Wednesday, September 23, 2015

ನಿರೀಕ್ಷಣೆ.. 

ಕಾವೇರಿಯಮ್ಮನವರು ಉತ್ತರಿ ಹಬ್ಬದ ಮಾರನೆ ದಿನ ನಡೆಯುವ ಶ್ರೀ ಭಗಂಡೇಶ್ವರ ದೇವಸ್ಥಾನದಲ್ಲಿ ಯಜಮಾನರಾದ ಸುಬೇದಾರ್ ಉತ್ತಯ್ಯರ ಜೊತೆ ಅವರ ಜೀವದ ಗೆಳೆಯ ಬೆಳ್ಳಿಯಪ್ಪ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮ್ಮಕ್ಕೆ ಒಲ್ಲದ ಮನಸ್ಸಿನಿಂದ ಹೊರಟರು. ನಿಜ ಹೇಳಬೇಕೆಂದರೆ ಇಬ್ಬರಿಗು ಕಾರ್ಯಕ್ರಮಕ್ಕೆ ಹೋಗುವುದು ಇಷ್ಟವಿರಲಿಲ್ಲ. ಸ್ನೇಹಕ್ಕೆ ಕಟ್ಟುಬಿದ್ದು ಹೊರಡಲೇ ಬೇಕಾಯ್ತು. 


ದಂಪತಿಗಳಿಬ್ಬರು ಬಹುಶಃ ನೆಮ್ಮದಿಯಾಗೇ ಹೋಗುತ್ತಿದ್ದರೇನೋ? ಆದರೆ ನೆಮ್ಮದಿಯಾಗಿ ಹೋಗದ ಹಾಗೆ ಮಾಡಿದ್ದು ಒಂದು ಫೋನ್ ಕಾಲ್!


"ಗಡಿಯಲ್ಲಿ ಇಂಡೋ - ಸೈನಾ ಯುಧ್ಧ ಶುರುವಾಗಿದೆ ಮತ್ತು ನಿಮ್ಮ ಮಗನಿಗೆ ಮಂಜೂರಾಗಿದ್ದ ರಜಾ ರದ್ದಾಗಿ ಆತ ಯುಧ್ಧದಲ್ಲಿ ಪಾಲ್ಗೊಳ್ಳುತ್ತಿದ್ದಾನೆ"
ಇದೇ ಯೋಚನೆಯಲ್ಲಿ ದೇವಸ್ಥಾನಕ್ಕೆ ಹೊಗುವಾಗ ಇಬ್ಬರೂ ಯೋಚಿಸುತ್ತಿದ್ದುದು : "ಮಗ ಕ್ಯಾವಲ್ಲರಿ ವಿಭಾಗದ ಹಿರಿಯ ಅಧಿಕಾರಿ. ಅವನ ಕೈ ಕೆಳಗೆ 30 - 40 ಜನ ಕಿರಿಯ ಸಿಪಾಯಿಗಳು ಕೆಲಸ ಮಾಡುತ್ತಾರೆ. ಜೊತೆಗೆ ಹಿರಿಯ ಅಧಿಕಾರಿಯಾದ್ದರಿಂದ, ಹೊಸದಾಗಿ ಸೇನೆಗೆ ಸೇರುವರಿಗೆ ಅಡೀಷನಲ್ ಟ್ರೈನಿಂಗ್ ಬೇರೆ ಕೊಡಬೇಕು. ಹೀಗಾಗಿ ಬೇರೆಯವರಿಗೆ ಸಿಗುವಷ್ಟು ಸುಲಭವಲ್ಲ ಮಗನಿಗೆ ರಜೆ ಸಿಗೋದು. ಆದರೂ ಹರಸಾಹಸ ಮಾಡಿ ಒಂದು ತಿಂಗಳ ಮಟ್ಟಿಗೆ ರಜೆ ಮಂಜೂರು ಮಾಡಿಸಿಕೊಂಡು ಊರಿಗೆ ಬರುತ್ತಿದ್ದಾನೆ. ಈ ಸಲ ಬಂದರೆ ಮದುವೆ ಮಾಡಿ ಕಳಿಸಬೇಕೆಂದು ತೀರ್ಮಾನಿಸಿ ಹೆಣ್ಣು ನೋಡಿ, ಎಲ್ಲಾ ಮಾತುಕಥೆಯಾಗಿ, ಅವನೂ ಒಪ್ಪಿ,  ಈಗಾಗಲೆ ಮದುವೆ ಕಾರ್ಯಗಳು ಶುರುವಾಗಿವೆ. ಅಷ್ಟರಲ್ಲಿ ಇದೆಲ್ಲಿಂದ ಬಂತು ಈ ಯುಧ್ಧವೆಂಬ ಮಹಾಮಾರಿ" ??


ಒಬ್ಬ ಸೈನಿಕನ ತಂದೆತಾಯಿಯ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ. ಸದಾಕಾಲ ಮಗನ ಚಿಂತೆಯಲ್ಲಿರುತ್ತಾರೆ, ಆತನ ಒಂದು ಪತ್ರಕ್ಕೆ ವರ್ಷ ವರ್ಷ ಕಾಯುತ್ತಾರೆ, ಫೋನ್ ಬಂದರೆ ಅವರಿಗವತ್ತೇ ಹಬ್ಬ. ಅನುಭವಿಸಿದವರಿಗೇನೆ ಗೊತ್ತು ಅದರ ವೇದನೆ. ಮಕ್ಕಳನ್ನು ಭದ್ರವಾಗಿ ಮನೆಯಲ್ಲಿಟ್ಟು ಸಾಕಿ ಜೋಪಾನ ಮಾಡುವರಿಗೆ ಉಹುಂ ಖಂಡಿತ ಇದೆಲ್ಲ ಅರ್ಥವಾಗಲ್ಲ. ಸತ್ತರೆ ವೀರ ಸ್ವರ್ಗ, ದೇಶಕ್ಕೆ ಅರ್ಪಿಸಿದೆವೆಂಬ ನೆಮ್ಮದಿ - ಎರಡೇ ಆ ಸೈನಿಕರ ತಂದೆತಾಯಿಯರಲ್ಲಿ ಉಳಿಯೋದು.


ದೇವಸ್ಥಾನದಲ್ಲಿ ಪೂಜೆ ಶುರುವಾಯಿತು. ಇಬ್ಬರಿಗೂ ಮನಃಪೂರ್ತಿ ಭಾಗವಹಿಸಲಾಗುತ್ತಿಲ್ಲ. ಭಗಂಡೇಶ್ವರನ ಮುಂದೆ ನಿಂತ ಅವರಿಬ್ಬರದು ಒಂದೇ ಪ್ರಾರ್ಥನೆ : " ಮಗ ಯುಧ್ಧದಲ್ಲಿ ಗೆದ್ದು ಬರಲಿ. ಒಂದು ಪಕ್ಷ ಬರಲಾಗದಿದ್ದರೆ,  ಕೊನೆಪಕ್ಷ ತಾಯಿ ಭಾರತಿ ಸೋಲದಿರಲಿ"
ಎಷ್ಟು ತಂದೆತಾಯಿಗಿರುತ್ತದೆ ಈ ಮನೋಸ್ಥೈರ್ಯ!!!


ಆದರೆ ಅಲ್ಲಿ ಯುಧ್ಧಭೂಮಿಯಲ್ಲಿ ಒಂದೂವರೆ ತಿಂಗಳಾಗುತ್ತ ಬಂದಿದ್ದರು, ದಿಟ್ಟ ನಿರ್ಧಾರ, ಮುಂಜಾಗ್ರತ ಕ್ರಮ ಕೈಗೊಳ್ಳದ ನಾಲಾಯಕ್ ನೆಹರು ಸರ್ಕಾರದಿಂದ ಮತ್ತು ಚೀನಿಯರ ಕುತಂತ್ರ ಬುದ್ದಿಯಿಂದ ಗಡಿಯಲ್ಲಿ ನಮ್ಮ ಸೈನಿಕರ ಸಾಲು ಸಾಲು ಹೆಣ ಬೀಳುತ್ತಿದ್ದವು. ಸತ್ತವರಿಗೆ ಲೆಕ್ಕವಿಟ್ಟವರು ಯಾರು? ಅದರಲ್ಲಿ  ನಮ್ಮ ಕಾವೇರಿಯಮ್ಮ ಉತ್ತಯ್ಯನವರ ಮಗನೂ ಇರಬಹುದು!!


ಇತ್ತಕಡೆ ಕಾಲ ಸ್ತಂಭಿಸುತ್ತಿಲ್ಲ.  ಈ ತಂದೆತಾಯಿ ಕ್ಷಣವನ್ನು ಯುಗದಂತೆ ಕಳೆಯುತ್ತಿದ್ದಾರೆ. ಯುಧ್ಧ ಶುರುವಾಗಿ ಎರಡು ಎರಡೂವರೆ ತಿಂಗಳಾಗುತ್ತಾ ಬಂದಿದೆ. ಆದರೆ ಈಗ ಯುಧ್ಧದ ಮಾತಿಲ್ಲ. ಎಲ್ಲಾ ಮೊದಲಿನಂತೆ  ಪರಿಸ್ಥಿತಿ ತಣ್ಣಗಿದೆ. ಇನ್ನೊಂದೆರಡು ತಿಂಗಳು ಕಳೆದರೆ ಜನ ಯುಧ್ಧವನ್ನೆ ಮರೆತುಬಿಡಬಹುದು. ಆದರೆ ನಾವು ಮಗನನ್ನು ಮರೆಯಲಾದೀತೆ? ಹೇಗೆ ಸಾಧ್ಯ! ಯುಧ್ಧ ಶುರುವಿಗು ಮುಂಚೆ ಮಗನ ಬಗ್ಗೆ ಸೇನೆಯಿಂದ ಮಾಹಿತಿ ಬಂದದ್ದಷ್ಟೆ, ಇವತ್ತಿಗು ಈ ಕ್ಷಣಕ್ಕೂ ಬದುಕಿದ್ದಾನೊ ಸತ್ತಿದ್ದಾನೊ ಗೊತ್ತಿಲ್ಲ. ಸೇನೆಯಿಂದಲು ಯಾವುದೇ ಮಾಹಿತಿಯಿಲ್ಲ. ಇದ್ದೊಬ್ಬ ಮಗನನ್ನ ದೇಶಕ್ಕೆ ಅರ್ಪಿಸಿದೆವು, ಮಗ ಮರಳಿ ಬರುವುದಿಲ್ಲ ಎಂದು ಇಬ್ಬರು ಕಣ್ಣೀರಿಡಲಾರಂಬಿಸಿದ ಎರಡು ಮೂರು ದಿನಕ್ಕೆ ಸರಿಯಾಗಿ ಯಾರೋ ಬಾಗಿಲಲ್ಲಿ ನಿಂತು ಕೂಗಿದಂತಾಯ್ತು,


" ಅಮ್ಮಾ!!!"


ತಾಯಿ ಭಾರತಿ ಕೊನೆಗೂ ಗೆದ್ದಿದ್ದಳು.


...........................................................
ಮೋಹನ್ ಕುಮಾರ್ ಡಿ ಎನ್

No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...