"ಕರಿಮಾಯಿ"
ದೃಶ್ಯ 1..
ಹಳೇ ಬೇರು ಹೊಸ ಚಿಗುರು ಎನ್ನುವ ಮಾತಿದೆ. ಈ ಮಾತು ಎಲ್ಲಿ ಏರಿಳಿತವಾಗದೆ ವೇದ್ಯವಾಗುವುದೋ ಅಲ್ಲಿ ಸುಖ ಶಾಂತಿ ನೆಮ್ಮದಿ ಸಂತೃಪ್ತಿ ಮನೆ ಮಾಡುತ್ತದೆ. ಸುಖಾಸುಮ್ಮನೆ ಜಗಳವಿರುವುದಿಲ್ಲ, ವೈಷಮ್ಯದ ದುರ್ಗಂಧ ಬೀಸುವುದಿಲ್ಲ, ಒಬ್ಬರ ಮೇಲೊಬ್ಬರು ಹಗೆ ದ್ವೇಷ ಸಾಧಿಸುವ ಪರಿಪಾಠವಿರುವುದಿಲ್ಲ, ಒಬ್ಬನನ್ನು ತುಳಿದು ತಾನು ಬದುಕುವ ನೀಚತನವಿರುವುದಿಲ್ಲ, ಇಬ್ಬರ ನಡುವೆ ವಿರೋಧಾಭಾಸ ಇಲ್ಲದಿರುವುದರಿಂದ ಎರಡರ, ಹೊಸದು ಮತ್ತು ಹಳೆಯದು, ನಡುವೆ ಸಮತೋಲನವಿರುತ್ತದೆ. ಅದು ಅಲ್ಲಿನ ಜನರನ್ನು, ಜನರ... ಬದುಕನ್ನು ಸಹನೀಯ ಮಾಡಿಕೊಟ್ಟು, ಆಚಾರ ವಿಚಾರ ಸಂಪ್ರದಾಯವನ್ನು ಮೂದಲಿಸದೆ ಅನುಸರಿಸುತ್ತಾ, ಒಂದಾಗಿ ಬಾಳುತ್ತಾ ಸಮುದಾಯ ಉನ್ನತಿಯೆಡೆ ನಡೆಯುತ್ತದೆ.
ದೃಶ್ಯ 2..
ಬಡತನ, ಅನಕ್ಷರತೆ, ಮುಗ್ದತೆ, ಅಮಾಯಕತೆ, ಅಜ್ಞಾನ..ಇವೆಲ್ಲ ಏನೂ ಕೀಳಲ್ಲ, ಒಬ್ಬನಲ್ಲಿ ಇರಬಾರದೂ ಎಂದೇನಿಲ್ಲ. ಇದೆಲ್ಲವೂ ಇದ್ದು ಸಾಮರಸ್ಯತೆ, ಅನ್ಯೋನ್ಯತೆ, ಸಹಕಾರತೆ, ಒಬ್ಬರನ್ನೊಬ್ಬರು ಅರಿತು ಬಾಳುವಿಕೆ, ಸಹಭಾಗಿತ್ವ ಇದ್ದರೆ ಎಷ್ಟು ಕೀಳುಗುಣಗಳಿದ್ದರೇನು? ಇರಲಿ ಬಿಡಿ. ಇದಕ್ಕಿಂತ ಉತ್ತಮ ಗುಣಗಳು ಇನ್ನ್ಯಾವುವು ಇದ್ದಾವು? ಸಾಕು. ಒಂದು ಸಮುದಾಯದ ಬದುಕನ್ನು ಸಹಜವಾಗಿ ಬರುವ ಕಷ್ಟಗಳು ಅಧೀರರನ್ನಾಗಿಸಿದರೂ ತಮ್ಮಲ್ಲಿರುವ ಉತ್ತಮೋತ್ತಮ ಗುಣದಿಂದ ಬಂದದ್ದನ್ನೆಲ್ಲ ಸಹನೀಯವಾಗಿಸುತ್ತಾರೆ. ಅದು ಕುರುಡು ನಂಬಿಕೆಯಾದರು ಸರಿ. ಸಮಾಜಕದ ಸ್ವಾಸ್ಥ್ಯ ಕೆಡದಂತೆ ತಮ್ಮ ಆಚರಣೆಯನ್ನು, ಸಂಪ್ರದಾಯವನ್ನು, ನಂಬಿಕೆಯನ್ನು ಮೆರೆಸುವುದು ತಪ್ಪಲ್ಲ. ಅದು ತಪ್ಪಾಗಿ ಕಂಡರೆ ನೋಡುವವನ ತಿಳುವಳಿಕೆಯ ಕೊರತೆ ಮತ್ತು ದೋಷವೇ ಹೊರತು ಮತ್ತೇನಲ್ಲ. ಸಂಕೀರ್ಣವಾಗಬೇಕಾದದ್ದು ಕುರುಡು ನಂಬಿಕೆಯನ್ನು ಆರಾಧಿಸುವನದಲ್ಲ, ಅದನ್ನು ನೋಡುವ ವಕ್ರದೃಷ್ಟಿ ಇಟ್ಟು ಅಸಂಕೀರ್ಣತೆಯಿಂದ ಇರುವನು.
ದೃಶ್ಯ 3..
ವಿದ್ಯೆ ಎನ್ನುವುದು ಪ್ರಗತಿಯನ್ನು ಸಾಧಿಸುವ ಸಾಧನ. ವಿದ್ಯೆಯನ್ನು ಪಡೆದು ಅದನ್ನು ಸರಿಯಾದ ದಾರಿಯಲ್ಲಿ ನಡೆದು ಅನುಸರಿಸಿ, ತಾನು ಕಲಿತ ವಿದ್ಯೆಯನ್ನು ಸನ್ಮಾರ್ಗದಲ್ಲಿ ಬಳಸಿಕೊಂಡರೆ ಸ್ವಅಭಿವೃದ್ದಿ ಜೊತೆಗೆ ತನ್ನ ಸುತ್ತಮುತ್ತಲ ಪರಿಸರವೂ ಆರೋಗ್ಯವಾಗಿರುತ್ತದೆ. ಇದಕ್ಕೆ ನಮಗೆ ಹತ್ತುಹಲವು ಉದಾಹರಣೆಗಳು ಸಿಗುತ್ತವೆ. ವಿದ್ಯೆಯನ್ನು ಸರಿಯಾದ ದಾರಿಯಲ್ಲಿ ಬಳಸಿಕೊಂಡು ಉನ್ನತ ಶಿಖರವೇರಿದ ಅನೇಕರು ಇಂದಿಗೂ ನಮ್ಮ ನಡುವೆಯೇ ಇದ್ದಾರೆ. ಕತ್ತಲಿನಿಂದ ಬೆಳಕಿನೆಡೆ, ಅಜ್ಞಾನದಿಂದ ಜ್ಞಾನದೆಡೆ ನಡೆಸುವುದೇ ವಿದ್ಯೆಯ ಲಕ್ಷಣ. ಕಲಿತವರೆಲ್ಲರೂ ಸನ್ಮಾರ್ಗದಲ್ಲಿ ನಡೆಯಲೇಬೇಕೆಂದಿದ್ದರೂ ನಡೆಯಲಾಗುವುದಿಲ್ಲ. ಕಾರಣ ಅನೇಕವಿರಬಹುದು. ಆದರೆ ವಿದ್ಯೆಯು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದಿಲ್ಲ. ವಿದ್ಯೆಯಿಂದ ಆಧುನಿಕತೆ ಮತ್ತು ನಾಗರೀಕತೆ ಬರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅಕಸ್ಮಾತ್ತ್ ವಿದ್ಯೆ ಕಲಿತ ಪ್ರಜ್ಞಾವಂತನೊಬ್ಬ ಮೋಹಕ್ಕೆ ಬಿದ್ದರೆ, ಅಜ್ಞಾನವು ಆತನ ಕಣ್ಣನ್ನು ಮುಚ್ಚಿದ್ದರೆ, ಹಿರಿಕಿರಿಯರೆನ್ನುವ ಭೇಧ ಆತನಿಗಿರದಿದ್ದರೆ, ಕುಹಕ ಕುತಂತ್ರ ತನ್ನ ಎಡಬಲಗಳಾದರೆ ಏನಾಗಬಹುದು? ಆಧುನಿಕತೆ ಮತ್ತು ನಾಗರೀಕತೆ ಹೆಸರಲ್ಲಿ ಕಂಡದ್ದೆಲ್ಲಾ ಹಳಸಿರುವುದೆಂದರೆ ಸರಿಯೇ?
ದೃಶ್ಯ 4..
ಈಗ ಮೇಲೆ ಹೇಳಿದ ಮೂರೂ ದೃಶ್ಯಗಳು ಸಮ್ಮಿಲನವಾಯಿತೆಂದುಕೊಳ್ಳಿ. ಏನಾಗುತ್ತದೆ? ಎಲ್ಲಾ ಸೇರಿ "ಕರಿಮಾಯಿ" ಕಾದಂಬರಿಯಾಗುತ್ತದೆ.! ಹೌದು. ಈ ಮೂರರ ಸಮ್ಮಿಲನವೇ "ಕರಿಮಾಯಿ" ಕಾದಂಬರಿಯ ಕಥಾವಸ್ತು.
ಆ ಹಳ್ಳಿಯಲ್ಲಿ (ಶಿವಾಪುರ) ಅನಾದಿಕಾಲದಿಂದ ಹಿರಿಯರು ಹಾಕಿಕೊಟ್ಟು ನೆಟ್ಟು ಬೆಳೆಸಿದ ಆಚರಣೆಯನ್ನು, ಸಂಪ್ರದಾಯವನ್ನು, ಹಬ್ಬಹರಿದಿನಗಳನ್ನು, ವ್ರತಾಚರಣೆಯನ್ನು ನಂಬುತ್ತಾ, ಊರ ಮಂದಿ ಅದರಲ್ಲೇ ಜೀವಿಸುತ್ತಾ, ಅದನ್ನೇ ತಮ್ಮ ಉಸಿರನ್ನಾಗಿಸಿಕೊಂಡ, ಅದನ್ನೇ ಬದುಕಾಗಿಸಿಕೊಂಡ ಸಮುದಾಯವಿರುತ್ತದೆ. ಹಿಂದಿನ ತಲೆಮಾರಿನವರು ಹಾಕಿಕೊಟ್ಟ ಜೀವನವನ್ನು ಸಾಗಿಸಲು ಬೇಕಾದ ದಿವ್ಯಮಂತ್ರಗಳಾದ ಅನ್ಯೋನ್ಯತೆ ಸಹಕಾರತೆ ಒಬ್ಬರಿಗೊಬ್ಬರು ಸ್ಪಂದಿಸುವಿಕೆಯೆನ್ನುವ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ಸಮುದಾಯದೊಳಗೆ ಅದೇ ಊರಿನಲ್ಲಿ ಹುಟ್ಟಿಬೆಳೆದು ವಿದ್ಯೆ ಕಲಿತವನ ಪ್ರವೇಶವಾಗಿ ಆತ ತನ್ನ ಧೋರಣೆಯನ್ನು ಇವರ ಮೇಲೆ ಏರಿ ಆಧುನಿಕತೆಯ ಮಂತ್ರ ಪಠಿಸಿದಾಗ ಇವರ ಮೇಲೆ ಅದು ಎಂತಹ ಪರಿಣಾಮ ಬೀರಬಹುದು? ನಾಗರೀಕತೆಯ ಹೆಸರಲ್ಲಿ ಅಮಾಯಕರನ್ನು ದಾರಿ ತಪ್ಪಿಸಿದರೆ ಅದನ್ನು ಮಂದಿ ಹೇಗೆ ತಡೆದುಕೊಂಡಾರು? ಅಧಿಕಾರದ ಅಮಲಿನಲ್ಲಿ ಇಡೀ ಸಮುದಾಯವೇ ಸರಿಯಿಲ್ಲ ಎಂದು ಧೋರಣೆ ಮಾಡಿ, ಅನಾವಶ್ಯಕವಾಗಿ ಸುತ್ತ ಪರಿಸರವನ್ನು ಹಾಳುಗೆಡವಿದರೆ ಅದರ ಪರಿಣಾಮ ಮತ್ತು ಪರಿಸ್ಥಿತಿ ಏನಿರಬಹುದು? ಕುತಂತ್ರ ಅರಿಯದ ಮುಗ್ದರ ನಡುವೆ ಕಲಿತವನ ಚೇಲಾವೊಬ್ಬ, ಆ ಚೇಲನ ಸಖಿಯೊಬ್ಬಳು ಸೇರಿಕೊಂಡು ಮಂದಿಯ ಅಮಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಹೇಗೆ ತಮಗೆ ಬೇಕುಬೇಕಾದ ಹಾಗೆ ಅನುಕೂಲಸಿಂಧುತ್ವ ಸೃಷ್ಠಿಸಿಕೊಂಡು, ಅನ್ಯಾಯ ಅಕ್ರಮವನ್ನೇ ತಮ್ಮ ಉಸಿರನ್ನಾಗಿಸಿ ಸುರಿದು ಹೇಗೆ ತಮಗೆ ಬೇಕಾದ ಹಾಗೆ ಪರಿಸ್ಥಿತಿಯನ್ನು ನಿಯಂತ್ರಿಸಿ ಊರನ್ನು ಆಳುತ್ತಾ ಜನರ ಕಣ್ಣಿಗೆ ಮಣ್ಣೆರೆಚುತ್ತಾರೆ ಎಂದರೆ, ಎಲ್ಲವನ್ನು ತಿಳಿದ ಊರ ಹಿರಿಯರು ಕೂಡ ಏನೂ ಮಾಡಲಾಗದ ಆಸಹಾಯಕತೆಯಿಂದಲೇ ಇರುತ್ತಾರೆ. ತಮ್ಮನ್ನು ಕಟ್ಟಿಹಾಕಿರುವುದು, ಏನೂ ಮಾಡಲಾಗದೆ ಸುಮ್ಮನಿರುವುದು ತಮ್ಮ ಕೈಲಾಗದತನದಿಂದಲ್ಲ, ಬದಲಿಗೆ ಊರಿನ ಸ್ವಾಸ್ಥ್ಯ ಹಾಳಾಗದಿರಲಿ ಎನ್ನುವ ಉದ್ದೇಶದಿಂದ, ಹೇಗಾದರೂ ಮಾಡಿ ಹೊಸಚಿಗುರಿನೊಂದಿಗೆ ಸಹಕಾರ ಸ್ಥಾಪಿಸಿ ಸಮುದಾಯವನ್ನು ಮುಂದಿನ ಜನಾಂಗವನ್ನು ಸಮತೋಲಿಸಿ, ಭವಿಷ್ಯವನ್ನು ಮಂದಿಯ ಜೀವನವನ್ನು ಸಮಪ್ರಮಾಣದಲ್ಲಿ ಸಮೀಕರಿಸಬೇಕಿರುವುದರಿಂದ..ಎಂದು ಊರಿನ ಹಿರಿಯರು ಸುಮ್ಮನಿರುತ್ತಾರೆ.
ಮೇಲಾಗಿ ಇಲ್ಲಿ ಎಲ್ಲದಕ್ಕೂ ಎಲ್ಲರಿಗು ಹೊನ್ನಕಳಶವಿಟ್ಟಂತೆ "ಕರಿಮಾಯಿ" ತಾಯಿಯ ಕೃಪಾಶೀರ್ವಾದವಿದೆ. ಆಕೆಯ ನಝರಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಆಕೆ ಈ ಹಳ್ಳಿಯ ಊರ ದೇವತೆ, ಬದುಕಿನ ಭಾಗ್ಯಧಾತೆ. ತಪ್ಪು ಮಾಡಿದವರನ್ನು ಆಕೆ ಬಿಡುವುದಿಲ್ಲ. ಒಳಿತಾಗಲಿ ಕೆಡುಕಾಗಲಿ ಆಕೆಯ ಸಮ್ಮತಿಯಂತೆಯೇ ನಡೆಯುವುದು. ಅತಿವೃಷ್ಟಿಯಾಗಲಿ ಅನಾವೃಷ್ಟಿಯಾಗಲಿ ಆಕೆಯ ಅಣತಿಯ ಮೇರೆಗೇ ಬರುವುದು. ಎಲ್ಲವನ್ನೂ ಎಲ್ಲರನ್ನೂ ಇಡೀ ಸಮಸ್ತವನ್ನು ನಿಭಾಯಿಸಿ ನಿರ್ವಹಿಸುವಳು "ಕರಿಮಾಯಿ" ತಾಯಿ...ಎಂದು ಹೀಗೆ ನಂಬಿಕೊಂಡ ಹಳ್ಳಿ ಮಂದಿಯ ನಡುವೆ ಆಧುನಿಕತೆ, ನಾಗರೀಕತೆ, ನಗರದ ಆಕರ್ಷಣೆ ನಡೆಯುವ ಘರ್ಷಣೆಯೇ "ಕರಿಮಾಯಿ".
ಇದನ್ನು ಕಂಬಾರರು ಕಲ್ಪಿಸಿ ಬರೆದಿದ್ದಾರೆ, ಯಾವುದೋ ಕಾಲ್ಪನಿಕ ಕಥೆಯಿರಬಹುದು ಎನ್ನುವುದಕ್ಕಿಂತ ಇದು ಅವರ ಕಥೆ, ಅವರ ಊರಿನ ಕಥೆ ಎಂದರೆ ಹೆಚ್ಚು ಸೂಕ್ತವಾಗುತ್ತದೆ. ತಾನು ಹುಟ್ಟಿಬೆಳೆದ ಪರಿಸರದ ನಡುವೆ ನಡೆದ, ತನ್ನ ಕಣ್ಣಮುಂದೆ ತಾನು ನೋಡಿದ ಎಲ್ಲದರ ಚಿತ್ರಣವೇ ಈ "ಕರಿಮಾಯಿ". ಇಲ್ಲಿ ಅವರು ಇದ್ದೂ ಇಲ್ಲದಂತೆ, ಇಲ್ಲದಿದ್ದರೂ ಇರುವಂತೆ ನಿರ್ವಾಹಕನ ಪಾತ್ರ ವಹಿಸುತ್ತಾ ಇಡಿ ಕಥೆಯನ್ನು ಹೇಳಿಕೊಂಡು ಹೋಗುತ್ತಾರೆ, ಕಥೆಗಿರುವ ಉಪಕಥೆ ಹೇಳುತ್ತಾರೆ..ಎಲ್ಲವೂ ನಮ್ಮ ಕಣ್ಣ್ಮುಂದೆ ನಡೆಯುವಂತೆ, ಓದುವರು ಬೆರಗಾಗುವಂತೆ, ಹೊಸಲೋಕಕ್ಕೆ ಯಾನ ಕೈಗೊಂಡಂತೆ, ಉತ್ತರ ಕರ್ನಾಟಕದ ಬಿಸಿಲಿನ ಝಳಕ್ಕೆ ತಕ್ಕಂತೆ, ಅಲ್ಲಿನ ಮಣ್ಣಿನ ಗುಣಕ್ಕೆ ಒಪ್ಪುವಂತೆ, ಅಲ್ಲಿನ ಅನೇಕಾನೇಕ ಆಚರಣೆ ಪದ್ದತಿಗೆ ಅಭಾಸವಾಗದಂತೆ, ಅಲ್ಲಿನ ರೊಟ್ಟಿಯ ಮೇಲಿರುವ ಬೆಣ್ಣೆಯಂತೆ, ಕಪ್ಪುಮಣ್ಣಿನಲ್ಲಿ ಬೆಳೆಯುವ ಹಚ್ಚಬಿಳಿ ಹತ್ತಿಯಂತೆ, ಗುಂಪುಗುಂಪಾಗಿ ಸುಳಿದಾಡಿರುವ ಮಲ್ಲಿಗೆ ಬಳ್ಳಿಯಂತೆ "ಕರಿಮಾಯಿ" ಓದುಗನನ್ನು ಮಂತ್ರಮುಗ್ದನನ್ನಾಗಿಸಬಲ್ಲಳು..
ಕಾದಂಬರಿಯಲ್ಲಿ ಹುಳುಕು ಇಲ್ಲವೆಂದಲ್ಲ. ಆದರೆ ಅದು ನಗಣ್ಯ. ಪ್ರತಿ ಕಥೆಕಾದಂಬರಿ ಅಥವಾ ಇನ್ಯಾವುದೇ ರಚನೆಯಿರಲಿ, ಅದರಲ್ಲೊಂದು ಕೊರತೆ ಬರೆದ ಪ್ರತಿಯೊಬ್ಬ ಲೇಖಕನಿಗೂ ಇದೆ ಎಂದು ಅನ್ನಿಸುವುದು ಸಹಜ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಪೂರ್ಣತೆ ಜಡವಾಗುತ್ತದೆ, ಅಪೂರ್ಣತೆ ಪರಿಪೂರ್ಣವಾಗುತ್ತದೆ. ಆದಕಾರಣ ಹುಳುಕನ್ನು ಹೆಕ್ಕಿ ತೋರಿಸುವುದು ನನಗಾಗದ ಕೆಲಸ.
ಇದು ಚಲನಚಿತ್ರವಾಗಿ ಮೂಡಿದ್ದರೂ ರಿಲೀಸ್ ಆಗುವ ಭಾಗ್ಯವಿಲ್ಲ ಎಂದು ಕಂಬಾರರು ಆರಂಭದಲ್ಲಿ ಹೇಳಿದ್ದಾರೆ.
ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್

No comments:
Post a Comment