"ನಾಕು ತಂತಿ"
ಉಫ್! ಒಂದು ದೀರ್ಘ ನಿಟ್ಟುಸಿರು. ಎದೆಯಹತ್ತಿ ತಕಧೀಮ್ ಕುಣಿಯುತ್ತಿದ್ದ ಭಾರಕ್ಕೀಗ ನಿರ್ಭಾರವಾದ ಸ್ಥಿತಿ. ಬಹು ದಿನಗಳ ಬಯಕೆಯ ಹೆಮ್ಮರ ಚಿಗುರೊಡೆದು ಬೆಳೆದು ಫಲಪುಷ್ಪ ಧರಿಸಿನಿಂತಾಗ ಉಂಟಾಗುವ ಸಂತೃಪ್ತಿ. ಕಾದು ಕಾದು ಸುಸ್ತಾಗಿ ಬಳಲಿ ಬೆಂಡಾದ ಮರುಭೂಮಿಯ ಹೂವೊಂದು ಒಯಾಸೀಸಿನ ಒರತೆ ಆಸರೆ ಸಿಕ್ಕಿ ನಿಲ್ಲುವಂತಾಯ್ತು.
ನನ್ನೊಳಗೆ ಒಡಮೂಡಿದ ಆ ಕಾತರತೆಗೆ ದಾಕ್ಷಿಣ್ಯವಿಲ್ಲದೆಯೇ ಫಲದೊರೆತಿದೆ. ಆದರೆ ಆ ಫಲ ಎಂತಹುದು ಎಂದು ಮುಂದೆ ಹೇಳಿರುವೆ. ಹೃದಯ ವಿಹ್ವಲತೆಯಿಂದ ನರಳಾಡಿ ಕೊನೆಗೆ ಬಿಡುಗಡೆಗೊಂದು ...ನಭೋಮಂಡಲದತ್ತ ಚಿಮ್ಮುವ ಹುಚ್ಚುಕುದುರೆಯಾಗಿದೆ. ಅದನ್ನು ಕಟ್ಟಿಹಾಕುವ ದುಃಸ್ಸಾಹಸಕ್ಕೆ ನಾನೆಂದೂ ಯತ್ನಿಸುವುದಿಲ್ಲ.
ಹಾಂ! ಅಂದಹಾಗೆ ನನ್ನೊಳಗಡಗಿದ್ದ ಬಹು ದಿನದ ಬಯಕೆಯನ್ನೇನೋ ನಾ ಪೂರೈಸಿಕೊಂಡಿದ್ದಾಯಿತು. ಆದರೆ ಅದರಿಂದ ಸಾಕ್ಷಾತ್ಕಾರವಾಯಿತೇ? ಜೀವನದ ಅನುಭವವನ್ನು ಧಾರೆಯೆರೆದು ಬರೆದ ಕವಿಮನಸ್ಸಿನ ಅಂತರಾಳವನ್ನು ಅರ್ಥೈಸುವುದರಲ್ಲಿ ನಾನು ಸಫಲನಾದೆನೇ? ದೇಶದ ಅತ್ತ್ಯುನ್ನತ ಪ್ರಶಸ್ತಿಗೆ ಪಾತ್ರವಾದ ನುಡಿಮುತ್ತುಗಳಿಗೆ ನನ್ನನ್ನು ನಾನು ಯಾವುದೇ ಅಂಜಿಕೆಯಿಲ್ಲದೆ ತೆರೆದುಕೊಳ್ಳಲು ಸಾಧ್ಯವಾಯಿತೇ? ತಾಯಿ ಮುಂದೆ ನಿಂತ ನಗ್ನ ಮಗುವಿನಂತೆ ಅದರೆದುರು ನಾನು ನಿಲ್ಲಲಾಯಿತೇ? ಉತ್ತರ ನನಗೆ ಬಹು ಸ್ಪಷ್ಟವಿದೆ.
ನನ್ನಂತಹ ಅರೆಪಾಮರನು ಹಿಮಾಲಯವನ್ನು ಹತ್ತುವ ಕನಸ್ಸನ್ನು ಕಾಣುವುದು ಬಹಳ ಸುಲಭ. ಆ ದುಃಸ್ಸಾಹಸ ಮಾಡಲು ಹೊರಡಲೂಬಹುದು. ಆದರೆ ಅದರಲ್ಲಿ ನಾಲ್ಕಿಂಚಿನ ಸಣ್ಣ ಏರಿಯನ್ನೂ ಹತ್ತಲು ಸಾಧ್ಯವಾಗಲಿಲ್ಲ. ಅಂಬಿಕಾತನಾಯ ದತ್ತನ ಮೇರು ಕೃತಿ ಹಿಮಾಲಯದಾಚೆಗೂ ಮೀರಿ ಬೆಳೆದು ನಿಂತಿರುವ ಶಿಖರವನ್ನು ಹತ್ತುವುದಿರಲಿ ಹತ್ತಿರಹೋಗಲೂ ಸಾಧ್ಯವಾಗಲಿಲ್ಲ.
ನನಗಿರುವ ಜ್ಞಾನವನ್ನು ಬಳಸಿ ಆದಷ್ಟೂ ಅರ್ಥೈಸಲು ಯತ್ನಿಸಿ ಸೋತಿದ್ದೀನಿ, ಅಂದರೆ, ಕೃತಿಯ ಘನತೆಗೆ ಚ್ಯುತಿ ಬಂದಂತಾಗುವುದಿಲ್ಲವೆಂದೇ ಭಾವಿಸಬೇಕು. ಎಲ್ಲೋ ಒಂದೆರೆಡು ಸಾಲುಗಳು ಕೆಲವೊಂದು ಅರ್ಥಗಳನ್ನು ನೀಡಿತಾದರೂ, ಕವಿಯ ಅಂತಃಸತ್ವವನ್ನು ಸಂಪೂರ್ಣ ಗ್ರಹಿಸುವಲ್ಲಿ ಎಡವಿರುವೆ. ಅದಕ್ಕೆ ಕಾರಣ ನನ್ನ ಜ್ಞಾನದ ವಿಸ್ತೀರ್ಣತೆಯ ಕೊರತೆಯೇ ಹೊರತು ಬೇರೇನಲ್ಲ.
ಇಲ್ಲಿಗೆ ನನ್ನ ಬಹುದಿನದ ಆಸೆಯ ಈಡೇರುವಿಕೆ ಮತ್ತದರ ಫಲವೇನೆಂದು ನೀವು ತಿಳಿದಾಯ್ತಲ್ಲವೇ?
ಈ ಭಾವವೆಲ್ಲವೂ ನನಗೆ ಮೂಡಿದ್ದು ವರಕವಿ ಬೆಂದ್ರೆ ಅಜ್ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವನ ಸಂಕಲನ "ನಾಕು ತಂತಿ" ಓದಿಮುಗಿಸಿದಾಗ. ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
https://www.facebook.com/photo.php?fbid=1419005828187598&set=gm.1489102764490509&type=3&theater

No comments:
Post a Comment