Wednesday, November 8, 2017


"ಮಹಾಕ್ಷತ್ರಿಯ.."


ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವಂತೆ ದೇವರು ವರವನ್ನು ಕೊಟ್ಟು ವರಪಡೆದವವನ್ನು ಉದ್ದರಿಸುವ ಸಂಗತಿ ನಮಗೆಲ್ಲರಿಗೂ ತಿಳಿದುದೇ. ಆದರೆ ಮನುಷ್ಯನಾದವನು ದೇವರಿಗೇ ವರವನ್ನು ಕೊಟ್ಟು ಆಚಂದ್ರಾರ್ಕವಾಗಿ ಉದ್ದರಿಸಿದ್ದನ್ನು ಕಂಡಿದ್ದೀರ? ಕೇಳಿದ್ದೀರ? ಹಾಗಿಲ್ಲವಾದರೆ ದೇವುಡು ನರಸಿಂಹಶಾಸ್ತ್ರಿಗಳು ಬರೆದಿರುವ "ಮಹಾಕ್ಷತ್ರಿಯ" ಓದಿದರೆ ದೇವರನ್ನೇ ತನ್ನ ಧರ್ಮಶ್ರದ್ಧೆಯಿಂದ ಉದ್ದರಿಸಿದ ಕಥೆ ತಿಳಿಯುತ್ತದೆ. ಆ ಮಹಾನುಭಾವನಾದರೂ ಯಾರು ಎಂದರೆ ನಹುಷ ಚಕ್ರವರ್ತಿ ಮತ್ತು ಉದ್ದಾರಗೊಂಡವರು ಇಂದ್ರ ಮತ್ತು ಆ...ತನ ಪತ್ನಿ ಶಚಿದೇವಿ.


ಹೇಗೆಂದರೆ..


ಒಮ್ಮೆ ಇಂದ್ರಸಭೆಗೆ ಮಹರ್ಷಿ ಗಣವೊಂದು ಸಪ್ತರ್ಷಿಗಳ ಸೂಚನೆಯಂತೆ ಆಗಮಿಸುತ್ತದೆ. ಅವರು ಬಂದಿರುವ ಕಾರಣ ತಮ್ಮ ಪ್ರಶ್ನೆಗೆ ಉತ್ತರ ತಿಳಿಯಲು. ಬಂದ ಋಷಿಗಣವನ್ನು ದೇವೇಂದ್ರನು ಆದರಾತಿಥ್ಯಗಳಿಂದ ಸತ್ಕರಿಸಿ ಬಂದ ಕಾರಣ ಕೇಳಲು, ಅವರ ಸಮಸ್ಯೆಗೆ ಉತ್ತರಾರ್ಥಿಗಳಾಗಿ ಬಂದುದು ತಿಳಿಯುತ್ತದೆ. ದೇವೇಂದ್ರನು ಉತ್ತರ ಹೇಳಲು ಸಮರ್ಥನಿದ್ದರು ಪೇಚಿಗೆ ಸಿಲುಕಿಕೊಳ್ಳುತ್ತಾನೆ. ಆತ ಋಷಿಗಣ ಬರುವುದಕ್ಕಿಂತ ಮೊದಲಿಂದಲೂ ದೇವಗುರು ಬೃಹಸ್ಪತಿ ಬರುವುದನ್ನು ಎದುರು ನೋಡುತ್ತಿರುತ್ತಾನೆ. ಆದರೆ ಬೃಹಸ್ಪತಿಯು ಸಭೆಯ ಸಮಯಕ್ಕೆ ಸರಿಯಾಗಿ ಆಗಮಿಸಿರುವುದಿಲ್ಲ. ಇದನ್ನೇ ಚಿಂತಿಸುತ್ತಾ ಕುಳಿತಿದ್ದ ಇಂದ್ರನ ಬಳಿ ಈಗ ಋಷಿಗಣ ಬಂದಿದೆ. ಬಂದವರಿಗೆ ಸಬೂಬು ಹೇಳಲು ಆಗದ ಕಾರಣ ಇಂದ್ರ ಪೇಚಿಗೆ ಸಿಲುಕಿದ್ದರೂ ಬಂದವರನ್ನು ಅನುಚಿತವಾಗಿ ನಡೆಸಿಕೊಳ್ಳಬಾರದೆಂದು ಪ್ರಶ್ನೆಗೆ ಉತ್ತರ ಹೇಳಲು ತನ್ನನ್ನು ತಾನು ಮರೆತು ತನ್ಮಯನಾಗಿ ಕಣ್ಣ್ಮುಚ್ಚಿ ಉತ್ತರವನ್ನು ಹೇಳುತ್ತಿರಲು, ಆಗ ಸಭೆಗೆ ಬೃಹಸ್ಪತಿಯ ಆಗಮನವಾಗುತ್ತದೆ. ಎಂದು ಬಂದರೂ ಆದರಣೀಯವಾಗಿ ಸ್ವಾಗತಿಸುವ ಇಂದ್ರ, ಇಂದು ತಾನು ಬಂದರೂ ಎದ್ದು ಬಂದು ನನ್ನನ್ನು ಸ್ವಾಗತಿಸದೆ ಅಪಮಾನಗೊಳಿಸುತ್ತಿದ್ದಾನೆ, ಕಣ್ಣ್ಮುಚ್ಚಿ ಕುಳಿತು ಏನನ್ನೋ ಧೇನಿಸುತ್ತಿದ್ದಾನೆ ಎಂದು ಅನುಮಾನಿಸಿ ಅಪಮಾನಗೊಂಡವರಂತೆ ಬಂದದ್ದು ಬಂದವರಂತೆಯೇ ಅಲ್ಲಿಂದ ಹಿಂದಿರುಗುತ್ತಾನೆ ಬೃಹಸ್ಪತಿ. ಉತ್ತರವಿಟ್ಟು ಋಷಿಗಣ ಹಿಂದಿರುಗಿದ ಮೇಲೆ ಇದನ್ನು ತಿಳಿದ ಇಂದ್ರನು ಚಿಂತಾಕ್ರಾಂತನಾಗುತ್ತಾನೆ. ಸ್ವರ್ಗಲೋಕ ದೇವಗುರುವಿಲ್ಲದೆ ಮುನ್ನಡೆಸಿ ದಾರಿ ತೋರಿಸುವರಿಲ್ಲದಂತಾಗುತ್ತದೆ.


ಇಂತಹ ಸುಸಮಯಕ್ಕಾಗಿ ಕಾದಿದ್ದ ಅಸುರರು ಇದೇ ಸರಿಯಾದ ಸಮಯವೆಂದು ತಿಳಿದು ದೇವಲೋಕದ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಳ್ಳುತ್ತಾರೆ. ಇದನ್ನರಿತ ಇಂದ್ರನು ಹೋಗಿ ಬ್ರಹ್ಮನನ್ನು ಕಾಣಲು, ಹೊಸ ದೇವಗುರುವಾಗಿ ವಿಶ್ವರೂಪಾಚಾರ್ಯನನ್ನು ನೇಮಿಸಿಕೊಳ್ಳುವಂತೆ ಬ್ರಹ್ಮ ಸಲಹೆ ನೀಡುತ್ತಾನೆ. ಆತ ದೇವದಾನವ ಗಣ ಎರಡಕ್ಕೂ ಸಲ್ಲುವನು, ಅವನನ್ನು ನೇಮಿಸಿಕೋ. ಅವನು ನಮ್ಮಂತೆ ಸೋಮರಸ ಸೇವಿಸಲಾರ, ಆದರೆ ಅವನಿಗೆ ಸುರಾಪಾನವೆಂದರೆ ಅಚ್ಚುಮೆಚ್ಚು ಅದನ್ನು ಕೆಣಕಿ ಇಲ್ಲಸಲ್ಲದ್ದನ್ನು ಕೇಳಬೇಡ. ಒಂದುಪಕ್ಷ ಕೇಳಿಕೆಣಕಿಕೊಂಡರೆ ಆತ ಸುಮ್ಮನಿರುವುದಿಲ್ಲ ಹುಷಾರ್! ಎಂದು ಹೇಳುತ್ತಾನೆ ಬ್ರಹ್ಮ. 


ಬ್ರಹ್ಮನ ಆಣತಿಯಂತೆ ವಿಶ್ವರೂಪಾಚಾರ್ಯನು ದೇವಲೋಕದ ಹೊಸ ದೇವಗುರುವಾಗಿ ಬರುತ್ತಾನೆ. ದಿನಗಳೆದಂತೆ ವಿಶ್ವರೂಪನ ಸುರಪಾನದ ಬಗ್ಗೆ ದೇವಗಣದಿಂದ ಅಸಮಾಧಾನ ಬರಲು ಇಂದ್ರನು, ವಿಶ್ವರೂಪನನ್ನು ಕಂಡು ಅದರ ಬದಲು ಸೋಮರಸ ಸೇವಿಸಿ ಎಂದು ಬಂದು ಹೇಳಿದಾಗ ಇಬ್ಬರ ಮಧ್ಯೆಯೂ ಬಿರುಸು ಮಾತುಕತೆಯಾಗಿ ಕೋಪೋದ್ವಿಗ್ನಗೊಂಡ ಇಂದ್ರನು ವಿಶ್ವರೂಪನನ್ನು ಹತ್ಯೆಗೈಯ್ಯುತ್ತಾನೆ. ಬ್ರಹ್ಮಹತ್ಯಾ ಪಾಪ ಆತನನ್ನು ಆವರಿಸುತ್ತದೆ.


ಈ ವಿಷಯ ತಿಳಿದ ವಿಶ್ವರೂಪಾಚಾರ್ಯನ ತಂದೆ ತ್ವಷ್ಟುಬ್ರಹ್ಮನು ಅತೀಕೋಪೋದ್ರಿಕ್ತನಾಗಿ ತನ್ನ ಮಗನನ್ನು ಕೊಂದ ಇಂದ್ರನ ಮೇಲೆ ಸೇಡು ತೀರಿಸಿಕೊಳ್ಳಲು ಒಂದು ಯಾಗವನ್ನು ಮಾಡಿ ಇತರ ಅಸುರಗಣದ ಶಕ್ತಿಯನ್ನೆಲ್ಲಾ ಧಾರೆಯೆರೆದು ವೃತ್ರನೆನ್ನುವ ದೈತ್ಯಾಸುರನನ್ನು ಸೃಷ್ಠಿಸುತ್ತಾನೆ. ಆತ ಎಷ್ಟು ಪರಾಕ್ರಮಿ ಮತ್ತು ಬಲಶಾಲಿಯೆಂದರೆ ಸ್ವತಃ ಇಂದ್ರನೇ ಅಳುಕುವಷ್ಟು. 


ಅಸುರಗುರು ಶುಕ್ರಾಚಾರ್ಯರ ಅಶುಭ ಶಕುನವಿದ್ದರೂ ತಾನು ಈಗಾಗಲೇ ಧಾರಣೆ ಮಾಡಿದ್ದರಿಂದ ವೃತ್ರನು ಇಂದ್ರಲೋಕದ ಮೇಲೆ ದಾಳಿ ಮಾಡಿದಾಗ ಅದನ್ನೆದುರಿಸಲಾಗದೆ ಇಂದ್ರ ಸೋತು ಮಿತ್ರನಾಗಿ ನಾನು ನನ್ನ ಪರಿವಾರವೂ ಇರುವೆವು ಎಂದು ಒಪ್ಪಂದ ಮಾಡಿಕೊಂಡು ತನ್ನ ಇಂದ್ರ ಪದವಿಯನ್ನು ಬಿಟ್ಟುಕೊಡುತ್ತಾನೆ. ಇದನ್ನು ವೃತ್ರನು ಒಪ್ಪುತ್ತಾನೆ. 


ದಾಸ್ಯದಲ್ಲಿ ಎಷ್ಟು ದಿನ ಅಂತ ಬದುಕುವುದು? ಚಿಂತಿತನಾದ ಇಂದ್ರನು ಹೇಗಾದರೂ ಮಾಡಿ ವೃತ್ರನನ್ನು ದಹಿಸಿ ತಾನು ಮತ್ತೆ ಇಂದ್ರಪದವಿಯೇರುವ ತವಕ ಆತನನ್ನು ಅನುದಿನವು ಕಾಡುತ್ತಿರುತ್ತದೆ. ಅದೇ ಸಮಯಕ್ಕೆ ಸರಿಯಾಗಿ ವೃತ್ರನ ಇಂದ್ರಪದವಿಯ ವಾರ್ಷಿಕ ಸಮರಂಭವಿರುತ್ತದೆ. ಆ ಸಮಾರಂಭದಲ್ಲಿ ವೃತ್ರನು ಮನಸೋ ಇಚ್ಚೆ ಪಾನಮತ್ತನಾಗಿ ಉನ್ಮತ್ತನಾಗಿರುವಾಗ ಇಂದ್ರನಿಗಾದ ದೈವಪ್ರೇರಣೆಯಿಂದ ತನ್ನ ವಜ್ರಾಯುಧದಿಂದ ವೃತ್ರನನ್ನು ಸಂಹರಿಸುತ್ತಾನೆ. ಅಲ್ಲಿಯೇ ವೃತ್ರನು ಅಸುನೀಗಿದರೂ ಆತನ ಆತ್ಮ ಮಾತ್ರ ಸಾಯದೆ ಭೂತವಾಗಿ ಇಂದ್ರನಿಗೆ ಗೋಚರಿಸಲು, ಅದನ್ನೆದುರಿಸಲಾಗದ ಇಂದ್ರನು ಮೊದಲು ಮಾಡಿದ್ದ ಹತ್ಯೆಯ ಪಾಪವನ್ನು, ಜೊತೆಗೆ ಈಗ ಮಾಡಿರುವ ಹತ್ಯೆಯ ಘೋರತೆಯನ್ನು ಎದುರಿಸಲಾಗದೆ ಯಾರಿಗೂ ಹೇಳದಂತೆ ಕಾಣದಂತೆ ಕಣ್ಮರೆಯಾಗಿಬಿಡುತ್ತಾನೆ. 


ಆಗ ದೇವಗಣವೆಲ್ಲವೂ ಸಭೆ ಸೇರಿ ನಾಪತ್ತೆಯಾಗಿರುವ ಇಂದ್ರನು ಮತ್ತೆ ಮರಳುವವರೆಗೂ ಇಂದ್ರಲೋಕ ಮಾಧ್ಯಮಲೋಕ ಪಾತಾಳಲೋಕವೂ ಸೇರಿ ತ್ರೈಲೋಕ್ಯವೂ ಆಡಳಿತವಿಲ್ಲದೆ ಸೊರಗುವುದು ಬೇಡ ಎಂದು ನಿರ್ಧರಿಸಿ ಎಲ್ಲರೂ ಒಪ್ಪಿ ಇಂದ್ರ ಪದವಿಗೇರುವಂತವನು ಯಾರಾದರೂ ಇರುವನೇ ಎಂದು ನೋಡಲು ಆಗ ಸಿಗುವನೇ ನಹುಷನು.


ನಹುಷನನ್ನು ಒಪ್ಪಿಸಿ ಕಾಣೆಯಾದ ಇಂದ್ರ ಮರಳಿ ಬರುವವರೆಗು ಆತನನ್ನು ಇಂದ್ರನನ್ನಾಗಿ ಆಡಳಿತ ನಡೆಸುವಂತೆ ಕರೆತರಲಾಗುತ್ತದೆ. ನಹುಷನು ಧರ್ಮಿಷ್ಟ, ದಾನಶೌಂಡವ, ನಿತ್ಯಾಗ್ನಿಹೋತ್ರಿ, ಅಸಮಾನ್ಯ ಆಡಳಿತಗಾರ ಎಲ್ಲವೂ ಆಗಿದ್ದನು. ದೇವೇಂದ್ರನಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ತಾನು ಕೇವಲ ಮನುಷ್ಯಗಣದವನು, ಇಂದ್ರಪದವಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ. ಆದರೆ ದೇವಗಣ ಆತನನ್ನು ಒಪ್ಪಿಸಿಕರೆತರುವಲ್ಲಿ ಯಶಸ್ವಿಯಾಗುತ್ತಾರೆ. 


ಅಧಿಕಾರ ಎನ್ನುವುದು ನೀರಿನ ಮೇಲಣ ಗುಳ್ಳೆಯೆಂದರಿತ ನಹುಷನು ಅದರಿಂದ ಮುಕ್ತಿಹೊಂದುವ ಬಗೆ ಚಿಂತಿಸುತ್ತಾನೆ. ಸ್ವತಃ ಇಂದ್ರನ ಪತ್ನಿ ಶಚಿದೇವಿಯ ಮುಖಾಂತರ ಸಪ್ತರ್ಷಿಗಳ ಸಾನಿಧ್ಯದಲ್ಲಿ ಯಾಗ ನಡೆಸಿದರೆ ಮೋಹ ಮತ್ತು ಅಧಿಕಾರದ ಮಾಯೆ ಬಿಟ್ಟುಹೋಗುವುದೆಂದರಿತ ನಹುಷನು ಅದರಂತೆ ಯಾಗ ನಡೆಸುತ್ತಾನೆ. ಈ ಯಾಗವನ್ನು ಮಾಡಿ ವಾನಪ್ರಸ್ಥಮಕ್ಕೆ ಹೋಗುವ ಇರಾದೆ ಆತನದು. ಅದಕ್ಕೂ ಮುನ್ನ ಕಾಣೆಯಾದ ಇಂದ್ರನನ್ನು ಹುಡುಕಿ ಕರೆತಂದು ಆತನಿಗೆ ಇಂದ್ರಪದವಿಯನ್ನು ಮರಳಿಸಬೇಕು ಮತ್ತು ಆತನಿಂದ ಬ್ರಹ್ಮವಿದ್ಯೆಯನ್ನು ಪಡೆಯಬೇಕು ಎಂದು ಬಯಸಿ, ಅಗ್ನಿ ಮತ್ತು ವಾಯುವನ್ನು ಕರೆದು ಅದುವರೆಗು ಯಾರೂ ನೀಡದಂಥಹ ಧೀರೋಧಾತ್ತವಾದ ಆಜ್ಞೆಯನ್ನು ನೀಡಿ ಇಂದ್ರನಿಗೊದಗಿರುವ ವಿಷಮ ಸ್ಥಿತಿಯಿಂದ ಆತನನ್ನು ಹೊರತನ್ನಿ ಎಂದು ಆದೇಶವೀಯಿತ್ತಾನೆ. ಅಗ್ನಿವಾಯುಗಳು ನಹುಷನನ ಮಾತಿಂದ ಉತ್ತೇಜನಗೊಂಡು ಇಂದ್ರನಿಗೊದಗಿದ್ದ ವಿಪತ್ತನ್ನು ನಿವಾರಿಸಿ ದೇವಲೋಕಕ್ಕೆ ಇಂದ್ರನನ್ನು ಕರೆತರುತ್ತಾರೆ. ಆಗ ನಹುಷನು ಅತಿ ವಿನಯ ಮತ್ತು ಸಂಭ್ರಮದಿಂದ ಸ್ವಾಗತಿಸಿ ತನ್ನಿಚ್ಚೆಯನ್ನು ತಿಳಿಸಿ ಮರಳಿ ನೀನೇ ಸ್ವರ್ಗಾಧಿಪತಿಯಾಗು ಎಂದು ಹೇಳುವನು. ನಹುಷನ ವಿನಯವಂತಿಕೆಗೆ ಮನಸೋತ ಇಂದ್ರನು ತಾನು ಮತ್ತೆ ಇಂದ್ರನ ಪಟ್ಟಕ್ಕೆ ಮರಳುವುದಿಲ್ಲ ಎನ್ನುತ್ತಾನೆ. ಆದರೆ ನಹುಷನು ತಾನು ಹಲವು ದಿನಗಳಿಂದ ಪಡೆಯಬೇಕೆಂದುಕೊಂಡಿದ್ದ ಬ್ರಹ್ಮವಿದ್ಯೆಯನ್ನು ವಾಯು, ಯಮ ಮತ್ತು ಇಂದ್ರನಿಂದ ಪಡೆದು ಪುನೀತನಾಗಿ ತರುವಾಯ ಇಂದ್ರನನ್ನು ಯಾಗದ ನಂತರ ತನ್ನ ಸ್ವಸ್ಥಾನಕ್ಕೆ ಮರಳಲು ಒಪ್ಪಿಸಲು ಯಶಸ್ವಿಯಾಗುತ್ತಾನೆ.


ಇತ್ತಕಡೆ ಯಾಗದ ಏಳನೇ ದಿನದ ಮಧ್ಯೆ ನಹುಷನು ಲೋಕವನ್ನು ಸಮಸ್ಥಿಯಲ್ಲಿಡುವ ಗುರುತರ ಜವಾಬ್ದಾರಿಯಿಂದ ಮತ್ತು ಲೋಕಕಲ್ಯಾಣಕ್ಕೋಸ್ಕರ ಬೇಕಂತಲೇ ಗೊತ್ತಿದ್ದೂ ಲೋಪವೆಸಗುತ್ತಾನೆ. ಇದರಿಂದ ಯಾಗ ಅಪೂರ್ಣವಾಗಿ ಆತ ತನಗೆ ತಾನೇ ಶಿಕ್ಷೆಯನ್ನು ವಿಧಿಸಿಕೊಳ್ಳುತ್ತಾನೆ. ತನ್ನ ಅಧಿಕಾರವನ್ನು ಇಂದ್ರನಿಗೊಪ್ಪಿಸಿ ಪತ್ನೀಸಮೇತ ವಾನಪ್ರಸ್ಥಕ್ಕೆ ಹೋಗುವ ಯತ್ನದಲ್ಲಿದ್ದ ನಹುಷನು ಅದು ಈಡೇರದಂತೆ ನೋಡಿಕೊಂಡು ಅಲ್ಲೂ ಸರ್ವಲೋಕ ಹಿತವನ್ನೇ ಬಯಸುತ್ತಾನೆ. ಇದನ್ನೆಲ್ಲಾ ನೋಡಿದ ತ್ರೈಲೋಕ್ಯವು ನಹುಷನು ಕೇವಲ ಕ್ಷತ್ರಿಯನಲ್ಲ, ಎಲ್ಲವನ್ನೂ ತನ್ನ ಸಮಚಿತ್ತದಲ್ಲಿ ಧರ್ಮಬೇಧ ಬರದೆ, ಸಮತೋಲಿಸಿ ಬೇಕಾದರೆ ದೇವತೆಗಳನ್ನೂ ಆಳಬಲ್ಲ ಕ್ಷತ್ರಿಯರಲ್ಲಿ ಕ್ಷತ್ರಿಯ "ಮಹಾಕ್ಷತ್ರಿಯ"ನೆನ್ನುತ್ತದೆ.


ಇದಿಷ್ಟು ಕಥಾಹಂದರ. ಈ ಕಥೆಯಲ್ಲಿ ಹಲವು ಉಪಕಥೆಗಳು, ಪಾತ್ರಗಳು, ಸನ್ನಿವೇಶಗಳು, ಹಿನ್ನೆಲೆ, ವರ್ಣನೆ ಬರುತ್ತವೆ. ಎಲ್ಲವನ್ನೂ ಸರಳ ಶೈಲಿಯಲ್ಲಿ ಅರ್ಥವಾಗುವಂತೆ ಹೇಳಿರುವ ದೇವುಡು ಅವರ ಶೈಲಿ ಅಪ್ರತಿಮವಾಗಿದೆ. ಎಲ್ಲರಿಗೂ ನಮ್ಮ ಪ್ರಾಚೀನ ಸಂಹಿತೆ, ಇತಿಹಾಸ, ಪುರಾಣಪುಣ್ಯ ಕಥೆಗಳು, ಪ್ರಸಂಗಗಳು ಸುಲಭವಾಗಿ ತಲುಪಬೇಕು ಎನ್ನುವುದು ದೇವುಡು ಅವರ ಆಶಯ. ಅವರ ಆಶಯಕ್ಕೆ ತಕ್ಕಂತೆ ಈ ಕಾದಂಬರಿಯನ್ನು ರಚಿಸಿದ್ದಾರೆ. ಈ ಕೃತಿಗಾಗಿ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ನಿಜಕ್ಕೂ ಬೆರಗು ಮೂಡಿಸುವುದೆಂದರೆ ದೇವುಡು ಅವರು ಕಥನವನ್ನು ಹೇಳುವ ಶೈಲಿ. ಎಲ್ಲೂ ಯಾವುದಕ್ಕೂ ಅಗತ್ಯಕ್ಕಿಂತ ಹೆಚ್ವಿನ ಪ್ರಾಶಸ್ತ್ಯವನ್ನು ಕೊಟ್ಟಿಲ್ಲ. ಹೇಳಬೇಕೆನ್ನುವ ಸಂಗತಿಯನ್ನು ಸ್ವಲ್ಪ ಜಾಸ್ತಿಯಾದರು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಯಾವುದನ್ನೂ ವೈಭವಿಕರಿಸಿಲ್ಲ. ಎಲ್ಲವನ್ನೂ ಸಮತೋಲಿಸಿ ಹೇಳಿದ್ದಾರೆ. ಇಂತಹ ಅಪರೂಪದ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿರುವ ದೇವುಡು ಅವರು ಆಕಾಲ ಅಭಿನಂದನಾರ್ಹರು. 


ಮನುಷ್ಯ ಎಲ್ಲಿಂದ ಬಂದನೋ ಅಲ್ಲಿಗೇ ಹಿಂದಿರುಗಬೇಕು ಎನ್ನುವ ಅತಿ ಸೂಕ್ಷ್ಮ ಅಂಶವನ್ನು ತೀವ್ರತರವಾಗಿ ಇದರಲ್ಲಿ ಬಿಂಬಿಸಲಾಗಿದೆ. ಅಧಿಕಾರ ಲಾಲಸೆ ಎನ್ನುವುದು ಯಾರನ್ನು ಎಲ್ಲಿಯೂ ನೆಮ್ಮದಿಯಿಂದ ಇರಲು ಬಿಟ್ಟಿಲ್ಲ ಎಂಬ ಅಂಶವನ್ನು ಎಲ್ಲವನ್ನೂ ಅನುಭವಿಸಿ ಅಧಿಕಾರ ಅಹಂಕಾರಗಳಿಂದ ಮೆರೆಯುತ್ತಿದ್ದ ಇಂದ್ರನನ್ನೂ ಮತ್ತು ಎಲ್ಲವೂ ಇದ್ದು ತನ್ನ ಧಾನಧರ್ಮಗಳಿಂದ ಹೆಸರು ಗಳಿಸಿ ಅಸಮಾನ್ಯ ಎಂದು ಹೆಸರು ಗಳಿಸಿದ್ದ ನಹುಷನನ್ನು ಇಲ್ಲಿ ಸಾಂಕೇತಿಕವಾಗಿಟ್ಟುಕೊಂಡು ಜೀವನದ ಪಾಠ ವೇದಪುರಾಣದಿಂದ ಹೇಳುವ ಕೆಲಸವನ್ನು ದೇವುಡು ಸಂವೇದನಾಶೀಲವಾಗಿ ಮಾಡಿದ್ದಾರೆ. ಅಸಲು, ವೇದಪುರಾಣಗಳಿರುವುದೇ ನಮ್ಮನ್ನು ಸರಿದಾರಿಯಲ್ಲಿ ನಡೆಸಲು ಅಲ್ಲವೇ?


ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್





No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...