Wednesday, September 23, 2015

ಶಿವಾಜಿನಗರಲ್ಲೊಂದು ದಿನ... 
ತಪ್ಪು ನಂದಿದೆಯೋ ಅಥವಾ ಬಸ್ಸಿನದಿದೆಯೋ ತಿಳಿಯುತ್ತಿಲ್ಲ.
ಆವತ್ತು ಶಿವಾಜಿನಗರದಲ್ಲಿ ಇಳಿದು ಎಂ ಜಿ ರೋಡಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದೆ. ಆಫೀಸಿಗೆ ಹೋಗುವ ಧಾವಂತದಲ್ಲಿದ್ದ ನನ್ನ ಮುಂದೆ ಒಬ್ಬ ಹುಡುಗ ಬಂದು ನಿಂತ. ಅವನನ್ನೇ ದಿಟ್ಟಿಸಿ ನೋಡಿದೆ ; ಧರಿಸಿದ್ದ ಬಟ್ಟೆ ಕೊಳೆಯಾಗಿತ್ತು, ಅಲ್ಲಲ್ಲಿ ಹರಿದಿತ್ತು, ಷರ್ಟಿನ ಗುಂಡಿಗಳು ಅದಲು ಬದಲಾಗಿತ್ತು, ನಿಕ್ಕರ್ ಹಾಕಿದ್ದರೂ ಒಂದೆ ಹಾಕದಿದ್ದರೂ ಒಂದೆ ಹಾಗಿತ್ತು ಅದು. ಅದಲ್ಲ ನನ್ನ ಸೆಳೆದಿದ್ದು, ಅವನ ನೋಟ! ಬಿಟ್ಟ ಕಣ್ಣು ಬಿಟ್ಟಂತೆ ನನ್ನನ್ನೇ ನೋಡುತ್ತಿದ್ದ. ನೋಟದಲ್ಲಿ ಬದಲಾವಣೆಯಿಲ್ಲ. ಎಲಾ ಇವನ!! ಹಿಂಗ್ಯಾಕ್ ನೋಡ್ತ್ಯೋ ತಮ್ಮ ಅಂತ ಕೇಳುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತ. ಎಲ್ಲಿಗೆ ಹೋದ ಇವನು ಅಂತ ನೋಡಿದರೆ, ಅಲ್ಲೇ ಪಕ್ಕದಲ್ಲಿದ್ದ ತನ್ನ ಬಳಗಕ್ಕೆ ಓಡಿ ಹೋಗಿ ಸೇರಿದ. ಅಲ್ಲಿ ಅವನಿಗಿಂತಲೂ ಚಿಕ್ಕವರಿದ್ದ ಅವನ ತಮ್ಮ , ತಂಗಿಯಿದ್ದರು ಜೊತೆಯಲ್ಲಿ ಕಾಲು ಊನವಾಗಿದ್ದ ಅವನ ತಾಯಿಯಿದ್ದಳು.
ಹಾಗೆ ಅವನ್ಯಾಕೆ ನನ್ನನೇ ನೋಡುತ್ತಿದ್ದ ಎಂದು ಯೋಚಿಸುತ್ತಿರುವಾಗಲೆ, ಅವನ ತಾಯಿ ಬಳಿಯಿದ್ದ ಚೀಲದಿಂದ ಹಾಲಿನ ಬಾಟಲೊಂದನ್ನು ತೆರೆದು ಮೂರು ಪ್ಲಾಸ್ಟಿಕ್ ಗ್ಲಾಸ್ಗೆ ಇಷ್ಟಿಷ್ಟೇ ತನ್ನ ಮಕ್ಕಳಿಗೆ  ಹಾಕಿಕೊಡ ತೊಡಗಿದಳು. ಬಡತನಕ್ಕೆ ಬಾಯಿ ದೊಡ್ದದಲ್ವೇ? ಆ ಮಕ್ಕಳು ಹಾಲನ್ನು ಕ್ಷಣ ಮಾತ್ರದಲ್ಲಿ ಕುಡಿದು ಗ್ಲಾಸನ್ನು ಆಕೆಯ ಮುಂದಿಟ್ಟು, "ಇನ್ನೊಂಚೂರು" ಎಂಬಂತೆ ನೋಡುತ್ತಿದ್ದವು.ಆಕೆ "ಏಯ್! ಬಾಯ್ಮುಚ್ಚ್ ಇಷ್ಟೆ" ಅನ್ನುತಿದ್ದರೂ ಕೇಳಿಸಿಕೊಳ್ಳದ ಅವು ಒಂದೇ ಸಮನೆ ಅಳಲು ಶುರುವಿಟ್ಟುಕೊಂಡವು.
ತನ್ನ ಮಕ್ಕಳ ಹಸಿವಿನ ಆಕ್ರಂದನ ಆ ತಾಯಿಗೆ ಕೇಳಿಸಲಿರದೇ ಸಾಧ್ಯವೇ? ಖಂಡಿತ ಕೇಳಿಸಿರುತ್ತದೆ. ಪಾಪ ಆಕೆ ತಾನೆ ಏನು ಮಾಡಿಯಾಳು? ತನ್ನ ಅಸಹಾಯಕತೆ ತನ್ನ ಮಕ್ಕಳ ಹಸಿವಿಗೆ ಸ್ಪಂದಿಸಲಿಲ್ಲ,   ದುಡಿದು ತಿನ್ನೋಣವೆಂದರೆ ಅಂಗವಿಕಲತೆ,   ಕೈ ಹಿಡಿದ ಗಂಡ ಮೂರು ಮಕ್ಕಳ ಕರುಣಿಸಿ ಅದೆಲ್ಲಿದ್ದಾನೋ? ಭಿಕ್ಷೆಯೊಂದೆ ನಂಬಿಕೊಂಡಿದ್ದಾಳೆ ಮೂರು ಮಕ್ಕಳ ಹೊಟ್ಟೆ ತುಂಬಿಸಲು. ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ನನಗೆ  ಜೇಬಿಗೆ ಕೈಹಾಕಿ ನನ್ನ ಕೈಲಾದಷ್ಟು ಕೊಡೋಣ ಅಂದು ಮುಂದಾದೆ. ಅಷ್ಟರಲ್ಲಿ ನನ್ನ ಮುಂದೆ ನನಗೇ ಗೊತ್ತಗದ ಹಾಗೆ ನಾನು ಹತ್ತ ಬೇಕಿದ್ದ ಬಸ್ಸು ಬಂದು ನಿಂತಿತ್ತು! ಅಯ್ಯೋ ಪಾಪಿ ಬಸ್ಸೇ!
ಹೇಳಿದೆನೆಲ್ಲ ಆಫೀಸಿನ ಧಾವಂತದಲ್ಲಿದ್ದ ನನಗೆ ತಕ್ಷಣ ಮನಸ್ಸು ಅತ್ತ ಕಡೆ ಹೊರಳಿದಂತಾಗಿ ಬಸ್ಸಿನೆಡೆ ಧಾವಿಸಿದೆ. ಬಸ್ಸು ಹತ್ತಿ ನಿಂತವನ ಮನಸು ಮರಳಿ ಆ ತಾಯಿ ಮಕ್ಕಳ ಬಗ್ಗೆಯೇ ಯೋಚಿಸುತ್ತಿತ್ತು. ಸರಿ ಬಿಡು ಪರ್ವಾಗಿಲ್ಲ ಹೇಗಿದ್ದರು ಅಲ್ಲೇ ಇರುತ್ತಾರೆ, ನಾಳೆ ಕೊಟ್ಟರಾಯ್ತು ಅಂದುಕೊಂಡು ಸುಮ್ಮನಾದೆ.
ಅದಕ್ಕೇ ನಾನು ಮೊದಲೇ ಹೇಳಿದ್ದು : ತಪ್ಪು ನಂದೋ ಬಸ್ಸಿನದೋ ತಿಳಿಯುತ್ತಿಲ್ಲ ಅಂತ, ಯಾಕೆಂದರೆ ಮರು ದಿನ ಮರೆಯದೆ ಹೋಗಿ ಅವರನ್ನು ಹುಡುಕಿದ್ದೇ ಹುಡುಕಿದ್ದು ಅವರು ಮಾತ್ರ ಎಲ್ಲೂ ಪತ್ತೆಯಿಲ್ಲ!
ಬೇಕೂ ಬೇಡವೆಂದರೂ ನೆನ್ನೆ ನನ್ನನ್ನೇ ನೊಡುತ್ತಿದ್ದ ಆ ಹುಡುಗ ನೆನಪಾದ. ಈಗಲು ನನ್ನನ್ನು ನೋಡುತ್ತಿದ್ದಾನೆನಿಸಿತು, ಆ ತಾಯಿ ಮಕ್ಕಳ ಆಕ್ರಂದನ ಕಣ್ಣ್ ಮುಂದೆ ಬಂದಂತಾಗಿ ಅಲ್ಲಿಂದ ಜಾಗ ಬದಲಿಸಿ ಮುಂದೆ ಹೋದೆ.
ಪಾಪಿ ಬಸ್ಸು ಅವತ್ತು ಎಷ್ಟೊತಾದರೂ ಬರಲಿಲ್ಲ.
…..…...........…
ಮೋಹನ್ ಕುಮಾರ್ ಡಿ ಎನ್

No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...