Monday, February 19, 2018

"ವಿಕ್ರಮಾರ್ಜುನ ವಿಜಯ" - ಆದಿಕವಿ ಪಂಪ

ಆದಿಕವಿಯನ್ನು ವಿಶ್ಲೇಷಿಸುವ ಸಾಮರ್ಥ್ಯವಾಗಲಿ, ಆ ಮಟ್ಟದ ಬುದ್ಧಿಮತ್ತೆಯಾಗಲಿ ಅಥವಾ ಪಾಂಡಿತ್ಯ ಪ್ರದರ್ಶನ ಮಾಡುವ ಉದ್ಧಟತನವಾಗಲೀ ಇದಲ್ಲ ಎನ್ನುವ ಭಿನ್ನಹದೊಂದಿಗೆ, ಕೇವಲ ಒಬ್ಬ ಓದುಗನಾಗಿ ನನಗನ್ನಿಸಿದ ಸಂಗತಿಗಳನ್ನಷ್ಟೇ ಅಭಿಪ್ರಾಯ ರೂಪದಲ್ಲಿ ಹಂಚಿಕೊಳ್ಳಬಯಸುವ ಸಣ್ಣ ಕ್ರಿಮಿ ಯತ್ನವಷ್ಟೇ ಇದು. ವಿಷಯ ಮಂಡನೆಯಲ್ಲಿ ಲೋಪದೋಷಗಳಿದ್ದಲ್ಲಿ ಅದು ನನ್ನ ಅಸಮರ್ಥತೆಯಷ್ಟೇ ವಿನಃ ಬೇರೇನಲ್ಲ. ಇಲ್ಲಿ ವ್ಯಕ್ತಪಡಿಸಿರುವ ಅನಿಸಿಕೆಗಳು ಕೇವಲ ನನ್ನವೇ. ತಪ್ಪಿದ್ದಲ್ಲಿ ಹೇಳಿ ಅರಿತುಕೊಳ್ಳುವೆ.

ಹದಿನೆಂಟು ದಿನಗಳ ಕಾಲ ಈ ಪುಣ್ಯ ಭರತ ಭೂಮಿಗಾಗಿ ನಡೆಯುವ ದಾಯಾದಿ ಸಂಗ್ರಹಕ್ಕೆ ಸಂಬಂಧಿಸಿದ್ದು ಇದಾದರೂ, ಈ ಮಹಾನ್ ಗ್ರಂಥಕ್ಕೆ "ವಿಕ್ರಮಾರ್ಜುನ ವಿಜಯ" ಎನ್ನುವ ಹೆಸರು ಹೇಗೆ ಇಟ್ಟಿರಬಹುದೆನ್ನುವುದರ ಕಡೆ ನೋಡೋಣ. ಇದನ್ನು ತಿಳಿಯಬೇಕೆಂದರೆ ಪಂಪನ ಕಾಲಕ್ಕೆ ಹೋಗಬೇಕು. ರಾಷ್ಟ್ರಕೂಟರ ಸಾಮಂತ ರಾಜರುಗಳಲ್ಲಿ ಒಬ್ಬನಾಗಿದ್ದ ಬಾದಾಮಿ ಚಾಲುಕ್ಯ ದೊರೆ ಎರಡನೇ ಅರಿಕೇಸರಿ ಒಬ್ಬ ಅಪ್ರತಿಮ ಶೂರನಾಗಿದ್ದ. ತನ್ನ ಪ್ರಜೆಗಳನ್ನು ಸಕಲ ಸಂಕಷ್ಟದಿಂದಲೂ ಪಾರುಮಾಡಿ ದೇಶವನ್ನು ಸುಸ್ಥಿತಿಯಲ್ಲಿಟ್ಟಿದ್ದ. ಅವನ ಆಸ್ಥಾನದಲ್ಲಿ ಕಲೆ, ಸಾಹಿತ್ಯ, ಸಂಗೀತ, ಶಾಸ್ತ್ರ ಇವೇ ಮುಂತಾದ ಹತ್ತು ಹಲವು ಕಲಾಪ್ರಾಕಾರಗಳು ಉಚ್ಚ್ರಾಯದಲ್ಲಿದ್ದವು. ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸುತ್ತಾ, ತನ್ನ ಅಮೋಘ ರಚನೆಗಳಿಂದ ಎಲ್ಲರ ಗಮನವನ್ನು ಸೆಳೆದು, ಅರಿಕೇಸರಿಯ ಆಸ್ಥಾನದಲ್ಲಿ ಸರಸ್ವತಿಯ ಮಾನಸ ಪುತ್ರರತ್ನದಂತಿದ್ದವನೇ ಆದಿಕವಿ ಪಂಪ. ಗಂಡರಗಂಡ, ಪ್ರಚಂಡ ಪರಾಕ್ರಮಿಯಾದ ಮಹಾಭಾರತದ ಅರ್ಜುನನನ್ನು ತನ್ನ ದೊರೆಯಾದ ಅರಿಕೇಸರಿಗೆ ಹೋಲಿಸಿ ನೋಡುವುದರಿಂದಲೂ, ಇಬ್ಬರಲ್ಲೂ ಒಂದೇ ಶಕ್ತಿಸಾಮರ್ಥ್ಯ, ನಡೆ ನುಡಿ ಆತನಿಗೆ ಭಾಸವಾಗಿರಲು, ತನ್ನ ಅರಸನಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸುತ್ತಾ ತಾನು ಬರೆದ ಮಹಾಭಾರತದ ತನ್ನ ಕೃತಿಗೆ 'ವಿಕ್ರಮಾರ್ಜುನ ವಿಜಯ' ಎಂದು ಹೆಸರಿಟ್ಟು ಇದನ್ನು ತನ್ನರಸನಿಗೆ ಸಮರ್ಪಿಸಿದ್ದಾನೆ ಆದಿಕವಿ.

ಹಳೆಗನ್ನಡದಲ್ಲಿ ರಚಿತವಾಗಿದ್ದ "ವಿಕ್ರಮಾರ್ಜುನ ವಿಜಯ"ನನ್ನು ನಮ್ಮ ಇಂದಿನ ಆಡುಭಾಷೆಗೆ ಎಲ್ಲರೂ ಓದಿ ಅರ್ಥಮಾಡಿಕೊಳ್ಳುವಂತೆ ಸರಳೀಕನ್ನಡೀಕರಿಸಿದ್ದಾರೆ ಹೆಚ್. ವಿ. ಶ್ರೀನಿವಾಸ ಶರ್ಮಾ ಅವರು. ಪ್ರತಿ ಪದ್ಯವೂ ಗದ್ಯಕ್ಕೆ ಅನುವಾದಿಸಿರುವ ರೀತಿ ಅನನ್ಯವಾಗಿದೆ.

ಮಹಾಭಾರತದ ಕಥೆಯು ಹೇಗೆ ಅನಂತ ಮತ್ತು ವಿಸ್ತಾರವುಳ್ಳದ್ದೋ ಹಾಗೆ ಅದನ್ನು ಒಂದೆರೆಡು ಪುಟದಲ್ಲಿ ಹಿಡಿದಿಡುವುದು ಅಷ್ಟೇ ಕಷ್ಟ ಮತ್ತು ಅಸಾಧುವೂ ಆಗಿದೆ. ಆದರೆ ಪಂಪ ರಚಿತ ಭಾರತವನ್ನು ಓದಿದ ಮೇಲೆ ನನಗನ್ನಿಸಿದ ಕೆಲವು ಅನಿಸಿಕೆಗಳು ಇಂತಿವೆ (ಆಕ್ಷೇಪಣೆಯೂ ಅನ್ನಬಹುದು)

* ಆರಂಭದ ಮೊದಲ ಪುಟದಿಂದ ತನ್ನ ಸ್ವಾಮಿ (ಅರಿಕೇಸರಿ) ಅರ್ಥಾತ್ತ್ ಅರ್ಜುನನ ಭಕ್ತಿಯನ್ನು ಅತಿಯಾಗಿ ಮೇಳೈಸಿದ್ದಾನೆ ಪಂಪ.

* ಅರ್ಜುನ ಒಬ್ಬ ಮೇಧಾವಿ, ಸಾಹಸಿ, ಪರಾಕ್ರಮಿ ಮತ್ತು ಮಹಾನ್ ಬಿಲ್ವಿದ್ಯೆ ಪಾರಂಗತ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಅರ್ಜುನನನ್ನು ತನ್ನ ಅರಸ ಅರಿಕೇಸರಿಗೆ ಹೋಲಿಸಿ ನೋಡುವ ಪಂಪ ಆತನೆಡೆಗಿದ್ದ ನಿಷ್ಟೆಯಿಂದಲೋ, ಭಕ್ತಿಯಿಂದಲೋ ಅತೀ ರಂಜಕವೆನಿಸುವಷ್ಟು ಅರ್ಜುನನನ್ನು ಮೇಳೈಸಿ ಬಿಂಬಿಸಿದ್ದಾನೆ. ಸುಮರು 528 ಪುಟದಷ್ಟಿರುವ ಈ ಕೃತಿ ಭಾಗಶಃ ಅರ್ಜುನನ ವರ್ಣನೆಗೇ ಮೀಸಲು! ಅಂದಮಾತ್ರಕ್ಕೆ ಬೇರೆಲ್ಲಾ ಸಂಗತಿಗಳು ಮೂಡಿಲ್ಲ ಎಂದರ್ಥವಲ್ಲ. ಆದರೆ ಕೆಲವೊಂದು ಪಾತ್ರಗಳ ಪೋಷಣೆ ಇರಬೇಕಾದ ಮಟ್ಟಿಗೆ ಕಾಣಸಿಗುವುದಿಲ್ಲ.

*ಅರ್ಜುನನನ್ನು ಮೀರಿಸುವ ಸಾಹಸಿಗಳು ಇದ್ದಾಗ್ಯೂ ಆತನ ವರ್ಣನೆ ಕೆಲವೊಮ್ಮೆ ನೀರಸವೆನಿಸುತ್ತದೆ. ಅತಿಯಾದ ಅರ್ಜುನನ ವರ್ಣನೆ ಕೆಲವೊಮ್ಮೆ ಮಹಾಭಾರತದಲ್ಲಿ ಅರ್ಜುನನನ್ನು ಬಿಟ್ಟರೆ ಮಿಕ್ಕವರೆಲ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಗೋಜಲನ್ನು ಹುಟ್ಟುಹಾಕುವುದರಲ್ಲಿ ಸಂದೇಹವಿಲ್ಲ.

*ಕುರುಪುರೋಹಿತರೆಂದು ಹೆಸರು ಪಡೆದಿದ್ದ ಕಲಿ ಭೀಷ್ಮರ ಪಾತ್ರ ಪೋಷಣೆಯೂ, ಸಾಂಧರ್ಭಿಕ ಚಿತ್ರಣವಾಗಿ ಮೂಡಿಬಂದಿದೆಯೇ ಹೊರತು, ಆ ಪಾತ್ರಕ್ಕೆ ಸಿಗಬೇಕಿದ್ದ ತೂಕಕ್ಕೆ ತಕ್ಕಷ್ಟು ಮೂಡಿಬಂದಿಲ್ಲ. ಗಾಂಗೇಯನ ಘನತೆ, ಆತನ ತ್ಯಾಗ, ಮಲತಾಯಿ ಮಕ್ಕಳ ಪೋಷಣೆ, ತಮ್ಮಂದಿರ ಭವಿಷ್ಯಕ್ಕಾಗಿ ಆತ ಪಡುವ ಪಾಡು ಎಲ್ಲವೂ ಅನನ್ಯ. ಆತ ಬ್ರಹ್ಮಚಾರಿ ಪಟ್ಟವನ್ನು ತನ್ನ ತಂದೆಗೋಸ್ಕರ, ಆತನ ಕೈ ಹಿಡಿಯುವ ಸತ್ಯವತಿಗೋಸ್ಕರ ವಿಸರ್ಜಿಸಿದ್ದಲ್ಲಿ, ಎಲ್ಲಿಯ ಪಾಂಡವರು, ಎಲ್ಲಿಯ ಕೌರವರು? ಯಾರೋ ಇರುತ್ತಿರಲಿಲ್ಲ! ಅಸಲಿಗೆ ಮಾಹಾಭಾರತಕ್ಕಾಗಿ ಮಹಾ ಯುದ್ಧವೇ ನಡೆಯುತ್ತಿರಲಿಲ್ಲ. ಮಹಾಭೂಮಂಡಲ ಅಧಿಪತಿಯಾಗಿ ಆತ ಸಾಮ್ರಾಜ್ಯ ನಡೆಸಬಹುದಿತ್ತು. ಮಾತಿಗೆ ತಪ್ಪದ ಮಗನಾಗಿ ನಿಂತು ಬ್ರಹ್ಮಚಾರಿಯಾಗಿ ನಿಂತು ಇಡೀ ಕುರು ವಂಶವನ್ನೇ ಸಾಕಿ ಸಲಹಿದ ಭೀಷ್ಮ ಮಹಾಭಾರತದಲ್ಲಿ ಒಂದು ಅವಿಸ್ಮರಣೀಯ ಪಾತ್ರವಾಗಿದೆ. ಆದರೆ ಅರ್ಜುನನ ಅತೀ ವಿಜೃಂಭಣೆಯಿಂದ ಸೊರಗಿದೆ.

*ಅರ್ಜುನನ ಆ ಮಟ್ಟದ ಬಿಲ್ವಿದ್ಯೆಗೆ ನೀರೆರೆದು ಪೋಷಿಸಿದವರೇ ಪರಶುರಾಮನಿಂದ ವಿದ್ಯೆ ಕಲಿತ ದ್ರೋಣರು. ತನ್ನ ಪ್ರಿಯ ಶಿಷ್ಯನಿಗೆ ತಮ್ಮ ವಿದ್ಯೆಯನ್ನೆಲ್ಲಾ ಧಾರೆಯೆರೆದರು. ಎಷ್ಟರ ಮಟ್ಟಿಗೆ ಅಂದರೆ ಅರ್ಜುನನನ್ನೂ ಮೀರಿಸುವ ಮಹಾನ್ ಬಿಲ್ವಿದ್ಯೆ ಪಾರಂಗತ ಏಕಲವ್ಯನನ್ನೂ ಅರ್ಜುನನಿಗೋಸ್ಕರ ಬಲಿ ಹಾಕುವ ಮಟ್ಟಿಗೆ. ಅವರಿಲ್ಲದಿದ್ದಲ್ಲಿ, ಶ್ರೀಕೃಷ್ಣನ ಕೃಪಾಶ್ರಯ ಅದು ಬೇರೆಯ ಮಾತು, ಅರ್ಜುನ ನುರಿತ ಬಿಲ್ವಿದ್ಯೆಯವರಲ್ಲಿ ಒಬ್ಬನಾಗಿರುತ್ತಿದ್ದನೇ ಹೊರತು ಕೌರವರ ಸೇನೆಯನ್ನು ಬಗ್ಗು ಬಡಿಯುವಷ್ಟು ಸಮರ್ಥನಾಗುತ್ತಿರಲಿಲ್ಲ. ಅಂತಹ ಮಾಹಾನ್ ಗುರು ಪಾತ್ರ ಪೋಷಣೆಯೂ ಅಷ್ಟೇ ನೀರಸವಾಗಿದೆ. ದೃಪದ ಪ್ರಸಂಗದಲ್ಲಷ್ಟೇ ಅವರ ಪಾತ್ರ ವಿಜೃಂಭಿಸುವುದು ಬಿಟ್ಟರೆ ಮಿಕ್ಕೆಲ್ಲ ಕಡೆಯೂ ಹತ್ತರಲ್ಲಿ ಒಂದು ಎನ್ನುವಂತಿದೆ.

*ಅರ್ಜುನ ಎಷ್ಟು ವೀರನೊ ಅವನಷ್ಟೇ ವೀರ, ಬಾಹುಬಲ ಪರಾಕ್ರಮಿಯಾಗಿದ್ದವನು ಭೀಮ. ಆತ ಮನಸ್ಸು ಮಾಡಿದ್ದಿದ್ದರೆ ಅಂದೇ, ದ್ರೌಪದಿಯ ವಸ್ತ್ರಾಪಹರಣ ನಡೆದಂದೇ, ಸುಯೋಧನನನ್ನು, ದುಶ್ಯಾಸನನನ್ನು ತೊಡೆತಟ್ಟಿಯೇ ಬರಿಗೈಯ್ಯಲ್ಲೇ ಬಗಿದು ರಕ್ತ ಹೀರುತ್ತಿದ್ದ ಭೀಮ. ಅಷ್ಟು ಸಾಹಸಿ ಆತ. ಹಿಡಿಂಬ, ಜರಾಸಂಧರಂತಹ ರಾಕ್ಷಸರನ್ನು ಕೊಂದವನು ಭೀಮ. ರಣರಂಗದಲ್ಲಿ ತನ್ನ ಗದಾಸಾಮರ್ಥದಿಂದಲೇ ಹಲವು ಅಕ್ಷೋಹಿಣಿ ಸೇನೆಯನ್ನು ಬಲಿಹಾಕಿದ ಭೀಮ. ಇಷ್ಟೆಲ್ಲಾ ಮಹದ್ ಸಾಹಸಿಯನ್ನೂ ಮೀರಿ ಅರ್ಜುನನನ್ನು ಹೊಗಳಿ ಅಟ್ಟಕ್ಕೇರಿಸಲಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಕೌರವ ಸೇನೆಯನ್ನು ಮಣ್ಣುಮುಕ್ಕಿಸಬಲ್ಲ ಭೀಮ ಇಲ್ಲಿ ಸಾಂಧರ್ಭಿಕ ಶೂರನಾಗಿ ಚಿತ್ರಿತಗೊಂಡಿರುವುದು ಶೋಚನೀಯ.

*ಆದರೆ ಅತ್ಯಂತ ಹೃದಯವಿದ್ರಾವಕವಾಗಿ ಚಿತ್ರಣಗೊಂಡ ಇನ್ನೊಂದು ಪಾತ್ರವೆಂದರೆ ಸೂತಪುತ್ರ ಕರ್ಣನದು. ಕೇವಲ ಆತನ ಹುಟ್ಟಿನ ಹಿನ್ನೆಲೆ, ಸೂತಪುತ್ರನಾದದ್ದು, ಧುರ್ಯೋಧನನ ಸ್ನೇಹಿತನಾದದ್ದು, ಅಂಗದೇಶದ ಅರಸನಾದದ್ದು ಇಷ್ಟೇನಾ ಕರ್ಣ ಎಂದರೆ? ಆತನ ಸಹನೆ, ತಾಳ್ಮೆ, ಭ್ರಾತೃತ್ವ, ಕರುಣೆ, ಅಂತಃಕರಣ, ಎದೆಯಲ್ಲಿ ಮಡುಗಟ್ಟಿದ ಅಪಾರ ಶೋಕ, ನಿಂದನೆ, ಅವಮಾನ, ಅಪಮಾನ, ಪ್ರೀತಿ, ಸ್ನೇಹ, ತ್ಯಾಗ, ದಾನ..ಇವೆಲ್ಲ ಏನೂ ಅಲ್ಲವೇ? ಬಿಟ್ಟ ಬಾಣ ಮತ್ತೆ ಬಿಡೆನೆಂದು ಕರ್ಣ ಅಂದು ತನ್ನ ತಾಯಿಗೆ ಮಾತು ಕೊಡದಿದ್ದರೆ, ತನ್ನ ವಜ್ರಕರ್ಣಕುಂಡಲವನ್ನು ದಾನ ಮಾಡದೇ ಇರುತ್ತಿದ್ದರೇ, ಯಾವ ಲೆಕ್ಕವಿರುತ್ತಿತ್ತು ಕರ್ಣನಿಗೆ ಪಾಂಡವರನ್ನು ಹೊಡೆದುರುಳಿಸಿ ಬೀಳಿಸಲು? ಆತನ ಸ್ನೇಹ ಮತ್ತು ತ್ಯಾಗಕ್ಕೆ ಸರಿಸಮನಾಗಿ ನಿಲ್ಲಬಲ್ಲ ಒಬ್ಬೇ ಒಬ್ಬನಿದ್ದನೇ ಇಡೀ ಹಸ್ತಿನಾಪುರ ಮತ್ತು ಇಂದ್ರಪ್ರಸ್ಥದಲ್ಲಿ? ಇದ್ಯಾವುದೂ ಬೇಡ ಎಂದು ಬದಿಗಿಟ್ಟರೂ ಕರ್ಣನಿಗಿದ್ದ ಶಕ್ತಿ ಸಾಮರ್ಥ್ಯಕ್ಕೆ, ದಿವ್ಯ ತೇಜಸ್ಸಿಗೆ, ಕ್ಷಾತ್ರ ಹೋರಾಟಕ್ಕೆ, ಯುದ್ಧ ನೈಪುಣ್ಯಕ್ಕೆ ತೊಡೆ ತಟ್ಟಿ ನಿಲ್ಲಬಲ್ಲ ಸಮರ್ಥ ಸಮಬಲ ಯಾರಿದ್ದಾರೆ ಮಹಾಭಾರತದಲ್ಲಿ? ಅರ್ಜುನನನ್ನು ಎದುರಿಸಬಲ್ಲ ಸಮರ್ಥ ಸೇನಾನಿ ಭೀಷ್ಮ ದ್ರೋಣ ಶಲ್ಯ ಅಶ್ವತ್ಥಾಮ ಹೀಗೆ ಹತ್ತು ಹಲವು ಸಮರ್ಥರಿದ್ದರೂ, ಇವರೆಲ್ಲರನ್ನೂ ಒಂದು ಕೈ ಮೀರಿಸುವಂತೆ ಕರ್ಣನಿದ್ದರೂ, ಶ್ರೀಕೃಷ್ಣನ ಕುಟಿಲತೆಗೆ ಬಲಿಯಾದವರು ಧುರ್ಯೋಧನ, ದುಶ್ಯಾಸನ ಶಕುನಿಯಂತಹ ಕ್ಷುದ್ರರಿಗಿಂತ ಅಪ್ರತಿಮ ವೀರರೇ ಹೆಚ್ಚು. ಕರ್ಣನ ಜನ್ಮವೃತ್ತಾಂತದಿಂದ ಆತ ರಣರಂಗದಲ್ಲಿ ಸಾಯುವ ತನಕವೂ ಓದುತ್ತಿದ್ದರೆ ಎದೆಯಲ್ಲಿ ದುಃಖ ಹೆಪ್ಪುಗಟ್ಟಿ ಕಣ್ಣಂಚಲ್ಲಿ ನೀರು ಸ್ಪುರಿಸದಿದ್ದರೆ ಕೇಳಿ? ಅಂತಹ ಮಹಾನ್ ಮಹಿಮನ ವರ್ಣನೆಯೂ ಅರ್ಜುನನ ವಿಜೃಂಭಿಸುವಿಕೆಯಿಂದ ಮಂಕಾಗಿದೆ.

ಇದಿಷ್ಟೇ ನನ್ನ ಆಕ್ಷೇಪಣೆ. ಕೇವಲ ನನ್ನವು. ಇದನ್ನು ಹೊರತುಪಡಿಸಿ ಪಂಪ ರಚಿತ ಭಾರತವನ್ನು ಓದುವುದೇ ಒಂದು ಆನಂದ. ವಿವರಿಸಲಾಗದ, ಅನುಭೂತಿ ಮತ್ತು ಅನುಭವ ನೀಡುವ ಕೃತಿಯಿದು. ಮೊದಲ ಪುಟದಿಂದ ಕೊನೇ ಪುಟದವರೆಗಿನ ಪಂಪನ ಮಹಾಭಾರತದೆಡೆಗಿನ ವರ್ಣನೆಯನ್ನು, ಕಲ್ಪನೆಯನ್ನು ಓದುತ್ತಿದ್ದರೆ ಅದ್ಭುತ ಲೋಕಾನುಭವದ ಜೊತೆ ರಾಸಾನುಭವವೂ ಆಗುತ್ತದೆ. ಅಲಂಕಾರವನ್ನು ಪಂಪ ಬಳಸಿರುವ ರೀತಿ ಹೀಗೂ ಮಾಡಬಹುದೇ? ಎಲ್ಲಾದರೂ ಹೀಗೆ ಇರಲು ಸಾಧ್ಯವೇ? ಎನ್ನಿಸುವಷ್ಟರ ಮಟ್ಟಿಗೆ ಓದುವರನ್ನು ಮೂಕವಿಸ್ಮಿತರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ.

ಸುಮಾರು ಅರ್ಧದಿಂದ ಆರಂಭಗೊಳ್ಳುವ ಯುದ್ಧದ ವಿವರಗಳು ಮತ್ತು ನೀಡಿರುವ ಪರಿಕಲ್ಪನೆಗಳಿಂದ, ಆಹಾ! ಎಂದು ಒಮ್ಮೆ ನಮ್ಮನ್ನು ಹೊಸಲೋಕಕ್ಕೆ ಕೊಂಡೊಯ್ದರೆ, ಮತ್ತೊಮ್ಮೆ ಅಯ್ಯೋ! ಎಂದು ಯುದ್ಧದ ಭೀಕರತೆಯನ್ನು ಕಣ್ಣ್ಮುಂದೆ ತರುತ್ತಾ, ನಡೆದಿದ್ದ ಆ ಕುರುಕ್ಷೇತ್ರದಲ್ಲಿ ನಾವು ಒಬ್ಬ ಕಾಲಾಳೋ, ಕುದುರೆಯವನೋ, ಸೇನಾನಿಯೋ, ಸೈನಿಕನೋ ಅಥವಾ ಯಾವುದಾದರೂ ಒಂದು ಭಾಗವೋ ಎನ್ನುವಂತೆ ಭಾಸವಾಗುವಂತೆ ಮಾಡುತ್ತಾ ಜಿಜ್ಞಾಸೆಯತ್ತ ತಳ್ಳುತ್ತದೆ ಈ ಕೃತಿ.

ಮಹಾಭಾರತವನ್ನು ಸಂಪೂರ್ಣ ಕನ್ನಡದಲ್ಲಿ ಸವಿವರಗಳೊಂದಿಗೆ ಓದಬೇಕೆನ್ನುವ ಆಸಕ್ತರಿಗೆ ಈ ಕೃತಿ ಅತ್ಯಮೂಲ್ಯವಾದುದು.

ಈ ಕೃತಿಯ ಕುರಿತು ಇನ್ನೂ ಹೇಳಲು ಸಾಕಷ್ಟಿದೆ. ಆದರೆ ಅದನ್ನು ಓದಿದ ನನ್ನ ಮನಸ್ಸು ಅದರಿಂದ ಹೊರಬರಲಾಗದೆ ಒಳಗೇ ಗೂಡು ಕಟ್ಟಿಕೊಂಡ ರೇಷ್ಮೆ ಹುಳುವಿನಂತಾಗಿದೆ. ಇಷ್ಟಕ್ಕೆ ಸಾಕು.

ಕೊನೇ ಮಾತು:
ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ ಕೃತಿಯಿದು. ನಾನೂ ಒಬ್ಬ ಕನ್ನಡಿಗ ಎಂದು ಈ ಕೃತಿಯನ್ನು ಓದದೇ ಹೇಳುವುದರಲ್ಲಿ, ಉಹುಂ, ಯಾಕೋ ಅರ್ಥವಿಲ್ಲ ಎಂದೆನಿಸಿದೆ.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ




No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...