Wednesday, November 8, 2017


"ಚದುರಂಗರ ಸಮಗ್ರ ಕಥೆಗಳು.."


ಹೆಸರೇ ಹೇಳುವಂತೆ ಇದು ಚದುರಂಗರ ಸಮಗ್ರ ಕಥೆಗಳ ಬೃಹತ್ತ್ ಸಂಕಲನ. ಸುಮಾರು ಆರುನೂರು ಪುಟಗಳಷ್ಟಿದೆ. 1948 ರಿಂದ ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ ಚದುರಂಗರು ತಾವು ಕಾಲವಾಗುವ ಹಿಂದಿನ ವರ್ಷದ ತನಕವೂ ಬಹಳ ಅತ್ಯುತ್ತಮವಾದುದ್ದನ್ನೇ ಬರೆದರು. ಈ ಸಂಕಲನದಲ್ಲಿ ಅವರು ಬರೆದಿರುವ ಅರವತ್ತು ಸಣ್ಣ ಕಥೆಗಳಿವೆ. ಪ್ರತಿಯೊಂದು ಕಥೆಯೂ ಒಂದೊಂದು ಕಾಲಘಟ್ಟದಲ್ಲಿ ಬರೆದಿದ್ದರೂ, ಎಲ್ಲಾ ಕಥೆಗಳ ಆಶಯ ಮಾತ್ರ ಒಂದೇ ಆಗಿದೆ - ಮಾನವತೆ. ಅವರ ಕಥೆಗಳಲ್ಲಿನ ಬಹುತೇಕ ಪಾತ್ರಗಳು ಹುಟ್ಟಿ... ಬಂದಿರುವುದು ಜನಸಾಮಾನ್ಯರ ದಿನಚರಿಯಿಂದಲೇ. ಒಂದು ರಸ್ತೆಯನ್ನು ಕಥೆಯ ಮುಖ್ಯ ಪಾತ್ರಧಾರಿಯನ್ನಾಗಿಸಿ, ಅದಕ್ಕೂ ಭಾವವನ್ನು ತುಂಬಿ ಕಥೆ ಹೆಣೆದಿರುವ ಪರಿ ನಿಜಕ್ಕೂ ಬೆರಗು ಮೂಡಿಸುವಂಥದ್ದೇ. ಈ ರೀತಿ ಬೆರಗುಗಳು ಪುಸ್ತಕದುದ್ದಕ್ಕೂ ಕಾಣಸಿಗುತ್ತವೆ.


ಕೆಲವು ಕಥೆಗಳು ನಿಜಕ್ಕೂ ರೋಚಕವಾಗಿದ್ದರೆ, ಇನ್ನು ಕೆಲವು ಓದಿದ ನಂತರ ಚಿಂತನೆ ಹಚ್ಚುವಂಥವು. ಸಮಾಜದ ಅಂಕುಡೊಂಕಿನ ಬಗ್ಗೆ ಅತಿ ಹೆಚ್ಚು ಗಮನ ಹರಿಸಿರುವ ಚದುರಂಗರು, ಅಲ್ಲಿರುವ ಹುಳುಕನ್ನು ಹೆಚ್ಚು ಕೇಂದ್ರೀಕರಿಸಿ ವಿಜೃಂಭಿಸದೆ ಅದನ್ನು ಮಾನವತೆ ಪ್ರೀತಿ ಕರುಣೆ ಸ್ನೇಹ ಆಧಾರದ ನೆಲೆಯಲ್ಲಿ ಎತ್ತಿ ಹಿಡಿದು ಕಥೆಗೆ ತಾರ್ಕಿಕ ಅಂತ್ಯ ನೀಡುತ್ತಾರೆ. ಮತ್ತೆ ಕೆಲವು ಕಥೆಗಳ ಅಂತ್ಯವನ್ನು ಓದುಗರಿಗೇ ಬಿಡುತ್ತಾರೆ. ಇದು ಹೀಗೂ ಬದಲಾಗಬಹುದೇ? ಅಥವಾ ಈ ನೆಲೆಗಟ್ಟಿನಲ್ಲಿಯೂ ನೋಡಬಹುದೇ? ಎನ್ನುವ ಹಲವು ಕ್ರಮ ಚಿಂತನೆ ಮಾಡುವ ಕಥೆಗಳಿವೆ. ಇದು ಅವರ ಹೆಚ್ಚುಗಾರಿಕೆಯೂ ಹೌದು, ಕಥೆ ಹೇಳುವ ತಂತ್ರಗಾರಿಕೆಯೂ ಹೌದು. 


ಚದುರಂಗರು ಸಣ್ಣಕಥೆಯನ್ನು ಬರೆಯಲು ಆರಂಭಿಸಿದ್ದು ಸ್ವಾತಂತ್ರ್ಯ ಬಂದ ಹೊಸದರಲ್ಲಿ. ಈಗಿನ ನಮಗೆ ಆ ಕಾಲದ ಜನಜೀವನ, ಸಂಪ್ರದಾಯ, ಆಚರಣೆ, ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯಕ್ಕೂ ಸ್ವೇಚ್ಚಾಚಾರಕ್ಕೂ ಇರುವ ಅಂತರ.. ಮುಂತಾದ ಹಲವು ವಿಷಯಗಳ ಬಗ್ಗೆ ಸ್ಥೂಲ ಪರಿಚಯ ಮಾಡಿಕೊಡಬಲ್ಲ ಅಧ್ಯಯನ ಶೀಲ ಮತ್ತು ಸಂಗ್ರಹಯೋಗ್ಯ ಕೃತಿ ಎಂದರೆ ತಪ್ಪಾಗಲಾರದು. 


ಕಥೆಗಳ ಭಾಷೆ ಮತ್ತದರ ಪ್ರಯೋಗ ಸರಳವಾಗಿ ನಾವೂ ನೀವು ಮಾತಾಡುವ ಮೈಸೂರು ಶೈಲಿಯಲ್ಲಿದೆ. ಕೆಲವು ಕಡೆ ಗ್ರಾಮ್ಯವಾಗಿದ್ದರು ಸಲೀಸಾಗಿ ಓದಬಹುದು. ಎಲ್ಲೂ ಗೊಂದಲವಾಗದೆ ಸಹಜವಾದ ನಿರೂಪಣಾ ಶೈಲಿ ಈ ಕೃತಿಯ ಹೆಗ್ಗಳಿಕೆ. 


ಇಲ್ಲಿ ಅರವತ್ತು ಸಣ್ಣ ಕಥೆಗಳಿರುವುದರಿಂದ ಯಾವುದರ ಬಗ್ಗೆಯೂ ವಿವರವಾಗಿ ಬರೆಯಲು ಆಗುವುದಿಲ್ಲ. ಈ ಕೃತಿಯ ಗಾತ್ರ ಮತ್ತು ವಿಸ್ತರಣೆ ದೊಡ್ಡದು ಎಂದು ಮಾತ್ರ ಹೇಳಲಾಗುವುದಿಲ್ಲ ಬದಲಿಗೆ ಒಳಗಿರುವ ಹೂರಣವೂ ಬಹು ವೈವಿಧ್ಯವೂ ಸಮಗ್ರವೂ ಅತ್ಯಂತ ವಿಭಿನ್ನವೂ ಆಗಿದೆ ಎನ್ನಬಹುದಷ್ಟೇ. 

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್




No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...