ಕೊಟ್ಟು ಆಚಂದ್ರಾರ್ಕವಾಗಿ ಉದ್ದರಿಸಿದ್ದನ್ನು ಕಂಡಿದ್ದೀರ? ಕೇಳಿದ್ದೀರ? ಹಾಗಿಲ್ಲವಾದರೆ ದೇವುಡು ನರಸಿಂಹಶಾಸ್ತ್ರಿಗಳು ಬರೆದಿರುವ "ಮಹಾಕ್ಷತ್ರಿಯ" ಓದಿದರೆ ದೇವರನ್ನೇ ತನ್ನ ಧರ್ಮಶ್ರದ್ಧೆಯಿಂದ ಉದ್ದರಿಸಿದ ಕಥೆ ತಿಳಿಯುತ್ತದೆ. ಆ ಮಹಾನುಭಾವನಾದರೂ ಯಾರು ಎಂದರೆ ನಹುಷ ಚಕ್ರವರ್ತಿ ಮತ್ತು ಉದ್ದಾರಗೊಂಡವರು ಇಂದ್ರ ಮತ್ತು ಆ...ತನ ಪತ್ನಿ ಶಚಿದೇವಿ.


ಹೇಗೆಂದರೆ..


ಒಮ್ಮೆ ಇಂದ್ರಸಭೆಗೆ ಮಹರ್ಷಿ ಗಣವೊಂದು ಸಪ್ತರ್ಷಿಗಳ ಸೂಚನೆಯಂತೆ ಆಗಮಿಸುತ್ತದೆ. ಅವರು ಬಂದಿರುವ ಕಾರಣ ತಮ್ಮ ಪ್ರಶ್ನೆಗೆ ಉತ್ತರ ತಿಳಿಯಲು. ಬಂದ ಋಷಿಗಣವನ್ನು ದೇವೇಂದ್ರನು ಆದರಾತಿಥ್ಯಗಳಿಂದ ಸತ್ಕರಿಸಿ ಬಂದ ಕಾರಣ ಕೇಳಲು, ಅವರ ಸಮಸ್ಯೆಗೆ ಉತ್ತರಾರ್ಥಿಗಳಾಗಿ ಬಂದುದು ತಿಳಿಯುತ್ತದೆ. ದೇವೇಂದ್ರನು ಉತ್ತರ ಹೇಳಲು ಸಮರ್ಥನಿದ್ದರು ಪೇಚಿಗೆ ಸಿಲುಕಿಕೊಳ್ಳುತ್ತಾನೆ. ಆತ ಋಷಿಗಣ ಬರುವುದಕ್ಕಿಂತ ಮೊದಲಿಂದಲೂ ದೇವಗುರು ಬೃಹಸ್ಪತಿ ಬರುವುದನ್ನು ಎದುರು ನೋಡುತ್ತಿರುತ್ತಾನೆ. ಆದರೆ ಬೃಹಸ್ಪತಿಯು ಸಭೆಯ ಸಮಯಕ್ಕೆ ಸರಿಯಾಗಿ ಆಗಮಿಸಿರುವುದಿಲ್ಲ. ಇದನ್ನೇ ಚಿಂತಿಸುತ್ತಾ ಕುಳಿತಿದ್ದ ಇಂದ್ರನ ಬಳಿ ಈಗ ಋಷಿಗಣ ಬಂದಿದೆ. ಬಂದವರಿಗೆ ಸಬೂಬು ಹೇಳಲು ಆಗದ ಕಾರಣ ಇಂದ್ರ ಪೇಚಿಗೆ ಸಿಲುಕಿದ್ದರೂ ಬಂದವರನ್ನು ಅನುಚಿತವಾಗಿ ನಡೆಸಿಕೊಳ್ಳಬಾರದೆಂದು ಪ್ರಶ್ನೆಗೆ ಉತ್ತರ ಹೇಳಲು ತನ್ನನ್ನು ತಾನು ಮರೆತು ತನ್ಮಯನಾಗಿ ಕಣ್ಣ್ಮುಚ್ಚಿ ಉತ್ತರವನ್ನು ಹೇಳುತ್ತಿರಲು, ಆಗ ಸಭೆಗೆ ಬೃಹಸ್ಪತಿಯ ಆಗಮನವಾಗುತ್ತದೆ. ಎಂದು ಬಂದರೂ ಆದರಣೀಯವಾಗಿ ಸ್ವಾಗತಿಸುವ ಇಂದ್ರ, ಇಂದು ತಾನು ಬಂದರೂ ಎದ್ದು ಬಂದು ನನ್ನನ್ನು ಸ್ವಾಗತಿಸದೆ ಅಪಮಾನಗೊಳಿಸುತ್ತಿದ್ದಾನೆ, ಕಣ್ಣ್ಮುಚ್ಚಿ ಕುಳಿತು ಏನನ್ನೋ ಧೇನಿಸುತ್ತಿದ್ದಾನೆ ಎಂದು ಅನುಮಾನಿಸಿ ಅಪಮಾನಗೊಂಡವರಂತೆ ಬಂದದ್ದು ಬಂದವರಂತೆಯೇ ಅಲ್ಲಿಂದ ಹಿಂದಿರುಗುತ್ತಾನೆ ಬೃಹಸ್ಪತಿ. ಉತ್ತರವಿಟ್ಟು ಋಷಿಗಣ ಹಿಂದಿರುಗಿದ ಮೇಲೆ ಇದನ್ನು ತಿಳಿದ ಇಂದ್ರನು ಚಿಂತಾಕ್ರಾಂತನಾಗುತ್ತಾನೆ. ಸ್ವರ್ಗಲೋಕ ದೇವಗುರುವಿಲ್ಲದೆ ಮುನ್ನಡೆಸಿ ದಾರಿ ತೋರಿಸುವರಿಲ್ಲದಂತಾಗುತ್ತದೆ.


ಇಂತಹ ಸುಸಮಯಕ್ಕಾಗಿ ಕಾದಿದ್ದ ಅಸುರರು ಇದೇ ಸರಿಯಾದ ಸಮಯವೆಂದು ತಿಳಿದು ದೇವಲೋಕದ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಳ್ಳುತ್ತಾರೆ. ಇದನ್ನರಿತ ಇಂದ್ರನು ಹೋಗಿ ಬ್ರಹ್ಮನನ್ನು ಕಾಣಲು, ಹೊಸ ದೇವಗುರುವಾಗಿ ವಿಶ್ವರೂಪಾಚಾರ್ಯನನ್ನು ನೇಮಿಸಿಕೊಳ್ಳುವಂತೆ ಬ್ರಹ್ಮ ಸಲಹೆ ನೀಡುತ್ತಾನೆ. ಆತ ದೇವದಾನವ ಗಣ ಎರಡಕ್ಕೂ ಸಲ್ಲುವನು, ಅವನನ್ನು ನೇಮಿಸಿಕೋ. ಅವನು ನಮ್ಮಂತೆ ಸೋಮರಸ ಸೇವಿಸಲಾರ, ಆದರೆ ಅವನಿಗೆ ಸುರಾಪಾನವೆಂದರೆ ಅಚ್ಚುಮೆಚ್ಚು ಅದನ್ನು ಕೆಣಕಿ ಇಲ್ಲಸಲ್ಲದ್ದನ್ನು ಕೇಳಬೇಡ. ಒಂದುಪಕ್ಷ ಕೇಳಿಕೆಣಕಿಕೊಂಡರೆ ಆತ ಸುಮ್ಮನಿರುವುದಿಲ್ಲ ಹುಷಾರ್! ಎಂದು ಹೇಳುತ್ತಾನೆ ಬ್ರಹ್ಮ. 


ಬ್ರಹ್ಮನ ಆಣತಿಯಂತೆ ವಿಶ್ವರೂಪಾಚಾರ್ಯನು ದೇವಲೋಕದ ಹೊಸ ದೇವಗುರುವಾಗಿ ಬರುತ್ತಾನೆ. ದಿನಗಳೆದಂತೆ ವಿಶ್ವರೂಪನ ಸುರಪಾನದ ಬಗ್ಗೆ ದೇವಗಣದಿಂದ ಅಸಮಾಧಾನ ಬರಲು ಇಂದ್ರನು, ವಿಶ್ವರೂಪನನ್ನು ಕಂಡು ಅದರ ಬದಲು ಸೋಮರಸ ಸೇವಿಸಿ ಎಂದು ಬಂದು ಹೇಳಿದಾಗ ಇಬ್ಬರ ಮಧ್ಯೆಯೂ ಬಿರುಸು ಮಾತುಕತೆಯಾಗಿ ಕೋಪೋದ್ವಿಗ್ನಗೊಂಡ ಇಂದ್ರನು ವಿಶ್ವರೂಪನನ್ನು ಹತ್ಯೆಗೈಯ್ಯುತ್ತಾನೆ. ಬ್ರಹ್ಮಹತ್ಯಾ ಪಾಪ ಆತನನ್ನು ಆವರಿಸುತ್ತದೆ.


ಈ ವಿಷಯ ತಿಳಿದ ವಿಶ್ವರೂಪಾಚಾರ್ಯನ ತಂದೆ ತ್ವಷ್ಟುಬ್ರಹ್ಮನು ಅತೀಕೋಪೋದ್ರಿಕ್ತನಾಗಿ ತನ್ನ ಮಗನನ್ನು ಕೊಂದ ಇಂದ್ರನ ಮೇಲೆ ಸೇಡು ತೀರಿಸಿಕೊಳ್ಳಲು ಒಂದು ಯಾಗವನ್ನು ಮಾಡಿ ಇತರ ಅಸುರಗಣದ ಶಕ್ತಿಯನ್ನೆಲ್ಲಾ ಧಾರೆಯೆರೆದು ವೃತ್ರನೆನ್ನುವ ದೈತ್ಯಾಸುರನನ್ನು ಸೃಷ್ಠಿಸುತ್ತಾನೆ. ಆತ ಎಷ್ಟು ಪರಾಕ್ರಮಿ ಮತ್ತು ಬಲಶಾಲಿಯೆಂದರೆ ಸ್ವತಃ ಇಂದ್ರನೇ ಅಳುಕುವಷ್ಟು. 


ಅಸುರಗುರು ಶುಕ್ರಾಚಾರ್ಯರ ಅಶುಭ ಶಕುನವಿದ್ದರೂ ತಾನು ಈಗಾಗಲೇ ಧಾರಣೆ ಮಾಡಿದ್ದರಿಂದ ವೃತ್ರನು ಇಂದ್ರಲೋಕದ ಮೇಲೆ ದಾಳಿ ಮಾಡಿದಾಗ ಅದನ್ನೆದುರಿಸಲಾಗದೆ ಇಂದ್ರ ಸೋತು ಮಿತ್ರನಾಗಿ ನಾನು ನನ್ನ ಪರಿವಾರವೂ ಇರುವೆವು ಎಂದು ಒಪ್ಪಂದ ಮಾಡಿಕೊಂಡು ತನ್ನ ಇಂದ್ರ ಪದವಿಯನ್ನು ಬಿಟ್ಟುಕೊಡುತ್ತಾನೆ. ಇದನ್ನು ವೃತ್ರನು ಒಪ್ಪುತ್ತಾನೆ. 


ದಾಸ್ಯದಲ್ಲಿ ಎಷ್ಟು ದಿನ ಅಂತ ಬದುಕುವುದು? ಚಿಂತಿತನಾದ ಇಂದ್ರನು ಹೇಗಾದರೂ ಮಾಡಿ ವೃತ್ರನನ್ನು ದಹಿಸಿ ತಾನು ಮತ್ತೆ ಇಂದ್ರಪದವಿಯೇರುವ ತವಕ ಆತನನ್ನು ಅನುದಿನವು ಕಾಡುತ್ತಿರುತ್ತದೆ. ಅದೇ ಸಮಯಕ್ಕೆ ಸರಿಯಾಗಿ ವೃತ್ರನ ಇಂದ್ರಪದವಿಯ ವಾರ್ಷಿಕ ಸಮರಂಭವಿರುತ್ತದೆ. ಆ ಸಮಾರಂಭದಲ್ಲಿ ವೃತ್ರನು ಮನಸೋ ಇಚ್ಚೆ ಪಾನಮತ್ತನಾಗಿ ಉನ್ಮತ್ತನಾಗಿರುವಾಗ ಇಂದ್ರನಿಗಾದ ದೈವಪ್ರೇರಣೆಯಿಂದ ತನ್ನ ವಜ್ರಾಯುಧದಿಂದ ವೃತ್ರನನ್ನು ಸಂಹರಿಸುತ್ತಾನೆ. ಅಲ್ಲಿಯೇ ವೃತ್ರನು ಅಸುನೀಗಿದರೂ ಆತನ ಆತ್ಮ ಮಾತ್ರ ಸಾಯದೆ ಭೂತವಾಗಿ ಇಂದ್ರನಿಗೆ ಗೋಚರಿಸಲು, ಅದನ್ನೆದುರಿಸಲಾಗದ ಇಂದ್ರನು ಮೊದಲು ಮಾಡಿದ್ದ ಹತ್ಯೆಯ ಪಾಪವನ್ನು, ಜೊತೆಗೆ ಈಗ ಮಾಡಿರುವ ಹತ್ಯೆಯ ಘೋರತೆಯನ್ನು ಎದುರಿಸಲಾಗದೆ ಯಾರಿಗೂ ಹೇಳದಂತೆ ಕಾಣದಂತೆ ಕಣ್ಮರೆಯಾಗಿಬಿಡುತ್ತಾನೆ. 


ಆಗ ದೇವಗಣವೆಲ್ಲವೂ ಸಭೆ ಸೇರಿ ನಾಪತ್ತೆಯಾಗಿರುವ ಇಂದ್ರನು ಮತ್ತೆ ಮರಳುವವರೆಗೂ ಇಂದ್ರಲೋಕ ಮಾಧ್ಯಮಲೋಕ ಪಾತಾಳಲೋಕವೂ ಸೇರಿ ತ್ರೈಲೋಕ್ಯವೂ ಆಡಳಿತವಿಲ್ಲದೆ ಸೊರಗುವುದು ಬೇಡ ಎಂದು ನಿರ್ಧರಿಸಿ ಎಲ್ಲರೂ ಒಪ್ಪಿ ಇಂದ್ರ ಪದವಿಗೇರುವಂತವನು ಯಾರಾದರೂ ಇರುವನೇ ಎಂದು ನೋಡಲು ಆಗ ಸಿಗುವನೇ ನಹುಷನು.


ನಹುಷನನ್ನು ಒಪ್ಪಿಸಿ ಕಾಣೆಯಾದ ಇಂದ್ರ ಮರಳಿ ಬರುವವರೆಗು ಆತನನ್ನು ಇಂದ್ರನನ್ನಾಗಿ ಆಡಳಿತ ನಡೆಸುವಂತೆ ಕರೆತರಲಾಗುತ್ತದೆ. ನಹುಷನು ಧರ್ಮಿಷ್ಟ, ದಾನಶೌಂಡವ, ನಿತ್ಯಾಗ್ನಿಹೋತ್ರಿ, ಅಸಮಾನ್ಯ ಆಡಳಿತಗಾರ ಎಲ್ಲವೂ ಆಗಿದ್ದನು. ದೇವೇಂದ್ರನಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ತಾನು ಕೇವಲ ಮನುಷ್ಯಗಣದವನು, ಇಂದ್ರಪದವಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ. ಆದರೆ ದೇವಗಣ ಆತನನ್ನು ಒಪ್ಪಿಸಿಕರೆತರುವಲ್ಲಿ ಯಶಸ್ವಿಯಾಗುತ್ತಾರೆ. 


ಅಧಿಕಾರ ಎನ್ನುವುದು ನೀರಿನ ಮೇಲಣ ಗುಳ್ಳೆಯೆಂದರಿತ ನಹುಷನು ಅದರಿಂದ ಮುಕ್ತಿಹೊಂದುವ ಬಗೆ ಚಿಂತಿಸುತ್ತಾನೆ. ಸ್ವತಃ ಇಂದ್ರನ ಪತ್ನಿ ಶಚಿದೇವಿಯ ಮುಖಾಂತರ ಸಪ್ತರ್ಷಿಗಳ ಸಾನಿಧ್ಯದಲ್ಲಿ ಯಾಗ ನಡೆಸಿದರೆ ಮೋಹ ಮತ್ತು ಅಧಿಕಾರದ ಮಾಯೆ ಬಿಟ್ಟುಹೋಗುವುದೆಂದರಿತ ನಹುಷನು ಅದರಂತೆ ಯಾಗ ನಡೆಸುತ್ತಾನೆ. ಈ ಯಾಗವನ್ನು ಮಾಡಿ ವಾನಪ್ರಸ್ಥಮಕ್ಕೆ ಹೋಗುವ ಇರಾದೆ ಆತನದು. ಅದಕ್ಕೂ ಮುನ್ನ ಕಾಣೆಯಾದ ಇಂದ್ರನನ್ನು ಹುಡುಕಿ ಕರೆತಂದು ಆತನಿಗೆ ಇಂದ್ರಪದವಿಯನ್ನು ಮರಳಿಸಬೇಕು ಮತ್ತು ಆತನಿಂದ ಬ್ರಹ್ಮವಿದ್ಯೆಯನ್ನು ಪಡೆಯಬೇಕು ಎಂದು ಬಯಸಿ, ಅಗ್ನಿ ಮತ್ತು ವಾಯುವನ್ನು ಕರೆದು ಅದುವರೆಗು ಯಾರೂ ನೀಡದಂಥಹ ಧೀರೋಧಾತ್ತವಾದ ಆಜ್ಞೆಯನ್ನು ನೀಡಿ ಇಂದ್ರನಿಗೊದಗಿರುವ ವಿಷಮ ಸ್ಥಿತಿಯಿಂದ ಆತನನ್ನು ಹೊರತನ್ನಿ ಎಂದು ಆದೇಶವೀಯಿತ್ತಾನೆ. ಅಗ್ನಿವಾಯುಗಳು ನಹುಷನನ ಮಾತಿಂದ ಉತ್ತೇಜನಗೊಂಡು ಇಂದ್ರನಿಗೊದಗಿದ್ದ ವಿಪತ್ತನ್ನು ನಿವಾರಿಸಿ ದೇವಲೋಕಕ್ಕೆ ಇಂದ್ರನನ್ನು ಕರೆತರುತ್ತಾರೆ. ಆಗ ನಹುಷನು ಅತಿ ವಿನಯ ಮತ್ತು ಸಂಭ್ರಮದಿಂದ ಸ್ವಾಗತಿಸಿ ತನ್ನಿಚ್ಚೆಯನ್ನು ತಿಳಿಸಿ ಮರಳಿ ನೀನೇ ಸ್ವರ್ಗಾಧಿಪತಿಯಾಗು ಎಂದು ಹೇಳುವನು. ನಹುಷನ ವಿನಯವಂತಿಕೆಗೆ ಮನಸೋತ ಇಂದ್ರನು ತಾನು ಮತ್ತೆ ಇಂದ್ರನ ಪಟ್ಟಕ್ಕೆ ಮರಳುವುದಿಲ್ಲ ಎನ್ನುತ್ತಾನೆ. ಆದರೆ ನಹುಷನು ತಾನು ಹಲವು ದಿನಗಳಿಂದ ಪಡೆಯಬೇಕೆಂದುಕೊಂಡಿದ್ದ ಬ್ರಹ್ಮವಿದ್ಯೆಯನ್ನು ವಾಯು, ಯಮ ಮತ್ತು ಇಂದ್ರನಿಂದ ಪಡೆದು ಪುನೀತನಾಗಿ ತರುವಾಯ ಇಂದ್ರನನ್ನು ಯಾಗದ ನಂತರ ತನ್ನ ಸ್ವಸ್ಥಾನಕ್ಕೆ ಮರಳಲು ಒಪ್ಪಿಸಲು ಯಶಸ್ವಿಯಾಗುತ್ತಾನೆ.


ಇತ್ತಕಡೆ ಯಾಗದ ಏಳನೇ ದಿನದ ಮಧ್ಯೆ ನಹುಷನು ಲೋಕವನ್ನು ಸಮಸ್ಥಿಯಲ್ಲಿಡುವ ಗುರುತರ ಜವಾಬ್ದಾರಿಯಿಂದ ಮತ್ತು ಲೋಕಕಲ್ಯಾಣಕ್ಕೋಸ್ಕರ ಬೇಕಂತಲೇ ಗೊತ್ತಿದ್ದೂ ಲೋಪವೆಸಗುತ್ತಾನೆ. ಇದರಿಂದ ಯಾಗ ಅಪೂರ್ಣವಾಗಿ ಆತ ತನಗೆ ತಾನೇ ಶಿಕ್ಷೆಯನ್ನು ವಿಧಿಸಿಕೊಳ್ಳುತ್ತಾನೆ. ತನ್ನ ಅಧಿಕಾರವನ್ನು ಇಂದ್ರನಿಗೊಪ್ಪಿಸಿ ಪತ್ನೀಸಮೇತ ವಾನಪ್ರಸ್ಥಕ್ಕೆ ಹೋಗುವ ಯತ್ನದಲ್ಲಿದ್ದ ನಹುಷನು ಅದು ಈಡೇರದಂತೆ ನೋಡಿಕೊಂಡು ಅಲ್ಲೂ ಸರ್ವಲೋಕ ಹಿತವನ್ನೇ ಬಯಸುತ್ತಾನೆ. ಇದನ್ನೆಲ್ಲಾ ನೋಡಿದ ತ್ರೈಲೋಕ್ಯವು ನಹುಷನು ಕೇವಲ ಕ್ಷತ್ರಿಯನಲ್ಲ, ಎಲ್ಲವನ್ನೂ ತನ್ನ ಸಮಚಿತ್ತದಲ್ಲಿ ಧರ್ಮಬೇಧ ಬರದೆ, ಸಮತೋಲಿಸಿ ಬೇಕಾದರೆ ದೇವತೆಗಳನ್ನೂ ಆಳಬಲ್ಲ ಕ್ಷತ್ರಿಯರಲ್ಲಿ ಕ್ಷತ್ರಿಯ "ಮಹಾಕ್ಷತ್ರಿಯ"ನೆನ್ನುತ್ತದೆ.


ಇದಿಷ್ಟು ಕಥಾಹಂದರ. ಈ ಕಥೆಯಲ್ಲಿ ಹಲವು ಉಪಕಥೆಗಳು, ಪಾತ್ರಗಳು, ಸನ್ನಿವೇಶಗಳು, ಹಿನ್ನೆಲೆ, ವರ್ಣನೆ ಬರುತ್ತವೆ. ಎಲ್ಲವನ್ನೂ ಸರಳ ಶೈಲಿಯಲ್ಲಿ ಅರ್ಥವಾಗುವಂತೆ ಹೇಳಿರುವ ದೇವುಡು ಅವರ ಶೈಲಿ ಅಪ್ರತಿಮವಾಗಿದೆ. ಎಲ್ಲರಿಗೂ ನಮ್ಮ ಪ್ರಾಚೀನ ಸಂಹಿತೆ, ಇತಿಹಾಸ, ಪುರಾಣಪುಣ್ಯ ಕಥೆಗಳು, ಪ್ರಸಂಗಗಳು ಸುಲಭವಾಗಿ ತಲುಪಬೇಕು ಎನ್ನುವುದು ದೇವುಡು ಅವರ ಆಶಯ. ಅವರ ಆಶಯಕ್ಕೆ ತಕ್ಕಂತೆ ಈ ಕಾದಂಬರಿಯನ್ನು ರಚಿಸಿದ್ದಾರೆ. ಈ ಕೃತಿಗಾಗಿ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ನಿಜಕ್ಕೂ ಬೆರಗು ಮೂಡಿಸುವುದೆಂದರೆ ದೇವುಡು ಅವರು ಕಥನವನ್ನು ಹೇಳುವ ಶೈಲಿ. ಎಲ್ಲೂ ಯಾವುದಕ್ಕೂ ಅಗತ್ಯಕ್ಕಿಂತ ಹೆಚ್ವಿನ ಪ್ರಾಶಸ್ತ್ಯವನ್ನು ಕೊಟ್ಟಿಲ್ಲ. ಹೇಳಬೇಕೆನ್ನುವ ಸಂಗತಿಯನ್ನು ಸ್ವಲ್ಪ ಜಾಸ್ತಿಯಾದರು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಯಾವುದನ್ನೂ ವೈಭವಿಕರಿಸಿಲ್ಲ. ಎಲ್ಲವನ್ನೂ ಸಮತೋಲಿಸಿ ಹೇಳಿದ್ದಾರೆ. ಇಂತಹ ಅಪರೂಪದ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿರುವ ದೇವುಡು ಅವರು ಆಕಾಲ ಅಭಿನಂದನಾರ್ಹರು. 


ಮನುಷ್ಯ ಎಲ್ಲಿಂದ ಬಂದನೋ ಅಲ್ಲಿಗೇ ಹಿಂದಿರುಗಬೇಕು ಎನ್ನುವ ಅತಿ ಸೂಕ್ಷ್ಮ ಅಂಶವನ್ನು ತೀವ್ರತರವಾಗಿ ಇದರಲ್ಲಿ ಬಿಂಬಿಸಲಾಗಿದೆ. ಅಧಿಕಾರ ಲಾಲಸೆ ಎನ್ನುವುದು ಯಾರನ್ನು ಎಲ್ಲಿಯೂ ನೆಮ್ಮದಿಯಿಂದ ಇರಲು ಬಿಟ್ಟಿಲ್ಲ ಎಂಬ ಅಂಶವನ್ನು ಎಲ್ಲವನ್ನೂ ಅನುಭವಿಸಿ ಅಧಿಕಾರ ಅಹಂಕಾರಗಳಿಂದ ಮೆರೆಯುತ್ತಿದ್ದ ಇಂದ್ರನನ್ನೂ ಮತ್ತು ಎಲ್ಲವೂ ಇದ್ದು ತನ್ನ ಧಾನಧರ್ಮಗಳಿಂದ ಹೆಸರು ಗಳಿಸಿ ಅಸಮಾನ್ಯ ಎಂದು ಹೆಸರು ಗಳಿಸಿದ್ದ ನಹುಷನನ್ನು ಇಲ್ಲಿ ಸಾಂಕೇತಿಕವಾಗಿಟ್ಟುಕೊಂಡು ಜೀವನದ ಪಾಠ ವೇದಪುರಾಣದಿಂದ ಹೇಳುವ ಕೆಲಸವನ್ನು ದೇವುಡು ಸಂವೇದನಾಶೀಲವಾಗಿ ಮಾಡಿದ್ದಾರೆ. ಅಸಲು, ವೇದಪುರಾಣಗಳಿರುವುದೇ ನಮ್ಮನ್ನು ಸರಿದಾರಿಯಲ್ಲಿ ನಡೆಸಲು ಅಲ್ಲವೇ?


ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್






ಕಂಬಾರರು ತಮ್ಮ ಗಂಭೀರ ಸಾಹಿತ್ಯ, ಜಾನಪದ ರಚನೆಗಳು, ಚಾರಿತ್ರಿಕ ನಾಟಕ ಮತ್ತು ಕಾವ್ಯಗಳ ನಡುವೆ ರಚಿಸಿರುವ ಪ್ರಸಂಗದಂತಿರುವ ಆದರೆ ಪ್ರಸಂಗದಲ್ಲೂ ವಿವಿಧ ಆಯಾಮಗಳಿರುವ ಸಣ್ಣ ಕಥೆಯೇನೆಂದರು ಸರಿಯೇ ಅಥವಾ ಕಿರುಗಾದಂಬರಿ ಎಂದರೂ ಸರಿಯೇ ಎನ್ನಬಹುದಾದ ರಚನೆಯೇ "ಜೀಕೆ ಮಾಸ್ತರರ ಪ್ರಣಯ ಪ್ರಸಂಗ".


ಜೀವನದಲ್ಲಿ ಬದಲಾವಣೆ ಎನ್ನುವುದು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಯಾವ ರೂಪದಲ್ಲಾದರೂ ಯಾರ ಮುಖಾಂತರದಲ್ಲಾದರೂ ಬಯಸಿದರೂ ಬಯಸದೇ ಇದ್ದರೂ ಇಷ್ಟವಿದ್ದರೂ ಇಲ್ಲದಿದ್ದರೂ ಒಪ್ಪಿಗೆಯಿದ್ದರು ಇಲ್ಲದಿದ್ದರೂ ಬಂದೇ ಬರುತ್ತದೆ ಮತ್ತು ನಾವದನ್ನು ನೋಡುವ ಬಗೆಯಿಂದ ಬಂದ ಬದಲಾವಣೆ ನಮಗೆ ಒಗ್ಗುವಂಥದ್ದೋ ಅಲ್ಲವೋ ಎಂಬುದನ್ನು ನಿರ್ದೇಶಿಸಬಹುದಾಗಿದೆ. ಬದಲಾವಣೆ ತರುವ ಆಯಾಮಗಳು ಆಯಾ ವ್ಯಕ್ತಿಯ ಅಭಿರುಚಿಗನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. ಒಬ್ಬನು ಅದನ್ನು ಸ್ವೀಕರಿಸುವ ಬಗೆಗೂ ಇನ್ನೊಬ್ಬನು ಅದನ್ನು ಕಾಣುವ ಬಗೆಗೂ ಅಜಗಜಾಂತರ ವ್ಯತ್ಯಾಸ ಕಾಣುವುದು ಆಯಾ ಮನುಶ್ಯನಲ್ಲಿ ಇರುವ ಮನೋಭೇಧ ಕಾರಣವೇ ಹೊರತು ಬದಲಾವಣೆಯದಲ್ಲ. ಅತಿವೃಷ್ಟಿಯಾಗಲಿ ಅನಾವೃಷ್ಟಿಯಾಗಲಿ ಒಂದೇ ಸಮ ಬರುತ್ತದೆ ಒಬ್ಬನಿಗೆ ಹೀಗೆ ಇನ್ನೊಬ್ಬನಿಗೆ ಹಾಗೆ ಎಂದಲ್ಲ. ಬಂದ ಬದಲಾವಣೆಯನ್ನು ಸ್ವಾಭಾವಿಕವಾಗಿ ಸ್ವೀಕರಿಸಿ ನಮ್ಮನ್ನು ಜ್ಞಾನದೆಡೆ ಮುನ್ನಡೆಯುವ ಹಾಗೆ ಸಾಣೆ ಹಿಡಿಯುತ್ತಿರಲೇ ಬೇಕು ; ಬದಲಾವಣೆ ನಮಗಿಷ್ಟವಿರಲಿ ಇಲ್ಲದಿರಲಿ. ಹಾಗೆ ಬದಲಾವಣೆಗೆ ಒಗ್ಗಿಕೊಂಡವನು ದಡ ಸೇರುತ್ತಾನೆ, ಒಗ್ಗಿಕೊಳ್ಳದವನು ಇದ್ದಲ್ಲೇ ಮಡುಗಟ್ಟಿ ಕೊಳೆಯುತ್ತಾನೆ.


ಹಾಗೆ ಬಂದ ಬದಲಾವಣೆಯನ್ನು ತನ್ನ ನಂಬಿಕೆಗೆ ಕಾರ್ಯವೈಖರಿಗೆ ತಾನು ಪ್ರತಿಪಾದಿಸುವ ಸಿದ್ದಾಂತಕ್ಕೆ ಬಲಿಕೊಡಲಾಗದೆ ಕೆಟ್ಟು ಕೊನೆಯಲ್ಲಾದರೂ ಪುಣ್ಯವೆಂಬಂತೆ ದಡ ಸೇರುವ ಮಾಸ್ತರನ ಪ್ರಸಂಗವೇ ಇದು.


ಜೀಕೆ ಮಾಸ್ತರರು ತಮ್ಮ ಕಟ್ಟುನಿಟ್ಟಿಗೆ ಶಿಸ್ತಿಗೆ ಹಿಂದಿನಿಂದ ಬಂದ ಆಚರಣೆಗೆ ಸಂಪ್ರದಾಯಕ್ಕೆ ಎಂದೂ ರಾಜಿ ಮಾಡಿಕೊಂಡವರಲ್ಲ. ಎಷ್ಟೆಂದರೆ ಅವರು ಸಣ್ಣ ಶಾಲೆಯನ್ನು ಕಾಲೇಜಾಗಿ ಪರಿವರ್ತಿಸುವ ಹಂತದ ಪ್ರಕ್ರಿಯೆಯಿಂದ ಹಿಡಿದು ಅದರ ಪ್ರಿನ್ಸಿಪಾಲರಾಗಿ ಆಡಳಿತ ನಡೆಸುವ ತನಕ, ಮನೆಯಲ್ಲಿ ತಪ್ಪದೇ ಪಾಲಿಸುವ ವ್ರತದ ಆಚರಣೆಗಾಗಿ ಅನಾರೋಗ್ಯಪೀಡಿತನಾದ ತಮ್ಮ ಒಬ್ಬೇ ಮಗನನ್ನು ಲಕ್ಷಿಸದೆ ಆತ ಮೃತಪಟ್ಟರೂ ತಿಳಿಯಲಾಗದ ತನಕ, ಶಾಲಾ ಮಾಸ್ತರರಾಗಿದ್ದಾಗಿನಿಂದಲೂ ಈಗ ಪ್ರಿನ್ಸಿಪಾಲರಾದರೂ ತಮ್ಮ ಉಡುಗೆಯನ್ನು ಬದಲಿಸದೇ ಒಂದೇ ರೀತಿ ಉಡುವ ತನಕ, ತಮ್ಮ ಹೆಂಡತಿಗೆ ಸ್ವಲ್ಪವಾದರೂ ಮಿತಿಮೀರದ ವಿನಾಯಿತಿ ಕೊಟ್ಟಿದ್ದಲ್ಲಿ ಆಕೆಯೂ ಎಲ್ಲ ಸಾಮಾನ್ಯ ಗೃಹಿಣಿಯಂತೆ ಜೀವನ ನಡೆಸಲು ಆಗದ್ದನ್ನು ತಮ್ಮ ಠಾಕುಠೀವಿಯಿಂದ ತಡೆಹಾಕುವ ತನಕ, ಕಾಲೇಜಿನಲ್ಲಿ ಹೊಸಪೀಳಿಗೆಯ ಯುವಕಯುವತಿಯರ ಸಾಮಾನ್ಯ ನಡೆನುಡಿಯನ್ನು ವೇಷಭೂಷಣವನ್ನು ಕಾಲಕೆಟ್ಟಿತು ಎಂದು ತಮ್ಮ ವಕ್ರದೃಷ್ಟಿಯಲ್ಲಿ ನೋಡುವ ತನಕ...ಹೀಗೆ ಹೇಳುತ್ತಾಹೋದರೆ ಅದೇ ಒಂದು ದೊಡ್ಡ ಪಟ್ಟಿಯಾದೀತು. 


ಜೀಕೆ ಮಾಸ್ತರರಿಗೆ ಊರಲ್ಲಿ ಮರ್ಯಾದೆಗೇನೂ ಕಡಿಮೆಯಿರಲಿಲ್ಲ. ಅವರ ಸ್ವಭಾವವೇನೇ ಇರಲಿ. ಅವರು ಮಾಡಿದ ಕೆಲಸಗಳೇ ಅವರನ್ನು ಒಬ್ಬ ಗಣ್ಯವ್ಯಕ್ತಿಯನ್ನಾಗಿ ರೂಪಿಸಿತ್ತು. ಇಂತಿಪ್ಪ ನಮ್ಮ ಮಾಸ್ತರರ ಜೀವನದಲ್ಲಿ ತಾನು ಊಹಿಸಲಾಗದ ಬದಲಾವಣೆಯ ಗಾಳಿಯೊಂದು ರೋಜಾ ಎನ್ನುವ ವಿದ್ಯಾರ್ಥಿನಿಯ ಮೂಲಕ ಬೀಸತೊಡಗುತ್ತದೆ. ಮೊದಮೊದಲು ಅವರದನ್ನು ಒಪ್ಪುವುದಿಲ್ಲ. ಆದರೆ ಬರುಬರುತ್ತಾ ಅವರಲ್ಲಿ ಬದಲಾವಣೆಯಾಗಿ ರೋಜಾಳನ್ನು ಬಿಟ್ಟರೆ ಇನ್ನಿಲ್ಲವೆಂಬಂತಾಗುತ್ತಾರೆ. ಕಾಲೇಜಿನ ಯೂನಿಯನ್ ನಾಯಕ ಗಿರ್ರೆಪ್ಪ ಮತ್ತು ರೋಜಾ ಮಾಡುವ ಮೋಜಿನ ಸಂಗತಿ ಇದೆಂದು ಮಾಸ್ತರಿಗೆ ಆಗ್ಗೆ ತಿಳಿಯುವುದಿಲ್ಲ. ತಿಳಿದಾಗ ಅವರಲ್ಲಿನ ರೋಜಾ ಮೇಲಿನ ಪೊರೆ ಕಳಚಿ, ತಾವು ಮಾಡಿದ ತಪ್ಪಿನ ಅರಿವಾಗಿ ಜೀವನದ ಭವ್ಯ ಸಾರ್ಥಕತೆಯೆಡೆ ತಮ್ಮ ಗುರುತು ಕಾಣದಂತೆ ಅಸ್ತಿತ್ವವನ್ನೇ ಅಳಿಸಿಕೊಂಡು ಹೆಜ್ಜೆ ಹಾಕುತ್ತಾರೆ. 


ಇದು ಕಾದಂಬರಿಯ ಒಟ್ಟೂ ವಿಷಯ. ಪ್ರಪಂಚದಲ್ಲಿ ಬದಲಾವಣೆಯೊಂದೇ ಶಾಶ್ವತ ಎನ್ನುವ ಸಂದೇಶವನ್ನು ಮಾರ್ಮಿಕವಾಗಿ ಸಾರುವ ಈ ಕೃತಿ, ಒಂದೇ ಗುಕ್ಕಿನಲ್ಲಿ ಓದಿಮುಗಿಸಬಹುದು.


ನಮಸ್ಕಾರ.


ಮೋಹನ್ ಕುಮಾರ್ ಡಿ ಎನ್





"ಕರಿಮಾಯಿ"


ದೃಶ್ಯ 1..

ಹಳೇ ಬೇರು ಹೊಸ ಚಿಗುರು ಎನ್ನುವ ಮಾತಿದೆ. ಈ ಮಾತು ಎಲ್ಲಿ ಏರಿಳಿತವಾಗದೆ ವೇದ್ಯವಾಗುವುದೋ ಅಲ್ಲಿ ಸುಖ ಶಾಂತಿ ನೆಮ್ಮದಿ ಸಂತೃಪ್ತಿ ಮನೆ ಮಾಡುತ್ತದೆ. ಸುಖಾಸುಮ್ಮನೆ ಜಗಳವಿರುವುದಿಲ್ಲ, ವೈಷಮ್ಯದ ದುರ್ಗಂಧ ಬೀಸುವುದಿಲ್ಲ, ಒಬ್ಬರ ಮೇಲೊಬ್ಬರು ಹಗೆ ದ್ವೇಷ ಸಾಧಿಸುವ ಪರಿಪಾಠವಿರುವುದಿಲ್ಲ, ಒಬ್ಬನನ್ನು ತುಳಿದು ತಾನು ಬದುಕುವ ನೀಚತನವಿರುವುದಿಲ್ಲ, ಇಬ್ಬರ ನಡುವೆ ವಿರೋಧಾಭಾಸ ಇಲ್ಲದಿರುವುದರಿಂದ ಎರಡರ, ಹೊಸದು ಮತ್ತು ಹಳೆಯದು, ನಡುವೆ ಸಮತೋಲನವಿರುತ್ತದೆ. ಅದು ಅಲ್ಲಿನ ಜನರನ್ನು, ಜನರ... ಬದುಕನ್ನು ಸಹನೀಯ ಮಾಡಿಕೊಟ್ಟು, ಆಚಾರ ವಿಚಾರ ಸಂಪ್ರದಾಯವನ್ನು ಮೂದಲಿಸದೆ ಅನುಸರಿಸುತ್ತಾ, ಒಂದಾಗಿ ಬಾಳುತ್ತಾ ಸಮುದಾಯ ಉನ್ನತಿಯೆಡೆ ನಡೆಯುತ್ತದೆ.


ದೃಶ್ಯ 2..

ಬಡತನ, ಅನಕ್ಷರತೆ, ಮುಗ್ದತೆ, ಅಮಾಯಕತೆ, ಅಜ್ಞಾನ..ಇವೆಲ್ಲ ಏನೂ ಕೀಳಲ್ಲ, ಒಬ್ಬನಲ್ಲಿ ಇರಬಾರದೂ ಎಂದೇನಿಲ್ಲ. ಇದೆಲ್ಲವೂ ಇದ್ದು ಸಾಮರಸ್ಯತೆ, ಅನ್ಯೋನ್ಯತೆ, ಸಹಕಾರತೆ, ಒಬ್ಬರನ್ನೊಬ್ಬರು ಅರಿತು ಬಾಳುವಿಕೆ, ಸಹಭಾಗಿತ್ವ ಇದ್ದರೆ ಎಷ್ಟು ಕೀಳುಗುಣಗಳಿದ್ದರೇನು? ಇರಲಿ ಬಿಡಿ. ಇದಕ್ಕಿಂತ ಉತ್ತಮ ಗುಣಗಳು ಇನ್ನ್ಯಾವುವು ಇದ್ದಾವು? ಸಾಕು. ಒಂದು ಸಮುದಾಯದ ಬದುಕನ್ನು ಸಹಜವಾಗಿ ಬರುವ ಕಷ್ಟಗಳು ಅಧೀರರನ್ನಾಗಿಸಿದರೂ ತಮ್ಮಲ್ಲಿರುವ ಉತ್ತಮೋತ್ತಮ ಗುಣದಿಂದ ಬಂದದ್ದನ್ನೆಲ್ಲ ಸಹನೀಯವಾಗಿಸುತ್ತಾರೆ. ಅದು ಕುರುಡು ನಂಬಿಕೆಯಾದರು ಸರಿ. ಸಮಾಜಕದ ಸ್ವಾಸ್ಥ್ಯ ಕೆಡದಂತೆ ತಮ್ಮ ಆಚರಣೆಯನ್ನು, ಸಂಪ್ರದಾಯವನ್ನು, ನಂಬಿಕೆಯನ್ನು ಮೆರೆಸುವುದು ತಪ್ಪಲ್ಲ. ಅದು ತಪ್ಪಾಗಿ ಕಂಡರೆ ನೋಡುವವನ ತಿಳುವಳಿಕೆಯ ಕೊರತೆ ಮತ್ತು ದೋಷವೇ ಹೊರತು ಮತ್ತೇನಲ್ಲ. ಸಂಕೀರ್ಣವಾಗಬೇಕಾದದ್ದು ಕುರುಡು ನಂಬಿಕೆಯನ್ನು ಆರಾಧಿಸುವನದಲ್ಲ, ಅದನ್ನು ನೋಡುವ ವಕ್ರದೃಷ್ಟಿ ಇಟ್ಟು ಅಸಂಕೀರ್ಣತೆಯಿಂದ ಇರುವನು.


ದೃಶ್ಯ 3..

ವಿದ್ಯೆ ಎನ್ನುವುದು ಪ್ರಗತಿಯನ್ನು ಸಾಧಿಸುವ ಸಾಧನ. ವಿದ್ಯೆಯನ್ನು ಪಡೆದು ಅದನ್ನು ಸರಿಯಾದ ದಾರಿಯಲ್ಲಿ ನಡೆದು ಅನುಸರಿಸಿ, ತಾನು ಕಲಿತ ವಿದ್ಯೆಯನ್ನು ಸನ್ಮಾರ್ಗದಲ್ಲಿ ಬಳಸಿಕೊಂಡರೆ ಸ್ವಅಭಿವೃದ್ದಿ ಜೊತೆಗೆ ತನ್ನ ಸುತ್ತಮುತ್ತಲ ಪರಿಸರವೂ ಆರೋಗ್ಯವಾಗಿರುತ್ತದೆ. ಇದಕ್ಕೆ ನಮಗೆ ಹತ್ತುಹಲವು ಉದಾಹರಣೆಗಳು ಸಿಗುತ್ತವೆ. ವಿದ್ಯೆಯನ್ನು ಸರಿಯಾದ ದಾರಿಯಲ್ಲಿ ಬಳಸಿಕೊಂಡು ಉನ್ನತ ಶಿಖರವೇರಿದ ಅನೇಕರು ಇಂದಿಗೂ ನಮ್ಮ ನಡುವೆಯೇ ಇದ್ದಾರೆ. ಕತ್ತಲಿನಿಂದ ಬೆಳಕಿನೆಡೆ, ಅಜ್ಞಾನದಿಂದ ಜ್ಞಾನದೆಡೆ ನಡೆಸುವುದೇ ವಿದ್ಯೆಯ ಲಕ್ಷಣ. ಕಲಿತವರೆಲ್ಲರೂ ಸನ್ಮಾರ್ಗದಲ್ಲಿ ನಡೆಯಲೇಬೇಕೆಂದಿದ್ದರೂ ನಡೆಯಲಾಗುವುದಿಲ್ಲ. ಕಾರಣ ಅನೇಕವಿರಬಹುದು. ಆದರೆ ವಿದ್ಯೆಯು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದಿಲ್ಲ. ವಿದ್ಯೆಯಿಂದ ಆಧುನಿಕತೆ ಮತ್ತು ನಾಗರೀಕತೆ ಬರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅಕಸ್ಮಾತ್ತ್ ವಿದ್ಯೆ ಕಲಿತ ಪ್ರಜ್ಞಾವಂತನೊಬ್ಬ ಮೋಹಕ್ಕೆ ಬಿದ್ದರೆ, ಅಜ್ಞಾನವು ಆತನ ಕಣ್ಣನ್ನು ಮುಚ್ಚಿದ್ದರೆ, ಹಿರಿಕಿರಿಯರೆನ್ನುವ ಭೇಧ ಆತನಿಗಿರದಿದ್ದರೆ, ಕುಹಕ ಕುತಂತ್ರ ತನ್ನ ಎಡಬಲಗಳಾದರೆ ಏನಾಗಬಹುದು? ಆಧುನಿಕತೆ ಮತ್ತು ನಾಗರೀಕತೆ ಹೆಸರಲ್ಲಿ ಕಂಡದ್ದೆಲ್ಲಾ ಹಳಸಿರುವುದೆಂದರೆ ಸರಿಯೇ? 



ದೃಶ್ಯ 4..

ಈಗ ಮೇಲೆ ಹೇಳಿದ ಮೂರೂ ದೃಶ್ಯಗಳು ಸಮ್ಮಿಲನವಾಯಿತೆಂದುಕೊಳ್ಳಿ. ಏನಾಗುತ್ತದೆ? ಎಲ್ಲಾ ಸೇರಿ "ಕರಿಮಾಯಿ" ಕಾದಂಬರಿಯಾಗುತ್ತದೆ.! ಹೌದು. ಈ ಮೂರರ ಸಮ್ಮಿಲನವೇ "ಕರಿಮಾಯಿ" ಕಾದಂಬರಿಯ ಕಥಾವಸ್ತು. 


ಆ ಹಳ್ಳಿಯಲ್ಲಿ (ಶಿವಾಪುರ) ಅನಾದಿಕಾಲದಿಂದ ಹಿರಿಯರು ಹಾಕಿಕೊಟ್ಟು ನೆಟ್ಟು ಬೆಳೆಸಿದ ಆಚರಣೆಯನ್ನು, ಸಂಪ್ರದಾಯವನ್ನು, ಹಬ್ಬಹರಿದಿನಗಳನ್ನು, ವ್ರತಾಚರಣೆಯನ್ನು ನಂಬುತ್ತಾ, ಊರ ಮಂದಿ ಅದರಲ್ಲೇ ಜೀವಿಸುತ್ತಾ, ಅದನ್ನೇ ತಮ್ಮ ಉಸಿರನ್ನಾಗಿಸಿಕೊಂಡ, ಅದನ್ನೇ ಬದುಕಾಗಿಸಿಕೊಂಡ ಸಮುದಾಯವಿರುತ್ತದೆ. ಹಿಂದಿನ ತಲೆಮಾರಿನವರು ಹಾಕಿಕೊಟ್ಟ ಜೀವನವನ್ನು ಸಾಗಿಸಲು ಬೇಕಾದ ದಿವ್ಯಮಂತ್ರಗಳಾದ ಅನ್ಯೋನ್ಯತೆ ಸಹಕಾರತೆ ಒಬ್ಬರಿಗೊಬ್ಬರು ಸ್ಪಂದಿಸುವಿಕೆಯೆನ್ನುವ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ಸಮುದಾಯದೊಳಗೆ ಅದೇ ಊರಿನಲ್ಲಿ ಹುಟ್ಟಿಬೆಳೆದು ವಿದ್ಯೆ ಕಲಿತವನ ಪ್ರವೇಶವಾಗಿ ಆತ ತನ್ನ ಧೋರಣೆಯನ್ನು ಇವರ ಮೇಲೆ ಏರಿ ಆಧುನಿಕತೆಯ ಮಂತ್ರ ಪಠಿಸಿದಾಗ ಇವರ ಮೇಲೆ ಅದು ಎಂತಹ ಪರಿಣಾಮ ಬೀರಬಹುದು? ನಾಗರೀಕತೆಯ ಹೆಸರಲ್ಲಿ ಅಮಾಯಕರನ್ನು ದಾರಿ ತಪ್ಪಿಸಿದರೆ ಅದನ್ನು ಮಂದಿ ಹೇಗೆ ತಡೆದುಕೊಂಡಾರು? ಅಧಿಕಾರದ ಅಮಲಿನಲ್ಲಿ ಇಡೀ ಸಮುದಾಯವೇ ಸರಿಯಿಲ್ಲ ಎಂದು ಧೋರಣೆ ಮಾಡಿ, ಅನಾವಶ್ಯಕವಾಗಿ ಸುತ್ತ ಪರಿಸರವನ್ನು ಹಾಳುಗೆಡವಿದರೆ ಅದರ ಪರಿಣಾಮ ಮತ್ತು ಪರಿಸ್ಥಿತಿ ಏನಿರಬಹುದು? ಕುತಂತ್ರ ಅರಿಯದ ಮುಗ್ದರ ನಡುವೆ ಕಲಿತವನ ಚೇಲಾವೊಬ್ಬ, ಆ ಚೇಲನ ಸಖಿಯೊಬ್ಬಳು ಸೇರಿಕೊಂಡು ಮಂದಿಯ ಅಮಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಹೇಗೆ ತಮಗೆ ಬೇಕುಬೇಕಾದ ಹಾಗೆ ಅನುಕೂಲಸಿಂಧುತ್ವ ಸೃಷ್ಠಿಸಿಕೊಂಡು, ಅನ್ಯಾಯ ಅಕ್ರಮವನ್ನೇ ತಮ್ಮ ಉಸಿರನ್ನಾಗಿಸಿ ಸುರಿದು ಹೇಗೆ ತಮಗೆ ಬೇಕಾದ ಹಾಗೆ ಪರಿಸ್ಥಿತಿಯನ್ನು ನಿಯಂತ್ರಿಸಿ ಊರನ್ನು ಆಳುತ್ತಾ ಜನರ ಕಣ್ಣಿಗೆ ಮಣ್ಣೆರೆಚುತ್ತಾರೆ ಎಂದರೆ, ಎಲ್ಲವನ್ನು ತಿಳಿದ ಊರ ಹಿರಿಯರು ಕೂಡ ಏನೂ ಮಾಡಲಾಗದ ಆಸಹಾಯಕತೆಯಿಂದಲೇ ಇರುತ್ತಾರೆ. ತಮ್ಮನ್ನು ಕಟ್ಟಿಹಾಕಿರುವುದು, ಏನೂ ಮಾಡಲಾಗದೆ ಸುಮ್ಮನಿರುವುದು ತಮ್ಮ ಕೈಲಾಗದತನದಿಂದಲ್ಲ, ಬದಲಿಗೆ ಊರಿನ ಸ್ವಾಸ್ಥ್ಯ ಹಾಳಾಗದಿರಲಿ ಎನ್ನುವ ಉದ್ದೇಶದಿಂದ, ಹೇಗಾದರೂ ಮಾಡಿ ಹೊಸಚಿಗುರಿನೊಂದಿಗೆ ಸಹಕಾರ ಸ್ಥಾಪಿಸಿ ಸಮುದಾಯವನ್ನು ಮುಂದಿನ ಜನಾಂಗವನ್ನು ಸಮತೋಲಿಸಿ, ಭವಿಷ್ಯವನ್ನು ಮಂದಿಯ ಜೀವನವನ್ನು ಸಮಪ್ರಮಾಣದಲ್ಲಿ ಸಮೀಕರಿಸಬೇಕಿರುವುದರಿಂದ..ಎಂದು ಊರಿನ ಹಿರಿಯರು ಸುಮ್ಮನಿರುತ್ತಾರೆ. 


ಮೇಲಾಗಿ ಇಲ್ಲಿ ಎಲ್ಲದಕ್ಕೂ ಎಲ್ಲರಿಗು ಹೊನ್ನಕಳಶವಿಟ್ಟಂತೆ "ಕರಿಮಾಯಿ" ತಾಯಿಯ ಕೃಪಾಶೀರ್ವಾದವಿದೆ. ಆಕೆಯ ನಝರಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಆಕೆ ಈ ಹಳ್ಳಿಯ ಊರ ‌ದೇವತೆ, ಬದುಕಿನ ಭಾಗ್ಯಧಾತೆ. ತಪ್ಪು ಮಾಡಿದವರನ್ನು ಆಕೆ ಬಿಡುವುದಿಲ್ಲ. ಒಳಿತಾಗಲಿ ಕೆಡುಕಾಗಲಿ ಆಕೆಯ ಸಮ್ಮತಿಯಂತೆಯೇ ನಡೆಯುವುದು. ಅತಿವೃಷ್ಟಿಯಾಗಲಿ ಅನಾವೃಷ್ಟಿಯಾಗಲಿ ಆಕೆಯ ಅಣತಿಯ ಮೇರೆಗೇ ಬರುವುದು. ಎಲ್ಲವನ್ನೂ ಎಲ್ಲರನ್ನೂ ಇಡೀ ಸಮಸ್ತವನ್ನು ನಿಭಾಯಿಸಿ ನಿರ್ವಹಿಸುವಳು "ಕರಿಮಾಯಿ" ತಾಯಿ...ಎಂದು ಹೀಗೆ ನಂಬಿಕೊಂಡ ಹಳ್ಳಿ ಮಂದಿಯ ನಡುವೆ ಆಧುನಿಕತೆ, ನಾಗರೀಕತೆ, ನಗರದ ಆಕರ್ಷಣೆ ನಡೆಯುವ ಘರ್ಷಣೆಯೇ "ಕರಿಮಾಯಿ".


ಇದನ್ನು ಕಂಬಾರರು ಕಲ್ಪಿಸಿ ಬರೆದಿದ್ದಾರೆ, ಯಾವುದೋ ಕಾಲ್ಪನಿಕ ಕಥೆಯಿರಬಹುದು ಎನ್ನುವುದಕ್ಕಿಂತ ಇದು ಅವರ ಕಥೆ, ಅವರ ಊರಿನ ಕಥೆ ಎಂದರೆ ಹೆಚ್ಚು ಸೂಕ್ತವಾಗುತ್ತದೆ. ತಾನು ಹುಟ್ಟಿಬೆಳೆದ ಪರಿಸರದ ನಡುವೆ ನಡೆದ, ತನ್ನ ಕಣ್ಣಮುಂದೆ ತಾನು ನೋಡಿದ ಎಲ್ಲದರ ಚಿತ್ರಣವೇ ಈ "ಕರಿಮಾಯಿ". ಇಲ್ಲಿ ಅವರು ಇದ್ದೂ ಇಲ್ಲದಂತೆ, ಇಲ್ಲದಿದ್ದರೂ ಇರುವಂತೆ ನಿರ್ವಾಹಕನ ಪಾತ್ರ ವಹಿಸುತ್ತಾ ಇಡಿ ಕಥೆಯನ್ನು ಹೇಳಿಕೊಂಡು ಹೋಗುತ್ತಾರೆ, ಕಥೆಗಿರುವ ಉಪಕಥೆ ಹೇಳುತ್ತಾರೆ..ಎಲ್ಲವೂ ನಮ್ಮ ಕಣ್ಣ್ಮುಂದೆ ನಡೆಯುವಂತೆ, ಓದುವರು ಬೆರಗಾಗುವಂತೆ, ಹೊಸಲೋಕಕ್ಕೆ ಯಾನ ಕೈಗೊಂಡಂತೆ, ಉತ್ತರ ಕರ್ನಾಟಕದ ಬಿಸಿಲಿನ ಝಳಕ್ಕೆ ತಕ್ಕಂತೆ, ಅಲ್ಲಿನ ಮಣ್ಣಿನ ಗುಣಕ್ಕೆ ಒಪ್ಪುವಂತೆ, ಅಲ್ಲಿನ ಅನೇಕಾನೇಕ ಆಚರಣೆ ಪದ್ದತಿಗೆ ಅಭಾಸವಾಗದಂತೆ, ಅಲ್ಲಿನ ರೊಟ್ಟಿಯ ಮೇಲಿರುವ ಬೆಣ್ಣೆಯಂತೆ, ಕಪ್ಪುಮಣ್ಣಿನಲ್ಲಿ ಬೆಳೆಯುವ ಹಚ್ಚಬಿಳಿ ಹತ್ತಿಯಂತೆ, ಗುಂಪುಗುಂಪಾಗಿ ಸುಳಿದಾಡಿರುವ ಮಲ್ಲಿಗೆ ಬಳ್ಳಿಯಂತೆ "ಕರಿಮಾಯಿ" ಓದುಗನನ್ನು ಮಂತ್ರಮುಗ್ದನನ್ನಾಗಿಸಬಲ್ಲಳು..


ಕಾದಂಬರಿಯಲ್ಲಿ ಹುಳುಕು ಇಲ್ಲವೆಂದಲ್ಲ. ಆದರೆ ಅದು ನಗಣ್ಯ. ಪ್ರತಿ ಕಥೆಕಾದಂಬರಿ ಅಥವಾ ಇನ್ಯಾವುದೇ ರಚನೆಯಿರಲಿ, ಅದರಲ್ಲೊಂದು ಕೊರತೆ ಬರೆದ ಪ್ರತಿಯೊಬ್ಬ ಲೇಖಕನಿಗೂ ಇದೆ ಎಂದು ಅನ್ನಿಸುವುದು ಸಹಜ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಪೂರ್ಣತೆ ಜಡವಾಗುತ್ತದೆ, ಅಪೂರ್ಣತೆ ಪರಿಪೂರ್ಣವಾಗುತ್ತದೆ. ಆದಕಾರಣ ಹುಳುಕನ್ನು ಹೆಕ್ಕಿ ತೋರಿಸುವುದು ನನಗಾಗದ ಕೆಲಸ. 


ಇದು ಚಲನಚಿತ್ರವಾಗಿ ಮೂಡಿದ್ದರೂ ರಿಲೀಸ್ ಆಗುವ ಭಾಗ್ಯವಿಲ್ಲ ಎಂದು ಕಂಬಾರರು ಆರಂಭದಲ್ಲಿ ಹೇಳಿದ್ದಾರೆ. 


ನಮಸ್ಕಾರ.


ಮೋಹನ್ ಕುಮಾರ್ ಡಿ ಎನ್



Wednesday, October 4, 2017

"ಧಾತು" 


ಅನಾದಿಕಾಲದಿಂದ ಈಗಿನ ಮುಂದುವರೆದ ದಿನಗಳ ತನಕ ತನ್ನ ಮಡಿವಂತಿಕೆಯನ್ನು ಉಳಿಸಿಕೊಂಡು ಬಂದಿರುವ ಕೆಲವೇ ಕೆಲವು ಅಂಶಗಳಲ್ಲಿ ಈ ಲೈಂಗಿಕತೆಯೂ ಒಂದು. ಎಲ್ಲ ಕ್ಷೇತ್ರದಲ್ಲಿ ಬದಲಾವಣೆಯ ಪೂರವೇ ಹರಿದು ಬಂದು ಅದನ್ನು ಬದಲಾದ ಕಾಲಮಾನದೊಳಗೆ ಒಪ್ಪಿಕೊಂಡಿರುವಾಗ್ಯೂ, ತನ್ನ ಅಗೋಚರ ಕಬಂಧಬಾಹುವಿನ ಕಪಿಮುಷ್ಟಿಯಿಂದ ಹೊರಬರದೆ, ತನ್ನನ್ನು ತಾನು ನಿಯಂತ್ರಿಸಿಕೊಂಡು ಅಸಂಕುಚಿತ ಸಂಕೋಲೆಯಲ್ಲಿ ಹೆಣೆಯಲ್ಪಟ್ಟಿರುವ ನಮ್ಮನಿಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾದ ಲೈಂಗಿಕತೆಯೆಂದರೆ ಸಂಪ್ರದಾಯವಾದಿಗಳಲ್ಲದೇ ವಿದ್ಯಾವ...ಂತರೂ ಸೇರಿ ಮೂಗುಮುರಿಯುವುದೇ ಹೆಚ್ಚು. ಇಂತಹ ಸಂಕುಚಿತ ಮಡಿವಂತಿಕೆಯ ಲೈಂಗಿಕತೆ ಕುರಿತು ಕನ್ನಡದಲ್ಲಿ ಹಲವು ಬರವಣಿಗೆ ಮೂಡಿ ಬಂದಿವೆ. ಆ ಸಾಲಿನಲ್ಲಿ ನಿಲ್ಲುವ ಇನ್ನೊಂಡು ಕೃತಿಯೇ ನಾ. ಮೊಗಸಾಲೆಯವರು ಬರೆದಿರುವ "ಧಾತು".

ಇದರಲ್ಲಿ ದಾಂಪತ್ಯ ಹಲವು ಮಜಲುಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವುದರ ಜೊತೆಗೆ, ಲೈಂಗಿಕ ವಿಜ್ಞಾನವನ್ನೂ ಅತ್ಯಂತ ತಾರ್ಕಿಕ ನೆಲೆಯಲ್ಲಿ ನೋಡಲಾಗಿದೆ. ಗಂಡಹೆಂಡತಿಯ ನಡುವೆ ನಡೆಯುವ ಈ ನೈಸರ್ಗಿಕ ಕ್ರಿಯೆಯ ಆಳಅಂತರಾಳದ ಪರಿಚಯವಿಲ್ಲದ ವಿದ್ಯಾವಂತರೂ, ಸಮಾಜದಲ್ಲಿ ಉನ್ನತ ಮಟ್ಟದಲ್ಲಿರುವ ಗಣ್ಯರೂ ಮೊದಲುಗೊಂಡು ಓದಲುಬರೆಯಲು ಬಾರದ ನಿರಕ್ಷರರು ಹೇಗೆ ಒಂದು ಅತ್ಯಂತ ಮಧುರ ಭಾವನೆಯುಂಟಾಗಬಹುದಾದ ಇದನ್ನು ತನ್ನ ಅಜ್ಞಾನದಿಂದ ಹೊಸಕಿ ಒನ್ ಸೈಡ್ ದಬ್ಬಾಳಿಕೆ ನಡೆಸುತ್ತಿರುವರು ಎಂಬುದರ ಚಿತ್ರಣ ಇಲ್ಲಿದೆ. ದಾಂಪತ್ಯದ ಹೊರಗಿನ ಸಂಬಂಧವನ್ನು ಎಳೆಎಳೆಯಾಗಿ ಬಿಡಿಸಿಡುವ ಜೊತೆಗೆ ಅದು ಮಾನ್ಯವೋ ಅಮಾನ್ಯವೋ ಎನ್ನುವುದು ವ್ಯಕ್ತಿಗತವಾಗಿ ಅಲ್ಲದೆ ಸಾಮಾಜಿಕವಾಗಿ ಉಂಟುಮಾಡುವ ಪರಿಣಾಮವನ್ನು ಸರಳವಾದ ಪಾತ್ರಗಳಿಂದ ವಿವರವಾಗಿ ಹೇಳಲ್ಪಟ್ಟಿದೆ.

ಇಷ್ಟಕ್ಕೂ ಒಂದಾಗುವುದು ಎಂದರೇನು? ಅದು ದೈಹಿಕವಾಗಿ ದೇಹಗಳೆರಡರ ಕೂಡುವಿಕೆಯೋ ಅಥವಾ ಮಾನಸಿಕವಾಗಿ ಮನಸುಗಳ ಸಂಮ್ಮಿಶ್ರಣವೋ? ಇನ್ನೊಂದು ಅರ್ಥದಲ್ಲಿ ದೇಹಮನುಸಗಳೆರಡರ ಆವಿರ್ಭವಿಸುವಿಕೆಯೋ? ಮೇಲುನೋಟಕ್ಕೆ ಇದರಲ್ಲಿ ಅಂಥದ್ದೇನಿಲ್ಲ ಎಲ್ಲಾ ಒಂದೇ ಎನಿಸಿದರೂ ನಮ್ಮ ಭಾವಕೋಶಕ್ಕೆ ತಾಗಿಯೂ ತಾಗದಂತೆ, ಅರಿವಿಗೆ ಬಂದರೂ ಬಾರದಂತೆ, ಸುಪ್ತಿಗೆ ಎಟುಕಿದರೂ ಬುದ್ದಿಗೆ ತಿಳಿಯದಂತಹ ಸೂಕ್ಷ್ಮಸಂವೇದನೆಯುಳ್ಳ ತೆಳು ಅಂತರ ಒಂದಕ್ಕೊಂದಿದೆ. ಈ ಅಂತರವನ್ನು ನಮ್ಮಲ್ಲಿ ಅದೆಷ್ಟು ಜನ ಅರ್ಥಮಾಡಿಕೊಂಡಿದ್ಡಾರೆ? ಹೆಣ್ಣಿರುವುದು ಬರೀ ಭೋಗಿಸಲಿಕ್ಕೆ ಮಾತ್ರ, ತನಗೆ ಬೇಕಾದಾಗ ಸುಖ ನೀಡಲಿಕ್ಕೆ ಮಾತ್ರ ಎಂದು ತಿಳಿದವರ ನಡುವೆ ಪ್ರಕೃತಿನಿರ್ಮಿತ ಕ್ರಿಯೆಯನ್ನು ಹೆಣ್ಣಿನ ಬಹಿರಂಗದೊಡನೆಯಲ್ಲದೆ ಆಕೆಯ ಅಂತರಂಗಕ್ಕೂ ಒಪ್ಪುವ ಹಾಗೆ ನಡೆಯುವ ಮನಸ್ಸು ಯಾರಿಗಿದೆ? ತಾನು ಮಾತ್ರ ಉತ್ತುಂಗಕ್ಕೇರಿ ಹೆಣ್ಣನ್ನು ನಿರ್ಲಕ್ಷಿಸುವ, ಹೆಸರಿಗೆ ಗಂಡನಂತಿದ್ದರೂ ವಿಟಪುರುಷನಂತಾಡುವ ಗಂಡನಿಗೆ ತನ್ನ ಹೆಂಡತಿಗೂ ಆಕೆಯ ಅಂತರಂಗದ ಭಾವನೆಗಳಿಗೂ ಜೊತೆಗೆ ದೈಹಿಕ ಸ್ಥಿತಿಗತಿಯನ್ನರಿತು ಮುನ್ನಡೆಯುವ ವಿವೇಚನೆ ಇರಬೇಡವೇ? ಪಾತಿವ್ರತ್ಯ ಎನ್ನುವುದು ಕೇವಲ ಹೆಂಡತಿಯಾದವಳು ಮಾತ್ರ ಅನುಸರಿಸಬೇಕಾದುದೇ? ಗಂಡ ಇದರಿಂದ ಹೊರತೇ? ಎನ್ನುವುದನ್ನು ವಸ್ತುಸ್ಥಿತಿಯಲ್ಲಿ ಚರ್ಚಿಸಲಾಗಿದೆ.

ಕಥಾನಾಯಕ ತನ್ನ ಹೆಂಡತಿ ತೀರಿಕೊಂಡ ಬಳಿಕ ಎಲ್ಲರ ಸಲಹೆಯಂತೆ ಇನ್ನೊಂದು ಮದುವೆಯಾಗ ಬಯಸುತ್ತಾನೆ. ಆತನಿಗೆ ಬೇಕಿರುವುದು ದೈಹಿಕ ಸಾಂಗತ್ಯಕ್ಕಿಂತ ಮನೋಸಾಂಗತ್ಯ. ಮನಃಶಾಸ್ತ್ರಜ್ಞ ವೈದ್ಯನೂ ಆದ ಗೆಳೆಯನನ್ನೂ ಭೇಟಿಯಾಗಿ ಈ ಕುರಿತು ಚರ್ಚಿಸುತ್ತಾನೆ. ತನ್ನ ಮಗಸೊಸೆ ಮತ್ತು ಸಮಾಜ ಏನೆಂದುಕೊಳ್ಳುವುದೋ ಎನ್ನುವ ಭಯದಿಂದ ಸುಪ್ತವಾಗಿದ್ದ ತನ್ನೊಡಲ ಬಯಕೆಯನ್ನು ಜೀವಂತವಾಗಿರಿಸಿ, ವೈದ್ಯಮಿತ್ರ ಹೇಳಿದ ಸಣ್ಣಸಣ್ಣ, ಆದರೆ, ಕಣ್ಣುತೆರೆಸುವ ಜೀವನಪಾಠ ನಾಯಕನ ಕಣ್ಣು ತೆರೆಸಲು ಆತನಿಗೆ ಜ್ಞಾನೋದಯವಾಗಿ ತಾನು ತನ್ನ ಹೆಂಡತಿಯ ಜೊತೆ ಅದೆಷ್ಟೇ ಚೆನ್ನಾಗಿ ಸಂಸಾರ ನಡೆಸುತ್ತಿದ್ದರೂ ತಾನು ನಡೆಸಿದ ದಾಂಪತ್ಯದ ಏಕಪ್ರವೃತ್ತಿ ಧೋರಣೆಯನ್ನು ನೆನೆದು ಪಶ್ಚಾತ್ತಾಪ ಪಡುತ್ತಾನೆ. ಇದಕ್ಕೂ ಮುಂಚೆ ತಾನು ಖ್ಯಾತ ಸಾಹಿತಿಯಾಗಿದ್ದು ಇತ್ತೀಚೆಗೆ ಬರೆದ ಕಥೆಯೊಂದು ಪತ್ರಿಕೆಯ ಸಾಪ್ತಾಹಿಕದಲ್ಲಿ ಪ್ರಕಟವಾಗಲು ಅದನ್ನೋದಿದ ಮಹಿಳೆಯೊಬ್ಬಳು ನಾಯಕನ ಅಭಿಮಾನಿಯಾಗುತ್ತಾಳೆ. ಪರಿಚಯ ಮುಂದುವರೆದು ಆಪ್ತರಾಗುವ ಇಬ್ಬರೂ ಮಿಂಚಂಚೆ ಮುಕಾಂತರ ತಮ್ಮತಮ್ಮ ಅನಿಸಿಕೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಾರೆ. ಆಕೆ ತನ್ನ ಹಿಂದಿನ ಪೂರ್ವಾಪರವನ್ನು ನಾಯಕನಿಗೆ ತಿಳಿಸುತ್ತಾಳೆ. ಈ ತನಕ ಮದುವೆಯಾಗಿ ಗಂಡಸಿನ ಸಂಪರ್ಕಕ್ಕೆ ಬಂದಿರದ ಆಕೆಯೂ, ಜೀವನದಲ್ಲಿ ಎಲ್ಲವನ್ನೂ ಅನುಭವಿಸಿ ಇಳಿಗಾಲದ ಸಂಜೆಯಕಡೆ ಮುಖಮಾಡಿ ನಿಂತಿರುವ ನಾಯಕನೂ ತಮ್ಮ ತಮ್ಮ ನಡುವೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತೆ ಅವಿನಾಭವ ಸೆಳೆತವಾಗಲು ಒಂದಿನ ಇಬ್ಬರೂ ನಿಶ್ಚಯಿಸಿ ಒಂದೆಡೆ ಭೇಟಿಯಾಗುವುದೆಂದು ಮಾತಾಗುತ್ತದೆ. ಇಬ್ಬರೂ ಅಲ್ಲಿಗೆ ಬರುತ್ತಾರೆ, ಭೇಟಿಯಾಗುತ್ತಾರೆ. ಅದು ದೈಹಿಕವಾಗಿಯೋ ಇಲ್ಲ ಮಾನಸಿಕವಾಗಿಯೋ? ನಾಯಕನಿಗೆ ತನ್ನ ಬಯಕೆ ಈ ಮುಂಚೆ ಏನಿತ್ತು ಮತ್ತು ಈ ಭೇಟಿಯಲ್ಲಿ ಆಕೆಯನ್ನು ನೋಡಿದ ಮೇಲೆ ಏನಾಯ್ತು? ನಾಯಕಿ ತಾನು ನಾಯಕನ ಮನಸ್ಸನ್ನು ಅರಿತಳೇ? ಆತನನ್ನು ಪಡೆಯುವುದರಲ್ಲಿ ಸಫಲಳಾದಳೇ? ಆಕೆಯ ನಿಲುವೇನಿತ್ತು? ನಾಯಕನನ್ನು ಅದು ಬದಲಿಸಿತೇ? 

ನಾಯಕನ ವಯಸ್ಸು ಎಪ್ಪತ್ತೊಂದು, ನಾಯಕಿಯದು ಅರವತ್ತು. ಈ ಹಿನ್ನೆಲೆಯನ್ನಿಟ್ಟುಕೊಂಡು ಸಮಾಜದ ಹತ್ತುಹಲವು ಹುಳುಕುಗಳ ಕಟ್ಟಿಕೊಡುವುದರ ಜೊತೆ ದಾಂಪತ್ಯದ ಮಹತ್ವಪೂರ್ಣ ಮಾಹಿತಿಯನ್ನು ,ಹೆಣ್ಣಿನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ಮತ್ತದರ ಒಳಸುಳಿಯಿಂದ ಪಾರಾಗುವ ದಾರಿಯನ್ನು, ಅತ್ಯಂತ ಸಹಜವಾಗಿ ವಿವರಿಸಿದ್ದಾರೆ. ಇಲ್ಲಿ ಮೌಕಿಕ ಹಿನ್ನೆಲೆಯುಳ್ಳ ದಾಂಪತ್ಯ ಆದರ್ಶಗಳು ಹೇಗೆ ಹೆಣ್ಣಿಗೆ ಅನ್ವಯಿಸುವುದೋ ಹಾಗೇ ಗಂಡಿಗೂ ಅನ್ವಯಿಸುವುದೆನ್ನುವುದನ್ನು ಮನಗಾಣುವ ಹಾಗೆ ಸಂಧರ್ಭವನ್ನು, ಪಾತ್ರಗಳನ್ನು, ಕಥೆಯನ್ನು ನಿರೂಪಿಸಲಾಗಿದೆ. "ಧಾತು" ಎನ್ನುವುದು ಇಬ್ಬರಲ್ಲೂ ಇರಬೇಕಾದ ಸಮಾನತೆಯನ್ನು, ಸ್ಥಿರತೆಯನ್ನು, ದೇಹವೇ ಮನಾಸಾಗಿರುವುದನ್ನು, ಮನಸೇ ದೇಹವಾಗಿರುವುದನ್ನು, "ಅಹಂ ಬ್ರಹ್ಮಾಸ್ಮಿ" ಎನ್ನುವುದು ಇಬ್ಬರಲ್ಲಿನ ಸಹಭಾಗಿತ್ವವನ್ನು ಮೇಳೈಸುವ ಕೊಂಡಿಯಾಗಿದೆ ಎಂದು ಪರಿಭಾವಿಸಬೇಕು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್


"ಹೊನ್ನ ಕಣಜ"

ನೀವು ಹಿಂದಿನ ಶತಮಾನದ ಮಧ್ಯಂತರ ಕಾಲದಿಂದ ಇಂದಿನವರೆಗೂ ಮೂಡಿಬಂದ ಅಪರೂಪದ ಸಣ್ಣಸಣ್ಣ ಕಥೆಯನ್ನು ಓದಬೇಕಿದ್ದರೆ ಅದಕ್ಕಾಗಿ ಎಲ್ಲಿಯೂ ತಡಕಾಡಬೇಕಿಲ್ಲ, "ಪ್ರಜಾವಾಣಿ" ಹೊರತಂದಿರುವ "ಹೊನ್ನ ಕಣಜ" ಎನ್ನುವ ಬೃಹತ್ಕಥಾ ಮಾಲಿಕೆಯನ್ನು ಓದಿದರಾಯಿತು. ಹೆಸರಿಗೆ ತಕ್ಕಂತೆ ಇದೊಂದು ಹೊನ್ನ..ಹೊನ್ನಿಗಿಂತಲೂ ಮಿಗಿಲಾದ ಕಣಜವೇ ಸರಿ. ಅರ್ಧಶತಮಾನಕ್ಕೂ ಮಿಕ್ಕಿದ ಹಿಂದಿನ ಕಥೆಗಳನ್ನು ಓದುತ್ತಾ ಸವಿಯುಣುವುದರ ಜೊತೆಜೊತೆಗೆ ಆಗಿನ ಕಾಲಮಾನದ ಕಥೆಗರರ ಮನಸ್ಥಿತಿ, ಕಥಾವಸ್ತು, ಸುತ್ತಮುತ್ತಲ ಪರಿಸರ, ನಿರೂಪಣಾ ಶೈಲಿ..ಈ ಎಲ್ಲದರ ಸ್ಥೂಲ ಪರಿಚಯ ದೊರಕುತ್ತದೆ.

"ಪ್ರಜಾವಾಣಿ" ತನ್ನ ಆರಂಭಿಕ ದಿನಗಳಿಂದಲೂ ಪ್ರತಿವರ್ಷ ...ಸಣ್ಣ ಕಥಾ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬರುವುದರ ಜೊತೆಗೆ ಹಲವು ಪ್ರತಿಭಾ ಬರಹಗಾರರನ್ನು ಪ್ರೋತ್ಸಾಹಿಸುತ್ತಲೂ, ಯುವ ಬರಹಗಾರರ, ಅದರಲ್ಲೂ ಮುಖ್ಯವಾಗಿ ಎಲೆಮರೆ ಕಾಯಿಯಂತಿದ್ದು ತನ್ನ ಬರವಣಿಗೆಗೆ ವೇದಿಕೆ ಸಿಗದವರ ಪಾಲಿನ ಆಶಾಕಿರಣದಂತೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು ಅವರನ್ನು ಸಾಹಿತ್ಯಿಕ ವಲಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತಲೂ, ಹೊಸಹೊಸ ಸಾಹಿತ್ಯದ ರಚನೆಯಲ್ಲಿ ತನ್ನ ಪಾಲಿನ ಅನೂಹ್ಯ ಕಾಣಿಕೆಯನ್ನು ಸಲ್ಲಿಸುತ್ತಲೂ ಬಂದಿರುವುದು ಶ್ಲಾಘನೀಯ ಮತ್ತು ಗಮನಾರ್ಹ. ವಿಶೇಷವೆಂದರೆ ಮೊದಮೊದಲು ಸ್ಪರ್ಧಿಗಳಾಗಿ ತಮ್ಮ ಕಥೆಯನ್ನು ಬರೆದವರು ಕಾಲಾನಂತರ ಅದೇ ಕಥಾತೀರ್ಪುಗಾರರಾಗಿದ್ದು. ಅಷ್ಟರ ಮಟ್ಟಿಗೆ "ಪ್ರಜಾವಾಣಿ" ತನ್ನ ಕೊಡುಗೆಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದೆ.

ಇದರಲ್ಲಿ ಒಟ್ಟೂ ಐವತ್ತು ಸಣ್ಣ ಕಥೆಗಳಿವೆ. ಐವತ್ತು ಕಥೆಗಾರರು ತಮ್ಮ ಕಲ್ಪನೆಯನ್ನಿಲ್ಲಿ ಸುಂದರ ಕಲಾಕೃತಿಗಳನ್ನಾಗಿಸಿದ್ದಾರೆ. ಈ ಕಥೆಗಳ ಹರವು ದೊಡ್ಡದು, ಎಲ್ಲವನ್ನು ಒಂದೇ ಪುಸ್ತಕದಲ್ಲಿ ಮುದ್ರಿಸದೆ ಮೂರು ಸಂಪುಟಗಳಲ್ಲಿ ತರುವ ಯೋಜನೆ "ಪ್ರಜಾವಾಣಿ"ಯದು. ಅದರ ಮೊದಲ ಸಂಪುಟವೇ ಈ "ಹೊನ್ನ ಕಣಜ". ಸಣ್ಣ ಕಥೆಗಳನ್ನು ಇಷ್ಟಪಡುವರು ಓದಲೇ ಬೇಕಾದ ಅಪರೂಪದ ಸಂಗ್ರಹಯೋಗ್ಯ ಕೃತಿ. ಇಲ್ಲಿರುವ ಒಂದೊಂದು ಕಥೆಗಳು ಸುಧೀರ್ಘ ಯೋಚನೆಯನ್ನು, ಭಾವಪರವಶತೆಯನ್ನು ಓದುಗನ ಮನದಲ್ಲಿ ಮೂಡಿಸುವುದಂತೂ ನಿಜ. ಹೆಚ್ಚಿಗೆ ಇದರ ಬಗ್ಗೆ ಹೇಳುವುದಕ್ಕಿಂತ ಓದಿ ನೋಡಿದಾಗ ಹೆಚ್ಚುಹೊಳಪು ನಮ್ಮಲ್ಲಿ ತರಿಸುತ್ತದೆ ಎನ್ನುವುದಷ್ಟೇ ಸತ್ಯ. ಮೇಲಾಗಿ ಐವತ್ತು ಕಥೆಗಳನ್ನು ಒಂದೇ ಚೌಕಟ್ಟಿನಲ್ಲಿ ಹಿಡಿದು ಕೂಡಿಸುವುದು ಸಾಧ್ಯವಾಗದ ಮಾತು. ಸುಮ್ಮನೇ ಓದುತ್ತಾ ಕಥೆಗಳಲ್ಲಿ ನಾವು ಲೀನವಾಗಬೇಕಷ್ಟೇ.

ಈ ಕೆಳಕಾಣಿಸಿದ ಮಹಾನುಭಾವರ ಅಪೂರ್ವ ಕಥೆಯನ್ನು ಓದಬಹುದು.

1. ಬಿ ಸಿ ರಾಮಚಂದ್ರ ಶರ್ಮ
2. ಸಮೇತನಹಳ್ಳಿ ರಾಮರಾಯ
3. ಪೂರ್ಣಚಂದ್ರ ತೇಜಸ್ವಿ
4. ಭಾರತೀಸುತ
5. ಸುಮತೀಂದ್ರ ನಾಡಿಗ
6. ವೀರಭದ್ರ
7. ಜಿ ಕೆ ಗೋವಿಂದರಾವ್
8. ಸುಧಾಕರ
9. ಪಿ ವಿ ನಂಜರಾಜ ಅರಸು
10. ಬೆಸಗರಗಳ್ಳಿ ರಾಮಣ್ಣ
11. ಪಿ ಲಂಕೇಶ್
12. ಟಿ ಎನ್ ಕೃಷ್ಣರಾಜು
13. ಶ್ರೀಕೃಷ್ಣ ಆಲನಹಳ್ಳಿ
14. ಗೋಪಾಲಕೃಷ್ಣ ಮಧ್ಯಸ್ಥ
15. ಶ್ರೀಕಾಂತ
16.ಕಮಲಾ ಸುಬ್ರಮಣ್ಯಂ
17. ಎಸ್ ದಿವಾಕರ್
18. ವೈದೇಹಿ
19. ಜಯಂತ ಕಾಯ್ಕಿಣಿ
20. ಕಾಳೇಗೌಡ ನಾಗವಾರ
21. ಬೋಳುವಾರು ಮಹಮದ್ ಕುಂಯಿ
22. ಕೆ ಟಿ ಗಟ್ಟಿ
23. ವಿವೇಕ ಶಾನಭಾಗ
24. ದೇಶಪಾಂಡೆ ಸುಬ್ಬರಾಯ
25. ಅಬ್ದುಲ್ ರಶೀದ್
26. ಅಶೋಕ ಹೆಗಡೆ
27. ಎಂ ಎಸ್ ಶ್ರೀರಾಮ್
28. ಮೊಗಳ್ಳಿ ಗಣೇಶ್
29. ಅಮರೇಶ ನುಗಡೋಣಿ
30. ರಾಜೇಂದ್ರ ಚಿನ್ನಿ
31. ಸಿ ಬಸವಲಿಂಗಯ್ಯ
32. ರಾಮಚಂದ್ರದೇವ
33. ಕಲಿಗಣನಾಥ ಗುಡದೂರು
34. ಜಯಶ್ರೀ ದೇಶಪಾಂಡೆ
35. ನಾಗವೇಣಿ ಹೊನ್ನಕಟ್ಟಿ
36. ಡಾ. ನಾ ಮೊಗಸಾಲೆ
37. ಬಿ ಎಲ್ ವೇಣು
38. ಮಂಜುನಾಥ್ ಲತಾ
39. ಅಲಕ ತೀರ್ಥಹಳ್ಳಿ
40. ಡಾ. ವಿನಯಾ
41. ಕಸ್ತೂರಿ ಎಸ್ ಬಾಯಿರಿ
42. ನಾಗಮಂಗಲ ಕೃಷ್ಣಮೂರ್ತಿ
43. ಕವಿತಾ ರೈ
44. ಟಿ ಕೆ ದಯಾನಂದ
45. ಅಲಕಾ ಕೆ
46. ಮಹಾಂತೇಶ ನವಲಕಲ್
47. ರಶ್ಮಿ ಕೆ ಎಂ
48. ಕೆ ಎ ಶಾಂತಿ
49. ಪಜ್ಞಾ ಮತ್ತಿಹಳ್ಳಿ
50. ರಾಜು ಹೆಗಡೆ

ನಮಸ್ಕಾರ

ಮೋಹನ್ ಕುಮಾರ್ ಡಿ ಎನ್


https://www.facebook.com/photo.php?fbid=1467976779957169&set=gm.1536931986374253&type=3&theater&ifg=1

Thursday, September 7, 2017

೨೦೧೫ರ ದೀಪಾವಳಿ ಕಥಾಸ್ಪರ್ಧೆಗೆ ಬರೆದ ಮತ್ತೊಂದು ಕಥೆಯಿದು. ಬರೆದದ್ದು "ಕನ್ನಡಪ್ರಭ " ಪತ್ರಿಕೆಗೆ.  ಓದಿಕೊಳ್ಳಿ . ವಿಶೇಷವೆಂದರೆ ಬರೆದುಕಳುಹಿಸಿದವನು ಕಥೆಗೆ ಹೆಸರನ್ನೇ ಕೊಟ್ಟಿರಲಿಲ್ಲ!!!

ಈಗಾದರೂ ಹೆಸರಿನ ಅವಶ್ಯಕತೆ ನನಗೆ ಕಾಣುವುದಿಲ್ಲವಾದ್ದರಿಂದ ಹೆಸರನ್ನು ಪುನಃ ಇಡುವ ಗೊಡವೆಗೆ ಹೋಗಿಲ್ಲ. 

ಕನ್ನಡಪ್ರಭ ದೀಪಾವಳಿ ಕಥಾ ಸ್ಪರ್ಧೆ 2015

      
 "ಆ ನನ್ನ್ಮಗಾ ಕರೆದ ಅಂತ ನಾವಲ್ಲಿಗೆ ಹೋಗ್ಬಾರ್ದಿತ್ತು ಕಣೋ. ನೋಡಿದ್ಯಲ್ಲ ತಮಾಷೆಗೆ ಮಾಡಿದ ಜೋಕನ್ನ  ಸೀರಿಯಸ್ಸಾಗಿ ತಗೊಂಡು ಹೇಗೆಲ್ಲಾ ಅವಮಾನ ಮಾಡಿ ಕಳಿಸ್ದ ಅಂತ. ಅವ್ನೊಬ್ಬ  ಕಚ್ಡಾ ಕಿತ್ತೋದ್ ನನ್ಮಗ...."
    
ಹಾಗಂತ  ನನ್ನಲ್ಲೇ ನಾನು ಎಷ್ಟು ಬೈದುಕೊಂಡರು ನನಗೆ ಬಂದಿದ್ದ ಕೋಪ ಕಡಿಮೆಯಾಗುವ ಯಾವುದೇ ಮುನ್ಸೂಚನೆ ಕಾಣಲಿಲ್ಲ. ಜೊತೆಗೆ ನನ್ನ ಸ್ನೇಹಿತ ಪ್ರಾಣಿ ಇದ್ದ. ಅವನಿಗೇನು ಹೇಳಬೇಕೋ ತಿಳಿಯದೆ ನನ್ನ ಜೊತೆ ಹೆಜ್ಜೆಹಾಕುತ್ತಿದ್ದ. ನಾವು ನಮ್ಮ ಮನೆಗೆ ವಾಪಾಸ್ ಬರಲು ಬಸ್ಸ್ ಸ್ಟಾಂಡಿಗೆ ಬರುತ್ತಿದ್ದೆವು. ಇಬ್ಬರಲ್ಲು ಕೋಪ ಮನೆಮಾಡಿತ್ತು.
     
ಬಸ್ಸ್ ಸ್ಟಾಂಡ್ ಅದೆಲ್ಲಿ ಸತ್ತು ಬಿದ್ದಿದೆಯೋ ಗೊತ್ತಿಲ್ಲ. ಎಷ್ಟು ನಡೆದರೂ ಸಿಗುತ್ತಿಲ್ಲ. ಹೆಜ್ಜೆಮೇಲೆ ಹೆಜ್ಜೆ ಹಾಕಿ ನಮ್ಮ ಕಾಲುಗಳು ಊಳಿಡಲು ಶುರುವಾಯಿತು. ಜೊತೆಗೆ ಹಸಿವು ಬೇರೆ, ಹೊಟ್ಟೆಹೋಗಿ ಬೆನ್ನಿಗೆ ಕಚ್ಚಿಕೊಂಡಿತ್ತು. ಎತ್ತ ನೋಡಿದರು ಒಂದೇ ಒಂದು ಹೋಟೆಲಾಗಲಿ ಕೊನೆಗೆ ಟೀ ಅಂಗಡಿಯಾಗಲಿ ಕಾಣುತ್ತಿಲ್ಲ. ಇದ್ದ ಒಂದೆರೆಡು ಗೂಡಂಗಡಿಗಳು ಬಾಗಿಲು ಮುಚ್ಚಿವೆ.
      
ನಾವು ನಡೆದುಬರುತ್ತಿದ್ದ ಹಾದಿಯಲ್ಲಿ ವಿದ್ಯುತ್ ಕಂಬಗಳಾಗಲಿ, ಅದರಲ್ಲಿರಬೇಕಾಗಿದ್ದ ದೀಪವಾಗಲಿ ಇಲ್ಲದೆ ರಸ್ತೆ ಪೂರ ಕತ್ತಲು ಕವಿದು ಸಂಜೆಯಾಗಿದ್ದರಿಂದ ಜೀರ್ಜಿಂಬೆಗಳು ಗುಯಗುಯ್ಯ್ಗುಡುವ ಸದ್ದು. ಎಲ್ಲೋ ಮಿಂಚುಹುಳ ರೆಕ್ಕೆಬಡಿದು ನಮಗೆ ದಾರಿ ತಪ್ಪದಂತೆ ಬೆಳಕು ಹರಿಸಿ ನಾವು ದಾರಿ ಬಿಟ್ಟು ಅಡ್ಡದಾರಿ ಹಿಡಿದಿಲ್ಲ ಎಂದು ಸಾಬೀತುಪಡಿಸುತ್ತಿತ್ತು. ರೆಕ್ಕೆ ಹುಳಗಳು ಪಟ್ಪಟ್ ಎಂದು ರೆಕ್ಕೆ ಬಡಿಯುತ್ತ ಆಗಾಗ ನಮಗೆ ತೊಂದರೆ ಕೊಡುತ್ತಿದ್ದುದು ಬಿಟ್ಟರೆ ಅಲ್ಲಿದ್ದ ಅಗಣ್ಯ ಪ್ರಕೃತಿಯಿಂದಾಗಲಿ, ಪ್ರಾಣಿಪಕ್ಷಿಕ್ರಿಮಿಕೀಟಾದಿಯಿಂದಾಗಲಿ, ಎದೆಯಲ್ಲಿ ನಡುಕ ಹುಟ್ಟೀಸುವ ಕಾವಳದಿಂದಾಗಲಿ ನಮಗ್ಯಾವ ತೊಂದರೆಯೂ ಕಂಡುಬರಲಿಲ್ಲ ಎಂಬುದೇ ನಮಗಿದ್ದ ಏಕೈಕ ಸಮಾಧಾನ.
     
ರಸ್ತೆಯೇನೋ ಅಲ್ಲಲ್ಲಿ ಸಣ್ಣಸಣ್ಣ ಹಳ್ಳ ಗುಂಡಿಯಿಂದ ಕೂಡಿದ್ದರು ಚೆನ್ನಾಗಿಯೇ ಇತ್ತು. ರಸ್ತೆ ಬಿಟ್ಟು ಕೆಳಗಿಳಿಯುವ ಧೈರ್ಯ ನಾವು ಮಾಡಲಿಲ್ಲವಾದ್ದರಿಂದ, ಜೊತೆಗೆ ಅದೆಷ್ಟೋ ಕಿಲೋಮೀಟರ್ ನಡೆದಂತನಿಸಿ ನಮಗೆ ಹಸಿವಿನ ಜೊತೆಗೆ ನೀರಡಿಕೆಯು ಶುರುವಾಗಿ ಇನ್ನೇನು ನಡೆಯಲು ಸಾಧ್ಯವಿಲ್ಲ ಆದದ್ದಾಗಲಿ ಇಲ್ಲೇ ಕುಳಿತು ಬಿಡುವ ಎಂದು ಅಂದುಕೊಳ್ಳುವಷ್ಟರಲ್ಲಿ, ದೂರದಲ್ಲೆಲ್ಲೊ ಒಂದು ಸಣ್ಣ ದೊಂದಿ ಹೊತ್ತಿ ಉರಿಯುತ್ತಿರುವುದು ಕಾಣಿಸಿತು. ಬದುಕಿತು ಬಡಜೀವ ಎಂದುಕೊಂಡು ಅವಡುಗಚ್ಚಿ ಅಲ್ಲಿಗೆ ಹೆಜ್ಜೆ ಹಾಕತೊಡಗಿದೆವು.
     
ಅದೊಂದು ಸಣ್ಣಾತಿಸಣ್ಣ ಗುಡಿಸಲೆಂದು ತಿಳಿಯಲು ಮುಂದೆ ನೇತಾಕಿದ್ದ ಸಣ್ಣ ದೊಂದಿಯ ಬೆಳಕು ನಮಗೆ ಸಹಾಯ ಮಾಡಿತು. ಒಣಗಿದ ತೆಂಗಿನಗರಿ ಹೊದಿಸಿ ಎಂಟತ್ತು ಗಳುವನ್ನು ಅಡ್ಡ ಉದ್ದ ಕೂರಿಸಿ ಕಟ್ಟಿದ್ದ ಚಿಕ್ಕ ಗುಡಿಸಲದು. ಕಟ್ಟಿ ಸುಮಾರು ವರ್ಷಗಳಾಗಿದ್ದಿರಬಹುದು. ಅದೆಷ್ಟು ಬಿರುಬಿಸಿಲು ಗಾಳಿಮಳೆಗೆ ತಲೆಯೊಡ್ಡಿನಿಂತಿದೆಯೋ ಎಂದು ಆ ಗುಡಿಸಲು ನೋಡಿದ ತಕ್ಷಣ ನನ್ನ ಅನುಭವಕ್ಕೆ ಬಂತು.
     
ಕತ್ತಲಲ್ಲಿ ದೈವದಂತೆ ಕಂಡ ಆ ಗುಡಿಸಲ ಬಳಿಗೇನೊ ನಾವು ಬಂದಾಗಿತ್ತು. ಆದರೆ ನಮಗಿದ್ದ ಪ್ರಶ್ನೆ ಈ ಕಗ್ಗತ್ತಲ ಕಾಡಲ್ಲಿ ಅದೂ ರೋಡಿಂದ ಇಷ್ಟೊಂದು ಒಳಗೆ ಯಾರು ಕಟ್ಟಿದ್ದಾರೆ ಈ ಗುಡಿಸಲನ್ನ? ಬಹುಶಃ ಇದು ಮನುಷ್ಯಮಾತ್ರರು  ಕಟ್ಟಿರುವಹಾಗೆ ಕಾಣುತ್ತಿಲ್ಲ. ಹಾಗಾದರೆ ಉರಿಯುತ್ತಿರುವ ದೊಂದಿ ಹಚ್ಚಿಟ್ಟವರು ಯಾರು? ಅಸಲಿಗೆ ಒಳಗಡೆ ಯಾರಾದರು ಇದ್ದಾರ? ಈ ತರಹೇವಾರಿ ಅನುಮಾನ ನಮಗೆ ಬರತೊಡಗಿವು. ಆದದ್ದಾಗಲಿ ನೋಡೇಬಿಡೋಣ ಎಂದು ಇಬ್ಬರು ನಿರ್ಧರಿಸಿ ಗುಡಿಸಲಿಗೆ ಗರಿಯಿಂದ ನೇಯ್ದಿದ್ದ ತಳ್ಳುಬಾಗಿಲ ಮುಂದೆ ನಿಂತು "ಯಾರಾದರು ಇದ್ದೀರಾ?" ಎಂದು ಕೇಳಿದೆವು.
     
ನಮಗೆ ಮರುತ್ತರ ಬರಲಿಲ್ಲ. ಪ್ರಾಣಿ ಮತ್ತೊಂದು ಸಾರಿ ಕೂಗಲು ಬಾಯ್ದೆರೆದ. ಅಷ್ಟರಲ್ಲಿ ಒಳಗಿಂದ ಏನೊ ತಟಕ್ಕಂತ ಬಿದ್ದಂತೆ ಸದ್ದಾಯಿತು. ಸದ್ಯ ಮನುಷ್ಯರಲ್ಲದಿದ್ದರು ಯಾವುದಾದರು ಪ್ರಾಣಿಪಕ್ಷಿಯಾದರು ಇದ್ದೀತೆಂದು ನಮಗೆ ಮನವರಿಕೆಯಾಯ್ತು. ಪ್ರಾಣಿ ಕೂಗಲು ಮೂರನೆ ಬಾರಿ ಬಾಯ್ದೆರೆದು ಕೇಳಿದ " ಯಾರಾದ್ರು ಇದ್ದೀರೋ?" ಎರಡುಮೂರು ನಿಮಿಷ ಕಳೆದರು ನಮಗೆ ಮರುತ್ತರ ಸಿಗಲಿಲ್ಲ


ನಮ್ಮ ತಾಳ್ಮೆಗೂ ಒಂದು ಮಿತಿ ಬೇಡವೇ, ಅದೂ ಇಂತ ಹೊತ್ತಿನಲ್ಲಿ? ಅಲ್ಲಿವರೆಗು ಮರೆತಂತಿದ್ದ ಕೋಪ ಮತ್ತೆ ನೆನಪಾದಂತಾಗಿ ಪ್ರಾಣಿ ಮತ್ತೊಮ್ಮೆ ಬಾಯ್ತೆರೆಯಿತು. "ಏ ನನ್ನ್ ಮಕ್ಕುಳ್ರ ಎಷ್ಟೋ ಕೂಗೋದು? ಯಾರದ್ರು ಇದ್ದೀರೊ ಅಥ್ವಾ ಸತ್ತು ದೆವ್ವವಾಗಿ ನಮ್ಮನ್ನು ಕಾಡ್ಸೋಕೆ ಅಂತ ಇಲ್ಲಿ ದೊಂದಿ ಕಟ್ಟಿದ್ದೀರೋ ಬೊಗುಳ್ರೊ" ಎಂದು ಸಿಟ್ಟಿನಲ್ಲಿ ತಾಳ್ಮೆ ಕಳಕೊಂಡವನಂತೆ ಕೇಳಿದ. ನನಗೆ ಅವನು ಈ ಮಾತಿನಮಧ್ಯೆ ದೆವ್ವ ಪಿಚಾಚಿಯಂದಿದ್ದು ನನಗೆ ಸರಿಕಾಣಲಿಲ್ಲ. ಓದಿ ವಿದ್ಯಾವಂತರಾದ ನಾವೇ ಹೀಗೆ ಮೂಡನಂಬಿಕೆ ಬಗ್ಗೆ ಅಪ್ಪಿತಪ್ಪಿಯೂ ಅದರ ಇರುವಿಕೆ ಬಗ್ಗೆ ಮಾತಾಡಿದರೆ ಹೇಗೆ ಎಂಬುದೇ ನನ್ನ ಆಕ್ಷೇಪಣೆಗೆ ಕಾರಣ. ಹಾಗಂತ ನಾನವನಿಗೆ ಹೇಳಲಿಲ್ಲ.
     
ಯಾರ ಸುಳಿವು ನಮಗಲ್ಲಿ ಕಾಣದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಅಲ್ಲಿಂದ ಹೊರಡೋಣವೆಂದು ನಾವು ನಿಶ್ಚಯಿಸಿ ನಮ್ಮ ಅದೇ ಹಸಿವು ಬಾಯಾರಿಕೆ ಸಂಕಟ ನೆನಪಿಗೆ ಬಂದು ದುಃಖಿಸುತ್ತ ಕಾಲ್ತೆಗೆಯುವ ಹೊತ್ತಿಗೆ ನಮಗೆ ಒಳಗಿಂದ ಕ್ಷೀಣ ಧನಿಯೊಂದು " ಯಾರದು?" ಎಂದದ್ದು ಕೇಳಿಸಿತು. ಅಂತೂ ಒಳಗಡೆ ಯಾರೋ ಇದ್ದಾರೆ ಎಂದನಿಸಿ ನಮಗೆ ಖುಷಿಯಾಗಿ ತಳ್ಳು ಬಾಗಿಲು ಮುಂದಕ್ಕೆ ನೂಕಿ ಒಳಗಡೆ ತಲೆಯಾಡಿಸಿದ್ದಷ್ಟೇ, ಅದೆಲ್ಲಿತ್ತೋ ಆ ಪಾಟಿ ಹೊಗೆ! ಕ್ಷಣದಲ್ಲಿ ಕಣ್ಣೆಲ್ಲಾ ಹೊಗೆ ತುಂಬಿ ಕಣ್ಣು ಖಾರವಾಗಿ ಕಣ್ಣೀರು ದಳದಳ ಎಂದು ಒಸರಿಸತೊಡಗಿತು. ನಮಗೀಗ ಏನೆಂದರೆ ಏನು ಕಾಣುತ್ತಿಲ್ಲ. ಇದೆಲ್ಲಿಬಂದು ಸಿಕ್ಕಿ ಬಿದ್ದೆ ಮತ್ತು ನಮಗ್ಯಾರು ಮರುತ್ತರ ಕೊಟ್ಟಿದ್ದು ಎಂದು ಒಟ್ಟೊಟ್ಟಿಗೆ ಯೋಚಿಸಲು ನನಗೇ ಕ್ಷಣಕಾಲ ದಿಗಿಲು ಜೊತೆಗೆ ಕೈಕಾಲು ಕಂಪನವಾದಂತಾಯ್ತು. ಅಷ್ಟರಲ್ಲಿ ಪ್ರಾಣಿ ಮಾಡಿದ ಒಳ್ಳೇ ಕೆಲಸವೆಂದರೆ, ಸ್ವಲ್ಪವೇ ತೆರೆದಿದ್ದ ತಳ್ಳುಬಾಗಿಲನ್ನು ಎರಡು ಹೆಜ್ಜೆ ಹಿಂದೆ ಹೋಗಿ ಪೂರ್ತಿ ತೆರೆದುಬಿಟ್ಟ. ಒಂದೈದು ನಿಮಿಷ ಕಳೆದಂತೆ ಅಲ್ಲಿದ್ದ ಹೊಗೆ ಚೂರುಚೂರೆ ಮರೆಯಾಗಿ ಗುಡಿಸಿಲೊಣಗಣ ಚಿತ್ರ ನಮಗೆ ಅರೆಬರೆಯಾಗಿ ಕಾಣತೊಡಗಿತು.
     
ಅಲ್ಲಾರೋ ಇರಬೇಕಲ್ಲ ಮೂಲೇಲಿ ಎಂದು ಇಬ್ಬರಿಗು ಅನ್ನಿಸತೊಡಗಿತು. ನಮ್ಮ ಮುಖದ ಭಾವನೆಗಳು ಬದಲಾಗಿ ಒಬ್ಬರ ಮುಖ ಒಬ್ಬರು ನೋಡುತ್ತ ಇರುವಾಗ ನಮಗೆ ಅಲ್ಲಿನ ಚಿತ್ರಣ ಇನ್ನು ಸ್ಪಷ್ಟವಾದಂತೆ ಅಲ್ಲಿ ಯಾರೋ ನಮ್ಮಿಬ್ಬರನ್ನು ಹೊರತುಪಡಿಸಿ ಇನ್ನ್ಯಾರೋ ಇದ್ದಾರೆ ಎನ್ನುವ ನಮ್ಮ ಅನುಮಾನ ಬಲವಾಗುತ್ತ ಬಂದು ನೋಡಿದರೆ ಅಲ್ಲಿ ಒಂದು ಮೂಲೆಯಲ್ಲಿ ಒಂದು ಮುಪ್ಪಾನುಮುಪ್ಪ ಮುದುಕಿ ನಿಂತು ತದೇಕ ಚಿತ್ತದಿಂದ ಬಿಟ್ಟಕಣ್ಣು ಬಿಟ್ಟಂತೆ ನಮ್ಮನ್ನೇ ನೋಡುತ್ತಿದ್ದಾಳೆ! ಪ್ರಾಣಿ ಆಗಲೆ ಹೇಳಿದ್ದ ದೆವ್ವ ಪಿಚಾಚಿ ಮಾತು ನಿಜವೆನ್ನಿಸತೊಡಗಿ ನನ್ನ ಸೈದ್ದಾಂತಿಕ ನಿಲುವಿನಲ್ಲಿ ಬದಲಾವಣೆ ಬರತೊಡಗಿರುವಾಗ, ಅಲ್ಲಿ ಮೂಲೇಲಿ ನಿಂತಿದ್ದ ಆ ಶರೀರದಿಂದ ಮತ್ತೊಮ್ಮೆ ಕ್ಷೀಣ ಧನಿ ಗಂಟಲೊಡೆಯಿತು.  "ಯಾರದು?" ಮನುಷ್ಯ ಮಾತ್ರರಾದವರು ಮಾತ್ರ ಕೇಳಬಹುದಾಗಿದ್ದ ಪ್ರಶ್ನೆ ಅದಾಗಿತ್ತು.  ಆಗ ಪ್ರಾಣಿ ಹೇಳಿತು
     
"ನಾವು"
     
" ನಾವೆಂದರೆ"
     
"ನಾವೆಂದರೆ ನಾವೇ!"
     
"ಅದೇ ನೀವೆಂದರೆ ಯಾರು?"
    
"ದಾರಿ ತಪ್ಪಿಬಂದವರು"
     
" ಓ! ನೀವಾ? ಹಾಗಿದ್ದರೆ ಧೈರ್ಯವಾಗಿ ಒಳಗೆ ಬನ್ನಿ"
     
"ನಾವೀಗಾಗಲೆ ಒಳಗಡೆಯೇ ಇರೋದು"
     
" ಹೌದಾ! ನಂಗೆ ಅಷ್ಟಾಗಿ ಕಣ್ಣು ಕಾಣಲ್ಲ್ರಪ್ಪ, ಬನ್ನಿ ಒಳಗೆ ನಿಸ್ಸಂಕೋಚವಾಗಿ"
     
ನಿಸ್ಸಂಕೋಚವಾ? ನಮಗಾ? ಅದೂ ಸತ್ತುಬದುಕೆದ್ದು ಬಂದಂತಿರುವ ಈ ಅಜ್ಜಿಯ ಮುಂದೆ? ನೋಚಾನ್ಸ್! ನಮ್ಮ ಪ್ರತಿಷ್ಟೆ ನಮಗೆ ಹಾಗೆ ಹೇಳಿತು. ಈಗಾಗಲೆ ಹೊಗೆ ಗುಡಿಸಲಿಂದ ಹೆಚ್ಚೂಕಡಿಮೆ ಇಲ್ಲವಾದ್ದರಿಂದ ಮತ್ತು ಕಣ್ಣುರಿ ಕಡಿಮೆಯಾಗಿ ಕಣ್ಣುಗಳು ಅಲ್ಲಿ ಹಚ್ಚಿದ್ದ ಲಾಂದ್ರದ ಬೆಳಕಿಗೆ ಒಗ್ಗಿಕೊಳ್ಳಲು ಗುಡಿಸಲಿನ ಒಳ ಚಿತ್ರಣ ಅತಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿತು. ಅದೊಂದು ಚಚ್ಚೌಕಾರದ ಹತ್ತರಿಂದ ಹದಿನೈಡಿ ಇರಬಹುದಾದ ಗುಡಿಸಲು. ಅಲ್ಲಿ ಮೂಲೆಯಲ್ಲಿ ಸುತ್ತಿಟ್ಟಿರುವ ಚಾಪೆ ಮುದುಡಿ ಮಲಗಿತ್ತು. ಇನ್ನೊಂದು ಮೂಲೆಯಲ್ಲಿ , ಮೂರುಕಲ್ಲಿನ ಒಲೆಯಮೇಲೆ ಹಸೀ ಸೌದೆಯಿಂದ ಮಡಕೆಯಲ್ಲಿ ಅಜ್ಜಿ ಬೇಯಿಸುತ್ತಿದ್ದ ಅಂಬಲಿ ಥರದ್ದೇನೊ ಕೊತಕೊತ ಸದ್ದು ಮಾಡುತ್ತಿತ್ತು.  ಅದರ ಪಕ್ಕದಲ್ಲಿ ಒಂದೆರೆಡು ಬಣ್ಣಗೆಟ್ಟ ಡಬ್ಬಗಳು, ಒಂದು ಬೆಂಕಿಪಟ್ಣ, ಎಣಿಸಿಬಿಸಾಡಬಹುದಾದಷ್ಟು ಒಂದೆರೆಡು ತಟ್ಟೆ ಲೋಟ ಅಷ್ಟೇ! ಇನ್ನು ಆ ಗುಡಿಸಲಲ್ಲಿ ಏನೆಂದರೆ ಏನೂ ಇರಲಿಲ್ಲ ; ಕೊನೆಪಕ್ಷ ಉಸಿರಾಡಲು  ಒಂದೇಒಂದು ಕಿಟಕಿಯೂ ಕೂಡ. ನಮಗೆ ಗುಡಿಸಲು ಒಂಥರ ನಿಗೂಡತೆಯ ಕೇಂದಬಿಂದುವಾಗು ಭಾಸವಾಗತೊಡಗಿತು.
    
"ಅಸೀ ಸೌದೆ ಅಲ್ವಾ ಅದ್ಕೇ ನಿಮ್ಗೆ ಕಣ್ಣುರಿ ಅತ್ಗೊಂಡಿದ್ದು " ನಮ್ಮ ಕಣ್ಣುರಿಗೆ ಕಾರಣ ಹುಡುಕಿ ಹೇಳುವವಳಂತೆ ಹೇಳಿತು ಅಜ್ಜಿ. ಸರಿ ಬಿಡು ಅಜ್ಜಿ ನೀನು ಡಾಕ್ಟರಾಗಿರಬೇಕಾದವಳು ತಪ್ಪಿ ಇಲ್ಲಿದ್ದೀಯ ಅಂತ ಅಜ್ಜಿ ಮುದುಡಿ ಮಲಗಿದ್ದ ಚಾಪೆಯನ್ನು ಹಾಸಿ ಬಂದು ಕೂರೆನ್ನುವಂತೆ ಸಂಜ್ನೆ ಮಾಡಿದಕ್ಕೆ ನಾವು ಬಂದು ಕುಳಿತೆವು. ತಳ್ಳುಬಾಗಿಲು ತೆರೆದಿದ್ದರಿಂದ ಈಗ ಅಷ್ಟಾಗಿ ಹೊಗೆಯಾಡುತ್ತಿರಲಿಲ್ಲ.
     
ಇದಾದ ನಂತರ ಅಜ್ಜಿ ಎಷ್ಟೊತಾದರು ಮಾತಾಡಲಿಲ್ಲ. ನಾವು ಏನು ಕೇಳಿದರು ಉತ್ತರ ಕೊಡುತ್ತಿರಲಿಲ್ಲ , ಸುಮ್ಮನೆ ನಮ್ಮ ಕಡೆ ನೋಡಿ ಮತ್ತೆ ನೋಟ ಒಲೆ ಮೇಲೆ ಬೀಸುತ್ತಿದ್ದರು. ನಮಗೂ ಬೇಜಾರಾಗ ಹತ್ತಿತು. ಸದ್ಯ ಅಷ್ಟಾದರು ನೆಮ್ಮದಿಯಾಗಿ ಇರುವಂತೆ ಮಾಡಿದ್ದು, ನಾವು ಒಳಗಡೆ ಬಂದು ಕುಳಿತಾಗ ಅಜ್ಜಿ ನಮಗೆ ನೀರಿನ ಗಡಿಗೆ ತೋರಿಸಿ ಒಂದು ಸಿಲ್ವಾರ್ ಲೋಟವನ್ನ ತಾನಿದ್ದಲ್ಲಿಂದಲೇ ನಮ್ಮ ಬಳಿ ನೂಕಿದರು. ಅದು ಬಂದು ನಮ್ಮ ಬಳಿ ಬಿದ್ದದ್ದೇ ತಡ, ರೇಜಿಗೆ ಬಿದ್ದವರಂತೆ ನೀರನ್ನು ಗಟಗಟ ಕುಡಿದೆವು. ನಂತರ ನಮ್ಮ ಗಂಟಲಿಗೆ ಬ್ರೇಕ್ ಬಿದ್ದಂತಾಗಿ ಸುಮ್ಮನೆ ಕುಳಿತಿರಲು, ಆಗೊಮ್ಮೆ ಈಗೊಮ್ಮೆ ನಾವು ಬಾಯ್ದೆರೆದು ಅಜ್ಜಿಯನ್ನು ಮಾತಾಡಿಸ ಹೋದರೆ ಈ ಅಜ್ಜಿ ನಮ್ಮ ಕಡೆ ಗಮನವೇ ಕೊಡುತ್ತಿಲ್ಲ! ನಮಗೆ ಗುಡಿಸಲ ಜೊತೆಗೆ ಅಜ್ಜಿಯ ವರ್ತನೆ ಕಂಡು ನಿಗೂಡತೆ ಹೆಚ್ಚಾಗುತ್ತಾ ಹೋಯ್ತು.
     
" ಸರಿ ಮಕ್ಳೇ, ಊಟಕ್ಕ್ ಬನ್ನಿ " ಅಂತು ಅಜ್ಜಿ.
     
ನಾವು ಮರುಮಾತಾಡದೆ ಚಕ್ಕೆಂದೆದ್ದು ಕೈಕೂಡ ತೊಳೆಯದೆ ಅಜ್ಜಿಯ ಮಾತು ನೆರವೇರಿಸುವಂತೆ ಅಜ್ಜಿ ಕೊಟ್ಟ ಸಿಲ್ವಾರ್ ತಟ್ಟೆಯ ಮುಂದೆ ಕೂತಿದ್ದೆವು. ಅಜ್ಜಿ ಅದೇನು ಬಡಿಸಿದರೊ ನಾವೇನು ತಿಂದೆವೊ ಒಂದು ನಮಗಂತು ಗೊತ್ತಿಲ್ಲ. ಹಸಿದಿದ್ದ ಹೊಟ್ಟೆ ತುಂಬಿಸುವುದೊಂದೇ ನಮಗಾಗ ಗೊತ್ತಿತ್ತು. ಊಟವೆಲ್ಲ ಸಾಂಗೋಪಂಗವಾಗಿ ನಡೆದ ಮೇಲೆ ನಮಗೆ ಹೋಗಿದ್ದ ಜೀವ ಮತ್ತೆ ಬಂದಂತಾಗಿ ಕೆಲವೇ ನಿಮಿಷಗಳ ಹಿಂದಿದ್ದ ಕೋಪತಾಪವೆಲ್ಲ ಕರಗಿ ನೀರಾಗಿಹೋಗಿತ್ತು. ಮನಸು ಸಮಾಧಾನದ ಅಲೆಯಲ್ಲಿ ತೇಲಾಡುವಂತಾಗುತ್ತಿರಲು ಅಜ್ಜಿ ಕೂಡ ಎರಡು ತುತ್ತು ಊಟ ಮುಗಿಸಿ ನಮ್ಮ ಮುಂದೆ ಬಂದು ಒಂದು ಮೂಲೆಯಲ್ಲಿ ಕುಳಿತು,
     
"ದಾರಿತಪ್ಪಿ ಬಂದ ಮಕ್ಳೇ ಅದೇನು ಹೇಳಿ ನಿಮ್ಮ ಕಥ್ಯಾ! ನೀವ್ಯಾವಾಗಾದ್ರಿ ದಾರಿತಪ್ಪ್ದೋರು ಹಾಂ?" ಅಜ್ಜಿ ಮಾತಾಡೊ ಮೂಡಿಗೆ ಬಿದ್ದಂತೆ ಕಾಣಿಸಿತು. ಅಜ್ಜಿಗೂ ಕೂಡ ಮಾತಾಡಲು ಯಾರು ಇಲ್ಲವೆಂದು ಅನ್ನಿಸಿ ನಾವು ಮಾತಾಡಲು ಶುರುವಿಟ್ಟೆವು.
     
" ಅಜ್ಜೀ, ನಾವು ದಾರಿತಪ್ಪಿದ ಮಕ್ಕಳಲ್ಲ. ನಮಗೂ ಅಪ್ಪ ಅಮ್ಮ ಎಲ್ಲಾ ಇದ್ದಾರೆ. ನಾವು ಬಲ್ಲಾಳಪುರದಿಂದ ನಮ್ಮ ಮತ್ತೊಬ್ಬ ಸ್ನೇಹಿತನ ಆಹ್ವಾನದ ಮೇರೆಗೆ ಅವನ ಹಳ್ಳಿಯಲ್ಲಿ ನಡೆಯುತ್ತಿರೊ ಜಾತ್ರೆಗೆ ಬಂದಿದ್ದೆವು. ಎಲ್ಲಾ ಚೆನ್ನಾಗಿತ್ತು ಆದರೆ ಕೊನೆಗೆ ಏನೋ ಮನಸ್ತಾಪವಾಗಿ ಅಲ್ಲಿಂದ ಹೇಗಿದ್ದೆವೋ ಹಾಗೆ ವಾಪಾಸ್ ಊರಿಗ್ ಹೊರಟು ಬಂದೆವು. ಅಲ್ಲಿ ಜಾತ್ರೆಯಾದ್ದರಿಂದ ಯಾರೂ ಅಂಗಡಿಯಾಗಲಿ ಹೋಟೆಲ್ ಆಗಲಿ ತೆರೆದಿರಲಿಲ್ಲ.  ಬೆಳಗ್ಗೆ ತಿಂಡಿ ತಿಂದು ಮನೆಬಿಟ್ಟಿದ್ದಷ್ಟೆ, ಅದಾದಮೇಲೆ ನೀವೀಗ ಬಡಿಸಿದ್ದೇ.  ಊರಿಗೆ ಹೋಗೋಣವೆಂದರೆ ಹಾಳಾದ್ದು ಬಸ್ಸೂ ಇಲ್ಲ. ನಡೆದು ನಡೆದು ಕೊನೆಗೆ ನಾವಿಲ್ಲಿ ಬಂದು ಸೇರಿದೆವು" ಎಂದು ಒಂದೇ ಉಸಿರಿನಲ್ಲಿ ನಡೆದದ್ದೆಲ್ಲವನ್ನು ಹೇಳಿದೆವು.
     
" ಅದ್ಸರಿ ಯಾವ್ ಅಳ್ಳೀಗ್ ನೀವ್ ಬಂದಿದ್ದು?"
     
" ಇಲ್ಲೇ ಪಕ್ಕದಲ್ಲಿರೊ ರಾಯರಗುಟ್ಟೆಗೆ"
     
" ಲೋ ಮಕ್ಳಾ! ರಾಯರಗುಟ್ಟೆಗು ನೀವಿಗ ಇಲ್ಲಿ ಬಂದಿರೋದ್ಕು ಎಷ್ಟು ದೂರ ಐತೆ ಗೊತ್ತಾ?"
     
" ಎಷ್ಟು?"
     
" ಅನ್ನೆಲ್ಡು ಮೈಲು ಕಣ್ರಪ್ಪ"!
     
" ಏನು ಹನ್ನೆರೆಡು ಮೈಲೀನಾ??!!"
     
" ಊಂ ಕಣ್ರುಲಾ! ನಿಮ್ಮ್ ಮಾರೆ ನೋಡ್ಕ್ಯಂಡೇ ಅನ್ಕೊಂಡೇ ಇವ್ರ್ಯಾರೋ ಬೋದೂರ್ದಿಂದ ಬಂದವ್ರಂತ. ಅದ್ಕೇ ನೀವಾಗ್ಲೆ ಏನ್ ಕೇಳುದ್ರು ನಾನೇನು ಏಳ್ದಂಗ್ ಸುಮ್ಕಿರದು, ಪಾಪ ಮೊದ್ಲೇ ಸುಸ್ತಾಗಿರ್ತೀರ ನಾನ್ಯಾಕೆ ಮಾತ್ಗೆ ಮಾತು ಬೆಳ್ಸೀ ನಿಮ್ಗಿನ್ನೂ ಸುಸ್ತ್ ಮಾಡೊದೂಂತ ಸುಮ್ನಿದ್ದೆ ಕಣ್ರಪ್ಪೊ"
     
ಹಾಗಿದ್ದರೆ ನಾವು ಹನ್ನೆರೆಡು ಮೈಲಿ ನಡೆದುಬಂದಿದ್ದೀವಾ? ನಡೆದರೆಲ್ಲಿ ಸೊಂಟ ಬೀಳುವುದೊ ಎಂಬ ನಾವು ಇಷ್ಟು ದೂರ ನಡೆದುಬರಲು ಹೇಗೆ ಸಾಧ್ಯವಾಯಿತು? ಚಿಂತೆಗೆ ಬಿದ್ದೆವು.
     
ಅಜ್ಜಿ ಕಾಲಿನ ಬಳಿ ಸಣ್ಣದೊಂದು ಕರಿಸೀಮೆ ತನ್ನ ಪಾಲಿಗೆ ಸಂದ ಆ ಹೊತ್ತಿನ ಚುಟುಕು ಬುತ್ತಿಯನ್ನು ಹೆಗಲಮೇಲೊತ್ತುಕೊಂಡು ಸಾಗುತ್ತಿತ್ತು. ಇದನ್ನು ಅಜ್ಜಿ ಬಹಳ ಕೂತೂಹಲದಿಂದ ನೋಡುವುದು ನಮ್ಮ ಗಮನಕ್ಕೆ ಬಂದು, "ಅದೇನಜ್ಜಿ ಆ ಸೀಮೆಯನ್ನು ಹಾಗೆ ದಿಟ್ಟಿಸುತ್ತಿದ್ದೀರಲ್ಲ" ಎಂದು ನಾನು ಪ್ರಶ್ನಿಸಿದೆ.
     
ಅಜ್ಜಿ ನಕ್ಕು ಹೇಳಿತು. " ಮಕ್ಳಾ! ಬಹ್ಶ ತನ್ನ್ ಅಳ್ವುಉಳ್ವಿನ ಪ್ರಸ್ನೆ ಬಂದ್ರೆ ಮನ್ಶಾ ಒಬ್ನೇ ಯಾಕೆ, ಇಡೀ ಪ್ರಾಣಿಪಕ್ಷಿಕ್ರಿಮಿಕೀಟ ಸಂಕ್ಲ ಎಲ್ಲ್ವೂ ಓರಾಟ ನಡ್ಸಿಯಾರೂ ತನ್ನ್ ತನ್ನ್ ಪಾಲಿನ ಅನ್ನಾನ ಉಟ್ಟುಸ್ಕೊಂಡ್ ತಿಂತವೆ ತಿಳ್ಕಾ. ಜೀವಯೈವಿದ್ಯೆ ಐತಲ್ಲ? ಅದ್ರಾಗ್ ತನ್ನ್ ಎಜ್ಜೆಗುರ್ತು ಮೂಡ್ದಂಗ್ ತನ್ನ್ ಪಾಡ್ಗದು ತಾನಿರ್ತದೆ. ಸುರುಷ್ಟಿ ಕೊಟ್ಟ ಬಾಳ್ನ ತಾನು ಪೂರ್ಣ ಬಾಳೋದ್ರಿಂದ ಸಾರ್ಥಕಥೆ ಕಡೆ ನಡೀತಾ ಓಗ್ತದೆ. ಅಂಗಾದ್ರೆ, ಮನ್ಶನ್ ಸಾರ್ಥ್ಕತೆ ಎಂಗೇ? ತನ್ನ್ ಜೀವಮಾನ್ದ ಎಜ್ಜೆಗುರ್ತು ಮೂಡ್ಸೋದ್ರಿಂದ್ಲಾ? ಸಾಧ್ನೆ ಸನ್ಮಾನಗ್ಳ ಪಟ್ಟಿತೆಗ್ದು ಪ್ರಚಾರ ಪಡ್ಸಿ ಮುಂದಿನ್ ಪೀಳ್ಗೆಗೆ ಮಂದಟ್ಟು ಮಾಡೋದ್ರಿಂದ್ಲಾ? ಆಸ್ತಿಅಂತಸ್ತು ಜೀವ್ನ ನಡ್ಸೋದ್ರಿಂದ್ಲಾ? ಮಹ್ಲುಕ್ವಾಟೆಕೊತ್ಲಗ್ಳ ಒಡ್ಯರಾಗೋದ್ರಿಂದ್ಲಾ? ತನ್ನ್ ನಂತ್ರಾನೂ ಜನ್ರು ನೆನ್ಯಂಗೆ ಮೈಲ್ಗಲ್ಲೇನಾದ್ರು ನೆಡೋದ್ರಿಂದ್ಲಾ? ಅಡ್ಡ್ ಪಲ್ಲಕ್ಕಿ ಗ್ವುರುಗಳ್ ತರ ಸಿಸ್ಯರ್ನ ಇಟ್ಟ್ಕೊಂಡು ತನ್ನ ತಾನು ಅರ್ಥೈಸೋದ್ರಿಂದ್ಲಾ? ಏಳ್ರಪ್ಪ ಎಂಗೆ ಮನ್ಶನ್ ಸಾರ್ಥಕಥೆ ಆಗೋದು?"
  
ಸಮಯ ಸರಿದು ತೆಗೆದಿಟ್ಟ ತಳ್ಳುಬಾಗಿಲಿನಿಂದ ಬೀಸುತ್ತಿದ್ದ ತಣ್ಣನೆಯ ಗಾಳಿಕೂಡ ಯಾಕೋ ಅಜ್ಜಿ ಕೇಳಿದ ಪ್ರಶ್ನೆಗಳಿಂದ ಬಿಸಿಯಾದಂತೆ ನಮಗನಿಸಿತು. ಯಾವ ಪ್ರಶ್ನೆಗಳಿಗೂ ನಮ್ಮಲ್ಲಿ ಉತ್ತರವಿರಲಿಲ್ಲ ಅಥವಾ ಅಜ್ಜಿ ಎತ್ತಿದ ಆ ಪ್ರಶ್ನೆಗಳಿಗೆ ಉತ್ತರ ಕೊಡುವ ಹಾಗು ಹುಡುಕುವ ಸಾಮರ್ಥ್ಯವಿರಲಿಲ್ಲ. ಈ ಅಜ್ಜಿ ಯಾಕೊ ನಮ್ಮಂತೆ ಸಾಮಾನ್ಯ ಅಂತ ನಮಗನ್ನಿಸಲಿಲ್ಲ.
     
" ಮಕ್ಳಾ ಯಾಕ್ರೋ ಇಂಗ್ ತಿಂದಂಗ್ ಮಾಡ್ಕೊಂಡ್ರಲ್ಲೋ ಮಾರೇನಾ? ಈ ಮುದ್ಕಿ ಇಂಗೇ ಏನೇನೋ ವದುರ್ತದೆ. ಯಾಕಂದ್ರೆ ನಂಗೂ ಯಾರ್ ಕೂಡ ಮಾತಾಡಿಯಾದ್ರು ಸಮಾ ಅಭ್ಯಾಸ್ವಿಲ್ಲ ನೋಡು? ಅದ್ಕೆ!"
     
" ಅಜ್ಜೀ, ನಿಮಗೆ ಅಭ್ಯಾಸವಿಲ್ಲ ಅಂತ ಯಾರು ಹೇಳಿದ್ದು? ನೀವು ನಮಗೆ ಕೇಳಿದ ಪ್ರಶ್ನೆಗಳು ಇಡೀ ಮಾನವಕುಲಕ್ಕೇ ಕೇಳಿದಂತಿತ್ತು" ಅಜ್ಜಿಯ ಮುಖವನ್ನು ನೋಡುತ್ತ ನಾನಂದೆ.
    
"ಅದೇನ್ ಮಾನ್ವಸಂಕುಲಾನೊ ಏನೋ? ಒಬ್ಬ್ರಿಗೊಬ್ರು ಬಡಿದಾಡ್ಕೊಂತವೆ ಕಾಲೆಳಿತವೆ ಮಾಡ್ಬಾರ್ದನ್ನೆಲ್ಲಾ ಮಾಡಿ ಕೊನ್ಗೆ ಏನು ಆಗಿಲ್ಲಾಂತ ಸುಮ್ನಿರ್ತವೆ, ನಂಗಂತು ನೋಡಿನೋಡಿ ಸಾಕಾಗೋಗದ್ಯಪ್ಪ. ಅಸ್ಲು ತನ್ನ್ ಪಾಡ್ಗೆ ತಾನಿರೊದಕ್ಕ್ ಆಗಂಗೇ ಇಲ್ಲ ನೋಡು ಈ ಮನ್ಶಸಂಕ್ಲಕ್ಕೆ. ಎದ್ರುಗಡೆ ಪಿರುತಿ ಮಾತಾಡಿ ಬೆನ್ನ್ ತಿರುಗ್ಸಿದ್ರೆ ಚೂರಿ ಆಕ್ತಾರೆ. ದುರಾಸೆಗ್ ಬಿದ್ದು ಅಪ್ಪ ಅಮ್ಮ ಅಣ್ಣತಂಗಿ ಬಂಧುಬಳ್ಗ ಎಲ್ಲದ್ರಿಂದ ದೂರಾಗಿ ದುಡ್ದಿನ್ ಕುದ್ರೆ ಅತ್ತಿ ಅದ್ರ್ ಮೇಲ್ ಸವಾರಿ ಮಾಡಿ ಕೊನ್ಗೆ ಸಂಬಂಧಗ್ಳು ಅರ್ಥ್ವಾಗಿ ಬರೋಷ್ಟ್ರಲ್ಲಿ ಇಡೀ ಜೀವ್ನಾನೆ ಮಗ್ಚಾಕೊಂಡಿರ್ತದೆ. ಮನ್ಶ ಮನ್ಶಂಗ್ ಬೆಲ್ ಕೊಡೋದ್ ಕಲ್ಯೋದ್ ಯಾವಾಗ? ಮನ್ಶ ಮನ್ಶನ್ ಮನ್ಶಂತೆ ನೋಡೋಕ್ ಯಾಕಾಗಲ್ಲ? ತಾನು ತನ್ನ್ ಎಂಡ್ತಿಮಕ್ಕ್ಳಷ್ಟೇ ಅನ್ನೋದ್ನ ಬಿಟ್ಟು ಎಲ್ಲ್ರೂ ಒಂದೇಂತ ನೋಡಕ್ಕಾಗಲ್ವಾ? ಅಲ್ಲ್ರಪ್ಪಾ ಇಡೀ ಭೂಮಂಡ್ಲದೊಳ್ಗೆ ಯಾವ್ದೇ ಪ್ರಾಣಿಪಕ್ಷಿಕ್ರಿಮಿಕೀಟಗ್ಳು ಇದು ನಂದೇ ಅದು ನಿಂದೇ, ನಂಗಿಷ್ಟು ಬರ್ಬೇಕು ನಿಂಗಿಷ್ಟು ಅಂತೇನಾದ್ರು ಗೆರೆ ಗೀಚ್ಕೊಂಡ್ರೆ ಮನ್ಶಾ ಅನ್ನೋ ಪರ್ಲ್ಕೋಕದ್ ಪ್ರಾಣಿ ನಿಂತಾಲ್ಲೇ ಜೀವ ತೆಕ್ಕೋಬೇಕು ತಿಳ್ಕಳಿ. ಅವ್ಕೆಲ್ಲಾ ಇರ್ದಿರೊ ಗೆರೆಗೀಚು, ನಂದು ನಂದೇ ಅನ್ನೋ ತಾರತಮ್ಯ ನಮ್ಗ್ಯಾಕೆ ಏಳಿ? ತಾ ಬೇರೆ ನೀ ಬೇರೇಂತ ಅವೇನಾದ್ರು ಬ್ಯಾದಭಾವ ಮಾಡೋದ್ ಎಲ್ಲಾರ ಕೇಳೀರಾ? ಇಲ್ಲ್ವಲ್ಲ? ಮತ್ತೆ ನಮ್ಗ್ಯಾಕೆ ನೀ ದೊಡ್ಡ್ವ ನೀ ಚಿಕ್ಕ್ವ ಅಂತ ಬೇರಿಂಗ್ಡ? ಯಪ್ಪೋ ಸರ್ಯಾಗ್ ಕೇಳ್ಸ್ಕೊಳಿ, ಅವ್ಕೇನಾದ್ರು ಮಾತು ಬಂದು ಮಾತಾಡಂಗಿದ್ದಿದ್ರೆ ನಾವೆಲ್ಲ ಅದ್ರ್ ಅಡಿಯಾಳಾಗಿರ್ತಿದ್ವಿ. ಇವತ್ತ್ ಇಷ್ಟೆಲ್ಲಾ ಎಗ್ರಾಡೋ ನಾವು ಆಗ ಅವ್ಗುಳ್ ಮುಂದೆ ನೀಚನಿಕೃಷ್ಟವಾಗ್ ಬಾಳ್ ನಡ್ಸಬೇಕಾಕ್ತಿತ್ತು."
     
ಈ ಎಲ್ಲಾ ಮಾತುಗಳಿಂದ ನಮಗೆ ಗೊತ್ತಿಲ್ಲದ ಲೋಕಕ್ಕೆ ಹೋಗಿ ವಾಪಾಸ್ ಬಂದಂತಿತ್ತು ಅಜ್ಜಿ ಮೇಲ್ಗಾಣಿಸಿದಂತೆ ಉಸಿರು ಬಿಗಿಹಿಡಿಯದಂತೆ ಹೇಳಬೇಕಾಗಿದ್ದೆಲ್ಲ ಹೇಳಿ ಮಾತು ನಿಲ್ಲಿಸಿದಾಗ!  ನಮ್ಮಿಬ್ಬರಿಗು ಅಜ್ಜಿಯ ಮಾತುಗಳು ಎಷ್ಟು ಅರ್ಥವಾಯಿತೊ ಇಲ್ಲವೊ ಗೊತ್ತಿಲ್ಲ. ಆದರೆ ನನಗೆ ಮನದಲ್ಲಿ ಎಂದೂ ಕಾಣದ ಜೀವಕಳೆ ಒಸರುವಂತಾಗುತ್ತಿತ್ತು.
     
ಪ್ರಕೃತಿ ಮೈದಳೆದು ನಿಂತು ಸೃಷ್ಟಿ ನಿಯಮದೊಂದಿಗೆ ಕಲೆತಾಗ ನಡೆವ ಸಹಜ ಪ್ರಕ್ರಿಯೆಯೆಂಬಂತೆ ಅಜ್ಜಿ ಮಾತಾಡಿತ್ತು. ಅಜ್ಜಿ ಹೇಳಿದ್ದರಲ್ಲಿ ಲವಲೇಷಮಾತ್ರವೂ ಅಸತ್ಯವಾದುದಾಗಲಿ, ಅಸಂಬದ್ದವಾಗಲಿ ಇರಲಿಲ್ಲ. ಯಾವುದೋ ದೈವವಾಣಿ ನಮ್ಮೆದುರು ತಾನೆ ಮೈದಳೆದು ನಿಂತು ನಮಗಂಟಿದ್ದ ಅಗ್ನಾನದ ತೆರೆಯನ್ನು ಸರಿಸಲು ಸರಿ ರಾತ್ರಿಯಲ್ಲಿ, ಹೆಸರು ಗೊತ್ತಿಲ್ಲದ ಕಾಡಿನಲ್ಲಿ,  ಕಾಲದ ಪರಿವೆಯನರಿತ ಅಜ್ಜಿಯ ರೂಪಾಂತರವಾದಂತೆ ಅನಿಸುತಮೊಬೈಲ್ ಸಿ ನಿಜ, ಇಲ್ಲಿ ಮನುಷ್ಯನು ಮನುಷ್ಯನನ್ನು ನೋಡುವ ರೀತಿ ಬದಲಾಗಬೇಕಿದೆ, ಎಲ್ಲರೂ ನನ್ನವರೆಂದು ಭಾವಿಸುವ ಮನಸುಗಳ ಅವಶ್ಯಕತೆಯಿದೆ, ನಮ್ಮನಮ್ಮ ನಡುವಿನ ಅಂತರ ಕಡಿಮೆಗೊಳಿಸಿ ಭಾವೈಕ್ಯತೆಯ ನದಿ ಹರಿಯಬೇಕಿದೆ, ಸಾಮರಸ್ಯದ ಬದಲಾವಣೆ ಎಂದಿಗಿಂತ ಹೆಚ್ಚಿಗೆ ಬರಬೇಕಿದೆ, ಇಡೀ ಮಾನವಸಂಕುಲ ಪ್ರಾಣಿಪಕ್ಷೀಕ್ರಿಮಿಕೀಟಗಳ ಭಾಂದವ್ಯದ ಬೆಸುಗೆ ಬೆಸೆಯಬೇಕಿದೆ. ಹೌದು ಅಜ್ಜಿ ಹೇಳಿದ್ದು ಎಷ್ಟೊಂದು ನಿಜವಲ್ಲವೆ?
     
ಇದನ್ನೇ ಯೋಚಿಸುತ್ತ ಇದ್ದ ನನಗೆ ಸಮಯ ಸರಿದುದರ ಪರಿವೆಯಿರಲಿಲ್ಲ. ನಾವು ಎಲ್ಲಿದ್ದೆವೊ ಅಲ್ಲೇ ಮಲಗಿ ನಿದ್ದೆ ಹೋಗಿದ್ದೆವು. ಬೆಳಗಿನ ಜಾವ ಕಣ್ಣು ಬಿಟ್ಟು ನೋಡಿದಾಗ ಸೂರ್ಯನುದಯಿಸುತ್ತಿದ್ದ. ಪ್ರಖರ ಬೆಳಕು ಗುಡಿಸಲೆಲ್ಲಾ ಹರಡುತ್ತಿತ್ತು. ನೋಡಿದರೆ ಪ್ರಾಣಿ ಹೆಸರಿಗೆ ತಕ್ಕಂತೆ ವಿರಾಜಮಾನನಾಗಿ ಮಲಗಿದ್ದಾನೆ, ಅತ್ತಕಡೆ ಅಜ್ಜಿ ಬಸವನ ಹುಳು ತರ ಸುಳಿದಿರುಗಿ ಮುದುಡಿದ್ದಾರೆ. ಅಜ್ಜಿ ತನ್ನಲ್ಲಿದ್ದ ಹರುಕು ಹೊದಿಕೆಯನ್ನು ನಮ್ಮಿಬ್ಬರಿಗೂ ಹೊದಿಸಿ ತಾನು ಒಲೆಯ ಹತ್ತಿರ ಮಲಗಿದೆ. ಬಡತನದಲ್ಲೂ ಶ್ರೀಮಂತಿಕೆ ಮೆರೆದ ಅಜ್ಜಿಯ ನೋಡುತ್ತಿದ್ದೆ , ಅವರು ಸಾಕ್ಷಾತ್ ಮಾನವಕುಲದ ಶ್ರೇಷ್ಟರಂತೆ ಕಾಣುತ್ತಿದ್ದರು. ಬಡತನದಲ್ಲೇ ಅಲ್ಲವೆ ಬ್ರಾತೃತ್ವದ ಮೂಲವಿರುವುದು?
     
ಅಜ್ಜಿಗೆ ಏನು ಹೇಳಬೇಕೊ ತಿಳಿಯದೆ ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ಇದೆಲ್ಲಾ ಯಾಕೆ ಮಗಾ! ಅಂತು, ನಾನು ಮಾಡಿದ್ದು ನೋಡಿ ಪ್ರಾಣಿಯೂ ಹಾಗೇ ಮಾಡಿದ. ಜೀವಕಳೆ ತುಂಬಿದ ಜೀವಕ್ಕೆ ದುಡ್ಡುಕೊಟ್ಟು ಅವಮಾನಿಸಿದಂತೆನಿಸಿ ಮತ್ತೊಮ್ಮೆ ಅಜ್ಜಿ ನಮಸ್ಕರಿಸಿ ನಾವಿಬ್ಬರು ಅಲ್ಲಿಂದ ಹೊರಬಿದ್ದೆವು.
.........
     
ನನ್ನಲ್ಲಿನ ಜೀವಕಳೆ ನೋಡಿ ನನ್ನ ಗೆಳೆಯರು ಕಾರಣ ಕೇಳಿದಾಗ ನಾನು ಏನನ್ನೂ ಮುಚ್ಚಿಡದೆ ನಡೆದದ್ದನ್ನೆಲ್ಲ ಹೇಳಿದೆ. ಇದನ್ನು ಕೇಳಿದ ನನ್ನ ಗೆಳೆಯರು ನಮಗೂ ಅಜ್ಜಿಯ ದರ್ಶನಭಾಗ್ಯ ಕರುಣಿಸೆಂದರು. ನನಗೆ ವಿಪರೀತ ಕೆಲಸಗಳಿದ್ದುದರಿಂದ ಮುಂದಿನ ಭಾನುವಾರ ಹೋಗೋಣವೆಂದು ಅವರನ್ನೆಲ್ಲ ಒಪ್ಪಿಸಿದೆ.
      
ಅಂದುಕೊಂಡಂತೆ ಭಾನುವಾರ ಬಂತು. ಗೆಳೆಯರೆಲ್ಲ ಅತ್ಯೋತ್ಸಾಹದಿಂದ ಜೊತೆಗೂಡಿ ನಿಂತರು ಅಜ್ಜಿಯ ಕಾಣಹೊರಡಲು. ರಾಯರಗುಟ್ಟೆಗೆ ಹೊರಡುವ ಬಸ್ಸನ್ನೇರಿ ಅದು ಸಿಗುವ ಮೊದಲೇ ಹನ್ನೆರೆಡು ಮೈಲಿ ಹಿಂದಿನ ಸ್ಟಾಪಿನಲ್ಲಿ ನಿಲ್ಲಿಸುವಂತೆ ಕಂಡಕ್ಟರಿಗೆ ಹೇಳಿದ್ದೆವು. ಅದೂ ಇದು ಮಾತಾಡುತ್ತ, ಅಜ್ಜಿಯ ಅಸಮಾನ್ಯತೆಯ ಬಗ್ಗೆ ಚರ್ಚೆಗಳಾಗುತ್ತ ಬಂದಿರಲು ಕಂಡಕ್ಟರ್ ನಾವು ಹೇಳಿದಂತೆ ರಾಯರಗುಟ್ಟೆಯ ಹನ್ನೆರೆಡು ಮೈಲಿ ಹಿಂದೆಯಿಳಿಸಿ ದೂಳೆಬ್ಬಿಸಿಕೊಂಡು ಹೊರಟುಹೋದ.
     
ನನಗೆ ಅಂಗೈಯ್ಯ ಗೆರೆಯಂತೆ ಚೆನ್ನಾಗಿ ನೆನಪಿದೆ. ಯಾಕೆಂದರೆ ಅಜ್ಜಿಯ ಗುಡಿಸಲಿಂದ ಹೊರಬಿದ್ದ ನಾನು ಆಗ ಸುತ್ತಮುತ್ತಲಿದ್ದ ಪರಿಸರವನ್ನು ಚೆನ್ನಾಗಿ ನೋಡಿ ಮನದಟ್ಟು ಮಾಡಿಕೊಂಡಿದ್ದೆ, ಈಗ ನಾವು ಅದೇ ಪರಿಸರದಲ್ಲಿ, ಅದೇ ಅಜ್ಜಿಯ ಗುಡಿಸಲಿದ್ದ ಜಾಗದಲ್ಲಿ ನಿಂತಿದ್ದೀವಿ. ಆದರೆ ಅಜ್ಜಿಯಾಗಲೀ ಗುಡಿಸಲಾಗಲೀ ಕಾಣಿಸುತ್ತಿಲ್ಲ! ಅರೇ! ಇದೇನಾಶ್ಚರ್ಯ! ಎಷ್ಟು ಮತ್ತೊಮ್ಮೆ ಮಗದೊಮ್ಮೆ ಮನನ ಮಾಡಿಕೊಂಡರೂ ನನ್ನ ನೆನಪಿನಾಳದ ಅನುಭವ ನಾವೀಗ ನಿಂತಿರುವ ಜಾಗವನ್ನಲ್ಲದೆ ಬೇರೆ ಜಾಗವನ್ನು ತೋರಲೊಲ್ಲದು. ನನ್ನ ಗೆಳೆಯರು ನನ್ನನ್ನು ನೋಡಿ ಅಪಹಾಸ್ಯ ಮಾಡತೊಡಗಿದರು, ಯಾವುದೋ ಭಕ್ತಿಪ್ರಧಾನ ಸಿನೆಮಾ ನೋಡಿ ಹೀಗಾಡುತ್ತಿದ್ದೀನಂತೆ. ಸಾಕ್ಷಿ ಹೇಳಿಸೋಣವೆಂದರೆ ಪ್ರಾಣಿ ಇವತ್ತು ನಮ್ಮ ಜೊತೆ ಬಂದಿಲ್ಲ, ಮೊಬೈಲ್ ಸಿಗ್ನಲ್ ಸಿಗುವ ಜಾಗವೇ ಇದು? ನನ್ನ ಸ್ನೇಹಿತರು ನನ್ನನ್ನಾಗಲೇ ತಲೆಕೆಟ್ಟವನಂತೆ ನೋಡಲಾರಂಭಿಸಿ ಆ ಜಾಗದಿಂದ ರಸ್ತೆ ಕಡೆ ಮುಖಮಾಡಿ ನಡೆಯಲಾರಂಭಿಸಿದ್ದರು.
     
ಎಲ್ಲರೂ ಹೊರಟುಹೋದ ಮೇಲೆ ನಾನಿನ್ನು ಅಲ್ಲೇ ನಿಂತಿದ್ದೆ. ದೂರದಲ್ಲೆಲ್ಲೋ ಟ್ರಿಣ್ ಟ್ರಿಣ್ ಸೈಕಲ್ಲಿನ ಬೆಲ್ಲಾಗುವ ಸದ್ದಾಯಿತು. ಅಲ್ಲಿಗೆ ಹೋಗಿ ನೋಡಿದರೆ, ಪಕ್ಕದ ಬದುವಿನ ತಿರುವಲ್ಲೊಬ್ಬ ಸೈಕಲ್ಲ್ ಹೊಡೆಯುತ್ತ ಬರುತ್ತಿದ್ದ. ಅವನನ್ನು ಅಜ್ಜಿಯ ಬಗ್ಗೆ, ಆಕೆಯ ಗುಡಿಸಲ ಬಗ್ಗೆ ಕೇಳಿದ್ದಕ್ಕೆ ನನ್ನನ್ನು ಪೂರ ಮೇಲಿಂದ ಕೆಳಕ್ಕೆ ಒಮ್ಮೆ ನೋಡಿ, ಇಲ್ಲಿ ಸುತ್ತಮುತ್ತ ಹನ್ನೆರೆಡು ಮೈಲಿಯೊಳಗೆ ಯಾವುದೇ ಗುಡಿಸಲಾಗಲಿ, ಅಜ್ಜಿಯಾಗಲಿ ಅಸಲು ನರಪಿಳ್ಳೆಯಾಗಲೀ ವಾಸಮಾಡುತ್ತಿಲ್ಲವೆಂದ. ಅವನು ಹೇಳಿದ್ದನ್ನು ಮತ್ತೆ ಪ್ರಶ್ನಿಸಿ ಕೇಳುವಂತೆಯಿರಲಿಲ್ಲ. ಅವನಿಗೆ ನಮಸ್ಕರಿಸಿದೆ. ಅವನು ಹೊರಡಲು ಅನುವಾದ. ಹೋದಹಾಗೆ ಹೋದವನು ಸ್ವಲ್ಪ ಮುಂದೆ ಹೋಗಿ ಕೇಳಿದ, " ನೀವ್ಯಾರು?"
     
ಹೌದು ನಾನ್ಯಾರು? ನಾನೇಕೆ ಕಾಣದ ದಟ್ಟಡವಿಯಲ್ಲಿ ಹಲವು ಜನುಮಗಳಿಂದ ಪರಿಚಯಳಂತಿರುವ ಅಜ್ಜಿಯನ್ನು ಹುಡುಕುತ್ತಿದ್ದೀನಿ? ಅಸಲಿಗೆ ಪರಿಚಯವಿರುವುದೇ ಆದಲ್ಲಿ ನಾನೇಕೆ ಆಕೆಯನ್ನು ಹುಡುಕಬೇಕು, ಪರಿಚಯವಿದ್ದವರಿಗೆ ಪರಿಚಯಸ್ಥರು ಎಲ್ಲಿರುವರೆಂದು ತಿಳಿಯದೇ? ಹಾಗಾದರೆ ಅಜ್ಜಿ ಎಲ್ಲಿದ್ದಾರೆ? ಈಗಂತೂ ಆ ಜಾಗದಲ್ಲಿಲ್ಲ. ಹುಡುಕುವುದು ಎಲ್ಲಿ? ಮತ್ತೆ ಅದೇ ಜಾಗಕ್ಕೆ ಬಂದು ಅಲ್ಲಿನ ಆ ಕ್ಷಣದ ಗತಿಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಇಲ್ಲಿ ಅಜ್ಜಿಯಿದ್ದದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತೀರ್ಮಾನಿಸುವಷ್ಟರಲ್ಲಿ, ಜೋರಾಗಿ ಬೀಸಿ ಬಂದ ಗಾಳಿ ಆ ದಿನ ಅಜ್ಜಿ ಗುಡಿಸಲಲ್ಲಿ ನಾವಿದ್ದಾಗ ಬೀಸಿದ ಗಾಳಿಯಂತೆಯೇ ಬೀಸಿ ಅದು ನೆನಪಾಗಲು ಅಲ್ಲೇ ಗಾಳಿಯಲ್ಲಿದ್ದ ತರಗೆಲೆಗಳ ಮಧ್ಯೆ ನನ್ಮ ಅಂತಃಶಕ್ತಿಯನ್ನೇ ಅಲ್ಲೋಲ ಕಲ್ಲೋಲಗೊಳಿಸುವಂತೆ ಕಂಡಿದ್ದು ನಾವಂದು ಅಜ್ಜಿಯ ಮನೆ ಮುಂದೆ ಮೊದಲು ನೋಡಿ ಇದೊಂದು ಗುಡಿಸಲೆಂದು ಗುರುತಿಸಿ ಸಹಾಯ ಮಾಡಿದ್ದ ಅದೇ ದೊಂದಿ!
     
ನನಗಷ್ಟು ಸಾಕಿತ್ತು ಅಜ್ಜಿವ ಇರುವಿಕೆಯನ್ನು ಬಿಂಬಿಸಲು! ಇದಕ್ಕಿಂತ ಸಾಕ್ಷಿ ನನಗೆ ನನ್ನ ಇಡೀ ಜೀವಮಾನ ಹುಡುಕಿದರೂ ಸಿಗುತ್ತಿರಲಿಲ್ಲ. ಅಲ್ಲೇ ತರಗೆಲೆಗಳ ಮಧ್ಯೆ ಬಿದ್ದಿದ್ದ ಆ  ದೊಂದಿಯನ್ನು ಎತ್ತಿಕೊಂಡು ಅಪ್ಯಾಯಮಾನ ತುಂಬಿದ ಕಂಗಳಲ್ಲಿ  ನೋಡಿದೆ. ನನಗೆ ಹಿಂದೆ ನಡೆದದ್ದೆಲ್ಲವು ಈಗ ಕಣ್ಣ್ಮುಂದೆ ನಡೆದಂತಿತ್ತು. ಅದರ ಮಧುರ ಸ್ಮೃತಿಪಲ್ಲಟದಲ್ಲಿ ಮುಳುಗಿದ್ದ ನನ್ನನ್ನು ಹಿಂದಕ್ಕೆ ಎಳೆತಂದಿದ್ದು ನನ್ನ ಸ್ನೇಹಿತರ ಅಶರೀರ ವಾಣಿ, ಅವರು ನನ್ನನ್ನು ಕೂಗಿ ಕರೆಯುತ್ತಿದ್ದರು "ಬಾರೋ ಟೈಮಾಯ್ತು" ಅಂತ.
     
ಅರಿವಿನ ಗುರುವಾದ ಅಜ್ಜಿಗೆ ಮನದಲ್ಲೇ ನಮಸ್ಕರಿಸಿ ಅಲ್ಲಿಂದ ಹೊರಬಿದ್ದೆ. ರಸ್ತೆಯ ಹತ್ತತ್ತಿರ ಬರುತ್ತಿದ್ದವನು ಒಮ್ಮೆ ಹಿಂದೆ ತಿರುಗಿ ನೋಡಿದೆ, ಅಲ್ಲಿ ಅಜ್ಜಿ ನಿಂತು ನನ್ನತ್ತ ಕೈಬೀಸುವುದು ಕಾಣಿಸಿತು. ನಾನು ಮನೆ ದಾರಿ ಹಿಡಿದೆ.
   
                                                                   - ಮುಗಿಯಿತು -

ಮೋಹನ್ ಕುಮಾರ್ ಡಿ ಎನ್
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665
೨೦೧೫ರ ದೀಪಾವಳಿ ಕಥಾಸ್ಪರ್ಧೆಗೆ ಬರೆದ ಕಥೆಯಿದು. ಬರೆದದ್ದು "ವಿಜಯವಾಣಿ" ಪತ್ರಿಕೆಗೆ. ಬಹುಮಾನ ಬರುತ್ತದೆ ಎನ್ನುವ ನಂಬಿಕೆಯೇನೂ ನನ್ನಲ್ಲಿರಲಿಲ್ಲ. ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನು ಅಲ್ಲವೇ? ಬರೆದು ಕಳುಹಿಸಿದ್ದಾದ ಮೇಲೆ ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಸಾಧ್ಯವಾಗಿರಲಿಲ್ಲ, ಕಾರಣ, ಎಷ್ಟು ಹುಡುಕಿದರೂ ನನ್ನ ಮಿಂಚಂಚೆಯಲ್ಲಿದ್ದುದು ಸಿಗಲೇ ಇಲ್ಲ. ಕಳುಹಿಸಿದ ನಂತರ ಅದರ ಪ್ರತಿಯೊಂದನ್ನು ನನ್ನ ಬಳಿ ಇಟ್ಟುಕೊಂಡಿದ್ದಿದ್ದರೆ ಈಗಾಗಲೇ ಇಲ್ಲಿ ಹಾಕುತ್ತಿದ್ದೆ. ಈವತ್ತು ಏನನ್ನೋ ಹುಡುಕುತ್ತಿರುವಾಗ ಅಕಸ್ಮಾತ್ತಾಗಿ ಇದು ನನ್ನ ಕಣ್ಣಿಗೆ ಬಿತ್ತು . ನೋಡಿ ಕೆಳಗಡೆ ಕಥೆಯಿದೆ ಹಾಕಿರುವೆ, ಓದಿಕೊಳ್ಳಿ. 

ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ 2015

"ಕಪ್ಪುಮಚ್ಚೆ ಮತ್ತು ಪ್ರಾಣ"

ನನ್ನ ನಾಲಗೆಯಲ್ಲಿ ಕರಿಚುಕ್ಕಿಯಂತವು ಸುಮಾರಿದೆ. ಅದನ್ನು ನೋಡಿ ಅಂದು ಅಮ್ಮ ಹೇಳಿದ್ದಳು, " ಮಗಾ! ಇದು ಅಂತಿಂಥ ಚುಕ್ಕಿಗಳಲ್ವೋ, ಮಚ್ಚೆ! ನಾಗರಮಚ್ಚೆ! ಈ ಥರ ನಾಲಗೆ ಮೇಲೆ ಮಚ್ಚೆ ಬರೋದು ಅಪರೂಪದಲ್ಲಪರೂಪ. ನಿನಗೆ ಅದು ಬಂದಿದೆಯೆಂದರೆ, ಖಂಡಿತ ನಿನಗೆ ಒಳ್ಳೇದಾಗ್ತದೆ. ನೀನ್ಯಾವ ಮಾತಾಡಿದ್ರು ಇಂದಲ್ಲ ನಾಳೆ ನೆರವೇರ್ತದೆ , ನೆರವೇರಲೇಬೇಕು. ಇದು ನಿನ್ನ ಭವಿಷ್ಯ ಕಣೋ ಮಗಾ" ಅಂತ.

ಒಂದು ದಿನ ನಾನು ಮನೆಯ ಅಂಗಳದಲ್ಲಿ ಆಡುತ್ತಿರಬೇಕಾದರೆ ಎದುರು ಮನೆಯ ಸೋಮ ಬಂದು ನಮ್ಮಜೊತೆ ಸೇರಿಕೊಂಡ. ಅವನಿಗೆ ಮೊದಲಿಂದಲೂ ನಾನು, ನನ್ನದೆ ಮಾತು ಎಂಬ ಹಟವಿತ್ತು. ಇದಕ್ಕೂ ಮುನ್ನ ನಾವು ಗೆಳೆಯರೆಲ್ಲರು ಸೇರಿ ಅವನನ್ನು ನಮ್ಮ ಗುಂಪಿನಿಂದ ಹೊರಹಾಕಿದ್ವಿ. ನಾವು ಎಷ್ಟೇ ಸಾರಿ ಹೊರಹಾಕಿದ್ರು ಅವನು ಮತ್ತೆ ಮತ್ತೆ ಬಂದು ಅತ್ತಂತೆ ನಟಿಸಿ ನನ್ನ ಮನಗೆದ್ದುಬಿಡುತ್ತಿದ್ದ. ಆಗಿನ ಕಾಲಕ್ಕೆ ನಮ್ಮ ಗುಂಪಿಗೆ ನಾನೇ ರಾಜನಾದ್ದರಿಂದ ನನ್ನನ್ನು ಗೆದ್ದರೆ, ಮನವೊಲಿಸಿದರೆ ಮತ್ತೆ ಗುಂಪಿನಲ್ಲಿ ಸ್ಥಾನ ಪಡೆಯಬಹುಂದೆಂದು ಅವನ ಸುಲಭ ಲೆಕ್ಕಾಚಾರ. ನಾನೋ ಕಣ್ಣೀರಿಗೆ ಬೇಗನೆ ಕರಗುವ ಹೆಣ್ಣಪ್ಪಿ. ಅವನು ಬಂದು ನನ್ನತ್ತ ಕಣ್ಣೀರು ಸುರಿಸಿದರೆ ಸಾಕು ಸೋಮನನ್ನು ಗುಂಪಿಗೆ ಸೇರಿಸಿಕೊಳ್ಳುತ್ತಿದ್ದೆ. ಹೇಳಬೇಕೆಂದರೆ ಉಳಿದ ನಮ್ಮ ತಂಡದ ಸದಸ್ಯರಿಗೆ ಇದು ಹಿಡಿಸುತ್ತಿರಲಿಲ್ಲ. ಮೇಲಾಗಿ ಅವನನ್ನು ಕಂಡರೆ ಇತರರು ದುಷ್ಟ ದುರುಳ ಎಂದು ಭಾವಿಸಿದ್ದರು. ಅವನು ಮೇಲ್ನೋಟಕ್ಕೆ ಹಾಗೇ ಕಂಡರು ನಾನು ಮಾತ್ರ ಅವನನ್ನು ಹಾಗೆ ನೋಡಲು ಸಾಧ್ಯವೇ ಆಗಲಿಲ್ಲ. ಆದರೆ ಒಂದು ದಿನ ಆ ಪ್ರಸಂಗ ನನ್ನ ಮನಸ್ಸು ತನ್ನ ನಿರ್ಧಾರವನ್ನು ಬದಲಿಸಿ ಸೋಮ ಒಬ್ಬ ದುಷ್ಟದುರುಳ ಎನ್ನುವಂತೆ ಮಾಡಿದ ಘಟನೆಯೊಂದು ನಡೆಯಿತು. ಅವತ್ತು ಸೋಮ ನನ್ನನ್ನು ಆಟಕ್ಕೆ ಸೇರಿಸ್ಕೊಳ್ರೋ ಅಂತ ಬಂದ. ನಾನು ಸುಮ್ಮನೆ ತಂಡದ ಉಳಿದ ಗೆಳೆಯರ ಬಳಿ ನೋಡಿದೆ. ಅವರಿಗಿಷ್ಟವಿಲ್ಲದಿದ್ದರು ನನ್ನ ಮಾತಿಗೆ ಬೆಲೆಕೊಟ್ಟು ಸೇರಿಸಿಕೊಂಡರು.

ಅವತ್ತು ನಾವು ಆಡುತ್ತಿದ್ದುದು ಕಳ್ಳಪೋಲಿಸ್ ಆಟ. ಅದರಲ್ಲಿ ನಾನು ಸೇರಿ ನಾಲ್ಕು ಜನ ಕಳ್ಳರು ಮತ್ತು ನಮ್ಮನ್ನೆಲ್ಲ ಹಿಡಿಯುವ ಒಬ್ಬೇ ಒಬ್ಬ ಪೋಲಿಸ್ ಆಗಿ ಸೋಮನು ಎಂದು ನಿಶ್ಚಯವಾಯ್ತು. ಆಟ ಮುಂದುವರೆಯಿತು. ಕಳ್ಳರೆಲ್ಲ ಒಬ್ಬೊಬ್ಬರಾಗಿ ಸಿಗುತ್ತಾ ಬಂದಿದ್ದರು, ನಾನು ಮಾತ್ರ ಸಿಕ್ಕಿರಲಿಲ್ಲ. ಸರಿ ಅವನು ನನ್ನ ಬೆನ್ನಟ್ಟಿದ. ಅವನಿಗಿಂತಲು ಸಣ್ಣಗೆ ಚೂಟಿಯಾಗಿದ್ದ ನಾನು ನಮ್ಮ ಮನೆ ಮುಂದಿನ ಅಂಗಳವನ್ನೆಲ್ಲ ಅವನಿಗೆ ಸುತ್ತಿಸಿ ಗಿರಗಿಟ್ಲೆಯಾಡಿಸಿದ್ದೆ. ಅವನು ಸಾಕಾಗಿದ್ದ, ಜೊತೆಗೆ ನಾನೂ. ಅವನು ನನ್ನಿಂದ ದೂರ ನಿಂತುಕೊಂಡೇ ಏದುಸಿರೆಳೆದುಕೊಳ್ಳತೊಡಗಿದ. ಇದನ್ನು ಕಂಡ ನಾನು ಸೋಮ ವಿರಮಿಸಿಕೊಳ್ಳುತ್ತಿರಬೇಕು ಅಂತ ಅಂದುಕೊಂಡು ಪಕ್ಕದಲ್ಲಿದ್ದ ಬೇಲಿಯ ಮೇಲೆ ಒಂದ ಮಾಡಲು ಮುಂದಾದೆನು. ಅದವನಿಗೆ ಕಂತ್ರಿ ಬುದ್ದಿ ತೋರಿಸುವ ಸಮಯಯಾಗಿತ್ತು. ಮೆಲ್ಲಗೆ ಹೆಜ್ಜೆ ಸಪ್ಪಳವಾಗದಂತೆ ಓಡಿಬಂದು ನಾನು ಹತ್ತಿರಾಗುತ್ತಲೇ ತನ್ನ ಓಟ ಹೆಚ್ಚಿಸಿಕೊಂಡು ನನ್ನ ಮೇಲೆ ಬಿದ್ದ ನೋಡಿ! ನನಗೇನಾಗಿದೆಯೆಂದು ತಿಳಿವ ಮುನ್ನ ಹಾಕಿದ್ದ ಬೇಲಿ ಮೇಲೆ ಮುರಕೊಂಡು ಬಿದ್ದು ಪಕ್ಕದ ರಸ್ತೆಗೆ ಹಾರಿ ಬಿದ್ದಿದ್ದೆ. ನನ್ನ ಮೈಕೈಯಲ್ಲೆಲ್ಲ ರಕ್ತ, ತರಚು ಗಾಯವಾಗಿದ್ದು ತಕ್ಷಣ ನನ್ನ ಗಮನಕ್ಕೆ ಬರತೊಡಗಿತು. ಅದನ್ನು ಕಂಡ ನನ್ನ ಸ್ನೇಹಿತರು ಅಲ್ಲಿಂದ ನಮಗೂ ಇದೇ ಗತಿಯಾದರೇನೆಂದು ಕಾಲ್ಕಿತ್ತರು. ನಾನಿನ್ನು ಅಲ್ಲೆ ರಸ್ತೆ ಮೇಲೆ ಬಿದ್ದಿದ್ದೆ. ಬಹುಶಃ ಅಮ್ಮ ಒಳಗಿದ್ದುದರಿಂದ ಆಕೆಗಿದು ತಿಳಿಯಲಿಲ್ಲ ಅನ್ಸುತ್ತೆ. ನಾನಿದ್ದ ಸ್ಥಿತಿ ನೋಡಿ ಕನಿಕರಿಸಿ ಬಂದು ಸಹಾಯ ಮಾಡದೆ, ಮಾಡಿದ ತಪ್ಪಿಗೆ ಬೇಸರಿಸಿಕೊಳ್ಳದೆ ಅವನು ಶುರು ಮಾಡಿದ ನೋಡಿ ಆ ಕೇಕೆ! ಅದೆಲ್ಲಿತ್ತೋ ಆ ರಾಕ್ಷಸ ನಗುವಿನ ಕೇಕೆ! ನನ್ನತ್ತ ನೋಡಿ ಒಂದೇ ಸಮನೆ ನಗಲು ಶುರು ಮಾಡಿದ. ಆ ನಗು ಹೇಗಿತ್ತೆಂದರೆ ನನ್ನ ಇಡೀ ಇರುವಿಕೆಯನ್ನೇ ಪ್ರಶ್ನಿಸಿ ನೋಡಿ ನಗುವಂತಿತ್ತು. ಮನುಷ್ಯ ಪ್ರಗ್ನೆ ಕಳೆದುಕೊಳ್ಳುವುದು ಬಹುಶಃ ತನ್ನ ಅಸ್ತಿತ್ವಕ್ಕೆ ಮತ್ತು ಜೀವನ ನಡೆಸಲು ಬೇಕಾದ ಮರ್ಯಾದೆ ಕಳೆದುಕೊಂಡಾಗ ಮಾತ್ರ ಅಂತ ನನಗನ್ನಿಸುತ್ತೆ. ಸೋಮನ ಆ ನಗುವನ್ನು ನೋಡಿ ಅದೆಲ್ಲಿತ್ತೋ  ಅತಿ ಉಗ್ರಾತಿಯುಗ್ರ ಕೋಪ, "ನೀನು ಸುಟ್ಟು ಬೂದಿ ಆಗೋಗ!" ಅಂದೆ. ಹಾಗೇಕಂದೆ ಇವತ್ತು ನೆನೆದರೆ ನಿಜಕ್ಕು ಗೊತ್ತಿಲ್ಲ ಅಂತಲೇ ಹೇಳುತ್ತೀನಿ. ಸೋಮನಿಗೆ ಅದೇನು ಅನ್ನಿಸಲಿಲ್ಲವೋ ಏನೊ ಹಿಂದಿರುಗಿ ನೋಡದೆ ಅದೇ ಅಟ್ಟಹಾಸ ಕೇಕೆ ಹಾಕುತ್ತಾ ಅಲ್ಲಿಂದ ಹೊರಟುಹೋದ.

ಇದಾದ ಮಾರನೆ ದಿನ ಬೆಳಗ್ಗೆ ಮನೆಯ ಮುಂದೆ ಜನರು ಜೋರಾಗಿ ಎಂದಿನಂತಲ್ಲದೆ ಮಾತಾಡಿಕೊಂಡು ಹೋಗುತ್ತಿದ್ದುದು ಒಳಗೆ ನೆನ್ನೆಯಾದ ತರಚು ಗಾಯಗಳಿಗೆ ಅಮ್ಮ ಮಾಡಿದ ಇಲಾಜಿನಿಂದ ಮಲಗಿ ವಿರಮಿಸಿಕೊಳ್ಳುತ್ತಿದ್ದ ನನಗೆ ಕೇಳಿಸಿ ಅದೇನೆಂದು ನಿಧಾನವಾಗಿ ಎದ್ದು ಬಂದು ಅಮ್ಮನನ್ನು ಏನೆಂದು ಕೇಳಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಒಕ್ಕಲಿಗೆಂದು ಸೋಮನ ತಂದೆತಾಯಿ ಪಕ್ಕದೂರಿಗೆ ಹೋಗಿದ್ದರಿಂದ ಮನೆಯಲ್ಲಿ ಅಜ್ಜಿಯ ಜೊತೆ  ಇರುವುದು  ಊರವರಿಗೆಲ್ಲ ತಿಳಿದದ್ದೇ ಆಗಿತ್ತು. ನೆನ್ನೆ ನಮ್ಮನೆಯಿಂದ ಹೋದ ಸೋಮ ಅಜ್ಜಿ ಮಾಡಿಟ್ಟ ಅಂಬಲಿ ಕುಡಿದು ತನ್ನ ಪಾಡಿಗೆ ಹೋಗಿ  ಮನೆಯ ಒಳ ವರಾಂಡದಲ್ಲಿ ಮಲಗಿದ್ದನಂತೆ. ಒಂದುಹೊತ್ತಿನಲ್ಲಿ ಅಜ್ಜಿ ಕೂಗುತ್ತಿದ್ದ ಸದ್ದು ಕೇಳಿ ಕಣ್ಣ್ ಬಿಟ್ಟು ನೋಡಿದರೆ ಮನೆಯೆಲ್ಲಿದ್ದ ನಗನಾಣ್ಯ ದೋಚಿದ ನಂತರ  ಕಳ್ಳರು  ಮನೆಗೆಲ್ಲಾ  ಬೆಂಕಿಯಿಟ್ಟಿದ್ದಾರೆ! ಭಾರೀ ನಿದ್ರೆಯಲ್ಲಿದ್ದ ಸೋಮನಿಗೆ ಇದರ ಪರಿವೆಯೇ ಇಲ್ಲದೆ ಬೆಂಕಿ ಬಿದ್ದ ಎಷ್ಟೋ ಹೊತ್ತಾದ ಬಳಿಕ ನೋಡಿದ್ದಾನೆ, ತಪ್ಪಿಸಿಕೊಂಡು ಹೋಗಲೂ ಆಸ್ಪದವಿಲ್ಲದಂತೆ ಬೆಂಕಿ ಮನೆಯೆಲ್ಲಾ ಆವರಿಸಿದೆ! ಸೋಮ ಕೊನೆಗೂ ಅದರಿಂದ ಹೊರಬರಲಾರದೆ ಬೆಂಕಿಯಲ್ಲಿ ಸುಟ್ಟು ಬೂದಿಯಾದ - ನೆನ್ನೆ ನಾನು ಹೇಳಿದ ಮಾತಿನಂತೆ.

ಇದಲ್ಲದೆ ಇನ್ನೊಂದು ಘಟನೆ ನಡೆಯಿತು. ಊರಲ್ಲಿ ಕಳ್ಳಬಟ್ಟಿ ಕಾಯಿಸುತ್ತಿದ್ದ ಜಾನಿ ಅಬಕಾರಿ ದಳದವರು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲುಪಾಲಾಗಿ ಸುಮಾರು ಮೂರು ತಿಂಗಳಾದ ಮೇಲೆ ಬೇಲ್ ಮೇಲೆ ಹೊರಬಂದ. ಜಾನಿಗೆ ಬೇಲ್ ಕೊಟ್ಟು ಹೊರಕರೆತಂದವರು ಯಾರೋ ಆಗಿರದೆ ಸ್ವಂತ ನಮ್ಮ ಚಿಕ್ಕಪ್ಪನೇ ಆಗಿದ್ದರು. ನಮಗೆಲ್ಲ ಆಶ್ಚರ್ಯದ ಜೊತೆ ಅನುಮಾನವು ನನ್ನನ್ನು ಸೇರಿದಂತೆ ಅಪ್ಪನಿಗು ಕಾಣಿಸಲಾರಂಭಿಸಿತು. ಇದನ್ನೇ ಮುಂದಿಟ್ಟುಕೊಂಡು ಚಿಕ್ಕಪ್ಪನ ಜೊತೆ ಮಾತಿಗೆ ಮಾತುಂಟಾಗಿ ಅಪ್ಪ  ಆತನನ್ನು ಮನೆಯಿಂದ ಹೊರಗಟ್ಟಿದರು. ಇದರ ಹಿಂದಿರುವ ಕುಮ್ಮಕ್ಕು ಅಮ್ಮನದೆಂದು ಚಿಕ್ಕಪ್ಪನ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯ್ತು. ಇಲ್ಲದಿದ್ದರೆ ಹುಟ್ಟಿದಾಗಿಂದಲು ಒಂದೇಟು, ಬಿಡಿ, ಒಂದೇ ಒಂದು ಜೋರು ಮಾತಾಡದ ಅಣ್ಣ ಹೀಗೆ ಇದ್ದಕ್ಕಿದ್ದಂತೆ ಮನೆಯಿಂದ ದೂರಾಕಲು ಅತ್ತಿಗೆಯಲ್ಲದೆ ಬೇರ್ಯಾರು ಕಾರಣರಲ್ಲವೆಂದು ತಿಳಿದುಕೊಂಡು ಮನೆಯಿಂದ ಹೊರಹೋಗಬೇಕಾದರೆ ಹೊರಹೋಗೆಂದು ಹೇಳಿದ ಅಪ್ಪನನ್ನು ಬಿಟ್ಟು ಅಮ್ಮನನ್ನ್ಯಾಕೆ ಆತ ದುರುದುರುಗುಟ್ಟಿ ನೋಡುತ್ತಿದ್ದ ಹೇಳಿ? ಆತ ನೋಡಿದ ನೋಟವೇನೊ ಸರಿಯಿರಲಿಲ್ಲವೆಂದು ನನಗನ್ನಿಸಿತು. ಅದೇ ಚಿಂತೆಯಲ್ಲಿ ಆ ರಾತ್ರಿ ಮಲಗಿದೆ, ಆಗ ನನಗೊಂದು ಕನಸು ಬಿತ್ತು.

ಅಲ್ಲಿ ಯಾರೋ ಅಪ್ಪನನ್ನು ಗುಂಪುಗೂಡಿ ಸುತ್ತುವರೆದಿದ್ದರು. ಅಪ್ಪನ ಕಾಲಕೆಳಗೆ ಅಮ್ಮ ಬಿದ್ದು ಅಳುತ್ತಿದ್ದಳು. ಅಲ್ಲಿದ್ದ ಯಾರೋ ಒಬ್ಬ ಅಪ್ಪನ ಕೈಗೆ ಒಂದು ಮಚ್ಚು ಕೊಟ್ಟು ಕಡಿ ಎನ್ನುತ್ತಾನೆ. ಅಪ್ಪ ಹಿಂದುಮುಂದು ನೋಡದೆ ಅಮ್ಮನ ತಲೆಯನ್ನು ಕಡಿದೇಬಿಡುತ್ತಾರೆ, ಒಂದೇ ಏಟಿಗೆ! ಅತ್ತಲಿಂದ ಉರುಳಿಬಂದ ಅಮ್ಮನ ತಲೆ ಅಲ್ಲಿ ನಿಂತು ನೋಡುತ್ತಿದ್ದ ನನ್ನ ಕಾಲ ಬಳಿ ಬಂದು ಬೀಳುತ್ತಲೆ ಆಗ ಕೇಳಿಸುತ್ತದೆ ಒಂದು ವಿಕಟಾಟ್ಟಹಾಸದ ನಗು. ಅಲ್ಲಿ ಚಿಕ್ಕಪ್ಪ ನಿಂತು ನಗುತ್ತಿರುತ್ತಾನೆ. ಆ ನಗುವಿನ ಆರ್ಭಟ ತಡೆಯಲಾರದ ನಾನು ತಲೆಗೆ ರೇಜಿಗೆಯೇರಿ ಅಪ್ಪನ ಕೈಲಿದ್ದ ಮಚ್ಚು ತೆಗೆದುಕೊಂಡು ಅಲ್ಲಿದ್ದ ಎಲ್ಲರನ್ನು ತರಗೆಲೆಗಳಂತೆ ಕೊಚ್ಚಿಬಿಸಾಡುತ್ತೇನೆ, ಅಪ್ಪನನ್ನು ಮೊದಲುಗೊಂಡು. ಈಗ ನನ್ನ ಸುತ್ತ ಯಾರೆಂದರೆ ಯಾರೂ ಇಲ್ಲದ ಶೂನ್ಯ ನಿರ್ಭಾವುಕ ಸ್ಥಿತಿ. ಗಾಳಿಯೂ ಕೂಡ ಸುಳಿಯದ ಸ್ತಬ್ದತೆ. ಉಸಿರೂ ಕೂಡ ಬಿಗಿಹಿಡಿದು ಬರುತ್ತಿದೆಯೇನೊ ಎಂಬ ಭಾವ. ಆಗ ಅಲ್ಲಿದ್ದಕ್ಕಿದ್ದಂತೆ ಯಾರೋ ಎದ್ದು ಬರುವ ಸದ್ದಾಗುತ್ತಿದೆ. ನೋಡಿದರೆ ಅಪ್ಪ ಕಡಿದಿದ್ದ ಅಮ್ಮನ ತಲೆ ಮತ್ತೆ ಆಕೆಯ ಹೆಗಲಮೇಲೇರಿ ಮೊದಲಿನಂತಾಗಿ ಆಕೆ ನನ್ನೆಡೆ ನಡೆದು ಬರುತ್ತಿದ್ದಾಳೆ! ನನಗೆ ಎಲ್ಲಿಲ್ಲದ ಭಯವಾಗತೊಡಗಿತು. ಹತ್ತಿರ ಬಂದು ಆಕೆ " ಮಗಾ!" ಎಂದಳಷ್ಟೇ. ನಾನು ಜೋರಾಗಿ ಕಿರುಚುತ್ತ " ಅಮ್ಮಾ!" ಎಂದೆದ್ದೆ.  ಸುತ್ತಲು ಕವಿದಿರುವ ಕಾವಳದಲ್ಲಿ ಮೈಮರೆತು ನಿದ್ರೆ ಹೋಗುತ್ತಿರುವ ಅಪ್ಪ ಅಮ್ಮ ಅಸ್ಪಷ್ಟವಾಗಿ ಕಂಡರು. ಇದು ಕನಸೆಂದು ನನ್ನ ಅರಿವಿಗೆ ಬರಲು ಅದೆಷ್ಟೋ ಹೊತ್ತಾಯಿತು.

ಇದಾದ ಸುಮಾರು ದಿನಗಳ ನಂತರ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ನಾನು ನಮ್ಮ ಮನೆಯ ಮುಂದೆ ಯಾರೋ ಒಂದಷ್ಟು ಜನ ನಿಂತದ್ದು ಕಾಣಿಸಿತು. ಅದೇನೆಂದು ಬಂದು ನೋಡಿದ ನನಗೆ ಒಂದರೆ ಕ್ಷಣ ಕಾಲ ಸ್ತಂಭೀಭೂತವಾದಂತಾಗಿ ನನ್ನ ಕಣ್ಣುಗಳೆರಡನ್ನು ನಾನೇ ನಂಬದಾದೆ. ಕನಸಲ್ಲಿ ಅಂದು ಕಂಡ ಅದೇ ಮಚ್ಚನ್ನು ಅಮ್ಮ ಹಿಡಿದು ನಿಂತಿದ್ದಾಳೆ ತನ್ನ ಕಾಲ ಬಳಿ ಅಪ್ಪನ ತಲೆಯುರುಳಿಬಂದು ಬಿದ್ದಿದ್ದರು ಅದನ್ನು ಗಮನಿಸದೆ ಮೇಲಕ್ಕೆ ನೋಟ ಮಾಡಿ ತದೇಕಚಿತ್ತದಿಂದ ಶೂನ್ಯವನ್ನು ದಿಟ್ಟಿಸಿ ನೋಡುತ್ತ!! ಅಮ್ಮ ಮಚ್ಚಿನಿಂದ ಅಪ್ಪನ ತಲೆಯೊಡೆದುರುಳಿಸಿದ್ದಳು! ಅದೇ ಕನಸಲ್ಲಿ ಕಂಡಂತೆ ಈಗಲು ನಾನು ಕೂಗಿ ಹೇಳಿದ್ದಿಷ್ಟೇ "ಅಮ್ಮಾ!".
ತಲೆತಿರುಗಿ ಬಂದುಬಿದ್ದಿದ್ದ ನನ್ನನು ಉಪಚರಿಸಿ ಮೇಲೆಬ್ಬಿಸಲಾಗಿ ಕಂಡ ವೃತ್ತಾಂತವೆಂದರೆ ಇದನ್ನು ತಾನೆ ಮಾಡಿದ್ದೆಂದು ಅಮ್ಮನೇ ಒಪ್ಪಿಕೊಂಡ ನಂತರ ಪೋಲೀಸರು ಅಮ್ಮನ ಕೈಗೆ ಕೋಳ ತೊಡಿಸಿ ಎಳೆದೊಯ್ಯುತ್ತಿದ್ದರು.

----------------------------------------------------------------------------------------------------------------------------------------------------

ನನಗೆ ಎಚ್ಚರ ಬರುವಷ್ಟರಲ್ಲಿ ಅಪ್ಪನ ವಿಧಿವಿಧಾನಗಳೆಲ್ಲ ಮುಗಿದು ಎರಡು ದಿನವಾಗಿ ಚಿಕ್ಕಪ್ಪನ ಮನೆಯಲ್ಲಿದ್ದೆ. ನಡೆದದ್ದೆಲ್ಲವನ್ನು ಚಿಕ್ಕಪ್ಪ ಸಾಧ್ಯಂತವಾಗಿ ಹೇಳಿದರು. ಒಮ್ಮೆ ಹಾಗೇ ಅವರನ್ನು ನೋಡಿದೆ, ಯಾಕೋ ಕಣ್ಣಲ್ಲಿ ನೀರಾಡಿ ಭೋರ್ಗರೆದು ಜಲಪಾತದಂತಾಗಿ ಬರಲು ಸಿಕ್ಕ ಅವರ ಹೆಗಲಿಗೆ ತಲೆಯಿಟ್ಟೆ ; ನನ್ನ ಅಪ್ಪನ ಹೆಗಲ ಮೇಲೆಯೇ ತಲೆಯಿಟ್ಟಂತಾಯ್ತು. ಅಂದಿನಿಂದ ಚಿಕ್ಕಪ್ಪನೇ ನನ್ನ ತಂದೆತಾಯಿಗೂ ಮೀರಿದ ಸರ್ವಸ್ವವಾಗಿ ನೋಡಿಕೊಂಡು ಬೆಳೆಸಿ ಓದಿಸಿ ದೊಡ್ಡವನನ್ನಾಗಿ ಮಾಡಿದ್ದಾರೆ, ಜೊತೆಗೆ ಮದುವೆಯನ್ನು. ಕೊನೆವರೆಗೂ ಮದುವೆಯಾಗದೆ ಉಳಿದಿದ್ದ ಅವರು ನನ್ನ ಮಗಳನ್ನೆತ್ತಿ ಎರಡು ವರ್ಷ ಆಡಿಸಿ ಕೊನೆಯುಸಿರೆಳೆದರು. ಅವಳನ್ನು ನೋಡಿದರೆ ಚಿಕ್ಕಪ್ಪನೇ ಕಣ್ಣ್ಮುಂದೆ ಬಂದಂಗಾಗುತ್ತದೆ.
ಬೆಳೆದು ದೊಡ್ಡವನಾದ ನಂತರ ನನ್ನ ನಾಲಗೆ ಮೇಲಿರುವ ಕಪ್ಪುಮಚ್ಚೆ ಕುರಿತು ಬಹಳಷ್ಟು ಸಲ ಯೋಚಿಸಿದ್ದೇನೆ - ಇದೇ ನಿನ್ನ ಭವಿಷ್ಯ, ನೀನೇನು ಹೇಳಿದರು ನಡೆಯುತ್ತೆ , ನಿಜವಾಗುತ್ತೆ ಅಂತ ಅಮ್ಮ ಅದೆಂದೋ ಹೇಳಿದ್ದರ ಬಗ್ಗೆ. ನೆನೆಸಿಕೊಂಡರೆ ಹೌದು ನಿಜವಿರಲೂಬಹುದು ಅನಿಸುತ್ತದೆ, ಮರುಕ್ಷಣವೆ ಇದೆಲ್ಲಾ ನಡೆಯುವಂಥದ್ದಾ ಎಂದೆನಿಸಿ ಸುಮ್ಮನಾಗುತ್ತೇನೆ. ಆದರೆ ನನ್ನ ಜೀವನದಲ್ಲಿ ನಡೆದಿರೋ ಇಲ್ಲಿಯತನಕದ ಎಲ್ಲಾ ವಿದ್ಯಮಾನಗಳಿಗು, ನಾನಿರುವ ಸಂದರ್ಭಕ್ಕೂ ತಾಳೆಹಾಕಿ ನೋಡಿದರೆ, ಅಮ್ಮ ಅಂದು ಹೇಳಿದ್ದು ಬಹುಶಃ ನಿಜವಿರಲೂಬಹುದೆಂದೂ ಹಲವಾರು ಬಾರಿ ಅನ್ನಿಸುವುದುಂಟು. ಇಲ್ಲದಿದ್ದರೆ  ನಾನು " ಅಮ್ಮಾ!" ಎಂದು ಎರಡೆರಡು ಬಾರಿ  ಕೂಗಿದ ಭಾವವು  ಅಪ್ಪ ಅಮ್ಮನ ತಲೆಕಡಿದಾಗ ನನಗಾದ ನೋವಿನಂತೆ, ಅಮ್ಮನೂ ಅಪ್ಪನ ತಲೆಕಡಿದಾಗ ಆದ ನೋವಿಗು ಭಾವವೊಂದೆಯೆಂತೆನಿಸುವಂತೆ ನನಗನ್ನಿಸಿದ್ದು ಸುಳ್ಳಾಗಬೇಕಿತ್ತಲ್ಲವೆ? ಆದರೆ ಹಾಗಾಗಿಲ್ಲ. ಕನಸಲ್ಲಿ ಅಮ್ಮಾ ಎಂದು ಕೂಗಿದಾಗ ಆಕೆಯ ತಲೆಕಡೆದ ಅಪ್ಪ ಸಾಯಲಿ ಅಂತ, ಹಾಗೆ ನಿಜದಲ್ಲಿ ಅಪ್ಪನ ತಲೆಕಡಿದ ಅಮ್ಮ ಸತ್ತೇಹೋಗಲಿ ಅಂತ ಅಂದು ಅನ್ನಿಸಿದ್ದರಲ್ಲಿ ಲವಲೇಷಮಾತ್ರವೂ ಬೇಧವಿಲ್ಲ. ಹೀಗೆ ನನ್ನ ಜೀವನ ಪ್ರಯಾಣದಲ್ಲಿ ಬೇಕ್ಕಾದಷ್ಟು ಸಲ ನನಗೆ ಈ ತರ ಅನುಭವಗಳಾಗಿವೆ. ಅದರಲ್ಲಿ ಇದು ಮುಖ್ಯವಾದುದು.

ಆದರೆ ಒಂದೊಂದು ಸಲ ನನಗೆ ನಾನೇ ವಾದಕ್ಕೆ ಗೊಂದಲಕ್ಕೆ ಬಿದ್ದು , ನಾನು ಹೇಳಿದ್ದರಿಂದ ಸೋಮ ಸತ್ತನೊ ಅಥವ ಕಳ್ಳರಿಟ್ಟ ಬೆಂಕಿಗೆ ಸತ್ತನೊ? ಹೇಳದಿದ್ದರೆ ಅವನು ಸಾಯುತ್ತಿರಲಿಲ್ಲವೆ? ನನ್ನ ನಾಲಗೆಯಲ್ಲಿರುವ ಕಪ್ಪುಮಚ್ಚೆಯಿಂದ ಸತ್ತನೆ? ನಾನು ಹೇಳಿದ್ದೆಲ್ಲ ಭವಿಷ್ಯ ನಡೆಯುವುದರಿಂದ ಸತ್ತನೆ? ಹಾಗಾದರೆ ಅಮ್ಮ ಹೇಳಿದ್ದು ನಿಜವೇ? ನಾಲಗೆಯಲ್ಲಿ ಕಪ್ಪುಮಚ್ಚೆಯಿದ್ದರೆ ನುಡಿದದ್ದೆಲ್ಲಾ ನಿಜವಾಗುತ್ತಾ? ಅಥವ ಅವನಿಗಿದ್ದ ದುಷ್ಟದುರುಳತನದಿಂದ ಸತ್ತನೊ? ಹೀಗೆ ಮುಂದುವರಿಯುವ ವಾದ ಗೊಂದಲುಗಳು ಇನ್ನಷ್ಟು ವ್ಯಾಪಿಸಿ, ಅಕಸ್ಮಾತ್ ಅಪ್ಪನು ಅಮ್ಮನು ಒಬ್ಬರೊಬ್ಬರ ತಲೆಕಡಿಯದೆ ಇದ್ದಿದ್ದರೆ, ಆ ಜಾಗದಲ್ಲಿ ಪಾತ್ರಧಾರಿಗಳು ಬೇರೆಯವರಾಗಿ ಅವರು ಹೀಗೆ ಮಾಡಿದ್ದಿದ್ದರೆ ನನ್ನ ಅಪ್ಪ ಅಮ್ಮ ಇಬ್ಬರೂ ಇಂದು ನನ್ನ ಜೊತೆಯಲ್ಲಿರುತ್ತಿದ್ದರು. ಆದದ್ದು ಬೇರೆಯವರಿಗೆ ತಾನೆ,  ಅಪ್ಪಾ ಅಂತಲೋ ಅಮ್ಮಾ ಅಂತಲೋ ಕೂಗಿಕೊಂಡು ತಪ್ಪು ಮಾಡಿದವರ ಮೇಲೆ ನೀವು ಸತ್ತೇಹೋಗಬೇಕೂಂತ  ಅವರಿಗೆ ಶಪಿಸುತ್ತಿದ್ದೆನಾ? ನನಗು ಅವರಿಗು ಏನು ಸಂಬಂಧ? ಅವರ್ಯಾರೂ ನನ್ನವರಲ್ಲವಲ್ಲ?  ಹಾಗೆ ಬೇರೆಯವರಾಗಿದ್ದರು ಅಥವಾ ನನ್ನ ಅಪ್ಪ ಅಮ್ಮನೇ ಆಗಿದ್ದರೂ ಅವರು ಹಾಗೆ ಮಾಡಲು ಕಾರಣವೇನಿದ್ದವೊ? ಸಮಯ ಸಂದರ್ಭಗಳೇಗೆ ಆಡಿಸಿದ್ದವೊ? ಯಾರ ಕೈಗೊಂಬೆಗಳಾಗಿ ಯಾರ್ಯಾರು ಯಾರನಾಡಿಸುತ್ತಿದ್ದರೊ? ಅಂತಲೂ ಅನ್ನಿಸಿ,  ಮತ್ತೆ ಮನಸು ಗೊಂದಲದ ಗೂಡಾಗಿ, ಯಾರೂ ಯಾರನ್ನಾದರು ಏಕೆ ಕೊಲ್ಲಬೇಕು? ಯಾವ ತಪ್ಪಿಗಾಗಿ ಈ ಶಿಕ್ಷೆ? ಎಂಥದ್ದೇ ತಪ್ಪಾಗಿರಲಿ ಕೊಲ್ಲುವುದಾದರು ಯಾತಕೆ? ಕೊಲ್ಲುವುದರಿಂದ ಅವರಿಗಾದ ಅನ್ಯಾಯವಾಗಲಿ, ಅಥವ ಕೊಲೆಯಾದವ ಮಾಡಿದ ತಪ್ಪಿಗಾಗಲಿ ಇವರು ಕೊಂದು ನ್ಯಾಯ ಒದಗಿಸಿದಂತಾಗುತ್ತದೆಯೆ? ಹಾಗಾದರೆ ಸೋಮನ ಸಾವಿಗಾಗಲಿ, ಅಪ್ಪನ ಸಾವಿಗಾಗಲಿ ನಾನು ಕಾರಣವೇ? ನನ್ನ ಮಾತಿಂದಾದಂಥವೇ? ಕೊನೆಗೆ ಅಮ್ಮ ಜೈಲುಪಾಲಾಗಲೂ ನನ್ನ ಮಾತೇ ಆಕೆಗೆ ಮುಳುವಾಯಿತೆ? ಎಂದೆಲ್ಲಾ ಉತ್ತರವಿಲ್ಲದ ನೂರಾರು ಪ್ರಶ್ನೆಗಳು, ಅಲೌಕಿಕ ಆಲೋಚನೆಗಳು ಲೌಕಿಕ ವಸ್ತುಸ್ಥಿತಿಯಾಗಿ ಬಹಳಷ್ಟು ಕಂಡು ಎಂದರೆ, ಬರಿ ಮಾತಿನಲ್ಲಿ ಮುಗಿಸಿಹೇಳಲಾರಲಾಗದಷ್ಟು ಆಳವಾಗಿ ನನ್ನಲ್ಲಿ ಬೇರೂರಿ ಮನೆಮಾಡಿವೆ. ಯಾರು ಕ್ಷಮಿಸಲಾಗದ ತಪ್ಪು ಯಾರು ಯಾರಿಗೇ ಮಾಡಿದ್ದರು, ಒಬ್ಬರು ಇನ್ನೊಬ್ಬರನ್ನು ಕೊಂದು ಪ್ರಾಣ ತೆಗೆದರೆ ಮನುಷ್ಯತ್ವಕ್ಕೆ ಬೆಲೆಯೆಲ್ಲಿ? ಮಾನವತೆಯ ಮಾತೆಲ್ಲಿ? ಪ್ರಾಣಕ್ಕಿರುವ ಬೆಲೆ ಯಕಶ್ಚಿತ್ ಯಾರ ಕೋಪಕ್ಕೊ, ಸೇಡಿಗೊ, ಜಿದ್ದಿಗೊ, ಹಗೆತನಕ್ಕೊ, ಮೋಸಕ್ಕೊ ಬಲಿಯಾಗುವುದಿದ್ದರೆ ಈ ಪ್ರಾಣವೆಂಬ ಪ್ರಾಣವಾದರು ಏಕೆ ಬೇಕು?  ನನ್ನ ಪ್ರಶ್ನಾ ಸರಣಿ ತುಂಡಾಗದ ಸರಪಳಿಯಂತೆ , ಅದು ಮುಗಿಯುವುದೇ ಇಲ್ಲ.
ಕೊನೆಗೆ ನನಗೆ ಅನ್ನಿಸಿದ್ದಿದು : ಇಲ್ಲಿ ಯಾರನ್ನು ಯಾರೂ ನಿಯಂತ್ರಿಸುವುದಾಗಲಿ, ಮೋಸ ಕೊಲೆಯಂಥ ಪಾತಕಗಳನ್ನೆಸಗುವುದಾಗಲಿ, ಅಷ್ಟೇಕೆ, ಬೆಳೆದು ನಿಂತ ಹುಲುಗಡ್ಡಿಯನ್ನಾದರು ಅಲುಗಾಡಿಸುವುದಾಗಲಿ ಕನಿಷ್ಟ ಕೂಡ ಸಾದ್ಯವಿಲ್ಲ ! ಅದರಪಾಡಿಗದು ಸೃಷ್ಟಿನಿಯಮವೇನಿದೆಯೋ ಅದರಂತೆ ನಡೆಯುತ್ತದೆ. ವಿಶ್ವಮಾನವ ಕವಿವಾಣಿ ನೆನಪಾಗಿ ಹೇಳಿದ್ದು ನಿಜವೆನಿಸುತ್ತದೆ : " ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ..."


----------------------------------------------------------------------------------------------------------------------------------------------------

ಇಲ್ಲಿಗೆ ನನ್ನ ಜೀವನದ ಕೊನೆಯ ಯಾನಕ್ಕೆ ಬಂದು ನಿಂತಿದ್ದೇನೆ. ನನಗೀಗ ಸರಿಯಾಗಿ ಮಾತಾಡಲು ಆಗದುದಕ್ಕೆ ಕಾರಣ ನನ್ನ ಗಂಟಲು. ಗಂಟಲು ಕ್ಯಾನ್ಸರ್ ನನ್ನ ಪೂರ್ಣ ಧನಿಯನ್ನು ನುಂಗಿಹಾಕಿದೆ. ಪಾಪ! ಅದು ಬಂತು ಅಷ್ಟೇ, ತಪ್ಪು ಅದರದೇನು ಇಲ್ಲ .  ಪ್ರಶ್ನೆಗಳು, ಸಂದಿಗ್ದತೆಗಳು ಕೇವಲ ನನ್ನ ಮನದಲ್ಲಷ್ಟೇ ಇರದೆ, ನನ್ನ ಹೆಂಡತಿ ಮಕ್ಕಳು, ಬಂಧುಬಳಗ, ನೆಂಟರಿಷ್ಟರು, ಸ್ನೇಹಿತರು, ಸಹೋದ್ಯೋಗಿಗಳು, ಬೀದಿಬದಿ ವ್ಯಾಪಾರಿ, ಭಿಕ್ಷುಕ, ಮುದುಕ, ಕೊನೆಗೆ ಅಪರಿಚಿತರೂ ಸೇರಿದಂತೆ ಎಲ್ಲರಿಗೂ ಅಖಂಡ ಜೀವನ ಪರ್ಯಂತ  ಮೇಲ್ಗಾಣಿಸಿದ ಪ್ರಶ್ನೆಗಳಿಗೆ ಉತ್ತರ  ಕೇಳಿ..ಕೇಳಿ..ಕೇಳೀ...ನನ್ನ ಗಂಟಲು ನನಗೆ ಕೈಕೊಟ್ಟಿತೆಂದು ನನ್ನ ಅನಿಸಿಕೆ. ಆದರೆ ನನ್ನ ಹೆಂಡತಿ ಮಗ ಬೇರೇನೋ ಕಾರಣ ಹೇಳುತ್ತಿದ್ದಾರೆ. ನನಗಂಟಿದ ಈ ಖಾಯಿಲೆಯಲ್ಲೂ ಈ ಉತ್ತರವಿಲ್ಲದ ಪ್ರಶ್ನೆಗಳು ಸಂದಿಗ್ದತೆಗಳು ನನ್ನ ಜೊತೆಯಾಗಿ ಬರಲು ರೆಡಿಯಾದಂತಿದೆ. ಬರಲಿಬಿಡಿ ನನ್ನ ಸಾವಿನ ಜೊತೆ ಬೇಕಾದರು ಅದನ್ನು ಕರೆದೊಯ್ಯಲು ನಾನು ಸಿದ್ದನಿದ್ದೀನಿ.
        
                                                             
                                                                    - ಮುಗಿಯಿತು -

ಮೋಹನ್ ಕುಮಾರ್ ಡಿ ಎನ್
ನಂ. 21/160, ಹೇಮಾವತಿಪೇಟೆ,
ದೊಡ್ಡಬಳ್ಳಾಪುರ - 561203,
ಬೆಂಗಳೂರು ಗ್ರಾಮಾಂತರ ಜಿಲ್ಲೆ ,
ಕರ್ನಾಟಕ.
ಮೊಬೈಲ್ - 90359 62665

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...