"ಟ್ರೈನ್ ಟು ಪಾಕಿಸ್ತಾನ್"
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
https://www.facebook.com/groups/nanobbapustakapremi/permalink/1590313027702815/
ನಮಗೆ ಕೇವಲ ಪಠ್ಯ ಪುಸ್ತಕದಲ್ಲಿ, ಟೀವಿ ಕಾರ್ಯಕ್ರಮದಲ್ಲಿ ಅಥವಾ ಯೂ ಟ್ಯೂಬಿನ ಡಾಕ್ಯುಮೆಂಟರಿಯಲ್ಲಿ ದೇಶ ವಿಭಜನೆ ಬಗ್ಗೆ ನೋಡಿ ಗೊತ್ತಿದೆಯಷ್ಟೇ. ಒಂದು ಸಲ ಈ ಕಾದಂಬರಿಯನ್ನು ಓದಿ ನೋಡಿ! ವಿಭಜನೆ ಎನ್ನುವ ಬೃಹತ್ತ್ ಕದನವು ಅದೆಷ್ಟು ಭೀಕರವಾಗಿತ್ತು, ಅದೆಷ್ಟು ಅಮಾಯಕರ ಜೀವ ಬಲಿ ಪಡೆದಿತ್ತು, ಹೆಂಗಸರ ಮಕ್ಕಳ ಮಾರಣಹೋಮ ನಡೆದಿತ್ತು ಎನ್ನುವುದು ಅರಿವಿಗೆ ಬರುತ್ತದೆ. ಎರಡೂ ಕಡೆ ಪ್ರಾಣ ಮಾನ ಆಸ್ತಿ ಹರಣವಾಗಿತ್ತು. ಆದರೆ ದೆಹಲಿಯ ಏಸಿ ರೂಮಿನಲ್ಲಿ ಕುಳಿತು ಕಾನೂನು ರೂಪಿಸುವ ಜನರಿಗೆ ಗಡಿಯಲ್ಲಿ ಕೋಮುದಳ್ಳುರಿಯ ತಾಪಕ್ಕೆ ಸಿಲುಕಿ ಎದುರಿನ ಅನ್ಯ ಕೋಮಿನವವನ್ನು ಸದೆ ಬಡಿಯಲು ಹೊರಟವನ ಮನಸ್ಥಿತಿ ತಿಳಿದೀತೇ? ಹೆಂಗಸರನ್ನು ಯಾವನೋ ಒಬ್ಬ ತಮ್ಮ ಕಣ್ಣೆದುರೇ ಹೊಸಕಿ ತಿನ್ನುವಾಗ ಪೌರುಷ ಎಂಥಹವನನ್ನೂ ಕೆಣಕದೆ ಸುಮ್ಮನೆ ಬಿಟ್ಟೀತೇ? ಮಕ್ಕಳ ಎದೆಗೆ ಬಕ್ಕೆ ಬರುವಂತೆ ಚೂರಿಯಿಟ್ಟು ಪ್ರಾಣಹರಣ ಮಾಡುವುದನ್ನು ಸುಮ್ಮನೇ ಸಹಿಸಿ ನೋಡಲಾದೀತೇ? ಕೊಲ್ಲಲು ಬಂದವನ ಮುಂದೆ ಭಾಯಿ ಭಾಯಿ ಎನ್ನುವ ಮಂತ್ರ ಕೆಲಸ ಮಾಡುವುದೇ? ಇದ್ಯಾವುದೂ ದೆಹಲಿಯ ದೊರೆಗಳಿಗಾಗಲಿ, ಲಾಹೋರದ ಮೌಲ್ವಿಗಳಿಗಾಗಲಿ ತಿಳಿಯುವುದಿಲ್ಲ. ನಮ್ಮ ಮಂದಿ ಸತ್ತಿದ್ದಾರೆ, ಅನ್ಯ ಕೋಮಿನ ಹತ್ತು ಪಟ್ಟು ಮಂದಿಯನ್ನು ಕೊಲ್ಲಬೇಕು ಎನ್ನುವುದೇ ಅವರಿಗೆ ಮುಖ್ಯವಾಗಿ ಕಾಣಿಸುತ್ತದೆ. ಕೊಲ್ಲಲು ಬಂದವನಿಗೆ ಯಾವ ವೇದಾಂತಗಳು ಸಿದ್ಧಾಂತಗಳು ವೇದ್ಯವಾಗುವುದಿಲ್ಲ. ಅವನಿಗೆ ಬೇಕಿರುವುದು ಎದುರಿರುವನ ಪ್ರಾಣ ಅಷ್ಟೇ, ಅದು ಯಾರಾದಾಗಿದ್ದರೂ ಪರವಾಗಿಲ್ಲ.
ಹೀಗಿದ್ದ ಜನರ ಮನಃಪರಿವರ್ತನೆ ಮಾಡುವ ದಿಟ್ಟ ಕ್ರಮಗಳನ್ನು ಅಂದಿನ ಉಭಯ ಸರಕಾರಗಳು ಏಕೆ ತೆಗೆದುಕೊಳ್ಳಲಿಲ್ಲ ಎನ್ನುವ ರಾಜಕೀಯ ಚಾಣಾಕ್ಷ್ಯ ಸಂಬಂಧಿ ಸೂಕ್ಷ್ಮ ವಿಚಾರವನ್ನು ಕಾದಂಬರಿಯಲ್ಲಿ ಸೂಕ್ಷ್ಮವಾಗಿ ಹೆಣೆಯಲಾಗಿದೆ. ರಾಜಕೀಯ ನೀತಿ ರೂಪಿಸಲು ಬೇಕಾಗಿದ್ದ ಕುಶಲತೆಗೆ, ಅಂದಿನ ನಾಯಕರು ಪರಿಸ್ಥಿತಿಯನ್ನ ಸಮರ್ಥವಾಗಿ ನಿರ್ವಹಿಸದ ವೈಫಲ್ಯತೆಗೆ, ದೇಶ ವಿಭಜನೆ ಎನ್ನುವುದೊಂದು ಬೃಹತ್ತ್ ನಾಟಕವೇ ಸಾಕ್ಷಿ.
ಅದೊಂದು ಸುಂದರ ಹಳ್ಳಿ. ಭಾಗಶಃ ಗಡಿಗೆ ಹೊಂದಿಕೊಂಡಂತೆ ಇತ್ತು, ಹೆಸರು ಮನೋ ಮಜ್ರಾ ಎಂದು. ದೇಶ ಒಡೆದು ಇಬ್ಬಾಗವಾದಾಗ ಇಲ್ಲಿನ ಜನರು ನೆಮ್ಮದಿಯಿಂದಲೇ ಇದ್ದರು, ಮುಖ್ಯವಾಗಿ ಸಿಖ್ಖ್ ಮತ್ತು ಮುಸ್ಲಿಂ ಜನಾಂಗ. ಪಂಜಾಬ್ ಪ್ರಾಂತ್ಯವಾದ್ದರಿಂದ ಹಿಂದುಗಳು ಇದ್ದರೂ, ಹಿಂದುಗಳಿಗಿಂತ ಸಿಖ್ಖರು ಜನಸಂಖ್ಯೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಾಗಲಿ, ಸ್ವಾತಂತ್ರ್ಯಕ್ಕೋಸ್ಕರ ತನ್ನ ಜೀವನವನ್ನು ಮುಡಿಪಿಟ್ಟ ಗಾಂಧಿಯಾಗಲಿ, ಪ್ರಧಾನಿ ನೆಹರು ಬಗ್ಗೆಯಾಗಲಿ ಇಲ್ಲಿನ ಮಂದಿಗೆ ಹೆಚ್ವು ತಿಳಿದಿಲ್ಲ. ಎಲ್ಲಿಂದಲೋ ತೇಲಿ ಬಂದ ಸುದ್ದಿಯನ್ನು ನಂಬಿ ಬದುಕುವ, ತಾವು ಕೇಳಿದ್ದನ್ನೇ ಒಪ್ಪಿಕೊಳ್ಳುವ ಜನ ಇಲ್ಲಿನವರು.
ದೇಶದಲ್ಲಿ ಕೋಮುದಳ್ಳುರಿ ತನ್ನ ರುದ್ರ ಪ್ರತಾಪವನ್ನು ತೋರುತ್ತಾ ಸಹಸ್ರಾರು ಜನರನ್ನು ಬಲಿ ತೆಗೆದುಕೊಳ್ಳುವಾಗಲೂ ಈ ಹಳ್ಳಿ ಬಾಹ್ಯ ಪ್ರಪಂಚದ ಕ್ಷೋಭೆಗೆ ಒಳಗಾಗಿರುವುದಿಲ್ಲ. ಅತ್ತ ಕಡೆ ಪಾಕಿಸ್ತಾನದಿಂದ ಹಿಂದುಗಳ ಮಾರಣ ಹೋಮ ನಡೆಸಿ ಹೆಣಗಳನ್ನು ಅತ್ಯಂತ ಕರಣಾಜನಕವಾಗಿ, ಊಹಿಸಲೂ ಆಗದ ದಾರುಣ ಸ್ಥಿತಿಯಲ್ಲಿ ರೈಲಿನಲ್ಲಿ ಹೇರಿ ಕಳುಹಿಸಿದಾಗಲೂ ಇಲ್ಲಿ ಧರ್ಮ ಭೇಧ ತೆಲೆದೋರುವುದಿಲ್ಲ. ಇಲ್ಲಿನವರ ಸೌಹಾರ್ದತೆ ಹೇಗಿರುತ್ತದೆಂದರೆ ಬೆಳಗಾಗುವುದನ್ನು ತಿಳಿಯಬೇಕೆಂದರೆ ಗುರುದ್ವಾರದ ಸಂತ ಮೀತ್ ಸಿಂಗ್ ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಯ ಮೌಲ್ವಿ ಅಲ್ಲಾ ಭಕ್ಷ್ ಕಾಯುತ್ತಾನೆ ಮತ್ತು ಅಲ್ಲಾ ಭಕ್ಷ್ ಪ್ರಾರ್ಥನೆ ಸಲ್ಲಿಸಿ ಊರನ್ನು ಎಬ್ಬಿಸಲೆಂದು ಗುರು ಮೀತ್ ಕಾಯುತ್ತಾನೆ. ಆ ಮಟ್ಟಿಗಿನ ಭಾಂಧವ್ಯ ಎರಡೂ ಕಡೆ ಇರುತ್ತದೆ.
ದಿನ ನಿತ್ಯದ ಬದುಕಲ್ಲಿ ಒಬ್ಬರಿಗೊಬ್ಬರು ಸಹಕಾರವೀಯುತ್ತಾ ಅನ್ಯೋನ್ಯತೆಯೊಂದಿಗೆ ಸಹಬಾಳ್ವೆಯನ್ನು ನಡೆಸುತ್ತಾ ಬಂದಿರುವ ಈ ಮಂದಿಗೆ, ಹೊರ ಪ್ರಪಂಚದ ಮಾಹಿತಿಯೇನಾದರೂ ಸಿಗಬೇಕಿದ್ದಲ್ಲಿ ಅವರ ಬದುಕಿನ ಮತ್ತೊಂದು ಅವಿಭಾಜ್ಯ ಅಂಗವಾಗಿದ್ದ ರೈಲ್ವೇ ನಿಲ್ದಾಣದ ಮೂಲಕವೇ ಸಿಗಬೇಕಿತ್ತು. ಯಾಕೆಂದರೆ ದೆಹಲಿಯಿಂದ ಲಾಹೋರಿಗೆ, ಅಲ್ಲಿಂದ ಇಲ್ಲಿಗೆ ಬರಬೇಕಾದರೆ ಇವರ ಹಳ್ಳಿಯನ್ನು ಬಳಸಿಯೇ ರೈಲು ಬರಬೇಕಿತ್ತು.
ಹೀಗಿರುವಾಗ ಹುಕುಂ ಚಂದ್ ಎನ್ನುವ ಕಲೆಕ್ಟರನ ಪ್ರವೇಶವಾಗುತ್ತದೆ. ಆತ ಹಳ್ಳಿಯಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಸುರಕ್ಷಿತವಾಗಿ ಯಾವುದೇ ಅವಗಡಗಳಾಗದಂತೆ ತಲುಪಿಸಲು ಆಜ್ಞೆ ಹೊರಡಿಸಿ ಪಾಕಿಸ್ತಾನಿ ಸೈನಿಕ ನೆಲೆಗೆ ವಿಷಯ ರವಾನಿಸುತ್ತಾನೆ. ಅವರು ಬಂದು ಇಲ್ಲಿನ ಮುಸ್ಲಿಮರನ್ನು ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕರೆದುಕೊಂಡು ಹೋಗುತ್ತಾರೆ. ಹೋಗುವಾಗ ಉಭಯರಿಗೂ ಬಹು ವೇದನೆಯಾಗುತ್ತದೆ.
ಈ ಮಧ್ಯೆ ಪಾಕಿಸ್ತಾನದಿಂದ ಬಂದ ಸಿಖ್ಖ್ ನಿರಾಶ್ರಿತರು ಸೌಹಾರ್ದತೆಯಿಂದಿದ್ದ ಹಳ್ಳಿಯ ಜನರನ್ನು ಪ್ರಚೋದಿಸಿ, ಪಾಕಿಸ್ತಾನಕ್ಕೆ ಹೊರಟಿರುವ ಮುಸ್ಲಿಂ ಮಂದಿಯನ್ನು (ಆ ಗುಂಪಿನಲ್ಲಿ ತಮ್ಮದೇ ಹಳ್ಳಿಯ ಜನರೂ ಇರುತ್ತಾರೆ) ಹತ್ಯೆಗೈಯ್ಯಲು ಪ್ರೇರೇಪಿಸುತ್ತಾರೆ. ಕೋಮುದಳ್ಳುರಿಗೆ ಸಿಲುಕಿ ತಲೆತಲಾಂತರದಿಂದ ಒಟ್ಟಿಗೇ ಬಾಳಿ ಬದುಕಿ ಭ್ರಾತೃತ್ವಕ್ಕೆ ಹೆಸರಾಗಿದ್ದ ಹಳ್ಳಿಯ ಜನರು, ತಮ್ಮದೇ ಅನ್ಯ ಕೋಮಿನ ಮುಸ್ಲಿಮರನ್ನು ಪಾಕಿಸ್ತಾನದಲ್ಲಿ ಹಿಂದುಗಳ ಹತ್ಯೆಗಿಂತಲೂ ಭರ್ಭರವಾಗಿ ಹತ್ಯೆಗೈಯ್ಯುಲು ನಿರ್ಧರಿಸುತ್ತಾರೆ.
ತಾವು ಹುಟ್ಟಿ ಬೆಳೆದಂದಿನಿಂದ ನೋಡಿಕೊಂಡು ಬೆಳೆದು ಬದುಕಿರುವ, ತಮ್ಮ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿರುವ ಅದೇ ರೈಲು ನಿಲ್ದಾಣದಲ್ಲಿ ರೈಲನ್ನು ಪಾಕಿಸ್ತಾನಕ್ಕೆ ಹೋಗದಂತೆ ತಡೆದು ಮುಸ್ಲಿಮರನ್ನು ಕೊಲ್ಲುವ ಯೋಜನೆ ಸಿದ್ಧವಾಗುತ್ತದೆ ಮತ್ತು ಆ ಸಮಯವೂ ಬರುತ್ತದೆ. ಕಾರ್ಯಸೂಚಿಯಂತೆ ಎಲ್ಲರೂ ಶಸ್ತ್ರಾಸ್ತ್ರದೊಂದಿಗೆ ಸಜ್ಜಾಗಿರುತ್ತಾರೆ. ತಾವಂದುಕೊಂಡಂತೆ ರೈಲನ್ನು ತಡೆದು ಮುಸ್ಲಿಮರನ್ನು ಹತ್ಯೆಗೈದರೇ? ಪಾಕಿಸ್ತಾನಕ್ಕೆ ಹೆಣದ ರಾಶಿ ತುಂಬಿದ ರೈಲನ್ನು ಕಳುಹಿಸಿದರೇ? ತಮ್ಮೊಳಗೆ ಹೊತ್ತಿ ಉರಿಯುತ್ತಿದ್ದ ದ್ವೇಷ ಪ್ರತೀಕಾರದ ಜ್ವಾಲೆ ತಣ್ಣಗಾಯಿತೇ?
ಒಮ್ಮೆ ಕಾದಂಬರಿಯನ್ನು ಓದಿ ನೋಡಿ. ಊಹಿಸಿರದ ತಿರುವೊಂದು ಅಚಾನಕ್ಕಾಗಿ ಬರುತ್ತದೆ ಮತ್ತು ಓದುವನು ಕೊನೆಗೆ ಭಾರವಾದ ನಿಟ್ಟುಸಿರು ಬಿಡುವಂತಾಗುತ್ತದೆ.
ಇದಲ್ಲದೇ ಸ್ವಾತಂತ್ರ್ಯ ದೊರಕಿದ ಆರಂಭಿಕ ದಿನಗಳ ಬಗ್ಗೆ, ಬ್ರಿಟೀಷರಿಂದ ತೆರವಾದ ಸರಕಾರಿ ಉದ್ಯೋಗದಲ್ಲಿ ಭಾರತೀಯರು ನಡೆಸಿದ ಅನಾಚಾರ ದಬ್ಬಾಳಿಕೆ ದೌರ್ಜನ್ಯ ಲಂಚತನ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ವಿಸ್ತೃತವಾಗಿ ಹೇಳಲಾಗಿದೆ. ಜೊತೆಗೆ ಜಗ್ಗತ್ ಸಿಂಗ್ ಎನ್ನುವ ಸಿಖ್ಖ್ ಗೂಂಡಾ ಮತ್ತು ನೂರ್ ಎನ್ನುವ ಮುಸ್ಲಿಂ ಯುವತಿಯ ಪ್ರೇಮ್ ಕಹಾನಿಯೂ ಇದೆ. ಕಾಮದ ಬಗ್ಗೆ ಯಥೇಚ್ಛವಾದ ಸನ್ನಿವೇಶಗಳಿದ್ದರೂ ಎಲ್ಲೂ ಅಸಹ್ಯವಾಗದಂತೆ ಬರೆದಿರುವುದು ಕಾದಂಬರಿಯು ಎಲ್ಲರನ್ನೂ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ.
ಇಂತಹ ಮಹಾನ್ ಕಾದಂಬರಿಯನ್ನು ಬರೆದವರು ಯಾರೆಂದು ಹೇಳುವ ಅವಶ್ಯಕತೆಯಿಲ್ಲ. ಅವರು ನಮ್ಮ ದೇಶ ಕಂಡ ಅಪ್ರತಿಮ ಪತ್ರಕರ್ತ, ಲೇಖಕ ಸರ್ದಾರ್ ಖುಷವಂತ್ ಸಿಂಗ್. ಇದು ಅವರ ಮೊದಲ ಕಾದಂಬರಿಯೂ ಹೌದು. ಇದನ್ನು ಕನ್ನಡಕ್ಕೇ ಮೂಲದಷ್ಟೇ ಸುಂದರವಾಗಿ ಅನುವಾದ ಮಾಡಿದವರು ಡಾ. ಎಂ. ಬಿ. ರಾಮಮೂರ್ತಿ ಅವರು. ಇಬ್ಬರಿಗೂ ಅನಂತಾನಂತ ವಂದನೆಗಳು.
ಇದು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಕಾದಂಬರಿ, ನಾವು ಭಾರತೀಯರು ಗ್ರೇಟ್ ಅನ್ನುವ ಕಾರಣಕ್ಕಾಗಿ ಅಲ್ಲ. ನಮ್ಮನ್ನು ನಾವು ಜಾಗೃತಗೊಳಿಸಿಕೊಳ್ಳುವುದಕ್ಕಾಗಿ, ಕಂಡು ಕೇಳರಿಯದ ಅನುಭೂತಿ ಹೊಂದದ ದೇಶ ಕಂಡ ಮಹಾನ್ ದುರಂತ ಈಗಿರುವ ನಮ್ಮ ನಮ್ಮಲ್ಲಿ ಮತ್ತೆ ಮರುಕಳಿಸದೆ ಇರುವುದಕ್ಕಾಗಿ, ಇತಿಹಾಸದ ಮರೆತ ಪುಟಗಳಲ್ಲಿ ವಿನಾಕಾರಣ ಬಲಿಯಾದ ಮುಗ್ದ ಅಮಾಯಕ ಜೀವಗಳ ಸವಿ ನೆನಪಿಗಾಗಿ..
ನಮಸ್ಕಾರ.
ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
https://www.facebook.com/groups/nanobbapustakapremi/permalink/1590313027702815/

No comments:
Post a Comment