Tuesday, August 29, 2017

"ತೆಂಕನಿಡಿಯೂರಿನ ಕುಳುವಾರಿಗಳು" 



ಒಂದೂರಿನ ಒಂದಿಷ್ಟು ಜನರ ಕುರಿತು..


ಅತ್ಯಂತ ಸಮಗ್ರ ದೃಷ್ಟಿ ಚಿತ್ತಕೋನ ಇರುವರು ಮಾತ್ರ ತನ್ನ ಸುತ್ತಮುತ್ತಲ ಪರಿಸರದ ಬಗ್ಗೆ ಆದ್ಯಂತವಾಗಿ ಬರೆಯಲು ಸಾಧ್ಯವಾದೀತು, ಇಲ್ಲದೆ ಹೋದರೆ ಓದುವವರಿಗದು ಅಪಥ್ಯವಾಗುವುದು ಮಾತ್ರವಲ್ಲದೇ ಲೇಖಕನ ದೃಷ್ಟಿಕೋನದ ಬಗ್ಗೆ ಅನುಮಾನ ಮತ್ತು ಅಪಸ್ವರ ಬರುವುದು ನಿಸ್ಸಂಶಯ. ಏನು ಮತ್ತು ಎಷ್ಟು ಅಂತ ನಮ್ಮ ಸುತ್ತಮುತ್ತಲ ಪರಿಸರ, ಅದರ ಚಿತ್ರಣ, ಜನರ ಜೀವನ, ಅವರ ದಿನಚರಿ ಬಗ್ಗೆ ಬರೆಯಲು ಸಾಧ್ಯ ಹೇಳಿ? ಇದು ನಾವು ತಿಳಿದಂತೆ ಅಷ್ಟು ಸುಲಭ ಸಾಧ್ಯವಲ್ಲ. ಈಗಾಗಲೇ ಈ ವಿಷಯ...ವನ್ನು ಕನ್ನಡದ ಹೆಚ್ಚು ಕಡಿಮೆ ಎಲ್ಲಾ ಸಾಹಿತಿಯೂ, ಲೇಖಕರು ಆದಷ್ಟು ತಮ್ಮ ಕೃತಿಗಳಲ್ಲಿ ಬರೆದದ್ದಾಗಿದೆ. ಒಂದು ಕಥೆಯೋ, ಕಾದಂಬರಿಯೋ, ನೀಳ್ಗವಿತೆಯೋ ಅಥವಾ ಹಲವು ಪ್ರಾಕಾರದ ಸಾಹಿತ್ಯ ರೂಪಕಗಳಲ್ಲಿ ಬರೆಯುವುದು ಕೇವಲ ತನ್ನ ಶಕ್ತಿಸಾಮರ್ಥ್ಯದಿಂದ ಮತ್ತು ದ್ಯೋತಕಶಕ್ತಿಯಾದ ತನ್ನ ಆಲೋಚನಾಲಹರಿಯಿಂದ ಮಾತ್ರ ಸಾಧ್ಯ. ಮತ್ತು ಈ ಪ್ರಾಕಾರಗಳಲ್ಲಿ ಲೇಖಕನ ಆಲೋಚನೆಗಳಿಗನುಗುಣವಾಗಿ ಕಥೆಯ ಹಂದರ ಮತ್ತು ಪಾತ್ರಗಳ ಏರಿಳಿತವಾಗುತ್ತದೆ. ಆದರೆ ತನ್ನ ಸುತ್ತಮುತ್ತಣ ಜೀವಂತ ವ್ಯಕ್ತಿಚಿತ್ರಣ, ಅಲ್ಲಿ ನಡೆಯುವ ನೈಜ್ಯ ಘಟನೆ ಕುರಿತು ಬರೆಯುವುದು ಎಂದರೆ ಎಂಥಹವರಿಗೂ ಹದಿನಾರಿಂಚಿನ ಗುಂಡಿಗೆ ಬೇಕಾಗುತ್ತದೆ! ಈ ರೀತಿ ಇದ್ದದ್ದನ್ನು ಇದ್ದ ಹಾಗೆ ಹೇಳಿ, ತನ್ನ ಅನುಭವಕ್ಕೆ ಬಂದ ವ್ಯಕ್ತಿಗಳನ್ನು, ಅವರ ವ್ಯಕ್ತಿತ್ವವನ್ನು ಅಕ್ಷರರೂಪಕ್ಕಿಳಿಸಿದ ಕೀರ್ತಿ ನಮಗೆ ತಿಳಿದಂತೆ ಕುವೆಂಪು, ಕಾರಂತ, ಲಂಕೇಶ್, ತೇಜಸ್ವಿಯಂತ ಕೆಲವೇ ಕೆಲವು ನಿಷ್ಠುರವಾದಿಗಳಿಗಿತ್ತಾದರೂ ಆ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಲೇಖಕರೆಂದರೆ ವ್ಯಾಸರಾವ್ ನಿಂಜೂರ್! 

ಯಾವುದೇ ಪೂರ್ವಾಗ್ರಹಪೀಡಿತನಾಗದೆ, ಮುಲಾಜಿಗೆ ಬೀಳದೆ ತಾನು ಹುಟ್ಟಿ ಬೆಳೆದ ಊರಾದ ತೆಂಕನಿಡಿಯೂರಿನ ಜನರ ಜೀವಂತ ಚಿತ್ರಣವನ್ನು ನಿರ್ಭಿಡೆಯಿಂದ ಚಿತ್ರಿಸಿಕೊಡುವುದಲ್ಲದೇ, ಹಲವು ವಿಶೇಷ ವ್ಯಕ್ತಿಗಳ ನೈಜ್ಯ ಪರಿಚಯ ಮತ್ತವರ ಸಂಪೂರ್ಣ ವ್ಯಕ್ತಿತ್ವವನ್ನು ಎಳೆಎಳೆಯಾಗಿ ತೆರೆದಿಡುತ್ತಾ ಹೋಗುತ್ತಾರೆ. ಓದುತ್ತಾಹೋದಂತೆ ಓದುಗನಿಗೆ ಎಲ್ಲೂ ಕೃತ್ರಿಮವಾಗಲೀ, ಸ್ವಜನಪಕ್ಷಪಾತವಾಗಲಿ, ಭಿಡೆಗೆ ಬಿದ್ದಂತೆ ಅನಿಸದೆ ಪಾತ್ರಗಳನ್ನು ಸಮತೋಲಿಸಿ ಸಂಭಾಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ವಾಸ್ತವ ಚಿತ್ರಣ ಕಟ್ಟಿಕೊಡುವ ಕಾದಂಬರಿಯೋ ಅಥವಾ ಕಾಲ್ಪನಿಕವೋ ಎಂದು ಓದುಗರು ಗೊಂದಲಕ್ಕೆ ಬಿದ್ದರೆ ಅದು ಓದುಗರ ಚ್ಯುತಿಯಾದೀತೆ ಹೊರತು ನಿಂಜೂರರ ಸಹಜ ಬರವಣಿಗೆಯ ಕುರಿತ ಆಕ್ಷೇಪವಾಗುವುದಿಲ್ಲ, ಅಷ್ಟು ಸೊಗಸಾಗಿ ನಿರೂಪಿಸಿದ್ದಾರೆ ಕಥಾನಕವನ್ನು. ನನಗೆ ತಿಳಿದಮಟ್ಟಿಗೆ, ಜೀವಂತ ವ್ಯಕ್ತಿ ಬಂದು ತನ್ನ ಪಾತ್ರವನ್ನು ನಿಮ್ಮ ಕಥೆಯಲ್ಲಿ ಕಟ್ಟಿಕೊಡುವಿರಾ? ಎಂದು ಒಬ್ಬ ಲೇಖಕನನ್ನು ಕೇಳಿ ಆತನಿಂದ ತನ್ನ ಬಗ್ಗೆ ಬರೆಸಿಕೊಂಡ ಏಕೈಕ ಕೃತಿ ಎಂದರೆ ಇದೇ ಇರಬೇಕು ಎನಿಸುತ್ತದೆ!

ಇಡೀ ಕಾದಂಬರಿಯ ಇನ್ನೊಂದು ಮಹತ್ವ ಅಂಶವೆಂದರೆ ಇದನ್ನು ತನ್ನ ಆಡು ಭಾಷೆಯಲ್ಲೇ ಬರೆದಿರುವುದು. ನಾವು ನೀವು ಅಷ್ಟಾಗಿ ಕೇಳಿರದ ಕರಾವಳಿ ಜನರ ಹಲವು ಹೊಸ ಪದಗಳು ಹದವಾಗಿ ಬೆಸೆದುಕೊಂಡು ಇಡೀ ಕಾದಂಬರಿಗೆ ಅವರ್ಣನೀಯ ಸೌಂದರ್ಯ ಕಲ್ಪಿಸಿಕೊಟ್ಟಿದೆ. ಓದುವಾಗ ಹೊಸಚೈತನ್ಯವಿತ್ತು, ಪದಗಳ ಪರಿಮಳ ಓದುಗನನ್ನು ಆವರಿಸದಿದ್ದರೆ ನೋಡಿ! ಮೂಲಭೂತವಾಗಿ ಬಯಲುಸೀಮೆಯ ಜನ ನಾವಾದ್ದರಿಂದ ಕರಾವಳಿಯ ಗ್ರಾಮ್ಯ ಸೊಗಡಿನ ಭಾಷೆ ನಮಗೆ ಸದಾ ಕೇಳಿ ಸಂಭ್ರಮಿಸುವಂತದ್ದೇ ಆಗಿರುತ್ತದೆ. ಎಲ್ಲಾ ಭಾಷೆಗೂ, ಅದರ ನುಡಿಗೂ (ಮಾತಾಡುವ ಅರ್ಥದಲ್ಲಿ) ಅದರದ್ದೇ ಆದ ಚಂದವಿರುತ್ತದೆ, ಲಯಬದ್ಧತೆಯಿರುತ್ತದೆ. ಆದರೆ ಮಲೆನಾಡು ಮತ್ತು ಕರಾವಳಿ ಜನರ ಭಾಷೆ ನಮಗೆ ಸದಾ ಕೌತುಕಾಸಕ್ತಿ ಬೆರೆತ ಬೆರಗು ಮೂಡಿಸುವುದು ಅತಿಶಯೋಕ್ತಿಯೇನಲ್ಲ. 

ಕಥೆಗೆ ಗಟ್ಟಿತನ ಬರುವುದು ತಾನು ಹುಟ್ಟಿಬೆಳೆದ ಊರಿನ ವಾಸ್ತವ ಚಿತ್ರಣಕ್ಕೆ ನಿಂಜೂರರು ದೂರದ ಮುಂಬೈನ ಚಿತ್ರಣವನ್ನು ತಂದಿರುವುದಲ್ಲದೆ ಅದರ ವಾಸ್ತವಿಕ ಚಿತ್ರಣ ಕಟ್ಟಿಕೊಟ್ಟಿರುವುದೇ ಆಗಿದೆ. ಒಂದು ಕಡೆ ತನ್ನೂರಿನ ಚಿತ್ರಣವನ್ನೀಯುತ್ತಾ ಸಾವಿರ ಕನಸ್ಸು ಕಟ್ಟಿಕೊಂಡು ಮುಂಬೈಗೆ ಹಾರುವ ಅಸಂಖ್ಯಾತ ಯುವಕರ ಜೀವನವನ್ನು ಅವರು ಅನುಭವಿಸುವ ಕಷ್ಟಕಾರ್ಪಣ್ಯವನ್ನು ತಲ್ಲಣ ತವಕ ತುಮುಲ ಅಭದ್ರತೆಯನ್ನು ಜೊತೆಜೊತೆಗೇ ಕಟ್ಟಿಕೊಡುವ ನಿಂಜೂರರ ನೈಪುಣ್ಯತೆಗೆ ಬೆಕ್ಕಸ ಬೆರಗಾಗಲೇ ಬೇಕು. ಕಥೆಯ ಓಘಕ್ಕೆ ಎರಡೂ ಚಿತ್ರಣವನ್ನು ಸಮಗ್ರವಾಗಿ ಸಮರ್ಪಕವಾಗಿ ನೇಯ್ದಿದ್ದಾರೆ. ಇದು ನಿಂಜೂರರು ಬಹುಕಾಲ ಮುಂಬೈನಲ್ಲಿ ಕೆಲಸ ಮಾಡಿದುದರ ಪರಿಣಾಮ. ಇತ್ತಕಡೆ ಕರುನಾಡಿಗೆ ಅತ್ತಕಡೆ ಮುಂಬೈ ಕನ್ನಡಿಗರಿಗೆ ಕೊಂಡಿಯಾಗಿ ಕೆಲಸ ಮಾಡಿದವರಲ್ಲಿ ಮತ್ತು ತನ್ನ ಬಹಳಷ್ಟು ಸಾಹಿತ್ಯಕೃಷಿಯಲ್ಲಿ ಮುಂಬೈ ಸಹ್ಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದವರಲ್ಲಿ ಇವರ ಪಾತ್ರ ದೊಡ್ಡದು. 

ಕುಳುವಾರಿಗಳನ್ನು ನಿಂಜೂರರು ನಿರ್ವಹಿಸಿರುವ ಬಗೆ ಅನನ್ಯವಾದುದು. ಹಾಂ! ಅಂದ ಹಾಗೆ ಕುಳುವಾರಿಗಳು ಎಂದರೆ ನಮ್ಮ ಕಡೆ "ಆಸಾಮಿಗಳು" ಎನ್ನುತ್ತೀವಲ್ಲ? ಆ ಅರ್ಥ ಬರುತ್ತದೆ. ಒಮ್ಮೆ ಓದಿ ನೋಡಿ.
ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1434572199964294&set=gm.1504056852995100&type=3&theater


"ಮಲೆನಾಡಿನ ರೋಚಕ ಕಥೆಗಳು"
"ಅರಮನೆ ಗುಡ್ಡದ ಕರಾಳ ರಾತ್ರಿಗಳು" 
"ಪಶ್ಚಿಮ ಘಟ್ಟದ ತಪ್ಪಲಿನಲ್ಲಿ"
"ಜೇನು ಕಲ್ಲಿನ ರಹಸ್ಯ ಕಣಿವೆ"


ಹತ್ತು ಹಲವಾರು ಪ್ರಶ್ನೆಗಳು, ಉತ್ತರ : ನಾಲ್ಕೇ ಪುಸ್ತಕ! 


1) ಮಲೆನಾಡು ಎಂದರೆ ಏನು? ಮತ್ತು ಅಲ್ಲಿನ ಜೀವನ ಹೇಗಿರುತ್ತದೆ? ಮಲೆನಾಡಿನ ಜೀವನವೆಂದರೆ ನಾವಂದುಕೊಂಡಷ್ಟು ಸುಲಭವಲ್ಲ. ಅಲ್ಲಿ ಪ್ರತಿಕ್ಷಣ, ಪ್ರತಿದಿನವೂ ಒಂದೊಂದು ತರಹ ಹೋರಾಟವೇ ಸರಿ. ಪ್ರತಿ ಬಾರಿಯೂ ವಿಭಿನ್ನವಾದ ಅನುಭವ ಕೊಡುವ ಮಲೆನಾಡಿಗರಿಗೆ ಅದು ದಿನ ನಿತ್ಯದ ಜಂಜಾಟ. ಅಲ್ಲಿ ಬೇರೆ ದಾರಿಯೇ ಇಲ್ಲ, ಬಂದದ್ದನ್ನು ಬಂದ ಹಾಗೆ ಸ್ವೀಕರಿಸಲೇಬೇಕು. ಅಲ್ಲಿನ ಜನ ವ್ಯವಸಾಯ ಮಾಡುವ ಪರಿ ಹೇಗೆ? ಪ್ರಕೃತಿಮಾತೆ ಮುನಿಸಿಕೊಂಡರೆ ಹಸುರಾಗಬೇಕ...ಿದ್ದ ಬಾಳು ಹೇಗೆ ಅಲ್ಲೋಲಕಲ್ಲೋಲವಾಗುತ್ತದೆ? ಕೃಷಿಯನ್ನು ನಂಬಿದ ರೈತರು ಕೊನೆಗೆ ಅದನ್ನು ಬಿಟ್ಟು ನಗರಗಳ ನಾಗಾಲೋಟದಲ್ಲಿ ಏಕೆ ಬಿದ್ದಿರುವರು, ಅದರಲ್ಲೂ ಮಲೆನಾಡಿಗರು? ಅಲ್ಲಿನ ಜನ ಮಳೆಗಾಲವನ್ನು ಸ್ವೀಕರಿಸುವ ರೀತಿ ಹೇಗಿರುತ್ತದೆ? ಅದಕ್ಕಾಗಿ ಅವರು ಮಾಡಿಕೊಳ್ಳುವ ಸಿದ್ಧತೆಗಳೇನು? ನಾವು ಮಳೆಯನ್ನು ನೋಡುವ ರೀತಿ ಮತ್ತು ಮಲೆನಾಡಿಗರು ಮಳೆಯನ್ನು ನೋಡುವ ಬಗೆ ಹೇಗೆ? ಇದೆಲ್ಲವನ್ನು ಮೀರಿ, ಮಾನವ ಸಂಬಂಧಗಳು ಇಲ್ಲಿರುವ ನಮಗಿಂತಲೂ ಅಲ್ಲಿ ವಿಭಿನ್ನವಾದುದೋ ಹೇಗೆ? ಅಥವಾ ನಮ್ಮೆಲ್ಲರಂತೆ ಅವರದೂ ಸಾಮಾನ್ಯವಾದ ಮಾನವ ಸಂಬಂಧಗಳೇನಾ? ಮಲೆನಾಡಿನ ಆ ವರ್ಣಿಸಲಸದಳ ಪ್ರಕೃತಿಯು ಹೇಗೆ ವರ್ಷಒಂಬತ್ತು ಕಾಲ ತನ್ನೊಳಗಡಗಿರುವ ಗುಟ್ಟನ್ನು ಬಿಟ್ಟುಕೊಡದೆ ಮಲೆನಾಡಿಗರನ್ನು ಆಡಿಸುವ ಪರಿ, ಇದರಿಂದ ಅಲ್ಲಿನವರು ಅನುಭವಿಸಬೇಕಾದ ಕಷ್ಟನಷ್ಟಗಳೇನು? ಸುಖಸಂತೋಷಗಳೇನು? ಪ್ರಕೃತಿಯ ಅವಿಭಾಜ್ಯ ಅಂಗವಾದ ಕಾಡು ಪ್ರಾಣಿಗಳು ಇವರಿಗೆ ವರವೋ ಶಾಪವೋ? ವರ್ಷದ ಹನ್ನೆರೆಡು ತಿಂಗಳು ಅಲ್ಲಿನ ಜನರ ದಿನಚರಿ ಹೇಗಿರುತ್ತದೆ? ಎನ್ನುವ ಇಂತಹ ಹತ್ತುಹಲವು ಪ್ರಶ್ನೆಗಳಿಗೆ ಉತ್ತರ ಸಿಗುವುದು "ಮಲೆನಾಡಿನ ರೋಚಕ ಕಥೆಗಳು" ಕೃತಿಯಲ್ಲಿ. 

2) ಮಳೆಗಾಲದಲ್ಲಿ ಮಲೆನಾಡ ಚಾರಣ ಹೇಗಿರುತ್ತದೆ? ನಾವು ಪ್ರಯಾಣಿಸು ವೇಳೆಯಲ್ಲಿ ವಾಹನದಿಂದ ಹಾಗೇ ಇಣುಕಿ ನೋಡುವಾಗ ನಮ್ಮ ಕಣ್ಣಿಗೆ ಬೀಳುವ ಕಾಡಿಗೂ ಅದರಾಚೆಯಿರುವ ಕಾಡಿಗೂ ಏನಾದರೂ ಸಂಭಂಧ ಅಥವಾ ಬದಲಾವಣೆಯಿದೆಯೇ? ಅಪರೂಪಕ್ಕೊಮ್ಮೆ ಪ್ರವಾಸಕ್ಕಾಗಿಯೋ, ಚಾರಣಕ್ಕಾಗಿಯೋ, ದಿನನಿತ್ಯದ ರಗಳೆಯಿಂದ, ಆಫೀಸಿನ ಕಿರಿಕಿರಿಯಿಂದ, ಟ್ರಾಫಿಕ್ಕಿನ ಘೋರ ಅನುಭವದಿಂದ ತಪ್ಪಿಸಿಕೊಂಡು, ಪ್ರಶಾಂತವಾದ, ಸದಾ ಹಸುರೆಲೆಯಿಂದ ತುಂಬಿ, ನೀರ್ಜರಿಯಿಂದ ಕಂಗೊಳಿಸುವ, ಬೆಟ್ಟಗುಡ್ಡಗಳಿಂದ ಕಣ್ಮನ ತಣಿಸುವ, ನಾವು ನೋಡಿರದ ಪ್ರಾಣಿಪಕ್ಷಿಗಳಿಂದ ಭಯಪಡಿಸುವ, ಹೆಜ್ಜೆಹೆಜ್ಜೆಗೂ ಕೌತುಕವನ್ನು ತನ್ನ ಮಡಿಲಲ್ಲಿ ಅಡಗಿಸಿಕೊಂಡಿರುವ ನಿತ್ಯನೂತನೆ ಮಲೆನಾಡಿಗೆ ಹೊರಡುವ ನಮಗೆ ಮಲೆನಾಡು ಪ್ರಕೃತಿ ನೀಡಿದ ಅನನ್ಯ ಕೊಡುಗೆಯೇ ಸರಿ. ಈ ಅಪರಿಮಿತ ಸೌಂದರ್ಯವನ್ನು ಸವಿಯಲು ಮಲೆನಾಡಿಗೆ ಹೋಗುವ ನಾವು ವಹಿಸಬೇಕಾದ ಎಚ್ಚರಿಕೆಗಳೇನು? ಕಾಡಲ್ಲಿ ದಾರಿತಪ್ಪಬಾರದು. ಅಕಸ್ಮಾತ್ ತಪ್ಪಿದರೆ ಅಲ್ಲಿಂದ ಹೊರಬರುವುದು ಹೇಗೆ? ಅಲ್ಲೇ ಸಿಗುವ ಆಹಾರವಾದರೂ ಏನು? ಎನ್ನುವ ಹಲವು ಕೌತುಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಹಲವು ಕಾಲ್ಪನಿಕ ಪಾತ್ರಗಳೊಂದಿಗೆ "ಅರಮನೆಗುಡ್ಡ" ಚಾರಣಕ್ಕೆ ಹೊರಡುವ ಹೊಸದಾಗಿ ಮದುವೆ ಆದ ಎರಡು ನವಜೋಡಿಗಳು ಕಾಡಲ್ಲಿ ದಾರಿತಪ್ಪಿ ಪಡುವ ಪಾಡುಗಳೇನು? ಅಲ್ಲಿ ಅವರು ಎದುರಿಸುವ ಸಂಕಷ್ಟ ಹೇಗಿರುತ್ತದೆ? ತಾನು ಎಣಿಸಿದ್ದಕ್ಕಿಂತ ಪ್ರಕೃತಿ ಹೇಗೆ ತನ್ನ ಇನ್ನೊಂದು ಕ್ರೂರಮುಖ ತೋರಿಸುತ್ತದೆ? ಅಲ್ಲಿಂದ ಅವರು ಜೀವಂತ ಬದುಕಿ ಹೊರಬರಲು ಸಾಧ್ಯವಾಯಿತೇ? ಅಥವಾ ಆ ನಾಲ್ಕರಲ್ಲಿ ಯಾರಾದರೂ ಸತ್ತರೇ? ಇನ್ನುಳಿದವರ ಕಥೆಯೇನು? ಮೊಬೈಲು ಕೈಕೊಟ್ಟಾಗ ಏನಾಗುತ್ತದೆ? ಸೀಳುನಾಯಿಗಳು ಆಕ್ರಮಣ ಮಾಡಿದಾಗ ಯಾರು ಸಾಯುತ್ತಾರೆ? ಹೀಗೆ ಕಥೆಯನ್ನು ಅತ್ಯಂತ ರೋಚಕತೆಯೊಂದಿಗೆ ಪ್ರತಿಕ್ಷಣದ ಕುತೂಹಲದೊಂದಿಗೆ ಓದಿಸಿಕೊಂಡು ಹೋಗುವ ಪುಸ್ತಕ  "ಅರಮನೆ ಗುಡ್ಡದ ಕರಾಳ ರಾತ್ರಿಗಳು" ಪುಸ್ತಕದಲ್ಲಿ ಉತ್ತರ ದೊರೆಯುತ್ತದೆ.

3) ಮಲೆನಾಡಿನ ದಟ್ಟ ಅರಣ್ಯ ಪ್ರದೇಶದ ಒಳಗೆ ಅಥವಾ ಪಶ್ಚಿಮಘಟ್ಟದ ನಟ್ಟನಡುವೆ ವಿದ್ಯುತ್ ಉತ್ಪತ್ತಿಗಾಗಿ ಅಣೆಕಟ್ಟು ಕಟ್ಟಿದರೆ, ಅಲ್ಲಿ ಸುತ್ತಮುತ್ತ ಹಲವಾರು ತಲೆಮಾರಿನಿಂದ ವಾಸ ಮಾಡುತ್ತಿರುವ ಜನರ ಗತಿಯೇನು? ಒಂದು ಅಣೆಕಟ್ಟಿನಿಂದ ಜನರ ದಿನನಿತ್ಯದ ಸಂಗತಿ ಮೊದಲುಗೊಂಡು ಇಡೀ ಅವರ ಜೀವನದ ಮೇಲೆ ಅದು ಹೇಗೆ ಪರಿಣಾಮ ಬೀರಬಹುದು? ಅಲ್ಲಿನ ಅವಿದ್ಯಾವಂತ ಯುವಸಮೂಹ ಹೇಗೆ ದಾರಿ ತಪ್ಪುತ್ತದೆ? ಅಣೆಕಟ್ಟು ಕಟ್ಟುವ ನೆಪದಲ್ಲಿ ಅಲ್ಲಿನ ಮುಗ್ದ ಜನರಿಗೆ ತಿಳಿಯದೆಯೇ ತಲೆತಲಾಂತರದಿಂದಲೂ ತಾಯಿಯಂತೆ ಕಾಯುತ್ತಾ ಬಂದಿರುವ ಅರಣ್ಯ ಸಂಪತ್ತನ್ನು ಹೇಗೆಲ್ಲಾ ಕೊಳ್ಳೆಹೊಡೆಯುತ್ತಾರೆ? ಹುಟ್ಟಿದಾಗಿನಿಂದ ಸ್ವಂತ ಅಣ್ಣತಮ್ಮಂದಿರಂತೆ ಬಾಳುವೆ ನಡೆಸುತ್ತಾ ಬಂದಿರುವ ಅಲ್ಲಿನ ಜನ ಒಂದು ಅಣೆಕಟ್ಟಿನಿಂದ ಹೇಗೆಲ್ಲಾ ತಮ್ಮತಮ್ಮಲ್ಲೇ ಬಡಿದಾಡಿಕೊಂಡು ಒಬ್ಬರಮೇಲೊಬ್ಬರು ಶತ್ರುತ್ವ ಸಾಧಿಸುತ್ತಾರೆ? ಹಳ್ಳಿಯ ಅಮಾಯಕ ಜನರನ್ನು ಮುಗ್ದರನ್ನಾಗಿಸಿ ಅವರಿಗೆ ಆಮಿಷತೋರಿಸಿ ಹೇಗೆ ಸರಕಾರ, ಅಣೆಕಟ್ಟು ಕಟ್ಟಲು ಬಂದ ಪರವೂರಿನ ಜನ ಅವರಿಗೆ ಮೋಸ ಜೊತೆಗೆ ತಾರತಮ್ಯ ಮಾಡುತ್ತಾರೆ? ಇದೆಲ್ಲದರ ಜೊತೆ ಪ್ರಕೃತಿಯ ಜೊತೆ ನಮ್ಮ ಸಂಬಂಧ ಹೇಗಿರಬೇಕು? ಪ್ರಕೃತಿಮಾತೆ ಮುನಿದರೆ ಏನಾಗುತ್ತದೆ? ಎನ್ನುವ ಹತ್ತು ಹಲವು ಪ್ರಶ್ನೆಗಳಿಗೆ ಕಾಲ್ಪನಿಕ ಕಥೆಯೊಂದರ ಹದವನ್ನಿಟ್ಟುಕೊಂಡು ಸೊಗಸಾಗಿ ಎಲ್ಲೂ ಬೋರಾಗದಂತೆ ವಾಸ್ತವದಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಮತ್ತು ದಟ್ಟ ಪಶ್ಚಿಮಘಟ್ಟದ ಮೇಲೆ ನಮಗಿರಬೇಕಾದ ಕಾಳಜಿಯ ಸುತ್ತ ಹೇಳುವ ಕಾದಂಬರಿಯೇ "ಪಶ್ಚಿಮ ಘಟ್ಟದ ತಪ್ಪಲಿನಲ್ಲಿ".

4) ಮಲೆನಾಡಿನ ಸಂಪದ್ಭರಿತ ಮತ್ತು ಅಪರಿಮಿತ ಸಂಪತ್ತನ್ನು ಹೊರಪ್ರಪಂಚದಲ್ಲಿರುವ ನಮಗೆ ತಿಳಿಯದಂತೆ ಹೇಗೆಲ್ಲಾ ದೋಚಬಹುದು? ಅಲ್ಲಿ ಪುಂಡರು ಹೇಗೆ ಅರಣ್ಯವನ್ನು ಕೊಳ್ಳೆಹೊಡೆಯುತ್ತಿದ್ದಾರೆ? ಅದರಿಂದ ಮನುಷ್ಯಕುಲದ ಮೇಲೆ ಆಗುತ್ತಿರುವ ಭೀಕರ ಪರಿಣಾಮಗಳೇನು? ರಕ್ಷಕರೇ ಭಕ್ಷಕರಾದಾಗ ಮುಂದಿರುವ ದಾರಿ ಯಾವುದು? ತಪ್ಪೇ ಮಾಡದ ಸಾಮಾನ್ಯರು ಪುಂಡರ ಸಂಚಿಗೆ ಸಿಲುಕಿದಾಗ ಹೊರಬರಲು ದಾರಿ ಯಾವುದು? ತಾನು ಮಾಡಿದ ತಪ್ಪು ಕೊನೆಗೆ ತನಗೇ ಹೇಗೆ ಉರುಳಾದೀತು? ಎನ್ನುವುದರ ಜೊತೆಗೆ ಅಂದಿನಿಂದ ಇಂದಿನ ತನಕ ತನ್ನ ಕಬಂಧಬಾಹು ಚಾಚಿ ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಿರುವ ಗಾಂಜಾ ಎನ್ನುವ ಮಾದಕ ವ್ಯಸನ ಹೇಗೆ ಇಡೀ ಸಮುದಾಯವನ್ನು, ದೇಶದ ಮುಂದಿನ ಭವಿಷ್ಯ ರೂಪಿಸುವ ಯುವಪೀಳಿಗೆಯನ್ನು ತಪ್ಪುದಾರಿಗೆಳೆಯುತ್ತಿದೆ? ಅದರಿಂದ ದೇಶದ ಮೇಲಾಗುತ್ತಿರುವ ಪರಿಣಾಮವೇನು? ಆ ದುಶ್ಚಟಕ್ಕೊಳಗಾದ ಆ ಮಕ್ಕಳ ಹೆತ್ತವರು ಪಡುವ ಯಾತನೆಗಳೇನು? ಅದರಿಂದ ಹರಡುತ್ತಿರುವ ಗುಣಪಡಿಸಲಾಗದ ಭೀಕರ ಮತ್ತೊಂದು ವ್ಯಾಧಿ ಏಡ್ಸ್ ಮಹಾಮಾರಿ ಹೇಗೆ ಹರಡುತ್ತಿದೆ? ಎನ್ನುವ ಸಾಮಾಜಿಕ ಕಳಕಳಿಯೊಂದಿಗೆ ಬಹು ಕುತೂಹಲಕಾರಿ ವಿಷಯವಾದ ಜೇನುಹುಳಗಳ ಬಗ್ಗೆ ಅಪರೂಪದ ವಿಷಯಗಳನ್ನು ತಿಳಿಸುತ್ತಾ, ಜೇನುಹುಳುಗಳ ಜೇನು ಸಂಗ್ರಹಣೆಯ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಬಂದಿರಲು ಅದಕ್ಕೆ ಕಾರಣ ಹುಡುಕುತ್ತಾ ಬರುವ ದೇಶದ ಪ್ರಖ್ಯಾತ ವಿಜ್ಞಾನಿ ಮತ್ತವನ ಸಂಗಡಿಗರು ಈ ವಿಷಯದ ಬಗ್ಗೆ ಮಲೆನಾಡಿನ ದಟ್ಟಾರಣ್ಯದಲ್ಲಿ ನೆಲೆಸಿರುವ ಅತ್ಯಂತ ಪ್ರಖ್ಯಾತಿ ಮತ್ತು ಕುಖ್ಯಾತಿ ಪಡೆದ "ಜೇನುಕಲ್ಲು ಗುಡ್ಡ"ದಲ್ಲಿ ಮಾಡಹೊರಡುವ ಸಂಶೋಧನೆ, ಜೇನುಹುಳುಗಳ ಬಗ್ಗೆ ವಿಜ್ಞಾನಿ ಹೇಳಿರುವ ಅತಿ ಕುತೂಹಲಕಾರಿ ಮಾಹಿತಿಗಳು, ಇದೆಲ್ಲದರ ಜೊತೆ ಅಷ್ಟು ಪರಿಚಯವಲ್ಲದ ಆದರೆ ಜನಸಾಮಾನ್ಯರಿಗೆ ತಿಳಿಯದ "ಟೈಗಾನ್" ಮತ್ತು "ಲೈಗಾನ್" ಎನ್ನುವ ತಳಿ ಪ್ರಾಣಿಯ ಬಗ್ಗೆ ಹೇಳಿರುವುದನ್ನು ಓದಿದಾಗ ಬೆಕ್ಕಸಬೆರಗಾಗುವುದು ಖಂಡಿತ. ಮೊಬೈಲ್ ತರಂಗಗಳಿಂದ ಅವುಗಳ ಸಂತತಿ ನಾಶ ಮತ್ತು ಜೇನಿನ ಸಂಗ್ರಹಣಾ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವ ವಿಜ್ಞಾನಿಯ ಗುಮಾನಿ, ಸಂಶೋಧನೆ ಮಾಡುತ್ತಿರುವಾಗ ಅಕಸ್ಮಾತ್ತಾಗಿ ಕಂಡ ಗಾಂಜಾ ಬೆಳೆ ಹೇಗೆ ಇಡೀ ಕಥೆಗೆ ತಿರುವು ತಂದು ವಿಜ್ಞಾನಿ ಅತ್ಯಂತ ರೋಚಕವಾಗಿ ಕೊಲೆಯಾಗಿ ಅದು ತನ್ನ ಶಿಷ್ಯೆಯೊಬ್ಬಳ ಮೇಲೆ ಬಂದು ಆಕೆ ಹೇಗೆ ಅದನ್ನು ಮೆಟ್ಟಿನಿಲ್ಲುತ್ತಾಳೋ ಅಥವಾ ಮಾಡದ ತಪ್ಪಿಗೆ ಶಿಕ್ಷೆಯಾಗುವುದೋ ಎನ್ನುವ ಕುತೂಹಲಕಾರಿ ವಿಷಯಗಳೊಂದಿಗೆ ಸಮಾಜಕ್ಕೆ ಬೇಕಾದ ಮಾರ್ಗದರ್ಶನ ಕೊಡುವ ಇನ್ನೊಂದು ಕೃತಿಯೇ "ಜೇನು ಕಲ್ಲಿನ ರಹಸ್ಯ ಕಣಿವೆ".

ಈ ಮೇಲಿನ ನಾಲ್ಕೂ ಕಾದಂಬರಿ ಬರೆದವರು ಗಿರಿಮನೆ ಶ್ಯಾಮರಾವ್. ಅವರು ಮಲೆನಾಡು ಸಕಲೇಶಪುರದಲ್ಲಿ ಹುಟ್ಟಿಬೆಳೆದು ಅಲ್ಲಿನ ರೀತಿರಿವಾಜುಗಳನ್ನು ಚೆನ್ನಾಗಿ ಅರಿತವರಾದ್ದರಿಂದ ಇಂತಹ ಅಮೂಲ್ಯ ಕೃತಿಯನ್ನು ಬರೆಯಲು ಸಾಧ್ಯವಾಗಿದೆ. ಮಲೆನಾಡಿನ ಬಗ್ಗೆ ಅಪರಿಮಿತ ಪ್ರೀತಿ ಮತ್ತು ಭಕ್ತಿಯಿದ್ದವರು ನಿಸ್ಸಂಶಯವಾಗಿ ಎಷ್ಟು ಬಾರಿ ಬೇಕಾದರೂ ಓದಬಹುದಾದ ಅಮೂಲ್ಯ ಸರಕುಗಳಿವು. ಈ ನಾಲ್ಕೂ ಕಾದಂಬರಿಗಳ ವಿಶೇಷತೆ ಎಂದರೆ ಎಲ್ಲೂ ಅನವಶ್ಯಕವಾಗಿ ಆತುರಕ್ಕೆ ಬಿದ್ದು ಹೇಳಬಾರದ್ದನ್ನು ಹೇಳಿಲ್ಲ,ಹೇಳುವುದನ್ನು ಅಚ್ಚುಕಟ್ಟಾಗಿ ಹೇಳುತ್ತಾ ಯಾವುದೇ ಉದ್ವೇಗವಿಲ್ಲದೆ ನಡೆಸುವ ಪಾತ್ರಗಳು ಮತ್ತು ಸನ್ನಿವೇಶಗಳು ಲೇಖಕರ ಚಾತುರ್ಯತೆಗೆ ಹಿಡಿದ ಕನ್ನಡಿ. ಇದನ್ನು ಓದುವಾಗ ಎಲ್ಲೋ ಒಂದು ಕಡೆ ಕಾಡು ಮತ್ತದರ ಬಗ್ಗೆ ಅನೂಹ್ಯವಾಗಿ ಬರೆದ ಇನ್ನೊಬ್ಬ ದೈತ್ಯ ತೇಜಸ್ವಿ ನೆನಪಾಗುತ್ತಾರಾದರೂ ಲೇಖಕರು ತನ್ನತನವನ್ನು ಬಿಟ್ಟುಕೊಡದೇ ಇರುವುದು ಎದ್ದು ಕಾಣುತ್ತದೆ.
ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1432449896843191&set=gm.1501897836544335&type=3&theater

 "ಯೇಗ್ದಾಗೆಲ್ಲಾ ಐತೆ"



ನೀವು ಏನನ್ನು ನಂಬುವಿರಿ? ಕಣ್ಣಿಗೆ ಕಾಣುವುದನ್ನು ನಂಬುವಿರೋ ಅಥವಾ ಕಾಣದ್ದನ್ನು ನಂಬುವಿರೋ? ಅಥವಾ ಇದ್ಯಾವುದೂ ಅಲ್ಲದೇ ಎರಡನ್ನೂ ನಂಬುವಿರೋ? ಭೌತಿಕವಾಗಿ ಕಾಣುವುದನ್ನು ಪ್ರತ್ಯಕ್ಷ ಪ್ರಮಾಣಿಸಿ ನೋಡಿ ನಂಬುವುದು ಒಂದಾದರೆ, ತಮ್ಮ ಪಾರಮಾರ್ಥಿಕ ಅನುಭವಗಳ ಮೂಲಕ ನಮಗಾದ ವಿಸ್ಮಯವನ್ನು ನಂಬುವುದು ಇನ್ನೊಂದು. ಇಲ್ಲಿ ಪ್ರಾತ್ಯಕ್ಷಿಕೆಗಿಂತ ನಮ್ಮ ನಿಲುಕಿಗೆ ಎಟುಕದ ಅವರ್ಣನೀಯ ಅನುಭೂತಿಯೊಂದು ಮುಖ್ಯವಾಗಿರುತ್ತದೆ.


ನಮ್ಮ ನಿಲುವಿಗೆ ನಿಟುಕದ ಸಂಗತಿಗಳ ಕುರಿತು ತಮಗಾದ ಅನುಭವಗಳನ್ನು ಕುರಿತು ವಿವರಿಸ...ುವ ಪುಸ್ತಕದ ಬಗ್ಗೆಯೇ ನಾನೀಗ ಹೇಳಹೊರಟಿರುವುದು. ಇಲ್ಲಿ ನಡೆದ ಯಾವುದೇ ಸಂಗತಿಗಳಿಗೆ ಪುರಾವೆಯಾಗಲೀ ಪ್ರತ್ಯಕ್ಷ ಪ್ರಮಾಣಿಸುವ ಸಾಕ್ಷಿಗಳಾಗಲಿ ದೊರೆಯುವುದಿಲ್ಲ. ಇಲ್ಲಿ ಏನಿದ್ದರೂ ವ್ಯಕ್ತಿಗತ ಅನುಭವಗಳು ಮತ್ತು ನಂಬಿಕೆ ಮಾತ್ರವೇ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನ ನಂಬಿಕೆಯಿರುವರು ಹೌದೆಂದು ನಂಬಬಹುದು ಇಲ್ಲವೇ ಸಾಕ್ಷಿಬೇಕೆನ್ನುವರು ಇದೆಲ್ಲ ಕಟ್ಟುಕಥೆ ಎಂದು ನಂಬದೇ ಇರಬಹುದು. ಎಲ್ಲವೂ ಅವರವರ ತರ್ಕಕ್ಕೆ ಬಿಟ್ಟ ವಿಚಾರ. 

ವಿಜ್ಞಾನ ಎಷ್ಟೇ ಮುಂದುವರಿದರೂ, ತಂತ್ರಜ್ಞಾನ ಎಷ್ಟೇ ಮೇಲ್ಮಟ್ಟಕ್ಕೆ ಪ್ರಗತಿಯಾಗಿದ್ದರೂ ನಮ್ಮ ನಿಲುಕಿಗೆ ಎಟುಕದ ಹಲವು ಸಂಗತಿಗಳಿರುವುದು ಸತ್ಯ ತಾನೇ? ಆ ಎಟುಕದ ಹಲವು ಸಂಗತಿಗಳೇ ಈ ಅತೀತ ಅಥವಾ ಪ್ರಾತ್ಯಕ್ಷಿಕೆ ಒದಗಿಸಲಾಗದ ಸಂಗತಿಗಳೇಕಾಗಿರಬಾರದು? ಹೀಗೊಂದು ಸಾಲನ್ನು ಪುಸ್ತಕದ ಆರಂಭದಲ್ಲೇ ಹೇಳಿದ್ದಾರೆ. 

ಇದು ಶಾಸ್ತ್ರಿಗಳಿಗೆ, ಆ ಪರಿಸರದಲ್ಲಿದ್ದವರಿಗೆ ಮತ್ತು ಅವರ ಸಮಕಾಲೀನರುಗಳಿಗೆ ಆದ ಅನುಭವಗಳ ಕುರಿತಾದದ್ದು. ಮತ್ತು ಅದೆಲ್ಲ ಪವಾಡ ಮಾಡಿದ್ದು ಆ ಸ್ವಾಮಿಗಳು. ಈಗಿನ ಮುಂದುವರಿದ ಕಾಲಮಾನಕ್ಕೆ ಒಗ್ಗಿಕೊಳ್ಳಲಾರದ, ಅರಗಿಸಿಕೊಳ್ಳಲಾಗದ ಹಲವು ಮಹತ್ವ ಘಟಿಸಿದ ಸಂಗತಿಗಳಿವೆ ಇದರಲ್ಲಿ. ಸ್ವಾಮಿಗಳು ಯಾರು, ಎಲ್ಲಿಯವರು, ಎಲ್ಲಿಂದ ಬಂದರು, ವಯಸ್ಸೆಷ್ಟು, ಹಿನ್ನೆಲೆ ಏನು..ಇವೆಲ್ಲಾ ಇಲ್ಲಿ ನಗಣ್ಯ. ಅವರ ಪ್ರತೀ ನಡೆಯಲ್ಲಿ, ನುಡಿಯಲ್ಲಿ, ಸುಮ್ಮನೇ ಹಾಗೇ ಮಾಡಿದ ಪ್ರತಿಯೊಂದು ಕೆಲಸದಲ್ಲಿ ಪಾರಮಾರ್ಥಿಕ ಸತ್ಯದರ್ಶನ ಇದ್ದವೆಂಬುದಷ್ಟೇ ಸತ್ಯ. 

ಅದಕ್ಕೇ ಮೊದಲೇ ಕೇಳಿದ್ದು ನೀವು ಏನನ್ನು ನಂಬುವಿರಿ ಎಂದು. ಪ್ರತಿಯೊಂದನ್ನು ವೈಜ್ಞಾನಿಕವಾಗಿ ನೋಡುವ ದೃಷ್ಟಿಯುಳ್ಳವರಾಗಿದ್ದರೆ, ಕ್ಷಮಿಸಿ, ಇದು ನಿಮಗೆ ಅಷ್ಟಾಗಿ ಸಂಬಂಧಪಡದು. ಧಾರ್ಮಿಕ ಭಾವನೆಯುಳ್ಳವರಾಗಿದ್ದು ಅಂತಃದರ್ಶನದಲ್ಲೂ ಸತ್ಯವಿದೆ ಎಂದು ನಂಬುವಿರಾದರೆ, ಯೆಸ್, ಈ ಪುಸ್ತಕ ನಿಮ್ಮನ್ನು ಬಿಟ್ಟೂಬಿಡದೆ ಓದಿಸಿಕೊಂಡು ಹೋಗುತ್ತದೆ. ಹಾಗಾದರೆ ಆ ಪುಸ್ತಕದ ಹೆಸರೇನೆಂದು ಕೇಳಿದಿರಾ? ನಮ್ಮನ್ನು ವರ್ಣಿಸಲಾಗದ ಅನುಭವಗಳ ಲೋಕಕ್ಕೆ ಕರೆದೊಯ್ದು ಹಲವು ಚಕಿತಗೊಳಿಸುವ ವಿಸ್ಮಯಗಳ ಮೂಲಕ ತಮ್ಮ ಪ್ರಭಾವವನ್ನು ಬೀರಿ ಇದ್ದೂ ಇಲ್ಲದಂತೆ ಮಾಡಿದರೂ ಮಾಡದಂತೆ ಕಂಡರೂ ಕಾಣದಂತೆ ಸಿಕ್ಕರೂ ಸಿಗದಂತೆ ಜೋಗಿ ಜಂಗಮನಾದ ವ್ಯಕ್ತಿ ಎಂದರೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ತಮ್ಮ ಆಧ್ಯಾತ್ಮ ಗುರುಗಳು ಮುಕುಂದೂರು ಸ್ವಾಮಿಗಳ ಕುರಿತು ಬರೆದಿರುವ "ಯೇಗ್ದಾಗೆಲ್ಲಾ ಐತೆ" . ಇವತ್ತು ಮುಗಿಸಿದೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 


https://www.facebook.com/photo.php?fbid=1421089497979231&set=gm.1491035537630565&type=3&theater





"ನಮ್ಮ ಊರಿನ ರಸಿಕರು"


ಒಂದು ಹಳ್ಳಿ. ಅದರಲ್ಲಿ ನಡೆಯುವ ದಿನನಿತ್ಯದ ಸಾಮಾನ್ಯ ಘಟನೆಗಳು. ಅದನ್ನು ಕೇಳಿದಾಗ, "ಹೌದಲ್ಲಾ? ಇದು ನಮ್ಮಲ್ಲೂ ಹೀಗೆ ನಡೆದಿತ್ತು" ಎನ್ನಿಸುವುದುಂಟು. ಘಟನೆಗಳು ಸಾವಿರಾರು ಇರಬಹುದು, ಆದರೆ ಅದನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾದೀತೆ ಹೊರತು ಅದರ ಮೂಲ ಭಾವವಲ್ಲ. ಆ ಮೂಲ ಭಾವ ಕೆಡಿಸಿಕೊಳ್ಳದೆ ತನ್ನ ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಪ್ರಭಂಧ ಸಂಕಲನವೆಂದರೆ ಶ್ರೀಯುತ ಗೊರೂರು ರಾಮಸ್ವಾಮಿ ಆಯ್ಯಂಗಾರರ "ನಮ್ಮ ಊರಿನ ರಸಿಕರು".


ಇದನ್ನು ನೀವು ಪ್ರಬಂಧವೆನ್ನುವಿರೋ, ಲಲಿತಕಲಾ ಸಾಹಿ...ತ್ಯವೆನ್ನುವಿರೋ, ಕಥೆಯೆನ್ನುವಿರೋ, ಕಾದಂಬರಿಯೆನ್ನುವಿರೋ ಅಥವಾ ಅದೆಲ್ಲದರ ಸವಿಸಮ್ಮಿಶ್ರಣ ಎನ್ನುವಿರೋ ಅದು ನಿಮ್ಮ ಭಾವಸ್ವಾಮ್ಯಕ್ಕೆ ಬಿಟ್ಟ ವಿಚಾರ. ಓದಿದ ನಂತರ ಇದನ್ನು ಯಾವ ಮೂಲಕ್ಕೆ ಸೇರಿಸಬಹುದು ಎಂದು ಯೋಚಿಸುವುದು ನಿರರ್ಥಕ ಎನಿಸಿದೆ ನನಗೆ. ಯಾಕೆಂದರೆ ಈ ಮೊದಲೇ ಹೇಳಿದಂತೆ ಎಲ್ಲಾ ಭಾವವನ್ನು ಆಮೂಲಾಗ್ರವಾಗಿ ತನ್ನಲ್ಲಿ ಉಳಿಸಿಕೊಂಡು ಬಂದ ಯಾವುದೇ ಕೃತಿಯಾದರೂ ಓದುಗನಿಗೆ ಆ ಕ್ಷಣದ ಆತನ ಭಾವನೆಗೆ ಎಟುಕುವ ಮಾದರಿಯಾಗಿರುವಾಗ, ಆತನ ಆ ಸಂಧರ್ಭಕ್ಕೆ ತಕ್ಕಂತೆ ಅದು ಅವನೆದುರು ನರ್ತಿಸುವಾಗ ಯಾವ ಗುಂಪಿಗೆ ಹೇಗೆ ತಾನೇ ವಿಂಗಡಿಸಲು ಸಾಧ್ಯ ಹೇಳಿ? ಇದು ನನ್ನ ಅಭಿಮತ.

ನಾನು ಪದವಿಯಲ್ಲಿದ್ದಾಗ ರಸಿಕರು ನಮಗೆ ಪಠ್ಯವಾಗಿತ್ತು. ಆಗಿನ ಬುದ್ಧಿಮತ್ತೆಗೆ ತಕ್ಕಂತೆ ಅರ್ಥವೂ ಆಗಿತ್ತು. ಇಡೀ ಪುಸ್ತಕವನ್ನು ನಾನು ಒಂದು ವರ್ಷದಲ್ಲಿ ಓದಿ ಅರ್ಥಮಾಡಿಕೊಂಡಿದ್ದಕ್ಕಿಂತ, ಈಗ ಎರಡು ದಿನದಲ್ಲಿ ಓದಿ ಅನುಭವಿಸಿದ ಅನನ್ಯತೆ ಹೆಚ್ಚು. ಮಾತಿಗೆ ನಿಲುಕದ ಭಾವನೆ ಜೊತೆಗೆ ಹಿಂದಿನ ದಿನಗಳ ಆಹ್ಲಾದಕರ ನೆನಪುಗಳನ್ನೂ ಒಟ್ಟೊಟ್ಟಿಗೆ ತಂದ ರಸಿಕರ ಕರ್ತೃ ರಾಮಸ್ವಾಮಿಯವರಿಗೆ ಆಭಾರಿ.. ಆಭಾರಿ.. ಆಭಾರಿ.. 

ಅಂದಹಾಗೆ ರಸಿಕರನ್ನು ಒದದವರು ಖಂಡಿತ ಓದಿ. ಯಾರಿಗೆ ಗೊತ್ತು ಯಾವ ಸುನೀತಭಾವ ನಿಮ್ಮೆದೆಗೆ ಬಂದು ತಾಕುವುದೋ ಬಲ್ಲವರ್ಯಾರು? ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 

https://www.facebook.com/photo.php?fbid=1417953534959494&set=gm.1488138787920240&type=3&theater

"ನಾಕು ತಂತಿ"


ಉಫ್! ಒಂದು ದೀರ್ಘ ನಿಟ್ಟುಸಿರು. ಎದೆಯಹತ್ತಿ ತಕಧೀಮ್ ಕುಣಿಯುತ್ತಿದ್ದ ಭಾರಕ್ಕೀಗ ನಿರ್ಭಾರವಾದ ಸ್ಥಿತಿ. ಬಹು ದಿನಗಳ ಬಯಕೆಯ ಹೆಮ್ಮರ ಚಿಗುರೊಡೆದು ಬೆಳೆದು ಫಲಪುಷ್ಪ ಧರಿಸಿನಿಂತಾಗ ಉಂಟಾಗುವ ಸಂತೃಪ್ತಿ. ಕಾದು ಕಾದು ಸುಸ್ತಾಗಿ ಬಳಲಿ ಬೆಂಡಾದ ಮರುಭೂಮಿಯ ಹೂವೊಂದು ಒಯಾಸೀಸಿನ ಒರತೆ ಆಸರೆ ಸಿಕ್ಕಿ ನಿಲ್ಲುವಂತಾಯ್ತು.


ನನ್ನೊಳಗೆ ಒಡಮೂಡಿದ ಆ ಕಾತರತೆಗೆ ದಾಕ್ಷಿಣ್ಯವಿಲ್ಲದೆಯೇ ಫಲದೊರೆತಿದೆ. ಆದರೆ ಆ ಫಲ ಎಂತಹುದು ಎಂದು ಮುಂದೆ ಹೇಳಿರುವೆ. ಹೃದಯ ವಿಹ್ವಲತೆಯಿಂದ ನರಳಾಡಿ ಕೊನೆಗೆ ಬಿಡುಗಡೆಗೊಂದು ...ನಭೋಮಂಡಲದತ್ತ ಚಿಮ್ಮುವ ಹುಚ್ಚುಕುದುರೆಯಾಗಿದೆ. ಅದನ್ನು ಕಟ್ಟಿಹಾಕುವ ದುಃಸ್ಸಾಹಸಕ್ಕೆ ನಾನೆಂದೂ ಯತ್ನಿಸುವುದಿಲ್ಲ. 

ಹಾಂ! ಅಂದಹಾಗೆ ನನ್ನೊಳಗಡಗಿದ್ದ ಬಹು ದಿನದ ಬಯಕೆಯನ್ನೇನೋ ನಾ ಪೂರೈಸಿಕೊಂಡಿದ್ದಾಯಿತು. ಆದರೆ ಅದರಿಂದ ಸಾಕ್ಷಾತ್ಕಾರವಾಯಿತೇ? ಜೀವನದ ಅನುಭವವನ್ನು ಧಾರೆಯೆರೆದು ಬರೆದ ಕವಿಮನಸ್ಸಿನ ಅಂತರಾಳವನ್ನು ಅರ್ಥೈಸುವುದರಲ್ಲಿ ನಾನು ಸಫಲನಾದೆನೇ? ದೇಶದ ಅತ್ತ್ಯುನ್ನತ ಪ್ರಶಸ್ತಿಗೆ ಪಾತ್ರವಾದ ನುಡಿಮುತ್ತುಗಳಿಗೆ ನನ್ನನ್ನು ನಾನು ಯಾವುದೇ ಅಂಜಿಕೆಯಿಲ್ಲದೆ ತೆರೆದುಕೊಳ್ಳಲು ಸಾಧ್ಯವಾಯಿತೇ? ತಾಯಿ ಮುಂದೆ ನಿಂತ ನಗ್ನ ಮಗುವಿನಂತೆ ಅದರೆದುರು ನಾನು ನಿಲ್ಲಲಾಯಿತೇ? ಉತ್ತರ ನನಗೆ ಬಹು ಸ್ಪಷ್ಟವಿದೆ. 

ನನ್ನಂತಹ ಅರೆಪಾಮರನು ಹಿಮಾಲಯವನ್ನು ಹತ್ತುವ ಕನಸ್ಸನ್ನು ಕಾಣುವುದು ಬಹಳ ಸುಲಭ. ಆ ದುಃಸ್ಸಾಹಸ ಮಾಡಲು ಹೊರಡಲೂಬಹುದು. ಆದರೆ ಅದರಲ್ಲಿ ನಾಲ್ಕಿಂಚಿನ ಸಣ್ಣ ಏರಿಯನ್ನೂ ಹತ್ತಲು ಸಾಧ್ಯವಾಗಲಿಲ್ಲ. ಅಂಬಿಕಾತನಾಯ ದತ್ತನ ಮೇರು ಕೃತಿ ಹಿಮಾಲಯದಾಚೆಗೂ ಮೀರಿ ಬೆಳೆದು ನಿಂತಿರುವ ಶಿಖರವನ್ನು ಹತ್ತುವುದಿರಲಿ ಹತ್ತಿರಹೋಗಲೂ ಸಾಧ್ಯವಾಗಲಿಲ್ಲ. 

ನನಗಿರುವ ಜ್ಞಾನವನ್ನು ಬಳಸಿ ಆದಷ್ಟೂ ಅರ್ಥೈಸಲು ಯತ್ನಿಸಿ ಸೋತಿದ್ದೀನಿ, ಅಂದರೆ, ಕೃತಿಯ ಘನತೆಗೆ ಚ್ಯುತಿ ಬಂದಂತಾಗುವುದಿಲ್ಲವೆಂದೇ ಭಾವಿಸಬೇಕು. ಎಲ್ಲೋ ಒಂದೆರೆಡು ಸಾಲುಗಳು ಕೆಲವೊಂದು ಅರ್ಥಗಳನ್ನು ನೀಡಿತಾದರೂ, ಕವಿಯ ಅಂತಃಸತ್ವವನ್ನು ಸಂಪೂರ್ಣ ಗ್ರಹಿಸುವಲ್ಲಿ ಎಡವಿರುವೆ. ಅದಕ್ಕೆ ಕಾರಣ ನನ್ನ ಜ್ಞಾನದ ವಿಸ್ತೀರ್ಣತೆಯ ಕೊರತೆಯೇ ಹೊರತು ಬೇರೇನಲ್ಲ. 

ಇಲ್ಲಿಗೆ ನನ್ನ ಬಹುದಿನದ ಆಸೆಯ ಈಡೇರುವಿಕೆ ಮತ್ತದರ ಫಲವೇನೆಂದು ನೀವು ತಿಳಿದಾಯ್ತಲ್ಲವೇ? 

ಈ ಭಾವವೆಲ್ಲವೂ ನನಗೆ ಮೂಡಿದ್ದು ವರಕವಿ ಬೆಂದ್ರೆ ಅಜ್ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವನ ಸಂಕಲನ "ನಾಕು ತಂತಿ" ಓದಿಮುಗಿಸಿದಾಗ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 

https://www.facebook.com/photo.php?fbid=1419005828187598&set=gm.1489102764490509&type=3&theater
ಶ್ರೀಕೃಷ್ಣ ಆಲನಹಳ್ಳಿಯವರ "ಕಾಡು"

ಹೋದ ವಾರ ಶ್ರೀಕೃಷ್ಣ ಆಲನಹಳ್ಳಿಯವರ "ಕಾಡು" ಪುಸ್ತಕವನ್ನೋದಿದೆ. ಕಾದಂಬರಿಯ ವಿಸ್ತೀರ್ಣ ಚಿಕ್ಕದಾದರೂ, ಅದರಲ್ಲಿರುವ ಪಾತ್ರಗಳ ಆಳಗಲ, ಪ್ರತಿ ಪಾತ್ರಕ್ಕೂ ಇರುವ ಧೀರ್ಘ ಸಂಕೀರ್ಣತೆ, ಪ್ರತಿ ಮನೆಯಲ್ಲಿ ಕಾಣುವ ಮನಸುಗಳ ಅಂತರ, ನಡುವೆಯೇ ಇದ್ದೂ ಇಲ್ಲದಿರುವಿಕೆ, ಪಾತಿವ್ರತ್ಯದ ಹೇರಿಕೆ, ಒಳಗೆ ನಾಲ್ಕು ಗೋಡೆಗಳ ಮಧ್ಯೆಯೇ ನಲುಗುವ ಮುಗ್ದ ಮನಸ್ಸಿನ ಜಾನಕಿಯ ವೇದನೆ, ನೋವು, ಆಕೆಯ ದುಗುಡ-ದುಮ್ಮಾನ, ತನಗೆ ಮಕ್ಕಳಾಗದಿರುವಿಕೆ, ಸಹೋದರಿಯ ಮಗನನ್ನೇ ತಾನು ಹೆತ್ತ ಕೂಸಿಗಿಂತ ಹೆಚ್ಚಾಗಿ ಸಾಕುವ ಆಕೆಯ ಕಾಳಜಿ, ಅವನ ಮೇಲಿರುವ ಪ್ರೀತಿ, ಮಮತೆ, ವಿಶ್ವಾಸ, ಆದರಣೆ, ಗಂಡ ಚಂದ್ರೇಗೌಡನ ಚಾಪಲ್ಯತೆ, ಆತನ ನ್ಯಾಯ ...ಪಂಚಾಯ್ತಿಯ ತಿಕ್ಕಲಾಟಗಳು, ಊರ ರಾಜಕೀಯ ಮತ್ತದರ ಒಳಪಿತೂರಿ, ಬಾಲಕ ಕಿಟ್ಟುವಿನ ವಯೋ ಸಜಹ ಕುತೂಹಲ, ಸುತ್ತಮುತ್ತಲ ಪರಿಸರದಲ್ಲಿನ ಆಗುಹೋಗುವಿನ ಸೂಕ್ಷ್ಮಗ್ರಹಿಕೆ, ಕಾಡಿನ ಬಗ್ಗೆ ಇರುವ ವಿವರಣೆ..... ಹೀಗೆ ಕಾದಂಬರಿಯ ಆವರಣ ಬಹಳ ಸೊಗಸಾಗಿ ತೆರೆದುಕೊಳ್ಳುತ್ತಾ ಇದೊಂದು ಉತ್ತಮ ಕೃತಿಯಾಗಿ ನಿಲ್ಲುತ್ತದೆ. ಒಂದು ಓಘದಲ್ಲಿ ನಡೆಯುತ್ತಿರುವ ಕಾದಂಬರಿಯು ಅಂತಿಮ ಹಂತಕ್ಕೆ ಬರುತ್ತಿದ್ದಂತೆ ತನ್ನ ಮಗ್ಗಲು ಬದಲಿಸಿ ಇಡೀ ಕಥೆಗೆ ಯಾರೂ ಉಹಿಸಲಾಗದ ತಿರುವು ತಂದಿರುವುದು ಆಲನಹಳ್ಳಿಯವರ ಅದ್ಬುತ ತಂತ್ರಗಾರಿಕೆಯಲ್ಲೊಂದು. ಹೊಸದಾಗಿ ಓದಲು ಆರಂಭಿಸಿದವರು ಇದನ್ನು ಓದಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಬರಲಡ್ಡಿಯಿಲ್ಲ ಎನ್ನುವುದು ನನ್ನ ಭಾವನೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್ 
ದೊಡ್ಡಬಳ್ಳಾಪುರ 
"ನನ್ನೊಡಲು ಮಾತಿಗಿಳಿದಾಗ.." 

ನನ್ನನ್ನು ಮಂದಿ  ಬಾ! ಬಾ! ಎಂದು ಕರೆಯುತ್ತಾರೆ. ನಾನು ಹೋಗುತ್ತಿನಿ. ಕೆಲವೊಮ್ಮೆ ಹೋಗದೆಯೂ ಇರಬಹುದು. ನಾನು ಹೋಗುವುದು ಬಿಡುವುದು ನನ್ನ ಕೈಲಿಲ್ಲ, ಕರೆಸಿಕೊಳ್ಳುವರ ಮನಸ್ಸಿನಲ್ಲಿದೆ. ಅವರು ಮಾಡುವ ಪ್ರತಿ ಕೆಲಸದಲ್ಲಿದೆ. ಅವರ ಆಲೋಚನಾ ಧಾಟಿಯಲ್ಲಿದೆ. ಅವರ ಮನಸ್ಸಿನ ಮಾತಿಗು ನಡೆಯುವ ದಾರಿಗು ವ್ಯತ್ಯಾಸ ಇಲ್ಲದಿದ್ದರೆ ನಾನು ಸರಾಗ ಸರಾಗ. ಎಲ್ಲಿ ತನ್ನದನ್ನು ತಾನು ನೋಡಿಕೊಳ್ಳುವ, ತನ್ನವರನ್ನು ಮಾತ್ರ ಸಂರಕ್ಷಿಸಿಕೊಳ್ಳುವ ಸಮೂಹವಿರುತ್ತದೋ ನಾನಲ್ಲಿಗೆ ಮನೆಮಗನಂತೆ ಹೋಗುವುದಿಲ್ಲ, ಬದಲಿಗೆ ಅಪರೂಪದ ಅಥಿತಿಯಾಗುವೆ.

ನನ್ನನ್ನು ಓಲೈಸಲು ನನ್ನ ಕುರಿತು ಜಪತಪ ಪೂಜೆಪುನಸ್ಕಾರ ಹೋಮಹವನಹವಿಸ್ಸು ಮಾಡಿರೆಂದು ನಾನು ಎಲ್ಲೂ ಯಾರಲ್ಲೂ ಹೇಳಿಲ್ಲ. ತನ್ನ ಕೆಡುಕಿನಿಂದ ತಾನು ಮಾಡಿದ ತಪ್ಪನ್ನು ಮುಚ್ಚಲಿಕ್ಕೆ ಮಂದಿ ಈ ಅನ್ಯಮಾರ್ಗ ತುಳಿಯುತ್ತಾರೆ. ಗೊಡ್ಡು ಸಂಪ್ರದಾಯಗಳ ಬೆನ್ನೇರಿ ಮೌಢ್ಯತೆಯ ಪರಮಾವಧಿ ತಲುಪುತ್ತಾರೆ. ತನ್ನೊಳಗಿನ ತಪ್ಪನ್ನು ತಾನು ಮುಚ್ಚಿಡಲಾಗದೆ ಏನೆಲ್ಲಾ ಮಾಡುತ್ತಾರೆ ಈ ಜನ!?
ನನಗಾಗಿ ಪ್ರಾರ್ಥಿಸುವುದೇನು? ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವುದೇನು? ಹವಿಸ್ಸು ಕೊಡುವುದೇನು?.. ಇನ್ನೂ ಹೀಗೆ ಹತ್ತು ಹಲವು ರೀತಿ ನನ್ನನ್ನು ಒಲಿಸಿಕೊಳ್ಳಲು ನೋಡುತ್ತಾರೆ ಈ ಮಂದಿ.

ಆದರೆ ನಿಮಗೊಂದು ಮಾತು ಹೇಳಬೇಕು. ಹಿಂದಿನ ಕಾಲದ ತಿಳಿವಳಿಕೆಯಿದ್ದ ಮಂದಿ ನನಗಾಗಿ ಹೀಗೆಲ್ಲಾ ಕೆಲಸಕ್ಕೆ ಬಾರದ ಪೂಜೆ ಹೋಮಹವನ ಮಣ್ಣುಮಸಿ ಇತ್ಯಾದಿ ಇತ್ಯಾದಿ ಮಾಡುತ್ತಲೇ  ಇರಲಿಲ್ಲ. ಅವರದೇನಿದ್ದರೂ ಅವರವರ ಕೆಲಸದಲ್ಲಿ, ಸುತ್ತಮುತ್ತಲ ಕಾಯಕ ಕೈಂಕರ್ಯಗಳಲ್ಲಿ ತೊಡಗಿರುತ್ತಿದ್ದರು. ಮಾಡುವ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತಲಿದ್ದರು. ಯಾವುದಕ್ಕೂ ಅಸೂಯೆ ದ್ವೇಷ ಮತ್ಸರವಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಸುತ್ತಮುತ್ತಲಿನ ಪರಿಸರ, ಪ್ರಾಣಿ, ಪಕ್ಷಿ, ಕುಂಟೆ, ನದಿ, ಜಲಪಾತಗಳ ಬಗ್ಗೆ ತಮ್ಮದೇ ಆದ ರೀತಿರಿವಾಜುಗಳನ್ನಿಟ್ಟುಕೊಂಡು ತಮ್ಮದೇ ಧಾರ್ಮಿಕ ಕಟ್ಟುಪಾಡುಗಳೊಂದಿಗೆ ಬದುಕಿ ಬಾಳುತ್ತಿದ್ದರು. ಮಂದಿ ಹೀಗೆ ತಮ್ಮಪಾಡಿಗೆ ತಾವಾಯಿತು, ತಮ್ಮ ಮೂಲೋಕವಾಯಿತು ಎಂದು ಬಾಳುವೆ ಮಾಡುತ್ತಿರಲು ಹಠ ಮಾಡಿದರೆ ಸರಿಹೋಗುವುದಿಲ್ಲವೆಂದು ನಾನು ಸರಿಯಾದ ಸಮಯಕ್ಕೆ ಅಂದರೆ ಮಂದಿ ನನ್ನನ್ನು ಬರುವನು ಎಂದು ಎಣಿಸುವ ಕಾಲಕ್ಕೆ ತಕ್ಕಂತೆ ಹೋಗಿ ಅವರಿಗೆ ಸಾಕಾಗುವಷ್ಟೋ ಸಾಲದಿರುವಷ್ಟೋ ನನ್ನ ಕೈಲಾದ ಸೇವೆ ಮಾಡಿ ಬರುತ್ತಿದ್ದೆ. ನನ್ನ ಸೇವೆಯನ್ನು ಬಳಸಿಕೊಂಡ ಮಂದಿ ನನ್ನಿಂದ ಕೃತಾರ್ಥರಾಗುತ್ತಿದ್ದರು, ಅವರಿಗೆ ನನ್ನ ಕೈಲಾದ ಮಟ್ಟಿಗಿನ ಸೇವೆ ನೀಡಿದ್ದಕ್ಕೆ ನನಗೂ ಧನ್ಯತಾಭಾವವಿರುತ್ತಿತ್ತು.

ಒಂದೊಂದು ಸಲ ಏನಾಗುತ್ತಿತ್ತೆಂದರೆ, ಜನರ ಆಗಿನ ಪರಿಸ್ಥಿತಿ,  ಮನೋಭಾವನೆ, ಅವರು ನನ್ನ ಮೇಲೆ ತೋರಿಸುತ್ತಿದ್ದ ಆದರ ತಾತ್ಸಾರ, ಆದರೀಯಣೆ ನಿರಾಕರಣೆ, ಎದುರು ನೋಡುವಿಕೆ  ನೋಡದಿಲ್ಲದಿರುವಿಕೆ, ಕಾತರ ಬೇಸರ ಇತ್ಯಾದಿ ವಿಷಯಗಳಿಗನುಗುಣವಾಗಿ ನಾನು ನನ್ನ ಸೇವೆ ನೀಡುತಲಿದ್ದೆ. ಹೇಗೆಂದರೆ, ಮಂದಿ ನನ್ನನ್ನು ಚೆನ್ನಾಗಿ ಭಾವಿಸುವ ಮನಸ್ಸು ಹೊಂದಿ ತಮ್ಮ ಸುತ್ತಮುತ್ತಲಿನ ಪರಿಸರದ ಜೊತೆ ಅನ್ಯೋನ್ಯತೆ ಬೆಳೆಸಿಕೊಂಡಿದ್ದರೆ ನಾನು ಹೋದಾಗ ಎಲ್ಲರೂ ಮೆಚ್ಚಿವಂತಹ ಸೇವೆ ಕೊಡುತ್ತಿದ್ದೆ, ಇಲ್ಲದಿದ್ದರೆ ವ್ಯತಿರಿಕ್ತವಾದ ಸೇವೆ ನನ್ನಿಂದ ಬರುತ್ತಿತ್ತು. ಏನೇ ಆದರೂ ಮಂದಿ ಮೆಚ್ಚುವ ಸೇವೆ ಸದಾ ಮಾಡಬೇಕೆಂಬುದೇ ನನ್ನ ಪರಮೋಧ್ಯೇಯವಾಗಿತ್ತು, ಮತ್ತು ಈಗಲೂ ಅದು ಹಾಗೇ ಇದೆ.

ಮಂದಿಗೆ ಒಳ್ಳೆಯದನ್ನು ಮಾಡಿ ಹೆಸರು ಸಂಪಾದಿಸುವ ಉಮೇದು ಯಾರಿಗೆ ಇರಲ್ಲ ನೀವೇ ಹೇಳಿ? ಅದು ಎಲ್ಲರಲ್ಲೂ ವಯಸ್ಸಿನ ತಾರತಮ್ಯವಿಲ್ಲದೆ, ಜಾತಿಮತಗಳ ಭೇಧವಿಲ್ಲದೆ, ಬಡವ ಬಲ್ಲಿದನೆಂಬ ವಿಂಗಡಣೆಯಿಲ್ಲದೆ ಎಲ್ಲರನ್ನೂ ಆವರಿಸಿಕೊಳ್ಳುವ ಕಾಯಿಲೆ ತಾನೇ? ಅಲ್ಲವಾ ಮತ್ತೆ? ಈ ಕಾಯಿಲೆ ಹೇಗೆಂದರೆ, ನಿನ್ನ ಪಾತ್ರ ಇಂಥದೇ ಮಗಾ ಎಂದು ಹೇಳಿ ಯಾರದೋ ಗರ್ಭವನ್ನು  ಸೀಳಿಕೊಂಡು ಹೊರಬರುವಂತೆ ಮಾಡುವ ಆ ಭಗವಾನು ದೇವಾನುದೇವತೆಗಳನ್ನೂ ಬಿಟ್ಟಿಲ್ಲ ಎಂದರೆ ನೀವು ನಂಬಲೇಬೇಕು. ಅಷ್ಟಿಲ್ಲದಿದ್ದರೆ ದೇವರು ಅಷ್ಟೊಂದು ಅವತಾರಗಳನ್ನು ಎತ್ತುತ್ತಿದ್ದರಾ? ತನ್ನ ಪವಾಡ ತೋರಿಸಿ ದುಷ್ಟ ಸಂಹಾರ ಮಾಡುತ್ತಿದ್ದರಾ? ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಎಂಬ ಬಿರುದನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದ್ದರಾ? ಆ ದೇವರೂ ಕೂಡ ತನ್ನ ಇರುವಿಕೆಯನ್ನು ತೋರ್ಪಡಿಸಲು, ಅವತಾರಗಳನ್ನೆತ್ತಿದ್ದು ಅವತಾರವಲ್ಲದೇ, ಈ ಗುರಿತಿಸಿಕೊಳ್ಳಬೇಕು ಎನ್ನುವ ಕಾಯಿಲೆಯಲ್ಲದೇ ಮತ್ತಿನ್ನೇನು? ನೀವೇನಂತೀರಿ?

ಅದನ್ನು ನೀವು ಚಟವೆನ್ನಿ, ಕಾಯಿಲೆಯೆನ್ನಿ. ಅದು ನನ್ನನ್ನೂ ಬಿಟ್ಟಿಲ್ಲ ಮತ್ತೆ! ನನಗೂ ಮಂದಿಗೆ ನಾಲ್ಕಾಸು ಒಳ್ಳೆಯದನ್ನು ಮಾಡಿ ಶಬ್ಬಾಸ್ಗಿರಿ ಗಿಟ್ಟಿಸಿಕೊಳ್ಳಬೇಕೆನ್ನುವುದು ಮೊದಲಿನಿಂದಲೂ ಇದೆ. ಅದಕ್ಕಾಗಿ ನಾನು ಪಟ್ಟ ಪಾಡಿಗಳು ಒಂದಾ ಎರಡಾ? ನಾನು ನೀಡುವ ಸೇವೆಯಿಂದ ಒಳ್ಳೆಯದಾಗುತ್ತದೆ ಎಂದು ಮಂದಿಗೆ ಯಾವಾಗ ತಿಳಿಯಿತೋ, ಅಂದಿನಿಂದ ಇಂದಿನ ತನಕ ಅವರು ಕರೆದಲ್ಲಿಗೆ ನಾನು ಹೋಗಬೇಕು, ಕರೆವ ಸಮಯಕ್ಕೆ ಸರಿಯಾಗಿ ಹೋಗಬೇಕು, ಅವರು ಎಷ್ಟು ಬಯಸುತ್ತಾರೋ ಅಷ್ಟು ಸೇವೆ ನೀಡಬೇಕು. ಸ್ವಲ್ಪ ಜಾಸ್ತಿಯಾದರೂ ಕಷ್ಟ, ತುಸುವೇ ಹೆಚ್ಚಾದರೂ ಕಷ್ಟ. ಯಾಕಾದರೂ ಇವನು ಬಂದು ಹೀಗೆ ಮಾಡಿದ ಎಂದು ನನ್ನನ್ನೇ ಮೂದಲಿಸುತ್ತಾರೆ. ನನ್ನ ಕಷ್ಟ ಯಾರಿಗೆ ಹೇಳಿಕೊಳ್ಳಲಿ? ನನ್ನ ಮನಸನ್ನು ಅರ್ಥ ಮಾಡಿಕೊಂಡವರು ಯಾರಿದ್ದಾರೆ? ಒಳ್ಳೆಯದನ್ನು ಮಾಡಿದವನಿಗೆ  ಈ ಮಂದಿ ಗುಡಿಗೋಪುರಗಳನ್ನು ಕಟ್ಟುತ್ತಾರೆ, ಹಾಲುತುಪ್ಪಗಳಿಂದ ಅಭಿಷೇಕ ಮಾಡುತ್ತಾರೆ, ಮೂರ್ತಿ ನಿಲ್ಲಿಸುತ್ತಾರೆ, ಸುತ್ತಲೂ ನೆರೆದು ಭಜನೆ ಮಾಡುತ್ತಾರೆ, ಏರಿದವನ್ನು ಮತ್ತಷ್ಟು ಅಟ್ಟಕ್ಕೆ ಏರಿಸುತ್ತಾರೆ, ಸುತ್ತಲೂ ವಂದಿಮಾಗದಿರ ಗುಂಪು ಹುಟ್ಟಿಕೊಳ್ಳುತ್ತದೆ. ಈ ಮಂದಿಗೆ ಒಳ್ಳೆಯದನ್ನು ಮಾಡಿದವ ಸಾಕ್ಷಾತ್ತ್ ದೇವರೇ ಆಗಿಬಿಡುತ್ತಾನೆ. ಒಳ್ಳೆಯದನ್ನು ಮಾಡಿ ಒಳ್ಳೆಯವನು ಎನಿಸಿಕೊಳ್ಳುವುದು ತಪ್ಪಲ್ಲ ಬಿಡಿ. ಆದರೆ ಅವರು ಒಳ್ಳೆಯತನಕ್ಕೆ ವ್ಯಯಿಸುವ ದ್ರವ್ಯ ಮಾತ್ರ ಒಳ್ಳೆಯ ಮೂಲದ್ದಾಗಿದ್ದರೆ ಸಾಕು. ಆದರೆ ಈ ರೀತಿ ಒಳ್ಳೆಯ ಮಾರ್ಗದಲ್ಲಿ ದುಡಿದು, ಯಾರಿಗೂ ಅನ್ಯಾಯವಾಗದಂತೆ ಗಳಿಸಿದ ಸಂಪತ್ತನ್ನು ಹೆಸರು ಮಾಡಲಿಕ್ಕೆ ಎಷ್ಟು ಮಂದಿ ಬಳಸುತ್ತಾರೆ ಹೇಳಿ ನೋಡುವ? ಕೇವಲ ಬೆರಳೆಣಿಕೆ ಮಂದಿ ಮಾತ್ರ ಸಿಕ್ಕಾರು. ಎಲ್ಲಾದರೂ ಹುಡುಕಿ ನೋಡಿ, ನಾನು ನನ್ನನ್ನು ಅಟ್ಟಕ್ಕೇಸಿರಿ ಎಂದು ಮಂದಿಯನ್ನು ಕೇಳಿದ್ದುಂಟಾ ಎಂದು? ಒಂದೇ ಒಂದು ಸಾಕ್ಷ್ಯ ತೋರಿಸಿ ನನ್ನನ್ನು ಹೊತ್ತುಕೊಂಡು ಅಡ್ಡಪಲ್ಲಕ್ಕಿಯಲ್ಲಿ ಅಡ್ಡಾಡಿಸಿ ಎಂದು ಹೇಳಿದ್ದು? ನನ್ನ ಪುತ್ಥಳಿ ನಿರ್ಮಿಸಿ ಪೂಜೆ ಹೋಮಹವನ ಮಾಡಿ ಎಂದು ಕೇಳಿದ್ದು? ಉಹುಂ! ನಾನು ಇದ್ಯಾವುದನ್ನೂ ಕೇಳಿಲ್ಲ, ಕೇಳುವುದೂ ಇಲ್ಲ. ಏನೋ ನನ್ನಿಂದಾದ ಸೇವೆ ಮಾಡಿ ಗುರುತಿಸಿಕೊಳ್ಳುವ ಚಿಕ್ಕ ಹಪಹಪಿ ನನ್ನಲ್ಲಿದೆ ಎಂಬುದು ಬಿಟ್ಟರೆ ನನಗ್ಯಾವ ಮಹತ್ತರ ಆಸೆಯೂ ಇಲ್ಲ. ಮಂದಿಯ ನಿಷ್ಕಲ್ಮಶ ಸೇವೆ ಮಾಡಿ ಈಗಿರುವ ಮತ್ತು ಮುಂದಿನ ಜನಾಂಗವನ್ನೂ ಸೇರಿಸಿ ಅವರನ್ನು ಸದಾ ಕಾಲ ತಣ್ಣಗೆ ಕಾಯುವ ಹಂಬಲ ನನ್ನದು.

ಆದರೆ ಬಿಡುತ್ತಾರೆ ಅಂದುಕೊಂಡಿರಾ ಈ ಮಂದಿ ನನ್ನ ಪಾಲಿನ ಕೆಲಸ ನನ್ನ ಪಾಡಿಗೆ ನಾನು ಮಾಡಲು? ಉಹುಂ ಬಿಡುವುದಿಲ್ಲ! ನನ್ನ ಪಾಲಿನ ಕೆಲಸವನ್ನು ಮಾಡಲು ನನಗೆ ಅವರಾಗಿಯೇ ಅಡ್ಡಿ ಆತಂಕ ತರುತ್ತಾರೆ. ಸಂಪದ್ಭರಿತ ಅರಣ್ಯ ಮಟ್ಟಸವಾಗಿ ಕಡಿದು ಮೊದಲು ಅಲ್ಲಿರುವ ಅರಣ್ಯ ವಾಸಿಗಳಾದ ಪ್ರಾಣಿ ಪಕ್ಷಿ ಕ್ರಿಮಿ ಕೀಟ ಹುಳು ಹುಪ್ಪಟೆಯನ್ನು ನಾಶ ಮಾಡುವುದರ ಜೊತೆಗೆ ಅಮೂಲ್ಯವಾದ ಸಂಪತ್ತಿನ ಕೊಳ್ಳೆ ಹೊಡೆಯುತ್ತಾರೆ. ಉಳ್ಳವರ  ಪಾಲಿನ ಮತ್ತಷ್ಟು ಆಸೆ ಆಕಾಂಕ್ಷೆ ಪೂರೈಸುತ್ತಾರೆ ಅಷ್ಟೇ. ಪಾಪ! ಇರಲು ನೆತ್ತಿ ಮೇಲೆ ಸೂರಿಲ್ಲದ, ಒಂದೊತ್ತು ತಿನ್ನಲು ಅನ್ನವಿಲ್ಲದ  ಜನ ಇವರಿಗೆ ಕಾಣಿಸುವುದೇ ಇಲ್ಲ. ತಾಯಿ ಪ್ರಕೃತಿಯೇ ನಾಶವಾದರೆ ನನ್ನ ಪಾಲಿಗೆ ಅದು ಮರಣಶಾಸನವೇ ಸರಿ. ಪ್ರಕೃತಿಯನ್ನು ವಿನಾಶದಂಚಿಗೆ ತಳ್ಳುವ ಮೂಲಕ ಮಂದಿ ತಮ್ಮ ಮೇಲೆ ತಾವೇ ಕಲ್ಲುಚಪ್ಪಡಿ ಎಳೆದುಕೊಳ್ಳುತ್ತಾರೆ. ಮುಂದುವರಿದು, ಉಳಿದ ನದಿ ಕೆರೆ ಕುಂಟೆಗಳ ಜಾಗವನ್ನು ಒತ್ತುವರಿ ಮಾಡಿ ಕತ್ತೆತ್ತಿ ನೋಡಿದರೂ ಕಾಣದಷ್ಟೆತ್ತರದ ಮುಗಿಲು ಮಹಲುಗಳನ್ನು ನಿರ್ಮಿಸುತ್ತಾರೆ. ಮತ್ತೂ ಮುಂದುವರಿದು ಉಳಿದ ಸಂಪನ್ಮೂಲಗಳಾದ ಬೆಟ್ಟ ಬಂಡೆಯನ್ನು ಐಷಾರಾಮಿ ಕಾರುಗಳಲ್ಲಿ ಓಡಾಡುವ ದೊರೆಗಳಿಗೆ ತೊಂದರೆಯಾಗದಿರಲೆಂದು ರಸ್ತೆ ನಿರ್ಮಿಸುವುದಕ್ಕಾಗಿಯೋ, ತಮ್ಮ ತಮ್ಮ ಮನೆಗಳ ಒಪ್ಪ ಒರಣ ಮಾಡಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶನಕ್ಕಿಡುವ ಸಲುವಾಗಿ ತಾವು ಕಟ್ಟುವ ಹೊಸ ಮನೆಗೆ ನೆಲ ಹಾಸಲೆಂದೋ ಬಲಿ ಹಾಕುತ್ತಾ ಇನ್ನುಳಿದ್ಯಾವುದಿದೆ ಹಾಳು ಮಾಡಲು ಎಂದು ಹೊಸ ಪಂಥ ಯೋಚಿಸುತ್ತಾರೆ. ಎಲ್ಲೆಲ್ಲಿ ನೋಡಿದರೂ ಉಕ್ಕಿ ಹರಿದು ಚಿಮ್ಮುತ್ತಿದ್ದ ನೀರಿನ ಸೆಲೆಗೇ ಕಂದರ ಕೊರೆದು ಅದರ ನೆಲೆಯನ್ನೇ ಆರಿಹೋಗುವಂತೆ ಮಾಡುತ್ತಾರೆ. ಕೇವಲ ಹತ್ತಾರು ಅಡಿಗೆ ಸಿಗುತ್ತಿದ್ದ ಅಂತರ್ಜಲ ಈಗ ಸಾವಿರಾರು ಅಡಿ ಕೊರೆದರೂ ಸಿಗುತ್ತಿಲ್ಲವೆಂದರೆ ಈ ಮಂದಿಯ ಹಕೀಕತ್ತು ಎಂಥದ್ದಿರಬಹುದು ನೀವೇ ಯೋಚಿಸಿ.

ಇಷ್ಟಕ್ಕೇ ಸುಮ್ಮನಿದ್ದರಾ ಮಂದಿ? ಉಹುಂ! ನಾನು ಇರುವ ಜಾಗದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕಾದವರು, ಶ್ರೀಕೃಷ್ಣ ಕಟ್ಟಿಸಿದ ಗೋಮಾಳದಲ್ಲಿರಬೇಕಾದ ಜಾನುವಾರುಗಳನ್ನು ತಂದು ಅದು ತೃಪ್ತಿಪಟ್ಟು ಇವರಿಗೆ ನಾಲ್ಕು ಮಣ ಹೆಚ್ಚಿಗೆ ಹಾಲು ಕೊಡುವ ತನಕ, ಒಂದೇ ದಿನದಲ್ಲಿ ಗದ್ದೆಯ ಕೆಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸುವ ಶಕ್ತಿ ಬರುವ ತನಕ ಅದಕ್ಕೆ ಸ್ನಾನ ಮಾಡಿಸಿ ನಾನಿರುವ ಜಾಗವನ್ನು ಕೊಳಕು ಮಾಡುತ್ತಾರೆ. ತಮ್ಮ ಕೊಳಕು ಬಟ್ಟೆಯನ್ನಲ್ಲದೆ, ಶೌಕವನ್ನೂ ನನ್ನಲ್ಲಿ ವಿಲೀನಗೊಳಿಸಿ ಕಲ್ಮಶ ಮತ್ತಷ್ಟು ಹೆಚ್ಚುವಂತೆ ಮಾಡುತ್ತಾರೆ. ತಮ್ಮ ಮನೆ ಪೂಜೆಹೋಮಗಳಲ್ಲಾದ, ದೇವರ ಪೂಜೆಯ ನಂತರ ಬಳಸಿ ಬಿಸಾಡುವ ಹೂ ಕಸ ಕಡ್ಡಿಯನ್ನು, ಬಾಳೆಲೆಯನ್ನು ತಂದು ನನ್ನ ಜಾಗದಲ್ಲಿ ಹಾಕಿ ಅದರಲ್ಲಿರುವ ಜಲಾಚರಗಳಿಗೆ ತೊಂದರೆ ತಂದೊಡ್ಡುತ್ತಾ, ಕಾರ್ಕಾನೆಗಳ ವಿಷಯುಕ್ತ ಮಾಲಿನವನ್ನು ನನ್ನೊಳಗೆ ಹರಿದುಬಿಡುತ್ತಾರೆ. ಇನ್ನು ನಾನೆಲ್ಲಿ ಉಳಿಯಬೇಕು? ನನಗೆ ಉಳಿಗಾಲವೆಲ್ಲಿ? ಈ ಮಂದಿ ಮಾಡುವ ಅನಾಚಾರಗಳೆಲ್ಲವನ್ನೂ  ಸಹಿಸಿಕೊಂಡು ನನಗೂ ಸಾಕಾಗಿ ಹೋಗಿದೆ. ಆದರೂ ಅವರ ಮೇಲಿರುವ ಸೇವೆ ಮಾಡುವ ಮನೋವೃತ್ತಿ ನನ್ನಲ್ಲಿ ಒಂಚೂರೂ ಕಡಿಮೆಯಾಗಿಲ್ಲವೆಂದರೆ ನೀವು ನಂಬಲೇಬೇಕು!

ಬರುಬರುತ್ತಾ ಪರಿಸ್ಥಿತಿ ಹೇಗಾಗಿದೆ ಎಂದರೆ ನಾನುಳಿದುಕೊಳ್ಳುವ ಜಾಗ ಕೆರೆಕುಂಟೆ ಬರಿದಾಗಿದ್ದರೆ ಅದನ್ನೂ ಬಿಡದ ಈ ಮಂದಿ, ಅದನ್ನು ಅಕ್ರಮವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಭೂಪರಿವರ್ತನೆ ಮಾಡಲು ಮುಂದಾಗಿರುವುದು! ನಾನು ಬಂದಾಗ ಉಳಿಯಲು ಜಾಗವೇ ಇರದಿದ್ದರೆ ನಾನು ಇಲ್ಲಿಗೆ ಬಂದು ಮಂದಿಗೆ ಅನಂತ ಸೇವೆ ಮಾಡುವುದಾರೂ ಹೇಗೆ? ಹೋಗಲಿ ನಾನು ಬರುವುದಾದರೂ ಸಾಧ್ಯವಾದೀತೆ? ಚಿಂತೆ ಮಾಡಬೇಕಾದ ಮಂದಿ ನಿದ್ದೆಯಲ್ಲಿ ತೂಕಡಿಸುತ್ತಾ ಒಬ್ಬರ ಕಾಲನೊಬ್ಬರು ಎಳೆಯುತ್ತಾ ಕಾಲಹರಣ ಮಾಡುತಲಿದ್ದಾರೆ. ಯಾವುದು ಸ್ವಾಮಿ ಅಭಿವೃದ್ಧಿ? ತಾನಾಗೇ ಹುಟ್ಟಿ ಬೆಳೆದು ಹಲವು ದಶಕಗಳಿಂದ ತಂಪಾದ ಗಾಳಿ ನೆರಳು ನೀಡುವ ಮರಗಳನ್ನು ಕಡಿಯುವುದಾ? ಕಣ್ಣಿಗೆ ಕಾಣದಂತೆ ಒಳಗೊಳಗೇ ಅರಣ್ಯ ಕಡಿದು ನಾಶ ಮಾಡುವುದಾ? ಅದರಲ್ಲಿರುವ ಅಗಣಿತ ಸಂಪತ್ತನ್ನು ತನ್ನ ಉಳಿವಿಗೋಸ್ಕರ ಬಲಿ ಕೊಡುವುದಾ? ವನ್ಯ ಮೃಗಗಳನ್ನು ಪ್ರಾಣಿಪಕ್ಷಿಗಳನ್ನು ತನ್ನ ಬೇಟೆಯ ತೆವಲು ತೀರಿಸಿಕೊಳ್ಳಲು, ನಾಲಗೆಯ ಚಪಾಲವಾರಿಸಿಕೊಳ್ಳಲು ಕೊಲ್ಲುವುದಾ? ಹಿರಿಯರು ಮಾಡಿಟ್ಟ ಬಂಗಾರ ಬೆಳೆವ ಭೂತಾಯಿಯನ್ನು ಅನ್ಯರಿಗೆ ಮೂರು ಕಾಸಿಗೆ ಮಾರಿ ಪಟ್ಟಣ ಸೇರುವುದಾ? ನದಿಮೂಲವನ್ನು, ನದಿ ಪಾತ್ರವನ್ನು ಸವರುತ್ತಾ ತಾನು ತನ್ನ ಹೆಂಡಿರು ಮಕ್ಕಳಿರಲು ಬೆಚ್ಚಗಿನ ಮನೆ ಕಟ್ಟಿಸುವುದಾ? ಅನೈರ್ಮಲ್ಯೀಕಾರಣವಾಗುವ ವಿಷಯುಕ್ತ ರಾಸಾಯನಿಕವನ್ನು ಜಲದೊಡಲಿಗೆ ಹರಿದು ಬಿಡುವುದಾ? ಯಾವುದು ಸ್ವಾಮಿ ಅಭಿವೃದ್ಧಿ ಹಾಂ? ಒಂದು ತಿಳಿದುಕೊಳ್ಳಿ, ತಾನು ಯಾವುದನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲವೋ ಅದನ್ನು ನಾಶ ಮಾಡಲು ಆತನಿಗೆ ಯಾವುದೇ ಹಕ್ಕಿಲ್ಲ!

ಹೋಗಲಿ ಬಿಡಿ. ಈಗ ಅವರ ಬಗ್ಗೆ, ಮಂದಿ ಮಾಡುವ ಅನಾಚಾರದ ಬಗ್ಗೆ ಎಷ್ಟು ಹೇಳಿದರೂ ತಾವು ಮಾಡುವ ಕೆಲಸವನ್ನೇ ಮಾಡುತ್ತಿರುತ್ತಾರೆ.

ಆದರೆ ನಾನೀಗ ಹೇಳಹೊರಟಿರುವುದು ಈ ಮೇಲ್ಕಾಣಿಸಿದ ಯಾವ ವಿಷಯವನ್ನೂ ಅಲ್ಲ. ನನ್ನ ಮನದಾಳದ ಮಾತುಗಳು, ನನ್ನ ಅಂತರಾಳದಲ್ಲಿ ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳು ಮತ್ತು ಅದಕ್ಕೆ ಯಾರಿಂದಲಾದರೂ ಉತ್ತರ ಸಿಗಬಹುದೇನೋ ಎನ್ನುವ ಕಾತರವಷ್ಟೇ.

ಮೊದಲೇ ಹೇಳಿದೆನ್ನೆಲ್ಲಾ ನಾನು ಮಂದಿಗೆ ಮಾಡುವ ಸೇವೆ ಅವರವರ ಭಾವಧರ್ಮಕ್ಕನುಗುಣವಾಗಿರುತ್ತದೆ ಎಂದು? ನೋಡಿ ಏನಾಗುತ್ತದೆ ಎಂದರೆ, ಈ ಮಂದಿ ನನ್ನನ್ನು ಸುಖಾಸುಮ್ಮನೆ ಮೂದಲಿಸುತ್ತಾರೆ. ವಿನಾಕಾರಣ ದ್ವೇಷಿಸುತ್ತಾರೆ. ನಾನು ಕಾರಣನಲ್ಲದ ಅವರ ಪರಿಸ್ಥಿಗೆ ನನ್ನನ್ನು ಹೊಣೆಗಾರನನ್ನಾಗಿ ಮಾಡುತ್ತಾರೆ. ಎಲ್ಲ ಘೋರವನ್ನೂ ನಾನೇ ಮಾಡಿದೆ, ನನ್ನಿಂದಲೇ ಆಯಿತು ಎಂದು ತಿಳಿಯುತ್ತಾರೆ. ಎಲ್ಲ ಅವರ ಕಷ್ಟಕ್ಕೂ ನನ್ನನ್ನು ಭಾದ್ಯೆತೆದಾರನನ್ನಾಗಿಸುತ್ತಾರೆ. ನನ್ನ ಸೇವೆಯಿಂದ ಕೆಲವೊಮ್ಮೆ ಸಂತೃಪ್ತಿಪಡುವ ಅದೇ ಜನ, ನನ್ನನ್ನು ಅಪರಾಧೀ ಕಟಕಟೆಯಲ್ಲಿ ನಿಲ್ಲಿಸುತ್ತಾರೆ. ನೀನು ಮಾಡಿರುವುದು ಸರಿಯಾ? ಎಂದು ನನ್ನನ್ನೇ ನ್ಯಾಯ ಕೇಳುತ್ತಾರೆ. ಅಲ್ಲಾ ಸ್ವಾಮಿ ನನಗೂ ಒಂದು ಮನಸ್ಸಿದೆ, ಅದರಲ್ಲಿ ಮಂದಿಗೆ ಒಳ್ಳೆಯದು ಮಾಡುವ ಆಲೋಚನೆಯಿದೆ, ನನ್ನ ಮಸ್ತಕಕ್ಕೂ ಭಾವನೆಗಳಿವೆ, ಒಳ್ಳೆಯದ್ಯಾವುದೂ ಕೆಟ್ಟದ್ಯಾವುದೂ ಎಂದು ನಿರ್ಧರಿಸುವ ಗುಣವಿದೆ ಎಂದಾಗಲೀ ಮಂದಿ ನನ್ನ ಕುರಿತು  ಏಕೆ ಆಲೋಚಿಸುವುದಿಲ್ಲ? ಏನೋ ಕೆಲವೇ ಕೆಲವು ಮಂದಿ ಯೋಚಿಸಿದರಾಯಿತೇ? ಎಲ್ಲರೂ ಇದರ ಬಗ್ಗೆ ಗಂಭೀರವಾಗಿ ಅವಲೋಕಿಸಿ ನಿರ್ಧಾರ ಕೈಗೊಳ್ಳಬಾರದೇಕೆ? ಯಾರೋ ಕೆಲವೇ  ಕೆಲವು ಮಂದಿಗಿರುವ ಭವಿಷ್ಯದ ಚಿಂತೆ, ಮುಂದಿನ ಪೀಳಿಗೆಗಾಗಿ ಮಿಕ್ಕುಳಿದ ಕಾಲ ಕಸದಂತಷ್ಟೇ ಇರುವ ಪರಿಸರ, ನದಿ, ಕಾಡು, ಗುಡ್ಡ, ಮೇಡು, ಪ್ರಾಣಿಪಕ್ಷಿ, ಹುಳುಹುಪ್ಪಟೆಗಳನ್ನು ಸಂರಕ್ಷಿಸಿ ಕಾಪಾಡಿ ಪೊರೆಯುವ ಮುಂದಾಲೋಚನೆಯೇಕಿಲ್ಲ? ಮೇಲೆ ಹೇಳಿದ ಹಾಗೆ ಮಂದಿ ಮಾಡಬಾರದ ಅನಾಚಾರಗಳನ್ನೆಲ್ಲಾ ಮಾಡಿದಾಗ ಆಗಾಗ್ಗೆ ನಾನು ಅವರ ಮೇಲೆ ಸ್ವಲ್ಪ ಮುನಿಯುವುದುಂಟು. ಹಾಗೆ ನಾನು ಮುನಿದು ನನ್ನ ಸೇವೆಯನ್ನು ವ್ಯತಿರಿಕ್ತವಾಗಿ ಕೊಡುವುದೂ ಉಂಟು. ಹಾಗಾದಾಗ, ಕೆರೆಕುಂಟೆ ನದಿ ಶರಧಿಯಲ್ಲಿ ಪ್ರವಾಹ ಉಂಟಾಗುತ್ತದೆ. ಜಲ ಪ್ರಳಯ ಜನ್ಮ ತಾಳುತ್ತದೆ. ನದಿ ಝರಿಗಳು ಭೋರ್ಗರೆದು ಧುಮ್ಮಿಕ್ಕುತ್ತವೆ. ಸಾಗರದಲೆಗಳು ತೀರಕೆ ಬಡಿದಪ್ಪಳಿಸುತ್ತವೆ. ಎಂದೂ ಶಾಂತವಾಗಿದ್ದ ಇವುಗಳನ್ನು ನೋಡಿದ್ದ ಮಂದಿ ಈ ಪರಿ ಮತಿಗೆಟ್ಟಂತಾಡುವ ಜಲಮೂಲಗಳನ್ನು ನೋಡಿ ನನ್ನನ್ನು ದೂಷಿಸತೊಡಗುತ್ತಾರೆ. ಇದರಲ್ಲಿ ನನ್ನ ತಪ್ಪೇನು? ಮಂದಿ ಮಾಡಿದ ಅನಾಚಾರ ಅಕ್ರಮಗಳನ್ನೆಲ್ಲಾ ಸಹಿಸಿಕೊಂಡು ಅವರವರು ಮಾಡಿದ ಕೆಲಸಕ್ಕೆ ತಕ್ಕಂತೆ ನನ್ನ ಸೇವೆ ಮಾಡುತ್ತಿರುವೆನೆಲ್ಲಾ ಅದು ತಪ್ಪೇನು? ಪ್ರಕೃತಿ ವಿಕೋಪಗಳಾದಾಗ ಮಂದಿ ದಿಕ್ಕಾಪಾಲಾಗುತ್ತಾರೆ. ಅದನ್ನು ನೋಡುವ ನನಗೆ ಎಷ್ಟು ಸಂಕಟವಾಗುತ್ತದೆ ಎಂದು ಯಾರಾದರೂ ಯೋಚಿಸಿದ್ದೀರೇನು? ಆಗುವ ನೋವು, ಆಸ್ತಿಪಾಸ್ತಿ ಮನೆಮಠ ನಾಶದ ಬಗ್ಗೆ ಮಂದಿ  ಯೋಚಿಸುವರೇ ವಿನಃ, ಇದು ಏಕಾಯಿತು? ಇದರಲ್ಲಿ ನನ್ನ ಪಾತ್ರವೇನು?  ಎಂದು ಮಾತ್ರ ಯೋಚಿಸುವುದಿಲ್ಲ. ಇದಕ್ಕೆ ಕಾರಣವೇನೆಂದು ಹುಡುಕುವ ಗೋಜಿಗೇ ಹೋಗುವುದಿಲ್ಲ. ಪುನಃ ಹೀಗೆ ಮತ್ತೆ ಆಗದಂತೆ ಮಾಡಬೇಕಾಗಿರುವುದೇನು? ಎಂದು ಚಿಂತಿಸುವುದೇ ಇಲ್ಲ. ಆಗುವ ಎಲ್ಲಾ ಅನಾಹುತಗಳಿಗೆ ನನ್ನನ್ನು ಕಾರಣೀಭೂತನನ್ನಾಗಿಸಿ ತಾವು ಮಾತ್ರ ಮುಗುಮ್ಮಾಗಿ ಉಳಿದುಬಿಡುತ್ತಾರೆ. ಮಂದಿಗೆ ತಾವು ಯಾವ ಕೆಲಸ ಮಾಡಬೇಕು? ಯಾವುದು ಮಾಡಬಾರದು? ಎನ್ನುವ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ತಿಳುವಳಿಕೆಯಿದೆ. ತಿಳಿದೂ ತಿಳಿದೂ ಹೀಗೆ ಮಾಡಬಾರದ್ದನ್ನೆಲ್ಲಾ ಮಾಡಿ ಕೊನೆಗೆ ನನ್ನ ವಿರುದ್ಧವೇ ತಿರುಗಿಬೀಳುತ್ತಾರಲ್ಲ ನನಗೆಷ್ಟು  ಮರ್ಮಾಘಾತವಾಗಿರಬೇಡ? ನನ್ನಲ್ಲೂ ಇರುವ ಹೃದಯ ಅದೆಷ್ಟು ನೊಂದಿರಬೇಡ? ಸಹಿಸಿ ಸಹಿಸಿ ಕೊನೆಗೆ ಈ ಅನಾಚಾರ ಅಕ್ರಮವನ್ನು ತಡೆಯಲಾಗದೆ ಮಂದಿಗೆ ಸ್ವಲ್ಪ ಚುರುಕು ಮುಟ್ಟಿಸಲು ಹೋದರೆ ನನಗೇ ಈ ಪರಿ ಪರಿಭ್ರಮಣೆಗೊಳಪಡಿಸುವ ಇವರ ಕುತಂತ್ರಕ್ಕೆ ನಾನೇನನ್ನಬೇಕು ನೀವೇ ಹೇಳಿ?

ಬಿಡಿ ನನ್ನ ಕಥೆಯನ್ನು ಹಂಚಿಕೊಳ್ಳಲು, ನನ್ನ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು, ಯಾರಿಗೂ ಪುರುಸೊತ್ತಿಲ್ಲ. ಮಂದಿ ತಾವು ಸಮಯದ ಹಿಂದೆ ಬಿದ್ದಿದ್ದಾರೆ. ಕಾಲನ ಕುದುರೆಯ ಸ್ಪರ್ಧೆಗೆ ಇಳಿದು ದುಡ್ಡು ಮಾಡುವುದೊಂದನ್ನೇ ತಮ್ಮ ಧ್ಯೇಯವನ್ನಾಗಿ ಪರಿಗಣಿಸಿ, ತಾವು ಚಿಕ್ಕಚಿಕ್ಕ ಸಂತೋಷಗಳನ್ನನುಭವಿಸದೇ, ಜೊತೆಯಲ್ಲಿರುವರಿಗೂ ಅದರ ಸವಿಯನ್ನುಣಬಡಿಸದೆ ಓಡುತ್ತಲೇ ಇದ್ದಾರೆ. ಅವರು ಓಡಲಿ ಬಿಡಿ. ಅವರಿಗೆ ನಾನು ಮತ್ತು  ನನ್ನ ಅಸ್ತಿತ್ವದ ಬಗ್ಗೆ ಪರಿವೆಯೇ ಇಲ್ಲ. ಇನ್ನು ಮಿಕ್ಕುಳಿದವರಲ್ಲಿ ನನ್ನ ಬಗ್ಗೆ ಚಿಂತಿಸಿ ಯೋಚಿಸುವವರಿಗೆ ಅಂದುಕೊಂಡಿದ್ದನ್ನು ಕಾರ್ಯಗತಕ್ಕೆ ತರಲು ಈ ಅನಾಗರೀಕ ಆರಾಜಕತೆಯಿಂದ ಕೂಡಿದ ಈ ಸಮಾಜ ಬಿಡುವುದಿಲ್ಲ. ಯಾವುದೋ ದೇವರದಯೆ, ನೀವಾದರೂ ಸಿಕ್ಕಿದಿರೆಲ್ಲಾ ನನ್ನ ಮಾತುಗಳನ್ನು, ನಾನು ಒಳಗೊಳಗೇ ಮನುಷ್ಯ ಭೂಮಿ ಮೇಲೆ ಜನುಮ ತಾಳಿದಾಗಿನಿಂದಲೂ ಅನುಭವಿಸಿಕೊಂಡು ಬರುತ್ತಿರುವ ವೇದನೆಯನ್ನು ಕೇಳಲು? ನನಗೆ ಅಷ್ಟು ಸಾಕು.

ಹಾಂ! ನಾನ್ಯಾರೆಂದು ನಿಮಗೆ ಹೇಳಲೇ ಇಲ್ಲವಲ್ಲವೇ? ನನ್ನನ್ನು "ಮಳೆ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
೧೮ ೦೮ ೨೦೧೭

Wednesday, September 23, 2015

ತನ್ನೊಳಗಿರುವ ತನತೋಫೋಬಿಯ..

ಸುಂದರ ಮಲೆನಾಡಿನ ಮಡಿಲೊಳಗಿರುವುದೇ ನನ್ನ ಈ  - ಬಾಳೇಬೀಡು. ಹೆಸರಿಗೆ ತಕ್ಕಂತೆ ಹಳ್ಳಿಯ ರೈತರೆಲ್ಲ ಹೆಚ್ಚಾಗಿ ಬಾಳೇತೋಟ ಹೊಂದಿರುವುದರಿಂದ ಮತ್ತು ನಮ್ಮ ಹಳ್ಳಿಯಲ್ಲಿ ಸಿಗುವಂಥ ಬಾಳೇಹಣ್ಣು ಪ್ರಸಿಧ್ಧಿಯಾಗಿರುವುದರಿಂದ ಹಳ್ಳಿಗೆ ಬಾಳೇಬೀಡು ಎಂಬ ಹೆರಸು ಬಂದಿತು.
ಎಲ್ಲರಂತೆ ನನ್ನ ತಂದೆ ಕೂಡ ಕೃಷಿಕರು. ಬಾಳೇ ತೋಟ, ಜೊತೆಗೊಂದಿಷ್ಟು ಅಡಿಕೆ ಮರ, ಮನೆಗೆ ಸಾಕು ಬೇಕಾಗುವಷ್ಟು ಬೆಳೆಯುವ ತರಕಾರಿ ಕೈದೋಟ ಇದೆ. ಹಿಂದಿನಿಂದಲೂ ಬಂದ ಸಂಪ್ರದಾಯದಂತೆ, ಮನೆಗೆ ದೊಡ್ಡ ಮಗನಾದ ನನ್ನಪ್ಪನು ತಾತನ ಆಣತಿಯಂತೆ ಡಿಗ್ರಿ ಮುಗಿದಿದ್ದರು ಕೆಲಸಕ್ಕೆ ಹೋಗದಂತೆ ವ್ಯವಸಾಯದಲ್ಲಿ ತೊಡಗಿಸಿಕೊಂಡು ತನ್ನ ತಮ್ಮಂದಿರನ್ನು ಅವರಿಷ್ಟದಂತೆ ಓದಿಸಿ ಕೆಲಸಕ್ಕೆ ಸೇರಿಸಿದ್ದರು. ನನ್ನ ಇಬ್ಬರು ಚಿಕ್ಕಪ್ಪಂದಿರು ಒಳ್ಳೊಳ್ಳೆ ಹುದ್ದೆಗಳಲ್ಲಿದ್ದಾರೆ. ನನ್ನಪ್ಪನೇ ಅವರಂತೆ ಕೆಲಸಕ್ಕೆ ಹೋಗದೆ ಹೀಗೆ ತಾತ ನೆಟ್ಟ ಮರಕ್ಕೆ ಜೋತುಬಿದ್ದಿರುವುದು. ಹೀಗಂತ ಅಪ್ಪನಿಗೂ ಬಹಳಷ್ಟು ಸಲ ಅನಿಸಿದ್ದಿದೆ, ಆದರೆ ಯಾರ ಬಳಿಯೂ ಬಾಯಿ ಬಿಟ್ಟು ಹೇಳುವುದಿಲ್ಲ, ಎಂದಿಗೂ ಬೇಜಾರು ಮಾಡಿಕೊಂಡಿಲ್ಲ. 

ಯಾಕೆಂದರೆ ತಾನು ಕಂಡ ಕನಸು ನನ್ನ  ಮುದ್ದು ಮಗಳ ಮುಖಾಂತರ ನೆರವೇರಿಸಿಕೊಂಡರಾಯ್ತು ಬಿಡು ಎಂಬುದು ಅಪ್ಪನ ಲೆಕ್ಕಾಚಾರ! ನಾನೇ ಆತನ ಮುದ್ದಿನ ಮಗಳು, ಹೆಸರು ಪೂರ್ವಿಕ. ನಾನು ನಾಲ್ಕನೆ ಈಯತ್ತೆಯಲ್ಲಿ ಓದುತ್ತಿದ್ದೇನೆ. ನಮ್ಮ ಮನೆಯಲ್ಲಿ ಅಜ್ಜ ಅಪ್ಪ ಅಮ್ಮ ಮತ್ತು ಎಲ್ಲರ ಮುದ್ದಿನ ಕೂಸಾದ ನಾನು ಬಹಳ ಸಂತೋಷದಿಂದ ಇದ್ದೀವಿ.

ನನ್ನ ಕೆಲಸವೇನೆಂದರೆ ಅಲ್ಲಲ್ಲ! ಆದ್ಯ ಕರ್ತವ್ಯ ಏನೆಂದರೆ ಅಪ್ಪ ಹೇಳಿದಂತೆ ಒಂದು ದಿನವೂ ತಪ್ಪಿಸದೆ ಶಾಲೆಗೆ ಹೋಗುವುದು, ಅಲ್ಲಿ ಹೇಳಿಕೊಟ್ಟಿದ್ದನ್ನ ಚಾಚೂತಪ್ಪದೆ ಕಲಿತು, ಪರೀಕ್ಷೆಯಲ್ಲಿ ಪಾಸಾಗುವುದು. ಹಾಗೆ ಮುಂದೆ ಓದಿ ದೊಡ್ಡವಳಾಗಿ ಒಂದೊಳ್ಳೆ ಕೆಲಸಕ್ಕೆ ಸೇರಿ ನನ್ನ ಕಾಲ ಮೇಲೆ ನಿಂತ ನಂತರದ ಒಂದೆರಡು ವರ್ಷದಲ್ಲಿ ಮದುವೆ, ಆಮೇಲೆ ಸಂಸಾರ, ಮಕ್ಕಳು.....ಅಪ್ಪನ ಆಸೆ ಒಂದೆರಡಲ್ಲ !! ಎಲ್ಲ ಸರಿ, ಆದರೆ ಶಾಲೆಗೆ ಹೋಗುವುದೇ ತಲೆನೋವು. ಪ್ರತಿ ದಿನ ಹಾಯಿ ದೋಣಿಯಲ್ಲಿ ಕುಳಿತು ನದಿ ದಾಟಿ, ಅಲ್ಲಿಂದ ಮುಕ್ಕಾಲು ಘಂಟೆ ಕಾಡಿನ ಥರ ಆದರೆ ಕಾಡಲ್ಲದ ರಸ್ತೆಯಲ್ಲಿ ಹಾದಿ ಸವೆಸಿದರೆ ಒಕ್ಕೋಡಿಯಲ್ಲಿರುವುದೆ ನಮ್ಮ ಶಾಲೆ.

ಶಾಲೆಗೆ ಹೋಗುವ  ಹಾದಿಯಲ್ಲಿ ಸಿಗುವ ಮಾವಿನ ಮರಕ್ಕೆ ಕಲ್ಲು ಹೊಡೆಯೋದು, ಹುಣಸೇಹಣ್ಣು ಉದುರಿಸೋದು,  ಒಬ್ಬರಿಗೊಬ್ಬರು ಹೊಡೆಯುತ್ತಾ, ಹಾಡುತ್ತಾ, ನಗಾಡುತ್ತಾ,  ಕುಂಟೆ ಬಿಲ್ಲೆ ಆಡುತ್ತಾ,  ಅಜ್ಜ ಹೇಳಿದ ಕಥೆ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ ಹೋಗುತ್ತಿದ್ದರೆ ದಾರಿ ಸವೆದದ್ದೇ ಗೊತ್ತಾಗುತ್ತಿರಲಿಲ್ಲ. ಶಾಲೆಗೆ ಖುಷಿ ಖುಷಿಯಾಗಿ ಹೋಗಲು ನಮಗಿದ್ದ ಏಕೈಕ ಕಾರಣವೆಂದರೆ ಇದೇ. ಶಾಲೆ ಮುಗಿಸಿ ಬರುವಾಗಲು ನಮ್ಮ ತುಂಟಾಟ ನಡೆಯದೆ ಇರುತ್ತಿರಲಿಲ್ಲ.

ಸಂಜೆಯಾದರೆ ಅಪ್ಪ  ತೋಟದಿಂದ ಬರುತ್ತಿದ್ದರು. ಬರುವಾಗ ವರ್ಕಿ, ಆಮ್ ಚೂರು, ಬಾಯಿ ಬಣ್ಣ , ನಿಂಬೇಹುಳಿ, ಈಚಲಣ್ಣು, ಎಲಚಿ, ನೇರಳೆ, ಗೇರಣ್ಣು,  ಮೂಗಣ್ಣು ಮುಂತಾದವು ತರುತ್ತಿದ್ದರು. ಇವತ್ತು ಏನು ತರುವರೋ ಎಂಬ ಕುತೂಹಲವೇ ಅಪ್ಪನ ಬರುವಿಕೆ ಎದುರು ನೋಡುವಂತೆ ಮಾಡುತ್ತಿತ್ತು. ಅಮ್ಮ ಬಯಸಿದರೆ, ಅಪ್ಪ ನಮ್ಮನ್ನು ಪಕ್ಕದೂರಿನಲ್ಲಿ ನಡೆಯುತ್ತಿದ್ದ ಪೆರ್ಡೂರು ಮೇಳಕ್ಕೆ ಕರೆದುಕೊಂಡು ಹೋಗಿ ಜಾವದ ತನಕ ಯಕ್ಷಗಾನ ತೋರಿಸುತ್ತಿದ್ದರು. ನಮ್ಮ ನೆಮ್ಮದಿಗೆ ಕೊರತೆಯೇ ಇರಲಿಲ್ಲ.

ಆದರೆ ಇದ್ದಕ್ಕಿದ್ದಂತೆ ಒಂದು ದಿನ ನಡೆಯಬಾರದ್ದು ನಡೆದು ಹೋಯ್ತು !

ನನ್ನ ಮಲೆನಾಡು ನನ್ನ ಜೀವ. ಬಿಟ್ಟರೆ ಇಲ್ಲಿಯೇ ಪ್ರಾಣ ಬಿಟ್ಟೇನು ಬೇರೆಲ್ಲೂ ಮಣ್ಣಿಗೆ ಮರಳಲು ಇಷ್ಟವಿಲ್ಲ ಎನ್ನುತ್ತಿದ್ದ ಅಪ್ಪ, ಬೆಂಗಳೂರಿನಲ್ಲಿರುವ ಸಂಭಂಧಿಯೊಬ್ಬರ ಮದುವೆಗೆ ಹೋಗಿದ್ದಾಗ ಮದುವೆ ಮನೆಯಲ್ಲಿ  ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅಲ್ಲಿದ್ದ ಎಲ್ಲರೂ ಗಾಬರಿಯಾಗಿ ಅಪ್ಪನತ್ತ ಬರುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಅಪ್ಪ  ಸಾವನ್ನಪ್ಪಿದ್ದರು !!! ಮದುವೆಮನೆ ಸಾವಿನಮನೆಯಾಗಿತ್ತು.

ಇಡೀ ಹಳ್ಳಿಗೆ ಹಳ್ಳಿಯೇ ಬೆಚ್ಚಿಬಿದ್ದಿತ್ತು ಅಪ್ಪನ ಸಾವಿಗೆ . ಶೋಕಸಾಗರದಲ್ಲಿ ಮುಳುಗಿದ ನಮ್ಮನ್ನು ಅವರೆಲ್ಲರೂ ಸಂತೈಸುತ್ತಿದ್ದರು. ಅಮ್ಮ ಅಂತೂ ಸಾವಿನ ಸುದ್ದಿ ಕೇಳಿ ಮೂರ್ಚೆ ಹೋಗಿದ್ದಳು. ಅಜ್ಜನ ನೋವು ಹೇಳತೀರದು. ನನಗೆ ಅಪ್ಪ ಸತ್ತಿದ್ದಾರೆ ಎಂದನಿಸುತ್ತಲೇ ಇಲ್ಲ ; ಪ್ರಶಾಂತವಾಗಿ ವರಾಂಡದಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದಾರೆನಿಸಿತು. ಊರಿಂದ ಬಂದ ಚಿಕ್ಕಪ್ಪಂದಿರು ಮುಂದೆ ನಿಂತು ನಡೆಯಬೇಕಾದ ಕೆಲಸಕಾರ್ಯ ಮುಗಿಸಿದರು. ಎಷ್ಟು ದಿನ ಬಂಧುಗಳು, ಸ್ನೇಹಿತರು ಕೊನೆಗೆ ಚಿಕ್ಕಪ್ಪಂದಿರು ಸಾಂತ್ವಾನ ಹೇಳುತ್ತಾ ಜೊತೆಯಲ್ಲಿರುತ್ತಾರೆ? ಎಲ್ಲರು ಒಂದಲ್ಲ ಒಂದು ದಿನ ಮರಳಿ ಅವರವರ ಗೂಡಿಗೆ, ಕೆಲಸಕ್ಕೆ ಹಿಂದಿರುಗಲೇ ಬೇಕಲ್ಲ? ಎಲ್ಲರು ಹೋದ ನಂತರ ಕೊನೆಗೆ ಚಿಕ್ಕಪ್ಪಂದಿರೂ ಹೊರಡಲು ಅನುವಾದರು. ಹೊರಡುವ ಮುನ್ನಾ ವಿಷಣ್ಣ ಸ್ಥಿತಿಯಲ್ಲಿದ್ದ ಅಮ್ಮನ ಬಳಿ ಬಂದು,  " ಅತ್ತಿಗೆ ಹೋದ ಸಲ ಉಗಾದಿ ಹಬ್ಬಕ್ಕೆ ಬಂದಾಗ ಅಣ್ಣ ನಮ್ಮನ್ನು ಕರೆದು ಒಂದು ಪತ್ರ ಕೊಟ್ಟಿದ್ದ. ಏನಿದು ಪತ್ರ ಎಂದರೆ, ಸಮಯ ಬರೋವರೆಗು ಇದನ್ನ ಓದಬೇಡಿ  ಮತ್ತು ಯಾರಲ್ಲೂ ಚರ್ಚಿಸಬೇಡಿ ಅಂತ ಹೇಳಿದ್ದ. ಆತ ಹೇಳಿದ್ದ ಸಮಯವಂತೂ ಬರಲಿಲ್ಲ, ಅದಕ್ಕೆ ಈ ಪತ್ರವನ್ನೇನು ಮಾಡಬೇಕೊ ತೋಚುತ್ತಿಲ್ಲ , ನಿಮಗೆ ಕೊಡುತ್ತಿದ್ದೇವೆ " ಎಂದರು. ಪತ್ರ ತೆಗೆದುಕೊಂಡ ಅಮ್ಮ ಓದತೊಡಗಿದಳು. ಅದರಲ್ಲಿ ಹೀಗೆ ಬರೆದಿತ್ತು :

" ನನ್ನ ಪ್ರೀತಿಯ ಮುದ್ದಿನ ಪುಟಾಣಿ ಮಗಳೇ ನೀನು ನೂರು ವರ್ಷ ಸುಖವಾಗಿ ಬಾಳಬೇಕು, ಬಹಳ ನೆಮ್ಮದಿಯಿಂದ ಜೀವನ ನಡೆಸಬೇಕು. ಅದೇ ನನ್ನ ಆಸೆ. ಆದರೆ ನನಗೊಂದು ಖಾಯಿಲೆಯಿದೆ ಮಗಳೇ. ತನತೋಫೋಬಿಯ ಅಂತ. ಅಂದರೆ ತನ್ನ ಪ್ರೀತಿ ಪಾತ್ರರನ್ನು ಬಿಟ್ಟು ಎಲ್ಲಿ ಸಾಯುವೆನೋ ಎಂಬ ಭಯ, ಸಾವಿನ ಬಗ್ಗೆ ಅತೀ ಯೋಚಿಸಿದಾಗ ಉದ್ವೇಗಕ್ಕೊಳಗಾಗಿ ನಾನು ಸಾಯುತ್ತಿದ್ದೀನಿ ಇನ್ನೇನು ಸತ್ತೇ ಎನ್ನುವ ಮನಸ್ಥಿತಿ.  ನಿನ್ನನ್ನು ನೋಡಿದಾಗೆಲ್ಲ ನನ್ನ ಖುಷಿ ಇಮ್ಮಡಿಯಾಗುತ್ತಿತ್ತು, ಆಗ ನನ್ನ ಸಾವು ನನ್ನ ಕಣ್ಣೆದುರು ನಿಂತಿರುತ್ತಿತ್ತು. ಯಾರ ಬಳಿಯೂ ಇದನ್ನ ನಾನು ಹೇಳಿಕೊಂಡಿಲ್ಲ, ಹೇಳುತ್ತಲೂ ಇರಲಿಲ್ಲ. ಆದರೆ ಕಾರಣ ತಿಳಿಸದೆ ಸಾಯೋದು ನಂಗಿಷ್ಟವಿಲ್ಲ. ಎದುರು ನಿಂತು ಹೇಳಲಾಗದ್ದಕ್ಕೇ ಈ ಪತ್ರ. ನನ್ನ ಮುದ್ದಿನ ಅರಗಿಣಿ ನನ್ನನ್ನು ಕ್ಷಮಿಸು. ಪ್ರೀತಿಯ ಮಡದಿ ಅಮ್ಮು ನಿನಗಿದು ಅರ್ಥವಾದೀತೆಂದುಕೊಂಡಿದ್ದೇನೆ. ಅಪ್ಪನನ್ನು ಚೆನ್ನಾಗಿ ನೋಡಿಕೊ. ಮುಂದಿನ ಜನ್ಮದಲ್ಲಿ .... ..... ಬೇಡ ಬಿಡು. ಈ ಪತ್ರವನ್ನಿಲ್ಲಿಗೆ ಮುಗಿಸುತ್ತಿದ್ದೇನೆ. ನಾನು ಈ ಭೂಮಿ ಮೇಲೆ ಇಲ್ಲವಾದ ನಂತರವಷ್ಟೇ ಈ ಪತ್ರ ಓದತಕ್ಕದ್ದು "

ಯಾಕಾದರು ಪತ್ರ ಬರೆದಿಟ್ಟು ಹೋದರೊ ಅಪ್ಪ ! ಪತ್ರ ಓದಿ ಮುಗಿಸುತ್ತಿದ್ದಂತೆ ಅಲ್ಲಿದ್ದ ಐದಾರು ಜನ ಸಂಬಂಧಿಕರು ಸೇರಿದಂತೆ ಎಲ್ಲರ ಕಣ್ಣು ನನ್ನ ಮೇಲೇ !! ಇವಳೇ ಇವರಪ್ಪನನ್ನು ಬಲಿ ತೆಗೆದುಕೊಂಡಿದ್ದು ಎಂದು ಹೇಳುವ ಹಾಗಿತ್ತು ಅವರೆಲ್ಲರ ನೋಟ ! ಅಪ್ಪ ಯಾಕಾದರು ಪತ್ರ ಬರೆದಿದ್ದರೋ ? ಅಪ್ಪನ ಸಾವಿಗೆ ನಾನು ಕಾರಣವಾದೆನಾ? ಹಾಗಂತ ನನಗೇ ಅನ್ನಿಸತೊಡಗಿತು.

   ಹೌದು, ಹಾಗೆ ಅನ್ನಿಸಲು ಶುರುವಾಗಿ ಇಂದಿಗೆ ಹದಿನೆಂಟು ವರ್ಷಗಳೇ ಕಳೆದಿವೆ ! ಕಾಲಾನಂತರ ಎಲ್ಲರೂ ಇದನ್ನ ಮರೆತರು, ಮೊದಲಿನ ಸಾಮಾನ್ಯ ಸ್ಥಿತಿಗೆ ಮರಳಿದರು. ಆದರೆ ನನ್ನಿಂದ ಮಾತ್ರ ಮರೆಯಲಾಗಿಲಲ್ಲ , ಅಪ್ಪನ ಆಸೆಯಂತೆ ಓದಿ ಕೆಲಸಕ್ಕೆ ಸೇರಿ ಮದುವೆಯಾಗಿ ಮಕ್ಕಳಾಗಿ ಗಂಡ ಮಕ್ಕಳ ಜೊತೆ ನೆಮ್ಮದಿಯಿಂದಿದ್ದರೂ !

ಈಗಲೂ ನನ್ನಪ್ಪ ನನ್ನ ಜೊತೆ ಸದಾಕಾಲ ಇದ್ದಾರೆನಿಸುತ್ತದೆ ಮತ್ತು ಈಗೀಗ ಈ ಭಾವನೆ ತೀವ್ರವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ, ಮೊನ್ನೆ ನನ್ನ ಮಕ್ಕಳು ಅಂಗಳದಲ್ಲಿ ಆಡುತ್ತಿದ್ದರೆ ಎದುರಿಗೆ ಅಪ್ಪ ಪ್ರತ್ಯಕ್ಷವಾಗಿ ಬಂದು ಎದುರು ನಿಂತತಾಯ್ತು ಮತ್ತು ಅಪ್ಪನ ಕಂಡ ನನ್ನ ಕಣ್ಣುಗಳು ಅತೀವ ಸಂತಸದಿಂದ ರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ಅಪ್ಪ ನಿಂತಿದ್ದ ಜಾಗದಲ್ಲಿ ನನ್ನ ಮಕ್ಕಳು ಮರು ಸ್ಥಾಪಿತರಾಗಿ ಆಡುತ್ತಿದ್ದರು , ಅಪ್ಪ ಅಲ್ಲಿಂದ ಮಾಯವಾಗಿದ್ದ ! ನಿಜವೊ ಸುಳ್ಳೊ, ಕನಸೊ ನನಸೊ ? ತರ್ಕ ಬೇಕಿಲ್ಲ. ಆದರೆ ಅಪ್ಪ ನಿಂತಿದ್ದು , ನನ್ನ ನೋಡಿ ನಕ್ಕಿದ್ದು ಮಾತ್ರ ಸುಳ್ಳಲ್ಲ.
ಅಪ್ಪ ನನ್ನನ್ನು ಮೊದಲಿಗಿಂತಲೂ ಹೆಚ್ಚಾಗಿ ಆವರಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ನನ್ನ ಮಕ್ಕಳನ್ನು ಕಂಡರೆ ನನ್ನಪ್ಪನಿಗಾಗುತ್ತಿದ್ದಂತೆ ನನಗೂ ಖುಷಿ ಇಮ್ಮಡಿಯಾಗಿ ಮನಸ್ಸು ಉದ್ವೇಗಕ್ಕೆ ಬೀಳುತ್ತಿದೆ ! ಮತ್ತು ಅದೇನದು ಅಪ್ಪ ಹೇಳಿದ್ದ ಖಾಯಿಲೆ  ತನತೋಫೋಬಿಯ ಅಲ್ವಾ ? ಅದೀಗ ನನಗೆ ಸ್ವಲ್ಪ ಸ್ವಲ್ಪವೇ ಅರ್ಥವಾಗತೊಡಗಿದೆ. ಹೆಚ್ಚಾಗಿ ಮಲೆನಾಡ ಮಣ್ಣಿನ ವಾಸನೆ ಮೂಗಿಗೆಡರತೊಡಗಿದೆ. 

ನನ್ನ ಕೈ ಹಾಗು ಮನಸ್ಸು ಎಷ್ಟು ಬೇಡವೆಂದುಕೊಂಡರೂ ಹತೋಟಿಗೆ ಬರುತ್ತಿಲ್ಲ ; ಸದಾ ಕಾಲ ಪೆನ್ನು ಮತ್ತು ಬಿಳೀ ಹಾಳೆಗಾಗಿ ಹುಡುಕುತ್ತಿರುತ್ತದೆ - ನನ್ನ ಮಕ್ಕಳಿಗೆ ಪತ್ರ ಬರೆಯಲು...

ಪತ್ರ ಬರೆಯುವೆನಾ ???

.................................................
ಮೋಹನ್ ಕುಮಾರ್ ಡಿ ಎನ್ 
ನಿರೀಕ್ಷಣೆ.. 

ಕಾವೇರಿಯಮ್ಮನವರು ಉತ್ತರಿ ಹಬ್ಬದ ಮಾರನೆ ದಿನ ನಡೆಯುವ ಶ್ರೀ ಭಗಂಡೇಶ್ವರ ದೇವಸ್ಥಾನದಲ್ಲಿ ಯಜಮಾನರಾದ ಸುಬೇದಾರ್ ಉತ್ತಯ್ಯರ ಜೊತೆ ಅವರ ಜೀವದ ಗೆಳೆಯ ಬೆಳ್ಳಿಯಪ್ಪ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮ್ಮಕ್ಕೆ ಒಲ್ಲದ ಮನಸ್ಸಿನಿಂದ ಹೊರಟರು. ನಿಜ ಹೇಳಬೇಕೆಂದರೆ ಇಬ್ಬರಿಗು ಕಾರ್ಯಕ್ರಮಕ್ಕೆ ಹೋಗುವುದು ಇಷ್ಟವಿರಲಿಲ್ಲ. ಸ್ನೇಹಕ್ಕೆ ಕಟ್ಟುಬಿದ್ದು ಹೊರಡಲೇ ಬೇಕಾಯ್ತು. 


ದಂಪತಿಗಳಿಬ್ಬರು ಬಹುಶಃ ನೆಮ್ಮದಿಯಾಗೇ ಹೋಗುತ್ತಿದ್ದರೇನೋ? ಆದರೆ ನೆಮ್ಮದಿಯಾಗಿ ಹೋಗದ ಹಾಗೆ ಮಾಡಿದ್ದು ಒಂದು ಫೋನ್ ಕಾಲ್!


"ಗಡಿಯಲ್ಲಿ ಇಂಡೋ - ಸೈನಾ ಯುಧ್ಧ ಶುರುವಾಗಿದೆ ಮತ್ತು ನಿಮ್ಮ ಮಗನಿಗೆ ಮಂಜೂರಾಗಿದ್ದ ರಜಾ ರದ್ದಾಗಿ ಆತ ಯುಧ್ಧದಲ್ಲಿ ಪಾಲ್ಗೊಳ್ಳುತ್ತಿದ್ದಾನೆ"
ಇದೇ ಯೋಚನೆಯಲ್ಲಿ ದೇವಸ್ಥಾನಕ್ಕೆ ಹೊಗುವಾಗ ಇಬ್ಬರೂ ಯೋಚಿಸುತ್ತಿದ್ದುದು : "ಮಗ ಕ್ಯಾವಲ್ಲರಿ ವಿಭಾಗದ ಹಿರಿಯ ಅಧಿಕಾರಿ. ಅವನ ಕೈ ಕೆಳಗೆ 30 - 40 ಜನ ಕಿರಿಯ ಸಿಪಾಯಿಗಳು ಕೆಲಸ ಮಾಡುತ್ತಾರೆ. ಜೊತೆಗೆ ಹಿರಿಯ ಅಧಿಕಾರಿಯಾದ್ದರಿಂದ, ಹೊಸದಾಗಿ ಸೇನೆಗೆ ಸೇರುವರಿಗೆ ಅಡೀಷನಲ್ ಟ್ರೈನಿಂಗ್ ಬೇರೆ ಕೊಡಬೇಕು. ಹೀಗಾಗಿ ಬೇರೆಯವರಿಗೆ ಸಿಗುವಷ್ಟು ಸುಲಭವಲ್ಲ ಮಗನಿಗೆ ರಜೆ ಸಿಗೋದು. ಆದರೂ ಹರಸಾಹಸ ಮಾಡಿ ಒಂದು ತಿಂಗಳ ಮಟ್ಟಿಗೆ ರಜೆ ಮಂಜೂರು ಮಾಡಿಸಿಕೊಂಡು ಊರಿಗೆ ಬರುತ್ತಿದ್ದಾನೆ. ಈ ಸಲ ಬಂದರೆ ಮದುವೆ ಮಾಡಿ ಕಳಿಸಬೇಕೆಂದು ತೀರ್ಮಾನಿಸಿ ಹೆಣ್ಣು ನೋಡಿ, ಎಲ್ಲಾ ಮಾತುಕಥೆಯಾಗಿ, ಅವನೂ ಒಪ್ಪಿ,  ಈಗಾಗಲೆ ಮದುವೆ ಕಾರ್ಯಗಳು ಶುರುವಾಗಿವೆ. ಅಷ್ಟರಲ್ಲಿ ಇದೆಲ್ಲಿಂದ ಬಂತು ಈ ಯುಧ್ಧವೆಂಬ ಮಹಾಮಾರಿ" ??


ಒಬ್ಬ ಸೈನಿಕನ ತಂದೆತಾಯಿಯ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ. ಸದಾಕಾಲ ಮಗನ ಚಿಂತೆಯಲ್ಲಿರುತ್ತಾರೆ, ಆತನ ಒಂದು ಪತ್ರಕ್ಕೆ ವರ್ಷ ವರ್ಷ ಕಾಯುತ್ತಾರೆ, ಫೋನ್ ಬಂದರೆ ಅವರಿಗವತ್ತೇ ಹಬ್ಬ. ಅನುಭವಿಸಿದವರಿಗೇನೆ ಗೊತ್ತು ಅದರ ವೇದನೆ. ಮಕ್ಕಳನ್ನು ಭದ್ರವಾಗಿ ಮನೆಯಲ್ಲಿಟ್ಟು ಸಾಕಿ ಜೋಪಾನ ಮಾಡುವರಿಗೆ ಉಹುಂ ಖಂಡಿತ ಇದೆಲ್ಲ ಅರ್ಥವಾಗಲ್ಲ. ಸತ್ತರೆ ವೀರ ಸ್ವರ್ಗ, ದೇಶಕ್ಕೆ ಅರ್ಪಿಸಿದೆವೆಂಬ ನೆಮ್ಮದಿ - ಎರಡೇ ಆ ಸೈನಿಕರ ತಂದೆತಾಯಿಯರಲ್ಲಿ ಉಳಿಯೋದು.


ದೇವಸ್ಥಾನದಲ್ಲಿ ಪೂಜೆ ಶುರುವಾಯಿತು. ಇಬ್ಬರಿಗೂ ಮನಃಪೂರ್ತಿ ಭಾಗವಹಿಸಲಾಗುತ್ತಿಲ್ಲ. ಭಗಂಡೇಶ್ವರನ ಮುಂದೆ ನಿಂತ ಅವರಿಬ್ಬರದು ಒಂದೇ ಪ್ರಾರ್ಥನೆ : " ಮಗ ಯುಧ್ಧದಲ್ಲಿ ಗೆದ್ದು ಬರಲಿ. ಒಂದು ಪಕ್ಷ ಬರಲಾಗದಿದ್ದರೆ,  ಕೊನೆಪಕ್ಷ ತಾಯಿ ಭಾರತಿ ಸೋಲದಿರಲಿ"
ಎಷ್ಟು ತಂದೆತಾಯಿಗಿರುತ್ತದೆ ಈ ಮನೋಸ್ಥೈರ್ಯ!!!


ಆದರೆ ಅಲ್ಲಿ ಯುಧ್ಧಭೂಮಿಯಲ್ಲಿ ಒಂದೂವರೆ ತಿಂಗಳಾಗುತ್ತ ಬಂದಿದ್ದರು, ದಿಟ್ಟ ನಿರ್ಧಾರ, ಮುಂಜಾಗ್ರತ ಕ್ರಮ ಕೈಗೊಳ್ಳದ ನಾಲಾಯಕ್ ನೆಹರು ಸರ್ಕಾರದಿಂದ ಮತ್ತು ಚೀನಿಯರ ಕುತಂತ್ರ ಬುದ್ದಿಯಿಂದ ಗಡಿಯಲ್ಲಿ ನಮ್ಮ ಸೈನಿಕರ ಸಾಲು ಸಾಲು ಹೆಣ ಬೀಳುತ್ತಿದ್ದವು. ಸತ್ತವರಿಗೆ ಲೆಕ್ಕವಿಟ್ಟವರು ಯಾರು? ಅದರಲ್ಲಿ  ನಮ್ಮ ಕಾವೇರಿಯಮ್ಮ ಉತ್ತಯ್ಯನವರ ಮಗನೂ ಇರಬಹುದು!!


ಇತ್ತಕಡೆ ಕಾಲ ಸ್ತಂಭಿಸುತ್ತಿಲ್ಲ.  ಈ ತಂದೆತಾಯಿ ಕ್ಷಣವನ್ನು ಯುಗದಂತೆ ಕಳೆಯುತ್ತಿದ್ದಾರೆ. ಯುಧ್ಧ ಶುರುವಾಗಿ ಎರಡು ಎರಡೂವರೆ ತಿಂಗಳಾಗುತ್ತಾ ಬಂದಿದೆ. ಆದರೆ ಈಗ ಯುಧ್ಧದ ಮಾತಿಲ್ಲ. ಎಲ್ಲಾ ಮೊದಲಿನಂತೆ  ಪರಿಸ್ಥಿತಿ ತಣ್ಣಗಿದೆ. ಇನ್ನೊಂದೆರಡು ತಿಂಗಳು ಕಳೆದರೆ ಜನ ಯುಧ್ಧವನ್ನೆ ಮರೆತುಬಿಡಬಹುದು. ಆದರೆ ನಾವು ಮಗನನ್ನು ಮರೆಯಲಾದೀತೆ? ಹೇಗೆ ಸಾಧ್ಯ! ಯುಧ್ಧ ಶುರುವಿಗು ಮುಂಚೆ ಮಗನ ಬಗ್ಗೆ ಸೇನೆಯಿಂದ ಮಾಹಿತಿ ಬಂದದ್ದಷ್ಟೆ, ಇವತ್ತಿಗು ಈ ಕ್ಷಣಕ್ಕೂ ಬದುಕಿದ್ದಾನೊ ಸತ್ತಿದ್ದಾನೊ ಗೊತ್ತಿಲ್ಲ. ಸೇನೆಯಿಂದಲು ಯಾವುದೇ ಮಾಹಿತಿಯಿಲ್ಲ. ಇದ್ದೊಬ್ಬ ಮಗನನ್ನ ದೇಶಕ್ಕೆ ಅರ್ಪಿಸಿದೆವು, ಮಗ ಮರಳಿ ಬರುವುದಿಲ್ಲ ಎಂದು ಇಬ್ಬರು ಕಣ್ಣೀರಿಡಲಾರಂಬಿಸಿದ ಎರಡು ಮೂರು ದಿನಕ್ಕೆ ಸರಿಯಾಗಿ ಯಾರೋ ಬಾಗಿಲಲ್ಲಿ ನಿಂತು ಕೂಗಿದಂತಾಯ್ತು,


" ಅಮ್ಮಾ!!!"


ತಾಯಿ ಭಾರತಿ ಕೊನೆಗೂ ಗೆದ್ದಿದ್ದಳು.


...........................................................
ಮೋಹನ್ ಕುಮಾರ್ ಡಿ ಎನ್
ಅಪ್ಪ ಚುಕ್ಕಿಯಾಗಿದ್ದಾನೆ..

ನನಗೆ ಚಿತ್ರವಿಚಿತ್ರದ ಪ್ರಾಣಿಗಳು ಕಾಣಿಸುತ್ತಿದ್ದವು, ಬಗೆ ಬಗೆಯ ರಾಕ್ಷಸ ಬರುತ್ತಿದ್ದ, ನೋಡನೋಡುತ್ತಲೇ ಅವನ ಆಕಾರ ಬದಲಾಗಿ ಬೇರೆ ರೂಪಾಂತರ ಪಡೆಯುತ್ತಿದ್ದ. ವಯಸ್ಸಾದ  ಹೆಸರೇ ಇಲ್ಲದ ದೊಡ್ಡ ಮರದಂತೆ,  ಮರದ ರೆಂಬೆಕೊಂಬೆಗಳಂತೆ,  ಯಾರೋ ಬರೆದಿಟ್ಟ ಕ್ಯಾನ್ವಾಸಿನಂತೆ, ವೃತ್ತಗಳು ಹಲವು ವೃತ್ತಗಳಾಗಿ ವಿಂಗಡಣೆಗಳಾಗಿ, ಆ ವೃತ್ತಗಳೇ ತಮ್ಮ ಇನ್ನೊಂದು ವೃತ್ತ ಗೆಳೆಯರೊಡಗೂಡಿ ಕರಗಿದಂತೆ, ಆಕಾಶದಲ್ಲಿನ ತರತರದ ಚಿತ್ರದಂತೆ, ಕನಸಲ್ಲಿ ಕಂಡ ಅಸ್ಪಷ್ಟ ವರ್ತುಲದಂತೆ, ಅರ್ಥವೇ ಆಗದ ಭೂಪಟದಂತೆ,  ಮಗುವನ್ನೆತ್ತಿ ತಾಯಿ ಆಡಿಸಿದಂತೆ, ಚಿರತೆ ಜಿಂಕೇನ ಬೇಟೆಯಾಡುವಂತೆ, ಒಬ್ಬರನ್ನೊಬ್ಬರು ಹಿಂಬಾಲಿಸುವಂತೆ, ಉದುರಿ ಬೀಳುತ್ತಿರೊ ಎಲೆ ರಾಶಿಯಂತೆ, ಚಿಟ್ಟೆಗಳ ಕಲರವದಂತೆ, ಜೇನ್ನೊಣಗಳ ಗೂಡಿನಂತೆ, ಸಂತೆಗೆ ಜನ ನಿಂತಂತೆ, ನಿಂತವರು ನಮ್ಮವರಲ್ಲದವರಂತೆ.....

ಹೀಗೆ ನನ್ನ ಕಲ್ಪನಾ ಲೋಕಕ್ಕೆ ಎಲ್ಲಾ ಕಾಣುಸುತ್ತಿದ್ದುದು, ನನ್ನಪ್ಪ ತನ್ನ ತೊಡೆಯ ಮೇಲೆ ನನ್ನ ಕೂಡಿಸುಕೋಡು ಸೇದಿ ಬಿಡುತ್ತಿದ್ದ ಸಲಾಮತ್ ಬೀಡಿಯ ಹೊಗೆಯಲ್ಲಿ!

ಹೀಗೆ ಒಂದು ದಿನ ಅಪ್ಪ  ಸೇದಿ ಬಿಡುತ್ತಿದ್ದ ಹೊಗೆಯನ್ನೇ ನೋಡುತ್ತಾ ಅಪ್ಪ ಹೇಳುತ್ತಿದ್ದ ಕಥೆಯಲ್ಲಿ ವಿಹರಿಸಿ ನನ್ನ ಕಲ್ಪನಾ ಲೋಕದೊಳಗೆ ಮುಳುಗಿದ್ದ ನನ್ನನ್ನು ಎಬ್ಬಿಸುವಂತೆ ಮಾಡಿದ್ದು ಒಂದು ಸುಪರಿಚಿತ ಧ್ವನಿ, ಅದು ನನ್ನಮ್ಮನದು!

"ಅಯ್ಯಯ್ಯೋ! ಮಳೆ ಬಂದು ಮನೆಯೆಲ್ಲಾ ಸೋರುತ್ತಿದೆ, ಸೋರುತ್ತಿರೊ ಜಾಗದಲ್ಲಿ ಪಾತ್ರೆ ಬಿಂದಿಗೆ ಇಡೋದು ಬಿಟ್ಟು ಅಲ್ಲೇನು ಮಾಡ್ತಿದ್ದೀರ ಅಪ್ಪ ಮಕ್ಳು?"

ಎಂಥಾ ರಸಭಂಗ!!

ಅಮ್ಮನ ದುಗುಡಕ್ಕೆ ಓಗೊಡದೆ ನಮಗೆ ಗತ್ಯಂತರವೇ ಇರಲಿಲ್ಲ.      ನಾನು ಅಪ್ಪ ಇಬ್ಬರು ಅಲ್ಲಿಂದ ಎದ್ದು ಅಮ್ಮ ಹೇಳಿದ ಹಾಗೆ ಮಾಡುತ್ತಾ ಇರಬೇಕಾದರೆ, ಅಪ್ಪ ಮನೆ ಕಥೆ ಶುರುವಿಟ್ಟುಕೊಂಡರು. ಅಪ್ಪನೇ ಹಾಗೆ : ಪ್ರಾಪಂಚಿಕ, ವ್ಯಾವಹಾರಿಕ ವಿಚಾರಕ್ಕಿಂತ ಮಾನಸಿಕ ನೆಮ್ಮದಿ ಆರೋಗ್ಯಕ್ಕೇ ಹೆಚ್ಚು ಒತ್ತುಕೊಡೋದು. ಅಪ್ಪ ಎಲ್ಲರಂತೆ ಹೆಚ್ಚಾಗಿ ಕೆಲಸ ಮಾಡುತ್ತಿರಲಿಲ್ಲ, ಅಮ್ಮ ಯಾವಾಗಲು ಇದೇ ವಿಷಯಕ್ಕೆ ಬೈಯ್ಯುತ್ತಿದ್ದಳು. ಅದೆಲ್ಲಾ ಅರ್ಥ ಆಗದ ನನಗೆ ಹೆಚ್ಚು ಹೆಚ್ಚು ಕೆಲಸ ಯಾಕೆ ಮಾಡಬೇಕು? ಎಷ್ಟು ಬೇಕೊ ಅಷ್ಟು ಮಾಡಿ ಮಿಕ್ಕ ಸಮಯ ಮನೆಯವರ ಜೊತೆ ಕಾಲಕಳೆಯಬಾರದೇಕೆ ಅಂತ ಅನ್ನಿಸಿದ್ದಿದೆ.

ಅಪ್ಪ ನನಗೆ ರಾತ್ರಿ ಹೊತ್ತು ಎದೆ ಮೇಲೆ ಮಲಗಿಸಿಕೊಂಡು ನಕ್ಷತ್ರ ತೋರಿಸುತ್ತಿದ್ದರು. ಎಣಿಸೋಕಾಗ್ತದ ನೋಡು ಮಗು ಎಂದಾಗ ಪ್ರತೀ ಸಲ ಎಣಿಸೋಕಾಗದೆ ನಾನು ಸೋಲುತ್ತಿದ್ದೆ. ಅದೆಲ್ಲಾ ಏನು, ಯಾಕೆ ಪ್ರತಿ ರಾತ್ರಿ ಮಾತ್ರ ಬರ್ತವೆ ಅಂತ ಕೇಳಿದರೆ ಅದಕ್ಕೆ ಅಪ್ಪ, "ಮಗು ಎಲ್ಲರಿಗೂ ನಿನಗೆ ಕಂಡಂತೆ ನಕ್ಷತ್ರಗಳು ಕಾಣಿಸುವುದಿಲ್ಲ, ಅದಕ್ಕೆ ಪುಣ್ಯ ಮಾಡಿರಬೇಕು, ಒಳ್ಳೇ ಗುಣ ನಡತೆ , ಗುಣ  ಹೊಂದಿರಬೇಕು, ಸುಳ್ಳು ಹೇಳಬಾರದು, ಕೆಟ್ಟ ಕೆಲಸ ಮಾಡಬಾರದು,ಆದರೆ ಒಳ್ಳೇದನ್ನ ಮಾತ್ರ ಮಾಡಬೇಕು ಕೆಟ್ಟದ್ದಲ್ಲ, ದೊಡ್ಡವರಿಗೆ, ಗುರುಹಿರಿಯರಿಗೆ ಗೌರವ ಕೊಡಬೇಕು. ಆಗ ಮಾತ್ರ ನಮಗೆ ನಕ್ಷತ್ರಗಳು ಕಾಣೋದು. ನಿನಗೀಗ ಅದು ಕಾಣುತ್ತಿದೆಯೆಂದರೆ ನೀನು ಪುಣ್ಯ ಮಾಡಿದ್ದೀಯ ನೀನಿರೋವರೆಗು ಅದನ್ನ ಉಳಿಸಿಕೊಂಡು ಹೋಗು" ಅಂತ ಅನ್ನುತ್ತಿದ್ದರು. "ಹಾಗಾದರೆ ನನಗೆ ಮಾತ್ರ ನಕ್ಷತ್ರ ಕಾಣುತ್ತೆ, ನಿನಗೆ ಕಾಣಲ್ವಾ ಅಪ್ಪ" ಅಂದರೆ, "ಮಗು ನಿನಗೆ ಕಂಡಂತೆ ಪ್ರತಿ ದಿನ ನನಗೆ ಕಾಣಲ್ಲ, ಯಾಕಂದ್ರೆ ನಾನು ನಿನಗೆ ಹೇಳಿದ ಒಳ್ಳೇ ಕೆಲಸದಲ್ಲಿ ಅರ್ಧ ಮಾತ್ರ ಮಾಡಿ ಇನ್ನರ್ಧ ಮಾಡಿಲ್ಲ" ಎನ್ನುತ್ತಿದ್ದರು. ಇದನ್ನು ಕೇಳಿದ ನನಗೆ ಒಳಗೊಳಗೆ ಖುಷಿಯೋ ಖುಷಿ. ಅಪ್ಪ ಹೇಳಿದ ಹಾಗೆ ಒಳ್ಲೆಯವನಾಗಿರ ಬೇಕು ಅಂತ ಮನಸ್ಸಲ್ಲೇ ನನಗೆ ನಾನೆ ಹೇಳುಕೊಳ್ಳುತ್ತಿದ್ದೆ.

ಒಳ್ಲೆಯವನಾಗಿದ್ದೀನಾ?

ಅಪ್ಪನ ಎದೆ ಮೇಲೆ ಮಲಗಿ ನಾನಂದು ನನ್ನಪ್ಪನನ್ನು ಕೇಳಿದ ಪ್ರಶ್ನೆಯನ್ನೇ ನನ್ನ ಮಗಳಿಂದು ನನ್ನ ಎದೆ ಮೇಲೆ ಮಲಗಿ ಕೇಳುತ್ತಿದ್ದಾಳೆ : ನನಗೆ ಮಾತ್ರ ನಕ್ಷತ್ರ ಕಾಣುತ್ತಾ ಅಪ್ಪಾ" ಅಂತ.

ಏನಂತ ಉತ್ತರ ಕೊಡಲಿ??

ಅಪ್ಪನನ್ನು ಕೇಳಿಹೇಳೋಣವೆಂದರೆ ಆತ ನಕ್ಷತ್ರವಾಗಿ ಸದಾಕಾಲ ಎದೆಯಲ್ಲಿ ಮಿನುಗುತ್ತಿದ್ದಾರೆ.

ನನ್ನ ಮಗಳು "ಅಪ್ಪಾ ನನಗೆ ಮಾತ್ರವೆ ನಕ್ಷತ್ರ ಕಾಣಿಸೋದು" ಅಂತ ಬೀಗುತ್ತಿದ್ದಾಳೆ.

 .......... 

ಮೋಹನ್ ಕುಮಾರ್ ಡಿ ಎನ್ 
ಛತ್ರಿ ಬಾಯ್!

ಬೆಳಗ್ಗಿನಿಂದ ವಿಪರೀತ ಕೆಲಸ, ಎಷ್ಟು ಮಾಡಿದರು ಮುಗಿಯಲೊಲ್ಲದು.   ಬಾಸ್ ಬೇರೆ ಯಾಕೊ ಗರಂ ಆಗಿದ್ದರು. ಕೆಲಸದಲ್ಲಿ ಮುಳುಗಿದ್ದ ನಾನು ಕತ್ತೆತ್ತಿ ನೋಡಿದೆ , ಘಂಟೆ ಐದೂವರೆ ಆಗುತ್ತಾ ಬಂದಿತ್ತು ; ಮನೆಗೆ ಹೊರಡುವ ಸಮಯ ಅದು. ಆಗಲೆ ಸಹೋದ್ಯೊಗಿಗಳು ಒಬ್ಬೊಬ್ಬರಾಗಿ ಹೊರಡಲು ಅನುವಾಗಿತ್ತಿದ್ದರು, ಆದರೆ ನಾನು ಮಾತ್ರ ಬಾಸ್ ಹೇಳಿದ್ದ ರಿಪೋರ್ಟ್ ರೆಡಿ ಮಾಡಿಯೇ ಹೋಗಬೇಕಾಗಿತ್ತು. ಸರಿ ಇನ್ನೇನು ಮಾಡೋಕಾಗುತ್ತೆ , ಕೆಲಸ ಮಾಡುತ್ತಾ ಕುಳಿತೆ. ಆರು ಘಂಟೆಯ ನಂತರ ಇಡೀ ಆಫೀಸ್ ಖಾಲಿ ಖಾಲಿ . ಆಚೆಕಡೆ ಸೆಕ್ಯೂರಿಟಿ ಬಿಟ್ಟರೆ ಬೇರೆ ಯಾರು ಇರಲಿಲ್ಲ . ಕಂಪ್ಯೂಟರಿನ ಕೀ ಬೋರ್ಡಿನ ಸದ್ದು ಇಡೀ ಆಫೀಸಿನ ಮೂಲೆ ಮೂಲೆಗು ಕೇಳಿಸುವಷ್ಟು ಜೋರಾಗಿತ್ತು , ಅಷ್ಟು ವೇಗವಾಗಿ ಕೆಲಸ ಮಾಡುತ್ತಿದ್ದೆ . ಅಂತೂ ಘಂಟೆ ಎಂಟಾಗುವಷ್ಟರಲ್ಲಿ ಕೆಲಸ ಮುಗಿದಿತ್ತು . ಇನ್ನೇನು ರಿಪೋರ್ಟ್ ಕಳಿಸಿ, ಸಿಸ್ಟಮ್ ಆಫ್ ಮಾಡುವುದರಲ್ಲಿದ್ದೆ , ಅದೆಲ್ಲಿತ್ತೋ ಗೊತ್ತಿಲ್ಲ ಮಳೆ ! ಬಂತು ಬಂತು ಬಂತು, ಕುಂಭದ್ರೋಣ ಮಳೆಯಂತೆ ಬಂತು. ಮೊದಲೇ ಇದು ಮುಂಬೈನ ಮಳೆ, ಬಂದರೆ ದಿನಗಟ್ಟಲೆ ಬಂದು ಅವಾಂತರ ಸೃಷ್ಟಿಸದೆ ಹೋಗುವುದಿಲ್ಲ . ಇದೆಲ್ಲಿಂದ ವಕ್ಕರಿಸಿತು ಈ ಮಳೆಯೆಂದು ಶಪಿಸುತ್ತಾ ಮಳೆ ನಿಲ್ಲುವವರೆಗು ಕಾಯೋದು ಬಿಟ್ಟರೆ ನನಗೆ ಬೇರೆ ಗತ್ಯಂತರವಿರಲಿಲ್ಲ. ಎಂಟೂ ಮುಕ್ಕಾಲಾಗಿತ್ತು , ಅಲ್ಲಿವರೆಗೂ ಜೋರಾಗಿ ನಿಲ್ಲದೇ ಬರುತ್ತಿದ್ದ ಮಳೆ ಇದ್ದಕ್ಕಿದ್ದಂತೆ ನಿಂತು ಹೋಯ್ತು . ಸದ್ಯ ಬಚಾವಾದೆ ಎಂದುಕೊಂಡು ಆಫೀಸಿನಿಂದ ಹೊರಬಿದ್ದೆ .

ಬಸ್ ನಿಲ್ದಾಣಕ್ಕೆ ಬಂದು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ , ನಾನು ದಿನಾ ಹೋಗುತ್ತಿದ್ದ ಟ್ರೈನ್ ಅದಾಗಲೆ ಹೊರಟುಹೋಗಿತ್ತು . ಎಷ್ಟೊತ್ತಾದರು ಒಂದು ಬಸ್ಸು ಬರಲಿಲ್ಲ , ಬಿದ್ದ ಮಳೆಗೆ ಆಟೋ ಕೂಡ ಬರುವ ಸುಳಿವಿರಲಿಲ್ಲ. ಸುಮ್ಮನೆ ಹಾಗೆ ಕಾಯುತ್ತಾ ನಿಂತಿದ್ದವಳು ಎದುರುಗಡೆಯಿದ್ದ ರೈಲ್ವೇ ಟ್ರ್ಯಾಕಿನ ಪಕ್ಕದಲ್ಲಿದ್ದ ಗುಡಿಸಿಲ ಕಡೆ ಕಣ್ಣಾಡಿಸಿದೆ. ಅಲ್ಲಿ ನಿರಾಶ್ರಿತರು, ನಿರ್ಗತಿಕರು, ಮುಖ್ಯವಾಹಿನಿಯಿಂದ ದೂರ ಉಳಿದವರು ಹೀಗೆ ನಾನ ನಮೂನೆಯ ವರ್ಗದವರು ಇರುವುದು ಕಂಡು ಬಂತು. ಅತ್ತಕಡೆಯಿಂದ ನನ್ನ ನೋಟ ಗುಡಿಸಲಿಗೆ ಅಂಟುಕೊಂಡಂತಿದ್ದ  ಪಕ್ಕದಲ್ಲಿದ್ದ ಬ್ರಿಡ್ಜ್ ಮೇಲೆ ಬಿತ್ತು , ಆ ಬ್ರಿಡ್ಜಿನ ಕೆಳಗಡೆಯೇ ಗುಡಿಸಲುಗಳಿದ್ದಿದು . ಇನ್ನೇನು ಅಲ್ಲಿಂದ ನೋಟ ಬೇರೆ ಕಡೆ ತಿರುಗುವುದರಲ್ಲಿತ್ತು , ಛಕ್ಕನೆ ಅಲ್ಲೇ ನಿಂತಂತಾಗಿ ನೋಡಿದೆ : ಬ್ರಿಡ್ಜಿನ ಕಂಬಕ್ಕೆ ಗುಡಿಸಲಿನ ಕೊನೇ ಸಾಲಿನ ಪಕ್ಕದಲ್ಲಿ ಒಂದು ಕಲ್ಲಿಗೊರಗಿ ಒಬ್ಬ ಚಿಕ್ಕ ಹುಡುಗ ಕೊಡೆ ಹಿಡಿದುಕೊಂಡು ನಿಂತಿದ್ದ . ಆ ಕೊಡೆ ಅವನಿಗಿಂತಲೂ ದೊಡ್ಡದಾಗಿತ್ತು , ಸುಮಾರು ಐದಾರು ಜನ ಒಟ್ಟಿಗೇ ನಿಲ್ಲಬಹುದಿತ್ತು. ಬೇಡವೆಂದುಕೊಂಡರು ತಾನಾಗೇ ನನ್ನ ಕಾಲುಗಳು ಹೆಜ್ಜೆ ಹಾಕತೊಡಗಿತು.
ಹುಡುಗ ಸುಮಾರು ಎಂಟರಿಂದ ಹತ್ತು ವರ್ಷದವನಿರಬಹುದು. ಅವನು ಧರಿಸಿದ್ದ ಬಟ್ಟೆ ಅಲ್ಲಲ್ಲಿ ಹರಿಸಿತ್ತು , ಕಾಲಲ್ಲಿ ಚಪ್ಪಲಿಯಿರಲಿಲ್ಲ . ನಾನು ಅವನ ಬಳಿ ಹೋಗುವುದನ್ನು ಗಮನಿಸಿ , " ಅಕ್ಕಾ ಬನ್ನಿ " ಎಂದು ನನ್ನತ್ತ ಕೊಡೆ ಹಿಡಿದ. ಕುತೂಹಲಕ್ಕೆ ಅವನ ಬಗ್ಗೆ ವಿಚಾರಿಸಿದೆ. ಅವನು ನಗುನಗುತ್ತಲೇ ತನ್ನ ಬಗ್ಗೆ ಹೇಳತೊಡಗಿದ.

" ಅಕ್ಕ ನನ್ನ ಹೆಸರು ಮೋಟು ಅಂತ. ನನಗೆ ಅಪ್ಪ ಇಲ್ಲ , ಅಮ್ಮ  ದಿನಗೂಲಿ ಕೆಲಸಕ್ಕೆ ಹೋಗುತ್ತಾಳೆ ; ಕನ್ಸ್ಟ್ರಕ್ಶನ್ ಕಂಪನಿಯಲ್ಲಿ. ಅಲ್ಲಿ ಮಳೆ ಬಂದಾಗ ಕೆಲಸದವರಿಗೆಂದು ಒಂದೊಂದು ದೊಡ್ಡ ದೊಡ್ಡ ಕೊಡೆ ಕೊಡುತ್ತಾರೆ , ಅದೇ  ಕೊಡೆ  ಈಗ ನನ್ನ ಬಳಿಯಿರುವುದು. ಹೀಗೆ ಪ್ರತಿ ಬಾರಿ ಮಳೆ ಬಂದಾಗ ನಾನಿಲ್ಲಿ ಅಮ್ಮನ ಮನವೊಲಿಸಿ ಕೊಡೆ ತೆಗೆದುಕೊಂಡು ಇಲ್ಲಿ ಬಂದು ನಿಲ್ಲುತ್ತೇನೆ . ಯಾಕೆಂದರೆ ಮಳೆ ಯಾವಾಗ ಬರುವುದೋ ಗೊತ್ತಿಲ್ಲ , ಹೀಗಾಗಿ ಎಲ್ಲರು ಕೊಡೆ ತಂದಿರುವುದಿಲ್ಲ. ನಾನಾಗ ಅವರ ಬಳಿ ಹೋಗಿ , ಅವರೆಲ್ಲಿವರೆಗು ಬಯಸುತಾರೋ ಅಲ್ಲಿವರೆಗು ಕೊಡೆ ಹಿಡಿದುಕೊಂಡು ಹೋಗಿ ಬಿಟ್ಟು ಬರುತ್ತೇನೆ. ಆಗ ಅವರೆಷ್ಟು ಕೊಡುತ್ತಾರೋ ಅಷ್ಟೇ ಹಣವನ್ನು ತೆಗೆದುಕೊಳ್ಳುವೆ . ಕೊಟ್ಟರೆ ಉಂಟು , ಇಲ್ಲದಿದ್ದರೆ ಇಲ್ಲ . ನಾನಾಗಿಯೇ ಯಾರನ್ನು ಇಷ್ಟೇ ಕೊಡಿ ಅಂತ ಕೇಳಿಲ್ಲ , ಕೇಳುವುದೂ ಇಲ್ಲ . ಅವರು ಖುಷಿಯಾಗಿ ಹೋದರೆ ಸಾಕು "

ಅವನು ಮಾತು ಮುಗಿಸಿದ , ಆದರೆ ಆ ನಗು ಮಾತ್ರ ಹಾಗೆ ಇತ್ತು.

ಅವನು ಹೇಳಿದ್ದು ಕೇಳಿ ನನ್ನ ಹೃದಯ ತುಂಬಿ ಬಂದು ಮನಸ್ಸು ಭಾರವಾಗಿ ಕಣ್ಣಾಲಿಗಳು ಬಯಸದೇ ಬಂದಿತ್ತು . ಈಗಿನ ಕಾಲದಲ್ಲಿ ಇನ್ನೊಬ್ಬರ ಹಿತ ಬಯಸುತ್ತಾ , ಏನನ್ನು ಅಪೇಕ್ಷೆಯಿಲ್ಲದೆ ಬದುಕುವವರಿದ್ದಾರಾ? ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ? ಅವನನ್ನು ಅಕ್ಕರೆಯಿಂದ ಬಾಚಿ ತಬ್ಬಿಕೊಂಡೆ , ಹುಡುಗ ಮುಗುಳುನಗುತ್ತಿದ್ದ . ಅವನ ಆ ನಗು,  ಅಮಾಯಕತೆ , ನಿಷ್ಕಲ್ಮಷ ಮನಸ್ಸು ನನ್ನಲ್ಲಿ ಅಚ್ಚಳಿಯದ ಗುರುತು ಮೂಡುವಂತೆ ಮಾಡುತ್ತಿದ್ದವು . ಅವನಿಗೆ ಪ್ರೀತಿಯಿಂದ ನನ್ನಲ್ಲಿದ್ದ ಅಲ್ಪ ಮೊತ್ತ ಕೊಡಲು ಆತ , " ಅಕ್ಕಾ ಬೇಡ ! ನಾನು ಕೊಡೆ ಹಿಡಿದು ಬಿಟ್ಟು ಬಂದರೆ ಮಾತ್ರ ಕೊಟ್ಟಷ್ಟು ತೆಗೆದುಕೊಳ್ಳುತ್ತೀನಿ, ಸುಮ್ಮಸುಮ್ಮನೆ ಅಲ್ಲ " ಅಂದ. ಅಷ್ಟೊತ್ತು ಮಳೆ ನಿಲ್ಲಲ್ಲಿ ಎಂದುಕೊಂಡಿದ್ದವಳಿಗೆ ಮಳೆ ಮತ್ತೆ ಬರಬಾರದೇಕೆ ಅನಿಸತೊಡಗಿತು. ಎಷ್ಟು ಬಲವಂತ ಮಾಡಿದರೂ ಅವನು ಕೊನೆಗೂ ನನ್ನಿಂದ ಬಿಡಿಗಾಸೂ ಮುಟ್ಟಲಿಲ್ಲ . 

ಅವನನ್ನು ಮತ್ತೊಮ್ಮೆ ಅಕ್ಕರೆಯ ಕಂಗಳಲ್ಲಿ ನೋಡುತ್ತಾ ಹಣೆಗೆ ಪ್ರೀತಿಯಿಂದ ಒಂದು ಮುತ್ತನಿಟ್ಟೆ. " ಅಕ್ಕಾ ! ನನಗೆ ಬರಬೇಕಾದ ಸಂಭಾವನೆ ಬಂದಾಯ್ತು " ಅಂದ .

ಇದೇ ಅಲ್ಲವೆ ಮನುಷ್ಯನು ಮನುಷ್ಯನಿಗೆ ತೋರಬೇಕಾದ ಮಾನವತೆ ? 

ಏನಾದರು ಆಗು ಮೊದಲು ಮಾನವನಾಗು ಎಂಬ ಕವಿವಾಣಿ ನೆನಪಾಗಿ ಒಲ್ಲದ ಮನಸ್ಸಿನಿಂದ ಆ  ದಿನ ಮನೆ ಸೇರಿದೆ.

ವಿ.ಸೂ. ಇದು ನಮ್ಮ ನಡುವೆ ನಡೆದ ಸತ್ಯಕಥೆ : ಪಕ್ಕದ ಮುಂಬೈನಲ್ಲಿ . ಯಾರೋ ತಮ್ಮ ಈ ಅನುಭವ ಬಹಳ ಯಾಂತ್ರಿಕವಾಗಿ ಹಂಚಿಕೊಂಡಿದ್ದರು . ನನ್ನಿಂದ ಇದನ್ನು ಚಿಕ್ಕ ಕಥೆ ರೂಪ ಕೊಟ್ಟು ಬರೆಯಲಾಗದೆ ಇರಲಿಲ್ಲ .

ಮೋಹನ್ ಕುಮಾರ್ ಡಿ ಎನ್.
ಒಡಲಾಳ ..

ಅದೊಂದು ಸುವಿಶಾಲ ರೈಲ್ವೇ ನಿಲ್ದಾಣ. ಅಲ್ಲಿ ನೂರಾರು ರೈಲು ಬರುತ್ತವೆ ಹೊಗೊತ್ತವೆ. ಇಳಿಯಬೇಕಾದವರು ಇಳಿಯುತ್ತಾರೆ, ಹತ್ತಬೇಕಾದವರು ಹತ್ತುತ್ತಾರೆ. ಹತ್ತುವವರಿಗೂ  ಇಳಿಯುವವರಿಗೂ ಲೆಕ್ಕ ಇಟ್ಟವರಿಲ್ಲ. ಒಬ್ಬರಿಗೊಬ್ಬರು ಪರಿಚಯವಿಲ್ಲ, ಇರಬೇಕಾದ ಅವಶ್ಯಕತೆ ಏನಿಲ್ಲ. ಪರಿಚಯದವರು ಸಿಕ್ಕಾರೆ ಮಾತಾಡಿಸುವಂತೆ ಯಾರನ್ನು ಮಾತಾಡಿಸುವ ಪ್ರಮೇಯವಿಲ್ಲ. ಎಲ್ಲೆಲ್ಲಿಂದಲೊ ಜನ ಬರುತ್ತಾರೆ ಹೋಗುತ್ತಾರೆ, ನಿಲ್ದಾಣ ಯಾರನ್ನು ಬರಬೇಡ ಅನ್ನುವುದಿಲ್ಲ, ಬಂದರೆ ಹೋಗೆನ್ನುವುದಿಲ್ಲ. ಹಾಗೆ ತಟಸ್ಥವಾಗಿ ಯಾರು ಬಂದರೂ ಬರಬೇಡ ಎನ್ನುವ ಜಾಗದಲ್ಲಿ ಇದೂ ಒಂದು. ರಾತ್ರಿಯಾದರೆ ಇಲ್ಲಿ ಇನ್ನೊಂದು ಲೋಕ ತೆರೆದುಕೊಳ್ಳುತ್ತದೆ. ವಿಟ ಪುರುಷರು ಸ್ತ್ರೀಯರು ಇಲ್ಲಿ ಹಬ್ಬಿರುವ ವಿಶಾಲವಾದ ಕತ್ತಲ ಸಾಮ್ರ್ಯಾಜ್ಯದೊಳಗೆ ಜಮಾವಣೆಯಾಗುತ್ತರೆ. ಕತ್ತಲಸಾಮ್ರಾಜ್ಯಿಪತಿಗಳು!! ಅದರ ಇನ್ನೊಂದು ಮಗ್ಗುಲಲ್ಲಿ ಕುಂಟರು, ಕುರುಡರು, ಆಶ್ರಯವಿಲ್ಲದೆ ಬರಗೆಟ್ಟವರು, ಸಮಾಜ ವಿಮುಖಿಗಳು, ಮಂಗಳಮುಖಿಯರು, ನೈಟ್ ಬೀಟ್ ಹೊಡೆಯೋ ಪೋಲೀಸ್, ಕಳ್ಳರು ಖದೀಮರು, ಭಿಕ್ಷುಕರು, ನಿರುದ್ಯೋಗಿಗಳು,  ಮಕ್ಕಳಿಂದ ಹೊರದೂಡಲ್ಪಟ್ಟ ತಂದೆತಾಯಿಯರು.... ಪಟ್ಟಿ ಸಾಗುತ್ತಾ ಹೋಗುತ್ತದೆ. ಇವರೆಲ್ಲ ಸೇರಿದರೆ ಅದೇ ಒಂದು ಲೋಕ. ನಮ್ಮ ನಾಗರೀಕ ಸಮಾಜಕ್ಕಿಂತ ವಿಭಿನ್ನವೇನಲ್ಲ ಅವರ ಈ ಜಗತ್ತು. ಎಲ್ಲಾರು ಮಾಡುವುದು ಹೊಟ್ಟೆಗಾಗಿ. ಎಲ್ಲರನ್ನು ನಿಯಂತ್ರಿಸೋರು ಯಾರು? ಅವರವರ ಸಮಯ ಸಂಧರ್ಭ ಅಷ್ಟೆ. ಇದನ್ನೆಲ್ಲ ಹೇಳುತ್ತಿರುವ ನಾನು ಯಾರು ಎಂದು ಯೋಚಿಸಿದಿರಾ?

ಆಮೇಲೆ ಹೇಳುತ್ತೇನೆ.

ಮೊನ್ನೆ ದಿನ ಹೀಗಾಯ್ತು :

ವಯಸ್ಸಾದ ಹಿರಿಯ ದಂಪತಿಗಳು ಒಂದು ಫ್ಲಾಟ್ಪಾರಂನಲ್ಲಿ ಬಂದು ಕುಳಿತರು. ಕೈಯಲ್ಲೊಂದು ಚೀಲವಿತ್ತಷ್ಟೆ. ಅವರು ಕುಳಿತ ನಂತರ ಅದೆಷ್ಟೋ ರೈಲುಗಳು ಬಂದವು, ಹೋದವು. ಇವರು ಯಾವುದಕ್ಕೂ ಹತ್ತಲಿಲ್ಲ.   ಸುಮ್ಮನೇ ಕುಳಿತಿದ್ದರು. ಮೊದಮೊದಲು ಇವರನ್ನು ನೋಡಿದವರು, ಯಾರೊ ಯಾತ್ರಿಕರಿರಬೇಕೆಂದುಕೊಂಡಿದ್ದರು. ಬೆಳಿಗ್ಗೆ ಬಂದ ಇವರು ರಾತ್ರಿಹೊತ್ತಿನವರೆಗೂ ಅಲ್ಲೇ ಕುಳಿತಿದ್ದರು.  ಇವರನ್ನೇ ಗಮನಿಸುತ್ತಿದ್ದ ಒಬ್ಬ ಟೀ ಮಾರೊ ಹುಡುಗ ಕಡೆಗೆ ಕುತೂಹಲ ತಡೆಯಲಾಗದೆ ಅವರ ಬಳಿ ಹೋಗಿ, " ಅಜ್ಜೀ ನೀವೆಲ್ಲಿಗೆ ಹೋಗಬೇಕೆಂದು " ಕೇಳಿದನು. ಅಜ್ಜಿ ಉತ್ತರಿಸಲಿಲ್ಲ. ಅಜ್ಜನ ಕಡೆ ತಿರುಗಿ ಮತ್ತದೇ ಪ್ರಶ್ನೆಯನ್ನು ಕೇಳಿದನು. ಆಗ ಅಜ್ಜ ನಿಧಾನವಾಗಿ ತನ್ನ ಜೇಬಿಗೆ ಕೈ ಹಾಕಿ ಕಾಗದದ ತುಂಡೊಂದನ್ನು ತೆಗೆದು ಟೀ ಮಾರೊ ಹುಡುಗನ ಕೈಗಿತ್ತನು. ಅದನ್ನು ತೆಗೆದು ಓದಿದ ಹುಡುಗನ ಕಣ್ಣಲ್ಲಿ ನೀರು ಬೇಡವಂದರೂ ಬರತೊಡಗಿತು. ಆ ಚೀಟಿಯಲ್ಲಿ ಹೀಗೆ ಬರೆದಿತ್ತು :

" ಇವರು ನಮ್ಮ ತಂದೆತಾಯಿ. ಇವರನ್ನು ಯಾರಾದರು ನೋಡಿದರೆ ದಯಮಾಡಿ ಅನಾಥಾಶ್ರಮಕ್ಕೆ ಸೇರಿಸಿಬಿಡಿ "

ಓದಿ ಕಣ್ಣಲ್ಲಿ ನೀರು ತುಂಬಿಕೊಂಡ ಟೀ ಮಾರೊ ಹುಡುಗ "ಇದರಲ್ಲೇನು ಬರೆದಿದೆ ಗೊತ್ತಾ" ಎಂದು ಕೇಳುತ್ತಾನೆ. ಆಗ ಅಜ್ಜ "ನೋಡಪ್ಪ ನನ್ನ ದೊಡ್ಡ ಮಗನ ಮನೆಯಲ್ಲಿ ನಾನಿದ್ದೆ, ಚಿಕ್ಕ ಮಗನ ಮನೆಯಲ್ಲಿ ಇವಳಿದ್ದಳು. ಚಿಕ್ಕವನು ಬಂದು ನನ್ನನ್ನು ಹಾಗು ದೊಡ್ಡವನು ಬಂದು ಇವಳನ್ನ ತಮ್ಮ ತಮ್ಮ ಮನೆಗೆ ಕರಕೊಂಡು ಹೋಗೋದಾಗಿ ಹೇಳಿ ರೈಲ್ವೇ ಸ್ಟೇಷನ್ನಿಗೆ ಬರುವಂತೆ ನನಗೆ ಚಿಕ್ಕವ, ಇವಳಿಗೆ ದೊಡ್ಡವ ಹೇಳಿದ್ದರು. ಇಲ್ಲಿ ಬಂದು ನೋಡಿದರೆ ಯಾರು ಬಂದಿಲ್ಲ ನಮ್ಮನ್ನ ಕರೆದೊಯ್ಯಲು" ಅಂತ ಅಜ್ಜ ಮಾತು ಮುಗಿಸಿದ.

ಹುಡುಗನಿಗೆ ಅವರ ಕಥೆ ಕೇಳಿ ಏನುತ್ತರಿಸಬೇಕೋ ತಿಳಿಯಲಿಲ್ಲ. ಒಂದು ನಿರ್ಧಾರಕ್ಕೆ ಬಂದವನೆ ಅವರನ್ನ ತನ್ನ ಜೊತೆಯಲ್ಲಿ ಕರೆದುಕೊಂಡು ಹೊರಟುಹೋದನು, ಅನಾಥನಾಗಿರುವ ತನ್ನ ಪಾಲಿಗೆ ದೇವರು ಕೊಟ್ಟ ತಂದೆತಾಯಿಯೆಂದು ತಿಳಿದು.

ಇದೇ ನಡೆದದ್ದು ಮೊನ್ನೆ.

ಈಗ ಆ ಅಜ್ಜಅಜ್ಜಿ, ಟೀ ಮಾರೋ ಹುಡುಗ ಎಲ್ಲಿದ್ದಾರೋ ಗೊತ್ತಿಲ್ಲ. ಹುಡುಗ ಮುಂಚೆ ಬಂದಂತೆ ಟೀ ಮಾರಲು ಇಲ್ಲಿಗೆ ಬರುತ್ತಿಲ್ಲ. ಅವರೆಲ್ಲೇ ಇದ್ದರು ಸುಖವಾಗಿರಲಿ, ಅಷ್ಟೇ ನನ್ನ ಆಸೆ.

ಓಹ್! ನಾನ್ಯಾರೆಂದು ನಿಮಗೆ ಹೇಳುತ್ತೇನೆ ಎಂದಿದ್ದನಲ್ಲವೇ?

ಅದು ನಾನೇ ಕಣ್ರೀ, ನಿಮ್ಮಂತ ನೂರಾರು ಸಾವಿರಾರು ಲಕ್ಷಾಂತರ ಪ್ರಯಾಣಿಕನನ್ನು ಹೊತ್ತು ಹತ್ತಾರು ವರ್ಷದಿಂದ ಬಂದಿರುವ ನಿಲ್ದಾಣ...!!! ನಿಮ್ಮ ಪ್ರೀತಿಯ ನಿಲ್ದಾಣ!!!

ನನ್ನ ಒಡಲೊಳಗೆ ಇಂಥ ಕಥೆಗಳು ಅದಿನ್ನೆಷ್ಟಿವೆಯೋ!!!
..................................
ಮೋಹನ್ ಕುಮಾರ್ ಡಿ ಎನ್
ಹೈವೇ ... 

ನಮ್ಮ ಹೊಲದಲ್ಲಿ ಎತ್ತ ನೋಡಿದರೂ ಹಸಿರಸಿರಿ ತುಂಬಿ ತುಳುಕುತ್ತಿತ್ತು. ಸದಾಕಾಲ ಅಲ್ಲಿ ಕೂಲಿಯಾಳುಗಳು ಕೆಲಸ ಮಾಡಿತ್ತಿದ್ದರು. ಆ ಕೆಲಸದ ಹೊತ್ತಿನಲ್ಲಿ  ಆಳುಗಳು ನೂರಾರು ಹಾಡು ಹಾಡಿಕೊಳ್ಳುತ್ತಾ, ಹಾಡಿಗೆ ಹಾಡು ಕಟ್ಟುತ್ತಾ, ಮಾತಿಗೊಂದು ಮಾತಿನ ಮುತ್ತು ಸುರಿಸುತ್ತಾ ಕೆಲಸ ಮಾಡುತ್ತಿದ್ದರು. ಆಗ ಕೇಳಿದ ಹಾಡುಗಳು ನನ್ನ ಸ್ಮ್ರುತಿಪಲ್ಲಟದಲ್ಲಿದೆ, ಅವರ ಅನುಭವದ ಮಾತುಗಳೇ ನನಗೆಷ್ಟೋ ಬಾರಿ ಎದುರಿನವನ ಮಾತಿನ ದೊಣ್ಣೆಯಿಂದ ತಪ್ಪಿಸಿದೆ. ಅಪ್ಪ ಆಳುಗಳನ್ನು ಆಳಿನಂತಾಗಲಿ, ಕೆಲಸಗಾರರಂತಾಗಲಿ ನೋಡಿದ್ದೇ ಇಲ್ಲ ; ಸ್ವಂತ ಬಂಧುಗಳಂತೆ ನೋಡಿಕೊಳ್ಲುತ್ತಿದ್ದರು. ಅವರಾದರೂ ಸರಿ ಹಾಗೇ ಇರುತ್ತಿದ್ದರು.
ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಅಲ್ಲೊಂದು ದೇವಸ್ಥಾನವಿತ್ತು ; ತಾಯಿ ಚೌಡೇಶ್ವರಿಯದು. ಆಕೆ ನಮ್ಮ ಕುಲ ಹಾಗು ಊರದೇವತೆ. ಪ್ರತಿ ಸಾಯಂಕಾಲ ಅಲ್ಲಿ ಭಜನೆ, ಹರಿಕಥೆ, ಪೂಜೆ, ಪ್ರಸಾದ ವಿನಿಯೋಗವಿರುತ್ತಿತ್ತು. ಊರ ಜನರೆಲ್ಲಾ ಅಲ್ಲಿ ಸೇರಿದರೆ ಭಕ್ತಿ ಮೈನವಿರೇಳಿಸುತ್ತಿತ್ತು.
ಲೋಕಸೇವಾನಿರತರೊಬ್ಬರು ಕಟ್ಟಿಬೆಳೆಸಿದ ಶಾಲೆಯಲ್ಲೇ ನನ್ನ ವಿದ್ಯಾಭ್ಯಾಸ ನಡೆದಿದ್ದು,, ಶಾಲೆ ದೇವಸ್ಥಾನದ ಎದುರಿನಲ್ಲೇ ಇದೆ. ಆ ಶಾಲೆಯಲ್ಲಿ ನಾವು ಕಲಿತ ಅಕ್ಷರಗಳೇ ಇಂದು ನನ್ನನ್ನು ರೂಪಿಸಿರುವುದು. ಅಲ್ಲಿಂದ ಮುಂದೆ ನಡೆದರೆ ಸಿಗುವುದೇ ನಮ್ಮ ಹಳ್ಳಿಯ ಜೀವನದಿ ನಾಗರಕೆರೆ. ಒಂದು ಕಾಲಕ್ಕೆ ವರ್ಷ ವರ್ಷ ಭರ್ತಿ ಕೋಡಿ ಬೀಳುತ್ತಿತ್ತು, ನಮಗದನ್ನು ನೀಡುವುದೇ ಒಂದು ಸಂಭ್ರಮ.  ನಾವಲ್ಲಿ ಒಂದಷ್ಟು ಹುಡುಗರು ಗುಂಪು ಸೇರಿ ಈಜುತ್ತಿದ್ದೆವು, ಸಾಲದ್ದಕ್ಕೆ ಪಕ್ಕದಲ್ಲೆ ತೋಟದ ಮನೆಯಲ್ಲಿದ್ದ ಭಾವಿ ಬೇರೆ ನಮ್ಮ ಈಜಿಗೆ ಸಾಥ್ ಕೊಡುತ್ತಿತ್ತು. ನೀರಿಗೆ ಬಿದ್ದರೆ ಮೇಲೇಳುವುದು ಅದೆಷ್ಟೋ ಹೊತ್ತಾದ ಮೇಲೇ.
ಇಂತಿಪ್ಪ ಹಳ್ಳಿಗೆ ಹರಳೀಕಟ್ಟೆ ಇಲ್ಲದಿದ್ದರೆ ಆದೀತೇ?  ದೇವಸ್ಥಾನದಿಂದ ನಾಲ್ಕೆಜ್ಜೆ ಹಾಕಿದರೆ ಸಿಗುವುದೇ ನ್ಯಾಯಸ್ಥಾನ ; ತಪ್ಪು ಮಾಡಿದವರಿಗೆ, ಕಾಲಹರಣ ಜಾಗ; ಹಳ್ಳಿಯ ಹಿರಿಯರಿಗೆ, ಚಿಕ್ಕಮಕ್ಕಳಿಗೆ ಆಟದ ಸ್ಥಾನ...ಹೀಗೆ ಅಲ್ಲಿ ಒಂದಾನೊಂದು ಚಟುವಟಿಕೆ ನಡೆಯುತ್ತಲೇ ಇರುತ್ತಿತ್ತು.
ಹೀಗೆ ಹೇಳುತ್ತಾ ಹೋದರೆ  ನಮ್ಮ ಹಳ್ಳಿಯ ಬಗ್ಗೆ ನೂರುಪುಟ ಹೇಳಬಹುದು. ಎಲ್ಲಾ ಸರಿ, ನಮ್ಮ ಮನೆಯ ಬಗ್ಗೆಯೇ ಹೇಳಲಿಲ್ಲವಲ್ಲಾ? ಅದೋ ನೋಡಿ ಹರಳೀಕಟ್ಟೆ ದಾಟಿ ಮುಂದಕ್ಕೆ ನಡೆದರೆ ಎದುರಿಗೆ ಕಾಣುವ ಜಾಗ ಇದೆಯಲ್ಲಾ? ಅಲ್ಲಿದೆ ನಮ್ಮನೆ!! ನಮ್ಮ ಹಿರಿಯರು ಬಾಳಿಬದುಕಿ ನಮಗಾಗಿ ಬಿಟ್ಟು ಹೋದ ಮನೆ!! ನಮ್ಮ ಪಾಲಿಗೆ ದೇವಸ್ಥಾನ!! ಲಕ್ಷ ಲಕ್ಷ ನೆನಪುಗಳ ಖಣಜ!! ಅದೋ ನೋಡಿ ಅಲ್ಲಿ ಕಾಣುತ್ತಿದೆಯಲ್ಲಾ? ಅದೇ ನಮ್ಮನೆ!!
ಹೀಗೆ ಸಾವಿರ ಸಾವಿರ ಘಟನೆಗಳು ಚಿತ್ರಪಟದಂತೆ ಬರುತಿರಲು ನಾನು ಮಾತ್ರ ನನ್ನ ನೆನಪುಗಳಾಚೆಯಿಂದ ಬರುವುದಿಲ್ಲ. ನಮ್ಮ ತೋಟ, ಶಾಲೆ, ದೇವಸ್ಥಾನ, ಹರಳೀಕಟ್ಟೆ, ಮೈದುಂಬಿ ಹರಿಯಿತ್ತಿದ್ದ ಕೆರೆ, ಸಂತೆ ಬೀದಿ, ಗರಡೀಮನೆ, ನೇಯ್ಗೆ ಬೀದೀ, ಅಲ್ಲಿನ ಕೈಮಗ್ಗಗಳ ಶಬ್ದ, ಸಾಬರ ವಟಾರ, ಒಕ್ಕಲಿಗರ ಓಣಿ, ಬ್ರಾಹ್ಮಣರ ಮಂತ್ರಘೋಷ, ಕುಂಚಿಟಿಗರು, ಕುರುಬರು..ಒಬ್ಬರೇ ಇಬ್ಬರೇ? ಸಾವಿರಾರು ಜನ, ಅವರ ಜೀವನ ಒಟ್ಟಿಗೇ ಹೋಯ್ತಲ್ಲಾ ಈ ಹೆದ್ದಾರಿ ಎಂಬ ಮಹಾಮಾರಿಗೆ!!!?? ಹೌದು ಹೆದ್ದಾರಿ ಅಗಲೀಕರಣಕ್ಕೆ ನನ್ನ ಇಡೀ ಹಳ್ಳಿಯೇ ನಿರ್ನಾಮವಾಗಿ ಹೊಯ್ತು! ಇಲ್ಲೀಗ ಮಹಾ ಚತುಷ್ಪತ ರಸ್ತೆಯೆದ್ದು ನಿಂತಿದೆ ನಮ್ಮೆಲ್ಲರ ಜೀವಂತ ಹೆಣಗಳ ಮೇಲೆ. ಶ್ರೀಮಂತರು ಇಲ್ಲಿ ಜೀವಿಸ ತೊಡಗಿದ್ದಾರೆ ಕಾರು ಮುಂತಾದ ವಾಹನದಲ್ಲಿ ಓಡಾಡುವ ಮೂಲಕ, ನಾವಿಲ್ಲಿ ಸತ್ತಿದ್ದೇವೆ ನಮ್ಮದೇ ಜಾಗದಲ್ಲಿ ನಮಗೇ ನಮ್ಮ ಮಣ್ಣು ಸಿಗದ ಮೂಲಕ!
ನನ್ನದೊಬ್ಬನದೇ ವ್ಯಥೆಯಲ್ಲ ಇದು, ನಮ್ಮೆಲ್ಲರದು. 'ಕಾರು ' 'ಭಾರು ' ಮಾಡುವರು ಯಾವಾಗ ಬಂದು ನಮ್ಮ ಜೀವನಕ್ಕೆ ಕೊಡಲಿಯಿಡುತ್ತಾರೋ ಗೊತ್ತಿಲ್ಲ. ಹುಷಾರು!
ಅದೋ ನೋಡಿ ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ನನ್ನ ಮನೆ ನನ್ನ ಕೈಬೀಸಿ ಕರೆಯುತ್ತಿದೆ, ನಾನೀಗ ಅದರ ಮಡಿಲಿಗೆ ಹೋಗಿ ಸೇರುತ್ತಿದ್ದೇನೆ. ನನ್ನನ್ನು ಯಾರೂ ತಡೆಯಲಾಗದು.
..........................
ಮೋಹನ್ ಕುಮಾರ್ ಡಿ ಎನ್
ಶಿವಾಜಿನಗರಲ್ಲೊಂದು ದಿನ... 
ತಪ್ಪು ನಂದಿದೆಯೋ ಅಥವಾ ಬಸ್ಸಿನದಿದೆಯೋ ತಿಳಿಯುತ್ತಿಲ್ಲ.
ಆವತ್ತು ಶಿವಾಜಿನಗರದಲ್ಲಿ ಇಳಿದು ಎಂ ಜಿ ರೋಡಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದೆ. ಆಫೀಸಿಗೆ ಹೋಗುವ ಧಾವಂತದಲ್ಲಿದ್ದ ನನ್ನ ಮುಂದೆ ಒಬ್ಬ ಹುಡುಗ ಬಂದು ನಿಂತ. ಅವನನ್ನೇ ದಿಟ್ಟಿಸಿ ನೋಡಿದೆ ; ಧರಿಸಿದ್ದ ಬಟ್ಟೆ ಕೊಳೆಯಾಗಿತ್ತು, ಅಲ್ಲಲ್ಲಿ ಹರಿದಿತ್ತು, ಷರ್ಟಿನ ಗುಂಡಿಗಳು ಅದಲು ಬದಲಾಗಿತ್ತು, ನಿಕ್ಕರ್ ಹಾಕಿದ್ದರೂ ಒಂದೆ ಹಾಕದಿದ್ದರೂ ಒಂದೆ ಹಾಗಿತ್ತು ಅದು. ಅದಲ್ಲ ನನ್ನ ಸೆಳೆದಿದ್ದು, ಅವನ ನೋಟ! ಬಿಟ್ಟ ಕಣ್ಣು ಬಿಟ್ಟಂತೆ ನನ್ನನ್ನೇ ನೋಡುತ್ತಿದ್ದ. ನೋಟದಲ್ಲಿ ಬದಲಾವಣೆಯಿಲ್ಲ. ಎಲಾ ಇವನ!! ಹಿಂಗ್ಯಾಕ್ ನೋಡ್ತ್ಯೋ ತಮ್ಮ ಅಂತ ಕೇಳುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತ. ಎಲ್ಲಿಗೆ ಹೋದ ಇವನು ಅಂತ ನೋಡಿದರೆ, ಅಲ್ಲೇ ಪಕ್ಕದಲ್ಲಿದ್ದ ತನ್ನ ಬಳಗಕ್ಕೆ ಓಡಿ ಹೋಗಿ ಸೇರಿದ. ಅಲ್ಲಿ ಅವನಿಗಿಂತಲೂ ಚಿಕ್ಕವರಿದ್ದ ಅವನ ತಮ್ಮ , ತಂಗಿಯಿದ್ದರು ಜೊತೆಯಲ್ಲಿ ಕಾಲು ಊನವಾಗಿದ್ದ ಅವನ ತಾಯಿಯಿದ್ದಳು.
ಹಾಗೆ ಅವನ್ಯಾಕೆ ನನ್ನನೇ ನೋಡುತ್ತಿದ್ದ ಎಂದು ಯೋಚಿಸುತ್ತಿರುವಾಗಲೆ, ಅವನ ತಾಯಿ ಬಳಿಯಿದ್ದ ಚೀಲದಿಂದ ಹಾಲಿನ ಬಾಟಲೊಂದನ್ನು ತೆರೆದು ಮೂರು ಪ್ಲಾಸ್ಟಿಕ್ ಗ್ಲಾಸ್ಗೆ ಇಷ್ಟಿಷ್ಟೇ ತನ್ನ ಮಕ್ಕಳಿಗೆ  ಹಾಕಿಕೊಡ ತೊಡಗಿದಳು. ಬಡತನಕ್ಕೆ ಬಾಯಿ ದೊಡ್ದದಲ್ವೇ? ಆ ಮಕ್ಕಳು ಹಾಲನ್ನು ಕ್ಷಣ ಮಾತ್ರದಲ್ಲಿ ಕುಡಿದು ಗ್ಲಾಸನ್ನು ಆಕೆಯ ಮುಂದಿಟ್ಟು, "ಇನ್ನೊಂಚೂರು" ಎಂಬಂತೆ ನೋಡುತ್ತಿದ್ದವು.ಆಕೆ "ಏಯ್! ಬಾಯ್ಮುಚ್ಚ್ ಇಷ್ಟೆ" ಅನ್ನುತಿದ್ದರೂ ಕೇಳಿಸಿಕೊಳ್ಳದ ಅವು ಒಂದೇ ಸಮನೆ ಅಳಲು ಶುರುವಿಟ್ಟುಕೊಂಡವು.
ತನ್ನ ಮಕ್ಕಳ ಹಸಿವಿನ ಆಕ್ರಂದನ ಆ ತಾಯಿಗೆ ಕೇಳಿಸಲಿರದೇ ಸಾಧ್ಯವೇ? ಖಂಡಿತ ಕೇಳಿಸಿರುತ್ತದೆ. ಪಾಪ ಆಕೆ ತಾನೆ ಏನು ಮಾಡಿಯಾಳು? ತನ್ನ ಅಸಹಾಯಕತೆ ತನ್ನ ಮಕ್ಕಳ ಹಸಿವಿಗೆ ಸ್ಪಂದಿಸಲಿಲ್ಲ,   ದುಡಿದು ತಿನ್ನೋಣವೆಂದರೆ ಅಂಗವಿಕಲತೆ,   ಕೈ ಹಿಡಿದ ಗಂಡ ಮೂರು ಮಕ್ಕಳ ಕರುಣಿಸಿ ಅದೆಲ್ಲಿದ್ದಾನೋ? ಭಿಕ್ಷೆಯೊಂದೆ ನಂಬಿಕೊಂಡಿದ್ದಾಳೆ ಮೂರು ಮಕ್ಕಳ ಹೊಟ್ಟೆ ತುಂಬಿಸಲು. ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ನನಗೆ  ಜೇಬಿಗೆ ಕೈಹಾಕಿ ನನ್ನ ಕೈಲಾದಷ್ಟು ಕೊಡೋಣ ಅಂದು ಮುಂದಾದೆ. ಅಷ್ಟರಲ್ಲಿ ನನ್ನ ಮುಂದೆ ನನಗೇ ಗೊತ್ತಗದ ಹಾಗೆ ನಾನು ಹತ್ತ ಬೇಕಿದ್ದ ಬಸ್ಸು ಬಂದು ನಿಂತಿತ್ತು! ಅಯ್ಯೋ ಪಾಪಿ ಬಸ್ಸೇ!
ಹೇಳಿದೆನೆಲ್ಲ ಆಫೀಸಿನ ಧಾವಂತದಲ್ಲಿದ್ದ ನನಗೆ ತಕ್ಷಣ ಮನಸ್ಸು ಅತ್ತ ಕಡೆ ಹೊರಳಿದಂತಾಗಿ ಬಸ್ಸಿನೆಡೆ ಧಾವಿಸಿದೆ. ಬಸ್ಸು ಹತ್ತಿ ನಿಂತವನ ಮನಸು ಮರಳಿ ಆ ತಾಯಿ ಮಕ್ಕಳ ಬಗ್ಗೆಯೇ ಯೋಚಿಸುತ್ತಿತ್ತು. ಸರಿ ಬಿಡು ಪರ್ವಾಗಿಲ್ಲ ಹೇಗಿದ್ದರು ಅಲ್ಲೇ ಇರುತ್ತಾರೆ, ನಾಳೆ ಕೊಟ್ಟರಾಯ್ತು ಅಂದುಕೊಂಡು ಸುಮ್ಮನಾದೆ.
ಅದಕ್ಕೇ ನಾನು ಮೊದಲೇ ಹೇಳಿದ್ದು : ತಪ್ಪು ನಂದೋ ಬಸ್ಸಿನದೋ ತಿಳಿಯುತ್ತಿಲ್ಲ ಅಂತ, ಯಾಕೆಂದರೆ ಮರು ದಿನ ಮರೆಯದೆ ಹೋಗಿ ಅವರನ್ನು ಹುಡುಕಿದ್ದೇ ಹುಡುಕಿದ್ದು ಅವರು ಮಾತ್ರ ಎಲ್ಲೂ ಪತ್ತೆಯಿಲ್ಲ!
ಬೇಕೂ ಬೇಡವೆಂದರೂ ನೆನ್ನೆ ನನ್ನನ್ನೇ ನೊಡುತ್ತಿದ್ದ ಆ ಹುಡುಗ ನೆನಪಾದ. ಈಗಲು ನನ್ನನ್ನು ನೋಡುತ್ತಿದ್ದಾನೆನಿಸಿತು, ಆ ತಾಯಿ ಮಕ್ಕಳ ಆಕ್ರಂದನ ಕಣ್ಣ್ ಮುಂದೆ ಬಂದಂತಾಗಿ ಅಲ್ಲಿಂದ ಜಾಗ ಬದಲಿಸಿ ಮುಂದೆ ಹೋದೆ.
ಪಾಪಿ ಬಸ್ಸು ಅವತ್ತು ಎಷ್ಟೊತಾದರೂ ಬರಲಿಲ್ಲ.
…..…...........…
ಮೋಹನ್ ಕುಮಾರ್ ಡಿ ಎನ್

Friday, August 16, 2013

ಹೇಗಿದೆ ನಮ್ಮ ಇವತ್ತಿನ ಸ್ವಾತಂತ್ರ್ಯ???

* ಕರ್ನಾಟಕಕ್ಕೆ ತನ್ನದೇ ಆದ ನದಿಗಳ ಮೇಲೆ ಆಡಳಿತ ಸಾಧ್ಯವಿಲ್ಲ . 

* ಕನ್ನಡ, ಕರ್ನಾಟಕದಲ್ಲಿ ಸ್ಥಳೀಯವಾಗಿ ರಚಿಸಿದ ಉದ್ಯೋಗಿಗಳು ಯಾವುದೇ ಮೀಸಲಾತಿ ಹೊಂದುವ ಸೌಲಭ್ಯವಿಲ್ಲ . 

* ಕರ್ನಾಟಕದಲ್ಲಿ ಕನ್ನಡದಲ್ಲಿ ನಂಬರ್ ಪ್ಲೇಟ್ ಇರುವ ವಾಹನಗಳ ಮೇಲೆ ದಂಡ ಹಾಕುತ್ತಾರೆ . 

* ಕನ್ನಡ, ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಕೃತ ಭಾಷೆ ಇರುವಂತಿಲ್ಲ . 

* ಕರ್ನಾಟಕ ಧ್ವಜ ಕಾನೂನು ಪ್ರಕಾರ ಸರಕಾರೀ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕನ್ನಡದ ಧ್ವಜ ಹಾರಿಸುವುದು  ಕಡ್ಡಾಯವಲ್ಲ . 

* ಕರ್ನಾಟಕ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸ್ಥಳಗಳಲ್ಲಿ ಬೇರೆಯವರ ಹೆಸರು ಅಂದರೆ, ರಾಷ್ಟ್ರೀಯ ನಾಯಕರ ಹೆಸರುಗಳನ್ನಿಡುತ್ತಾರೆಯೇ ಹೊರತು ಕನ್ನಡದವರ, ಕನ್ನಡಿಗರ ಹೆಸರುಗಳನ್ನಿಡುವುದಿಲ್ಲ . 

* ಬ್ಯಾಂಕುಗಳು, ಪೋಸ್ಟ್ ಆಫಿಸ್ಗಳಲ್ಲಿ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಹಿಂದಿ ಮತ್ತು ಇಂಗ್ಲೀಷಿಗೆ ಪ್ರಾಮುಖ್ಯತೆ ಕೊಡುತ್ತವೆಯೇ ಹೊರತು ಕನ್ನಡಕ್ಕಲ್ಲ . 

* ರೈಲ್ವೆ ಸಂಸ್ಥೆ ಲಾಭ ಮಾಡುತ್ತದೆ ಆದರೆ ತನ್ನ ಟಿಕೇಟಲ್ಲಿ ಕನ್ನಡದಲ್ಲಿ ಮಾಹಿತಿ ಕೇಳಿದರೆ ಹಣದ ಕೊರತೆ ಇರುವುದರಿಂದ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ, ಮತ್ತು ಬೋಗಿಗಳ ಒಳಾಂಗಣದಲ್ಲಿ ಕನ್ನಡ ಇಲ್ಲದ ತುರ್ತು ಸೂಚನೆಗಳು .

* ಗ್ಯಾಸ್ ಸಿಲಿಂಡರ್ ಕನ್ನಡದಲ್ಲಿ ಯಾವುದೇ ಸುರಕ್ಷತಾ ಸೂಚನೆಗಳನ್ನು ಕೊಡುವುದಿಲ್ಲ. 

     ಗೆಳೆಯರೇ, ಇದು ಕೇವಲ ಸ್ಯಾಂಪಲ್ ಅಷ್ಟೇ. ಕರ್ನಾಟಕದಲ್ಲಿ, ಕನ್ನಡಿಗರ ಮೇಲೆ ಎಂಥಾ ದೌರ್ಜನ್ಯ ನಡೆಯುತ್ತಿದೆಯೆಂದರೆ ಅಕ್ಕ ಪಕ್ಕ ರಾಜ್ಯದವರು ಇದನ್ನು ನೋಡಿ ನಗುತ್ತಿದ್ದಾರೆ, ನಮ್ಮ ದೌರ್ಬಲ್ಯ ಎಂದುಕೊಂಡು ನಮ್ಮ ನಾಡಲ್ಲೇ ಹತ್ತಾರು ವರ್ಷಗಳಿಂದ ಇದ್ದುಕೊಂಡು ನಮಗೇ ಗೊತ್ತಿಲ್ಲದಹಾಗೆ ಸರಕಾರ ಕೊಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಾ ನಮಗಿಲ್ಲದ ಹಾಗೆ ಮಾಡಿದ್ದಾರೆ. ಇದು ನಮ್ಮ ದುರ್ವಿಧಿಯೇ ಸರಿ.

    ಇನ್ನು ಮುಂದಾದರೂ ಕನ್ನಡಿಗರು ನಾವು ನಮ್ಮತನವನ್ನು ತೋರಿಸೋಣ, ನಮ್ಮ ಸವಲತ್ತುಗಳನ್ನು ನಮ್ಮದಾಗಿಸಿಕೊಳ್ಳೋಣ. ನಾವು ಬೆಳೆದ ಪದಾರ್ಥ ಬೇರೆಯವರ ಪಾಲಾಗದಂತೆ ಕಾಯೋಣ. ಇದು ನಮ್ಮ ಆದ್ಯ ಕರ್ತವ್ಯವಾಗಿದೆ ಮತ್ತು ಅನುಸರಿಸಿ ಮಾಡಲೇಬೇಕಿದೆ.

          ಸ್ವಲ್ಪ ಯೋಚಿಸಿ ನೋಡಿ.

ವಂದನೆಗಳೊಂದಿಗೆ,

ಗೆಳೆಯ,
ಮೋಹನ್ ಕುಮಾರ್ ಡಿ ಎನ್
೧೬-೦೮-೨೦೧೩


ಜೈ ಹಿಂದ್ ಜೈ ಕರ್ನಾಟಕ ಮಾತೆ


Tuesday, August 13, 2013

Friday, May 17, 2013

Friday, February 1, 2013

ಹಲೋ ಗೆಳೆಯರೇ,

ನಿಮಗೆಲ್ಲ ವಾರಾಂತ್ಯದ ಶುಭಾಷಯಗಳು..



ಗೆಳೆಯ,
ಮೋಹನ್ ಕುಮಾರ್ ಡಿ ಎನ್ 

Thursday, December 27, 2012


ನಾನು ನೀನು ಸೇರುವ
ದಾರಿಯೆಲ್ಲಿದೆ?
ನಡೆದು ನಡೆದೂ
ನನಗೆ ಸುಸ್ತಾಗಿದೆ

ನಾನು ನೀನು ಹೋಗುವ
ಗಮ್ಯವೆಲ್ಲಿದೆ
ಕಣ್ಣಿದ್ದು ಕಾಣದೆ
ನೋಟ ಮಂಕಾಗಿದೆ

ನಾನು ನೀನು ಮಾಡುವ
ಕೆಲಸವೇನಿದೆ
ಸುಮ್ಮನೆ ಪ್ರೀತಿಸುತ್ತಾ
ಇದ್ದರೆ ಸಾಲದೇ

ನಾನು ನೀನು ಏನೇನು
ಸಾಧಿಸಬೇಕಿದೆ
ಉಸಿರಿರುವ ತನಕ
ಜೊತೆಗಿದ್ದರೆ ಆಗದೇ

ನಾನು ನೀನು ಏಕೆ
ಬದುಕಬೇಕಿದೆ
ನಿಯಮತಪ್ಪಿ ನಡೆದರೆ
ವಿಧಿ ಅದ ಒಪ್ಪುವುದೇ

ನಾನು ನಿನ್ನ ನೀನು ನನ್ನ
ಪ್ರೀತಿಸುವುದೇನಿದೆ
ಅಯ್ಯೋ ಇಲ್ಲದಿದ್ದರೆ
ಬದುಕುವ ಹಕ್ಕು ನಮಗೆಲ್ಲಿದೆ



ಗೆಳೆಯ,
ಮೋಹನ್ ಕುಮಾರ್ ಡಿ ಎನ್







Wednesday, December 26, 2012

ಕನಸೊಂದು ಕಟ್ಟಿಹೆನು 
ನಿಮಗೂ ಪಾಲಿದೆ ಅದರಲ್ಲಿ 
ಏನು ಮಾಡಲಿ ಹೇಳಬಲ್ಲಿರೇನು 
ಮುಳುಗಿಹೆನು ತೇಲದೆ ಆಳದಲ್ಲಿ ..

ಕನಸೊಂದು ಕಾಣುತಿಹೆನು 
ನೋಡುವಿರೇ ನೀವದನು 
ದಯವಿಟ್ಟು ಕ್ಷಮಿಸಿ 
ಹಂಚಲಾರೆನು ಅದೇನನು..

ಕನಸಸೊಂದು ಕಣ್ತುಂಬಿದೆ 
ಬನ್ನಿ ಸ್ವಲ್ಪ ಇಳಿಸಿ ಭಾರವನು 
ಜೋಪಾನ ಘಾಸಿಯಾದೀತು 
ಬಿಡಲಾರೆ ನಾನಾಗ ಕಣ್ಣನು..

ಕನಸಸೊಂದು ಕಾಡುತಿದೆ 
ಇಂಪಾದ ಅಲೆಯಂತೆ 
ಸುಮ್ಮನಿರಿ ಸಾಕು 
ಸರಿದೀತು ಗಾಳಿಯಂತೆ..

ಗೆಳೆಯ,
ಮೋಹನ್ ಕುಮಾರ್ ಡಿ ಎನ್ 


ಹಲೋ ಗೆಳೆಯರೇ ನಮಸ್ಕಾರ.

ನನ್ನ ಕೆಲವೊಂದು ಅನಿಸಿಕೆಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನವೇ ಈ ಲೇಖನ. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಧನ್ಯ.

ಪುರಾತನ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಇವತ್ತಿಗೆ ಇರುವ ಸ್ಥಾನಮಾನ ಏನೆಂದು ಹುಡುಕುತ್ತಾ ಹೋದರೆ ಮನಸ್ಸಿಗೆ ಬೇಜಾರಾಗುವುದು ಖಂಡಿತ. ಐತಿಹಾಸಿಕ ಪಾರಂಪರೆವುಳ್ಳ ನಮ್ಮ ಈ ನಾಡು, ನುಡಿ, ಜನ, ಇಲ್ಲಿನ ಆಚಾರ, ವಿಚಾರ, ಸಂಪ್ರದಾಯ, ರೀತಿ ರಿವಾಜು...ಸುಮ್ಮನೇ ಬಂದಿಲ್ಲ, ತಂತಾನೆ ಆಗಿದ್ದಲ್ಲ, ಯಾರೂ ಬೇಕಂತ ಮಾಡಿಟ್ಟಿದ್ದಲ್ಲ, ಎಲ್ಲಿಂದಲೋ ನೋಡಿ ಕಲಿತದ್ದಲ್ಲ - ಅದಕ್ಕೆ ತನ್ನದೇ ಆದ ದಾರಿಯಿದೆ, ನೆಲೆಯಿದೆ, ಆಯಾಮವಿದೆ. ಯಾರೋ ಬೇಡವೆಂದು ಬಿಸಾಡಿ ಹೋದ ನುಡಿಯಲ್ಲ ನಮ್ಮದು - ಅದಕ್ಕೆ ತನ್ನದೇ ಆದ ಮಜಲಿದೆ, ತಿರುವಿದೆ, ಹಿನ್ನೆಲೆಯಿದೆ. ಹೀಗಿರುವಾಗ ನಮ್ಮತನವನ್ನು ಬಿಟ್ಟುಕೊಟ್ಟು    ಬೇರೆಯವರು ಉಳಿಸಿಹೋದ ಭಾಷೆಯನ್ನು ಮಹಾಪ್ರಸಾದವೆಂಬಂತೆ ತಿನ್ನುತ್ತಿರುವ ನಮಗೆ ಅದು ನಾಚಿಕೆಗೇಡಿನ ವಿಷಯ ಎಂದು ಅರಿವಾಗುವುದಾದರೂ ಯಾವಾಗ?.

ನೋಡಿ ಸುಮ್ಮನೆ ಹೇಳ್ತಾಹೋಗ್ತಿನಿ : ಮಗು ಹುಟ್ಟಿದ ಕೂಡಲೆ ಅನ್ನುವುದು ಅಮ್ಮಾ ಅಂತ. ಅದು ಬದಲಾಗಿದೆ, ಈಗ ಅದು ಮಮ್ಮೀ ಅನ್ನುತ್ತೆ. ಹಾಗನ್ನದಿದ್ದರೆ ಹೆತ್ತವರಿಗೆ ಪಾಪ ಏನೋ ಕಳೆದುಕೊಂಡಂತೆ. ಅಪ್ಪನ ಬದಲು ಡ್ಯಾಡಿ, ಚಿಕ್ಕಮ್ಮ ಚಿಕ್ಕಪ್ಪ /ದೊಡ್ಡಮ್ಮ / ದೊಡ್ಡಪ್ಪನ  ಬದಲು ಆಂಟೀ ಆಂಕಲ್, ಅಣ್ಣತಮ್ಮ ಅಕ್ಕತಂಗಿಗೆ ಬ್ರದರ್ ಸಿಸ್ಟರ್, ಇನ್ನು ದಿನಬಳಕೆ ಮಾತುಗಳಂತೂ ಆಹಾಹಾ! ಕೇಳಲು ಬರೀ ಎರಡು ಕಿವಿ ಸಾಲದುರೀ - ಬಾಡಿಗೆಗೆ ಬೇರೆಯವರ ಕಿವಿ ಸಿಗುವಹಾಗಿದ್ದರೆ ಕಡತಂದು ಕೇಳಬೇಕು - ಹಾಗಿರುತ್ತದೆ ಅವರ ದಿನ ಕನ್ನಡ ಬಳಕೆ. ಇದೆಲ್ಲವೂ ಸಾಲದಂತೆ ಮಾಧ್ಯಮಗಳ ಹಾವಳಿ ಬೇರೆ! ಎಲ್ಲಿ ಹೋದವು ರಾಮಾಯಣ ಮಹಾಭಾರತ ಕಥೆಗಳು? ಅದನ್ನು ನೋಡುವರು ಯಾರಿದ್ದಾರೆ? ಪ್ರತಿ ಮನೆಯ ಚಾನೆಲ್ನಲ್ಲೂ ಟಾಮ್ ಜೆರಿ ಬಂದು ಕುಳಿತಿದ್ದಾನೆ. ಮಿಕ್ಕಿ ಮೌಸ್ಗಳು ನೋಡದೇ ಇರುವ ಮಕ್ಕಳೆಲ್ಲಿದ್ದಾರೆ? ರಿಮೋಟ್ ಒತ್ತಿದರೆ ಸಾಕು ಕಾರ್ಟೂನ್ ನೆಟ್   ವರ್ಕ್, ಪೋಗೋ, ನಿಕ್..ಬರೀ ಇಂಥವೇ. ನಮ್ಮ ಮಕ್ಕಳಿಗೆ ಇದನ್ನೆಲ್ಲಾ ನೋಡುವುದರಿಂದ ಮನರಂಜನೆಯೇನೋ ಸಿಗುತ್ತದೆ ಆದರೆ ಬುದ್ಧಿ ಬೆಳವೆಣಿಗೆಯಾಗುತ್ತದೆಯೇ? ಮಾನಸಿಕವಾಗಿ ಸಮಚಿತ್ತದಿಂದಿರುವರೇ?

ಹೆತ್ತ ತಂದೆತಾಯಿಗಳು ಇದನ್ನು ಯೋಚಿಸುವುದೇ ಇಲ್ಲ.

ನಮ್ಮ ಮನೆಯ ಮಕ್ಕಳು ಏನಾಗಬೇಕೆಂದು ಯೋಚಿಸುತ್ತೆವೆಯೇ ಹೊರತು ಏನಾಗಿದ್ದಾರೆ ಎಂದು ಕುತೂಹಲಕ್ಕಾದರು ತಿಳಿಯುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ.

ನಮ್ಮ ಮನೆಯ ಮಕ್ಕಳನ್ನು ಪಕ್ಕದ ಮನೆಯ ಮಕ್ಕಳ ಜೊತೆ ಹೋಲಿಕೆಮಾಡಿ ನೀನೂ ಅವನಂತಾಗಬೇಕೆಂದು ಹೇಳುತ್ತೇವೆಯೆ ಹೊರತು ನೀನು ನೀನಾಗಿಯೇ ಬೆಳೆಯಬೇಕೆಂದು ಮಾತಿಗಾದರೂ ಹೇಳುವುದಿಲ್ಲ.

ಕ್ಲಾಸ್ನಲ್ಲಿ ಎಲ್ಲರ ಜೊತೆ ನೀನು ಇಂಗ್ಲಿಷಲ್ಲೇ ಮಾತಾಡಬೇಕೆಂದು ಫಾರ್ಮಾನು ಹೊರಡಿಸುತ್ತೇವೆಯೆ ಹೊರತು, ನಿನ್ನತನ ನೀನು ಬಿಡದೇ ಎಲ್ಲಿ ಬೇಕೋ ಅಲ್ಲಿ ಎಷ್ಟು ಬೇಕೋ ಅಷ್ಟು ಇಂಗ್ಲಿಷ್ ಮಾತಾಡಿ ಮಿಕ್ಕೆಲ್ಲಾ ಸಮಯದಲ್ಲಿ ಕನ್ನಡದಲ್ಲಿ ಮಾತಾಡು ಅಂತ ನಾವು ನಮ್ಮ ಮಕ್ಕಳಿಗೆ ಹೇಳುವುದೇ ಇಲ್ಲ.

ಸಮಸ್ಯೆಯ ಮೂಲ ಮಕ್ಕಳಲಿಲ್ಲ, ಅದು ಇರುವುದೇ ನಮ್ಮಲ್ಲಿ - ತಂದೆತಾಯಿಗಳಲ್ಲಿ. ಇನ್ನು ಪಾಪ ಆ ಮಕ್ಕಳಾದರೂ ಏನು ಮಾಡಿಯಾವು?

ಕನ್ನಡದ ಬಗ್ಗೆ ಮೊದಲು ನಮ್ಮಲ್ಲಿ ಪ್ರಜ್ಞೆ ಬರಬೇಕು, ಅರಿವು ಮೂಡಬೇಕು. ಇಷ್ಟಕ್ಕೂ ನಾವು ಹುಟ್ಟಿದಾಗ ಏನು ಮಾತಾಡುತ್ತಿದೆವು ಯೋಚಿಸಿನೋಡಿ? ನಮ್ಮ ಮಾತೃ ಭಾಷೆ ಕನ್ನಡವನ್ನೇ ತಾನೇ? ನಾವ್ಯಾಕೆ ಇಂಗ್ಲಿಷ್ ಹುಳುಗಳಾಗಲಿಲ್ಲ? ನಾವು ಮಾಡದ್ದು ನಮ್ಮ ಮಕ್ಕಳಿಗೆ ಮಾಡೆಂದು ಹೇಳುವ ಕಡ್ಡಾಯವಾದರೂ ಯಾಕೇ? ಭೌದ್ದಿಕ ಬೆಳವಣಿಗೆಗೆ ಇಂಗ್ಲಿಷ್  ಬೇಕೆಂದಾದರೆ ಕಲಿಯುವ ವಯಸ್ಸಿನಲ್ಲಿ ಮಕ್ಕಳು ಕಲಿತೇ ಕಲಿಯುತ್ತಾರೆ ಬಿಡಿ. ನಾವಾದರು ಅಲ್ಪ ಸ್ವಲ್ಪ ನಮಗೆ ಬುದ್ದಿ ಬಂದಮೇಲೆ ತಾನೇ ಕಲಿತದ್ದು?

ಮೊದಲು ನಮ್ಮ ಮನೆಗಳಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು - ಕನ್ನಡ ಮಾತಾಡುವ ಮೂಲಕ, ಕನ್ನಡದ ಪುಸ್ತಕ ಪತ್ರಿಕೆ ತಂದು ಓದುವುದರ ಮೂಲಕ, ಅಕ್ಕಪಕ್ಕದವರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಮೂಲಕ, ನಮ್ಮ ಮಕ್ಕಳಿಗೆ ಕನ್ನಡ ನಾಡುನುಡಿಯ ಬಗ್ಗೆ ಹೇಳುವ ಮೂಲಕ, ಪರಭಾಷೆ ಮೇಲಿನ ವ್ಯಾಮೋಹ ಕಡಿಮೆ ಮಾಡಿಕೊಳ್ಳುವ ಮೂಲಕ, ಹಿತ್ತಲಗಿಡ ಮದ್ದಲ್ಲ ಎಂದು ತಾತ್ಸಾರ ತೋರದೆ ನಮ್ಮ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಿ ಕಟ್ಟುವ ನಿರಂತರ ಕಾಯಕ ಮಾಡುವ ಮೂಲಕ.

ಅದು ಆಗೇ ಆಗುತ್ತದೆ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗುತ್ತಾನೆ, ನಮ್ಮ ಕನ್ನಡ ಸೂರ್ಯಚಂದ್ರರಿರುವ ತನಕ ಅಜರಾಮರವಾಗಿರುತ್ತದೆಯೆಂದು ನಂಬುತ್ತ ನನ್ನ ಅನಿಸಿಕೆಯನ್ನು ಮುಗಿಸುತ್ತಿದ್ದೇನೆ.

ಜೈ ಕನ್ನಡಮಾತೆ ಭುವನೇಶ್ವರಿ.

ವಂದನೆಗಳೊಂದಿಗೆ,

ಗೆಳೆಯ,
ಮೋಹನ್ ಕುಮಾರ್ ಡಿ ಎನ್









"ವಚನ ಭಾರತ" - ಎ ಆರ್ ಕೃಷ್ಣಶಾಸ್ತ್ರಿ "ಮಹಾಭಾರತ". ಅದರ ಬಗ್ಗೆ ಎಷ್ಟು ಬರೆದರೂ ಸಾಲದು. ಬತ್ತದ ಸಾಗರ ಅದು. ಬಗೆದಷ್ಟೂ ಆಳಕ್ಕಿಳಿಯುವ, ಮ...