Tuesday, August 29, 2017

 "ಯೇಗ್ದಾಗೆಲ್ಲಾ ಐತೆ"



ನೀವು ಏನನ್ನು ನಂಬುವಿರಿ? ಕಣ್ಣಿಗೆ ಕಾಣುವುದನ್ನು ನಂಬುವಿರೋ ಅಥವಾ ಕಾಣದ್ದನ್ನು ನಂಬುವಿರೋ? ಅಥವಾ ಇದ್ಯಾವುದೂ ಅಲ್ಲದೇ ಎರಡನ್ನೂ ನಂಬುವಿರೋ? ಭೌತಿಕವಾಗಿ ಕಾಣುವುದನ್ನು ಪ್ರತ್ಯಕ್ಷ ಪ್ರಮಾಣಿಸಿ ನೋಡಿ ನಂಬುವುದು ಒಂದಾದರೆ, ತಮ್ಮ ಪಾರಮಾರ್ಥಿಕ ಅನುಭವಗಳ ಮೂಲಕ ನಮಗಾದ ವಿಸ್ಮಯವನ್ನು ನಂಬುವುದು ಇನ್ನೊಂದು. ಇಲ್ಲಿ ಪ್ರಾತ್ಯಕ್ಷಿಕೆಗಿಂತ ನಮ್ಮ ನಿಲುಕಿಗೆ ಎಟುಕದ ಅವರ್ಣನೀಯ ಅನುಭೂತಿಯೊಂದು ಮುಖ್ಯವಾಗಿರುತ್ತದೆ.


ನಮ್ಮ ನಿಲುವಿಗೆ ನಿಟುಕದ ಸಂಗತಿಗಳ ಕುರಿತು ತಮಗಾದ ಅನುಭವಗಳನ್ನು ಕುರಿತು ವಿವರಿಸ...ುವ ಪುಸ್ತಕದ ಬಗ್ಗೆಯೇ ನಾನೀಗ ಹೇಳಹೊರಟಿರುವುದು. ಇಲ್ಲಿ ನಡೆದ ಯಾವುದೇ ಸಂಗತಿಗಳಿಗೆ ಪುರಾವೆಯಾಗಲೀ ಪ್ರತ್ಯಕ್ಷ ಪ್ರಮಾಣಿಸುವ ಸಾಕ್ಷಿಗಳಾಗಲಿ ದೊರೆಯುವುದಿಲ್ಲ. ಇಲ್ಲಿ ಏನಿದ್ದರೂ ವ್ಯಕ್ತಿಗತ ಅನುಭವಗಳು ಮತ್ತು ನಂಬಿಕೆ ಮಾತ್ರವೇ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನ ನಂಬಿಕೆಯಿರುವರು ಹೌದೆಂದು ನಂಬಬಹುದು ಇಲ್ಲವೇ ಸಾಕ್ಷಿಬೇಕೆನ್ನುವರು ಇದೆಲ್ಲ ಕಟ್ಟುಕಥೆ ಎಂದು ನಂಬದೇ ಇರಬಹುದು. ಎಲ್ಲವೂ ಅವರವರ ತರ್ಕಕ್ಕೆ ಬಿಟ್ಟ ವಿಚಾರ. 

ವಿಜ್ಞಾನ ಎಷ್ಟೇ ಮುಂದುವರಿದರೂ, ತಂತ್ರಜ್ಞಾನ ಎಷ್ಟೇ ಮೇಲ್ಮಟ್ಟಕ್ಕೆ ಪ್ರಗತಿಯಾಗಿದ್ದರೂ ನಮ್ಮ ನಿಲುಕಿಗೆ ಎಟುಕದ ಹಲವು ಸಂಗತಿಗಳಿರುವುದು ಸತ್ಯ ತಾನೇ? ಆ ಎಟುಕದ ಹಲವು ಸಂಗತಿಗಳೇ ಈ ಅತೀತ ಅಥವಾ ಪ್ರಾತ್ಯಕ್ಷಿಕೆ ಒದಗಿಸಲಾಗದ ಸಂಗತಿಗಳೇಕಾಗಿರಬಾರದು? ಹೀಗೊಂದು ಸಾಲನ್ನು ಪುಸ್ತಕದ ಆರಂಭದಲ್ಲೇ ಹೇಳಿದ್ದಾರೆ. 

ಇದು ಶಾಸ್ತ್ರಿಗಳಿಗೆ, ಆ ಪರಿಸರದಲ್ಲಿದ್ದವರಿಗೆ ಮತ್ತು ಅವರ ಸಮಕಾಲೀನರುಗಳಿಗೆ ಆದ ಅನುಭವಗಳ ಕುರಿತಾದದ್ದು. ಮತ್ತು ಅದೆಲ್ಲ ಪವಾಡ ಮಾಡಿದ್ದು ಆ ಸ್ವಾಮಿಗಳು. ಈಗಿನ ಮುಂದುವರಿದ ಕಾಲಮಾನಕ್ಕೆ ಒಗ್ಗಿಕೊಳ್ಳಲಾರದ, ಅರಗಿಸಿಕೊಳ್ಳಲಾಗದ ಹಲವು ಮಹತ್ವ ಘಟಿಸಿದ ಸಂಗತಿಗಳಿವೆ ಇದರಲ್ಲಿ. ಸ್ವಾಮಿಗಳು ಯಾರು, ಎಲ್ಲಿಯವರು, ಎಲ್ಲಿಂದ ಬಂದರು, ವಯಸ್ಸೆಷ್ಟು, ಹಿನ್ನೆಲೆ ಏನು..ಇವೆಲ್ಲಾ ಇಲ್ಲಿ ನಗಣ್ಯ. ಅವರ ಪ್ರತೀ ನಡೆಯಲ್ಲಿ, ನುಡಿಯಲ್ಲಿ, ಸುಮ್ಮನೇ ಹಾಗೇ ಮಾಡಿದ ಪ್ರತಿಯೊಂದು ಕೆಲಸದಲ್ಲಿ ಪಾರಮಾರ್ಥಿಕ ಸತ್ಯದರ್ಶನ ಇದ್ದವೆಂಬುದಷ್ಟೇ ಸತ್ಯ. 

ಅದಕ್ಕೇ ಮೊದಲೇ ಕೇಳಿದ್ದು ನೀವು ಏನನ್ನು ನಂಬುವಿರಿ ಎಂದು. ಪ್ರತಿಯೊಂದನ್ನು ವೈಜ್ಞಾನಿಕವಾಗಿ ನೋಡುವ ದೃಷ್ಟಿಯುಳ್ಳವರಾಗಿದ್ದರೆ, ಕ್ಷಮಿಸಿ, ಇದು ನಿಮಗೆ ಅಷ್ಟಾಗಿ ಸಂಬಂಧಪಡದು. ಧಾರ್ಮಿಕ ಭಾವನೆಯುಳ್ಳವರಾಗಿದ್ದು ಅಂತಃದರ್ಶನದಲ್ಲೂ ಸತ್ಯವಿದೆ ಎಂದು ನಂಬುವಿರಾದರೆ, ಯೆಸ್, ಈ ಪುಸ್ತಕ ನಿಮ್ಮನ್ನು ಬಿಟ್ಟೂಬಿಡದೆ ಓದಿಸಿಕೊಂಡು ಹೋಗುತ್ತದೆ. ಹಾಗಾದರೆ ಆ ಪುಸ್ತಕದ ಹೆಸರೇನೆಂದು ಕೇಳಿದಿರಾ? ನಮ್ಮನ್ನು ವರ್ಣಿಸಲಾಗದ ಅನುಭವಗಳ ಲೋಕಕ್ಕೆ ಕರೆದೊಯ್ದು ಹಲವು ಚಕಿತಗೊಳಿಸುವ ವಿಸ್ಮಯಗಳ ಮೂಲಕ ತಮ್ಮ ಪ್ರಭಾವವನ್ನು ಬೀರಿ ಇದ್ದೂ ಇಲ್ಲದಂತೆ ಮಾಡಿದರೂ ಮಾಡದಂತೆ ಕಂಡರೂ ಕಾಣದಂತೆ ಸಿಕ್ಕರೂ ಸಿಗದಂತೆ ಜೋಗಿ ಜಂಗಮನಾದ ವ್ಯಕ್ತಿ ಎಂದರೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ತಮ್ಮ ಆಧ್ಯಾತ್ಮ ಗುರುಗಳು ಮುಕುಂದೂರು ಸ್ವಾಮಿಗಳ ಕುರಿತು ಬರೆದಿರುವ "ಯೇಗ್ದಾಗೆಲ್ಲಾ ಐತೆ" . ಇವತ್ತು ಮುಗಿಸಿದೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1421089497979231&set=gm.1491035537630565&type=3&theater





No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...