Monday, February 19, 2018

ಅವರ್ನ ಬಿಟ್ಟ್ ಇವರ್ನ ಬಿಟ್ಟ್ ಅವರ್ಯಾರು? ನಂಬರ್ ವನ್
ಒಂದು ದೃಷ್ಟಾಂತ:
ಒಂದು ಮದುವೆ ಮನೆ. ಅಲ್ಲಿ ಊಟಕ್ಕೆ ಕಾದಿದ್ದ ಎ ಅವನ ಪಕ್ಕದಲ್ಲಿ ಬಿ. ತಾಳಿಕಟ್ಟಿದ ಮೇಲೆ ಊಟಕ್ಕೆ ಎದ್ದರು. ಇಬ್ಬರಿಗೂ ತಿನ್ನುವ ಚಪಲ. ಇವರ ಮುಂದೆ ಊಟಕ್ಕೆಂದೇ ಕಾದಿದ್ದ, ಇವರಂತೆಯೇ ಇದ್ದ ಹಲವರು. ಊಟಕ್ಕೆಂದು ನಿಂತಿದ್ದವರು ಆ ಪಾಟಿ ಜನವನ್ನು ನೋಡಿ ನಮಗೆ ಊಟ ಸಿಕ್ಕೀತೇ? ಎಂದು ಅನುಮಾನಗೊಂಡರು. ಎ ಬುದ್ಧಿವಂತ. ಅಲ್ಲಿದ್ದವರ ಬಳಿ, "ನನಗೆ ಸ್ವಲ್ಪ ಸುಸ್ತು. ಬಾಯಾರಿಕೆಯಾಗುತ್ತಿದೆ" ಅಂದ. ಇದನ್ನು ಕೇಳಿದ ಕೆಲವರು ಇವನನ್ನು ಮುಂದೆ ಕಳುಹಿಸಿ ಎಂದರು. ಬಿ ಗೆ ಇದನ್ನು ನೋಡಿ ಉರಿ ಶುರುವಾಯ್ತು. ಅವನಿಗಿಂತ ನಾನೇನೂ ಕಡಿಮೆಯಿಲ್ಲ ಎಂದುಕೊಂಡು, "ಅಯ್ಯೋ! ಬಿದ್ದೆ. ತಲೆ ತಿರುಗುತ್ತಿದೆ. ನೀರು..ನೀರು" ಎಂದ. ಅಲ್ಲಿದ್ದವರು ಕಂಗಾಲಾಗಿ ಇವನನ್ನು ಮುಂದೆ ಬಿಡಿ, ಪಾಪ ತಲೆತಿರುಗುತ್ತಿದೆ ಅಂದರು. ಮುಂದೆ ಮುಂದೆ ಜಾಗ ಮಾಡಿಕೊಂಡು ಹೋಗುತ್ತಿದ್ದ ಎ ನನ್ನೂ ಮೀರಿಸಿ ಬಿ ಮುಂದೆ ಹೋದ. ಇಬ್ಬರಿಗೂ ಎದುರು ಬದುರು ಸಾಲಿನಲ್ಲಿ ಜಾಗ ಸಿಕ್ಕಿತು. ಒಬ್ಬರನ್ನೊಬ್ಬರು ಮುಸಿಮುಸಿ ನೋಡಿದರು. ನೋಡುತ್ತಲೇ ತಿಂದರು. ಇದನ್ನೆಲ್ಲಾ ನೋಡಿದ ಅಲ್ಲಿದ್ದ ಹಿರಿಯರಿಗೆಲ್ಲಾ ಅಸಹ್ಯ ಎನಿಸಿತು. ನಾವು ಮಾಡಿದ್ದು ತಪ್ಪೆನಿಸಿತು. ಆದರೆ ಇದ್ಯಾವುದನ್ನೂ ಗಮನಿಸದ ಎ ಮತ್ತು ಬಿ ತಮಗೆ ಬೇಕಾದ್ದು ಹಾಕಿಸಿಕೊಂಡು ತಿಂದುಂಡು ಹೋದರು.

ಇದನ್ನೇ ಸ್ವಲ್ಪ ಹೀಗೆ ಬದಲಿಸೋಣ. ಒಂದು ದೇಶದ ಆಧಾರಸ್ತಂಭದಲ್ಲಿ ಮಾಧ್ಯಮದವರದು ಬಹುಪಾಲು. ಅದರಲ್ಲೂ ಮಾಹಿತಿ ಮತ್ತು ತಂತ್ರಜ್ಞಾನ ಬೆಳೆದ ಮೇಲಂತೂ ಅವರು ಎಲ್ಲರನ್ನೂ, ಎಲ್ಲವನ್ನೂ ಮೀರಿ ಬೆಳೆದ ಪರಿಯೇ ಅದ್ಭುತ. ಒಂದು ದಿನಪತ್ರಿಕೆ ಓದಿ ತಿಳಿದುಕೊಳ್ಳುವುದಕ್ಕಿಂತಲೂ ಅರ್ಧ ಗಂಟೆ ನ್ಯೂಸ್ ನೋಡಿ ತಿಳಿಯುವುದು ಹೆಚ್ಚು. ಯಾಕೆಂದರೆ ಅದು ದೃಶ್ಯ ಮಾಧ್ಯಮ. ಅಕ್ಷರ ಮಾಧ್ಯಮಕ್ಕಿಂತ ದೃಶ್ಯ ಮಾಧ್ಯಮದ ಪ್ರಭಾವ ಹೆಚ್ಚು. ಒಂದು ವರದಿಯನ್ನು ಬರೆದು ಹೇಳಿ ನಾವದನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕಿಂತಲೂ ಅದೇ ವರದಿಯನ್ನು ದೃಶ್ಯದ ಮುಖಾಂತರ ಈವತ್ತು ಜನರಿಗೆ ಪ್ರಸ್ತುತ ಪಡಿಸುವುದು ಸುಲಭ. ಎಲ್ಲವೂ ಟಿ ಆರ್ ಪಿ ಎನ್ನುವ ಅಗೋಚರ ಭೂತದ ಕುಣಿತಕ್ಕೆ ತಾಳ ಹಾಕುವ ಮಾಧ್ಯಮಗಳು ನಂಬರ್ ವನ್ ಸ್ಥಾನದ ಪ್ರತಿಫಲಾಕಾಂಕ್ಷಿಗಳೇ. ಇಲ್ಲಿ ಎ ಮತ್ತು ಬಿ ಮಾತ್ರ ಇಲ್ಲ. ಅಸಹ್ಯವಾಗಿ ಊಟ ತಿನ್ನುವ ಅಸಂಖ್ಯಾತ ಮಂದಿಯಿದ್ದಾರೆ.

ತಾನು ಬಿತ್ತರಿಸುವ ವರದಿಯ ಕನಿಷ್ಠ ಸತ್ಯಾಸತ್ಯತೆಯನ್ನೂ ಪರೀಕ್ಷಿಸದೇ ಅದೆಷ್ಟೋ ಕಾರ್ಯಕ್ರಮಗಳನ್ನು ನೋಡುವ ದುರ್ಭರ ಸ್ಥಿತಿಯಲ್ಲಿಂದು ನಾವಿದ್ದೀವಿ. ಪ್ರಸಾರ ಆಗುತ್ತಿರುವ ಕಾರ್ಯಕ್ರಮ ಸಾಧುವಲ್ಲ, ಸತ್ಯಾನುಚಿತವಾಗಿಲ್ಲ ಎಂದು ನೋಡುಗರಿಗೆ ತಿಳಿದಿದ್ದರೂ ಮೌನವಾಗಿ ಅದನ್ನು ನೋಡಬೇಕು ಇಲ್ಲವೇ ಅದೇ ರೀತಿ ಇನ್ನೊಂದು ಕಾರ್ಯಕ್ರಮ ಬಿತ್ತರಿಸುವ ಚಾನೆಲ್ಲ್ ಗೆ ಬದಲಾಗಬೇಕಾದ ಕರ್ಮ.
ಹೀಗೇಕಾಗುತ್ತದೆಂದರೆ ನಮ್ಮ ನ್ಯೂಸ್ ಚಾನೆಲ್ಲ್ಗಳಿಗೆ ಕಾರ್ಯಕ್ರಮದ ಸತ್ಯ ನಿಷ್ಟತೆ, ವಾಸ್ತವಾಂಶ ಮತ್ತು ಕ್ವಾಲಿಟಿಗಿಂತ ಸದಾ ಬಿಸಿ ಬಿಸಿಯಾದ ಮತ್ತು ಉದ್ರೇಕಕಾರಿ ವರದಿಗಳೇ ವಾರದ ರೇಸಿನಲ್ಲಿ ಅವರನ್ನು ಹಿಂದಕ್ಕೂ ಮುಂದಕ್ಕೂ ತಳ್ಳುವುದು ಮಾಡುತ್ತಿರುತ್ತದೆ. ರೇಸಿಗೆ ಬಿದ್ದವ ರೇಜಿಗೆಗೆ ಬೀಳುತ್ತಾನೆ. ಕಾರ್ಯಕ್ರಮ ಹಳ್ಳ ಹಿಡಿಯುತ್ತೆ. ಈ ರೀತಿ ಬಿಸಿಬಿಸಿ ಮತ್ತು ಉದ್ರೇಕಯುಕ್ತ ಕಾರ್ಯಕ್ರಮಗಳನ್ನು ನೋಡುವ ಸಮೂಹವೇ ಇದೆ ಎಂದರೆ ನೀವು ನಂಬಲಿಕ್ಕಿಲ್ಲ.

ಎಲ್ಲಿ ಅದೇ ಜಾಗದಲ್ಲಿ ಒಂದು ಸಾಹಿತಿಯನ್ನೋ, ಕವಿಯನ್ನೋ, ಮಕ್ಕಳ ಸಂಬಂಧಿತ ಕಾರ್ಯಕ್ರಮವನ್ನೋ, ಶಿಕ್ಷಣ ಆಧಾರಿತ ಮಾಹಿತಿಯನ್ನೋ, ಸತ್ಯನಿಷ್ಠುರ ವರದಿಗಳನ್ನೋ ಬಿತ್ತರಿಸಲಿ ನೋಡೋಣ? ಮಂಜು ಕರಗಿದಂತೆ ಟಿ ಆರ್ ಪಿ ಇಳಿಯುತ್ತದೆ.

ಇದಕ್ಕೆ ಕಲಶಪ್ರಾಯವಿಟ್ಟಂತೆ ಒಂದು ಚಾನೆಲ್ಲಿಗೂ ಇನ್ನೊಂದಕ್ಕೂ ಪರಸ್ಪರ ಮತ್ತು ವೈಯುಕ್ತಿಕ ಶೀತಲ ಸಮರ ಬೇರೆ ಸದಾ ಜೀವಂತವಾಗಿರುತ್ತದೆ. ನೀನು ಇಂತಿಂಥದ್ದನ್ನು ಪ್ರಸಾರ ಮಾಡಿದೆಯಾ? ತಗೋ ನನ್ನದೂ ಹೀಗ್ಹೀಗೆ ನಿನ್ನ ಕಾರ್ಯಕ್ರಮವನ್ನೂ ಮೀರಿಸುವ ಮಸಾಲೆಯಿದೆ ಎನ್ನುವಂತೆ ಬಿತ್ತರಿಸುತ್ತಾರೆ. ವೀಕ್ಷಕರು ಪುಣ್ಯ ಮಾಡಿರಬೇಕು.

ಚಾನೆಲ್ಲ್ ನಡೆಯಲು ಕಾರ್ಯಕ್ರಮದ ಮಧ್ಯೆ ಬರುವ ಜಾಹೀರಾತು ಮುಖ್ಯ ಪಾತ್ರ ವಹಿಸುತ್ತದೆ. ಇದೇ ಒಂದು ಚಾನೆಲ್ಲಿನ ಬಂಡವಾಳ. ಆ ಜಾಹೀರಾತು ಪಡೆಯಲು ಚಾನೆಲ್ಲಿನವರು ಇನ್ನೊಂದು ಚಾನೆಲ್ಲಿನವರ ಮೇಲೆ ನಡೆಸುವ ವಾಕ್ಕ್ ಗದಾಪ್ರಹಾರ, ಒಳಪಿತೂರಿ ಕೆಲವೊಮ್ಮೆ ಬಹಿರಂಗ ವೇದಿಕೆಗೂ ಬಂದು ನಗೆಪಾಟಲಿಗೆ ಗುರಿಯಾದದ್ದುಂಟು. ಕೆಲವೊಮ್ಮೆ ಅಸಹ್ಯಕ್ಕೂ ಅಸಹ್ಯವಾಗುವಂತೆ ವರ್ತಿಸಿದ್ದೂ ಇದೆ.

ಚಾನೆಲ್ಲ್ ನಡೆಸಲು ಇನ್ನೊಂದು ಪ್ರಮುಖ ಆಧಾರವೆಂದರೆ ರಾಜಕೀಯ ಪಕ್ಷಗಳು. ಒಂದೊಂದು ಚಾನೆಲ್ಲ್ ಒಂದೊಂದು ಪಕ್ಷಕ್ಕೆ ಮಾರಿಕೊಂಡಿವೆಯೇನೋ ಅನ್ನಿಸುವಂತೆ, ಸ್ವಹಿತಾಸಕ್ತಿ ಪ್ರದರ್ಶಿಸುತ್ತಾ ಎದುರಿನ ಪಕ್ಷದವರ ಅಕ್ರಮವನ್ನು ಬಯಲಿಗೆಳೆಯುವುದರಲ್ಲಿ ಸದಾ ನಿರತರಾಗಿರುತ್ತಾರೆ.

ಸತ್ಯನಿಷ್ಠುರ ವರದಿ ಮಾಡುವ ವರದಿಗಾರರನ್ನು ಯಾವುದೇ ಮುಲಾಜಿಲ್ಲದೆ ಪಿಂಕ್ ಸ್ಲಿಪ್ ಕೊಟ್ಟು ಮನೆಗೆ ಕಳುಹಿಸುವ ಮಾಧ್ಯಮ, ಘಟನೆಗಳ ವೈಭವೀಕರಣ ಮಾಡಿ, ರೋಚಕತೆ ಸೃಷ್ಟಿಸುವರಿಗೆ ಮಾತ್ರ ಮಣೆ ಹಾಕುತ್ತಿರುವುದು ದುರಂತ. ಇದಕ್ಕೆ ತಾಜಾ ಉದಾಹರಣೆ 'ಇಂಡಿಯಾ ಟುಡೇ" ಇತ್ತೀಚೆಗೆ ತನ್ನ ಉದ್ಯೋಗಿಯನ್ನು ಹೇಳದೆ ಕೇಳದೆ ಮನೆಗೆ ಕಳುಹಿಸಿದ್ದು. ಆಕೆ ಮಾಡಿದ್ದ ತಪ್ಪಾದರೂ ಏನು? ಆಕೆ ತನ್ನ ಟ್ವಿಟ್ಟರ್ನಲ್ಲಿ "ಸತ್ಯನಿಷ್ಠುರ ವರದಿಯನ್ನು ಪ್ರಕಟಿಸುವ ಜವಾಬ್ದಾರಿ ಮಾಧ್ಯಮಕ್ಕೆ ಹಿಂದೆಂದಿಗಿಂತಲೂ ಈಗ ಹೆಚ್ಚು ಬೇಕಾಗಿದೆ. ಸುಳ್ಳು ವರದಿ ಪ್ರಕಟಿಸಿ ಮುಂದೆಂದೋ ಕ್ಷಮೆ ಯಾಚಿಸುವ ಸಂಪ್ರದಾಯ ಒಳ್ಳೆಯದಲ್ಲ" ಎಂದು ಬರೆದುಕೊಂಡಿದ್ದರು.

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡುವಂತೆ, ಕೇವಲ ಆಕೆಯ ಟ್ವಿಟ್ಟರ್ ಪೋಸ್ಟನ್ನೇ ಆಧಾರವಾಗಿಟ್ಟುಕೊಂಡು ಆಕೆಯನ್ನು ಕೆಲಸದಿಂದ ವಜಾ ಮಾಡಿದರು. ನಮ್ಮ ಸಂಸ್ಥೆ ಈ ರೀತಿ ಟ್ವೀಟ್ ಮಾಡುವುದನ್ನು ಸಹಿಸುವುದಿಲ್ಲ. ನಮಗೆ ನಮ್ಮದೇ ಆದ ಸಾಮಾಜಿಕ ಜವಾಬ್ದಾರಿಗಳಿವೆ. ಕೋಡ್ ಆಫ್ ಕಂಡಕ್ಟ್ ಇದೆ ಎಂದು ಬಾಲಿಶ ಹೇಳಿಕೆ ಕೊಟ್ಟರು. ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳಾದವು.

ಏನೇ ಆದರೂ ಸಮಾಜದ ಸ್ವಾಸ್ಥ್ಯ ಕಾಯಬೇಕಿದ್ದ ಮಾಧ್ಯಮಗಳು ಇಂದು ತಮ್ಮ ಕೊಳಕು ಸಂಸ್ಕೃತಿಯನ್ನು ಪ್ರದರ್ಶಿಸುತ್ತಾ, ರಾಜಕೀಯ ಪ್ರೇರಿತರಾಗಿ ತಮ್ಮನ್ನು ಒತ್ತೆಯಿಟ್ಟುಕೊಂಡು, ಒಬ್ಬರ ಮೇಲೊಬ್ಬರು ಕೇಸರೆರಚಿಕೊಳ್ಳುತ್ತಾ, ಟಿ ಆರ್ ಪಿ ಗಾಗಿ ಪೈಪೋಟಿ ನಡೆಸುತ್ತಾ, ನಂಬರ್ ಒನ್ ಸ್ಥಾನಕ್ಕಾಗಿ ಅಸಹ್ಯವನ್ನು ಸೃಷ್ಟಿಸುತ್ತಾ, ಉಳ್ಳವರನ್ನು ಪೋಷಿಸುತ್ತಲೂ ತಮ್ಮ ಮೂಲ ಆಶಯವನ್ನೇ ಮರೆತಿರುವುದು ನಮ್ಮ ಸಮಾಜದ ದುರಂತವೇ ಸರಿ.


No comments:

"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...